Monday, April 29, 2013

ಮೇ: 25-26 : ಶಿರಸಿ ಹಲಸು ಮೇಳ


ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 'ಕದಂಬ' ಸಂಸ್ಥೆಯು ಪ್ರತೀವರುಷ ಹಲಸು ಮೇಳವನ್ನು ಆಯೋಜಿಸುತ್ತಿದೆ. ಇಲಾಖೆಗಳು, ಸರಕಾರೇತರ ಸಂಸ್ಥೆಗಳನ್ನು ಜತೆ ಸೇರಿಸಿಕೊಂಡು ನಡೆಸುವ ಮೇಳದಲ್ಲಿ ಖಾದ್ಯಗಳಲ್ಲದೆ; ಗಿಡಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡುತ್ತಿದೆ. 'ಕದಂಬ' ಬ್ರಾಂಡೆಡ್ ಹಪ್ಪಳವನ್ನು ಹೊರತಂದಿದೆ. ಶ್ರೀಮತಿ ಮಮತಾ, ಗೀತಾ ಹೆಗಡೆ.. ಮೊದಲಾದವರು ಇನ್ನೂರಕ್ಕೂ ಮಿಕ್ಕಿ ಹಲಸಿನ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿಕೊಡುವ ನಿಪುಣೆಯರು. ಇವರ ಸೇವೆಯನ್ನು ಕದಂಬ ಬಳಸಿಕೊಳ್ಳುತ್ತಿದೆ. ಮೇ 17 ರಿಂದ 19ರ ತನಕ ಶಿರಸಿಯ ಕದಂಬ ಸಂಸ್ಥೆಯ ಆವರಣದಲ್ಲಿ ಹಲಸು ಹಬ್ಬ ನಡೆಯಲಿದೆ.

ಸಂಪರ್ಕ : Kadamba Office - (08384) 233 163, contact@kadambamarketing.com

ವಯನಾಡು ಹಲಸು ಮೇಳ :ಮೇ 17-19


                  ಕೇರಳ ವಯನಾಡಿನ 'ಉರವು' ಸಂಸ್ಥೆಗೆ ಮೊದಲ ಬಾರಿಗೆ (1997) ಹಲಸಿನ ಮೇಳವನ್ನು ಸಂಘಟಿಸಿದ ಖ್ಯಾತಿ. ಬಳಿಕ ಕನ್ನಾಡಿನ ವಿವಿಧ ಪ್ರದೇಶಗಳಲ್ಲಿ ಜರುಗಿತು. ಬಹಳ ಅರ್ಥಪೂರ್ಣವಾಗಿ, ಮೇಳದ ಆಶಯಪೂರ್ತಿಗೆ ಬೇಕಾಗುವ ಹೂರಣವನ್ನಿಟ್ಟುಕೊಂಡಿರುವುದು ಮೇಳದ ವೈಶಿಷ್ಟ್ಯ.

                 ಒಂದೆಡೆ ಹಲಸಿನ ಪ್ರದರ್ಶನ, ಮತ್ತೊಂದೆಡೆ ಹಲಸಿನ ಖಾದ್ಯಗಳ ಲೈವ್ ಪ್ರದರ್ಶನ ಮತ್ತು ಮಾರಾಟ. ತಿನ್ನಲು ರೆಡಿಯಾಗಿ ನೀಡಿದರೆ, ಹಣಕೊಟ್ಟು ಖರೀದಿಸುವ ದೊಡ್ಡ ಗ್ರಾಹಕವರ್ಗವನ್ನು ಉರವು ಸೃಷ್ಟಿಸಿದೆ. ಹಾಗಾಗಿಯೇ ನೋಡಿ, ಉರವಿನ ಖಾದ್ಯದ ಸ್ಟಾಲ್ ಬೆಳಿಗ್ಗೆ ಆರಂಭವಾದರೆ ರಾತ್ರಿಯೇ ಬಾಗಿಲೆಳೆಯುವುದು. ಮಂತ್ರಿಮಹೋದಯರಿಂದ ಢಾಳು ಭಾಷಣಗಳಿಲ್ಲ. ಬಹುಪರಾಕುಗಳಿಲ್ಲ. ಹಾಗೆಂತ ಮಂತ್ರಿಗಳು, ಅಧಿಕಾರಿಗಳು ಹಬ್ಬದಲ್ಲಿ ಸಾಮಾನ್ಯರಂತೆ ಭಾಗವಹಿಸುತ್ತಾರೆ. ಹಲಸು ಹಬ್ಬದಲ್ಲಿ ಹಲಸಿನದ್ದೇ ಹೈಲೈಟ್.

                   ಈ ಬಾರಿ ಮೇ 17ರಿಂದ 19ರ ತನಕ ವಯನಾಡಿನ ತ್ರಿಕ್ಕಾರಿಪೇಟಿನಲ್ಲಿ ಎಂಟನೇ ಹಲಸು ಮೇಳ ನಡೆಯುತ್ತಿದೆ. ಕೋಝೀಕೋಡಿಂದ ವಯನಾಡಿಗೆ ಎರಡು ಗಂಟೆ ಪ್ರಯಾಣ ದೂರ.

                  ಮೇಳದ ಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕ ವಿಳಾಸ: . CD Suneesh - sunishcd@gmail.com, 94465 795552 * Babu Raj - baburajuravu@gmail.com,  97470 75610

Saturday, April 13, 2013

ಭತ್ತದ ಕಾಳಿಗೆ ಮುತ್ತಿನ ಬೆಲೆ

              ಕೃಷಿ ಉತ್ಸವದ ಪ್ರದರ್ಶನವೊಂದರಲ್ಲಿ ಭತ್ತದ ಕೃಷಿಯ ಪರಿಕರ, ಸಾಂಪ್ರದಾಯಿಕ ಮನೆಯ ಮಾದರಿ, ನಿತ್ಯ ಬದುಕಿನ ವ್ಯವಸ್ಥೆಗಳನ್ನು ಬಿಂಬಿಸುವ ಪ್ರಾತ್ಯಕ್ಷಿಕೆಯಿತ್ತು. ಅದನ್ನು ನೋಡುವ, ವಿಮರ್ಶಿಸುವ, ಗತ ಕಾಲವನ್ನು ಜ್ಞಾಪಿಸಿಕೊಳ್ಳುವ ಅಮ್ಮಂದಿರು ನೋಟಕರಾಗಿದ್ದರು. ಆಧುನಿಕ ಜೀವನಶೈಲಿಯತ್ತ ಹೊರಳುವ ಕಾಲಘಟ್ಟದಲ್ಲಿ ಪ್ರಾತ್ಯಕ್ಷಿಕೆಯು ಪಾರಂಪರಿಕ ಬದುಕನ್ನು ಅಣಕಿಸಿದಂತೆ ಭಾಸವಾಯಿತು.

              'ಬದುಕಿಗೆ ಅಂಟಿಕೊಂಡಿದ್ದ ಭತ್ತದ ಕೃಷಿಯನ್ನು ಡೆಮೋದಲ್ಲೇ ನೋಡಬೇಕಷ್ಟೇ. ಹೀಗಾದರೆ ಉಣ್ಣುವುದೇನನ್ನು' ಎಂದು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸುತ್ತಿದ್ದ ಮಹನೀಯರೊಬ್ಬರನ್ನು ಮಾತಿಗೆಳೆದೆ. 'ತೊಂದರೆಯಿಲ್ಲ ಮಾರಾಯ್ರೆ, ಅಕ್ಕಿಯನ್ನು ಅಂಗಡಿಯಿಂದ ತಂದರಾಯಿತು' ಎನ್ನಬೇಕೇ. ಹಣ ನೀಡಿದರೆ ಎಲ್ಲವೂ ಅಂಗಡಿಯಲ್ಲಿ ಸಿಗುತ್ತದೆ ಎಂಬ ಮೈಂಡ್ಸೆಟ್ ಬಹುತೇಕರಲ್ಲಿ ನೋಡುತ್ತೇವೆ.

