Friday, May 27, 2011

ಹಲಸಿಗೆ ಜಾಗತಿಕ ಮಾನ





ಕೃಷಿಕ, ಹವಾಯ್ ಹಣ್ಣು ಬೆಳೆಗಾರರ ಸಂಘದ ಅಧ್ಯಕ್ಷ ಕೆನ್ ಲವ್ ಪುನಃ ಭಾರತಕ್ಕೆ (ಅದರಲ್ಲೂ ಕನ್ನಾಡಿಗೆ) ಬಂದಿದ್ದಾರೆ. ಈ ಬಾರಿ ಅವರನ್ನು ಸೆಳೆಯುತ್ತಿರುವುದು ಕೇರಳದ ರಾಜಧಾನಿಯಲ್ಲಿ ನಡೆಯುವ ರಾಷ್ಟ್ರೀಯ ಹಲಸು ಉತ್ಸವ.

ಕೆನ್ ಎರಡು ವರುಷ ಹಿಂದೆ ಕನ್ನಾಡಿಗೆ ಬಂದಿದ್ದಾಗ, ಜಲತಜ್ಞ ಶ್ರೀ ಪಡ್ರೆಯವರ ಮನೆಯಲ್ಲಿ ವಾಸ್ತವ್ಯವಿದ್ದರು. ಇವರಮ್ಮ ಸಾವಿತ್ರಿ ಭಟ್ ಇಕ್ಕಿದ ಹಲಸಿನ ದೋಸೆಯನ್ನು ಹೊಟ್ಟೆಗಿಳಿಸಿದ್ದರು. 'ನನ್ನ ಹೆಂಡತಿಗೂ ಈ ರುಚಿಯನ್ನು ಪರಿಚಯಿಸುತ್ತೇನೆ' ಎಂದಿದ್ದರಂತೆ! ಹಿಂದೊಮ್ಮೆ ವಯನಾಡಿನ 'ಉರವು' ಏರ್ಪಡಿಸಿದ ಹಲಸು ಮೇಳದಲ್ಲಿ ಕೆನ್ ಅವರು ಹೇಳಿದ್ದೇನು ಗೊತ್ತೇ - 'ನನ್ನ ಮರಿ ಮಕ್ಕಳನ್ನು ಸಿಟಿ (ನಗರ) ಸೆಳೆಯಲು ನಾನು ಬಿಡುವುದಿಲ್ಲ'.

ಹವಾಯ್ಯ ಕೆನ್ ಅವರನ್ನು ಹಲಸು ಆಕರ್ಶಿಸಿದೆ. ನಾವು ನಿರ್ಲಕ್ಷಿಸುತ್ತಿದ್ದೇವೆ. ಒಂದು ಕಾಲಘಟ್ಟದಲ್ಲಿ ಬದುಕನ್ನು ಆಧರಿಸಿದ ಹಲಸನ್ನು ಮರೆಯುತ್ತಿದ್ದೇವೆ. ಬೆಳೆವ ಹಲಸಿನಲ್ಲಿ ತಿನ್ನಲು ಕೂಡಾ ಬಳಕೆಯಾಗದೆ ಶೇ.60ರಷ್ಟು ಹಲಸು ಹಾಳಾಗುತ್ತಿದೆ! ಹಿತ್ತಿಲಿನಿಂದ ಅಂಗಳಕ್ಕೆ ಬರುವುದೇ ಇಲ್ಲ.

ಇಲ್ನೋಡಿ. ಶ್ರೀಲಂಕಾದಲ್ಲಿ ಹಲಸು 'ಅನ್ನದ ಮರ'. ಬಳಕೆ ಮತ್ತು ಮೌಲ್ಯವರ್ಧನೆಯಲ್ಲಿ ಮುಂದು. 'ಎಂತಹುದೇ ಬರ ಬಂದರೂ ಹಸಿವಿನಿಂದ ನಾವು ಕಂಗೆಡಲಾರೆವು. ಕಾರಣ, ನಮ್ಮಲ್ಲಿ ಅರ್ಧ ಲಕ್ಷ ಹೆಕ್ಟೇರ್ ಹಲಸಿನ ಕೃಷಿ ಇದೆ' ಎನ್ನುವ ಅಲ್ಲಿನ ಹಿರಿಯ ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರ ಮಾತು ಅಲ್ಲಿನ ಆಹಾರ ಸುರಕ್ಷತೆಗೆ ಕನ್ನಡಿ.

ಮಲೇಶ್ಯಾ ದೇಶವೂ ಹಲಸಿನ ಕೃಷಿ, ತಳಿ ಅಭಿವೃದ್ಧಿ ಮತ್ತು ಮಾರುಕಟ್ಟೆಗೆ ತುಂಬಾ ಪ್ರಾಶಸ್ತ್ಯ ನೀಡಿದೆ. ಹದಿನೇಳೇ ತಿಂಗಳಿನಲ್ಲಿ ಫಲ ನೀಡುವ 'ಸಿಜೆ 3' ಇಲ್ಲಿನ ಜನಪ್ರಿಯ ತಳಿ. ಮುಂಚೂಣಿ ದೇಶಗಳಾದ ವಿಯೆಟ್ನಾಂ, ಫಿಲಿಪೈನ್, ಥೈಲ್ಯಾಂಡ್ ಹಲಸಿನ ವಿಚಾರದಲ್ಲಿ ಮುಂದಿದೆ.

ತಮಿಳುನಾಡಿನ ಪನ್ರುತ್ತಿಯಲ್ಲಿ ಒಂದೆಕರೆಯಿಂದ ಇಪ್ಪತ್ತೆಕರೆ ಹಲಸಿನ ತೋಟವಿರುವ, ಹಲಸೇ ಅನ್ನದ ಬಟ್ಟಲಾಗಿರುವ ಕುಟುಂಬಗಳು ನೂರಾರಿವೆ. ದೇಶದಲ್ಲಿ ಬೇರೆಲ್ಲೂ ಇಲ್ಲದ ಹಲಸಿನದೇ ಏಕಕೃಷಿ ಪನ್ರುತ್ತಿಯ ವಿಶೇಷ.

ಸಾಮಾನ್ಯವಾಗಿ ಹೋಟೆಲ್ಗಳು ಮಾವು ಉತ್ಸವ, ದ್ರಾಕ್ಷಿ ಉತ್ಸವ.. ಮೊದಲಾದ 'ಹಣ ತರುವ' ಉತ್ಸವಗಳನ್ನು ಆಚರಿಸುತ್ತಿವೆ. ಮುಂಬಯಿಯ 'ಮಚಾನ್ ಮಲಾಡ್' ಎಂಬ ತ್ರಿತಾರಾ ರೆಸ್ಟೋರೆಂಟ್ನಲ್ಲಿ 'ಜಾಕ್ಫ್ರುಟ್ ಫೆಸ್ಟಿವಲ್' ನಡೆದಿದೆ ಎಂದರೆ ನಂಬ್ತೀರಾ? ವಾಣಿಜ್ಯ ಮಟ್ಟಕ್ಕೆ ತೆರೆದುಕೊಳ್ಳದ ಹಲಸಿನ ಅಡುಗೆ ಪ್ರಯೋಗ ಮುಂಬಯಿಯ ಚೊಚ್ಚಲ ಪ್ರಯತ್ನದಲ್ಲೇ ಜಯಭೇರಿ ಹೊಡೆಯಿತು.

ಹಲಸಿನ ಕುರಿತು ಮೊಟ್ಟ ಮೊದಲ ಬಾರಿಗೆ ಮೇಳವನ್ನು ಮಾಡಿದ ಕೀರ್ತಿ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರಕ್ಕೆ ಸಲ್ಲಬೇಕು. 2006ರಲ್ಲಿ ಕೇರಳದ ಉರವು ಹಲಸು ಮೇಳವನ್ನು ನಡೆಸಿತ್ತು. ಬಳಿಕ ಶಿರಸಿಯ ಕದಂಬ ಸಂಸ್ಥೆಯು ಎರಡು ದಿವಸದ ಮೇಳವನ್ನು ಏರ್ಪಡಿಸಿತ್ತು. ನಂತರ ಮೇಳಗಳ ಮಾಲೆ! ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕದ ತಟ್ಟುವಷ್ಟು ಮೇಳಗಳು ಪರಿಣಾಮ ಬೀರಿವೆ.

ನಮ್ಮಲ್ಲಿ ಅಲ್ಲಿಲ್ಲಿ ಕೆಲವೆಡೆ ಹಲಸಿನ ಅಭಿವೃದ್ಧಿ, ಮೌಲ್ಯವರ್ಧನೆಯ ಚಿಕ್ಕಪುಟ್ಟ ಯತ್ನಗಳಾಗುತ್ತಿವೆ. ಇಂತಹ ಚಿಕ್ಕ ಕೆಲಸ ಮಾಡಿದವರು ಹಲವರಿದ್ದಾರೆ. ಇವರೊಳಗೆ ಪರಿಸ್ಪರ ಪರಿಚಯವಾಗಲೀ, ಬೇರೆ ಕಡೆ ಏನು ನಡೆದಿದೆ ಎಂಬ ವಿವರಗಳಾಗಲೀ ಪರಸ್ಪರ ಗೊತ್ತೇ ಇಲ್ಲ. ದೇಶಮಟ್ಟದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೂ ದೂರ. ಇಂತಹವರನ್ನೆಲ್ಲಾ ಒಟ್ಟುಗೂಡಿಸುವ ಹಿನ್ನೆಲೆಯಲ್ಲಿ ಜೂನ್ 4, 5, 6ರಂದು ತಿರುವನಂತಪುರದಲ್ಲಿ 'ರಾಷ್ಟ್ರೀಯ ಹಲಸು ಹಬ್ಬ' ನಡೆಯಲಿದೆ.

ಮೂರು ದಿವಸ ನಡೆಯುವ ಹಬ್ಬದಲ್ಲಿ ಮೌಲ್ಯವರ್ಧನೆಯ ತರಬೇತಿ, ಖಾದ್ಯ ಪ್ರದರ್ಶನ-ಮಾರಾಟ, ವಿಚಾರಗೋಷ್ಠಿ, ಹಬ್ಬದಂಗವಾಗಿ ನಗರದ ವಿವಿಧ ಪ್ರದೇಶದಲ್ಲಿ ಗಣ್ಯರಿಂದ ಹಲಸಿನ ಗಿಡ ನೆಡುವಿಕೆ, ಛಾಯಾಚಿತ್ರ ಪ್ರದರ್ಶನ. ಹಲಸಿನ ಆಸಕ್ತಿಯುಳ್ಳ ವಿಜ್ಞಾನಿಗಳು, ರೈತರು, ಮೌಲ್ಯವರ್ಧಕರು ಸೇರಿಕೊಂಡು ಒಕ್ಕೂಟ ರಚಿಸುವ ಯೋಜನೆಯಿದೆ. ಈಗಾಗಲೇ ಎರಡು ಬ್ಲಾಗ್ಗಳಲ್ಲಿ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ.

