Friday, April 24, 2009

ಮನುಷ್ಯ ಬಜಾರ್!

ಮುಂಜಾನೆ 8-9ರ ಸಮಯ. ಮುಂಬಯಿಯ ಖಾರ್ ರೈಲ್ವೇನಿಲ್ದಾಣದ ಹತ್ತಿರ ಜನ ಜಮಾವಣೆಯಾಗುತ್ತಿದೆ! ಫಕ್ಕನೆ ನೋಡಿದಾಗ ಜಾಥಾ, ಮುಷ್ಕರ, ಮೆರವಣಿಗೆಗೆ ಸಜ್ಜಾಗುವಂತೆ ಭಾಸವಾಗುತ್ತದೆ. ಅವರ ಕೈಯಲ್ಲಿ ಧ್ವಜ, ಫಲಕಗಳಿಲ್ಲ! ಚಿಕ್ಕ ಮಕ್ಕಳು, ಮಹಿಳೆಯರಿಂದ ತೊಡಗಿ ಸೊಂಟತ್ರಾಣದ ವೃದ್ಧರೂ ಅಲ್ಲಿದ್ದರು.

ದ್ವಿಚಕ್ರ, ಚತುಶ್ಚಕ್ರ ವಾಹನಗಳು ಭರ್ರನೆ ಬರುತ್ತವೆ. ನಿಲ್ಲುತ್ತದೆ. ಏನೋ ಸಂಭಾಷಣೆ. ವಾಹನ ಮ್ಹಾಲಕರ ಮುಖದಲ್ಲಿ ನಗು. ಒಂದಷ್ಟು ಮಂದಿ ವಾಹನ ಏರುತ್ತಾರೆ. ಅವರನ್ನು ನೋಡುತ್ತಾ ಉಳಿದವರಲ್ಲಿ ನಿಟ್ಟುಸಿರು! ಹೊತ್ತು ಏರುತ್ತಿದ್ದಂತೆ ಜನಜಂಗುಳಿ ತೆಳುವಾಗುತ್ತದೆ. ಬರುವ ವಾಹನ ಭರ ಕಡಿಮೆಯಾಗುತ್ತದೆ. 'ಬಂದ ದಾರಿಗೆ ಸುಂಕವಿಲ್ಲ'ವೆಂಬಂತೆ ಜಮಾವಣೆಯಾದ ಮಂದಿ ಹಾಗೆನೆ ನಗರದಲ್ಲಿ ಕರಗಿ ಹೋಗುತ್ತದೆ.

ಯಾರಿವರು? ವಾಹನವೇರಿ ಎಲ್ಲಿಗೆ ಹೋಗುತ್ತಾರೆ? ಹೊಸದಾಗಿ ಮುಂಬಯಿ ಕಂಡವರಿಗೆ ಆಶ್ಚರ್ಯವಾದೀತು. ಅಲ್ಲಿನವರಿಗೆ ಮಾಮಾಲಿ! ಇವರೆಲ್ಲಾ 'ಬಿಡಿಕೂಲಿ'ಗಳು. ಇವರಿಗೆ ನಿಶ್ಚಿತವಾದ ಉದ್ಯೋಗವಿಲ್ಲ. ಬಸ್ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಹೀಗೆ ನಿತ್ಯ ಒಂದೆಡೆ ಸೇರಿ 'ದಾತಾರ'ರಿಗಾಗಿ ಕಾಯುವುದು ಕಾಯಕ. ಕೆಲಸಕ್ಕೆ ಜನ ಬೇಕಾದವರು ಇಲ್ಲಿಗೆ ಬಂದರಾಯಿತು. ಮೇಸ್ತ್ರಿ, ಗಾರೆ, ಕೂಲಿ, ಡ್ರೈವರ್, ಹೊರೆಯಾಳು..ಹೀಗೆ ವಿವಿಧ ಅರ್ಹತೆಯವರು. ತಮ್ಮ ಕೆಲಸದ ರೀತಿಯನ್ನು ಹೊಂದಿಕೊಂಡು ಜನರ ಆಯ್ಕೆ. ಅಲಿಖಿತ ಒಪ್ಪಂದ. ಸ್ಟಾಂಡರ್ಡ್ ಸಂಬಳ! ಹೆಚ್ಚು ಹೇಳಿದರೂ ಬೇಕಾದರೆ ಕೊಡಬೇಕು! ಇದನ್ನು 'ಮನುಷ್ಯ ಬಜಾರ್' ಅನ್ನೋಣ.

ವಿವಿಧ ನಮೂನೆ ಕೆಲಸ ಅರಿತವರೆಲ್ಲಾ ಪ್ರತ್ಯಪ್ರತ್ಯೇಕವಾಗಿ ಗುಂಪಾಗಿರುತ್ತಾರೆ. 'ನಮಗೆ ಎಷ್ಟು ಜನ ಬೇಕು' ಎಂಬ ಲೆಕ್ಕಾಚಾರದಲ್ಲಿ ಜನರನ್ನು ಆಯ್ದರೆ ಆಯಿತು! ಸಂಜೆ ಪುನಃ ಅವರನ್ನು ನಿಲ್ದಾಣಕ್ಕೆ ಬಿಡುವ ಶರ್ತ ಇರಬಹುದು. ಸಿಕ್ಕಿದ ಸಂಬಳ ಅಂದಂದಿನ ವೆಚ್ಚಕ್ಕೆ ಸರಿಸಮ. ನಾಳೆಯ ಚಿಂತೆಯಿಲ್ಲ. ಪುನಃ ಜಮಾವಣೆ. ಇನ್ಯಾರೋ ಬರ್ತಾರೆ. ಒಯ್ತಾರೆ! ನಮಗಿದು ಅನಿಶ್ಚಿತ ಬದುಕಿನಂತೆ ಕಂಡರೂ, ಅವರಿಗದು 'ಒಂದು ಉದ್ಯೋಗ'.

ದೊಡ್ಡ ದೊಡ್ಡ ನಗರಗಳಲ್ಲಿ ಜನಗಳನ್ನು ಒದಗಿಸಲು ’ಮಧ್ಯವರ್ತಿ’ಗಳಿದ್ದಾರೆ. ಯಾರಿಗೆ ಜನ ಬೇಕೋ ಅವರಿಂದ ತಲೆಗೊಂದರಂತೆ, ಅತ್ತ ಕೆಲಸದವರಿಂದ ದಿನಕ್ಕಿಂತಿಷ್ಟು - ಎರಡೂ ಪಕ್ಷದವರಿಂದ ಜೇಬು ಭರ್ತಿ! ಈ ವಿಚಾರದಲ್ಲಿ 'ದಾದಾಗಿರಿ'ಯೂ ಇದೆಯಂತೆ. 'ಬಿಡಿಕೂಲಿ'ಗಳಿಗೆ ಅಂತಹ ಬದುಕು ಸಹ್ಯವಾಗಿರುತ್ತದೆ. 'ಅವರಿಗೆ ಶಾಶ್ವತ'ವಾದ ಬದುಕನ್ನು ಕಲ್ಪಿಸಿದರೂ, ಅವರಿಂದ ಜೀವನ ಮಾಡಲು ಕಷ್ಟ.

