Friday, August 23, 2013

ನಳ್ಳಿಗಳಿಗಿಲ್ಲಿ ತಿರುಗಣೆಗಳಿಲ್ಲ..


               ಹುಬ್ಬಳ್ಳಿ ಸುತ್ತಲಿನ ಹಳ್ಳಿಗಳಲ್ಲಿ ಓಡಾಡುತ್ತಿದ್ದೆ. ಅಲ್ಲೆಲ್ಲ್ಲಾ ಕುಡಿನೀರು ಸರಬರಾಜಿನ ನಳ್ಳಿಗಳಲ್ಲಿ ತಿರುಗಣೆಗಳಿಲ್ಲ! ದಿನಪೂರ್ತಿ ನೀರು ಸೋರಿ ಚರಂಡಿ ಸೇರುತ್ತಿದೆ. ನೋಡಿಯೂ ನೋಡದಂತಿರುವ ನಾಗರಿಕರದು ದಿವ್ಯಮೌನ. ನಮಗೂ, ನೀರು ಸೋರುವಿಕೆಗೂ ಸಂಬಂಧವಿಲ್ಲವೆನ್ನುವ ನಿರ್ಲಕ್ಷ್ಯ.

             ನಲವತ್ತು ಕಿಲೋಮೀಟರ್ ದೂರದ ಸವದತ್ತಿಯಿಂದ ಹುಬ್ಬಳ್ಳಿಗೆ ನೀರು ಬರುತ್ತಿದೆ. ಜೀವನಕ್ಕೆ ಸಮಸ್ಯೆಯಾಗದಷ್ಟು ನೀರು ಲಭ್ಯವಾಗುತ್ತದೆ. ಹಾಗಾಗಿ ಟ್ಯಾಪ್ಗಳನ್ನು ಬಂದ್ ಮಾಡುವವರೇ ಇಲ್ಲ. ಬಂದ್ ಮಾಡಬೇಕೆಂಬ ಅರಿವೂ ಇಲ್ಲ. ಅಲ್ಲೇ ಸ್ನಾನ ಮಾಡುತ್ತಾರೆ, ಬಹಿರ್ದೆಶೆ ಪೂರೈಸುತ್ತಾರೆ ಎನ್ನುತ್ತಾರೆ, ಜತೆಗಿದ್ದ ಸೀತಾರಾಮ ಶೆಟ್ಟಿ.

               ವರುಷಪೂರ್ತಿ ನಳ್ಳಿಗಳಲ್ಲಿ ಹರಿಯುವ ಸವದತ್ತಿಯ ನೀರಿನ ಪೂರೈಕೆಯ ಹಿಂದೆ ನಾಗರಿಕರು ಬದುಕನ್ನು ಕಟ್ಟಿಕೊಳ್ಳಬೇಕೆಂಬ ಆಶಯ ಆಡಳಿತಕ್ಕಿದೆ. ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿ ವ್ಯಯವಾಗಿದೆ. ಈ ನೀರಿನಿಂದಾಗಿ ಕೃಷಿ ಉಸಿರಾಡುತ್ತಿವೆ. ಹನಿಹನಿ ನೀರನ್ನೂ ಪೋಲಾದರೆ ಒಂದೊಂದು ಪೈಸೆಯೂ ನಷ್ಟವಾದಂತೆ. ಒಂದೊಂದು ಉಸಿರು ಕ್ಷೀಣವಾದಂತೆ. ಮಾತಾಡಿದರೆ ಸಾಕು, 'ನಿಮ್ದೇನ್ರಿ. ಸರ್ಕಾರದಲ್ವಾ ಹಣ' ಎಂಬ ಉಡಾಫೆ.

                  ಹಕ್ಕಿಗಾಗಿ ಹೋರಾಟ ಮಾಡುತ್ತೇವೆ, ರಸ್ತೆ ತಡೆ ಮಾಡುತ್ತೇವೆ. ಪ್ರತಿಭಟನೆ ಮಾಡುತ್ತೇವೆ. ಗಂಟೆಗಟ್ಟಲೆ ಹಕ್ಕನ್ನು ಪ್ರತಿಪಾದಿಸುತ್ತೇವೆ. ಆದರೆ ನಾಗರಿಕರು ಪಾಲಿಸಲೇ ಬೇಕಾದ ಸಾಮಾಜಿಕ ಕರ್ತವ್ಯಗಳ ತಿಳುವಳಿಕೆಯಿಲ್ಲ. ತಿಳಿಯಬೇಕೆನ್ನುವ ಧಾವಂತವೂ ನಮಗಿಲ್ಲ. ನೀರಿನ ಮಿತ ಬಳಕೆಯ ಜ್ಞಾನವನ್ನು ಜನರಿಗೆ ಕೊಡಬೇಕಾದ ಅಗತ್ಯವಿದೆ. ಎಲ್ಲವೂ ಪಂಚಾಯತ್ ಮಾಡಲಿ, ಸರಕಾರ ಗಮನಕೊಡಲಿ ಎಂಬ ಭಾವನೆ. ಮನೆಮುಂದೆ ಕೊಳೆಯಿದ್ದರೂ ಪಂಚಾಯತಿನವರು ಬಂದಿಲ್ಲ ಎಂದು ಕಾಯುತ್ತಾ ಕೂಡ್ರುತ್ತಾರೆ,' ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಬಯಲು ಸೀಮೆಯ ಜನರ ಬದುಕಿನ ಒಂದು ಮುಖವನ್ನು ಹೇಳುತ್ತಾರೆ.

                 ನಳ್ಳಿಯಿಂದ ಸೋರುವ ನೀರು ಚರಂಡಿ ಸೇರುತ್ತದೆ. ಕೊಳಕು ರಾಡಿ ಉತ್ಪನ್ನವಾಗುತ್ತದೆ. ಭೂಮಿ ಜವುಳಾಗುತ್ತದೆ. ಮನೆಮುಂದೆ ಜೋಡಿಸಿದ ನಳ್ಳಿಯಲ್ಲಿ ವ್ಯರ್ಥವಾಗುವ ನೀರನ್ನು ಬಂದ್ ಮಾಡಲು ಪಂಚಾಯತ್ ವರಿಷ್ಠರೇ ಬರಬೇಕೆಂದಿಲ್ಲ. ಪ್ರತಿಯೊಬ್ಬರೂ ಮಾಡಬಹುದಾದ ಕರ್ತವ್ಯ. ನೀರಿನ ಸಂಕಟದ ಅನುಭವವಿಲ್ಲ. ನಳ್ಳಿ ತಿರುವಿದರೆ ಸಾಕು, ನೀರು ಬರುತ್ತದೆ. ಒಂದು ದಿವಸ ನಳ್ಳಿ ಬಂದ್ ಆದರೆ ಸಾಕು, ಧರಣಿ-ಹರತಾಳಗಳ ಮಾಲೆ.

                     ಕರಾವಳಿಯಲ್ಲಿ ಈ ವರುಷ ಶಾಪಹಾಕುವಷ್ಟು ಯಥೇಷ್ಟ ಮಳೆ. ಅತ್ತ ಹುಬ್ಬಳ್ಳಿಯಿಂದ 20-25 ಕಿಲೋಮೀಟರ್ ದೂರದ ನವಲಗುಂದದಲ್ಲಿ ಮಳೆ ಸುರಿಯುವುದು ಬಿಡಿ, ಹನಿಯೂ ಬಿದ್ದಿಲ್ಲ. ಸಾವಿರಗಟ್ಟಲೆ ಎಕ್ರೆ ಹೊಲಗಳು ಭಣಭಣ. ಮಾರುಕಟ್ಟೆಯಲ್ಲಿ ನೀರುಳ್ಳಿಯ ಬೆಲೆಯು ಎಪ್ಪತ್ತೋ ಎಂಭತ್ತೋ ರೂಪಾಯಿ ಏರುತ್ತಿದ್ದರೆ, ಅಲ್ಲಿ ಮಾತ್ರ ನೀರುಳ್ಳಿಯ ಬಿತ್ತನೆ ಆಗುತ್ತಿದೆಯಷ್ಟೇ. 'ಸಾರ್, ಒಂದು ಮಳೆ ಬಂದ್ರೆ ಸಾಕು, ಬಿತ್ತಿದ ಬೀಜಗಳೆಲ್ಲಾ ಹುಲುಸಾಗಿ ಮೊಳಕೆಯೊಡೆದು ಮೇಲೆ ಬರುತ್ತೆ. ಇಲ್ದಿದ್ರೆ ಬೀಜಕ್ಕೆ ಹಾಕಿ ರೊಕ್ಕ ನಷ್ಟ,' ಎಂದು ಕೊರಗುತ್ತಾರೆ ಕೃಷಿಕ ಶಂಕರಪ್ಪ.

                    ನಗರಗಳು ವಿಸ್ತರಣೆಯಾಗುತ್ತಿದ್ದಂತೆ ಕಟ್ಟಡ ಕಾಮಗಾರಿಗಳಿಗೆ ಬೀಸುಹೆಜ್ಜೆ. ಜತೆಗೆ ಸರಕಾರದ ಅಭಿವೃದ್ಧಿ ಕೆಲಸಗಳು. ನಳ್ಳಿಗಳ ನೀರು ಕಾಮಗಾರಿಗಳಿಗೆ ಬಳಕೆ. ನೀರಿನ ಪೋಲು ಆಡಳಿತದ ಗಮನಕ್ಕೆ ಬರುತ್ತಿಲ್ಲ. ಬರಲೂ ಬಿಡುತ್ತಿಲ್ಲ! ಓಣಿಗಳಲ್ಲಿ ನಡೆದುಕೊಂಡು ಹೋದರೆ ಸಾಕು, ನೀರು ರಾಡಿಯಾಗಿ ರಸ್ತೆಯಲ್ಲಿ ಹರಿಯುವ ಪರಿ. ಅದರಲ್ಲೇ ಅತ್ತಿತ್ತ ಓಡಾಡುವ ಮಂದಿಗೆ ಅದು ಮಾಮೂಲಿಯಾಗಿದೆ.

