Tuesday, July 26, 2011

ಅನ್ನ ಕೊಡುವ ನೆಲದ ಕೂಗು

'ಸರಕಾರಕ್ಕೆ ಕೃಷಿ ಭೂಮಿ ನೀಡದೆ ವಿರೋಧಿಸಿದರೆ ಅಭಿವೃದ್ಧಿ ಹೇಗೆ ಸಾಧ್ಯ,' ಪುಟ್ಟಕ್ಕನ ಹೈವೇ ಸಿನೆಮಾ ವೀಕ್ಷಿಸಿದ ಬಳಿಕ ವಿದ್ಯಾರ್ಥಿನಿಯೋರ್ವಳ ಪ್ರಶ್ನೆ. ಈ ಪ್ರಶ್ನೆಗೆ ಪೂರಕವಾಗಿ ಕೃಷಿ ಸಚಿವರ ಹೇಳಿಕೆಯನ್ನು ಗಮನಿಸಿ - 'ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳು ಬರಬೇಕು. ರೈತರಿಂದ ಭೂಮಿ ವಶಪಡಿಸಿಕೊಳ್ಳುವುದು ಅನಿವಾರ್ಯ. ಕೈಗಾರಿಕೆಗಳು ಬರುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯ.'

ವಿದ್ಯಾರ್ಥಿನಿಯ ಪ್ರಶ್ನೆಯಲ್ಲಿ ಲೋಕಜ್ಞಾನದ ಕೊರತೆ. ಸಚಿವರ ಮಾತಲ್ಲಿ ಶೀಘ್ರಲಾಭದ ಭ್ರಮೆ. ಅಭಿವೃದ್ಧಿಯ ವಿಚಾರ ಬಂದಾಗ, ಒಂದೋ ಕೃಷಿ ಭೂಮಿಯ ಸ್ವಾಧೀನತೆ; ಇಲ್ಲ, ರೈತರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ. ಸಾರ್ವಜನಿಕ ವಿರೋಧವು ಕುರ್ಚಿಗೆ ಕುತ್ತು ತಂದಾಗ ಯೋಜನೆಯ ಪೈಲ್ ಮುಚ್ಚುತ್ತದೆ. ಸಮರ್ಥನೆಗಳ ಮಹಾಪೂರ ಹರಿಯುತ್ತದೆ.

ಬದುಕು ಹಸನಾಗುತ್ತದೆ ಅಂದಾಗ ಅಭಿವೃದ್ಧಿ ಯಾರಿಗೆ ಬೇಡ? ಕನ್ನಾಡು ಕಾಣುವ 'ಅಭಿವೃದ್ಧಿ' ಎಂತಹುದು? ಯೋಚನೆಗಳ ಹಿಂದೆ ಬಂಡವಾಳದ ಆಳ್ತನವಿದೆ, ಕಾಣದ ಮುಖಗಳ ಬಿಗಿಗಳಿವೆ, ಕಣ್ಣೀರಿಗೂ ಕರಗದ ಹೃದಯಗಳಿವೆ, ರಾಜಕಾರಣದ ಕಟಾಕ್ಷವಿದೆ. ಹೊರಪ್ರಪಂಚಕ್ಕೆ ಕಾಣದೇ ಇರುವ, ಮಾಧ್ಯಮಗಳ ಅರಿವಿಗೆ ಬಾರದ ಮಾತುಗಳಿವೆ. ಹಾಗಾಗಿ ವಿದ್ಯಾರ್ಥಿನಿಯ ಪ್ರಶ್ನೆ ಸಹಜ. ಪಾಠದಲ್ಲಿ ಉರುಹೊಡೆದ ಅಭಿವೃದ್ಧಿಯ ವ್ಯಾಖ್ಯೆಯೇ ಬೇರೆ, ಪ್ರಸ್ತುತ ಆಗುತ್ತಿರುವ ಸ್ಥಿತಿಯೇ ಬೇರೆ.