              ಸರಿ, ಅಂಗಡಿಯಿಂದಲೇ ತರೋಣ. ಅಂಗಡಿಗೆ ಎಲ್ಲಿಂದ ಬರಬೇಕು. ರೈತ ಬೆಳೆದರೆ ಮಾತ್ರ ಹೊಟ್ಟೆ ತುಂಬುತ್ತದೆ. ನೆಲ, ಜಲದಂತಹ ಪ್ರಾಕೃತಿಕ ವ್ಯವಸ್ಥೆಗಳು ಕೈಕೊಟ್ಟರೆ ಹೊಟ್ಟೆಯ ಮೇಲೆ ಒದ್ದೆ ಬಟ್ಟೆ. ಹೊಸ ಹೊಸ ಕೃಷಿಗಳ ವಲಸೆಯಿಂದ ಈಗಾಗಲೇ ಭತ್ತದ ಕೃಷಿ ಹೈರಾಣವಾಗಿದೆ. ಹೊರ ರಾಜ್ಯವನ್ನು ನಂಬಿ ಅನ್ನದ ಬಟ್ಟಲು ಎಷ್ಟು ದಿವಸ ಕಾಯಬಹುದು?

              ಭತ್ತದ ಕೃಷಿ ಬದುಕಿನೊಂದಿಗೆ ಹೊಸೆದ ಕೃಷಿ. ವರ್ಷಪೂರ್ತಿ ಉಣ್ಣಲು ಭತ್ತದ ಸಂಗ್ರಹ ಮನೆಯೊಳಗಿದ್ದರೆ ಆತ ಶ್ರೀಮಂತ. ಹಿಂದೆಲ್ಲಾ ವಿವಾಹ ಸಂದರ್ಭದಲ್ಲಿ ಭತ್ತದ ಗಣತಿಯಂತೆ ವೈಯಕ್ತಿಕ ಪ್ರತಿಷ್ಠೆಗಳು ಸ್ಥಾಪಿತವಾಗುತ್ತವೆ. 'ಯಾವಾಗ ಕ್ಯಾಲ್ಕ್ಯುಲೇಟರ್ ಕೈಗೆ ಬಂತೋ ಅಂದಿನಿಂದ ಭತ್ತದ ಬೇಸಾಯ ಹಿಂದೆ ಬಂತು' ಎಂಬ ಅಮೈ ದೇವರಾಯರ ಮಾತು ಸಾರ್ವಕಾಲಿಕ.

              ಭತ್ತದ ಕೃಷಿಯು ಲೆಕ್ಕ ಬರೆದಿಟ್ಟು ಮಾಡುವಂತಹುದಲ್ಲ ಎಂಬ ವಾಸ್ತವ ಹಿರಿಯರಿಗೆ ಗೊತ್ತಿತ್ತು. 'ಭತ್ತದ ಕೃಷಿ ಮಾಡದ ಕೃಷಿಕ ಕೃಷಿಕನಲ್ಲ' ಎಂದು ಕಟುವಾಗಿ ಕೀರ್ತಿಶೇಷ ಚೇರ್ಕಾಡಿಯವರು ಪ್ರತಿಪಾದಿಸುತ್ತಿದ್ದರು. 'ಮೊದಲು ಹೊಟ್ಟೆಯ ಪೂಜೆ, ಮಿಕ್ಕಿದ್ದೆಲ್ಲಾ ಬಳಿಕ..' ಎನ್ನುವ ಪಾಣಾಜೆಯ ವೆಂಕಟ್ರಾಮ ದೈತೋಟ.. ಇವರೆಲ್ಲರ ನುಡಿಗಳು ಭತ್ತದ ಸಂಸ್ಕೃತಿ, ಬದುಕಿನತ್ತ ಹಿನ್ನೋಟ ಬೀರುತ್ತವೆ.

                  ಪ್ರಸ್ತುತ ಕಾಲಘಟ್ಟದಲ್ಲಿ ತುತ್ತಿಗೆ ತತ್ವಾರವಿಲ್ಲ! ಎಲ್ಲದಕ್ಕೂ ಹಣವೇ ಮಾನದಂಡ. ಯಾವುದೇ ಮುಜುಗರವಿಲ್ಲದೆ, ಮಾನ-ಸಂಮಾನಗಳ ಗೊಡವೆಗೆ ಹೋಗದೆ ನೆಲ, ಜಲಗಳನ್ನು ಆಪೋಶನ ಮಾಡುವ ಪ್ರಭೃತಿಗಳಿರುವ ನಾಡಿನಲ್ಲಿ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುವುದು ಅಜ್ಞಾನವಾಗಬಹುದೇನೋ? ಬಟ್ಟಲಿನಲ್ಲಿ ಅನ್ನದ ಒಂದು ಅಗುಳನ್ನು ಉಣದೆ ಬಿಟ್ಟರೆ, ಚೆಲ್ಲಿದರೆ 'ಅನ್ನ ಬಿಡಬೇಡಿ, ನಂತರ ಬೇಡುವ ಸ್ಥಿತಿ ಬರಬಹುದು' ಎಂದು ಹಿರಿಯರು ಹೇಳುತ್ತಿದ್ದ ಸಾತ್ವಿಕ ಆಕ್ರೋಶದ ಮಾತುಗಳು ಆರ್ಥಶೂನ್ಯ ಅಂತ ಅನ್ನಿಸುವ ಕಾಲಮಾನದಲ್ಲಿದ್ದೇವೆ.

                  ಒಂದೊಂದು ಭತ್ತದ ಕಾಳು ಮುತ್ತಿಗೆ ಸಮಾನವೆಂದು ಭಾವಿಸಿ, ಅದನ್ನು ಆಯ್ದು, ಗಂಜಿ ಮಾಡಿ ಹೆಂಡತಿ ಮಕ್ಕಳನ್ನು ಬೆಳೆಸಿದ, ಉಳಿಸಿದ ಶ್ರಮಜೀವಿಗಳು ಮಾತಿಗೆ ಸಿಗುತ್ತಾರೆ. ಅನ್ನಕ್ಕೆ ತತ್ವಾರವಾದಾಗ ಹಲಸಿನ ಸೊಳೆಯ ಖಾದ್ಯಗಳಿಂದ ಹೊಟ್ಟೆ ತುಂಬಿಸಿಕೊಂಡ ದಿನಗಳನ್ನು ನೆನಪಿಸುವವರು ಧಾರಾಳ.
 