                 ಮಳೆಗಾಗಿ ಪ್ರಾರ್ಥಿಸುವ, ಪೂಜೆ ಪುರಸ್ಕಾರವನ್ನು ಮಾಡುವ, ಕಪ್ಪೆಗಳ ಮದುವೆಗಳನ್ನು ಮಾಡಿಸುವ ಕೃಷಿಕರ ಗೋಳಿನ ಅರಿವಾಗಬೇಕಾದರೆ ಒಮ್ಮೆ ಆ ಪ್ರದೇಶವನ್ನು ಭೇಟಿ ಮಾಡಲೇ ಬೇಕು. ಆಗ ಅರಿವಾಗುತ್ತದೆ, ಕರಾವಳಿಯ ಶ್ರೀಮಂತಿಕೆ. ಅಲ್ಲಿ ನೀರಿನ ಬಳಕೆಯ ಅರಿವಿಲ್ಲದಿರಿವುದು ದೊಡ್ಡ ಸಮಸ್ಯೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಳೆಕೊಯ್ಲು, ನೀರಿನ ಮಿತ ಬಳಕೆಯತ್ತ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಳೆನೀರನ್ನು ಹಿಡಿದಿಟ್ಟು ಬಳಸುವ ಪ್ರಕ್ರಿಯೆ ಅಲ್ಲಿಲ್ಲಿ ಶುರುವಾಗುತ್ತಿದೆ.

                  ದೂರದ ಹುಬ್ಬಳ್ಳಿಯಲ್ಲಿ ನೀರಿನ ಕತೆ ಹೀಗಾದರೆ, ನಾವೇನೂ ಬೆನ್ನು ತಟ್ಟಿಕೊಳ್ಳಬೇಕಾಗಿಲ್ಲ. ನಮ್ಮಲ್ಲೂ ಸಾರ್ವಜನಿಕ ನಲ್ಲಿ ಸೋರುತ್ತಿದ್ದರೆ ಮುಖ ತಿರುಗಿಸಿ ಹೋಗುತ್ತೇವೆ. ನೀರು ಸರಬರಾಜಿನ ಪೈಪ್ ಒಡೆದರೆ ಸಂಬಂಧಪಟ್ಟ ವರಿಷ್ಟರಿಗೂ ತಿಳಿಸುವ ಕನಿಷ್ಟ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತೇವೆ. ಯಾಕೆ ಹೇಳಿ, ನಾವು ನೀರಿನ ಬಿಲ್ ಪಾವತಿಸುತ್ತೇವೆ ಎನ್ನುವ ಹಮ್ಮು.

                  ಮನೆಗೆ ಒಂದು ದಿವಸ ನೀರು ಬಾರದಿದ್ದರೆ ಒತ್ತಡ ಏರುತ್ತದೆ. ಹಿಡಿಶಾಪ ಹಾಕುತ್ತೇವೆ. ಮನೆಯಂಗಳದಲ್ಲಿ ಶತಪಥ ಓಡಾಡುತ್ತೇವೆ. ನೀರಿನ ಎಚ್ಚರವು ಮೂಡದಿದ್ದರೆ, ಸ್ವಯಂ ಆಗಿ ಮೂಡಿಸಿಕೊಳ್ಳದಿದ್ದರೆ ನಾಳೆ ಕರಾವಳಿಯೂ ಇನ್ನೊಂದು ನವಲಗುಂದ ಆದರೆ ಆಶ್ಚಯವಿಲ್ಲ. ಇದಕ್ಕೆ ಪೂರಕವಾಗಿ ವಿವಿಧ ಕೈಗಾರಿಕೆಗಳು, ನಿಡ್ಡೋಡಿಯಂತಹ ಯೋಜನೆಗಳು, ನದಿತಿರುವಿನಂತಹ ಮಾರಕ ನಿರ್ಧಾರಗಳು ಬದುಕನ್ನು ಕಮರಿಸಲು ಅಟ್ಟಿಸಿಕೊಂಡು ಬರುತ್ತಿದೆ.

Wednesday, August 21, 2013

ಬಿಸಿಯೂಟದ ರುಚಿಯಾಗಬೇಕಾದರೆ...

          
                ಶಾಲೆಯ ಬಿಸಿಯೂಟದ ಬಿಸಿಬಿಸಿ ಸುದ್ದಿಗಳು ರಾಜ್ಯವಲ್ಲ, ದೇಶ ಮಟ್ಟದಲ್ಲಿ ರಾಚುತ್ತಿವೆ. ಜತೆಗೆ ರಾಜಕೀಯದ ವಾಸನೆ. ಅದಕ್ಕೊಂದಿಷ್ಟು ಜಾತಿ, ಮತದ ಲೇಪ. ಇಂತಹ ಪತನಸುಖಿಗಳಿಂದಾಗಿ ಚಿಣ್ಣರು ಹೈರಾಣ. ಹೆತ್ತವರು ಕಂಗಾಲು. ದಾರಿಕಾಣದ ಆಧ್ಯಾಪಕರು. ನುಣುಚಿಕೊಳ್ಳುವ ಆಡಳಿತ ವ್ಯವಸ್ಥೆ. ಮಾತು ತಿರುಚುವ ದೊರೆಗಳು.

                ಮಂತ್ರಿಗಳು, ಅದಿಕಾರಿಗಳು, ಹೆತ್ತವರು ಒಮ್ಮೆ ಶಾಲೆಗೆ ಬನ್ನಿ. ಬಿಸಿಯೂಟವನ್ನು ಉಣ್ಣಿ. ಆಗಷ್ಟೇ ಗೊತ್ತಾಗುತ್ತದೆ - ಅದರ ರುಚಿ! ಕಷ್ಟ-ಕೋಟಲೆಗಳು. ಕಾಯಕಷ್ಟಗಳು. ಗುಣಮಟ್ಟಕ್ಕಾಗಿ ಪಡುವ ಪಾಡು. ಸರಕಾರದ ಪೈಸೆ ಲೆಕ್ಕಾಚಾರದ ಒಳಸುರಿಗಳಿಗೆ ಪರದಾಟ. ಶುಚಿ-ರುಚಿಗೆ ಪೇಚಾಟ. ಇಷ್ಟಿದ್ದೂ ಪಾಠದೊಂದಿಗೆ ಬಿಸಿಯೂಟವನ್ನು ಉಣಿಸುವ ಅಧ್ಯಾಪಕರ ತನು ಶ್ರಮ ಎಲ್ಲೂ ದಾಖಲಾಗುವುದಿಲ್ಲ. ಆಡಳಿತಕ್ಕೆ ದಾಖಲಾಗಬೇಕಾಗಿಲ್ಲ. ಅಲ್ಲಿನವರಿಗೆ ಬೇಕಾಗಿಯೂ ಇಲ್ಲ.

               ಅಕ್ಕಿಯಿಂದ ತರಕಾರಿ ತನಕ ಗುಣಮಟ್ಟದ ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭಿಸುತ್ತದೆ ಎನ್ನುವುದರಲ್ಲಿ ವಿಶ್ವಾಸವಿಲ್ಲ. ಸರ್ವತ್ರ ಕಲಬೆರಕೆ. ಎಲ್ಲದಕ್ಕೂ ವಿಷದ ಸ್ನಾನ. ತಾಜಾ ಎನ್ನುವುದು ಮರೀಚಿಕೆ. ಟೊಮೆಟೋ, ಕ್ಯಾಬೇಜ್, ಹೂಕೋಸು.. ಹೀಗೆ ಎಷ್ಟು ಬೇಕು, ವಿಷದ ಬಂಧುಗಳು! ಬಿಸಿಯೂಟದ ಪದಾರ್ಥದಲ್ಲಿ ಇವೆಲ್ಲಾ ಚಿಣ್ಣರ ಉದರ ಸೇರುತ್ತದೆ.
ಮನಸ್ಸಿದ್ದರೆ ಮಾರ್ಗವಿದೆ. ಹಳೆಯ ಮಾತಿದು. ನಿತ್ಯ ಪ್ರಸ್ತುತ. ಚಿಣ್ಣರ ಆರೋಗ್ಯ ಕಾಪಾಡಲು ಕಬ್ಬಿಣದಂಶದ ಮಾತ್ರೆಗಳನ್ನು ಈಚೆಗೆ ನುಂಗಿಸಲಾಗಿತ್ತು. ಬೇಕೋ ಬೇಡವೋ ಪ್ರಶ್ನಿಸುವಂತಿಲ್ಲ. ಕೆಲವರಿಗೆ ಏನೂ ಆಗಿಲ್ಲದಿರುವುದು ಪುಣ್ಯ. ಅನಾರೋಗ್ಯಕ್ಕೆ ತುತ್ತಾದವರು ಮರುತ್ತರ ಹೇಳಿಲ್ಲ. ಹೇಳಿದರೂ ಕೇಳುವವರು ಯಾರು? ಇದರ ಬದಲು ಕಬ್ಬಿಣದ ಅಂಶ ಇರುವ ಖಾದ್ಯಗಳನ್ನು ಬಿಸಿಯೂಟಕ್ಕೆ ಯಾಕೆ ಬಡಿಸಬಾರದು.

               ಈ ಮಾತನ್ನು ಖಾದಿ ದಿರುಸಿನ ಗಣ್ಯರಲ್ಲಿ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದೆ. 'ಖರ್ಚು ಬರುವುದಿಲ್ವಾ. ಬೊಕ್ಕಸದಲ್ಲಿ ಹಣ ಬೇಡ್ವಾ' ಎಂಬ ಉತ್ತರಕ್ಕೆ ನಗಲೋ, ಅಳಲೋ! ಕೋಟಿ ಕೋಟಿ ಕಾಂಚಾಣವನ್ನು ನುಂಗುವ, ರೈತರ ಭೂಮಿಯನ್ನೇ ಸದ್ದಿಲ್ಲದ ಸ್ವಾಹಾ ಮಾಡುವ, ಚೂರುಪಾರು ಜಾಗವನ್ನು ಕುಟುಂಬಸ್ಥರ ಹೆಸರಿಗೆ ಬರೆಸಿಕೊಂಡ ಕನ್ನಾಡಿನ ಗಣ್ಯರ ಇತಿಹಾಸ ಜನರ ಬಾಯಲ್ಲೇ ಕುಣಿದಾಡುತ್ತಿದೆ! ಮಕ್ಕಳಿಗೆ ನೀಡುವ ಆಹಾರಕ್ಕೆ ಮಾತ್ರ ಆರ್ಥಿಕ ಕೊರತೆ. ಈಚೆಗೆ ಹಾಲು ಸೇರಿಕೊಂಡಿದೆ. ಶ್ಲಾಘನೀಯ.