ನಮ್ಮೂರಲ್ಲೂ ಬಸ್ ನಿಲ್ದಾಣದಲ್ಲಿ ಹೀಗೆ ಜಮಾವಣೆಯಾಗುವ 'ಬಿಡಿಕೂಲಿ'ಗಳಿದ್ದರು. 'ನನಗಿವತ್ತು ಹತ್ತು ಜನ ಬೇಕು. ಹಾಗೆ ಸ್ಟಾಂಡಿಗೆ ಹೋಗಿ ಬರ್ತೇನೆ' ಎನ್ನುತ್ತಾ ಜೀಪು ಸ್ಟಾರ್ಟ್ ಮಾಡುವ ದಿನಗಳಿದ್ದುವು. ಯಾಕೋ, ಈಗೀಗ ಅಂತ ಶ್ರಮಜೀವಗಳ ಗುಂಪು ಕಡಿಮೆಯಾದಂತೆ ಭಾಸವಾಗುತ್ತಿದೆ. ಕೃಷಿ ಕಾರ್ಮಿಕ ಸಮಸ್ಯೆ. ಅಡಿಕೆ ಕೊಯ್ಯಲು, ತೆಂಗು ಕೊಯ್ಯಲು, ನೇಜಿ ನೆಡಲು ಜನವೇ ಇಲ್ಲ. ಕಾರ್ಮಿಕ ಸಮಸ್ಯೆಯಿಂದ ಕೃಷಿರಂಗ ನಲುಗುತ್ತಿದೆ.

ತಾಕೊಡೆ ಎಡ್ವರ್ಡ್ ಅವರಲ್ಲಿಗೆ ಹೋಗಿದ್ದೆ. ಅವರ ನೆರೆಮನೆಯ ಹಿರಿಯಜ್ಜಿಯ 'ಲೇಟೆಸ್ಟ್' ಅನುಭವ ನೋಡಿ - ಕೆಲಸಕ್ಕೆ ಜನ ಸಿಗುವುದಿಲ್ಲ. ಸಿಕ್ಕಿದರೂ ಮುನ್ನೂರೋ, ನಾನೂರೋ ಸಂಬಳ. ಜತೆಗೆ ಬೆಳಗ್ಗೆ ಉಪಾಹಾರಕ್ಕೆ ಇಡ್ಲಿಯೇ ಆಗಬೇಕು, ಮಧ್ಯಾಹ್ನ ಮಾಂಸದೂಟ. ಸಂಜೆ 'ಗಟ್ಟಿ ತಿಂಡಿ'ಯೊಂದಿಗೆ ಚಹಾ. ಮಧ್ಯೆಮಧ್ಯೆ ವಿಶ್ರಾಂತಿ. ಅಂತೂ ನಮ್ಮ ತೋಟದ ಕೆಲಸ ಮುಗಿಯಿತಪ್ಪಾ.

ಎಡ್ವರ್ಡ್ ಅವರ ತಾಯಿ ದನಿಗೂಡಿಸಿದರು - 'ನಮ್ಮ ಕಾಲದಲ್ಲಿ ಭತ್ತದ ಬೇಸಾಯ ಜೋರಾಗಿತ್ತು. ಹಲಸಿನ ಚಂಗುಲಿ (ಸೊಳೆಯಿದಂದ ಮಾಡಿ ಪಲ್ಯದಂತಹ ತಿಂಡಿ) ತಿಂದು ಮಧ್ಯಾಹ್ನದವರೆಗೆ ದುಡಿಯುತ್ತಿದ್ದೆವು.' ಒಂದೆಡೆ ಮಾಂಸದ ಊಟ ಕೊಟ್ಟರೂ ಅತೃಪ್ತಿ. ಮತ್ತೊಂದೆಡೆ ಚಂಗುಲಿ ತಿಂದು ಜೀವಿಸಿದ ಕಾಲಘಟ್ಟ. ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲವಲ್ಲಾ! ಇದು ಈಗಿನ ಪರಿಸ್ಥಿತಿ. ನಗರದ ಆಕರ್ಷಣೆಯೂ ಇಂತಹ ಸಮಸ್ಯೆಗೆ ಮುಖ್ಯ ಕಾರಣ.

ಕರಿಂಗಾಣದ ಡಾ.ಕೆ.ಎಸ್.ಕಾಮತ್ ಹೇಳುತ್ತಾರೆ 'ಹೆಚ್ಚಿನ ಹಳ್ಳಿಯ ಹುಡುಗರಿಗೆ ಕಂಕುಳಲ್ಲಿ ಪ್ಲಾಸ್ಟಿಕ್ ಚೀಲವನ್ನಿಟ್ಟು, ಮಾರ್ಗದ ಬದಿ ಬಸ್ಗಾಗಿ ಕಾಯುವುದೆಂದರೆ ಎಂತಹ ಸುಖ. ಇವರೆಲ್ಲಾ ಸಂಜೆಯಾಗುವಾಗ ಮನೆ ಸೇರುತ್ತಾರೆ. ದುಡಿಯುತ್ತಾರೋ, ಇಲ್ಲವೋ ಯಾರಿಗೆ ಗೊತ್ತು? ಅಂತೂ ಹಳ್ಳಿಯಲ್ಲಿರಲು ಬಹಳ ಕಷ್ಟವಾಗುತ್ತದೆ.' ತೋಟದ ಕೆಲಸಕ್ಕೆ ನಮ್ಮಲ್ಲಿ ಎಷ್ಟು ಜನ ಸ್ಪೆಷಲಿಸ್ಟ್ಗಳಿದ್ದರು. ಇವರ ಮಕ್ಕಳು ತಂದೆಯ ದಾರಿಯನ್ನು ತುಳಿಯುವುದಿಲ್ಲ. ಬೇರೆ ಉದ್ಯೋಗದತ್ತ ಹೊರಳುತ್ತಾರೆ. ಹೀಗಾಗಿ ತಂದೆಯ ಜ್ಞಾನ ಅವರಲ್ಲೇ ಮಡುಗಟ್ಟಿರುತ್ತದೆ! ಮಕ್ಕಳಿಗೆ ಬೇಡ.