                  ಒಂದೆರಡು ಉದಾಹರಣೆಯನ್ನು ಮುಳಿಯದ ಜ್ಯಾಕ್ ಶರ್ಮರು ನೆನಪಿಸಿದರು. ಭತ್ತ ಕಟಾವ್ ಆಗಿ, ತೆನೆಯಿಂದ ಭತ್ತವನ್ನು ಬೇರ್ಪಡಿಸಿ, ಜಳ್ಳು-ಕಾಳನ್ನು ಪ್ರತ್ಯಪ್ರತ್ಯೇಕವಾಗಿ ಮಾಡುತ್ತಾರೆ. ಹೀಗೆ ಮಾಡುವಾಗ ಅಂಗಳದ ಮಣ್ಣಿನಲ್ಲಿ, ಚಿಕ್ಕ ಕಲ್ಲುಗಳ ಎಡೆಯಲ್ಲಿ ಉದುರಿದ ಭತ್ತದ ಕಾಳುಗಳನ್ನು ಆಯುವುದು ಹೇಗೆ? ಹತ್ತಿಯ ಬಟ್ಟೆಯನ್ನು ಕರವಸ್ತ್ರದಾಕಾರಕ್ಕೆ ಕತ್ತರಿಸುವುದು. ಎಲ್ಲೆಲ್ಲಿ ಕಾಳುಗಳು ಉದುರಿದುವೋ, ಅಲ್ಲಿಗೆ ಕರವಸ್ತ್ರವನ್ನು ಹಿಡಿದರೆ ಆಯಿತು. ಭತ್ತದ ಕಾಳಿನ ಹೊರಮೈಯಲ್ಲಿ ಸೂಕ್ಷ್ಮ ರೋಮಗಳಿರುವುದರಿಂದ (ಜುಂಗು) ಹತ್ತಿಯ ವಸ್ತ್ರಕ್ಕೆ ಕಾಳು ಬಹುಬೇಗ ಅಂಟಿಕೊಳ್ಳುತ್ತದೆ. ಹೀಗೆ ಒಂದೊಂದೇ ಕಾಳುಗಳನ್ನು ಆಯುವ ದಿನಗಳಿದ್ದುವು.

                     ತೆನೆಯಿಂದ ಭತ್ತವನ್ನು ಬೇರ್ಪಡಿಸಿದ ಬಳಿಕವೂ ಅಪಕ್ವ ಕಾಳುಗಳು ಬೇರ್ಪಡದೆ ಉಳಿದಿರುತ್ತವೆ. ಸ್ವಲ್ಪ ಕಾಲದ ನಂತರ ತೆನೆ ಪೂರ್ತಿ ಸೊರಗುತ್ತದೆ. ಇದರಿಂದ ಕಾಳುಗಳನ್ನು ಆಯುವುದು ಶ್ರಮ ಬೇಡುವ ಕೆಲಸ. ಹೀಗೆ ಲಭ್ಯವಾದ ಭತ್ತವೇ ಈ ಕಾಯಕಕ್ಕಿರುವ ವೇತನ. ಈ ಭತ್ತಕ್ಕೆ 'ಬೈತ್ತ ಬಾರ್' ಎಂದರೆ, ಇದರ ಗಂಜಿಗೆ 'ಬೈತ್ತರಿತ ಗಂಜಿ' ಎನ್ನುತ್ತಿದ್ದರು. ಗಂಜಿ, ತಿಂಡಿಗಳನ್ನು ಮಾಡಲು ಬಳಕೆ. ಇದರ ಅಕ್ಕಿಯ ಆಹಾರವನ್ನು ಸೇವಿಸುವವರು ಕಡು ಬಡವರು ಎಂದು ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದ ಕಾಲವನ್ನು ಶರ್ಮರು ಜ್ಞಾಪಿಸಿದಾಗ, ಭತ್ತದ ಕಾಳು ಬದುಕನ್ನು ಹೇಗೆ ಭದ್ರವಾಗಿ ಆಧರಿಸುತ್ತಿತ್ತು ಎನ್ನುವ ಗಾಢತೆಗೆ ಆಕರ ನೋಡಬೇಕಾಗಿಲ್ಲ.

                     ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಅನ್ನದ ಬದಲಿಗೆ ಸಿದ್ಧ ಆಹಾರಗಳು ಲಭ್ಯ. ಹಣ ಚೆಲ್ಲಿದರೆ ಆಯಿತು, ನಮಗೆ ಬೇಕಾದವುಗಳನ್ನು ಪಡೆಯುವ ವ್ಯವಸ್ಥೆಗಳಿವೆ. ಹೀಗೆ ಸ್ವೀಕರಿಸುವ ಆಹಾರಗಳನ್ನು ದೇಹ ಸ್ವೀಕರಿಸುತ್ತದೋ ಇಲ್ಲವೋ ಎಂಬ ಕಾಳಜಿ ಬೇಕಾಗಿಲ್ಲ. ಅಸೌಖ್ಯವಾದರೆ ಮೆಡಿಕಲ್ ಶಾಪ್ಗಳಿವೆ, ಆಸ್ಪತ್ರೆಗಳಿವೆ. ಹಣ ಇದ್ದಾಗ ಬೇರ್ಯಾವ ಚಿಂತೆ ಯಾಕೆ ಹೇಳಿ? 'ಸಾರ್, ಕೃಷಿಯನ್ನು ಹಣದಿಂದ ಮಾಡಬಹುದು. ಬದುಕನ್ನೂ ರೂಪಿಸಬಹುದು. ಆರೋಗ್ಯವನ್ನು ಹಣ ತರಲಾರದು. ಅದು ನಮ್ಮ ವಿವೇಚನೆಯಿಂದಲೇ ರೂಪುಗೊಳ್ಳಬೇಕು' ಯುವ ಕೃಷಿಕ ಅನಿಲ್ ಬಳೆಂಜರ ಯೋಚನೆಯಲ್ಲಿ ಹುರುಳಿದೆಯಲ್ವಾ.

                    ಎರಡು ತಿಂಗಳಿನಿಂದ ಕನ್ನಾಡಿನಲ್ಲಿ ಅಕ್ಕಿಗೆ ಬರ. ನೀರು ಕೈಕೊಟ್ಟದ್ದರಿಂದ ಭತ್ತದ ಕೃಷಿಗೆ ಇಳಿಲೆಕ್ಕ. ಅತ್ತ ತಮಿಳುನಾಡಿನಿಂದ ಹೊಸ ವರಸೆ. ಅಕ್ಕಿಯ ಕೊರತೆಯ ಸುದ್ದಿಗಳು ಮಾಧ್ಯಮಗಳಲ್ಲಿ ಬಂದುದೇ ತಡ, ವ್ಯಾಪಾರಿ ವಲಯದ ಲೆಕ್ಕಾಚಾರಗಳು ಚುರುಕಾದುವು. ಮಾರುಕಟ್ಟೆಯಲ್ಲಿ ಅಕ್ಕಿಗೆ ಇನ್ನಿಲ್ಲದ ಒತ್ತಡ ತಂತ್ರಗಳ ರೂಪುರೇಷೆಗಳು ಸಿದ್ಧವಾದುವು. ಅಕ್ಕಿಯ ದರ ದಿಢೀರನೆ ಏರಿದುವು. ಸರಕಾರದಿಂದ ಬೆಂಬಲ ಬೆಲೆಯ ಘೋಷಣೆಯ ಪ್ರಹಸನ. ಇಲಾಖೆಗಳು ವ್ಯಾಪಾರಿಗಳ ಮೇಲೆ, ವ್ಯಾಪಾರಿಗಳು ರೈತರ ಮೇಲೆ ಕೆಸರೆರೆಚಾಟ. ಅಕ್ಕಿ ಪೂರೈಸುವಂತೆ ಅಧಿಕಾರಿಗಳಿಂದ ಸುಗ್ರೀವಾಜ್ಞೆ. ಪರಿಣಾಮ ಶೂನ್ಯ. ಬೆಲೆ ದಿನೇ ದಿನೇ ಎರುಗತಿ. ಸಾಮಾನ್ಯರ ಬದುಕು ದಿನೇ ದಿನೇ ಇಳಿಗತಿ.