ಹಬ್ಬದಲ್ಲಿ ರಾಷ್ಟ್ರೀಯ ತೋಟಗಾರಿಕಾ ಬೋರ್ಡಿನ ನಿರ್ವಾಹಕ ನಿರ್ದೇಶಕರು, ಕೇಂದ್ರ-ಕೇರಳದ ಸಚಿವರು ಭಾಗವಹಿಸುತ್ತಾರೆ. ಈಗಾಗಲೇ ಸಿದ್ಧತಾ ಮೀಟಿಂಗ್ಗಳು ನಡೆದಿದ್ದು, ಹಬ್ಬದ ಪ್ರತಿಯೊಂದು ಕಲಾಪಗಳ ಯಶಸ್ಸಿನತ್ತ ನಿಗಾ ವಹಿಸುತ್ತಿದ್ದಾರೆ. ತಿರುವನಂತಪುರದ ಹೃದಯಭಾಗದಲ್ಲಿರುವ 'ಕನಕಕುನ್ನು ಅರಮನೆ'ಯಲ್ಲಿ ಹಬ್ಬ ನಡೆಯಲಿದೆ. ಶಾಂತಿಗ್ರಾಮ ಎಂಬ ಎನ್ಜಿಓ ಹಬ್ಬದ ಸಾರಥ್ಯವನ್ನು ವಹಿಸಿದೆ. (ಸಂಪರ್ಕ : 0471-2269780, 6452511 (M) 09287548234, jackfruitfestkerala@gmail.com, jackfruitfestkerala@gmail.com, http://jackfruitfestkerala.wordpress.com)

ಕೇರಳದ ವಯನಾಡಿನ ಉರವು ಸಂಸ್ಥೆಯು ಮೇ 20ರಿಂದ 23ರ ತನಕ ಕಲ್ಪೆಟ್ಟಾದಲ್ಲಿ ಹಲಸು ಮೇಳವನ್ನು ಆಯೋಜಿಸಿತ್ತು. ಇತ್ತ ಶಿರಸಿಯ ಕದಂಬವು ಜೂನ್ 11, 12ರಂದು ಮೇಳ ಏರ್ಪಡಿಸಿದೆ. ಹಲಸಿಗೆ ಮರುಚೇತನ ಕೊಡುವ ಕಾರ್ಯದಲ್ಲಿ ಸರಕಾರೇತರ ಸಂಸ್ಥೆಗಳು ಮತ್ತು ಕೃಷಿಕರೇ ಮುಂದೆ ಬಂದಿರುವುದು ಗಮನಾರ್ಹ.

ನಮ್ಮ ಸುತ್ತಮುತ್ತ ಹಲಸಿನ ಕುರಿತು ಸದ್ದಿಲ್ಲದೆ ಸಾಕಷ್ಟು ಕೆಲಸಗಳಾಗುತ್ತಿವೆ. ಮರದಲ್ಲೇ ಹಲಸನ್ನು ಕೊಳೆಯಲು ಬಿಡದೆ, ಅದಕ್ಕೆ ಮೌಲ್ಯವನ್ನು ತಂದು ಕೊಡುವ ಕೆಲಸಗಳಾಗುತ್ತಿವೆ. ಹಲಸು ಆರ್ಥಿಕ ಬೆಳೆಯಾಗುವ ಸಾಕಷ್ಟು ಅವಕಾಶಗಳು ಕಣ್ಣೆದುರೇ ಇವೆ. ಆದರೆ ಇದು ನಮ್ಮ ಸರಕಾರಿ-ಆಧಿಕಾರಿಗಳಿಗೆ ಯಾವಾಗ ಅರ್ಥವಾದೀತು?

(ಚಿತ್ರಗಳು: ’ಶ್ರೀ’ಪಡ್ರೆ)

Thursday, May 19, 2011

ಕಾಡು ಹಣ್ಣಿಗೆ ನಾಡಲ್ಲಿ ಮಾನ

(ಇಂದಿನ ಪ್ರಜಾವಾಣಿಯ ಕೃಷಿಯ ಪುರವಣಿಯಲ್ಲಿ ಪ್ರಕಟವಾದ ಲೇಖನ - ಶೀರ್ಷಿಕೆ - ಪುನರ್ಪುಳಿ ರಾಷ್ಟ್ರೀಯ ಕಾರ್ಯಾಗಾರ)

ಪುನರ್ಪುಳಿ (ಕೋಕಂ) ಹಣ್ಣಿಗೆ ಈಗ ರಾಷ್ಟ್ರೀಯ ಮಹತ್ವ ಬಂದಿದೆ. ಮೇ 6 ಮತ್ತು 7ರಂದು ಗೋವಾದಲ್ಲಿ ಪುನರ್ಪುಳಿಯ ರಾಷ್ಟ್ರೀಯ ಕಾರ್ಯಾಗಾರ ನಡೆಯಿತು. ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳದ ಪ್ರತಿನಿಧಿಗಳು ಭಾಗವಹಿಸಿದ್ದರು.

ಪುನರ್ಪುಳಿ ಅರಣ್ಯ ಉತ್ಪತ್ತಿಗಳಲ್ಲಿ ಒಂದು. ಅದನ್ನೇ ಮುಖ್ಯ ಬೆಳೆಯಾಗಿ ಬೆಳೆಯುವ ಪ್ರಯತ್ನ ವಿರಳವಾಗಿ ನಡೆಯುತ್ತಿದೆ. ಶೇ.70ರಷ್ಟು ಹಣ್ಣುಗಳು ನೆಲಕ್ಕೆ ಬಿದ್ದು ಹಾಳಾಗಿ ಹೋಗುತ್ತದೆ. ಒಂದು ಮೂಲದ ಪ್ರಕಾರ ನಮ್ಮ ದೇಶದಲ್ಲಿ ಪುನರ್ಪುಳಿ ಬೆಳೆಯುವ ಪ್ರದೇಶ ಕೇವಲ ಒಂದು ಸಾವಿರ ಹೆಕ್ಟೇರ್ ಎಂಬ ಅಂದಾಜಿದೆ. ನಾಲ್ಕು ಸಾವಿರ ಐನೂರು ಮೆಟ್ರಿಕ್ ಟನ್ ಹಣ್ಣು ಉತ್ಪಾದನೆಯಾಗುತ್ತಿದೆ. ಇದರ ಮಹಾರಾಷ್ಟ್ರದ ಪಾಲು ದೊಡ್ಡದು.

ಪುನರ್ಪುಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಮಾಡುವುದು, ಗಿಡಗಳ ಅಭಿವೃದ್ಧಿ, ಮೌಲ್ಯವರ್ಧನೆ ಮಾಡುವುದು ಕಾರ್ಯಾಗಾರದ ಉದ್ದೇಶ. ಪುನರ್ಪುಳಿ ಕುರಿತು ಈ ವರೆಗಿನ ಸಂಶೋಧನೆಗಳು, ತಳಿ ಅಭಿವೃದ್ಧಿ, ಅಂಗಾಂಶ ಕಸಿ, ಕಸಿ ಅಭಿವೃದ್ಧಿ, ಹಣ್ಣಿನಲ್ಲಿರುವ ಅಂಶಗಳು, ಸಿರಪ್ ತಯಾರಿಕೆ ಇತ್ಯಾದಿ ವಿಚಾರಗಳು ಪ್ರಸ್ತಾಪವಾದುವು.

ಪುಣೆಯ ಮುಕುಂದ್ ಭಾವೆ ಅವರ ಅಪರಾಂತ್ ಆಗ್ರೋ ಫುಡ್ಸ್ ಇದರ ಕೋಕಂನ 'ಟೆಟ್ರಾಪ್ಯಾಕ್' ಸೆಮಿನಾರಿನ ಹೈಲೈಟ್. ಪುಣೆಯ ಹರ್ಡೀಕರ್ ಟೆಕ್ನಾಲಜೀಸ್ ಇದರ ಸಂಜಯ್ ಓರ್ಪೆ ಇವರ ಕೋಕಂಗೆ ಮೌಲ್ಯವರ್ಧನೆ ಮಾಡುವ ವಿಷಯದ ಬಗ್ಗೆ ಗಮನ ಸೆಳೆದರು. ಕೋಕಂ ಪೌಡರ್, ಶರಬತ್ ಪೌಡರ್, ಸೋಲ್ಕಡಿ ಪೌಚ್, ಕೋಕಂ ಸೋಡಾ.. ಹೀಗೆ ಎಂಭತ್ತಕ್ಕೂ ಮಿಕ್ಕಿ ಉತ್ಪನ್ನಗಳ ತಯಾರಿಕೆ. ಅದರಲ್ಲಿ ಮೂವತ್ತರಷ್ಟು ತರಕಾರಿಯ ಮೌಲ್ಯವರ್ಧನೆ. ಡಾ.ಜೋನ್ ರಾಡ್ರ್ರಿಗಸ್ರ ಕೋಕಂ ವೈನ್ ಕುರಿತಾದ ಮಾಹಿತಿಗಳು ಕುತೂಹಲ ಮೂಡಿಸಿದುವು. ರತ್ನಗಿರಿಯ ದೀಪಶ್ರೀ ಪ್ರಾಡಕ್ಟ್ಸ್ ಅವರ ಪುನರ್ಪುಳಿ ಚಾಕೋಲೇಟ್, ಬಟರ್, ಕೋಕಂ ಬೀ, ಸಿಪ್ಪೆ, ಮೋದಕಗಳ ಪ್ರದರ್ಶನವಿತ್ತು

ಕರ್ನಾಟಕದ ಪ್ರತಿನಿಧಿಗಳಾಗಿ ಭಾಗವಹಿಸಿದ್ದ ಶಿರಸಿಯ ವಿಧೀಶ ಭಟ್, ಶಿರಸಿ ಮಂಡೆಮನೆಯ ಶ್ರೀಪಾದ ಆರ್. ಹೆಗಡೆ ಮತ್ತು ಮಂಗಳೂರಿನ ಪ್ರಕೃತಿ ಫುಡ್ಸ್ನ ಪಿ.ಶ್ಯಾಮಲಾ ಶಾಸ್ತ್ರಿಯವರು ತಮ್ಮ ಕೋಕಂ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಪುನರ್ಪುಳಿ ಹಣ್ಣಿನ ಬೆಳೆ, ಇಳುವರಿ, ಉತ್ಪನ್ನಗಳು, ಹಣ್ಣಿನ ಕುರಿತಾಗಿ ಇರುವ ಜನರ ಅಭಿಪ್ರಾಯಗಳನ್ನು ಶ್ರೀ ಪಡ್ರೆ ವಿವರಿಸಿದರು.

ವೆಸ್ಟರ್ನ ಘಾಟ್ಸ್ ಕೋಕಂ ಪೌಂಡೇಶನ್ ಆಯೋಜಿಸಿದ ಮೂರನೇ ಸಮ್ಮೇಳನವಿದು. ಗೋವಾ ವಿವಿಯು ಪೌಂಡೇಶನ್ ಜತೆ ಕೈಜೋಡಿಸಿದೆ. ಪುನರ್ಪುಳಿ ಕುರಿತಾದ ಬ್ಲಾಗ್, ಜಾಲತಾಣಗಳ ಸೃಷ್ಟಿ ಹಾಗೂ ಕೋಕಂಗೆ ಮೌಲ್ಯವರ್ಧನೆ ಮಾಡಿದ ಆಸಕ್ತರನ್ನು ಒಂದೆಡೆ ಸೇರಿಸುವ ಕಾರ್ಯಾಗಾರದ ಉದ್ದೇಶವಾಗಿತ್ತು ಎಂದು ವೆಸ್ಟರ್ನ ಘಾಟ್ಸ್ ಕೋಕಂ ಪೌಂಡೇಶನ್ನ ಅಧ್ಯಕ್ಷ ಡಾ.ಅಜಿತ್ ಶಿರೋಡ್ಕರ್ ಹೇಳಿದರು.

ಪುನರ್ಪುಳಿಯ ಸಿರಪ್, ಸಿಪ್ಪೆ, ತುಪ್ಪ ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳು ಕರ್ನಾಟಕದ ಹೊರಗೆ ತಯಾರಾಗುತ್ತಿವೆ. ನಮ್ಮಲ್ಲಿ ಯಾಕಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನಗಳು ನಡೆಯಬೇಕಿದೆ.