ಕಾರ್ಮಿಕ ಸಮಸ್ಯೆಯನ್ನು ಬಿಚ್ಚುತ್ತಾ ಹೋದರೆ 'ಕತ್ತಲೆಯ ಲೋಕ' ದರ್ಶನವಾಗುತ್ತದೆ. ಹಾಗಿದ್ದರೆ ಮುಂದೇನು? ಮುಂಬಯಿಯಲ್ಲಾದರೆ 'ಮನುಷ್ಯ ಬಜಾರ್'ನಲ್ಲಿ ಜನ ಸಿಗುತ್ತಾರೆ. ನಮ್ಮೂರಲ್ಲಿ? ಇತ್ತೀಚೆಗೆ ಕಾಂಚನದ ಶಿವರಾಮ ಕಾರಂತರು ತಮ್ಮೂರಿನ ಕತೆಯನ್ನು ಹೇಳಿದರು -ನಮ್ಮೂರಲ್ಲಿ ಅಡಿಕೆ ಮರವೇರಲು ಸಮಸ್ಯೆಯಿಲ್ಲ. ನಾಲ್ಕೈದು ಮಂದಿ ಯುವಕರು ಈ ವಿದ್ಯೆಯನ್ನು ಕಲಿತಿದ್ದಾರೆ. ಯಶಸ್ವಿಯಾಗಿದ್ದಾರೆ'. ಈ ಯುವಕರಿಗೆ ಅಭಿನಂದನೆ ಹೇಳೋಣ.
(ಮಾಹಿತಿ : ಮಂಚಿ ಶ್ರೀನಿವಾಸ ಆಚಾರ್)

Wednesday, April 8, 2009

'ಕಾನೂನು ಮಾತ್ರವಲ್ಲ, ಮನಸ್ಸೂ ಬದಲಾಗಬೇಕು'

``ರಾಜಧಾನಿಯಲ್ಲಿ ಕೊಳಲು ಕಲಿಸುವ ಗುರುಗಳು ಶಿಷ್ಯರಿಗೆ ಕೊಳಲು ಕೊಡಿಸಲು ಹರಸಾಹಸ ಪಡುತ್ತಿದ್ದಾರೆ. ಕೊಳಲು ತಯಾರಿಸಲು ಬಿದಿರೇ ಸಿಕ್ತಾ ಇಲ್ಲ! ಪ್ಲಾಸ್ಟಿಕ್ ಕೊಳಲಿನಲ್ಲಿ ಬೇಕಾದ ನಾದ ಮೂಡುವುದಿಲ್ಲ.''ಬಿದಿರಿನ ಕೊರತೆಯನ್ನು ಈ ಮೂಲಕ ತೆರೆದಿಡುತ್ತಾರೆ ಮಾಜಿ ಅರಣ್ಯಾಧಿಕಾರಿ, ಬಿದಿರುಸಿರಿನ ಎ.ಸಿ.ಲಕ್ಷ್ಮಣ್.

ಬಿದಿರು ಕೃಷಿ ಮಾಡಬಹುದು. ಆದರೆ ಅದನ್ನು ಕಡಿದು, ಸಾಗಿಸಲು ಕಾನೂನಿನಲ್ಲಿ ನೂರಾರು ತೊಡಕುಗಳು. ಇದರಿಂದಾಗಿ ಪ್ರಾಮಾಣಿಕರು ಅಪ್ರಾಮಾಣಿಕರಾಗುತ್ತಾರೆ! 'ಎರಡು ಸಾವಿರ ವರುಷದ ಹಿಂದಿನ ಅರಣ್ಯ ಕಾನೂನುಗಳನ್ನು ಉರು ಹೊಡೆಯುವುದರ ಬದಲು, ಬೆಳೆಸುವವರ ನೆರವಿಗೆ ಬನ್ನಿ' - ಅಧಿಕಾರಿಗಳಿಗೆ ಲಕ್ಷ್ಮಣ್ ಸಲಹೆ.

ಬಿದಿರಿನ ಕೃಷಿಯ ಬಗ್ಗೆ ಅರಣ್ಯ ಇಲಾಖೆ ದೊಡ್ಡ ಮಾತುಗಳನ್ನಾಡುತ್ತದೆ - ವೇದಿಕೆಯಿಂದ. ಆದರೆ ಬೆಳೆಸಿದವರಿಗೇ ಗೊತ್ತು ವಾಸ್ತವ. ಕೆಲವಡೆ ವನ್ಯಜೀವಿ ಇಲಾಖೆಯೂ 'ಗುರ್ರೆನ್ನುತ್ತದೆ'! ಇದರಿಂದಾಗಿ ಸಾಮಾನ್ಯರಿಗೆ 'ಬಿದಿರು ಕೃಷಿ'ಯೆನ್ನಲು ಭಯ. ಬಿದಿರು ಕೃಷಿಯ ಬಗ್ಗೆ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಇಲಾಖೆಗಳ ಕಾನೂನುಗಳು ರೈತಪರವಾಗಬೇಕಿದೆ.