                    ಭತ್ತದ ಕೃಷಿಯ ಇಳಿಲೆಕ್ಕಕ್ಕೆ ಪಕ್ಕದ ಕೇರಳದ ಕಡೆ ಕತ್ತು ವಾಲಿಸಿ. 2010-11ರಲ್ಲಿ ಹಿಂದಿನ ವರುಷಕ್ಕೆ ಹೋಲಿಸಿದರೆ ಭತ್ತದ ಉತ್ಪಾದನೆಯಲ್ಲಿ 76000 ಟನ್ ಕಡಿಮೆ. ಕೃಷಿ ಭೂಮಿಗಳ ವಿಸ್ತೀರ್ಣದಲ್ಲೂ 21,000 ಹೆಕ್ಟೇರ್ ಕುಸಿತ. ಉತ್ಪಾದನೆ 5.9 ಲಕ್ಷ ಟನ್. ಅಕ್ಕಿಗಾಗಿ ಹೊರ ರಾಜ್ಯಗಳ ಅವಲಂಬನೆ. ಹತ್ತು ವರುಷದ ಅವಧಿಯಲ್ಲಿ ಭತ್ತದ ಕೃಷಿಯ ಶೇ.35ರಷ್ಟು ಭೂಮಿ ಹಡಿಲಾಗಿದೆ.

                 ಇದು ದೇವರ ನಾಡಿನ ಚಿತ್ರ. ಕನ್ನಾಡು ಇದಕ್ಕಿಂತಲೂ ಶೋಚನೀಯ. ಭತ್ತದ ಕಣಜವಾದ ಕರಾವಳಿಯ ಬಹುತೇಕ ತಾಲೂಕುಗಳಲ್ಲಿ ಗದ್ದೆಗಳು ಮಾಯವಾಗಿವೆ. ಇಲ್ಲಿ ಭತ್ತದ ಕೃಷಿಯನ್ನು ಪ್ರಾತ್ಯಕ್ಷಿಕೆಯಲ್ಲೇ ನೋಡಬೇಕಷ್ಟೇ. 'ಮಾರುಕಟ್ಟೆಯಲ್ಲಿ ದರದ ಏರುಗತಿ ನೋಡಿದರೆ ಭವಿಷ್ಯದಲ್ಲಿ ಕಾರ್ಪೋರೇಟ್ ವಲಯ ಭತ್ತದ ಕೃಷಿಗೆ ಒಲವು ತೋರಿದರೆ ಆಶ್ಚರ್ಯವಿಲ್ಲ', ಐಟಿ ಉದ್ಯೋಗಿಯೊಬ್ಬರ ಮನದ ಮಾತು. ಹೀಗಾದರೆ ಈಗ ರಬ್ಬರ್ ಕೃಷಿಯ ವಿಸ್ತರಣೆಯ ಧಾವಂತದ ಇನ್ನೊಂದು ಮಗ್ಗುಲಿನ ದರ್ಶನವಾಗಲು ದೂರ ಸಾಗಬೇಕಾಗಿಲ್ಲ.

                    ವಿದ್ಯುತ್ ಕೈಕೊಡುತ್ತಿದೆ. ಜಲ ಪಾತಾಳಕ್ಕಿಳಿಯುತ್ತಿದೆ. ಡೀಸಿಲ್, ಸೀಮೆಎಣ್ಣೆಯ ಸುದ್ದಿಯನ್ನು ಮಾತನಾಡದಿರುವುದೇ ಲೇಸು. ಈ ಶಕ್ತಿ ಮೂಲಗಳ ಹೊರತಾಗಿ ಕೃಷಿಯನ್ನು ಪ್ರಕೃತ ಯೋಚಿಸುವಂತಿಲ್ಲ, ಯೋಜಿಸುವಂತಿಲ್ಲ. ಅನ್ನದ ಬಟ್ಟಲು ತುಂಬಿ ತುಳುಕದಿದ್ದರೂ ಚಿಂತೆಯಿಲ್ಲ, ಹೊಟ್ಟೆ ತುಂಬುವಷ್ಟಾದರೂ ತುಂಬಿದರೆ ಸಾಕು. ಈ ಆಶಯವು ಹಾರೈಕೆಯಲ್ಲೇ ಮುದುಡಬಾರದು.

                     ಈ ವಿಷಾದಗಳ ಮಧ್ಯೆ ಭವಿಷ್ಯದ ಭೀಕರತೆಯ ಅರಿವುಳ್ಳ ಕೃಷಿಕರು ಮನೆ ಬಳಕೆಗಾಗಿ ಭತ್ತದ ಬೇಸಾಯವನ್ನು ಪುನರಪಿ ಆರಂಭಿಸಿರುವುದು ಮುಖದ ನೆರಿಗೆಯನ್ನು ಸಡಿಲಗೊಳಿಸಿದೆ. ಎಲ್ಲರಂತೆ ಇವರಿಗೂ ಸಮಸ್ಯೆಯಿದೆ. ಖರ್ಚುವೆಚ್ಚಗಳಿವೆ. ಇವರಲ್ಲೂ ಕ್ಯಾಲ್ಕ್ಯುಲೇಟರ್ ಮಾತ್ರವಲ್ಲ, ಗಣಕ ಯಂತ್ರವೂ ಇದೆ! ಇಷ್ಟಿದ್ದೂ 'ನಮ್ಮ ಊಟದ ಬಟ್ಟಲಿಗೆ ನಾವೇ ಬೆಳೆದ ಅಕ್ಕಿ' ಎನ್ನುವ ಚಿಕ್ಕ ಚಿಕ್ಕ ಖುಷಿಗಳು ಕಾಲದ ಅನಿವಾರ್ಯತೆ. ಒಂದು ಕಿಲೋ ಅಕ್ಕಿಗಾಗಿ ಕೃಷಿಕ ಅಂಗಡಿ ಮುಂದೆ ಕ್ಯೂ ನಿಲ್ಲುವ ದುರವಸ್ಥೆಯನ್ನು ಸ್ವೀಕರಿಸುವ ದಿನಗಳು ಬಾರದಿರಲಿ.

                  ಭಾರತದಲ್ಲಿ ಇನ್ನೊಂದು ಮಹಾಯುದ್ಧ ಆಗುವುದಾದರೆ ಅದು ನೀರಿಗಾಗಿ ಮಾತ್ರ! ನೀರಿದ್ದರೆ ಬದುಕು. ಬದುಕೇ ನೀರಾಗಿ ಕೊಚ್ಚಿಹೋದರೆ ಉಳಿಯುವುದು ಶೂನ್ಯ. ಇಂತಹ ಶೂನ್ಯದತ್ತ ಬದುಕು ವಾಲುತ್ತಿದೆ. ಅದನ್ನು ಮತ್ತೊಮ್ಮೆ ಹಳಿಗೆ ತರುವ ಕೆಲಸ ಮಾಡಬೇಕು. ಮಾಡಬೇಕಾದವರು ಯಾರು? ಸರಕಾರವಲ್ಲ, ಆಡಳಿತ ವ್ಯವಸ್ಥೆಯಲ್ಲ.


