Tuesday, December 14, 2010

ಕನ್ನಾಡಲ್ಲಿ 'ಹರಿತ ಭಾರತಂ' ತಂಡ




'ಕೃಷಿ ಸಂಬಂಧಿತ ಸೀರಿಯಲ್ಗಳಿಗೆ ವೀಕ್ಷಕರ ಸ್ಪಂದನ ಕಡಿಮೆ. ಇದು ಕಾರ್ಯಕ್ರಮದ ಗುಣಮಟ್ಟದ ಕೊರತೆಯೋ ಅಥವಾ ನಾವು ಚಿತ್ರೀಕರಿಸುವ ವಿಚಾರಗಳು ಜನಗಳಿಗೆ ತಲಪುವುದಿಲ್ಲವೋ. ಏನೂಂತ ಗೊತ್ತಾಗ್ತಾ ಇಲ್ಲ' - ಹೀಗೆಂದವರು ಕೇರಳ ಅಮೃತ ಟೀವಿಯ 'ಹರಿತ ಭಾರತಂ' ಕೃಷಿ ಕಾರ್ಯಕ್ರಮದ ನಿರ್ಮಾಪಕ ಸಾಜ್ ಕುರಿಯನ್.

ರಂಗು ರಂಗಿನ ಸೀರಿಯಲ್ಗಳಿಗೆ ಜನಬೆಂಬಲ ಕಣ್ಣಿಗೆ ರಾಚುತ್ತದೆ. ಸಿನಿಮಾ ಸೀರಿಯಲ್ಗಳನ್ನು ಜನ ಹುಚ್ಚುಕಟ್ಟಿ ನೋಡುತ್ತಾರೆ. ರಿಯಾಲಿಟಿ ಶೋ ಒಂದು ದಿವಸ ಪ್ರಸಾರವಾಗದಿದ್ದರೆ ಟಿವಿ ಕೇಂದ್ರಕ್ಕೆ ದೂರವಾಣಿಗಳ ಸುರಿಮಳೆ. ಆದರೆ ಕೃಷಿ ಕಾರ್ಯಕ್ರಮಕ್ಕೆ ಜನರ ಮೌನ ಯಾಕೆ? ಸನಿಹದಲ್ಲಿದ್ದ ನಿರೂಪಕಿ ದೀಪಾಗೆ ಯಾಕೋ ಈ ಪ್ರಶ್ನೆ ಅಷ್ಟೊಂದು ಸಹ್ಯವಾಗಲಿಲ್ಲ. ಅದೆಲ್ಲಾ ನಮ್ಮ ಭ್ರಮೆ. ನಾವು ಏನೋ ಸಾಧಿಸುತ್ತೇವೆಂಬ 'ಇಗೋ' ಇದೆಯಲ್ಲಾ, ಇದುವೇ ನಿಮ್ಮ ಪ್ರಶ್ನೆಗೆ ಕಾರಣ' ಎನ್ನಬೇಕೇ?

ಹೌದು. ಇದು ಚಿತ್ರ ಮಾಧ್ಯಮದ ಜಗತ್ತಿನ ಮಾತುಕತೆಯಾದರೆ, ಮುದ್ರಣ ಮಾಧ್ಯಮದ ಕತೆಯೂ ಇದಕ್ಕಿಂತ ಹೊರತಿಲ್ಲ. ಓದುಗರಿಗೆ ಅತ್ಯುತ್ತಮ ಹೂರಣದ 'ಎಕ್ಸ್ಕ್ಲೂಸಿವ್' ಯಶೋಗಾಥೆಗಳನ್ನು ಕೊಟ್ಟಾಗಲೂ ಒಂದು ಕಾರ್ಡ್ ಬರೆಯುವಷ್ಟು ಪುರುಸೊತ್ತಿಲ್ಲವಲ್ಲಾ! ಮುಖತಃ ಸಿಕ್ಕಾಗ 'ಚೆನ್ನಾಗಿತ್ತು' ಎನ್ನುವವರೂ ಕಡಿಮೆಯೇ. ಮಾನಸಿಕವಾಗಿ ಈ ಕೊರಗು ಕಾಡುತ್ತಾ ಇದ್ದಾಗ, ಸಾಜ್-ದೀಪಾ ಅವರ ಸಂಭಾಷಣೆ- ಕನ್ನಾಡಲ್ಲಿ ಮಾತ್ರವಲ್ಲ, ದೇವರ ನಾಡಲ್ಲೂ ಇದೇ ಕತೆ - ಎನ್ನುತ್ತಾ ಸಮಾಧಾನ ಪಟ್ಟುಕೊಂಡೆ.

ಸಾಜ್ ಕುರಿಯನ್ ತಂಡ ಕನ್ನಾಡಲ್ಲಿ ದಶಂಬರ 6ರಿಂದ 11ರ ತನಕ ಬೀಡುಬಿಟ್ಟಿತ್ತು. ಪುತ್ತೂರು ಸನಿಹದ ಕಡೆಶ್ವಾಲ್ಯದ ಶ್ಯಾಮ ಶಾಸ್ತ್ರಿಯವರ ಗಂಧದ ಕೃಷಿ, ಅನಂತಾಡಿಯ ಸುರೇಶ್ ಗೌಡರ ಕೃಷಿ, ಹಾಲು ಕರೆಯುವ ಯಂತ್ರಾವಿಷ್ಕಾರದ ಮುರುಳ್ಯದ ಮಿಲ್ಕ್ ಮಾಸ್ಟರ್ ರಾಘವ ಗೌಡ, ಸುಳ್ಯದ ರಾಜಿ ಆರ್.ಕೆ.ಯವರ ಕೊಕೊನಟ್ ಜೆಲ್ಲಿ, ಅಮೈ ಮಹಾಲಿಂಗ ನಾಯ್ಕರ ಬೆವರ ಶ್ರಮ ಮತ್ತು ಮಾಣಿಮೂಲೆ ಅಚ್ಯುತ ಭಟ್ ಅವರ ಇಪ್ಪತ್ತೆರಡು ಸುರಂಗ ಬದುಕಿನ ಯಶೋಗಾಥೆಗಳನ್ನು ತಂಡ ಚಿತ್ರೀಕರಿಸಿತು.

ಸಾಜು, ದೀಪಾ ಜತೆಗೆ ಕ್ಯಾಮೆರಾಮ್ಯಾನ್ ಸಿಜೊ ಮತ್ತು ರಾಜೀವ್ ಸೇರಿದಂತೆ ನಾಲ್ವರ ತಂಡ. 'ಇಪ್ಪತ್ತು ನಿಮಿಷದ ಕಂತಿಗೆ ಕನಿಷ್ಠವೆಂದರೂ ದಿನಪೂರ್ತಿಯ ಶ್ರಮ ಬೇಕು' ಎನ್ನುತ್ತಾರೆ ಸಾಜ್. ನಮ್ಮ ಕನ್ನಾಡಿನ ಕೃಷಿ ಕಾರ್ಯಕ್ರಮಗಳ ಶೂಟರ್ಗೆ ಸಾಜು ಇವರದು ’ಕಿವಿಮಾತು. ತಂಡಕ್ಕೆ 'ಹರಿತ ಭಾರತಂ' ಸಲಹಾ ಮಂಡಳಿ ಸದಸ್ಯ ಶ್ರೀ ಪಡ್ರೆ, ಹಿರಿಯ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ ಸಾಥ್ ನೀಡಿದ್ದರು.

0 comments:

Post a Comment