``ಇದಕ್ಕಾಗಿ ತಜ್ಞರ ಸಮಿತಿ ರಚಿಸಿ. ಬಿದಿರಿಗೆ ಮಾರಾಟ ದರವನ್ನು ನಿಗದಿಪಡಿಸಿ. ವರುಷದಲ್ಲಿ ನೂರು ದಿನವಾದರೂ 'ಹುಚ್ಚು ಹಿಡಿದಂತೆ' ಕೆಲಸ ಮಾಡಿ. ಆಗ ಎಲ್ಲಾ ಯೋಜನೆಗಳು ಸಾಮಾನ್ಯರಿಗೆ ತಲಪುತ್ತದೆ. ಜತೆಜತೆಗೆ ಅರಣ್ಯ ವಿಸ್ತಾರವೂ ಆಗುತ್ತದೆ'' - ಅರಣ್ಯಾಧಿಕಾರಿಗಳ ಮುಂದೆ ನಿದರ್ಾಕ್ಷಿಣ್ಯವಾಗಿ ಹೇಳಿದರು ಈ ನಿವೃತ್ತಾಧಿಕಾರಿ.

````ದಕ್ಷಿಣ ಅಮೆರಿಕಾದಲ್ಲಿ ಬಿದಿರಿನ 'ಸಂಚಾರಿ ಮನೆ'ಯನ್ನು ಬೇಕಾದೆಡೆ ಪ್ಯಾಕ್ ಮಾಡಿ ಒಯ್ಯುವಂತಹ ವ್ಯವಸ್ಥೆಯಿದೆ. ಇದು ನಮ್ಮಲ್ಲೂ ಯಾಕಾಗಬಾರದು? ಎಲ್ಲಾ ಜಿಲ್ಲಾ ಅರಣ್ಯ ಅಧಿಕಾರಿಗಳ ಶೆಡ್ನ್ನು ಮೊದಲಿಗೆ ಬಿದಿರಿನಲ್ಲೇ ತಯಾರಿಸುವಂತೆ ಸುತ್ತೋಲೆ ಹೊರಡಿಸಿ''.

ಪುತ್ತೂರಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ 'ಅವಸರದಲ್ಲಿ ನಿರ್ಧರಿಸಿದ' 'ಬಿದಿರು ಸಿರಿ' ಕಾರ್ಯಕ್ರಮದಲ್ಲಿ ಎ.ಸಿ.ಲಕ್ಷ್ಮಣ್ ಸಾತ್ವಿಕವಾಗಿ 'ಗುಡುಗಿದ'ರು. ಮೂಡಬಿದಿರೆಯ ಡಾ.ಎಲ್.ಸಿ.ಸೋನ್ಸ್ ತಮ್ಮ ಅನುಭವ ಬಿಚ್ಚಿಟ್ಟದ್ದು ಹೀಗ?``ತೊಟ್ಟಿಲಿನಿಂದ ಚಟ್ಟದ ತನಕ ಅಂತ ಬಿದಿರನ್ನು ವೈಭವಗೊಳಿಸುತ್ತೇವೆ. ಇಂದು ತೊಟ್ಟಿಲು ಮತ್ತು ಚಟ್ಟಕ್ಕೆ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಬಿದಿರಿನ ದೋಟಿ (ಮಾವು, ಸಪೋಟ ಕೊಯ್ಯಲು) ಏಣಿ ಅಲ್ಯೂಮಿನಿಯಂಮಯವಾಗಿವೆ. ''ಬಿದಿರು ಬೆಳೆಯಲು ಅರಣ್ಯವೇ ಆಗಬೇಕೆಂದಿಲ್ಲ. ಒಂದೆರಡು ಎಕ್ರೆ ಜಾಗವಿದ್ದವರು ಬರ್ಮಾ, ಹೆಬ್ಬಿದಿರು, ಸೋನೆಬಿದಿರುಗಳನ್ನು ಮನೆ ಬಳಕೆಗಾಗಿ ಬೆಳೆಯಬೇಕು. ಅಲಂಕಾರಕ್ಕಾಗಿ, ಕುಂಡಗಳಲ್ಲಿ ಬೆಳೆಯುವ ತಳಿಗಳಿವೆ. ಜಾವಾ ಮೂಲದ ಕಪ್ಪು ಬಣ್ಣದ ಬಿದಿರು, ದಕ್ಷಿಣ ಅಮೇರಿಕಾ ಮೂಲದ ವಾಡ್ವಾ ಇಂತಹುಗಳಲ್ಲಿ ಮುಖ್ಯವಾದುವು. ಡಾ.ಸೋನ್ಸ್ 30ಕ್ಕೂ ಹೆಚ್ಚು ತಳಿಗಳ ಬಿದಿರು ಕೃಷಿ ಮಾಡುತ್ತಿದ್ದಾರೆ. 'ನಿಯಮಗಳು ಸಡಿಲವಾದರೆ ರೈತರೇ ಬಿದಿರು ಕೃಷಿಯತ್ತ ಒಲವು ತೋರಿಸುತ್ತಾರೆ' ಎಂಬ ಆಭಿಪ್ರಾಯ ಅವರದು.

ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಜಿ.ಕುಶಾಲಪ್ಪ ಇನ್ನೂ ಒಂದು ಹೆಜ್ಜೆ ಮುಂದೆ - ' ಬದಲಾವಣೆಗಳು ಕಾನೂನಿನಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ ಆಗಬೇಕು'. ಕೊಡಗಿನಲ್ಲಿ ಬರ್ಮಾ ಬಿದಿರು 1915ರಲ್ಲಿ ಕಾಲಿಟ್ಟ ದಾಖಲೆಯಿದೆ. 1962ರಲ್ಲಿ ಹೂ ಬಿಟ್ಟಿವೆ. ಎರಡನೇ ಬಾರಿ ಈ ವರುಷ ಹೂ ಬಿಟ್ಟಿದೆ. ಕೊಡಗು ಮಾತ್ರವಲ್ಲ, ಬಹುತೇಕ ಎಲ್ಲಾ ಪ್ರದೇಶದ ಬರ್ಮಾಕ್ಕೂ ಇದೇ ಸ್ಥಿತಿ. ಬಿದಿರು ಹೂ ಬಿಟ್ಟರೆ ಗಿಡವೇ ನಾಶ. ನಿಶ್ಚಿತ ಅವಧಿಯಲ್ಲಿ ಗಿಡ, ಸಸಿ ಎಲ್ಲೆಂದರಲ್ಲಿ ಹೂ ಬಿಟ್ಟು ತಾನು 'ಆತ್ಮಹತ್ಯೆ' ಮಾಡಿಕೊಳ್ಳುತ್ತದೆ. ನಮಗಿದೊಂದು ಅವಕಾಶ! ಹೂ ಬಿಟ್ಟು ಬೀಜವಾಗಿ ಉದುರಿದಾಗ ಅದನ್ನು ಸಂಗ್ರಹಿಸಿ.