Wednesday, April 10, 2013

ಹೊರ ಕೆಲಸವೀಗ ಹಗುರ



           
                 "ಇಸ್ರೆಲಿನಲ್ಲಿ ಕೃಷಿ ಕೆಲಸಗಳಲ್ಲಿ ಟ್ರಾಕ್ಟರುಗಳನ್ನು ಬಳಸುವುದು ರೂಢಿ. ಜತೆಗೆ ತೋಟಗಳಲ್ಲಿ ಎಲವೇಟರ್ಗಳು (ಮೇಲೆತ್ತುವ ಯಂತ್ರ) ಕಂಡುಬರುತ್ತವೆ. ವಾಹನದ ಮೇಲೆ ಎಲವೇಟರ್ಗಳನ್ನಿಟ್ಟು ಇಪ್ಪತ್ತರಿಂದ ಮೂವತ್ತು ಅಡಿ ಎತ್ತರದ ಮರದಲ್ಲಿರುವ ಹಣ್ಣುಗಳನ್ನು ಕೊಯ್ಯಬಹುದು. ನಮ್ಮೂರಿನಲ್ಲಾದರೆ ಅಡಿಕೆ ಮರಗಳಿಗೆ ಬೋರ್ಡೋ ದ್ರಾವಣವನ್ನೂ ಸಿಂಪಡಿಸಬಹುದೇನೋ? ಸಣ್ಣ ಮರಗಳಾದರೆ ಅಡಿಕೆ ಗೊನೆ ಕೊಯ್ಯಲೂ ಓಕೆ," ಕ್ಯಾಂಪ್ಕೋ ಅಧ್ಯಕ್ಷ ಕೋಂಕೋಡಿ ಪದ್ಮನಾಭ, ಕೃಷಿ ಯಂತ್ರಗಳ ವಸ್ತುಪ್ರದರ್ಶನಕ್ಕಾಗಿ ಇಸ್ರೆಲಿಗೆ ಹೋದಾಗಿನ ಕ್ಷಣಗಳನ್ನು ನೆನಪುಮಾಡಿಕೊಂಡರು.

                      ಚೀನಾ, ಇಸ್ರೆಲ್.. ದೇಶಗಳಲ್ಲಿ ಯಂತ್ರಗಳ ಬಳಕೆ ಅನನ್ಯ. ಕೃಷಿಯಲ್ಲಿ ಕಾರ್ಮಿಕ ಸಮಸ್ಯೆಯ ಸುಳಿವು ಸಿಕ್ಕುವ ಮೊದಲೇ ಇವೆಲ್ಲಾ ಯಂತ್ರಗಳತ್ತ ದೊಡ್ಡ ಹೆಜ್ಜೆಯೂರಿವೆ. ನಮ್ಮೂರಲ್ಲಿ ಕೃಷಿ ಕಾರ್ಮಿಕ ಸಮಸ್ಯೆ ಬರುವ ಮೊದಲೂ, ಬಂದಾಗಲೂ ನಿರ್ಲಿಪ್ತರಾಗಿದ್ದೆವು. ಸಮಸ್ಯೆ ಬಂದು ಹತ್ತು ವರುಷಗಳ ನಂತರ ನಿಧಾನಕ್ಕೆ ಕಣ್ಣುಜ್ಜಿಕೊಳ್ಳುತ್ತಾ ಎದ್ದಿದ್ದೇವೆ, ಕಳೆದ ವರುಷ ಪುತ್ತೂರಿನಲ್ಲಿ ಜರುಗಿದ ಯಂತ್ರಮೇಳವನ್ನು ಉದ್ಘಾಟಿಸಿದ ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರ ಮಾತು ಪಸ್ತುತ ದಿನಗಳಿಗೆ ಕನ್ನಡಿ.

                     ಕೃಷಿಕರಿಗೆ ಕಂಪನಿ ಪ್ರಣೀತ ಯಂತ್ರಗಳ ಖರೀದಿ ಎಟುಕದ ದ್ರಾಕ್ಷಿ. ಸಾವಿರವಲ್ಲ, ಲಕ್ಷಕ್ಕೂ ಮಿಕ್ಕಿ ರೂಪಾಯಿಗಳ ವ್ಯವಹಾರ. ಸಬ್ಸಿಡಿಗಾಗಿ ಸರಕಾರಿ ಇಲಾಖೆಗಳ ಮೆಟ್ಟಿಲು ಹತ್ತಿದರೆ ಗೋಳು. ಫೈಲುಗಳ ಹಿಂದೆ ಓಡಾಡಿ ಹೈರಾಣ. ಈ ಮಧ್ಯೆ ಕೃಷಿಕರೇ ಸಣ್ಣಪುಟ್ಟ ಆವಿಷ್ಕಾರಗಳನ್ನು ಮಾಡಿ ಕೃಷಿ ಕೆಲಸಗಳನ್ನು ಹಗುರ ಮಾಡಿಕೊಂಡಿದ್ದಾರೆ. ಅವರವರ ಆವಶ್ಯಕತೆಗಳಿಗಾಗಿ ಮಾಡಿಕೊಂಡಿರುವ, ಆವಿಷ್ಕಾರಗಳು ಕೃಷಿಕರ ಒಲವು ಗಳಿಸಹತ್ತಿದೆ.
     
                     ದ್ವಿಚಕ್ರ ವಾಹನಕ್ಕೆ ಪ್ರತ್ಯೇಕವಾದ ಛೇಂಬರ್ ಫಿಕ್ಸ್ ಮಾಡಿಟ್ಟು ಸಾಗಾಟ ಕೆಲಸಗಳನ್ನು ಹಗುರ ಮಾಡಿಕೊಂಡಿರುವುದು ಈಚೆಗಿನ ಬೆಳವಣಿಗೆ. ಐದು ವರುಷದ ಹಿಂದೆ ಶಿರಸಿಯ ಬಾಲಚಂದ್ರ ಹೆಗಡೆ ಸಾಯಿಮನೆ ಫಿಲಿಪ್ಪೈನ್ಸ್ ಪ್ರವಾಸ ಹೋಗಿದ್ದರು. ಅಲ್ಲಿ ದ್ವಿಚಕ್ರ ಗಾಡಿಗಳನ್ನು ಸಾಗಾಟ ಕೆಲಸಕ್ಕೆ ಅನುಕೂಲವಾಗುವಂತೆ ಮಾರ್ಪಾಟು ಮಾಡಿದ ಐಡಿಯಾವನ್ನು ತಂದರು. ತನ್ನ ಹಳೆ ಎಂ-80 ದ್ವಿಚಕ್ರವನ್ನು ಪ್ರಯೋಗಕ್ಕೆ ಒಳಪಡಿಸಿ, ಅದಕ್ಕೆ 'ಟುಕ್ ಟುಕ್ ಗಾಡಿ' ಅಂತ ಹೆಸರಿಟ್ಟರು. ಈ ಐಡಿಯಾ ಉತ್ತರ ಕನ್ನಡದ ಕೃಷಿಕರನ್ನು ಸೆಳೆಯಿತು. ಹತ್ತಾರು ಮಂದಿ ಗಾಡಿಯನ್ನು ತಮ್ಮೂರಿನ ವರ್ಕ್ ಶಾಪಿನಲ್ಲಿ ತಯಾರಿಸಿಕೊಂಡರು.

                     ಅಧಿಕ ಭಾರವನ್ನು ಎಳೆಯುವ ಲ್ಯಾಂಬಿ ರಿಕ್ಷಾ ಈಗ ಕಣ್ಮರೆ. ಬಜಾಜ್ಗಳದ್ದೇ ಕಾರುಬಾರು. ಏರು ರಸ್ತೆಯಲ್ಲಿ ಇಬ್ಬರನ್ನು ಕೂರಿಸಿಕೊಂಡರೆ ಎಳೆಯಲು ಉಸಿರೆಳೆಯುತ್ತದೆ. ಅಂತಹುದಲ್ಲಿ ಅಳಿದುಳಿದ, ಕ್ಷಣಗಣನೆಯಲ್ಲಿರುವ ಲ್ಯಾಂಬಿ ರಿಕ್ಷಾಗಳು ಗಾಡಿಗಳಾಗಿ ಪರಿವರ್ತನೆಗೊಂಡು ತೋಟದೊಳಗೆ ಅಂತರ್ ಸಾಗಾಟಕ್ಕೆ ಬಳಕೆಯಾಗುತ್ತಿದೆ.