               ಆಹಾರವೇ ಔಷಧ. ಔಷಧೀಯ ಗುಣವುಳ್ಳ ಆಹಾರದ ಸೇವನೆಯ ಬೌದ್ಧಿಕ ಜ್ಞಾನವು ಹಿರಿಯರ ಬಳುವಳಿ. ಋತುಮಾನಕ್ಕನುಸಾರವಾದ ವಿವಿಧ ಖಾದ್ಯಗಳು ಬದುಕಿನಂಗವಾಗಿದ್ದ ದಿನಗಳಿದ್ದುವಲ್ಲಾ. ಹಿತ್ತಿಲಿಗೊಮ್ಮೆ ಸುತ್ತು ಬಂದರೆ ಆಯಿತು, ಕೈತುಂಬಾ ತರಕಾರಿಗಳು, ಕುಡಿಗಳು, ಸೊಪ್ಪುಗಳು. ಅವುಗಳು ಅನ್ನದೊಂದಿಗೆ ಹೊಟ್ಟೆ ಸೇರಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟ ಹಿರಿಯರು ಈಗಲೂ ಸಾಕ್ಷಿಯಾಗಿ ಸಿಗುತ್ತಾರೆ. ಅವರೆಂದೂ ಚಿಕ್ಕಪುಟ್ಟ ಶೀತ-ಜ್ವರಕ್ಕೆ ಮೆಡಿಕಲ್ ಶಾಪಿಗೆ ಓಡಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ.

                ಈಚೆಗೆ ಹುಬ್ಬಳ್ಳಿಗೆ ಹೋಗಿದ್ದೆ. ಮನೆಯೊಂದರಲ್ಲಿ ಶತಮಾನ ದಾಟಿದ ವೃದ್ಧೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದರು! ಹತ್ತಡಿಯ ಬಾವಿಯಲ್ಲ, ಇನ್ನೂರು ಅಡಿ! ಜೀವಿತನ ಗುಟ್ಟೇನು? 'ನಾವೇ ಬೆಳೆದ ರಾಗಿ, ಜೋಳವನ್ನು ತಿಂತೀವಿ. ಹೊಲದಲ್ಲಿ ದುಡಿತೀವಿ. ತಿನ್ನೋಕೆ ಬೇಕಾದವನ್ನೆಲ್ಲಾ ಬೆಳೀತೀವಿ..', ಆ ಅಜ್ಜಿ ಲಟಲಟನೆ ಮಾತನಾಡುತ್ತಿದ್ದಂತೆ ಅಳಿಕೆ ಮುಳಿಯದ ವೆಂಕಟಕೃಷ್ಣ ಶರ್ಮರು ನೆನಪಾದರು.

               ಶರ್ಮರು ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಅಧ್ಯಾಪಕರು. ನಿರ್ವಿಷವಾದ ಆಹಾರವನ್ನು ಸೇವಿಸುವತ್ತ, ಅದನ್ನೇ ಮಾಹಿತಿ ರೂಪದಲ್ಲಿ ನೀಡುವ ಅಪರೂಪದ ವ್ಯಕ್ತಿ. 'ನಮ್ಮ ಅಡುಗೆ ಮನೆಗೆ ನಮ್ಮದೇ ತರಕಾರಿ' ಎನ್ನುವ ಅವರ ಬದುಕಿನ ಹಿಂದೆ ಭವಿಷ್ಯದ ಕಾಳಜಿಯಿದೆ. ಆರೋಗ್ಯದ ಗುಟ್ಟಿದೆ. ಹಸುರು ಪ್ರೀತಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತಃಕರಣ ಶುದ್ಧವಿದೆ. ಗಂಟಲ ಮೇಲಿನ ಮಾತು ದೂರ.

                  ಶರ್ಮರು ತರಕಾರಿ ಬೆಳೆಯುತ್ತಾರೆ, ತಿನ್ನುತ್ತಾರೆ, ಹಂಚುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಒಯ್ಯಲು ಕಟ್ಟಿ ಕೊಡುತ್ತಾರೆ. ಬೀಜಗಳನ್ನು ನೀಡಿ ತರಕಾರಿ ಬೆಳೆಸುವಂತೆ ಪ್ರೇರೇಪಿಸುತ್ತಾರೆ. ಇವೆಲ್ಲವೂ ಆರ್ಥಿಕ ಲಾಭಕ್ಕಾಗಿ ಅಲ್ಲ! ಸ್ವಂತಕ್ಕಾಗಿ ಬೆಳೆವ ತರಕಾರಿಯಲ್ಲಿ ಬಹುಪಾಲು ಅವರ ಶಾಲೆಯ ಬಿಸಿಯೂಟದ ಪದಾರ್ಥಕ್ಕೆ ಮೀಸಲು. ಬಾಳೆಕಾಯಿ, ಬಾಳೆದಿಂಡು, ಕುಂಡಿಗೆ, ಹಲಸು, ಕಣಿಲೆ, ನೆಲಬಸಳೆ, ಪಪ್ಪಾಯಿ, ಗೆಡ್ಡೆಗಳು, ಕೆಸು.. ನಿತ್ಯ ಬದುಕಿನಲ್ಲಿ ಮರೆಯಾಗುತ್ತಿರುವ ತರಕಾರಿಗಳು ಬಿಸಿಯೂಟದೊಂದಿಗೆ ಮಕ್ಕಳ ಉದರಾಗ್ನಿಯನ್ನು ತಣಿಸುತ್ತದೆ.

                  ಚಿಣ್ಣರು ಪಾರಂಪರಿಕ ಖಾದ್ಯಕ್ಕೆ ಒಗ್ಗಿಕೊಂಡಿದ್ದಾರೆ. ಅವರಿಗೆ ಹಲಸು ಹೊಲಸಾಗುವುದಿಲ್ಲ. ಗೆಡ್ಡೆಗಳತ್ತ ತಾತ್ಸಾರವಿಲ್ಲ. ತಂಬುಳಿ, ಚಟ್ನಿ ಮಾಡಿದಾಗ ಗೊಣಗಾಟವಿಲ್ಲ. ತರಕಾರಿ ತುಂಬಿದ ಶರ್ಮರ ದ್ವಿಚಕ್ರ ನಿಂತರೆ ಸಾಕು, ವಿದ್ಯಾರ್ಥಿಗಳು ಅವರನ್ನು ಮುತ್ತಿಕೊಳ್ಳುತ್ತಿರುವ ದೃಶ್ಯದಲ್ಲಿ ಮಾತೃತ್ವ ಎದ್ದುಕಾಣುತ್ತದೆ. ನಿರ್ವಿಷವಾದ ತರಕಾರಿ ಪದಾರ್ಥವನ್ನು ಸವಿಯುವ ಈ ಶಾಲೆಯ ಚಿಣ್ಣರು ಭಾಗ್ಯವಂತರು.

                 ಬಿಸಿಯೂಟ ಪದಾರ್ಥದ ಕತೆಯನ್ನು ಆಲಿಸಿದ ಹೆತ್ತವರೂ ಕೂಡಾ ಪಾರಂಪರಿಕ ವ್ಯವಸ್ಥೆಗೆ ಉತ್ಸುಕರಾಗುತ್ತಿದ್ದಾರೆ. ಮಕ್ಕಳ ಒತ್ತಾಯಕ್ಕಾದರೂ ತಿಮರೆ ಚಟ್ನಿ, ತಗತ್ತೆ ಪಲ್ಯ, ಹಲಸಿನ ಸಾಂಬಾರು.. ಮಾಡುತ್ತಾರಂತೆ. ಶರ್ಮರಿಗೆ ಆಹಾರದ ಕುರಿತು ಕಾಳಜಿಯಿದೆ. ಚಿಣ್ಣರಲ್ಲಿ ಪ್ರೀತಿಯಿದೆ. ಅದು ಮಕ್ಕಳ ಆಹಾರದ ಮೂಲಕ ಪ್ರತಿಫಲಿತವಾಗುತ್ತದೆ.

                 ಶಾಲೆಯ ಆಡಳಿತ ಮಂಡಳಿ, ಗುರುವೃಂದ, ಬಿಸಿಯೂಟವನ್ನು ತಯಾರಿಸುವ ಸಹಾಯಕರೇ ಆಗಿರಲಿ, ಮಾಡುವ ಕೆಲಸದಲ್ಲಿ ಪ್ರೀತಿ-ವಿಶ್ವಾಸಗಳಿದ್ದರೆ ಬಿಸಿಯೂಟ ರುಚಿಯಾಗುತ್ತದೆ. ಗೊಣಗಾಟ, ಅತೃಪ್ತಿಗಳೇ ವೃತ್ತಿಯಾದಾಗ ಜಿರಳೆ, ಇಲಿ, ಹಲ್ಲಿ.. ಕಾಣಿಸಿಕೊಳ್ಳಬಹುದು! ಭವಿಷ್ಯದ ಉತ್ತರಾಧಿಕಾರಿಗಳಾಗಿ ಶಿಕ್ಷಣವನ್ನು ಪಡೆಯುವ ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವ ಹೊಣೆ ನಮ್ಮೆಲ್ಲರದು ತಾನೆ. ಈ ನಿಟ್ಟಿನಲ್ಲಿ ಅಧ್ಯಾಪಕರಿಗೆ ಬಿಸಿಯೂಟದ ನಿರ್ವಹಣೆಯ ಭಾರವನ್ನು ಹಗುರಗೊಳಿಸಬೇಕು.

               ಈಗ ಆಟಿಯ (ಆಷಾಢ) ಹಬ್ಬ. ಗೌಜಿ-ಗದ್ದಲ. ಸಂತೋಷದ ಸಮಯ. ಆಷಾಢ, ಶ್ರಾವಣ.. ಹೀಗೆ ಪ್ರತಿಯೊಂದು ತಿಂಗಳಿಗೂ ಅದರದ್ದೇ ಅದ ಮಹತ್ತು. ಹಿರಿಯರ ಬದುಕಿನಲ್ಲಿ ಇವೆಲ್ಲಾ ಹೊಸೆದುಕೊಂಡಿತ್ತು. ಅದಕ್ಕೆ ಗಮ್ಮತ್ತಿನ ಸ್ಪರ್ಶ ಇರಲಿಲ್ಲ. ಅಡುಗೆ ಮನೆಯು ನಿತ್ಯ ಗಮ್ಮತ್ತಿನ ತಾಣ. ಈಗ ಗೋಬಿ ಮಂಚೂರಿಯನ್ ಕಾಲ. ಹಾಗಾಗಿ ಅಜ್ಜಿಯಿಂದ ಬಂದ ಜ್ಞಾನವನ್ನು ಒಂದು ದಿನದ ಗಮ್ಮತ್ತಿನ ಮೂಲಕವಾದರೂ ಆಚರಿಸುತ್ತೇವಲ್ಲಾ..!