'ಬಿದಿರಕ್ಕಿ'ಯ ಅನ್ನ ಮಾಡಿ ಉಂಡ ಹಿರಿಯರು ಕೆಲವರಾದರೂ ಸಿಕ್ಕಿಯಾರು. ಈಗ ಕಾಲ ಬದಲಾಗಿದೆ. ಅನ್ನಕ್ಕೆ ತೊಂದರೆಯಿಲ್ಲ. ಆದರೆ ಬಿದಿರಿನ ಅಭಿವೃದ್ಧಿಗಾಗಿಯಾದರೂ ಬೀಜ ಸಂಗ್ರಹಿಸಿ, ಸಸಿ ಮಾಡಿ ಬೆಳೆಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. 'ಇನ್ನು ನಲವತ್ತೈದು ವರುಷಕ್ಕೆ ಹೂ ಬರುವುದಿಲ್ಲ'!

ಕೊಡಗಿನಲ್ಲಿ ಭತ್ತ ಪಾರಂಪರಿಕ ಕೃಷಿ. ಒಂದು ಕಾಲಘಟ್ಟದಲ್ಲಿ ಬಿದಿರಿರುವ ಕಾಡನ್ನು ಕಡಿದು ಗದ್ದೆ ಮಾಡಿದ್ರು. ಈಗ? ಬೇಸಾಯ ಅಲ್ಲೋ ಇಲ್ಲೋ ಎಂಬಂತಾಗಿದೆ. ಹಡಿಲು ಬಿದ್ದ ಗದ್ದೆಗಳಲ್ಲಿ ಬಿದಿರು ಬೆಳೆಸುವ ಪ್ರಯತ್ನಗಳಾಗುತ್ತಿವೆ. ಮೌಲ್ಯವರ್ಧನೆ ಕಾಲದ ಆವಶ್ಯಕತೆ. ಅಗರ್ಬತ್ತಿ ಉದ್ಯಮಕ್ಕೆ ಬೇಕಾದ ಕಡ್ಡಿಗಳಿಗೆ ಒಳ್ಳೆಯ ಮಾರುಕಟ್ಟೆಯಿದೆ. ಇದಕ್ಕಾಗಿ ಯಂತ್ರಗಳೂ ಲಭ್ಯ. ಗ್ರಾಮ ಮಟ್ಟದಲ್ಲಿ ಇಂತಹ ಯಂತ್ರ ಸ್ಥಾಪಿಸಿ ಉದ್ಯಮ ತಯಾರಿಸಬಹುದು. 'ಇದರಿಂದಾಗಿ ಅಸ್ಸಾಂನಿಂದ ಬಿದಿರನ್ನು ತರಿಸಬೇಕಾದ ಪ್ರಮೇಯ ಬರುವುದಿಲ್ಲ'.

ಸಿ.ಜಿ.ಕುಶಾಲಪ್ಪ ಬಿದಿರು ಕೃಷಿಯ ಲಾಭದ ಅಂಕಿಅಂಶ ಹೇಳುತ್ತಾರೆ : ``ಒಂದು ಎಕ್ರೆಯಲ್ಲಿ 40-42 ಸಸಿ ಹಾಕಬಹುದು. ಐದನೇ ವರುಷದಿಂದಲೇ 10-12 ಬಿದಿರು ಗಳ ಕಡಿಯಲು ಸಿಗ್ತದೆ. ಇಂದು 30-40 ಅಡಿ ಎತ್ತರದ ಬಿದಿರಿಗೆ 60-100 ರೂಪಾಯಿ ಸಿಗುತ್ತಿದೆ. ಪ್ರತಿಯೊಬ್ಬರೂ ಬಿದಿರ ಕೃಷಿ ಮಾಡುವುದರಿಂದ 'ಇಲಾಖೆಯ ಹಂಗಿಲ್ಲದೆ ಬಿದಿರು ಬೆಳೆದುಕೊಳ್ಳಬಹುದು.'' 'ಹಳ್ಳಿಯ ಮಕ್ಕಳು ನಮ್ಮ ಕಾಲೇಜಿಗೆ ಬನ್ನಿ. ನಿಮಗೆ ಸರಿಯಾದ ಉದ್ಯೋಗ ಸಿಗುತ್ತದೆ. ಇಲ್ಲಿ ಇಲ್ಲಿ ಕಲಿತವರು ರಾಜ್ಯಮಟ್ಟದ ಅಧಿಕಾರಿಗಳಾಗಿದ್ದಾರೆ' - ಕೃಷಿಕರಿಗೆ ಅರಣ್ಯ ಕಾಲೇಜಿನ ಪ್ರಾಂಶುಪಾಲರ ಕರೆ.

'ಕೃಷಿಕರೊಬ್ಬರ 'ಆನೆ ಕಾಟ ಜಾಸ್ತಿ. ಏನು ಮಾಡೋದು' ಎಂಬ ಪ್ರಶ್ನೆಗೆ ಕುಶಾಲಪ್ಪ ಉತ್ತರ :`'ಅಂಥಲ್ಲಿ ಬಿದಿರು ಕೃಷಿ ಮಾಡಬೇಡಿ.''

ಇಲಾಖೆಯ ರಾಜ್ಯ ವರಿಷ್ಠ ಡಾ.ಕೆ.ಸುಂದರ ನಾಯಕ್ರಿಂದ ಬಿದಿರು ಕೃಷಿಕರ ಸಮಸ್ಯೆಗಳಿಗೆ ಉತ್ತರ. ''ಸರಕಾರಿ ಅರಣ್ಯಗಳ ಮೇಲೆ ಅವಲಂಬಿತರಾಗಬೇಡಿ. ನೀವೇ ಅರಣ್ಯ ಕೃಷಿ ಮಾಡಿ'' ಎಂಬ ಕಿವಿಮಾತು. ಮಂಗಳೂರು ವಲಯದ ಅರಣ್ಯ ಇಲಾಖೆಯ ವತಿಯಿಂದ ನಡೆದ 'ಬಿದಿರು ಸಿರಿ'ಯಲ್ಲಿ ವಯನಾಡಿನ 'ಉರವು' ಸಂಸ್ಥೆಯ ಉತ್ಪನ್ನಗಳ ಮಳಿಗೆ ಹೆಚ್ಚು ಗಮನ ಸೆಳೆದಿತ್ತು. ಉರವು - ಸರಕಾರದ ಹಂಗಿಲ್ಲದೆ ಬಿದರನ್ನು ಬೆಳೆಸಿ ಬಳಸುತ್ತಿದೆ.