                   ಐದಡಿ ಅಗಲದ ಜಾಗದಲ್ಲಿ ರಿಕ್ಷಾಗಾಡಿ ಅತ್ತಿತ್ತ ಸಲೀಸಾಗಿ ಸಂಚರಿಸುವುದರಿಂದ ರಸ್ತೆಗೆಂದೇ ಅಡಿಕೆ ಮರಗಳನ್ನು ಕಡಿಯಬೇಕಾದ್ದಿಲ್ಲ. ಕಾಂಪೋಸ್ಟ್ ಗೊಬ್ಬರ, ಸೊಪ್ಪು ತೋಟಕ್ಕೆ ಒಯ್ಯಲು; ತೋಟದಿಂದ ಅಡಿಕೆ, ತೆಂಗಿನಕಾಯಿ, ಬಾಳೆದಿಂಡು..ಗಳು ಅಂಗಳ ಸೇರುತ್ತವೆ. ಟಿಪ್ಪರ್ ಆಗಿಯೂ ಪರಿವರ್ತಿಸಿದ್ದಾರೆ. ಹಾಗಾಗಿ ಅನ್ಲೋಡಿಗೆ ಪ್ರತ್ಯೇಕ ಸಹಾಯಕರು ಬೇಡ. ಸುಮಾರು ಮೂರು ಕ್ವಿಂಟಾಲ್ ಭಾರ ಹೊರುವ ಸಾಮಥ್ರ್ಯ.

                 ಯಾಂತ್ರೀಕೃತ ತಳ್ಳು ಗಾಡಿಗಳತ್ತ ಬಹುಜನರ ಚಿತ್ತ. ಸ್ವಯಂ ಚಾಲಿತ ಕೈಗಾಡಿಗಳಲ್ಲಿ 'ಮೋಟೋಕಾರ್ಟ್’ ಹೆಸರು ಮುಂದಿದೆ. ಸಾಗರದ ಹೆಗಡೆ ಆಗ್ರೋ ಇಂಪೆಕ್ಸ್' ತಯಾರಕ ಸಂಸ್ಥೆ. ತನುಶ್ರಮ ಕಡಿಮೆಗೊಳಿಸುವ ಅಂತರ್ ಸಾಗಾಟ ವಾಹನ. ಪ್ರತೀ ಅಡಿಕೆ ಮರದ ಬುಡದವರೆಗೂ ಹೋಗಬಲ್ಲ ಇಂಜಿನ್ ಚಾಲಿತ; ಕೆಸರು, ಏರು ರಸ್ತೆಯಲ್ಲೂ ಸಾಗಬಲ್ಲ ಶಕ್ತಿಶಾಲಿ ಇಂಜಿನ್ ಹೊಂದಿದ ಮತ್ತೊಂದು - ಹೀಗೆ ಎರಡು ಮಾದರಿಗಳು. ಒಂದೂವರೆ ಕ್ವಿಂಟಾಲ್ ಭಾರ ಹೊರುವ ಸಾಮಥ್ರ್ಯ.

                   ಒಂದು ಕಾರ್ಟ್ ನಾಲ್ಕು ಆಳುಗಳ ಕೆಲಸ ಮಾಡುತ್ತದೆ. ಅಂದರೆ ದಿನಕ್ಕೆ ಒಂದು ಸಾವಿರ ರೂಪಾಯಿ ಉಳಿಸುತ್ತದೆ ಎನ್ನುವುದು ಕೃಷಿಕರ ಅನುಭವ,' ಎನ್ನುತ್ತಾರೆ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ. ತೀರ್ಥಹಳ್ಳಿ ಕುಂಟುವಳ್ಳಿಯ ವೀಟೆಕ್, ಬೆಂಗಳೂರಿನ ಡೋಲ್ಫಿನ್.. ಮೊದಲಾದ ಮೋಟಾರು ಚಾಲಿತ ಗಾಡಿಯನ್ನು ಮಾಡಿಕೊಬಲ್ಲ ವರ್ಕ್ ಶಾಪನ್ನು ಹೊಂದಿದವರು.

                      ಕಿನ್ಯದ (ದ.ಕ.) ಸಮೀರ ರಾವ್ ಅವರ ಶ್ರಮ ಉಳಿಸುವ ಕೈಗಾಡಿ 'ಕೃಷಿ ಮಿತ್ರ'ದ ಅನುಶೋಧಕರು. ಅಡ್ಯನಡ್ಕದ ವಾರಣಾಶಿ ಸಂಶೋಧನಾ ಪ್ರತಿಷ್ಠಾನಕ್ಕೆ ಇದರ ತಯಾರಿ ಮತ್ತು ಮಾರುಕಟ್ಟೆಯ ಹೊಣೆ. ರಬ್ಬರ್ ಟಯರಿನ ಏಕಚಕ್ರ. ತಲೆಹೊರೆ ಸಮಸ್ಯೆಯನ್ನು ಹಗುರ ಮಾಡಿದ, ಕೃಷಿಕರ ಒಲವು ಹೆಚ್ಚು ಪಡೆದ ಕೃಷಿಕಾವಿಷ್ಕಾರವಿದು. ತೋಟದಲ್ಲಿ ಒಮ್ಮೆಲೆ ಮೂರ್ನಾಲ್ಕು ಹೊರೆ ಅಡಿಕೆ ಗೊನೆ ಜೀಪಿನ ಬಳಿ ಸಾಗಿಸಲು ಸಹಕಾರಿ. ರಬ್ಬರ್ ಹಾಲು ಸಂಗ್ರಹಿಸಿ ಟಿಪ್ಪರ್ ರಿಕ್ಷಾದ ಬಳಿಗೆ ತರಲೂ ಉಪಯೋಗಿ, ಎಂಬ ಅನುಭವ ಹಿರಿಯ ಪತ್ರಕರ್ತ ಶಂಕರ್ ಸಾರಡ್ಕ ಅವರದು.

                    ಗಾಡಿಗಳಲ್ಲಿ ದ್ವಿಚಕ್ರ, ತ್ರಿಚಕ್ರದವುಗಳ ನಿರ್ಮಾಣ ಕಂಡುಬರುತ್ತದೆ. ಮಾರುತಿ ಓಮ್ನಿ, ಟೆಂಪೋ, ಜೀಪ್, ಟ್ರಾಕ್ಟರ್ಗಳನ್ನು ಬಳಸಿಕೊಂಡು ಶ್ರಮ ಹಗುರ ಮಾಡುವ ಚಿಕ್ಕಪುತ್ತ ಅನುಶೋಧನೆಗಳು ತೋಟದಲ್ಲಾಗುತ್ತಿವೆ. ತಮ್ಮ ಅಗತ್ಯಗಳನ್ನು ಪೂರೈಸಲು ಕೃಷಿಕರ ಜಾಣ್ಮೆಯಿಂದ ಸಿದ್ಧವಾದ ಇವಕ್ಕೆ ಆರ್ಥಿಕ ಬೆಂಬಲ, ಮಾರುಕಟ್ಟೆ ಒದಗಿದರೆ ದೇಶದ ಕೃಷಿ ಮತ್ತು ಆರ್ಥಿಕ ಕ್ಷೇತ್ರಕ್ಕೆ ದೊಡ್ಡ ಸಂಪನ್ಮೂಲ.