------------------------------------------------------------------------------------------------
(ನನ್ನ ಪೂರ್ಣ ಲೇಖನ)

ಪುನರ್ಪುಳಿ (ಕೋಕಂ) ಹಣ್ಣಿಗೆ ಈಗ ರಾಷ್ಟ್ರೀಯ ಮಹತ್ವ. ಮೇ 6 ಮತ್ತು 7ರಂದು ಗೋವಾದಲ್ಲಿ ಪುನರ್ಪುಳಿಯ ರಾಷ್ಟ್ರೀಯ ಕಾರ್ಯಾಗಾರ. ಮುಖ್ಯವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳದ ಪ್ರತಿನಿಧಿಗಳು ಭಾಗಿಯಾಗಿದ್ದರು.

ಪುನರ್ಪುಳಿ ಕಾಡುತ್ಪತ್ತಿ. ಅದನ್ನೇ ಮುಖ್ಯ ಕೃಷಿಯನ್ನಾಗಿ ಮಾಡುವ ಪ್ರಯತ್ನ ವಿರಳವಾಗಿ ನಡೆಯುತ್ತಿದೆ. ಶೇ.70ರಷ್ಟು ಹಣ್ಣು ಬಿದ್ದು ಹಾಳಾಗಿ ಹೋಗುತ್ತದೆ. ಒಂದು ಅಂಕಿಅಂಶದಂತೆ ದೇಶದ ಪುನರ್ಪುಳಿ ಬೆಳೆವ ಪ್ರದೇಶ ಕೇವಲ ಒಂದು ಸಾವಿರ ಹೆಕ್ಟೇರ್. ನಾಲ್ಕು ಸಾವಿರ ಐನೂರು ಮೆಟ್ರಿಕ್ ಟನ್ ಹಣ್ಣು ಉತ್ಪಾದನೆ. ಇದರ ಬೆಳೆಯಲ್ಲಿ ಮಹಾರಾಷ್ಟ್ರ ಮುಂದು.

'ಕೋಕಂಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಮಾಡುವುದು, ಪುನರ್ಪುಳಿ ಗಿಡಗಳ ಅಭಿವೃದ್ಧಿ, ಮೌಲ್ಯವರ್ಧನೆ' ಆಶಯದ ಎರಡು ದಿವಸದ ಸಮ್ಮೇಳನವು ಕೋಕಂನ ವಿವಿಧ ಸಾಧ್ಯತೆಗಳನ್ನು ತೆರೆದಿಟ್ಟಿತು. ಪವರ್ ಪಾಯಿಂಟ್ ಮೂಲಕ ವಿಚಾರಗಳ ಪ್ರಸ್ತುತಿ.
ಪುನರ್ಪುಳಿ ಕುರಿತು ಈ ವರೆಗಿನ ಸಂಶೋಧನೆಗಳು, ತಳಿ ಅಭಿವೃದ್ಧಿ, ಅಂಗಾಂಶ ಕಸಿ, ಕಸಿ ಅಭಿವೃದ್ಧಿ, ಹಣ್ಣಿನಲ್ಲಿರುವ ಕಂಟೆಂಟ್ಗಳು, ಸಿರಪ್ ತಯಾರಿ ಬಗೆ.. ಹೀಗೆ ವಿವಿಧ ಮಜಲುಗಳಲ್ಲಿ ವಿಚಾರ ಪ್ರಸ್ತುತಿ.

ಪುಣೆಯ ಮುಕುಂದ್ ಭಾವೆ ಅವರ ಅಪರಾಂತ್ ಆಗ್ರೋ ಫುಡ್ಸ್ ಇದರ ಕೋಕಂನ 'ಟೆಟ್ರಾಪ್ಯಾಕ್' ಸೆಮಿನಾರಿನ ಹೈಲೈಟ್. ಪುಣೆಯ ಹರ್ಡೀಕರ್ ಟೆಕ್ನಾಲಜೀಸ್ ಇದರ ಸಂಜಯ್ ಓರ್ಪೆ ಇವರ ಸೆಷನ್ ಮೌಲ್ಯವರ್ಧನೆಗೆ ಕನ್ನಡಿಯಾಗಿತ್ತು. ಕೋಕಂ ಪೌಡರ್, ಶರಬತ್ ಪೌಡರ್, ಸೋಲ್ಕಡಿ ಪೌಚ್, ಕೋಕಂ ಸೋಡಾ.. ಹೀಗೆ ಎಂಭತ್ತಕ್ಕೂ ಮಿಕ್ಕಿ ಉತ್ಪನ್ನಗಳನ್ನು ತಯಾರಿ. ಅದರಲ್ಲಿ ಮೂವತ್ತರಷ್ಟು ತರಕಾರಿಯ ಮೌಲ್ಯವರ್ಧನೆ. ಡಾ.ಜೋನ್ ರಾಡ್ರ್ರಿಗಸ್ರ ಕೋಕಂ ವೈನ್ ಕುರಿತಾದ ವಿಚಾರಗಳು ಕುತೂಹಲ ಮೂಡಿಸಿದುವು.

ರತ್ನಗಿರಿಯ ದೀಪಶ್ರೀ ಪ್ರಾಡಕ್ಟ್ಸ್ ಅವರ ಪುನರ್ಪುಳಿ ಚಾಕೋಲೇಟ್, ಬಟರ್, ಕೋಕಂ ಬೀ, ಸಿಪ್ಪೆ, ಮೋದಕಗಳ ಪ್ರದರ್ಶನ. ಎಲ್ಲದಕ್ಕೂ ಆಕರ್ಷಕ ಪ್ಯಾಕಿಂಗ್. ಚಾಕೋಲೇಟ್ ಎಲ್ಲರಿಗೂ ಉಚಿತ.

ಕರ್ನಾಟಕದಿಂದ - ಶಿರಸಿಯ ವಿಧೀಶ ಭಟ್, ಶಿರಸಿ ಮಂಡೆಮನೆಯ ಶ್ರೀಪಾದ ಆರ್. ಹೆಗಡೆ ಮತ್ತು ಮಂಗಳೂರಿನ ಪ್ರಕೃತಿ ಫುಡ್ಸ್ ಇದರ ಪಿ.ಶ್ಯಾಮಲಾ ಶಾಸ್ತ್ರಿಯವರು - ತಮ್ಮ ಕೋಕಂ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಪುನರ್ಪುಳಿ ಹಣ್ಣಿನ ಬೆಳೆ, ಇಳುವರಿ, ಉತ್ಪನ್ನಗಳು, ಹಣ್ಣಿನ ಕುರಿತಾಗಿ ಇರುವ ಜನರ ಮೈಂಡ್ ಸೆಟ್ಗಳನ್ನು ಶ್ರೀ ಪಡ್ರೆಯವರು ವಿವರಿಸಿದರು.

'ಇನ್ನಷ್ಟು ಕೋಕಂನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಬೇಕಿತ್ತು' ಎಂದು ಶಿರಸಿಯ ಎಂ.ಆರ್.ಹೆಗಡೆ ಅಭಿಪ್ರಾಯ. 'ಮೌಲ್ಯವರ್ಧಕರೆಲ್ಲಾ ಇಲ್ಲಿ ಸೇರುತ್ತಿದ್ದರೆ ಪರಸ್ಪರ ಕೊಂಡಿ ಏರ್ಪಟ್ಟು ಮಾರಾಟ ಮತ್ತು ಗುಣಮಟ್ಟದ ವೃದ್ಧಿಗೆ ಸಹಾಯಕವಾಗುತ್ತಿತ್ತು' ಎನ್ನುತ್ತಾರೆ ಬಾಲಚಂದ್ರ ಹೆಗಡೆ ಸಾಯಿಮನೆ.

ವೆಸ್ಟರ್ನ ಘಾಟ್ಸ್ ಕೋಕಂ ಪೌಂಡೇಶನ್ ಆಯೋಜಿಸಿದ ಮೂರನೇ ಸಮ್ಮೇಳನವಿದು. 2001ರಲ್ಲಿ ವೆಂಗೂರ್ಲ ಮತ್ತು 2005ರಲ್ಲಿ ಗೋವಾದಲ್ಲಿ ಎರಡನೇ ಸಮ್ಮೇಳನ ಜರುಗಿತ್ತು. ಗೋವಾ ವಿವಿಯು ಪೌಂಡೇಶನ್ ಜತೆ ಕೈಜೋಡಿಸಿದೆ.

ಪುನರ್ಪುಳಿ ಕುರಿತಾದ ಬ್ಲಾಗ್, ಜಾಲತಾಣಗಳ ರೂಪೀಕರಣ, ಈಗಾಗಲೇ ಮೌಲ್ಯವರ್ಧನೆ ಮಾಡಿದ ಸಾಧಕರನ್ನು ಒಂದೆಡೆ ಸೇರಿಸುವ ಕುರಿತು ಬೇರೆ ಬೇರೆ ಪ್ರದೇಶದಲ್ಲಿ ಸಮಾವೇಶ, ಸಂಶೋಧನೆಗಳ ವಿಸ್ತರಣೆ, ತೋಟ ವಿಸ್ತರಣೆ.. ಸಮ್ಮೇಳನದ ಕೊನೆಗೆ ವೆಸ್ಟರ್ನ್ ಘಾಟ್ಸ್ ಕೋಕಂ ಪೌಂಡೇಶನ್ನ ಅಧ್ಯಕ್ಷ ಡಾ.ಅಜಿತ್ ಶಿರೋಡ್ಕರ್ ಅಭಿಮತ.

'ಎಲ್ಲರೂ ಕೋಕಂನತ್ತ ಮುಖಮಾಡಿದರೆ ಹುಣಸೆ ಹಣ್ಣನ್ನು ಗೆಟ್ಔಟ್ ಮಾಡಬಹುದು' ಎಂದು ದಾಪೋಲಿಯ ಡಾ.ಸಿ.ಡಿ.ಪವಾರ್ ತಮ್ಮ ವಿಚಾರಪ್ರಸ್ತುತಿಯಲ್ಲಿ ಹೇಳಿದಾಗ, ಜತೆಗಿದ್ದ ಬಾಲು ಹೆಗಡೆ ಸಾಯಿಮನೆ ನಕ್ಕರು!

ಸಮ್ಮೇಳನದ ಕೊನೆಗೆ ಮಂಗಳೂರಿನ ತರಕಾರಿ ವ್ಯಾಪಾರಿ ಡೇವಿಡ್, 'ಈ ವರುಷ ನಮ್ಮಲ್ಲಿ ಒಂದು ಕಿಲೋ ತಾಜಾ ಪುನರ್ಪುಳಿ ಹಣ್ಣಿಗೆ ಕಿಲೋಗೆ ಅರುವತ್ತು ರೂಪಾಯಿ, ಸಿಪ್ಪೆಗೆ ಒಂದು ನೂರು ಇಪ್ಪತ್ತು' ಎಂಬ ಅಚ್ಚರಿಯ ಮಾಹಿತಿ.

ಪುನರ್ಪುಳಿಯ ಸಿರಪ್, ಸಿಪ್ಪೆ, ತುಪ್ಪ ಇವಿಷ್ಟು ಇಲ್ಲಿ ಸಿದ್ಧವಾಗುತ್ತಿದ್ದರೂ, ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳು ಕನ್ನಾಡಿನ ಆಚೆಗೆ ತಯಾರಾಗುತ್ತಿದೆ. ನಮ್ಮಲ್ಲಿ ಯಾಕಾಗುತ್ತಿಲ್ಲ? ಉತ್ತೇಜನದ ಕೊರತೆ.