ರೈತ ಹಿತದ ಮಂತ್ರದೊಂದಿಗೆ ಅಭಿವೃದ್ಧಿಗಾಗಿ ಭೂಸ್ವಾಧೀನತೆ. ತಾನು ನಂಬಿದ, ಬದುಕನ್ನು ಕಟ್ಟಿಕೊಟ್ಟ ಭೂಮಿಯನ್ನು 'ಪುಡಿಗಾಸಿ'ಗೆ ಮಾರಿ ಅಲೆಮಾರಿ ಬದುಕನ್ನು ಅಪ್ಪಿಕೊಳ್ಳುವ ರೈತಕುಟುಂಬ. ಸೊಂಟತ್ರಾಣ, ಕಂಠತ್ರಾಣವುಳ್ಳವರ ಕಿಸೆಯೇನೋ ಭದ್ರ. ಸೋಗಿಲ್ಲದ ಅಪ್ಪಟ ಪ್ರಾಮಾಣಿಕ ಮನಸ್ಸುಗಳಿಗೆ ಹುನ್ನಾರಗಳು 'ಆಭಿವೃದ್ಧಿ'ಯಾಗಿಯೇ ಕಾಣುತ್ತದೆ. ಕಾಣುವ ವ್ಯವಸ್ಥೆ ರೂಪಿತವಾಗುತ್ತದೆ. ಕಳೆದುಕೊಂಡ ನೆಲಕ್ಕೆ ಸಮನಾಗಿ ಪರಿಹಾರವೋ, ಪುನರ್ವಸತಿಯೋ ಸಿಕ್ಕರೆ ಓಕೆ. ಇಲ್ಲದಿದ್ದರೆ ಉಟ್ಟ ಬಟ್ಟೆ, ಹೋದದ್ದೇ ಊರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನೆಮಾ 'ಪುಟ್ಟಕ್ಕನ ಹೈವೇ'ಯು 'ಅಭಿವೃದ್ಧಿ'ಯ ಹಿಂದಿನ ವ್ಯವಸ್ಥಿತ ಮುಖಗಳನ್ನು ಬಯಲು ಮಾಡುತ್ತದೆ. ಸುತ್ತಲಿನ ವಿದ್ಯಮಾನಗಳ ಕುರಿತು ಅಪ್ಡೇಟ್ ಆಗದೆ ಸಿನಿಮಾ ನೋಡಿದರೆ ವಿದ್ಯಾರ್ಥಿನಿಯ ಪ್ರಶ್ನೆ ನಮ್ಮಲ್ಲೂ ಹೊಳೆದೀತು.

ಪುಟ್ಟಕ್ಕ ಸಿನಿಮಾ ನಾಯಕಿ. ಬಿಸಲಳ್ಳಿಯ ರೈತ ಮಹಿಳೆ. ಸರಕಾರದ 'ಹೈವೇ' ಯೋಜನೆಗೆ ನೆಲ ಕಳೆದುಕೊಂಡ ನಿರ್ಭಾಗ್ಯೆ. ಅವಳ ಪಾಲಿಗೆ ಸರಕಾರಿ ಕಚೇರಿಗಳೂ ಮುಚ್ಚಿದ ಬಾಗಿಲು. ಜತೆಯಲ್ಲಿರುವ ನಂಬಿಗಸ್ಥರೆಲ್ಲರೂ ಸಮಯಸಾಧಕರಾಗಿ ಆಕೆಯ ಸಂಪಾದನೆಯನ್ನು ಬಾಚಿಕೊಳ್ಳುತ್ತಾರೆ. ಎಷ್ಟೋ ವರ್ಷಗಳಿಂದ ತಾನು ವಾಸಿಸುವ ಭೂಮಿಗೆ ಹಕ್ಕುಪತ್ರವಿಲ್ಲದ ಕಾರಣ ಪರಿಹಾರ ವಂಚಿತೆಯಾಗಿ, ದೊರೆಗಳಲ್ಲಿ ನಿವೇದಿಸಲು ರಾಜಧಾನಿ ಸೇರಿದಾಗ ಸರಕಾರವೇ ಬದಲಾಗುತ್ತದೆ. ಎರಡ್ಮೂರು ತಿಂಗಳು ಕಳೆದು ಪುನಃ ಹಳ್ಳಿ ಸೇರಿದಾಗ ಪುಟ್ಟಕ್ಕನ ಮನೆಯಿದ್ದಲ್ಲಿ ಡಾಬಾ ತೆರೆದಿತ್ತು. ಮಗಳು ಅಡ್ಡದಾರಿ ಹಿಡಿದಿದ್ದಳು. ಈಚೆ ನೆಲವೂ ಇಲ್ಲ, ಆಚೆ ಬದುಕೂ ಇಲ್ಲ.