ಕೃಷಿ ಡೈರಿ : ಬದುಕಿನ ಪ್ರತಿಬಿಂಬ


            "ಹದಿಮೂರು ರೂಪಾಯಿಗೆ ಒಂದು ಪವನ್ ಚಿನ್ನ ಸಿಗುತ್ತಿದ್ದ ಕಾಲವಿನ್ನೂ ನೆನಪಿದೆ. ಕೃಷಿ, ಕುಟುಂಬ ವೆಚ್ಚಗಳ ಪೈಸೆ ಪೈಸೆ ಲೆಕ್ಕಗಳ ದಾಖಲೆಯನ್ನು ನನ್ನ ತಂದೆ, ಅಜ್ಜ ಬರೆದಿಡುತ್ತಿದ್ದರು," ಹಿರಿಯ ಕೃಷಿಕ ಕರಿಂಗಾಣದ ಡಾ.ಕೆ.ಎಸ್.ಕಾಮತ್ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾ, 'ಬದಲಾದ ಕಾಲಘಟ್ಟದಲ್ಲಿ ಬರೆಯುವುದು ಬಿಡಿ, ಓದುವ ಹವ್ಯಾಸನ್ನು ಕಳಕೊಳ್ಳುತ್ತಿದ್ದೇವೆ,' ಎಂದು ವಿಷಾದಿಸುತ್ತಾರೆ.

               ದೈನಂದಿನ ಖರ್ಚು ವೆಚ್ಚ, ಆದಾಯ, ಮನೆಯ ಆಗುಹೋಗುಗಳನ್ನು ಪುಸ್ತಕಗಳಲ್ಲಿ ಹಿರಿಯರು ಒಪ್ಪವಾಗಿ ಬರೆದಿಡುತ್ತಿದ್ದರು. ಬರೆದಿಟ್ಟ ಲೆಕ್ಕಪತ್ರಗಳನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಪರಿಶೀಲಿಸಿ, ಕೃಷಿ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುತ್ತಿದ್ದರು. ಇಂದಿಗೂ ಕೆಲವು ಪಾರಂಪರಿಕ ಮನೆಗಳಲ್ಲಿ ಶತಮಾನ ದಾಟಿದ ಲೆಕ್ಕಪುಸ್ತಕಗಳು ಕಂಡುಬರುತ್ತದೆ.

                ಕಳೆದ ಕಾಲದ ಲೆಕ್ಕದ ಓದು ಆ ಕಾಲಘಟ್ಟದ ಬದುಕನ್ನು ಬಿಂಬಿಸುತ್ತದೆ. ಹವ್ಯಾಸಗಳನ್ನು ಪ್ರತಿನಿಧಿಸುತ್ತದೆ. ಸಮಷ್ಠಿ ಕುಟುಂಬದ ಸಮಭಾವಗಳಿಗೆ ಸಾಕ್ಷಿಯಾಗುತ್ತದೆ. ಮನೆಯ ಕಾಲಾವಧಿ ಧಾರ್ಮಿಕ ಕಾಯಕಗಳಿಗೆ ಆಕರವಾಗುತ್ತದೆ. ಕೃಷಿ ಚಟುವಟಿಕೆಗಳ ಸುಭಗತೆಗೆ ಕೈಪಿಡಿಯಾಗುತ್ತದೆ.

                ಬದುಕು ಪಲ್ಲಟಗೊಳ್ಳುತ್ತಾ ಹೋದಂತೆ ಲೆಕ್ಕಗಳನ್ನು ಬರೆದಿಡುವ ಹವ್ಯಾಸಕ್ಕೆ ಮಸುಕಾಯಿತು. ವರುಷಕ್ಕೊಮ್ಮೆ ಡೈರಿ ಮಾರುಕಟ್ಟೆಯಿಂದ ತಂದರೂ ಬಿಡಿಸಲಾಗದಷ್ಟು ಬ್ಯುಸಿ. ಕೃಷಿಯ ಖರ್ಚು-ವೆಚ್ಚಗಳ ದಾಖಲೆಗಳು ಬಾಯಲ್ಲುಳಿದು, ಮಾಸದೊಳಗೆ ಮರೆವಿನ ಮರೆ ಸೇರುತ್ತದೆ.

                ಪುಣ್ಚಪ್ಪಾಡಿಯ (ದ.ಕ.) ಕೃಷಿಕ, ಉಪನ್ಯಾಸಕ ವಿವೇಕ ಆಳ್ವ ಮರೆತುಹೋಗುತ್ತಿರುವ ವ್ಯವಸ್ಥೆಯೊಂದಕ್ಕೆ ಕಾಯಕಲ್ಪದ ಯತ್ನ ಮಾಡಿದ್ದಾರೆ. ಲೆಕ್ಕಗಳನ್ನು ಬರೆದಿಡುವ ಮೂಲಕ ನಮಗೆ ನಾವೇ ಆಡಿಟರ್ ಆಗಬೇಕೆನ್ನುವ ದೂರದೃಷ್ಟಿ. ಕಳೆದ ವರುಷ ಚೊಚ್ಚಲವಾಗಿ ಹೊರತಂದ ಡೈರಿಯ ಯಶಸ್ಸಿನ ಹಿನ್ನೆಲೆಯಲ್ಲಿ ಈ ವರುಷವೂ 'ಏಕ ಸೈನಿಕ' ಶ್ರಮದಿಂದ ಪ್ರಕಟಿಸಿದ್ದಾರೆ.

                 ಡೈರಿಯಲ್ವಾ, ದಶಂಬರ ಕೊನೆಗೆ ಮಾರುಕಟ್ಟೆಯಲ್ಲೂ ಸಿಗುತ್ತೆ. ಕೆಲವು ಉದ್ಯಮ ಸಂಸ್ಥೆಗಳಲ್ಲಿ ಪುಕ್ಕಟೆಯಾಗಿಯೂ ಸಿಗುತ್ತೆ. ಏನು ಮಹಾ?, ಡೈರಿಯ ವಿಚಾರ ಮಾತನಾಡುವ ಮೊದಲೇ ತೀರ್ಪು ಕಾಯ್ದಿರಿಸುವ ಬದಲು, ತೀರ್ಪು ಕೊಟ್ಟುಬಿಡುವ ಎಷ್ಟೋ ಮಂದಿಯನ್ನು ವಿವೇಕ ಆಳ್ವರು ಕಂಡಿದ್ದಾರೆ! ಇದು ತಾರೀಕು, ಸಂವತ್ಸರ, ವಾರ, ತಿಥಿ, ಕರಣ, ಘಳಿಗೆಯನ್ನು ಪ್ರತಿಯೊಂದು ಹಾಳೆಯಲ್ಲಿ ಬರೆದ ಸಿದ್ಧ ನಮೂನೆಯ ಡೈರಿಯಲ್ಲ. ಇದರಲ್ಲಿ ಕೃಷಿ, ಕೃಷಿಕರು ಪಾಲಿಸಬೇಕಾದ ಮೂಲಭೂತ ವಿಚಾರಗಳನ್ನು ತಮ್ಮ ವಿವೇಚನೆಯ ಮಿತಿಯಲ್ಲಿ ವಿವೇಕ ಆಳ್ವರು ಬಿಂಬಿಸಿದ್ದಾರೆ.