                    ಬಂಟ್ವಾಳ ತಾಲೂಕಿನ ಶೈಕ್ಷಣಿಕ ಸಂಸ್ಥೆಗಳು ಆಗಸ್ಟ್ 12ರಂದು ಆಟಿ ಹಬ್ಬವನ್ನು ಆಚರಿಸಿದುವು. ಪಾರಂಪರಿಕವಾದ ಆಹಾರ ಕ್ರಮವನ್ನು ಚಿಣ್ಣರಿಗೆ ಬೋಧಿಸುವುದಲ್ಲದೆ, ಅದರ ಅನುಷ್ಠಾನವನ್ನು ಮಾಡುವ ದೂರದೃಷ್ಟಿ. ಕಳೆದ ವರುಷ ಆಹಾರ ಸನ್ನದು ಎಂಬ ನೂತನ ಪರಿಕಲ್ಪನೆ ಕೆಲೆವೆಡೆ ಯಶವಾಗಿತ್ತು. ಬಹುತೇಕ ಶಾಲೆಗಳು ಆಟಿಯ ಮಹತ್ವನ್ನು ಸಾರುವ ಕಲಾಪಗಳನ್ನು ರೂಢಿಸಿಕೊಂಡಿದ್ದುವು.

               ಆಟಿಯ ಹಬ್ಬಕ್ಕಾಗಿ ಕೇಪು-ಕಲ್ಲಂಗಳ ಸರಕಾರಿ ಪ್ರೌಢ ಶಾಲೆಗೆ ಹೋಗಿದ್ದೆ. ಬಹಳ ಅರ್ಥವತ್ತಾಗಿ ಹಬ್ಬವನ್ನು ಆಚರಿಸಿದ್ದರು. ಮಕ್ಕಳೊಂದಿಗೆ ಹೆತ್ತವರೂ ಭಾಗವಹಿಸಿದ್ದರು. ಪತ್ರೊಡೆ, ಉಪ್ಪುಸೊಳೆ ಖಾದ್ಯ, ಸಿಹಿ ತಿಂಡಿ.. ಹೀಗೆ ಪಾರಂಪರಿಕ ಪಾಕಗಳನ್ನು ಮಾಡಿ ಹೆತ್ತವರು ಮಕ್ಕಳ ಕೈಯಲ್ಲಿ ಕಳುಹಿಸಿದ್ದರು. ಆಟಿಯ ಮಹತ್ವದೊಂದಿಗೆ, ಆರೋಗ್ಯಪೂರ್ಣವಾದ ಆಹಾರವನ್ನು ಮಾಡುವ ಮಾಹಿತಿ ಖುಷಿ ಕೊಟ್ಟ ವಿಚಾರ.

                   ಈಚೆಗೆ ಕೇಪು ಶಾಲೆಯು ಮಕ್ಕಳಲ್ಲಿ ಸಾವಯವ ಕೃಷಿಯ ಅರಿವು ಮೂಡಿಸುವಂತಹ ಅಪರೂಪದ ಕೆಲಸ ಮಾಡುತ್ತಿದೆ. ಮುಖ್ಯ ಗುರು ರಮೇಶ್ ಬಾಯಾರು ಅವರ ಕನಸಿನ ಕೆಲಸವಿದು. ತರಕಾರಿ ಬೀಜ ನೀಡಿ, ತರಕಾರಿ ಕೃಷಿಯನ್ನು ಮಾಡುವ ಕುರಿತು ಅನುಭವಿಗಳಿಂದ ತರಬೇತಿ ಕೆಲಸ ಆಗುತ್ತಿದೆ. ಕೃಷಿಕರ ತೋಟಗಳಿಗೆ ಮಕ್ಕಳನ್ನು ಭೇಟಿ ಮಾಡಿಸಿ ಹಸಿರಿನ ಪರಿಚಯ ಮಾಡಲಾಗುತ್ತದೆ. 'ಗ್ರಾಮೀಣ ಭಾಗದ ಮಕ್ಕಳಾದರೂ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಳ್ಳಿಯ ನೈಜ ಬದುಕಿನಿಂದ ಅವರು ಕಳೆದುಹೋಗಬಾರದಲ್ವಾ' ಎನ್ನುವ ಕಾಳಜಿ ರಮೇಶ ಬಾಯಾರು ಅವರದು.

               ಕೇಪು ಶಾಲೆಯ ಬಿಸಿಯೂಟ ತಯಾರಿಯ ಕೊಠಡಿಯತ್ತ ಎಲ್ಲಾ ಅಧ್ಯಾಪಕರ ಕಾಳಜಿ. ಅಕ್ಕಿಯನ್ನಿಡಲು ಪ್ರತ್ಯೇಕ ವ್ಯವಸ್ಥೆ. ಪದಾರ್ಥ ತಯಾರಿಸುವಾಗ ಸಹಾಯಕರಿಗೆ ವಿಶೇಷ ನಿಗಾ. ಮನೆಯಲ್ಲಿ ಬೆಳೆದ ತರಕಾರಿಯನ್ನು ಮಕ್ಕಳು ತಂದಾಗ ಪ್ರೋತ್ಸಾಹದ ಮಾತು. ಉಣ್ಣುವ-ತಿನ್ನುವ ವಿಚಾರದಲ್ಲಿ ಜಾಗ್ರತೆ.

                    ಶಾಲಾ ಪಠ್ಯದಲ್ಲಿ ಹಸುರಿಲ್ಲ. ಕೃಷಿಯಿಲ್ಲ. ಕೃಷಿಕನ ಯಶೋಗಾಥೆಗಳಿಲ್ಲ. ಬೌದ್ಧಿಕ ಸಾಮಥ್ರ್ಯವನ್ನು ಗಟ್ಟಿಮಾಡದ ಪಠ್ಯದೊಂದಿಗೆ ಕೃಷಿ, ಪರಿಸರ, ತೋಟದ ಪಾಠ ಮಾಡುವ ಕೇಪು ಶಾಲೆಯ ಅಧ್ಯಾಪಕ ವೃಂದದ ಶ್ರಮ ಶ್ಲಾಘನೀಯ. ಹೇಳುವಂತಹ ದೊಡ್ಡ ಪರಿಣಾಮಗಳನ್ನು ನಿರೀಕ್ಷಿಸಲಾಗದಿದ್ದರೂ, ಎಳೆಯ ಮನಸ್ಸುಗಳ ಹಳ್ಳಿಪ್ರೀತಿಯ ಅಡಿಗಟ್ಟು ಭದ್ರವಾಗುತ್ತದೆ. ಬಿಸಿಯೂಟ ರುಚಿಯಾಗುತ್ತದೆ.

Wednesday, August 14, 2013

ಒಡಲಿಗಿಳಿಯದ ಜಲ ಸಂಪತ್ತು


               ಗಂಗಪ್ಪಯ್ಯ ರಾಜಾ ವಿಷ್ಣುವರ್ಧನನ ಓರ್ವ ದಂಡನಾಯಕ. ಈತ ಕಣಗಿಲೆಯ ಯುದ್ಧವನ್ನು ಗೆದ್ದು ಬರುತ್ತಾನೆ. ರಾಜನಿಗೆ ಖುಷಿ. 'ನಿನಗೇನು ಉಡುಗೊರೆ ನೀಡಲಿ, ನೀನೇ ಕೇಳಿ ಪಡಕೊಂಡರೆ ಚೆನ್ನ,' ರಾಜನಿಂದ ಘೋಷಣೆ. ವಜ್ರ, ಸಂಪತ್ತು, ವೈಢೂರ್ಯ.. ಮೊದಲಾದ ಆಯ್ಕೆಗಳಿದ್ದುವು.

               ನೀವು ಕೊಡುವಂತಹ ಮೌಲ್ಯಯುತ ಬಂಗಾರ, ವಜ್ರದ ಜತೆಯಲ್ಲಿ 'ಒಂದು ಕೆರೆ ಕಟ್ಟಿಸಿ ಕೊಡಿ' ಎನ್ನುವಾಗ ರಾಜ ದಂಗು. ಆಶ್ಚರ್ಯದಿಂದ 'ಕೆರೆಯಿಂದ ನೀನೇನು ಸಾಧಿಸಿದಂತಾಯಿತು' ಎನ್ನುತ್ತಾನೆ. 'ಕೆರೆಯ ನೀರನ್ನು ಕುಲ ದೇವರಿಗೆ ಅರ್ಪಣೆ ಮಾಡುತ್ತೇನೆ. ಉಳಿದುದನ್ನು ರೈತರಿಗೆ ಕೃಷಿ ಮಾಡಲು ಕೊಡುತ್ತೇನೆ. ಸಿಕ್ಕಿದ ಅಕ್ಕಿಯನ್ನು ಊರಿನ ಜನರಿಗೆ ಅನ್ನ ಸಂತರ್ಪಣೆ ಮಾಡಲು ಬಳಸಿಕೊಳ್ಳುತ್ತೇನೆ.'

               ಹಂಪಿಯಲ್ಲಿರುವ ಲಕ್ಷ್ಮೀಧರಾತ್ಮನ ಶಾಸನದಲ್ಲಿ ಉಲ್ಲೇಖವಾಗಿರುವ ಈ ಮಾಹಿತಿಯನ್ನು ಜಲತಜ್ಞ ಶ್ರೀ ಪಡ್ರೆಯವರು ಮಕ್ಕಳಿಗಾಗಿ ಸಿದ್ಧಪಡಿಸಿದ ಪುಸ್ತಿಕೆಯೊಂದರಲ್ಲಿ ದಾಖಲಿಸಿದ್ದಾರೆ. ಕುಡ್ಸೆಂಪ್ ಯೋಜನೆಯಡಿ ಇದು ಪ್ರಕಾಶನಗೊಂಡಿತ್ತು.

                 ನೀರು, ಕೃಷಿ, ಕೃಷಿಕನ ಕುರಿತಾದ ಕಾಳಜಿ ಮತ್ತು ಮಹತ್ತುಗಳು ರಾಜರ ಕಾಲದಿಂದಲೇ ಮೊದಲಾದ್ಯತೆಯಲ್ಲಿದ್ದುವು. ಕೃಷಿಕ ಸಂತೋಷವಾಗಿದ್ದರೆ ಮಾತ್ರ ರಾಜ್ಯ ಸುಭಿಕ್ಷೆಯಿಂದ ಕೂಡಿರುತ್ತದೆ ಎಂಬ ಭಾವನೆಗಳೂ ಇದ್ದುವು. ಬದುಕಿಗೆ ಉಸಿರಾಗಿರುವಂತಹ ನೀರಿನ ಜಾಗೃತಿ ಬದುಕಿನಂಗವಾಗಿದ್ದುವು.