ಅರಣ್ಯ ಇಲಾಖೆಯ ದೊಡ್ಡದೊಡ್ಡ ಅಧಿಕಾರಿಗಳು ತಮ್ಮ ಇಲಾಖೆಯ ಹಂಗಿಲ್ಲದೆ ಬಿದಿರು ಬೆಳೆಯಬಹುದು ಎಂದು ಸಲಹೆ ಮಾಡುವುದನ್ನು ಕೇಳುವಾಗ ಖುಷಿಯಾಗುತ್ತದೆ. ಆದರೆ 'ಮನಸ್ಸೂ ಬದಲಾಗಬೇಕು' ಎಂಬ ಸಲಹೆಯಲ್ಲೇ ನಿಜಸ್ಥಿತಿಯ ಸೂಚನೆ ಇದೆ !

'ಕಾನೂನು ಮಾತ್ರವಲ್ಲ, ಮನಸ್ಸೂ ಬದಲಾಗಬೇಕು'

Saturday, April 4, 2009

ಲಾರಿಯೇರಿ ಬರುವ ಮನೆ!


'ಮನೆಕಟ್ಟಿ ನೋಡು, ಮದುವೆ ಮಾಡಿ ನೋಡು' - ಬದುಕಿಗಂಟಿದ ಗಾದೆ. ಮನೆಕಟ್ಟಿ, ಮದುವೆಯಾಗುವಾಗ ಬದುಕೇ ಹೈರಾಣ! ಉಳ್ಳವರಿಗೆ ತೊಂದರೆಯಿಲ್ಲ. ಮಧ್ಯಮವರ್ಗದವರಿಗೆ? ಸಾಲ-ಸೋಲ ಮುಗಿವಾಗ ಆಯುಸ್ಸಿನ ಅರ್ಧ ಲೆಕ್ಕಣಿಕೆ ಮುಗಿದಿರುತ್ತದೆ!

'ಅಡಿಪಾಯ ಮಾಡಿಕೊಡಿ. ಎರಡೇ ದಿವಸದಲ್ಲಿ ಮನೆ ಸಿದ್ಧ' - ಇದೇನೂ 'ಆಫರ್'ಗಳ ಬೊಗಳೆ ಅಲ್ಲ! ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಕೆ.ಎ.ಭಾಗ್ಯದೇವ್ ಅವರ ಸ್ಲೋಗನ್. ಈಗಾಗಲೇ ಎಪ್ಪತ್ತಕ್ಕೂ ಮಿಕ್ಕಿ ಕಳಚಿ ಒಯ್ಯಬಹುದಾದ ಕಳಚಿ ಜೋಡಿಸಬಲ್ಲ ಮನೆಗಳನ್ನು ತಯಾರಿಸಿದ್ದಾರೆ.
ಆದೇಶ ಕೊಟ್ಟು ಮರೆತು ಬಿಡಿ. ತಿಂಗಳೊಳಗೆ ಲಾರಿಯೊಂದು ನಿಮ್ಮ ಮನೆಯ ಮುಂದೆ ನಿಲ್ಲುತ್ತದೆ. ಸಿಮೆಂಟಿನ ವಿವಿಧ ಆಕಾರದ ವಸ್ತುಗಳನ್ನು ಕೆಳಗಿಳಿಸುತ್ತಾರೆ. ಬೈಕಿನಲ್ಲಿ ಪೇಟೆಗೆ ಹೋಗಿ ಪೇಪರ್ ತರುವಷ್ಟರಲ್ಲಿ ನಿಮ್ಮ ಮನೆಯಂಗಳದಲ್ಲಿ ಹೊಸ ಮನೆಯೊಂದು ತಲೆಯೆತ್ತಿರುತ್ತದೆ!

ಭಾಗ್ಯದೇವ್ ಇಂಜಿನಿಯರ್. ಮಧ್ಯಮವರ್ಗದವರ ಕಷ್ಟದ ಅರಿವಿದ್ದ ಕೃಷಿಕ. ಏಳೆಂಟು ಲಕ್ಷ ಸುರಿದು ಮನೆಕಟ್ಟಿ, ಅದ್ದೂರಿ 'ಒಕ್ಕಲು' ಮಾಡಿದರೂ ಎಷ್ಟು ಮಂದಿ ತೃಪ್ತರು? 'ದೊಡ್ಡ ಮನೆ ಕಟ್ಟಬೇಕೆಂದರೆ ಐದಾರು ಲಕ್ಷ ಬೇಕಲ್ವಾ. ನಮ್ಮಿಂದಾಗದು' ಎನ್ನುವವವರ ಬವಣೆಯೂ ಗೊತ್ತು. ಇಂತಹವರ ನೆರವಿಗೆ ಮುಂದೆ ಬಂದಿದ್ದಾರೆ ಭಾಗ್ಯದೇವ್.

ಒಂದು-ಎರಡು-ಮೂರು 'ಬೆಡ್ರೂಂ'ಗಳು, ಅಡುಗೆ ಮನೆ, ವರಾಂಡ, ಸಿಮೆಂಟ್ ಶೀಟಿನ ಸೂರು. ಸ್ನಾನ-ಶೌಚ ಗೃಹ. ಒಂದೂಕಾಲಿಂಚು ದಪ್ಪದ ಕಾಂಕ್ರಿಟ್ ಗೋಡೆ. ಬಾಗಿಲು, ಕಿಟಕಿ - ಇವಿಷ್ಟು ಕಳಚಿ ಜೋಡಿಸುವಂತಹುದು. 'ಬೋಲ್ಟ್ ಸಿಸ್ಟಂ'.

ಅಡಿಪಾಯ ರಚನೆಯು ಭಾಗ್ಯದೇವ್ 'ಪ್ಯಾಕೇಜ್'ಗೆ ಸೇರಿಲ್ಲ. ಉಳಿದ ಮನೆಗಳಂತೆ 'ಭಯಂಕರ' ಅಡಿಗಟ್ಟು ಬೇಕಿಲ್ಲ. '3 ಇಂಚು ದಪ್ಪದ ಕಾಂಕ್ರಿಟ್ ಅಡಿಪಾಯ ಸಾಕು. ನುಸುಳು ಜಾಗವಾದರೆ ಎರಡಡಿ ಎತ್ತರ ಮಣ್ಣು ಪೇರಿಸಿ, ಸುತ್ತಲು ಕಲ್ಲು ಅಥವಾ ಇಟ್ಟಿಗೆಯ ಗೋಡೆ ಕಟ್ಟಿ' - ಭಾಗ್ಯದೇವ್ ಸಲಹೆ. ನೆಲಕ್ಕೆ ಟೈಲ್ಸ್, ವಿದ್ಯುತ್ ಸರಬರಾಜಿಗೆ ವಯರಿಂಗ್ ಮೊದಲಾದ ಹೆಚ್ಚುವರಿ ಕೆಲಸಗಳು ಮನೆಯ ಯಜಮಾನನದ್ದು.