ಇದು ಪುಟ್ಟಕ್ಕ ಒಬ್ಬಳ ಕತೆಯಲ್ಲ. ನಮ್ಮೆಲ್ಲರ ಕತೆ, ವ್ಯಥೆ. ನೆಮ್ಮದಿಯಿಂದಿದ್ದ ಹಳ್ಳಿಯಲ್ಲಿ ಸರ್ವೇ ಕಾರ್ಯ ಮಾಡುವಾಗ 'ಹೈವೇ ಬರುತ್ತೆ' ಖುಷಿ ಪಟ್ಟವರೆಷ್ಟೋ? 'ವ್ಯವಸಾಯ ಮಾಡುವುದಕ್ಕಿಂತ ವ್ಯಾಪಾರ ಮಾಡುವುದೇ ಲೇಸು' ಎನ್ನುವವರೆಷ್ಟೋ? ಅಮಾಯಕರನ್ನು ಹಿಂಡುವ ಮಧ್ಯವರ್ತಿಗಳು ಹುಟ್ಟಿಕೊಂಡವರೆಷ್ಟೋ? ಇವರ ಹೊಟ್ಟಗಿಳಿದು ಕರಗಿದ ನಂತರವೇ ಶೇಷ ಇತರರ ಪಾಲು. ನೆಲ ಕಳೆದುಕೊಂಡವರಿಗೆ ಪುಡಿಗಾಸು. ಪುಟ್ಟಕ್ಕನಂತಹ ಅಮ್ಮಂದಿರ ನೆಲೆಯಿಲ್ಲದ ಬದುಕು ದಾಖಲಾಗುವುದಿಲ್ಲ. ಗಮನಕ್ಕೂ ಬರುವುದಿಲ್ಲ.

ಇರಲಿ. ಸಿನೆಮಾಕ್ಕೆ ಬರೋಣ. ಪ್ರಕೃತ ಕನ್ನಾಡಿನಲ್ಲಿ ಕೃಷಿ ನೆಲದ ಮೇಲೆ ನಡೆಯುವ ಕಾಂಚಾಣದ ಕುಣಿತದ ಫ್ಲ್ಯಾಶ್ಬ್ಯಾಕ್. ನೆಲ ನುಂಗುವ ಮಂದಿಯ ಪ್ರತಿನಿಧಿಯಾಗಿ ಇಲ್ಲಿ ನಟರಿದ್ದಾರೆ ಅಷ್ಟೆ. ವಾಸ್ತವದಲ್ಲಿ ಮಾತುಗಳೆಲ್ಲಾ ಮೌನಗಳಾದರೆ, ಸಿನೆಮಾದಲ್ಲಿ ಅವಕ್ಕೆ ಮಾತು ಕೊಟ್ಟಿದ್ದಾರೆ.

ಇನ್ನೊಬ್ಬಳು ವಿದ್ಯಾರ್ಥಿನಿಯ ಚೋದ್ಯ. - 'ಸಿನೆಮಾದ ಎಂಡಿಂಗ್ ಪಾಸಿಟಿವ್ ಮಾಡಬಹುದಿತ್ತಲ್ವಾ?'. ನಿರ್ಮಾಪಕ ಬಿ. ಸುರೇಶ್ ಹೇಳುತ್ತಾರೆ, 'ಚಿತ್ರದಲ್ಲಿ ಸಮಸ್ಯೆಗೆ ಉತ್ತರ ಕೊಟ್ಟರೆ ಪ್ರೇಕ್ಷಕ ಸಂತೋಷಪಡುತ್ತಾನೆ. ಮರೆತುಬಿಡುತ್ತಾನೆ. ಈ ಚಿತ್ರದ ಹೂರಣ ಮರೆತುಬಿಡುವಂತಹುದಲ್ಲ. ನಾನೇ ಉತ್ತರ ಹೇಳಿದ್ರೆ ಒಂದು ಪಕ್ಷ (ರಾಜಕೀಯ ಅಲ್ಲ!) ಆಗಿ ಬಿಡ್ತೇನೆ. ಪಕ್ಷ ವಹಿಸಿದರೆ ಬ್ರಾಂಡ್ ಆಗ್ತೇನೆ. ಹಾಗಾಗಕೂಡದು ಎಂಬುದಕ್ಕಾಗಿ ಪುಟ್ಟಕ್ಕನ ಸಮಸ್ಯೆಗೆ ನೀವೇ ಉತ್ತರ ಕಂಡುಕೊಳ್ಳಿ. ಇದು ನಿಮ್ಮೆಲ್ಲರ ಸಮಸ್ಯೆ' ಎಂದರು.