               ಜಯಗಢದ ಕೋಟೆ - ಇತಿಹಾಸ ಪ್ರಸಿದ್ಧ. ರಾಜಸ್ಥಾನದ ಜೈಪುರದಿಂದ ಹನ್ನೊಂದು ಕಿಲೋಮೀಟರ್ ದೂರವಷ್ಟೇ. 1726ರಲ್ಲಿ ಎರಡನೇ ಜಯಸಿಂಹ ಮಹಾರಾಜ ಕಟ್ಟಿಸಿದ್ದ. ಸನಿಹದ ಗುಡ್ಡದಿಂದ ಹರಿದು ಬಂದ ಮಳೆಯನೀರು ಸೋಸಿ ಒಂದು ಕೋಟಿ ಲೀಟರ್ ಸಾಮಥ್ರ್ಯದ ಟ್ಯಾಂಕಿಯಲ್ಲಿ ತುಂಬುತ್ತದೆ! ಹತ್ತು ಸಾವಿರ ಮಂದಿಗೆ ಎರಡು ವರುಷ ಕಾಲ ಕುಡಿನೀರಿಗೆ ಇದು ಸಾಕು. ಇಂದಿಗೂ ಈ ವ್ಯವಸ್ಥೆ ಚೆನ್ನಾಗಿ ನಡೆಯುತ್ತದೆ. ಟ್ಯಾಂಕಿನಿಂದ ನೀರೆತ್ತಿ ಸಂದರ್ಶಕರಿಗೆ ಕುಡಿಯಲು ಕೊಡುತ್ತಾರೆ ಎನ್ನುವ ಅಂಶವನ್ನು ಪುಸ್ತಿಕೆಯಲ್ಲಿ ಶ್ರೀ ಪಡ್ರೆ ವಿವರಿಸುತ್ತಾರೆ.

              ಇತಿಹಾಸದುದ್ದಕ್ಕೂ ನೀರಿನ ಪ್ರಾಧಾನ್ಯತೆಯ ವಿಚಾರಗಳು, ದೃಷ್ಟಾಂತಗಳು ಸಿಗುತ್ತವೆ. ಇಂತಹ ಘಟನೆಗಳು ಪಠ್ಯದಲ್ಲಿ ಬಂದಿಲ್ಲ. ಮಕ್ಕಳಿಗೆ ಗೊತ್ತಿಲ್ಲ. ಪಠ್ಯ ಬರೆಯುವ ತಜ್ಞರಿಗೆ ಬೇಕಾಗಿಲ್ಲ. ಶಾಲಾ ಜೀವನದಿಂದಲೇ ನೆಲ-ಜಲದ ಮಹತ್ವ ಮಕ್ಕಳಿಗೆ ತಿಳಿಸಬೇಕಾದುದು ಅಗತ್ಯ. ಕೇವಲ ಥಿಯರಿಗಳಷ್ಟೇ ಅಲ್ಲ, ಜತೆಗೆ ಪ್ರಾಕ್ಟಿಕಲ್ ಕೂಡಾ ಪಾಠದೊಂದಿಗೆ ಹೊಸೆದು ಬರಬೇಕು.

               ಇಲ್ಲೊಂದು ನೀರಿನ ದುಂರತ ನೋಡಿ. ದಾವಣಗೆರೆ ಜಿಲ್ಲೆಯ ಚನ್ನಗಿರಿಯು ಅತಿ ಹೆಚ್ಚು ಕೊಳವೆ ಬಾವಿಗಳ ಸಾಂದ್ರತೆಯಿರುವ ಊರು. 1500 ರಿಂದ 200 ಅಡಿ ಅಳದವರೆಗೆ ಕೊರೆತ. ಅಲ್ಲಿನ ಕೃಷಿಕರೊಬ್ಬರು ಮುನ್ನೂರೈವತ್ತಕ್ಕೂ ಮಿಕ್ಕಿ ಕೊಳವೆ ಬಾವಿಗಳನ್ನು ಕೊರೆಸಿದರೂ, ಹತ್ತೋ-ಹನ್ನೆರಡೋ ಮಾತ್ರ ಉಸಿರಾಡುತ್ತಿವೆಯಷ್ಟೇ! ಹತ್ತು ವರುಷದ ಹಿಂದಿನ ಈ ಅಂಕಿಅಂಶದ ಅಡಿಕೆ ಕೃಷಿ ವಿಸ್ತರಣೆಯ ಕತೆಯಿದೆ.

              ಜನಸಂಖ್ಯೆ ಹೆಚ್ಚಳವೂ ನೀರಿನ ಅಸಮತೋಲನ ಕಾರಣ. ಕೃಷಿ ವಿಸ್ತರಣೆಯಾದಾಗ ಸಹಜವಾಗಿ ನೀರಿನ ಬಳಕೆಯೂ ಅಧಿಕ. ಪೇಟೆಗಳಲ್ಲಿ 10-15 ಕುಟುಂಬಗಳು ವಾಸಿಸುತ್ತಿದ್ದ ಜಾಗದಲ್ಲೆಲ್ಲಾ ಬಹುಮಹಡಿಯ ಪ್ಲ್ಯಾಟ್ಗಳು ಎದ್ದಿವೆ. ಇಲ್ಲಿಗೆ ಕೊಳವೆ ಬಾವಿಯೊಂದೇ ಆಧಾರ. ಮೊದಲಿಗಿಂತ ಇಪ್ಪತೋ, ಮೂವತ್ತೋ ಪಟ್ಟು ನೀರು ಹೆಚ್ಚು ಬೇಕು. ಒಂದು ಕೊಳವೆ ಬಾವಿ ನಿಭಾಯಿಸಿ ಕೊಡಬಹುದೆ? ಇಲ್ಲ ಎಂದಾದರೆ ಇನ್ನೊಂದು, ಮತ್ತೊಂದು ಕೊರೆತಗಳ ಮಾಲೆ.

               ಜನಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಕೃಷಿ ಭೂಮಿಗಳು ಮಾತ್ರ ಕ್ಷೀಣಿಸುತ್ತಿವೆ! ನೀರಿನ ಮೂಲಸೆಲೆಗಳು ಮಾನವನಿರ್ಮಿತ ಪ್ರಾಕೃತಿಕ ಅಸಮತೋಲನಕ್ಕೆ ಬಲಿಯಾಗಿವೆ. ಇರುವ ನೀರನ್ನು ಎಚ್ಚರಿಂದ ಬಳಸಿ, ಜಲಮೂಲಗಳನ್ನು ರಕ್ಷಿಸಬೇಕಾಗಿದೆ. ಮಳೆನೀರನ್ನು ಭೂಮಿಯೊಳಕ್ಕೆ ಇಂಗಿಸಿಕೊಳ್ಳುವುದು ಆದ್ಯತೆಯ ಕೆಲಸ. ಎಲ್ಲರಿಗೂ ನೀರು ಒದಗಿಸುವಷ್ಟು ಮಳೆಸಂಪತ್ತು ಇದೆ. ನಿರ್ವಹಣೆ ಮಾತ್ರ ಇಲ್ಲ.

                ಈ ಸಲ ಕರಾವಳಿಯಲ್ಲಿ ಯಥೇಷ್ಟ ಮಳೆಯಿದ್ದರೂ 'ನಮ್ಮಲ್ಲಿಗೆ ನೀರು ಬಾರದೆ ವಾರ ಕಳೆಯಿತು' ಎಂದು ಮರುಗುವ ಅಮ್ಮಂದರನ್ನು ಬಲ್ಲೆ. ನೀರು ಎಲ್ಲಿಂದ ಬರಬೇಕು? ಕೆಲವರಿಗೆ ನೀರಿನ ನಿರ್ವಹಣೆ ಗೊತ್ತಿಲ್ಲ ಬಿಡಿ. ಇನ್ನೂ ಕೆಲವರಿಗೆ ಗೊತ್ತಿದೆ, ಆದರೆ ನಮಗ್ಯಾಕೆ ಮಾರಾಯ್ರೆ ಎಂದು ಆಕಳಿಸುವ ಪ್ರವೃತ್ತಿ. ಸಂಪತ್ತಿನ ಪೆಟ್ಟಿಗೆಯಿದೆ, ಪೆಟ್ಟಿಗೆಯೊಳಗೆ ಖಾಲಿ!

               ಚೆನ್ನೈ ನಗರದ ಶೇ.20ರಷ್ಟಿರುವ ಶಿಕ್ಷಣ ಸಂಸ್ಥೆಗಳ ಜಮೀನನ್ನು ಹೊರತು ಪಡಿಸಿ, ಮಿಕ್ಕಲ್ಲೆಲ್ಲಾ ಸಿಮೆಂಟ್ಮಯ. ಇದರಿಂದಾಗಿ ನೀರು ಇಂಗುತ್ತಿಲ್ಲ. ಭೂಗರ್ಭಕ್ಕೆ ಸೇರಬೇಕಾದ ಮಳೆ ನೀರಿನ ಪ್ರಮಾಣವು ಕಡಿಮೆಯಾಗುತ್ತಿದೆ.'
ಚೆನ್ನೈ ಯಾಕೆ? ನಮ್ಮ ಮನೆಯ ಸುತ್ತ ಒಮ್ಮೆ ಕಣ್ಣು ಹಾಯಿಸಿ. ಉತ್ತರ ಸಿಕ್ಕಿಬಿಡುತ್ತದೆ.

 
ಸಾಂದರ್ಭಿಕ ಚಿತ್ರ: ಕೇರಳದ ಮಳೆಕೊಯ್ಲಿನ ಒಂದು ಮಾದರಿ

(ಚಿತ್ರ : ಶ್ರೀ ಪಡ್ರೆ)

Saturday, August 10, 2013

ನಿಮಿಷಕ್ಕೆ ನಲವತ್ತೊಂಭತ್ತು ಹಹ ಸೊಳೆ ಗುಳುಂ!