ಒಟ್ಟು ಭಾರ ಏಳೂವರೆ ಟನ್. ಎತ್ತರ ಎಂಟಡಿ. ಇತ್ತೀಚೆಗಂತೂ ಒಂಭತ್ತರಿಂದ ಹತ್ತೂವರೆ ಅಡಿ ಎತ್ತರಕ್ಕೂ ಏರಿಸಿದ್ದಾರೆ. ಗಾಳಿ-ಮಳೆಗೆ ಅಂಜಬೇಕಿಲ್ಲ. ಬೇಸಿಗೆಯಲ್ಲಿ ಶೀಟ್ಸೂರಿನಡಿ ಸೆಕೆ ಸಹಜ. ಸಾಕಷ್ಟು ಗಾಳಿ-ಬೆಳಕು ಬರುವುದರಿಂದ ಸುಧಾರಿಸಬಹುದು. ಮುಂದೆ ಹಂಚು/ಸ್ಲಾಬ್ ಹೊದಿಸುವ ಕುರಿತು ಆಲೋಚಿಸುತ್ತಿದ್ದಾರೆ.

ಇಂಜಿನಿಯರ್ ಭಾಗ್ಯದೇವ್ ಮನೆ ತಯಾರಿಯ ಹಿಂದೆ ಓಡಾಡಿದ್ದಾರೆ, ನಿದ್ದೆಗೆಟ್ಟಿದ್ದಾರೆ. ಅನುಭವಿಗಳೊಂದಿಗೆ ಸಲಹೆ ಪಡೆದಿದ್ದಾರೆ. ಕೂಡಿಸಿ-ಭಾಗಿಸಿ ನಕ್ಷೆತಯಾರಿಸಿ 'ಕಡಿಮೆ ವೆಚ್ಚದಲ್ಲಿ ಸಾಧ್ಯ' ಎಂಬ ನಿಲುವಿಗೆ ಬಂದರು.
ಮನೆಯ ವೆಚ್ಚ ಎಷ್ಟು? 'ಅದು ನಿಮ್ಮ ನಿಮ್ಮ ಶಕ್ತಿಗೆ ಹೊಂದಿಕೊಂಡು' ಎಂದು ನಗುತ್ತಾರೆ. ಅಡಿಪಾಯ ಬಿಟ್ಟು - ಒಂದು ಕೋಣೆ (ಬೆಡ್ರೂಂ)ಯ ಮನೆಗೆ ನಲವತ್ತು ಸಾವಿರ ರೂಪಾಯಿ. ಎರಡು ಕೋಣೆಯದಕ್ಕೆ ಅರುವತ್ತೈದು ಸಾವಿರ, ಮೂರಕ್ಕೆ ಎಂಭತ್ತೇಳು ಸಾವಿರ. ಇತ್ತೀಚೆಗೆ ಉಡುಪಿಯಲ್ಲಿ ಹತ್ತೂವರೆ ಅಡಿ ಎತ್ತರದ ಮನೆ ತಯಾರಿಸಿದ್ದಾರೆ. ಇದರಲ್ಲಿ ಕಾಲು ನಿಲ್ಲಿಸಲೂ ಸಹ ಜಾಗವಿದೆ. 'ಒಂದು ಲಕ್ಷದ ಹತ್ತು ಸಾವಿರ ವೆಚ್ಚವಾಗಿದೆಯಂತೆ.'

ರಾಜಧಾನಿಯ ಜೆ.ಪಿ.ನಗರದಲ್ಲಿ 'ಗ್ರಾಮೀಣ ಕೂಟ ಬ್ಯಾಂಕ್' ಕಟ್ಟಡ ಇವರದ್ದೇ ತಯಾರಿ. ಇಪ್ಪತ್ತೈದು ಸಿಬ್ಬಂದಿಗಳಿದ್ದಾರೆ.
ಮಂಡ್ಯ, ಮೈಸೂರು, ಹೈದರಾಬಾದ್..ಗಳಲ್ಲಿ ಸೂರು ತಲೆಯೆತ್ತಿದೆ. ಬಹುತೇಕ ವಾಸಕ್ಕೆ ಇಷ್ಟಪಟ್ಟಿದ್ದಾರೆ. ಎಪ್ಪತ್ತಕ್ಕೂ ಮಿಕ್ಕಿ ಮನೆಗಳು ಸಿದ್ಧವಾಗಿವೆ. ಇನ್ನಷ್ಟು ಕೈಯೊಳಗೆ ಇವೆ. 'ಈಗಾಗಲೇ ನೀವು ಮನೆ ಕಟ್ಟಿಸಿದ್ದಲ್ಲಿ, ತಾರಸಿ ಮೇಲೂ ಕೊಡುತ್ತೇವೆ' ಎನ್ನುತ್ತಾರೆ ಭಾಗ್ಯ. ಶೇ.75 ಮುಂಗಡ. ಮುಂಚಿತ ಮಾತುಕತೆ. ನೇರ ವ್ಯವಹಾರ.
ತೋಟದ ಮನೆ, ಕಾವಲು ಮನೆ, ಅತಿಥಿಗೃಹ, ಚಿಕ್ಕ ಕಚೇರಿ, ಕಟ್ಟಡಗಳ ಕಾಮಗಾರಿ ನಡೆವಲ್ಲಿ ವಸತಿ, ತೋಟದ ಮನೆ..... ತೋಟದಲ್ಲೋ, ಎಸ್ಟೇಟ್ನಲ್ಲೋ ಮನೆ ಕಟ್ಟುವಾಗ ಸುತ್ತಲಿದ್ದ ಮರಗಳನ್ನು ಕತ್ತರಿಸಬೇಕಾಗಿಲ್ಲ. ಒಂದೇ ಕಡೆ ವಾಸ್ತವ್ಯವಿದ್ದ್ದು, 'ಬೋರ್' ಆಯಿತೆನ್ನಿ. ಅಲ್ಲಿಂದ ಕಳಚಿ ಬೇರೆಡೆ ಒಯ್ಯಬಹುದು. ಹೊಸ ವಿನ್ಯಾಸದ ಬೇಡಿಕೆ ಮುಂದಿಟ್ಟಲ್ಲಿ, ವಾಸ್ತು ವಿನ್ಯಾಸವನ್ನು ರೂಪಿಸಿಕೊಟ್ಟಲ್ಲಿ ಅದರಂತೆ ಮನೆಯನ್ನು ವಿನ್ಯಾಸಿಸುತ್ತಾರೆ. 'ಹವಾನಿಯಂತ್ರಿತ' ವ್ಯವಸ್ಥೆಯನ್ನೂ ಜೋಡಿಸಬಹುದು. ವೆಚ್ಚ ಮಾತ್ರ ಹೆಚ್ಚುವರಿ.