Tuesday, May 17, 2011

ಬೇಸಿಗೆಯ ನೆಂಟ 'ಪುನರ್ಪುಳಿ'

ಈಚೆಗೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. 'ಬಿರಿಂಡಾ ಜ್ಯೂಸ್' ಮೊದಲಾತಿಥ್ಯ. ಗಾಢ ಕೆಂಪು ಬಣ್ಣದ ಜ್ಯೂಸ್ ಕುಡಿದಾದ ಬಳಿಕ ನಾಲಗೆ ಏನೋ ದಡ್ಡುಕಟ್ಟಿದ (ದೊರಗಾದ) ಅನುಭವ. ಪುನರ್ಪುಳಿಯ ಯಾವ ಸ್ವಾದವೂ ಇರಲಿಲ್ಲ. ಬಳಿಯಲ್ಲಿದ್ದ ಪ್ರಕಾಶ್ 'ಅದು ಕಲಬೆರಕೆಯೇ ಇರಬೇಕು. ನಾವು ನೀರು ಕುಡಿದೇ ಸುಧಾರಿಸುವಾ' ಎಂದು ಪಿಸುಗುಟ್ಟಿದರು.

ಮಂಗಳೂರಿನ ಸೆಂಟ್ರಲ್ ಮಾರ್ಕೆಟಿನ ತರಕಾರಿ ವ್ಯಾಪಾರಿ ಡೇವಿಡ್ ಹೇಳಿದ ಮಾತು ನೆನಪಾಯಿತು - 'ಇಲ್ಲಿಗೆ ತರಕಾರಿಗೆಂದು ಬರುವವರಿಗೆ ನಾನೇ ಸಾಕಷ್ಟು ಬಾರಿ ಹೇಳುತ್ತಿದ್ದೇನೆ. ಗಾಢ ಬಣ್ಣದ ರೆಡಿಮೇಡ್ ಜ್ಯೂಸ್ ಬಹುತೇಕ ಸಾಚಾ ಅಲ್ಲ. ವ್ಯಾಪಾರದ ಉದ್ದೇಶ ಅಲ್ವೇ, ಏನೇನೋ ಬಣ್ಣ ಸೇರಿಸುತ್ತಾರೆ. ಅದಕ್ಕಾಗಿ ತಾಜಾ ಹಣ್ಣನ್ನೇ ಒಯ್ದು, ಮನೆಯಲ್ಲೇ ಜ್ಯೂಸ್ ಮಾಡಿ ಕುಡಿಯಿರಿ. ಹೊಟ್ಟೆಗೆ ತಂಪು, ಆರೋಗ್ಯಕ್ಕೂ ಒಳ್ಳೆಯದು.'

ಎರಡು ತಿಂಗಳ ಹಿಂದೆ ನಾನು ಹೊಸ ಬಾಡಿಗೆ ಮನೆಗೆ ಗಂಟು ಮೂಟೆ ಕಟ್ಟಿದ್ದೆ. ಅಲ್ಲಿ ಒಂದು ಪುನರ್ಪುಳಿ ಮರವಿತ್ತು. ಹಣ್ಣುಗಳು ಸಾಕಷ್ಟಿದ್ದುವು. 'ಜ್ಯೂಸ್ ಮಾಡೋಣ' ಎನ್ನುತ್ತಾ ಮಗಳು ಸುಕನ್ಯಾಳಿಂದ ಹಣ್ಣಿನ ಜ್ಯೂಸ್ ತಯಾರಿ. ಕೊನೆಗೆ ಪತ್ನಿ ವೀಣಾ ಹಣ್ಣು ಕೊಯಿದು, ಪ್ರತಿ ಹಣ್ಣನ್ನು ಎರಡು ಭಾಗ ಮಾಡಿ, ಅದರ ಮೇಲೆ ಸಕ್ಕರೆಯನ್ನು ಮಿಶ್ರ ಮಾಡಿ ಬಿಸಿಲಲ್ಲಿಟ್ಟಳು. 'ನಾಳೆಯಿಂದ ನಿಮಗೆ ಬಾಟಲ್ ಜ್ಯೂಸ್ ಇಲ್ಲ. ಪುನರ್ಪುಳಿಯದ್ದೇ ಜ್ಯೂಸ್' ಎನ್ನುತ್ತಾ, 'ಇದು ಈಗ ತಾನೇ ಹಣ್ಣಿನಿಂದ ಮಾಡಿದ ತಾಜಾ ಜ್ಯೂಸ್, ಕುಡಿಯಿರಿ. ಪಿತ್ತ ಇಳಿಯುತ್ತದೆ' ಎಂದು ನೀಡಿದಾಗ ನಿಜಕ್ಕೂ 'ಪಿತ್ತ ಏರಿತ್ತು'!

'ಮಂಗಳೂರಿನ ಹೋಟೆಲ್ಗಳಲ್ಲಿ ಬಹಳ ವರುಷದ ಹಿಂದೆ ಗ್ರಾಹಕರ ಎದುರೇ ಪುನರ್ಪುಳಿ ಹಣ್ಣನ್ನು ಕ್ರಷ್ ಮಾಡಿ ಜ್ಯೂಸ್ ಮಾಡಿ ಕೊಡುತ್ತಿದ್ದರು' ಎಂದು ಡೇವಿಡ್ ಹೇಳಿದ ಮಾತು ನೆನಪಾಗಿ ಹೊಟ್ಟೆಗಿಳಿಸಿಕೊಂಡೆ. 'ಬೇಸಿಗೆಯ ನೆಂಟ' ಎಂಬ ಮಾತು ನಿಜಕ್ಕೂ ಅನ್ವರ್ಥ.

ಕರಾವಳಿಯಲ್ಲಿ ಈ ಹಣ್ಣಿಗೆ ‘ಪುನರ್ಪುಳಿ’ ಎಂಬ ಹೆಸರಿದ್ದರೆ, ಮಲೆನಾಡಿನಲ್ಲಿ 'ಮುರುಗಲು' ಹಣ್ಣು. ಇಂಗ್ಲಿಷ್ ಹೆಸರು ಕೋಕಂ. ಸಸ್ಯಶಾಸ್ತ್ರೀಯ ಹೆಸರು 'ಗಾರ್ಸೀನಿಯಾ ಇಂಡಿಕಾ'. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ ದಕ್ಷಿಣಕ್ಕೆ; ಕೇರಳದ ಕಾಸರಗೋಡು ವರೆಗೆ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಕಾಡು ಬೆಳೆ. ನಿತ್ಯ ಹರದ್ವರ್ಣ ಮರ. ಮರವು ಪಿರೆಮಿಡ್ ಆಕಾರದಲ್ಲಿ ಬೆಳೆಯುತ್ತದೆ. ಕಾಡುತ್ಪತ್ತಿಯಾಗಿ ಪರಿಗಣನೆ.

ಎಪ್ರಿಲ್-ಮೇ ತಿಂಗಳಲ್ಲಿ ಉತ್ತಮ ಇಳುವರಿ. ಹಣ್ಣು ಮಾಗಿದಾಗ ಗಾಢ ಕೆಂಪು. ಉರುಟು ಹಣ್ಣು. ಹುಳಿ-ಸಿಹಿ ರುಚಿ. ಸಿಪ್ಪೆ, ಒಳಗಿನ ಗುಣ ಎಲ್ಲವೂ ಹಲವು ರೀತಿಯಲ್ಲಿ ಉಪಯೋಗಿ. ಬೀಜದಿಂದ ಗಿಡ ತಯಾರಿ 8-10 ವರುಷಗಳಲ್ಲಿ ಇಳುವರಿ.
ಸಿಪ್ಪೆಯನ್ನು ಒಣಗಿಸಿ ಶರಬತ್ತು ತಯಾರಿ. ಹಣ್ಣಿಗೆ ಸಕ್ಕರೆ ಸೇರಿಸಿ ಕುದಿಸುವುದು ಒಂದು ಬಗೆ, ಬಿಸಿಲಿನಲ್ಲಿ ಒಣಗಿಸುವುದು ಮತ್ತೊಂದು. ಪಿತ್ತಶಮನ ಗುಣ. ಮನೆ ಅಡುಗೆಯಲ್ಲಿ ಸಾರು, ತಂಬುಳಿ, ಅಪ್ಪೆಹುಳಿಯಾಗಿ ಬಳಕೆ.

ಮರ ದೊಡ್ಡದಾಗಿ ಬೆಳೆಯುತ್ತದೆ. ಶೇ. 70ರಷ್ಟು ಮಂದಿ ಹಣ್ಣನ್ನು ಕೊಯ್ಯದೆ, ಬಳಸದೆ ಹಾಳಾಗುವುದೇ ಹೆಚ್ಚು. ಪಿತ್ತಕಾರಿ ತರಕಾರಿಗಳ ಬಳಕೆಯಲ್ಲಿ ಹುಣಸೆ ಹಣ್ಣಿನ ಬದಲಿಗೆ ಪುನರ್ಪುಳಿ ಹಣ್ಣನ್ನು ಬಳಸುತ್ತಾರೆ.

ಇದರಲ್ಲಿರುವ 'ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್' ಎಂಬ ಸಸ್ಯಜನ್ಯ ಉತ್ಪನ್ನವನ್ನು ಪ್ರತ್ಯೇಕಿಸಿ ರಫ್ತು ಮಾಡುವ ಉದ್ದಿಮೆಗಳು ಭಾರತದಲ್ಲಿವೆ. ಇದರ ಮೌಲ್ಯವರ್ಧಿತ ಉತ್ಪನ್ನಗಳತ್ತ ಅಲ್ಲಲ್ಲಿ ಸಾಕಷ್ಟು ಪ್ರಯತ್ನಗಳು ಆಗುತ್ತಿವೆ.

1984ರಲ್ಲಿ ಪುತ್ತೂರಿನಲ್ಲಿ ಸೇಡಿಯಾಪು ವಿಶ್ವಪ್ರಸಾದ್ ಪುನರ್ಪುಳಿಯ ಸ್ಕ್ವಾಷ್ ತಯಾರಿ ಯಶಸ್ಸಾಗಿದ್ದರು. ಸಾಯಿಕೋಟೆ ಎಂಟರ್ಪ್ರೈಸಸ್ ಇವರು 'ಪುನರ್ಪುಳಿಯ ಹುಡಿ' ತಯಾರಿಸಿದ್ದರು. ಇದರಲ್ಲಿ ಸಾರಿಗೆ ಬೇರೆ, ಶರಬತ್ತಿಗೆ ಬೇರೆ ಎಂದು ಎರಡು ವೆರೈಟಿಯಿದ್ದುವು. ಕೆಲವು ಎನ್ಜಿಓಗಳು, ಖಾಸಗಿ ಸಂಸ್ಥೆಗಳು 'ಬಿರಿಂಡಾ ಜ್ಯೂಸ್' ತಯಾರಿ, ಆ ಕುರಿತು ತರಬೇತಿ ನಡೆಸುತ್ತಿವೆ.

ಮಂಗಳೂರಿನ ಡೇವಿಡ್ ಮೂರು ದಶಕದ ಹಿಂದೆಯೇ ಪುನರ್ಪುಳಿಯ ಬೆನ್ನು ಬಿದ್ದಿದ್ದರು. 1977ರಲ್ಲಿ ದೇಶದಲ್ಲಿ ಕೋಲಾ ನಿಷೇಧವಾದಾಗ ಡೇವಿಡ್ಗೆ ಪುರುಸೊತ್ತಿರಲಿಲ್ಲ! ತರಕಾರಿಗೆಂದು ಬರುತ್ತಿದ್ದ ಗ್ರಾಹಕರ ತಲೆಗೆ ಪುನರ್ಪುಳಿಯನ್ನು ಹೇರುತ್ತಿದ್ದರು. 'ಗ್ರಾಹಕರ ಆರೋಗ್ಯ ಚೆನ್ನಾಗಿದ್ದರೆ ನನಗೂ ಒಳ್ಳೆಯದಲ್ಲವೇ?' ಎನ್ನುತ್ತಾರೆ.