             ಕೇರಳದಿಂದ ಆರಂಭವಾದ ಹಲಸು ಮೇಳವು ಕನ್ನಾಡನ್ನು ಪ್ರವೇಶಿಸಿ, ಈಗ ಉತ್ತರ ಭಾರತದ ಮೇಘಾಲಯಕ್ಕೆ ಹೆಜ್ಜೆಯೂರಿದೆ! ಜುಲೈ ಎರಡನೇ ವಾರ ವಿಲಿಯಂ ನಗರದ ಪೊಲಿಸ್ ತರಬೇತಿ ಮೈದಾನದಲ್ಲಿ ಜರುಗಿದ ಹಬ್ಬಕ್ಕೆ ಆಗಮಿಸಿದ ಹಲಸು ಪ್ರಿಯರು ನೂರಲ್ಲ, ಸಾವಿರಕ್ಕೂ ಮಿಕ್ಕಿ.

             ಹಲಸಿನ ಉತ್ಪನ್ನಗಳನ್ನು ಬಳಸುವ ಮತ್ತು ಉತ್ಪನ್ನಗಳನ್ನು ಉತ್ಪಾದಿಸುವ ಉದ್ಯಮಗಳನ್ನು ಪ್ರೋತ್ಸಾಹಿಸುವುದು ಮೇಳದ ಉದ್ದೇಶ. ಇಪ್ಪತ್ತು ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದ್ದುವು. ಗೃಹವಿಜ್ಞಾನ ಕಾಲೇಜು, ಸಹಕಾರಿ ಸಂಘಗಳು, ಬೇಕರಿ, ಫುಡ್ ಪ್ಯಾರಡೈಸ್, ಸ್ವಸಹಾಯ ಸಂಘಗಳ ಮಳಿಗೆಗಳವು ಹಲವು ವಿಧದ ತಿಂಡಿಗಳು. ಹಲಸಿನ ಹಣ್ಣಿನ ಕೇಕ್, ಮಫಿನ್ಸ್, ಚಿಪ್ಸ್, ಬಿಸ್ಕತ್ತು, ಬ್ರೆಡ್, ಚಾಕೊಲೇಟ್, ಉಪ್ಪಿನಕಾಯಿ, ವೈನ್, ಜ್ಯೂಸ್, ಜಾಮ್..ಹೀಗೆ ಹಲವು ಖಾದ್ಯಗಳು.

             'ಅತಿ ದೊಡ್ಡ' ಹಲಸಿನ ಸ್ಪರ್ಧೆಯಲ್ಲಿ ಭಾಗವಹಿಸಲು ಪೈಪೋಟಿ. ಸ್ಪರ್ಧಾಳುಗಳ ಆಗಮಿಸುವಾಗ ಅವರ ಹೆಗಲಲ್ಲಿ, ಕೈಯಲ್ಲಿ ಹಲಸಿನ ಹಣ್ಣುಗಳು. ಎಲ್ಲರೂ ಕಾಣುವಂತೆ ತಮ್ಮಲ್ಲಿರುವ ದೊಡ್ಡ ಹಲಸನ್ನೇ ತರಲು ಒಲವು. ಇಪ್ಪತ್ತೊಂಭತ್ತು ಕಿಲೋ ತೂಗಿದ ಹಲಸಿಗೆ ಮೊದಲ ಬಹುಮಾನ. 26.7 ಕಿಲೋದ್ದಕ್ಕೆ ಎರಡನೇ ಸ್ಥಾನ. ಅತಿ ದೊಡ್ಡದು. ಹವಾಯಿಯ ಹಣ್ಣು ಕೃಷಿಕ ಕೆನ್ಲವ್ ಪ್ರಯತ್ನದಿಂದ 34.4 ಕಿಲೋ ತೂಕದ ಹಲಸು ಗಿನ್ನಿಸ್ ದಾಖಲಾಗಿದೆ. ಮುಂದಿನ ವರುಷ ಮೇಘಾಲಯ ಈ ದಾಖಲೆಯನ್ನು ಮುರಿಯಬೇಕೆಂದಿದೆ! ಇದಕ್ಕಿಂತ ಅಧಿಕ ಭಾರದ ಹಲಸು ನಮ್ಮಲ್ಲೂ ಇದೆ. ದಾಖಲೆ ಪ್ರಕ್ರಿಯೆಗೆ ಯತ್ನಿಸಬೇಕಷ್ಟೇ. ದಾಖಲೆ ಆಗಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವತಯಾರಿಯೂ ಇದೆ; ಒಂದಷ್ಟೂ ಖರ್ಚೂ ಇದೆ.

               ಹಲಸಿನ ಹಣ್ಣಿನ (ಹಹ) ಸೊಳೆಯನ್ನು ತಿನ್ನುವ ಸ್ಪರ್ಧೆ ಮೇಳದ ಹೈಲೈಟ್. ಅರುವತ್ತೊಂದು ಪುರುಷರು ಮತ್ತು ನೂರ ಅರುವತ್ತ ನಾಲ್ಕು ಮಹಿಳೆಯರು ಭಾಗಿ. ಎರಡು ನಿಮಿಷದಲ್ಲಿ ಐವತ್ತನಾಲ್ಕು ಸೊಳೆಯನ್ನು ತಿಂದ ಮಾರ್ಟಿನಾ ಮಾರಕ್ ಇವರಿಗೆ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ. ಪುರುಷರ ವಿಭಾಗದಲ್ಲಿ ಒಂದು ನಿಮಿಷಕ್ಕೆ ನಲವತ್ತೊಂಭತ್ತು ಸೊಳೆಗಳನ್ನು ಹೊಟ್ಟೆಗಿಳಿಸಿದ ಗ್ಯಾಮಸೆಂಗ್ ಮಾರಕ್ ಸ್ಪರ್ಧೆಯ ಕೇಂದ್ರಬಿಂದು. ಹಬ್ಬದಲ್ಲಿ ಅಡುಗೆ ಸ್ಪರ್ಧೆಯ ಆಕರ್ಷಣೆ ಪ್ರತ್ಯೇಕ.

              ಎರಡೂ ದಿವಸದ ಹಬ್ಬವು ಹಲಸನ್ನು ಆಹಾರವಾಗಿ ಬಳಸುವತ್ತ ಬೆಳಕು ಚೆಲ್ಲಿತ್ತು. ಅಗತ್ಯವೂ ಕೂಡಾ. ಯಾಕೆಂದರೆ ಇದು ನಿರ್ವಿಷ.

Monday, August 5, 2013

ಕೆರೆಗಳನ್ನು ನುಂಗಿದವರು ಯಾರು?

              ನೇತ್ರಾವತಿ ಮೈತುಂಬಿದ್ದಾಳೆ! ಎಡೆಬಿಡದ ಮಳೆಯಿಂದಾಗಿ ಸದ್ದು ಮಾಡುತ್ತಿದ್ದಾಳೆ. ಮಾನವ ಕರ್ಮಗಳನ್ನೆಲ್ಲಾ ಆಪೋಶನ ಮಾಡುತ್ತಾ ಹರಿಯುತ್ತಿದ್ದಾಳೆ. ಕರಾವಳಿಯ ಜೀವನದಿಯಾಗಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿ ಉಸಿರಾಗಿದ್ದಾಳೆ. ವನರಾಜಿಯ ಸೌಂದರ್ಯವರ್ಧನೆಗೆ ಕಾರಣಳಾಗಿದ್ದಾಳೆ.

                ಒಡಲಲ್ಲಿ ಸಮೃದ್ಧ ನೀರಿದೆ. ಹಸುರಿನ ಕುಣಿತಕ್ಕೆ ಅಡಿಗಟ್ಟು ಹಾಕಿದ್ದಾಳೆ. ಕೃಷಿ ಕೆಲಸಗಳು ಸದ್ದಿಲ್ಲದೆ ಶುರುವಾಗಿದೆ. ಋತುಗಳು ನರ್ತಿಸುತ್ತಿವೆ. ಘಟ್ಟದಿಂದ ಹರಿದಿಳಿದ ಜಲವನ್ನೆಲ್ಲಾ ಸ್ವೀಕರಿಸುತ್ತಿದ್ದಾಳೆ. ಬಾಗಿನ ಅರ್ಪಿಸುವ ಮುಖಗಳು ಅರಳುತ್ತಿದ್ದಾಗ, ನೇತ್ರಾವತಿಯ ಕಣ್ಣಂಚು ತೇವವಾಗಿದೆ. ದುಃಖ ಉಮ್ಮಳಿಸಿ ಬರುತ್ತಿದೆ. ರಕ್ಷಣೆಗೆ ಬೊಬ್ಬಿಟ್ಟರೂ ದನಿ ಕೇಳಿಸುತ್ತಿಲ್ಲ. ಮಾತು ಮೌನವಾಗುತ್ತದೆ. ನೇತ್ರಾವತಿ ಅಳುತ್ತಿದ್ದಾಳೆ!

                 ಯಾಕಾಗಿ ಅಳುತ್ತಿದ್ದಾಳೆ? ಎಲ್ಲರಿಗೂ ಗೊತ್ತು. ನಿತ್ಯ ಮಾತಿನ ವಸ್ತು. ಕನ್ನಾಡಿನ ಪೂರ್ವಭಾಗದ ಬರಗಾಲವು ನೇತ್ರಾವತಿಯ ನೀರಿನಿಂದಾಗಿ ನೀಗುತ್ತದೆ. ಅದೂ ಮಳೆಗಾಲದಲ್ಲಿ ಬಿದ್ದ ನೀರು ಮಾತ್ರ. ಇದಕ್ಕಾಗಿ 'ನೇತ್ರಾವತಿ ತಿರುವು ಯೋಜನೆ' ರೂಪುಗೊಂಡಿತು. ಬಳಿಕ 'ಎತ್ತಿನಹೊಳೆ ಯೋಜನೆ'ಯಾಗಿ ತಿರುವು ಪಡೆಯಿತು.