ಎಷ್ಟೋ ಕಡೆ 'ವಾಸ್ತು'ವಿಗಾಗಿ ಕಿಟಕಿ-ಬಾಗಿಲುಗಳನ್ನು ಆಗಾಗ್ಗೆ ಬದಲಿಸುತ್ತಾರೆ. ಇದಕ್ಕಾಗಿಯೇ ಕೆಲವು 'ವಿಶೇಷ ವಾಸ್ತು ತಜ್ಞ'ರಿದ್ದಾರೆ! ಭಾಗ್ಯದೇವ್ ಮಾದರಿಯ ಮನೆಯಲ್ಲಿ ಎಲ್ಲಿ ಬೇಕಾದರೂ ಕಳಚಿ ಜೋಡಿಸಬಹುದು. ನಿರ್ವಹಣೆ ಕಡಿಮೆ. 'ಕಿಟಕಿಯ ಸರಳುಗಳಿಗೆ ಎರಡು ವರುಷಕ್ಕೊಮ್ಮೆ ಬಣ್ಣ ಬಳಿಯಿರಿ. ಶೀಟಿನಲ್ಲಿ ಎಲ್ಲಾದರೂ ಅಪರೂಪಕ್ಕೆ ಒಡಕು ಬಂದರೆ ಮನೆಯವರೇ ಸರಿಪಡಿಸಿಕೊಳ್ಳಬಹುದು.' ಎನ್ನುತ್ತಾರೆ.

'ಇದು ಸುಲಭ ವ್ಯವಸ್ಥೆ. ಟೆನ್ಶನ್ ಇಲ್ಲ. ವರ್ಷಗಟ್ಟಲೆ ಕಾಯಬೇಕಾಗಿಲ್ಲ. ಮನೆಕಟ್ಟುವ ಮೊದಲೇ ಗೃಹಪ್ರವೇಶಕ್ಕೆ ಆಮಂತ್ರಣ ಅಚ್ಚು ಹಾಕಿಸಬಹುದು' ಎನ್ನುತ್ತಾರೆ ಕೊಪ್ಪದ ವಸಂತಕುಮಾರ್.
ಭಾಗ್ಯದೇವ್ ಅವರ 'ಮೊಬೈಲ್ ಮನೆ' ಕಲ್ಪನೆಗಿಂತ ಮುಂಚೆ 'ಸಿದ್ಧ ಸ್ನಾನಗೃಹ ಮತ್ತು ಶೌಚಾಲಯ' ಕೈಹಿಡಿದಿತ್ತು. ಶೌಚಗೃಹ - ಏಳಡಿ ಎತ್ತರ, ಮೂರಡಿ ಅಗಲ, ಮೂರೂವರೆ ಅಡಿ ಉದ್ದ. ಸ್ನಾನಗೃಹವಾದರೆ ಮೂರೂವರೆ ಅಡಿ ಉದ್ದಗಲ. ಎರಡಕ್ಕೂ ಎಂಟೂವರೆ ಸಾವಿರ ರೂಪಾಯಿ. ಶೌಚಾಲಯದ ಹೊಂಡ ಮತ್ತು ಮುಚ್ಚಿಗೆ ವೆಚ್ಚ ಇದರಲ್ಲಿ ಸೇರಿಲ್ಲ. ಈಗಾಗಲೇ ಬಾಳೆಹೊನ್ನೂರು ಸುತ್ತಮುತ್ತ ಇನ್ನೂರಕ್ಕೂ ಮಿಕ್ಕಿ ಶೌಚಾಲಯ ವಿತರಿಸಿದ್ದಾರೆ. ಕಾಫಿ ಎಸ್ಟೇಟ್ಗಳಲ್ಲಿ ಮನೆಗಳಿಗೆ ಹೆಚ್ಚು ಬೇಡಿಕೆ.

ಈಗ ಮತ್ತೊಂದು ಸೇರ್ಪಡೆ. ಸ್ನಾನ-ಶೌಚ (ಅಟಾಚ್) ಜತೆಗಿದ್ದ ಮನೆಯ ನಕ್ಷೆಯಿದೆ. ಆರಡಿ ಉದ್ದಗಲ. ಹದಿನಾಲ್ಕು ಸಾವಿರ ಐನೂರು ರೂಪಾಯಿ ಮಾತ್ರ.

ಸೀಗೋಡ್ ಪ್ಲಾಂಟೇಶನ್ನ ಲಿಯೋ ವಿಲ್ಸನ್ ಲೋಬೋ ಹೇಳುತ್ತಾರೆ - ಭಾಗ್ಯದೇವ್ ಮಾದರಿಯ ಇಪ್ಪತ್ತಕ್ಕೂ ಮಿಕ್ಕಿ ಶೌಚಾಲಯ ಮತ್ತು ಸ್ನಾನಗೃಹ ನಮ್ಮಲ್ಲಿದೆ. ನಾವೇ ತಯಾರಿಸಿದರೆ ವೆಚ್ಚ ಅಧಿಕ. ಕಚ್ಚಾ ವಸ್ತುಗಳ ಅಲಭ್ಯತೆ ದೊಡ್ಡ ತಲೆನೋವು. ಕೆಲಸದವರ ಅಭಾವ ಮತ್ತೊಂದೆಡೆ. ಇದಕ್ಕೆಲ್ಲಾ ಪರಿಹಾರ ಈ ಸುಲಭ ವ್ಯವಸ್ಥೆ.'

'ಶೌಚಾಲಯ ಮಾಡಿದಾಗ ಮೊದಲು ಗೇಲಿ ಮಾಡಿದ್ದರು. ಅಪಪ್ರಚಾರ ಮಾಡಿದರು. ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಕೊನೆಗೆ ಅವರೇ ಆರ್ಡರ್ ಮಾಡಿದರು! ಇವರ ಮನೆಯ ಅಂಗಳದಂಚಿನಲ್ಲಿ ಅತಿಥಿ ಗೃಹವಿದೆ. ಬಂದವರಿಗೆ ಇಲ್ಲೇ ಅತಿಥಿ ಸತ್ಕಾರ, ವಸತಿ. ಜೊತೆಗೆ ಡೆಮೋ!

ಇಷ್ಟು ಕಡಿಮೆ ವೆಚ್ಚದ ಮನೆಯ ಗುಣಮಟ್ಟ? 'ಉತ್ತಮ ಗುಣಮಟ್ಟದ ಕಚ್ಚಾವಸ್ತು ಬಳಸುತ್ತೇವೆ. ಗುಣಮಟ್ಟದಲ್ಲಿ ರಾಜಿಯಿಲ್ಲ. ಸಿಮೆಂಟಿನ ಆಯುಷ್ಯ ಎಷ್ಟಿದೆಯೋ, ಅಷ್ಟು ಆಯುಸ್ಸು, ಬಾಳ್ವಿಕೆ' ಎನ್ನುತ್ತಾರೆ.

ಕೆ.ಎ.ಭಾಗ್ಯದೇವ್, 'ಉನ್ನತಿ', ಅಂಚೆ : ಕಡಬಗೆರೆ, ಸಂಗಮೇಶ್ವರಪೇಟೆ, ಚಿಕ್ಕಮಗಳೂರು ಜಿಲ್ಲೆ - 577 136,
ದೂರವಾಣಿ : 08262-252222, 9449826085