ಸೀಸನ್ ಸಮಯದಲ್ಲಿ ಹಣ್ಣನ್ನು ಒಣಗಿಸಿಟ್ಟು ವರುಷಪೂರ್ತಿ ಬಳಸುತ್ತಾರೆ. ಕೊಲ್ಲಿಯಿಂದ ಬಂದ ಕರಾವಳಿಗರು ಡೇವಿಡ್ ಅವರನ್ನು ಭೇಟಿ ಮಾಡದೆ ಮರಳುವುದಿಲ್ಲ!

ಡೇವಿಡ್ ಅವರಲ್ಲಿ ತಾಜಾ ಹಣ್ಣಿಗೆ ಕಿಲೋಗೆ ೫೦-೬೦ ರೂಪಾಯಿ ಬೆಲೆ. ಮಂಗಳೂರಿನಲ್ಲಿ ಎಲ್ಲಾ ಸೇರಿ ಸುಮಾರು 15-20 ಮಂದಿ ಹಣ್ಣಿನ ವ್ಯಾಪಾರಿಗಳಲ್ಲಿ ತಾಜಾ ಹಣ್ಣು ಸಿಗುತ್ತದೆ. ಏನಿಲ್ಲವೆಂದರೂ ಸೆಂಟ್ರಲ್ ಮಾರ್ಕೆಟ್ ಒಂದರಲ್ಲೇ ವರುಷಕ್ಕೆ ನಾಲ್ಕು ಟನ್ ತಾಜಾ ಹಣ್ಣು ಮಾರಾಟವಾಗ್ತದೆ ಅಂದ್ರೆ ನಂಬ್ತೀರಾ?

'ಹೀಗೆ ದೊಡ್ಡ ಮಟ್ಟದ ತಾಜಾ ಕೋಕಂ ಮಾರಾಟ ಬೇರೆ ಯಾವ ನಗರದಲ್ಲೂ ಇರುವುದು ಗೊತ್ತಿಲ್ಲ. ಇದು ಮಹತ್ವದ ವಿಚಾರ' ಎನ್ನುತ್ತಾರೆ ಗೋವಾದಲ್ಲಿರುವ ಪಶ್ಚಿಮಘಟ್ಟ ಕೋಕಂ ಪೌಂಡೇಶನ್ನಿನ ಅಧ್ಯಕ್ಷ ಅಜಿತ್ ಶಿರೋಡ್ಕರ್.

ಮೇ 6, 7ರಂದು ಗೋವಾದಲ್ಲಿ ಪುನರ್ಪುಳಿಯ ಕೊಯ್ಲೋತ್ತರ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಿತು. ದೇಶದ ಬೇರೆ ಬೇರೆಡೆ ನಡೆಯುತ್ತಿರುವ ಪುನರ್ಪುಳಿ ಹಣ್ಣಿನ ಸ್ಥಿತಿಗತಿ, ಅದರ ವೈಜ್ಞಾನಿಕ ಮಾಹಿತಿಗಳು, ಕೋಕಂನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆದಿತ್ತು.

Monday, May 16, 2011

ವಯನಾಡು ಹಲಸು ಉತ್ಸವ



ಕೇರಳದ ವಯನಾಡಿನ ಕಲ್ಪೆಟ್ಟಾದ ಎಸ್.ಕೆ.ಎಂ.ಜೆ.ಪ್ರೌಢ ಶಾಲೆಯಲ್ಲಿ ಆರನೇ ಹಲಸು ಮೇಳವು ಮೇ. 20 ರಿಂದ 24ರ ತನಕ ನಡೆಯಲಿದೆ. ಉರವಿನ 'ಬಿದಿರು ಗ್ರಾಮ'ದ ಸಾರಥ್ಯ.

ಮೇಳದಲ್ಲಿ ಹಲಸಿನ ಮೌಲ್ಯವರ್ಧನೆಗೆ ಒತ್ತು. ಇದಕ್ಕಾಗಿ ಹಪ್ಪಳ, ಜೆಲ್ಲಿ, ಹಲಸಿನ ಹಣ್ಣಿನ ಬಾರ್, ಬೆರಟ್ಟಿ ಮೊದಲಾದ ಜನಪ್ರಿಯ ಉತ್ಪನ್ನಗಳ ತಯಾರಿ ಕುರಿತು ಸ್ಥಳೀಯ ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಇವರು ಸಿದ್ಧಪಡಿಸಿದ ಉತ್ಪನ್ನಗಳು ಮೇಳದಲ್ಲಿ ಲಭ್ಯವಾಗಲಿದೆ.

ಹಲಸಿನ ಕುರಿತು ಮುಕ್ತ ಸಂವಾದ, ಪ್ರದರ್ಶನ, ಉತ್ಪನ್ನ ತಯಾರಿಯ ನೇರ ಪ್ರಾತ್ಯಕ್ಷಿಕೆ, ಶಾಲಾ ವಿದ್ಯಾರ್ಥಿಗಳಿಗೆ ಹಲಸಿನ ಸ್ಪರ್ಧೆಗಳು ನಡೆಯಲಿವೆ. 2006ರಲ್ಲಿ ಮೊತ್ತಮೊದಲಿಗೆ ಉರವು ಸಂಸ್ಥೆಯು ಹಲಸಿನ ಉತ್ಸವ ಸಂಘಟಿಸಿತ್ತು. ಅಂದು ಹೊತ್ತಿಸಿದ ದೀಪ ಕನ್ನಾಡಿನಲ್ಲೂ ಪಸರಿಸಿ ಹಲವು ಮೇಳಗಳ ಸಂಘಟನೆಗೆ ನಾಂದಿಯಾಗಿರುವುದು ಇತಿಹಾಸ.

ಕಲ್ಪೆಟ್ಟಾ ಬಸ್ಸಿನಲ್ಲಿ ಕೋಜಿಕ್ಕೋಡಿನಿಂದ ಎರಡು ಗಂಟೆ ದೂರ. ಮೈಸೂರಿನಿಂದ ಮೂರು ಗಂಟೆ.

ಈ ಬರಹ ಸಿದ್ಧಪಡಿಸುವ ಹೊತ್ತಿಗೆ ಮೇ 20ಕ್ಕೆ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಕೇರಳದಲ್ಲಿ ಹರತಾಳ ಎಂಬ ಸುದ್ದಿ ಬಂದಿದೆ. ಹಾಗಾದರೆ ಉತ್ಸವವನ್ನು 20ಕ್ಕೆ ಬದಲು 21ರಿಂದ ನಡೆಸಬೇಕಾಗಬಹುದು.

jackfruitfestival@gmail.com
PP Daniel – 097443 00120
CD Suneesh – 096057 30334

Saturday, May 14, 2011

ಪ್ರಥಮ ರಾಷ್ಟ್ರೀಯ ಹಲಸಿನ ಉತ್ಸವ


'ಮೇ 23ರಂದು ಚಿಕ್ಕಮಗಳೂರಿನಲ್ಲಿ ಹಲಸಿನ ಹಬ್ಬವಿದೆ. ಒಂದು ಸಾವಿರ ಹಲಸು ಪ್ರಿಯರು ಭಾಗವಹಿಸುವ ನಿರೀಕ್ಷೆಯಿದೆ' ಎಂದು ಹಲಸು ಪ್ರಿಯ ಕೃಷಿಕ ಸಾಗರದ ನಾಗೇಂದ್ರ ಸಾಗರ್ ಈಚೆಗೆ ತಂದ ಹೊಸ ಸುದ್ದಿ.

ಅತ್ತ ಕೇರಳದ ರಾಜಧಾನಿಯಲ್ಲಿ ರಾಷ್ಟ್ರೀಯ ಹಲಸು ಹಬ್ಬಕ್ಕಾಗಿ ಸಿದ್ಧತೆ ನಡೆಯುತ್ತಿದ್ದಂತೆ, ಹವಾಯ್ಯ ಹಣ್ಣು ಕೃಷಿಕ ಕೆನ್ ಲವ್ ಹಲಸು ಮೇಳದಲ್ಲಿ ಭಾಗವಹಿಸುವ ಮತ್ತೊಂದು ಸುದ್ದಿ.

ಹಪ್ಪಳದಿಂದ ಐಸ್ಕ್ರೀಂ ತನಕ ಹಲಸಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಅಡುಗೆ ಮನೆ ಸೇರುತ್ತಿವೆ. ಅದಕ್ಕಾಗಿ ಅಲ್ಲಲ್ಲಿ ಹಲಸು ಪ್ರಿಯರು ಒಂದಾಗುತ್ತಿದ್ದಾರೆ. ಮಾತುಕತೆ ನಡೆಯುತ್ತಿದೆ. ಕಸಿ ಗಿಡಗಳ ಅಭಿವೃದ್ಧಿಯಾಗುತ್ತಿದೆ. ಒಕ್ಕೂಟಗಳ ರಚನೆಗಳಾಗುತ್ತಿವೆ.

ಇವೆಲ್ಲವೂ ಬಿಡಿಬಿಡಿಯಾಗಿ ಆಗುತ್ತಿರುವ ಕೆಲಸ. ಇವರೊಳಗೆ ಪರಿಸ್ಪರ ಪರಿಚಯವಿಲ್ಲ. ಸಂಪರ್ಕವಿಲ್ಲ. ಹಾಗಾಗಿ ಈ ಸುದ್ದಿ ಹೊರ ಪ್ರಪಂಚಕ್ಕೆ ತಿಳಿಯುತ್ತಿಲ್ಲ. ಮಾರುಕಟ್ಟೆಗೂ ವೇಗ ದೊರಕಿಲ್ಲ. ದೇಶಮಟ್ಟದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯಿಂದಲೂ ದೂರ. ಇಂತಹವರನ್ನೆಲ್ಲಾ ಒಟ್ಟುಗೂಡಿಸುವ ಹಿನ್ನೆಲೆಯಲ್ಲಿ ಜೂನ್ 4, 5, 6ರಂದು ತಿರುವನಂತಪುರದಲ್ಲಿ 'ರಾಷ್ಟ್ರೀಯ ಹಲಸು ಹಬ್ಬ'ದ ಆಯೋಜನೆ.

ಮೂರು ದಿವಸ ನಡೆಯುವ ಹಬ್ಬದಲ್ಲಿ ಮೌಲ್ಯವರ್ಧನೆಯ ತರಬೇತಿ, ಖಾದ್ಯ ಪ್ರದರ್ಶನ-ಮಾರಾಟ, ವಿಚಾರಗೋಷ್ಠಿ, ಹಬ್ಬದಂಗವಾಗಿ ನಗರದ ವಿವಿಧ ಪ್ರದೇಶದಲ್ಲಿ ಗಣ್ಯರಿಂದ ಹಲಸಿನ ಗಿಡ ನೆಡುವಿಕೆ, ಛಾಯಾಚಿತ್ರ ಪ್ರದರ್ಶನ. ಹಲಸಿನ ಆಸಕ್ತಿಯುಳ್ಳ ವಿಜ್ಞಾನಿಗಳು, ರೈತರು, ಮೌಲ್ಯವರ್ಧಕರು ಸೇರಿಕೊಂಡು ಒಕ್ಕೂಟ ರಚಿಸುವ ಯೋಜನೆಯಿದೆ.

ಈಗಾಗಲೇ ಎರಡು ಬ್ಲಾಗ್ಗಳಲ್ಲಿ ((http://www.panasamwonders.blogspot.com/; http://jackfruitfestkerala.wordpress.com/) ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ.