                ಯೋಜನೆ ಕಾಗದಕ್ಕಿಳಿಯಿತು. ನೀರು ಸಾಗಿಸುವ ರಚನೆಗಳು ಚಿತ್ರಿತವಾದುವು. ಅದಕ್ಕೆ ರಾಜಕೀಯದ ಹೊಲಸು ಮೆತ್ತಿಕೊಂಡಿತು. ನೀರಿನ ಬವಣೆಯನ್ನು ತೋರಿಸುವ ದೃಶ್ಯ ದಾಖಲಾತಿ ಸಿದ್ಧವಾಯಿತು. ಪೂರ್ವ ಕನ್ನಾಡಿನ ಜನ ಬದುಕಬೇಕಾದರೆ ನೇತ್ರಾವತಿಯನ್ನು ತಿರುಗಿಸುವುದೊಂದೇ ಪರಿಹಾರ ಎಂದು ಬಿಂಬಿಸುವ ದಾಖಲೆಗಳೆಲ್ಲಾ ವ್ಯವಸ್ಥಿತವಾಗಿ ತಯಾರಾದುವು. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ರಾಜಕೀಯ ಹುನ್ನಾರಗಳ ಮುಖಗಳು ಮುಖವಾಡದೊಂದಿಗೆ ಪ್ರತ್ಯಕ್ಷವಾದುವು. ಜನರನ್ನು ಎತ್ತಿಕಟ್ಟುವ ಪ್ರಕ್ರಿಯೆಗಳು ನಡೆಯುತ್ತಲೇ ಬಂದುವು.

              ಪಶ್ಚಿಮಘಟ್ಟವು ವಿಶ್ವಸಂಸ್ಥೆಯು ಗುರುತಿಸಿದ ಸೂಕ್ಷ್ಮ ಪ್ರದೇಶಗಳಲ್ಲೊಂದು. ಹದಿನೈದು ಸಾವಿರ ಜೀವಿಗಳು ವಾಸಿಸುವ ತಾಣ. ಸಾವಿರದಷ್ಟು ಪಕ್ಷಸಂಕುಲಗಳು, ಮುನ್ನೂರಕ್ಕೂ ಮಿಕ್ಕಿ ಪತಂಗ, ಚಿಟ್ಟೆಗಳ ಪ್ರಭೇದಗಳು, ನಾಲ್ಕು ಸಾವಿರಕ್ಕೂ ಮಿಕ್ಕಿ ಹೂಗಳ ಜಾತಿಗಳು ಪಶ್ಚಿಮಘಟ್ಟದ ಸಂಪತ್ತು. ಇದನ್ನು ಸೀಳಿಕೊಂಡು ಸಾಗುವ ನೀರಿನ ಕಾಲುವೆಗಳು ಉಂಟು ಮಾಡುವ ನಾಶ ಭಯ ಹುಟ್ಟಿಸುತ್ತದೆ.

               ನಮ್ಮ ನಡುವೆಯೇ ರಸ್ತೆ ಅಗಲೀಕರಣ ನಡೆಯುತ್ತಿದೆಯಲ್ಲಾ. ನಿಗದಿತ ಅಳತೆಯಲ್ಲೇ ರಸ್ತೆ ನಿರ್ಮಾಣವಾಗಬೇಕು. ಅದಕ್ಕಾಗಿ ಕಡಿದ ಮರಗಳ ಸಂಖ್ಯೆ ಆಡಳಿತದ ಫೈಲಿನಲ್ಲಿರಬಹುದು ಎಂದು ನಂಬುವಂತಿಲ್ಲ. ಬೇಕೋ ಬೇಡ್ವೋ ಕೊಡಲಿಗೆ ಆಹುತಿಯಾಗುವ ಮರಗಳು ಅಗಣಿತ. ನುಗ್ಗುವ ಜೆಸಿಬಿ ಯಂತ್ರಕ್ಕೆ ಮಾನವ ಲೆಕ್ಕಾಚಾರದ ಅಳತೆಗಳು ನಗಣ್ಯ.

                  ಪಶ್ಚಿಮ ಘಟ್ಟದ ವನರಾಜಿಯನ್ನೊಮ್ಮೆ ಮನಸ್ಸಿಗೆ ತೆಕ್ಕೊಳ್ಳಿ. ಸೂಕ್ಷ್ಮಾತಿಸೂಕ್ಷ್ಮ ಸ್ಪಂದನೆಯುಳ್ಳ ಪರಿಸರದ ಮಧ್ಯೆ ಜೆಸಿಬಿ ಯಂತ್ರಗಳ ಸದ್ದು. ಸದ್ದಿಲ್ಲದ ಗರಗಸಗಳಿಂದ ಸದ್ದಾಗಿ ಉರುಳುವ ಮರಗಳು. ಒಡಲಲ್ಲಿ ಒರತೆಯ ಜೀವಸೆಲೆಯಿಂದಾಗಿ ಹರಿವ ಚಿಕ್ಕಪುಟ್ಟ ತೋಡುಗಳ ನಾಶ, ಮಣ್ಣಿನ ಸವಕಳಿ, ಜೀವವೈವಿಧ್ಯದ ಅಸಮತೋಲನ.. ಇವೆಲ್ಲವೂ ಕಾಗದದಲ್ಲಿ ಹಿಡಿದಿಡಲು ಬರುವುದಿಲ್ಲ. ಯೋಜನೆ ರೂಪಿಸುವ, ಅನುಷ್ಠಾನಿಸುವ ದೊರೆಗಳಿಗೆ ಇವೆಲ್ಲಾ ಬೇಕಾಗಿಲ್ಲ.

                  ಯೋಜನೆಯ ಅನುಷ್ಠಾನದ ಹಿಂದೆ ಹತ್ತು ಸಾವಿರ ಕೋಟಿಗೂ ಮಿಕ್ಕಿದ ವ್ಯವಹಾರವಿದೆ. ಪಶ್ಚಿಮಘಟ್ಟದಲ್ಲಿ ಸದ್ದು ಮಾಡುವ ಕಾಂಚಾಣದ ದನಿಗೆ ನರ್ತಿಸುವ ರಾಜಕೀಯದ ಹೇಸಿಗೆ ಮುಖಗಳನ್ನು ಗುರುತು ಹಿಡಿಯಲು ಕಷ್ಟವಿಲ್ಲ ಬಿಡಿ. ಪರಿಸರ ಮತ್ತು ಜೈವಿಕ ವ್ಯವಸ್ಥೆ ಹಾಳಾಗದು. ಅರಣ್ಯ ನಾಶವಾಗದು. ಕರಾವಳಿಗೆ ತೊಂದರೆಯಾಗದು ಎನ್ನುವ ಬೋಧೆ ಢಾಳೆಂದು ಆಡಳಿತ ವ್ಯವಸ್ಥೆಗೂ ಗೊತ್ತಿದೆ.

                24.01 ಟಿಎಂಸಿ ಅಡಿ ನೀರನ್ನು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಈ ಯೋಜನೆ. ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೋಜನೆಯಲ್ಲಿ ಆದ್ಯತೆ. ಅಲ್ಲಿಗೆ 10 ಟಿಎಂಸಿ ನೀರು.

             ಯೋಜನೆಗೆ ವರದಿಗೆ ಶ್ರೀಕಾರ ಬರೆದ ಜಿ.ಎಸ್.ಪರಮಶಿವಯ್ಯ ಹೇಳುತ್ತಾರೆ, ಒಟ್ಟು ಏಳು ಯೋಜನಾ ವರದಿಯನ್ನು ತಯಾರಿಸಿ ಸರಕಾರಕ್ಕೆ ನೀಡಲಾಗಿದೆ. ಮೊದಲ ಐದರಲ್ಲಿ ಬಯಲುಸೀಮೆಯ 139 ತಾಲೂಕುಗಳಿಗೆ ನೀರಿನ ವ್ಯವಸ್ಥೆ ಮಾಡಬಹುದು. ಆರನೇ ವರದಿಯಲ್ಲಿ ಮಲೆನಾಡಿನ ಹದಿನೆಂಟು ತಾಲೂಕು, ಕೊನೆಯ ವರದಿಯಲ್ಲಿ ಕರಾವಳಿಯ ಹತ್ತೊಂಭತ್ತು ತಾಲೂಕುಗಳಿಗೆ ನೀರವರಿ ಸೌಲಭ್ಯ ಕಲ್ಪಿಸಬಹುದು. ಈ ಎಲ್ಲಾ ಯೋಜನೆ ಅನುಷ್ಠಾನಗೊಂಡರೆ ರಾಮರಾಜ್ಯ ಆಗುತ್ತದೆ.

             ಆದರೆ ಸಂತೋಷ. ನೀರು ಪ್ರಾಕೃತಿಕ ಸಂಪತ್ತು. ಎಲ್ಲರಿಗೂ ಹಕ್ಕಿದೆ. ಕೊಡಲಾರೆವು ಎನ್ನುವಂತಿಲ್ಲ. ಎನ್ನಲಾಗದು. ನೀರು ಹಂಚುವ ವಿಚಾರದಲ್ಲಿ ಯಾರದ್ದೂ ತಕರಾರಿಲ್ಲ. ಆದರೆ ನೀರನ್ನು ಸಾಗಿಸುವ ದಾರಿಯು ಉಂಟು ಮಾಡುವ ಪ್ರಾಕೃತಿಕ ತೊಡಕುಗಳಿವೆಯಲ್ಲಾ, ಇದು ಒಂದು ಸಂಸ್ಕೃತಿಯನ್ನು ನಾಶ ಮಾಡುತ್ತದೆ, ಜನಜೀವನವನ್ನು ಹಾಳುಮಾಡುತ್ತದೆ. ಘಟ್ಟದ ಮಧ್ಯೆ ಸೀಳಿಕೊಂಡು ಹೋಗುವ ಕಾಮಗಾರಿಯು ಮಾಡುವ ನಾಶವು ದಾಖಲೆಗೂ ನಿಲುಕದು.

             ದಕ್ಷಿಣ ಕನ್ನಡ ಜಿಲ್ಲೆಯ ಭೂಮಿಯು ಮುರಕಲ್ಲಿನಿಂದ ಕೂಡಿದ್ದಾಗಿದೆ. ಏನಿಲ್ಲವೆಂದರೂ ನಲವತ್ತರಿಂದ ಐವತ್ತು ಅಡಿಗಳಷ್ಟು ಆಳಕ್ಕಿದಿವೆ. ಅಂತರ್ಜಲವನ್ನು ಕೂಡಿಡಲು ದೀರ್ಘ ಸಮಯ ಬೇಡುತ್ತದೆ. ನೇತ್ರಾವತಿಯ ಹರಿವು ಕಡಿಮೆಯಾದರೆ ಜಲನಿಧಿ ತಳಕ್ಕಿಳಿಯುತ್ತದೆ. ಈಗಲೇ ಬೇಸಿಗೆಯಲ್ಲಿ ಕುಡಿನೀರಿಗೆ ಒದ್ದಾಡುವ ಸ್ಥಿತಿಯನ್ನು ಕರಾವಳಿಯ ಹಳ್ಳಿಗಳಲ್ಲಿ ಕಾಣುತ್ತೇವೆ. ನೇತ್ರಾವತಿ, ಕುಮಾರಧಾರಾ ನದಿಗಳಿಗೆ ಸಾಕಷ್ಟು ಅಣೆಕಟ್ಟುಗಳಿವೆ. ಯೋಜನೆಗಳಿವೆ. ನೇತ್ರಾವತಿ ತಿರುಗಿದರೆ ಇವೆಲ್ಲಾ ಭವಿಷ್ಯದ ಸ್ಮಾರಕಗಳು.

             ಯೋಜನೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಪುತ್ತೂರಿನ ಡಾ.ಶ್ರೀಶಕುಮಾರ್ ನದಿತಿರುವಿನ ಅಪಾಯದತ್ತ ಬೊಟ್ಟು ಮಾಡುತ್ತಾರೆ, ಪ್ರಸ್ತುತ ಅರಬೀ ಸಮುದ್ರದ ನೀರು ನೇತ್ರಾವತಿ ನದಿಯೊಳಗೆ ಸುಮಾರು ಇಪ್ಪತ್ತೆರಡು ಕಿಲೋಮೀಟರ್ ವರೆಗೆ ಮುಂದೆ ಬರುತ್ತಿದೆ. ಒಂದು ವೇಳೆ ನೇತ್ರಾವತಿಯ ಮಳೆ ನೀರನ್ನು ತಿರುಗಿಸಿದರೆ ಅದು ಕನಿಷ್ಠ ದಕ್ಷಿಣ ಕನ್ನಡವನ್ನೇ ವ್ಯಾಪಿಸಿಬಿಡಬಹುದು. ಉಪ್ಪು ನೀರಿನ ತಡೆಗೋಡೆಗಳೂ ಬಳಕೆಗೆ ಬಾರದ ಸ್ಥಿತಿ ಬರಬಹುದು. ಮೀನುಗಳಿಗೆ ಬೇಕಾದ ಆಹಾರವನ್ನು ಮಳೆಗಾಲದಲ್ಲಿ ನೇತ್ರಾವತಿ ಹೊತ್ತು ತರುವುದರಿಂದಲೇ ದಕ್ಷಿಣ ಕನ್ನಡದ ಬೆಸ್ತ ಬಂಧುಗಳು ಊಟ ಮಾಡುತ್ತಿದ್ದಾರೆ. ಒಂದು ವೇಳೆ ಕೇವಲ ತೊಂಭತ್ತು ಟಿಎಂಸಿ ನೀರು ಎಂದು ಹೇಳಿ ಮಾಡುವ ಮೋಡಿ ಕೊನೆಗೆ ಸರ್ವನಾಶಕ್ಕೆ ಕಾರಣವಾಗಬಹುದು..

             'ನೀರು ಕೊಡುವುದಿಲ್ಲ' ಎನ್ನುವ ಸಂಸ್ಕೃತಿ ತುಳುನಾಡಿದ್ದಲ್ಲ. ಸಹಬಾಳ್ವೆ ಇಲ್ಲಿನ ಹಿರಿಮೆ, ಗರಿಮೆ. ನೀರು ಕೊಡೋಣ. ಆದರೆ ನೀರಿನ ಸಂಪತ್ತಿದ್ದ ಪೂರ್ವ ಕನ್ನಾಡು ಯಾಕೆ ಈಗ ಬರಡಾಗಿದೆ? ಎಂಬ ಯೋಚನೆಯನ್ನು ಯೋಜನೆ ರೂಪಿಸುವ ಅಧಿಕಾರಿಗಳಾಗಲೀ, ನಾಡಿನ ದೊರೆಗಳಾಗಲೀ ಯೋಚಿಸಲಾರರು. ಈ ಹಿನ್ನೆಲೆಯಲ್ಲಿ ರಾಜಧಾನಿಯತ್ತ ಕತ್ತು ತಿರುಗಿಸೋಣ.

           ಒಂದು ಅಂಕಿಅಂಶದಂತೆ 35,783 ಕೆರೆಗಳಿದ್ದ ಕೋಲಾರ ಜಿಲ್ಲೆಯಲ್ಲಿ ಈಗಿರುವ ಕೆರೆಗಳ ಸಂಖ್ಯೆ 2095. ಅದು ಕಡತದಲ್ಲಿ ಮಾತ್ರ! ಹೂಳು ತುಂಬಿವುಗಳು ಆಧಿಕ. ಕೆಲವು ನಾಮಮಾತ್ರಕ್ಕೆ ಮಾತ್ರ. ಇನ್ನೂ ಕೆಲವು ಕೆರೆಗಳು ಬಹುಮಹಡಿ ಕಟ್ಟಡಕ್ಕೆ ಅಡಿಪಾಯಗಳಾಗಿವೆ. ಮೂವತ್ತೈದು ಸಾವಿರಕ್ಕೂ ಅಧಿಕ ಕೆರೆಗಳಿದ್ದ ಕೋಲಾರ ನೀರಿನ ಸಂಪನ್ಮೂಲ ಹೊಂದಬೇಕಿತ್ತು. ಇದ್ದ ಕೆರೆಗಳನ್ನು ದುರಸ್ತಿ ಪಡಿಸಿಲ್ಲ. ಹೇಳಬೇಕಾದವರು ಹೇಳಿಲ್ಲ. ಹೇಳುವವರಿಗೆ ವಾಸ್ತವದ ಅರಿವಿಲ್ಲ. ಸಮಸ್ಯೆಯ ಗಾಢತೆ ಬಂದಾಗ ಕಾಲ ಮಿಂಚಿತ್ತು.

               ಸರಕಾರದ ಕೋಟಿ ಮೊತ್ತದ ಫೈಲಿನಲ್ಲಿ ಬಹುಶಃ ಈ ಕೆರೆಗಳೆಲ್ಲಾ ದುರಸ್ತಿಯಾಗಿರಬಹುದು! ಮನೆಮನೆಯಲ್ಲೂ ನೀರು ಹರಿಯುತ್ತಿರಬಹುದು! ಪ್ರತಿವರುಷವೂ ರಿಪೇರಿಗಾಗಿ ಹಣದ ಹರಿವು ಬರುತ್ತಿರಬಹುದು! ಅವೆಲ್ಲವೂ ವ್ಯವಸ್ಥಿತ ಮಾರ್ಗದಲ್ಲಿ ಹರಿಯುತ್ತಿರುವುದನ್ನು ನೋಡಿಯೂ ನೋಡದಂತಿರುವ ಶ್ರೀಸಾಮಾನ್ಯ ಪ್ರಭು. ಪ್ರಶ್ನಿಸಲಾಗದ ಅಸಹಾಯಕತೆ.

                ರಾಜ್ಯ ಸಣ್ಣ ನೀರಾವರಿ ಇಲಾಖೆಯಡಿ 3579 ಮತ್ತು ಗ್ರಾಮಾಭಿವೃದ್ಧಿ ಇಲಾಖೆಯ ಫೈಲಿನಲ್ಲಿ ಇಪ್ಪತ್ತ ಆರು ಸಾವಿರ ಕೆರೆಗಳಿವೆಯಂತೆ. ನಗರ ಬೆಳೆಯುತ್ತಿದ್ದಂತೆ ಕೆರೆಗಳೂ ಮಾಯವಾಗುತ್ತಿವೆ. ಅಭಿವೃದ್ಧಿಯ ಬೀಸುಹೆಜ್ಜೆಗೆ ಪ್ರಾಕೃತಿಕ ಸಂಪತ್ತು ನಲುಗುತ್ತಿರುವುದಕ್ಕೆ ಬರಗಾಲವೇ ಸಾಕ್ಷಿ. ಕೆರೆಗಳ ಅಭಿವೃದ್ಧಿಗೆ ಸರಕಾರವು 'ಕೆರೆ ಅಭಿವೃದ್ಧಿ ಪ್ರಾಧಿಕಾರ'ವನ್ನು ರಚಿಸುವ ಸುದ್ದಿ ಸಂತೋಷವೇನೋ ಹೌದು.

                ಅಂತರ್ಜಲ ಅಭಿವೃದ್ಧಿಗೆ ಕೆರೆಗಳು ಜೀರ್ಣೋದ್ಧಾರವೊಂದೇ ದಾರಿ. ಸರಣಿ ಕೆರೆಗಳು ನೀರಿನ ನಿಧಿಯನ್ನು ಭೂಒಡಲಲ್ಲಿ ಸಂರಕ್ಷಿಸಿದ ದಿನಗಳಿದ್ದುವಲ್ಲಾ. ಅದಕ್ಕೆ ಕನ್ನ ಹಾಕಿದವರು ಯಾರು? ಕೋಲಾರ ಮಾತ್ರವಲ್ಲ, ಕನ್ನಾಡಿನಾದ್ಯಂತ ಕೃಷಿಗೆ ನೆರವಾಗುತ್ತಿದ್ದ ಕೆರೆಗಳನ್ನು ನುಂಗಿದವರು ಯಾರು? ಕೆರೆಗಳಿದ್ದ ಜಾಗದಲ್ಲೆಲ್ಲಾ ಬಹುಮಹಡಿ ಕಟ್ಟಡಗಳಾಗಿವೆ.

                ಅಳಿದುಳಿದ ಕೆರೆಗಳ ದುರಸ್ತಿ. ನೀರಿನರಿವು. ಜಲಸಂರಕ್ಷಣೆಯ ಪಾಠ. ನೀರಿನ ಮಿತ ಖರ್ಚು ಮತ್ತು ಕೆರೆಗಳನ್ನು ನುಂಗಿದ ನುಂಗಣ್ಣರಿಂದ ಕೆರೆಗಳ ಶಾಪಮೋಕ್ಷ - ಮೊದಲಾದ್ಯತೆಯಲ್ಲಿ ಆಗಬೇಕಾದ ಈ ಕೆಲಸಗಳಿಗೆ ಪ್ರಾಧಿಕಾರವು ದಿಟ್ಟಹಜ್ಜೆಯಿಟ್ಟರೆ ಪಾತಾಳಕ್ಕೆ ಜಿಗಿದ ಬಾಗೀರಥಿಗೆ ಮೇಲೆದ್ದು ಬರಲು ನಿರಾಳ. ಇಷ್ಟಾಗಿಯೂ ಅವಳು ಸ್ಪಂದಿಸಿಲ್ಲ ಎಂತಾದರೆ ನೀರು ಕೊಡಲಾಗದಷ್ಟು ತುಳುನಾಡಿಗರು ಕೃತಘ್ನರಲ್ಲ.