                  ಇದು ಮಾಹಿತಿ ಯುಗ. ಮೌಸ್ ಕ್ಲಿಕ್ಕೊಂದರಲ್ಲಿ ವಿಶ್ವವೇ ಕಂಪ್ಯೂನಲ್ಲಿ ಇಳಿದುಬಿಡುವಷ್ಟು ವೇಗದಲ್ಲಿದ್ದೇವೆ. 'ಎಲ್ಲವೂ ನೆಟ್ಟಿನಲ್ಲಿ ಸಿಗುತ್ತೆ' ಎಂದು ಮನಸ್ಸನ್ನು ಹಗುರ ಮಾಡಿಕೊಳ್ಳುವ ದಿನಮಾನಗಳು. ಕೃಷಿಯ ವಿಚಾರಕ್ಕೆ ಬಂದಾಗ ಎಷ್ಟು ಮಾಹಿತಿಗಳು ಕೃಷಿಕರಿಗೆ ತಲಪುತ್ತದೆ, ಎಟಕುತ್ತದೆ? ಈ ಹಿನ್ನೆಲೆಯಲ್ಲಿ ವಿವೇಕ ಆಳ್ವರು ಕೃಷಿಯ ಪ್ರಾಥಮಿಕ ವಿಚಾರಗಳನ್ನು ಸುಲಭ ಮತ್ತು ಸರಳವಾಗಿ ನೀಡುವ ಪ್ರಯತ್ನವನ್ನು ಮಾಡಿರುವುದು ಶ್ಲಾಘನೀಯ. ನೂರ ನಲವತ್ತು ಪುಟದ ಡೈರಿಯಲ್ಲಿ ಖಾಲಿ ಹಾಳೆಗಳೇ ಇಲ್ಲ!

                 ಲೆಕ್ಕಪತ್ರಗಳ ದಾಖಲಾತಿ ಮಾಡುವ ಮಾದರಿಗಳನ್ನು ನೀಡಿದ್ದಾರೆ. ಅದರಲ್ಲಿ ಸೇರಲೇಬೇಕಾದ ವಿದ್ಯುತ್, ಅಡುಗೆ ಅನಿಲ, ದೂರವಾಣಿ, ಪತ್ರಿಕೆ, ಮೊಬೈಲ್, ನೀರಿಗಾದ ವೆಚ್ಚಗಳನ್ನು ಬರೆದಿಡಲು ಪ್ರತ್ಯೇಕ ಕಾಲಂ ವ್ಯವಸ್ಥೆ. ಕೃಷಿ ಚಟುವಟಿಕೆಗಳಲ್ಲಿ ಬಳಸಲ್ಪಡುವ ಪರಿಕರಗಳ ಮಾಹಿತಿಗಳು ಸುಲಭದಲ್ಲಿ ಸಿಗಲು ದಾಖಲಾತಿಯೊಂದೇ ದಾರಿ. ಜತೆಗೆ ಬೆಳೆಗಳ ಮಾಹಿತಿ, ಕುಟುಂಬದ ದಾಖಲೆ, ಸಾಲದ ಮತ್ತು ಪಾಲಿಸಿಗಳ ವಿವರ, ಭೂ ದಾಖಲಾತಿ, ವಾಹನ, ಜಾನುವಾರು - ಇವೆಲ್ಲವೂ ಡೈರಿ ಪುಟವನ್ನು ತಿರುವಿದಾಗ ಕೃಷಿಕರಿಗೆ ಸುಲಭದಲ್ಲಿ ಸಿಗುವಂತಾಗಬೇಕು ಎನ್ನುವ ಆಶಯ.

                ಸರಕಾರಿ ಪ್ರಣೀತವಾದ ಮಾಹಿತಿಗಳು ಪ್ರಾಥಮಿಕ ಜ್ಞಾನದ ಹಸಿವನ್ನಷ್ಟೇ ನೀಗಿಸಬಹುದು. ಭತ್ತದ ಕೃಷಿಯಲ್ಲಿ ಯಾಂತ್ರೀಕೃತ ನಾಟಿ, ಸುಧಾರಿತ ಬಾಳೆ ಬೇಸಾಯ, ಔಷಧೀಯ ಮತ್ತು ಸುಗಂಧದ್ರವ್ಯ ಬೆಳೆಗಳು, ಭಾರತೀಯ ಗೋತಳಿಗಳು, ಜೇನು ಕೃಷಿ, ಸಿಗಡಿ ಕೃಷಿ, ವೈಜ್ಞಾನಿಕ ಬೋರ್ಡೋ ದ್ರಾವಣ ತಯಾರಿ ಕ್ರಮ..ಗಳ ಪ್ರಸ್ತುತಿ.

                 ಹಳ್ಳಿಮದ್ದು, ಹಳ್ಳಿಯಡುಗೆ, ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ಉತ್ಪಾದನಾ ತಾಂತ್ರಿಕತೆ, ಕೋಳಿ ಸಾಕಣೆ, ಉಡುಪಿ ಮಲ್ಲಿಗೆ, ಕಲ್ಲಂಗಡಿ ಕೃಷಿ.. ಹೀಗೆ ನಂನಮ್ಮ ಅಭಿರುಚಿಗೆ ತಕ್ಕಂತೆ ಮಾಹಿತಿಗಳ ನಿರೂಪಣೆ. ಸಂವತ್ಸರಗಳು, ನಕ್ಷತ್ರಗಳು, ಪ್ರಮುಖ ವಿಳಾಸಗಳು, ದೂರವಾಣಿ ಸಂಖ್ಯೆಗಳನ್ನು ನೀಡಿದ್ದಾರೆ. ಕೃಷಿಕರ ಅನುಭವಗಳನ್ನು ಮುಂದಿನ ವರುಷದ ಡೈರಿಯಲ್ಲಿ ದಾಖಲಿಸಬೇಕೆನ್ನುವುದು ಅವರ ಆಶಯ.

                ಪ್ರತಿಯೊಬ್ಬ ಕೃಷಿಕನೂ ಕೃಷಿಗೆ ಸಂಬಂಧಪಟ್ಟ ದಾಖಲೆಗಳನ್ನು ವ್ಯವಸ್ಥಿತ ರೂಪದಲ್ಲಿ ಬರೆದಿಟ್ಟುಕೊಂಡರೆ ತನ್ನ ಲಾಭ ನಷ್ಟಗಳನ್ನು, ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಸಮಸ್ಯೆಗಳು ಬಂದಾಗ ಸರಕಾರದೊಂದಿಗೆ ವ್ಯವಹರಿಸಲು ಸಹಕಾರಿಯಾಗುತ್ತದೆ, ಡೈರಿ ರಚನೆಯ ಹಿಂದಿನ ಆಶಯವನ್ನು ವಿವರಿಸುತ್ತಾರೆ ವಿವೇಕ್.

                    ಇವರು ಸ್ವಯಂ ಆಸಕ್ತಿಯಿಂದ ಕೃಷಿ ಡೈರಿ ಮತ್ತು ಮಾಹಿತಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಆವರ ಶ್ರಮವನ್ನು ಶ್ಲಾಘಿಸಿ ಬೆನ್ನುತಟ್ಟುವುದರೊಂದಿಗೆ ಪುಸ್ತಕವನ್ನೂ ಖರೀದಿಸಿದರೆ ಅದು ಶ್ರಮಕ್ಕೆ ಕೊಡುವ ಪ್ರತಿಫಲ. ಪುಸ್ತಕದ ಬೆಲೆ ನೂರ ಹತ್ತು ರೂಪಾಯಿ.

                   ಆಸಕ್ತರಿಗಾಗಿ ವಿವೇಕ ಆಳ್ವರ ಸಂಪರ್ಕ : 94492 68383