ಹಬ್ಬದಲ್ಲಿ ರಾಷ್ಟ್ರೀಯ ತೋಟಗಾರಿಕಾ ಬೋರ್ಡಿನ ನಿರ್ವಾಹಕ ನಿರ್ದೇಶಕರು, ಕೇಂದ್ರ-ಕೇರಳದ ಸಚಿವರು ಭಾಗವಹಿಸುತ್ತಾರೆ. ಸಿದ್ಧತಾ ಮೀಟಿಂಗ್ಗಳು ಭರದಿಂದ ನಡೆದಿದ್ದು, ಜವಾಬ್ದಾರಿಯ ಹಂಚಿಕೆಯೊಂದಿಗೆ ಹಲವು ಸಂಸ್ಥೆಗಳು ಕೈಜೋಡಿಸಿ ಉತ್ಸವದ ಯಶಸ್ಸಿನತ್ತ ನಿಗಾ ವಹಿಸುತ್ತಿದ್ದಾರೆ. ತಿರುವನಂತಪುರದ ಹೃದಯಭಾಗದಲ್ಲಿರುವ 'ಕನಕಕುನ್ನು ಅರಮನೆ'ಯಲ್ಲಿ ಹಬ್ಬ ನಡೆಯಲಿದೆ. ಶಾಂತಿಗ್ರಾಮ ಎಂಬ ಎನ್ಜಿಓ ಹಬ್ಬದ ಸಾರಥ್ಯವನ್ನು ವಹಿಸಿದೆ.

(ಸಂಪರ್ಕ : 0471-2269780, 6452511, 09287548234, ಮಿಂಚಂಚೆ : (jackfruitfestkerala@gmail.com, jackfruitfestkerala@gmail.com)

ಕೇರಳದ ವಯನಾಡಿನ ಉರವು ಸಂಸ್ಥೆಯು ಮೇ 20ರಿಂದ 23ರ ತನಕ ಕಲ್ಪೆಟ್ಟಾದಲ್ಲಿ ಹಲಸು ಮೇಳವನ್ನು ಆಯೋಜಿಸಿದೆ. ಇತ್ತ ಶಿರಸಿಯ ಕದಂಬವು ಜೂನ್ 11, 12ರಂದು ಮೇಳ ಏರ್ಪಡಿಸಿದೆ. ಹಲಸಿಗೆ ಮರುಚೇತನ ಕೊಡುವ ಕಾರ್ಯದಲ್ಲಿ ಸರಕಾರೇತರ ಮತ್ತು ಇತರ ಸಂಸ್ಥೆಗಳು ಮುಂದೆ ಬಂದಿರುವುದು ಗಮನಾರ್ಹ.

Thursday, May 12, 2011

'ಕೆಂಪಕ್ಕಿ ಸಂತೆ'


ದೇಸೀಯ ಅಕ್ಕಿ ತಳಿಗಳು ಆಹಾರಕ್ಕೂ, ಔಷದಿಗೂ ಸೈ. ಕೆಲವೇ ದಶಕಗಳ ಹಿಂದೆ ಅನ್ನಕ್ಕೊಂದು, ಆವಲಕ್ಕಿಗೊಂದು, ಕುಚಲಕ್ಕಿಗೊಂದು ,ಕಜ್ಜಾಯಕ್ಕೊಂದು, ತಂಬಿಟ್ಟಿಗೊಂದು, ರೊಟ್ಟಿಗೊಂದು, ಬಾಣಂತಿಯರ ಊಟಕ್ಕೊಂದು, ಮಕ್ಕಳ ವಾಂತಿಭೇದಿಗೊಂದು, ಕೈಕಾಲು ನೋವಿಗೊಂದು, ಎದೆನೋವಿಗೆ ಮತ್ತೊಂದು, ಸರ್ಪಸುತ್ತಿಗೆ ಸಹ ದೇಸಿ ಅಕ್ಕಿಯೇ ಔಷಧವಾಗಿತ್ತು. ದೊಡ್ಡ ಬೈರನೆಲ್ಲು, ನವರ, ಕರಿಭತ್ತ ಮತ್ತು ದೊಡ್ಡಿ ಭತ್ತ ಸೇರಿದಂತೆ ಹಲವು ಕೆಂಪಕ್ಕಿ ತಳಿಗಳು ಅನೇಕ ಕಾಯಿಲೆಗಳಿಗೆ ಔಷಧಿ.

ಈ ತಳಿಗಳನ್ನೆಲ್ಲಾ ಒಂದೆಡೆ ನೋಡುವ ಅವಕಾಶವನ್ನು ಬೆಂಗಳೂರಿನ ಸಹಜ ಸಮೃದ್ಧವು ಮಾಡಿಕೊಂಡಿದೆ. ಅದರಲ್ಲೂ ರಾಜಧಾನಿಯ ಗ್ರಾಹಕರಿಗೆ ಇದನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇ 14 ಮತ್ತು 15ರಂದು ಬೆಂಗಳೂರಿನ 'ಗಾಂಧಿಭವನ'ದಲ್ಲಿ 'ಕೆಂಪಕ್ಕಿ ಸಂತೆ' ನಡೆಯಲಿದೆ. 'ಭತ್ತ ಉಳಿಸಿ ಆಂದೋಲನ' ಮತ್ತು 'ನಬಾರ್ಡ' ಈ ಸಂತೆಗೆ ಹೆಗಲೆಣೆ.
ಕರ್ನಾಟಕದಲ್ಲಿ ಭತ್ತ ಬೆಳೆಯುವ 19 ಜಿಲ್ಲೆಗಳಿಂದ ಸುಮಾರು 60 ಕ್ಕೂ ಹೆಚ್ಚು ಭತ್ತ ಸಂರಕ್ಷಕರು, ಮಹಿಳಾ ಗುಂಪುಗಳು, ಕೃಷಿಕರು ಭಾಗವಹಿಸುತ್ತಾರೆ. ವಿವಿಧ ದೇಸಿ ಕೆಂಪಕ್ಕಿ ತಳಿಗಳ ಪ್ರದರ್ಶನ, ಮಾರಾಟವಿದೆ. ಜತೆಗೆ ಅಕ್ಕಿ ಉತ್ಪನ್ನಗಳು ಕೂಡಾ.

(ಸಂಪರ್ಕ : 98808 62058)

Saturday, May 7, 2011

ಗೋವಾದಲ್ಲಿ ಕೋಕಂ ರಾಷ್ಟ್ರೀಯ ಮಂತ್ರಾಲೋಚನೆ








ಮೇ 6 ಮತ್ತು 7ರಂದು ಗೋವಾ ವಿಶ್ವವಿದ್ಯಾಲಯದಲ್ಲಿ ಕೋಕಂ (ಪುನರ್ಪುಳಿ, ಮುರುಗಲು, Kokum, Garcinia Indica)
ರಾಷ್ಟ್ರೀಯ ಸೆಮಿನಾರ್ ನಡೆಯಿತು. ವೆಸ್ಟರ್ನ್ ಘಾಟ್ಸ್ ಕೋಕಂ ಪೌಂಡೇಶನ್ ಸೆಮಿನಾರನ್ನು ಆಯೋಜಿಸಿತ್ತು. ಪುನರ್ಪುಳಿಯ ಕುರಿತಾದ ಮೂರನೇ ಸಮ್ಮೇಳನ ಇದು. ಪೌಂಡೇಶನ್ನಿನ ಡಾ.ಅಜಿತ್ ಶಿರೋಡ್ಕರ್ ಮತ್ತು ಗೋವಾ ವಿವಿಯ ಬಾಟನಿ ವಿಭಾಗದ ಮುಖ್ಯಸ್ಥ ಪ್ರೊ:ಡಿ.ಜೆ.ಭಟ್ಟರ ಉಸ್ತುವಾರಿಕೆ.

ಕೋಕಂ ಕುರಿತು ಜರುಗಿದ ಸಂಶೋಧನೆಗಳು; ಗೋವಾ, ಕೇರಳ, ಕರ್ನಾಟಕ, ಮಹಾರಾಷ್ಟ್ರಗಳ ಸದ್ಯದ ಕೋಕಂ ಸ್ಥಿತಿಗತಿಗಳ ಕುರಿತು ಮಾತುಕತೆ. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರಿಂದ ಕರ್ನಾಟಕ ಮತ್ತು ಕೇರಳದ ಕೋಕಂ ಮಾರುಕಟ್ಟೆ ಮತ್ತು ಮೌಲ್ಯವರ್ಧನೆಯ ಮಾಹಿತಿ. ಪುಣೆಯ ಮುಕುಂದ್ ಭಾವೆ ಅವರ ಅಪರಾಂತ್ ಆಗ್ರೋ ಫುಡ್ಸ್ ಇದರ ಕೋಕಂನ 'ಟೆಟ್ರಾಪ್ಯಾಕ್' ಸೆಮಿನಾರಿನ ಹೈಲೈಟ್. ಪುಣೆಯ ಹರ್ಡೀಕರ್ ಟೆಕ್ನಾಲಜೀಸ್ ಇದರ ಸಂಜಯ್ ಓರ್ಪೆ ಇವರ ಮೌಲ್ಯವರ್ಧಿತ ಉತ್ಪನ್ನಗಳು, ಡಾ.ಜೋನ್ ರಾಡ್ರ್ರಿಗಸ್ ಅವರು ಕೋಕಂ ವೈನ್ ಕುರಿತಾದ ವಿಚಾರಗಳು ಕುತೂಹಲ ಮೂಡಿಸಿದುವು. ರತ್ನಗಿರಿಯ ದೀಪಶ್ರೀ ಪ್ರಾಡಕ್ಟ್ಸ್ ಅವರ ಪುನರ್ಪುಳಿ ಚಾಕೋಲೇಟ್, ಬಟರ್, ಕೋಕಂ ಬೀ, ಸಿಪ್ಪೆ, ಮೋದಕಗಳ ಪ್ರದರ್ಶನ. ಎಲ್ಲದಕ್ಕೂ ಆಕರ್ಷಕ ಪ್ಯಾಕಿಂಗ್.

ಗೋವಾದ ಕುರಾಡೆಯ ಶ್ರೀಹರಿ ಸುಬ್ರಾಯ ನಾಯಕ್ ಅವರ ಪುನರ್ಪುಳಿ ಹಣ್ಣಿನ ತೋಟದ ಯಶವನ್ನು ಬಾಲಚಂದ್ರ ಹೆಗಡೆ ಸಾಯಿಮನೆಯವರಿಂದ ಪ್ರಸ್ತುತಿ. ಕರ್ನಾಟಕದಿಂದ - ಶಿರಸಿಯ ವಿಧೀಶ ಭಟ್, ಶಿರಸಿ ಮಂಡೆಮನೆಯ ಶ್ರೀಪಾದ ಆರ್. ಹೆಗಡೆ ಮತ್ತು ಮಂಗಳೂರಿನ ಪ್ರಕೃತಿ ಫುಡ್ಸ್ ಇದರ ಪಿ.ಶ್ಯಾಮಲಾ ಶಾಸ್ತ್ರಿಯವರು - ತಮ್ಮ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಮಂಗಳೂರು ಸೆಂಟ್ರಲ್ ಮಾರ್ಕೆಟ್ ತರಕಾರಿ ವ್ಯಾಪಾರಿ ಡೇವಿಡ್ ಅವರು ಮಂಗಳೂರಿನ ತಾಜಾ ಹಣ್ಣಿನ ಮಾರುಕಟ್ಟೆಯ ಸ್ಥಿತಿಗತಿಗಳನ್ನು ವಿವರಿಸುತ್ತ, 'ಸದ್ಯ ಪುನರ್ಪುಳಿ ಹಣ್ಣಿಗೆ ಕಿಲೋಗೆ ಅರುವತ್ತು ರೂಪಾಯಿ, ಸಿಪ್ಪೆಗೆ ಒಂದು ನೂರು ಇಪ್ಪತ್ತು ರೂಪಾಯಿ ಇದೆ' ಎಂದರು.

'ಕೋಕಂನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಬೇಕಿತ್ತು' ಎಂದು ಶಿರಸಿಯ ಎಂ.ಆರ್.ಹೆಗಡೆ ಅಭಿಪ್ರಾಯ. 'ಮೌಲ್ಯವರ್ಧಕರೆಲ್ಲಾ ಇಲ್ಲಿ ಸೇರುತ್ತಿದ್ದರೆ ಪರಸ್ಪರ ಕೊಂಡಿ ಏರ್ಪಟ್ಟು ಮಾರಾಟ ಮತ್ತು ಗುಣಮಟ್ಟದ ವೃದ್ಧಿಗೆ ಸಹಾಯಕವಾಗುತ್ತಿತ್ತು' ಎನ್ನುತ್ತಾರೆ ಬಾಲಚಂದ್ರ ಹೆಗಡೆ ಸಾಯಿಮನೆ.

ದಾಪೋಲಿಯ ಡಾ.ಬಾಳಾಸಾಹೇಬ್ ಸಾವಂತ್ ಕೊಂಕಣ್ ಕೃಷಿ ವಇದ್ಯಾಪೀಠದ ಉಪಕುಲಪತಿ ಪ್ರೊ. ವಿಜಯ್ ಮೆಹ್ತಾ, ಗೋವಾ ವಿವಿಯ ಉಪಕುಲಪತಿ ಪ್ರೊ.ದಿಲೀಪ್, ಗೋವಾ ಸರಕರದ ಕೃಷಿ ಇಲಾಖೆಯ ನಿರ್ದೇಶಕ ಸತೀಶ್ ತೆಂಡೂಲ್ಕರ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು.

ಇಡೀ ಸಮ್ಮೇಳನದ ಯಶಸ್ಸಿಗೆ ಕಾರಣ ಪ್ರೊ.ಡಿ.ಜಯರಾಮ ಭಟ್. ವಿವಿಯ ಮುಖ್ಯಸ್ಥನ ಹುದ್ದೆಯಲ್ಲಿದ್ದೂ ಯಾವುದೆ ಬಿಗುಮಾನ ಮತ್ತು 'ಬಿಗಿಯಾದ ಅಕಾಡೆಮಿಕ್ ಸ್ಟ್ರೈಲ್' ಇಲ್ಲದೆ, ಎಲ್ಲಾ ವ್ಯವಸ್ಥೆಯತ್ತ ಓಡಾಡುತ್ತಾ, ಎಲ್ಲರೊಂದಿಗೆ ಮಾತನಾಡುತ್ತಾ, ಸಂದರ್ಭ ಬಂದಾಗ ಚಹ-ಬಿಸ್ಕತ್ತುಗಳನ್ನು ಹಂಚುತ್ತಾ, ಸಮ್ಮೇಳನದ ಅಚ್ಚುಕಟ್ಟಿನತ್ತ ಗಮನ ಕೊಟ್ಟ ಪ್ರೊ.ಭಟ್ ಮರೆಯದ, ಮಾದರಿ ವ್ಯಕ್ತಿತ್ವ.

Thursday, May 5, 2011

ಪೊಳಲಿಯ 'ಸತ್ಯದ ಬೆಳೆ'


ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಅದ್ದೂರಿಯಾಗಿ ನಡೆಯಿತು. ಜಾತ್ರೆ ಅಂದ ಮೇಲೆ ತೊಟ್ಟಿಲು, ಐಸ್ಕ್ರೀಂ ಅಂಗಡಿ, ಚರುಮುರಿ, ಮಣಿಸರಕು.. ಹೀಗೆ ವಿವಿಧ ವೈವಿಧ್ಯ ಮಳಿಗೆಗಳು ಇದ್ದೇ ಇರುತ್ತವೆ. ಧಾರ್ಮಿಕ ಹಿನ್ನೆಲೆಯ ವಾತಾವರಣದಲ್ಲಿ ನಡೆಯುವ ಮಹೋತ್ಸವ ಸಮಯದ (ಜಾತ್ರೆ, ನೇಮ) ಮಳಿಗೆಗಳಿಗೆ ಮಾತ್ರ 'ಸಂತೆ' ಎಂಬ ನಾಮಕರಣ. ಹಾಗಾಗಿ 'ಸಂತೆ' ಎಂದಾಕ್ಷಣ ಜಾತ್ರೆಯ ಸಂಭ್ರಮ ಕಣ್ಮುಂದೆ ಮಿಂಚಿ ಮರೆಯಾಗುತ್ತದೆ.

ಎಲ್ಲಾ ಜಾತ್ರೆಗಳಂತೆ 'ಸಂತೆ'ಗಳು ಪೊಳಲಿಯಲ್ಲೂ ಇವೆ. ಇಲ್ಲಿಯ ಸಂತೆಯಲ್ಲಿ ಕಲ್ಲಂಗಡಿ (ಬಚ್ಚಂಗಾಯಿ) ಹಣ್ಣಿನಗೆ ಮೊದಲ ಮಣೆ. ಈ ವರುಷ ಇಪ್ಪತ್ತೈದಕ್ಕೂ ಮಿಕ್ಕಿ ಮಳಿಗೆಗಳು ಇದ್ದುವು. ಇಲ್ಲಿ ಮಾರುವ ಕಲ್ಲಂಗಡಿ ಹಣ್ಣು ದೂರದೂರಿನಿಂದ ಬರುವುದಿಲ್ಲ. ಇಲ್ಲಿನ ಕೃಷಿಕರೇ ಬೆಳೆದು ಅವರೇ ಮಾರುವುದು ವಿಶೇಷ. ಮಧ್ಯವರ್ತಿಗಳಿಲ್ಲ. ಐದಾರು ಕಿಲೋದ ಕಲ್ಲಂಗಡಿಗೆ ನೂರರಿಂದ ನೂರ ಇಪ್ಪತ್ತು ರೂಪಾಯಿ ತನಕ ದರ. ಏನಿಲ್ಲವೆಂದರೂ ಜಾತ್ರಾ ಸಮಯದಲ್ಲಿ ಇಲ್ಲಿ ಐದಾರು ಲಕ್ಷ ರೂಪಾಯಿ ಕಲ್ಲಂಗಡಿ ನಗದಾಗುತ್ತದೆ.

'ಪೊಳಲಿ ಚೆಂಡು' ಉತ್ಸವ ಹೆಚ್ಚು ಭಕ್ತರು ಸೇರುವ ವಿಶೇಷ ಜಾತ್ರೆ. ಶ್ರೀ ದೇವಿಯು ಚಂಡಮುಂಡ ದೈತ್ಯರನ್ನು ವಧಿಸಿದ ನೆನಪು ಇಲ್ಲಿ ಮರುಕಳಿಸುತ್ತದೆ. ಆ ಕಾರಣಕ್ಕಾಗಿಯೇ 'ಕಲ್ಲಂಗಡಿ' ವಿಶೇಷ. ದೈತ್ಯರ ಶಿರಗಳನ್ನು ಕಲ್ಲಂಗಡಿಗೆ ಹೋಲಿಸುವುದಿದೆ. ಜಾತ್ರೆಗೆ ಬಂದವರು 'ಪುರಲ್ದ ಬಚ್ಚಂಗಾಯಿ' (ಪೊಳಲಿಯ ಬಚ್ಚಂಗಾಯಿ) ಎಂದೇ ಒಯ್ಯುತ್ತಾರೆ. ಇದು 'ಸತ್ಯದ ಬೆಳೆ, ಧರ್ಮದ ಬೆಳೆ'. ಮೊದಲ ಹಣ್ಣನ್ನು ಕೃಷಿಕರು ದೇವರಿಗೆ 'ನೈವೇದ್ಯ'ವಾಗಿ ಸಲ್ಲಿಸುವುದು ರೂಢಿ.

ಮುಖ್ಯವಾಗಿ ಪಟ್ನಾಗರ್ ತಳಿಯನ್ನು ಬಹುತೇಕ ಎಲ್ಲರೂ ಬೆಳೆಯುತ್ತಾರೆ. ಜತೆಗೆ ಮಧು, ಶುಗರ್ಬೇಬಿ. ಇವೆಲ್ಲಾ 'ಪೊಳಲಿ ಮೂಲ ಕಲ್ಲಂಗಡಿ ತಳಿ'ಯನ್ನು ಹೋಲುತ್ತದಂತೆ. ಈ ಸಂದರ್ಭದಲ್ಲಿ ಹೊರಗಿನಿಂದ ಹಣ್ಣು ತಂದು ಮಾರುವಂತಿಲ್ಲ, ಮಾರುವುದಿಲ್ಲ. ಇಲ್ಲೇ ಬೆಳೆಯುತ್ತಾರೆ, ಅಲ್ಲೇ ಮಾರುತ್ತಾರೆ. 'ಒಂದು ವೇಳೆ ಹೊರಗಿನ ವ್ಯಾಪಾರಸ್ಥರು ಬೇರೆ ತಳಿಯ ಕಲ್ಲಂಗಡಿಯನ್ನು ತಂದು ಮಾರಾಟಕ್ಕಿಟ್ಟರೆ ಜನ ಆ ಸ್ಟಾಲ್ನತ್ತ ಹೋಗುವುದೇ ಇಲ್ಲ. ಇದು ಇಲ್ಲಿಯದಲ್ಲ ಎಂದು ಗುರುತು ಹಿಡಿದುಬಿಡುತ್ತಾರೆ' ಎನ್ನುತ್ತಾರೆ ಕೃಷಿಕ ಪದ್ಮನಾಭ ಭಟ್. ಜಾತ್ರೆ ಕಳೆದ ಬಳಿಕ ಇಲ್ಲಿನ ಹಣ್ಣನ್ನು ಕೇಳುವರಿಲ್ಲವಂತೆ.

ಮೂಲತಳಿ ಪೂರ್ತಿ ನಾಶವಾಗಿ ಇಪ್ಪತ್ತೈದು ವರ್ಷ ಸಂದಿದೆ. ರುಚಿಯಲ್ಲಿ ಸಪ್ಪೆ. ಕಪ್ಪು-ಹಸುರು ಮೈಬಣ್ಣ. ಬೆಳೆವ ಆರೈಕೆಯಂತೆ ಗಾತ್ರ. ಮೂಲ ತಳಿಯ ಸ್ಥಾನಕ್ಕೀಗ ಹೈಬ್ರಿಡ್ ತಳಿ ದಾಂಗುಡಿಯಿಟ್ಟಿದೆ. ಐವತ್ತು ಗ್ರಾಮ್ ಬೀಜಕ್ಕೆ ಆರುನೂರು ರೂಪಾಯಿ! ಪೊಳಲಿಯಲ್ಲಿ ಬೆಳೆದ ಕಾರಣ ಅದು 'ದೇವಿಯ ಪ್ರಸಾದ'. ಆಥರ್ಿಕ ಸಂಪಾದನೆ ದೃಷ್ಟಿಯಿಂದ ಪ್ರತೀ ವರುಷವೂ ಕಂಪನಿ ಬೀಜಗಳನ್ನೇ ನೆಚ್ಚಿಕೊಳ್ಳಬೇಕು.