ಈ ಪ್ರಶ್ನೆಗೆ 'ಕೇಳಿದಷ್ಟು ಕ್ರಯಕ್ಕೆ ಭೂಮಿಯನ್ನು ಕೋಡೋದು, ಮಧ್ಯವರ್ತಿಗಳ ಕೈಗೊಂಬೆಯಾಗುವುದು, ಸಿಕ್ಕ ಹಣದಲ್ಲಿ ಹೊಸ ಬದುಕನ್ನು ರೂಪಿಸುವುದು. ಕೊನೆಗೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಹೇಗೇಗೋ ಬದುಕುವುದು' ಇವೇ ಮುಂತಾದ ಉತ್ತರಗಳು ಧುತ್ತೆಂದು ಹಾದುಬಿಡುತ್ತವೆ. ಅಷ್ಟೇ ಅಲ್ವಲ್ಲ. ಕೃಷಿ ನೆಲವನ್ನು ನುಂಗುವ ಅಭಿವೃದ್ಧಿ ಅನಿವಾರ್ಯವೇ? ಇದರಿಂದ ಊರು ಉದ್ದಾರವಾಗುವುದೇ? ಅಭಿವೃದ್ಧಿ ಅನಿವಾರ್ಯ ಎಂದಿಟ್ಟುಕೊಳ್ಳೋಣ, ಆಗ ಭೂರಹಿತರಿಗೆ ನ್ಯಾಯ ಸಿಕ್ಕಿದೆಯೇ? ಇವೇ ಮುಂತಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಪ್ರಕೃತ ಹಾಗಿಲ್ಲ. ವಾಸ್ತವ ಸಮಸ್ಯೆಯ ಪ್ರತಿನಿಧಿಯಾಗಿ ಪುಟ್ಟಕ್ಕ ನಮ್ಮೆದುರಿಗಿದ್ದಾಳೆ. ಉತ್ತರ ನಾವೇ ಕಂಡುಕೊಳ್ಳಬೇಕೆಂಬುದು ನಿರ್ಮಾಪಕರ ಆಶಯ.

