Thursday, November 16, 2017

ಹಾಸ್ಯಸಾಹಿತಿ ಕು.ಗೋ ಅವರಿಗೆ - ಬೋಳಂತಕೋಡಿ ಕನ್ನಡ ಪ್ರಶಸ್ತಿ



               ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಉಡುಪಿಯ ಹೆರ್ಗ ಗೋಪಾಲ ಭಟ್ ಯನೆ ಕು.ಗೋ ಇವರು ಈ ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ನವೆಂಬರ್ 21, ಮಂಗಳವಾರ ಸಂಜೆ 4-30ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ. ಪುತ್ತೂರಿನ 'ಬೋಳಂತಕೋಡಿ ಅಭಿಮಾನಿ ಬಳಗ'ವು ಆಯೋಜಿಸುವ ಸಮಾರಂಭದಲ್ಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.
              ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್ ವಹಿಸಲಿದ್ದಾರೆ. ಬೆಂಗಳೂರು ದೂರದರ್ಶನದ ವಿಶ್ರಾಂತ ಹೆಚ್ಚುವರಿ ಮಹಾನಿರ್ದೇಶಕ ನಾಡೋಜ ಡಾ.ಮಹೇಶ್ ಜೋಷಿಯವರು 'ಪುಸ್ತಕ ಹಬ್ಬ'ವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರಿನ ವಿಶ್ರಾಂತ ಉಪನ್ಯಾಸಕ, ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆಯವರು ಬೋಳಂತಕೋಡಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕು.ಗೋ ಅವರ ಕುರಿತು ಸಾಹಿತಿ, ವಿಮರ್ಶಕ ಬೆಳಗೋಡು ರಮೇಶ್ ಭಟ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
                ಈ ಸಂದರ್ಭದಲ್ಲಿ ಕು.ಅಪೂರ್ವ ಕೊಲ್ಯ ಅವರ 'ಚಿತ್ತಚೋರ' ಕವನ ಸಂಕಲನವು ಅನಾವರಣಗೊಳ್ಳಲಿದ್ದು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಡಾ.ಶೋಭಿತಾ ಸತೀಶ್ ಕೃತಿ ಪರಿಚಯ ಮಾಡಲಿದ್ದಾರೆ. ಪುತ್ತೂರಿನ ರಾಜೇಶ್ ಪವರ್ ಪ್ರೆಸ್ಸಿನ ಎಂ.ಎಸ್.ರಘುನಾಥ ರಾವ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಮತ್ತು ಹಿರಿಯ ನ್ಯಾಯವಾದಿಗಳಾದ  ಕೆ.ಆರ್.ಆಚಾರ್ಯ ಇವರು ವಿವಿಧ ಕಲಾಪಗಳನ್ನು ನಡೆಸಿಕೊಡಲಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕವು ಹೆಗಲೆಣೆಯಾಗಿ ಕೈಜೋಡಿಸಿದೆ. 
             ಸಂಗೀತ ಕಛೇರಿ : ಸಮಾರಂಭದ ಬಳಿಕ ಕು.ಶ್ರೇಯಾ ಕೊಳತ್ತಾಯ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಇವರೊಂದಿಗೆ ವಯೋಲಿನ್ನಲ್ಲಿ ಬೆಂಗಳೂರಿನ ವೈಭವ್ ರಮಣಿ, ಮೃದಂಗದಲ್ಲಿ ಸುನಿಲ್ ಸುಬ್ರಹ್ಮಣ್ಯ ಸಹಕರಿಸಲಿದ್ದಾರೆ.
             ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಈ ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ, ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್ ಇವರಿಗೆ ಪ್ರದಾನಿಸಲಾಗಿದೆ.
ಪುಸ್ತಕ ಹಬ್ಬ : ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನವೆಂಬರ 21 ರಿಂದ 27ರ ತನಕ ದಿನಪೂರ್ತಿ 'ಪುಸ್ತಕ ಹಬ್ಬ' ಜರುಗಲಿದ್ದು ಪುಸ್ತಕ ಪ್ರದರ್ಶನ-ಮಾರಾಟ ವ್ಯವಸ್ಥೆಯಿದೆ.
               ಪ್ರಶಸ್ತಿ ಪುರಸ್ಕೃತರ ಪರಿಚಯ : ಹಾಸ್ಯ ಸಾಹಿತಿ ಹೆರ್ಗ ಗೋಪಾಲ ಭಟ್ (79) ಇವರ ಕಾವ್ಯ ನಾಮ 'ಕು.ಗೋ.' ಬರೆಯುವ, ಬರೆಸುವ; ಮಾತನಾಡುವ, ಮಾತನಾಡಿಸುವ; ಪುಸ್ತಕ ಓದುವ, ಓದಿಸುವ; ಓದುವವರನ್ನು ಹುಡುಕಿ ಹೋಗಿ ಪುಸ್ತಕಗಳನ್ನು ಹಂಚುವ ಅಪರೂಪದ ವ್ಯಕ್ತಿತ್ವ. ಇವರೊಬ್ಬ ಅಕ್ಷರ ಸಂಸ್ಕೃತಿಯ ಹರಿಕಾರ. ಪುಸ್ತಕ ಪ್ರೀತಿಯ ಪರಿವ್ರಾಜಕ. ಹಲವು ಪುಸ್ತಕಗಳನ್ನು ಖರೀದಿಸಿ ಆಸಕ್ತರ ಕೈಗಿಟ್ಟು ಓದಿಸುವಂತೆ ಪ್ರೇರೇಪಿಸುವ ಅಕ್ಷರ ಪ್ರಚಾರಕ. ಹಳೆಯ ತಲೆಮಾರಿನ ಪ್ರಾತಿನಿಧಿಕ ಹಾಸ್ಯ ಬರಹಗಾರ. ಲೇಖಕರ, ಪ್ರಕಾಶಕರ ಮತ್ತು ಪ್ರಕಾಶನಗಳಿಗೆ ನಿತ್ಯ ಸಹಕಾರಿ. ನಾಡಿನಾದ್ಯಂತ ಪುಸ್ತಕ ಪ್ರೀತಿಯನ್ನು ಹಬ್ಬಿಸುವ ಹಾಸ್ಯ ಲೇಖಕ. ಅಕ್ಕನ ಮದುವೆ, ಶನಿಹಿಡಿದವ, ಹತ್ತು ಕತೆಗಳು, ತೇಲ್ನೋಟ, ಎತ್ತಣಿಂದೆತ್ತ, ಲೊಳಲೊಳಾಯಿ, ಪಟಪಟ ಪಟಾಕಿ ಇವರ ಪ್ರಕಟಿತ ಕೃತಿಗಳು. ಇದರಲ್ಲಿ ಲೊಳಲೊಳಾಯಿ ಕೃತಿಯ ಒಂದು ಹಾಸ್ಯ ಪ್ರಸಂಗವು ಕೇರಳ ಸರಕಾರದ ಎಂಟನೇ ತರಗತಿಯ ಪಠ್ಯದಲ್ಲಿ ಸೇರ್ಪಡೆಗೊಂಡಿತ್ತು. 'ಗೋರೂರು ಸಾಹಿತ್ಯ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಪರಮಾನಂದ ಪ್ರಶಸ್ತಿ'ಗಳಿಂದ ಪುರಸ್ಕೃತರು. ವೃತ್ತಿಯಲ್ಲಿ ಎಲ್.ಐ.ಸಿ.ಯಲ್ಲಿ ಉದ್ಯೋಗಿಯಾಗಿದ್ದು ಈಗ ನಿವೃತ್ತ. ತನಗೆ ಬರುವ ನಿವೃತ್ತಿ ವೇತನದ ಬಹುಪಾಲನ್ನು ತನ್ನ ಪುಸ್ತಕಾಸಕ್ತಿಗೆ ವಿನಿಯೋಗಿಸುತ್ತಿದ್ದಾರೆ.

-    ಕೆ.ಆರ್.ಆಚಾರ್ಯ (9449464463)
-    ಪ್ರಕಾಶ್ಕುಮಾರ್ ಕೊಡೆಂಕಿರಿ (9480451560)