ಹಣ್ಣಿನ ಬೀಜದಿಂದ ಸಸಿ ಮಾಡಿದರೆ ಆಗುವುದಿಲ್ವಾ? ಕೃಷಿಕ ಕೃಷ್ಣ ನಾಯಕ್ ಹೇಳುತ್ತಾರೆ - 'ಗಿಡ ಸಾಮಾನ್ಯ ಬರುತ್ತದೆ. ಎಲ್ಲಾ ಬೀಜಗಳೂ ಮೊಳಕೆ ಬರುವುದಿಲ್ಲ. ಇಳುವರಿ ತೊಂದರೆಯಿಲ್ಲ. ಆದರೆ ಕಾಯಿಯ ಗಾತ್ರ ಉರುಟಾಗಿರುವುದಿಲ್ಲ, ಕೆಲವು ಉದ್ದವಾಗುತ್ತದೆ. ರುಚಿಯೂ ಕಡಿಮೆ'.

ಕಲ್ಲಂಗಡಿಯನ್ನು ತೂಗಿ ಮಾರುವುದು ಕಡಿಮೆ. ಅಂದಾಜು ದರ. ಗಾತ್ರ ನೋಡಿ ದರ ನಿಗದಿ. ಸುಮಾರು ನೂರಕ್ಕೂ ಮಿಕ್ಕಿ ಬೆಳೆಗಾರರ ಪೊಳಲಿಯಲ್ಲಲ್ಲದೆ ಕರಿಯಂಗಳ, ಮಣೇಲು ಊರಿನಲ್ಲಿ ಬೆಳೆಯುತ್ತಾರೆ.

ಜೀವನದಿ ಫಲ್ಗುಣಿಯಲ್ಲಿ ಮಳೆಗಾಲದಲ್ಲಿ ಬಂದ ನೆರೆ ಭೂಮಿಯ ಫಲವತ್ತತೆಯನ್ನು ಕೊಚ್ಚಿಕೊಂಡು ಹೋಗುತ್ತದೆ. ಬೇರ್ಯಾವ ಕೃಷಿಗೂ ಈ ಮಣ್ಣು ಯೋಗ್ಯವಲ್ಲ. ಆದರೆ ಕಲ್ಲಂಗಡಿ, ಸೌತೆಕಾಯಿ ಕೃಷಿಗೆ ತೊಂದರೆಯಿಲ್ಲ. ಇಳುವರಿ ಅದೃಷ್ಟ. ಸಿಕ್ಕಿದರೆ ಸಿಕ್ಕಿತು! ಮೊದಲೆಲ್ಲಾ ಸಾವಯವ ಕ್ರಮದಲ್ಲಿ ಬೆಳೆಯುತ್ತಿದ್ದರು. 'ಈಗ ರಾಸಾಯನಿಕ ಗೊಬ್ಬರ ಹಾಕದೆ, ವಿಷ ಸಿಂಪಡಿಸದೆ ಕೃಷಿಯೇ ಕಷ್ಟಸಾಧ್ಯ' ಕೃಷಿಕರ ಅನುಭವ.

'ಪೊಳಲಿ ಜಾತ್ರೆಯಲ್ಲಿ ಕಲ್ಲಂಗಡಿ ವ್ಯಾಪಾರದಿಂದ ಸಿಕ್ಕ ಉತ್ಪತ್ತಿ ಮಳೆಗಾಲದ ವೆಚ್ಚವನ್ನು ಭರಿಸುತ್ತದೆ' ಎಂದು ನಂಬಿದ್ದ ಕಾಲವಿತ್ತು. ಈಗ ಹಾಗೇನಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆದವರು ಸ್ವಲ್ಪ ಮಟ್ಟಿನ ಲಾಭ ಗಳಿಸುತ್ತಾರೆ. ಬೆರಳೆಣಿಕೆಯ ಕೃಷಿಕರನ್ನು ಬಿಟ್ಟರೆ ಮಿಕ್ಕವರಿಗೆ ಕಲ್ಲಂಗಡಿ ಕೃಷಿ ಹವ್ಯಾಸ.

ಕಲ್ಲಂಗಡಿ 60-70 ದಿವಸದ ಬೆಳೆ. ಜಾತ್ರೆ ಯಾವ ದಿನಾಂಕದಂದು ಆಚರಿಸಲ್ಪಡುತ್ತದೆ ಎಂಬ ಲೆಕ್ಕಾಚಾರದಂತೆ, ಜನವರಿ 10-20ನೇ ದಿನಾಂಕದೊಳಗೆ ಬೀಜಪ್ರದಾನ. ಬೀಜದಿಂದ ಬೀಜಕ್ಕೆ ಒಂದಡಿ ಅಂತರ. ಸಾಲಿನ ಉದ್ದ ಹದಿನೈದು ಅಡಿ. ಸಾಲಿನಿಂದ ಸಾಲಿಗೆ ಹತ್ತಡಿ ಅಂತರ. ಆರಂಭಕ್ಕೆ ಹಟ್ಟಿ ಗೊಬ್ಬರ. ಸಸಿ ಎತ್ತರ ಬಂದ ಮೇಲೆ 'ಸರ್ಕಾರಿ ಗೊಬ್ಬರ'! ಮೂರು ದಿವಸಕ್ಕೊಮ್ಮೆ ನೀರಾವರಿ.

'ಜಾತ್ರೆ ಮುಗಿಯುತ್ತಿದ್ದಂತೆ ಕಲ್ಲಂಗಡಿ ಹಣ್ಣೂ ಮುಗಿಯುತ್ತದೆ. ನಂತರ ಗದ್ದೆಗೆ ಕಳ್ಳರು ನುಗ್ಗುತ್ತಾರೆ. ಅಷ್ಟರೊಳಗೆ ನಾವು ಖಾಲಿ ಮಾಡಬೇಕು. ಬಚ್ಚಂಗಾಯಿ ಮಧ್ಯೆ ಮಧ್ಯೆ ಸೌತೆಕಾಯಿ ಬೆಳೆ ಮಾಡಿದೆವು. ಚೆನ್ನಾಗಿ ಬಂತು. ಆದರೆ ರಾಸಾಯನಿಕ ಗೊಬ್ಬರ, ಸಿಂಪಡಣೆ ಮಾಡಿದ್ದರಿಂದಾಗಿ ಸೌತೆಯನ್ನು ಹೆಚ್ಚು ಕಾಲ ಕಾಪಿಡುವಂತಿಲ್ಲ. ಹಾಳಾಗುತ್ತದೆ' ಎಂಬ ಅನುಭವವನ್ನು ಹೇಳುತ್ತಾರೆ ಪದ್ಮನಾಭ ಭಟ್.

ಮೊದಲು ಸಾರಿಗೆ ವ್ಯವಸ್ಥೆ ತ್ರಾಸವಾಗಿತ್ತು. ಕಾಲ್ನಡಿಗೆಯ ಪ್ರಯಾಣ. ಜಾತ್ರೆಗೆ ಬಂದವರಿಗೆ ಕಲ್ಲಂಗಡಿ ಭಕ್ಷ್ಯವಾಗಿತ್ತು. ತೃಷೆ ನೀಗಲು ಬೇರೆ ವ್ಯವಸ್ಥೆಗಳಿರಲಿಲ್ಲ. ಮನೆಗೆ ಬಂದವರಿಗೆ ಕಲ್ಲಂಗಡಿ ನೀಡುವುದೂ ಪ್ರತಿಷ್ಠೆ! ಕೆಲವರಲ್ಲಿ 'ಜಾತ್ರೆಗೆ ಬಂದು ಮರಳುವಾಗ ಕಲ್ಲಂಗಡಿ ಒಯ್ಯಲೇ ಬೇಕು' ಎಂಬ ನಂಬುಗೆ. ಮನೆಗೆ ನೆಂಟರಿಷ್ಟರು ಬಂದರೂ 'ಒಂದು ಹಣ್ಣು ಕೊಂಡು ಹೋಗಿ' ಎನ್ನುತ್ತಾ ಕೊಡುವುದೂ ಇದೆ.

ಈಗ ಸಾರಿಗೆ ಯಥೇಷ್ಟ. ಸಿದ್ಧಪಾನೀಯ, ಐಸ್ಕ್ರೀಂ ಮಳಿಗೆಗಳು ಕಲ್ಲಂಗಡಿ ಸ್ಟಾಲ್ಗಳನ್ನು ಆಕ್ರಮಿಸಿವೆ. ಆದರೂ ಹಳೆಯ ನಂಬುಗೆಯಿದೆಯಲ್ಲಾ, ಅದರಂತೆ ಕೃಷಿ, ಮಾರಾಟ ನಡೆಯುತ್ತಿದೆ ಅಷ್ಟೇ. ದೇವಳದಲ್ಲಿ ಧ್ವಜಾವರೋಣವಾಗುತ್ತಿದ್ದಂತೆ, ಇತ್ತ ಕಲ್ಲಂಗಡಿ ಮಳಿಗೆಗಳೂ ಜಾತ್ರೆಗೆ ವಿದಾಯ ಹೇಳುತ್ತವೆ. ನಂತರ ಇಲ್ಲಿನ ಹಣ್ಣು ಯಾರಿಗೂ ಬೇಡ!

ಕೃಷಿಗೂ, ಧಾರ್ಮಿಕ ನಂಬುಗೆಗೂ ನಂಟು. ಕಾಲದ ಬೀಸು ಧಾವಂತಕ್ಕೆ ಕಲ್ಲಂಗಡಿಯನ್ನು 'ಪ್ರಸಾದ' ಅಂತ ಸ್ವೀಕರಿಸುವ ಮನಸ್ಸು ಎಷ್ಟಿದೆ. ನಂಬುಗೆಯ ಕವಚದೊಳಗೆ ಕೃಷಿಯೊಂದು ಜೀವಂತವಿದೆಯಲ್ಲಾ, ಅದೇ ಸಮಾಧಾನ. 'ಬೆಳೆದುದೆಲ್ಲಾ ಇಲ್ಲಿ ಮಾರಾಟವಾಗುತ್ತದಲ್ಲಾ, ಹಾಗಾಗಿ ಒಂದಷ್ಟು ಮಂದಿಗೆ ಆಸಕ್ತಿ ಶುರುವಾಗಿದೆ. ಮೊದಲಿಲ್ಲಿ ಭೂಮಿಗೆ ಹೇಳುವಂತಹ ಮಾರಾಟ ದರವಿರಲಿಲ್ಲ. ಈಗೀಗ ದೊಡ್ಡ ಭೂಮಿಗಳು ಮಾರಾಟಕ್ಕಾಗಿ ಹೋಳಾಗುತ್ತಿವೆ. ಕೃಷಿ ಭೂಮಿಯ ವ್ಯಾಪ್ತಿ ಕಿರಿದಾಗುತ್ತಿದೆ' ಎಂಬ ಆತಂಕ ಪದ್ಮನಾಭ ಭಟ್ಟರಿಗೆ.

ಹೈಬ್ರಿಡ್ ತಳಿಗಳು ಹೊಲಕ್ಕೆ ನುಗ್ಗುತ್ತಿವೆ. ಈ ಅಬ್ಬರದ ಮಧ್ಯೆ ಎಷ್ಟೋ ನಾಟಿ ತಳಿಗಳು ಕಣ್ಮರೆಯಾಗುತ್ತಿವೆ. ಇದರಲ್ಲಿ ಪೊಳಲಿಯ ಮೂಲ ತಳಿಯೂ ಒಂದು. ಅದು ಸಪ್ಪೆಯೋ, ಅರುಚಿಯೋ - ಏನೇ ಇರಲಿ, ಮೂಲ ತಳಿಯ ಶೋಧ ಆಗಲೇಬೇಕು, ಅಭಿವೃದ್ಧಿಯಾಗಬೇಕು. ಇದಕ್ಕಾಗಿ ಸಮಾನ ಮನಸ್ಸುಗಳು ಒಂದಾಗಬೇಕು.