ಕಳೆದೊಂದು ದಶಕದಲ್ಲಿ ಹೈವೇ ನಿರ್ಮಾಣದಂತಹ ಕೆಲಸಗಳಿಗೆ ಮೊದಲ ಮಣೆ. ಗಜಗರ್ಭ ಗಾತ್ರದ ಬಂಡವಾಳ ಬೇಡುವ ವ್ಯವಸ್ಥೆ. ಹಳ್ಳಿಯ ಮಂದಿ ನೋಡದೇ ಇದ್ದಂತಹ ಯಂತ್ರಗಳು, ಸೇತುವೆಗಳು, ರಸ್ತೆಗಳು, ಅದರ ಮೇಲೆ ವೇಗವಾಗಿ ಸಾಗುವ ವಾಹನಗಳನ್ನು ರಸ್ತೆಯಂಚಿನ ಬೇಲಿಯ ಹೊರಗೆ ನೋಡಿ ನಿಬ್ಬೆರಗಾಗುವ 'ಸುಖ'! ಹೊಟ್ಟೆಪಾಡಿಗಾಗಿ ಇದ್ದ ಕಾಸಿನಲ್ಲಿ ಡಾಬವೋ, ಬೀಡಾಬೀಡಿ ಅಂಗಡಿಯನ್ನು ತೆರೆದರೆ ನೈಸಾದ ರಸ್ತೆಯಲ್ಲಿ ಸಾಗುವ ವಾಹನಗಳ ವೇಗಕ್ಕವು ಮಸುಕಾಗಿ ಕಾಣಿಸುತ್ತವೆ.
ಒಂದು ವಾಕ್ಯ ಹೀಗಿದೆ -'ಹೊಸ ರೋಡ್ನಲ್ಲಿ ದಿಕ್ಕೇ ತೋರುವುದಿಲ್ಲ. ಇದು ಮನುಷ್ಯರಿಗಲ್ಲ...' ಈಗಿನ ಹೈವೇಯಲ್ಲಿ ಸಾಗಲು ಅನಕ್ಷರಸ್ಥರಿಗೆ ಅಸಾಧ್ಯ. ಯಾರಲ್ಲಾದರೂ ಕೇಳೋಣವೋ ಜನಸಂಚಾರವೇ ಇಲ್ಲ. ಭದ್ರತೆ, ಜತೆಗೆ ವಾಹನಗಳ ಭರಾಟೆ. ರಸ್ತೆಯ ಬದಿಯಲ್ಲಿ ಚೂರುಪಾರು ಭೂಮಿಯಲ್ಲಿ ಏನೋ ಜೀವನ ಸಾಗಿಸೋಣ ಅಂದರೆ, ಹತ್ತಿಪ್ಪತ್ತು ಕಿಲೋಮೀಟರ್ ಸುತ್ತು ಬಳಸಿ ಬರಬೇಕಾದ ಸ್ಥಿತಿ.

'ಎಸ್ಈಝಡ್ ನಮ್ಮೂರಿಗೂ ಬಂದರೆ?,' ಇನ್ನೋರ್ವ ವಿದ್ಯಾರ್ಥಿಯ ಪ್ರಶ್ನೆ. ಹೌದಲ್ವಾ. ಯಾಕೆ ಬರಬಾರದು? ನಮ್ಮೂರು, ನಮ್ಮ ನೆಲ, ಜಲ, ಹಸಿರು ಎನ್ನುತ್ತಾ ಸಂತೋಷದಲ್ಲಿ ನಿದ್ರಿಸಿ, ಬೆಳಗ್ಗೆ ಏಳುವಾಗ ದೈತ್ಯ ಯಂತ್ರ ಮನೆಯಂಗಳದಲ್ಲಿ ಕಂಡರೂ ನೀವು ವಿರೋಧಿಸುವಂತಿಲ್ಲ. ಯಂತ್ರದ ಬಾಚುಬಾಯಿಯ ಹಲ್ಲುಗಳಿಗೆ ಸಿಗದಂತೆ ನಿಮ್ಮನ್ನು ನೀವೇ ಕಾಪಾಡಿಕೊಳ್ಳಬೇಕು.

ಈಚೆಗೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ 'ಪುಟ್ಟಕ್ಕನ ಹೈವೆ' ಪ್ರದರ್ಶನವಿತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಸಂಸ್ಥೆ 'ಬೆಳ್ಳಿ ಸಾಕ್ಷಿ'ಯ ಸಂಚಾಲಕ ಡಾ.ರಾಘವೇಂದ್ರ ಪ್ರಸಾದ್ರ ಆಯೋಜನೆ. ಅರಂಭಕ್ಕೆ ಸುರೇಶ್ 'ಸಿನೆಮಾ ನೋಡಲು ಜನ ಇದ್ದಾರೆ. ಆದರೆ ಸಿನೆಮಾ ಓದುವ ಜನವಿಲ್ಲ. ಓದುವ ಪ್ರಯತ್ನ ಮಾಡಿ' ಎಂದು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.

ಚಲನಚಿತ್ರವೆಂದರೆ ಶಾರೂಕ್ ಖಾನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ರಮ್ಯಾ... ಇಂತಹ ತಾರೆಯರೇ ಆವರಿಸಿದ ಮನಸ್ಸುಗಳಿಗೆ ಪುಟ್ಟಕ್ಕ ಢಾಳಾಗಿ ಕಂಡರೆ ಅದಕ್ಕೆ ವ್ಯವಸ್ಥೆಗಳು ಕಾರಣ ಹೊರತು, ಮನಸ್ಸುಗಳಲ್ಲ.
ಚಿತ್ರವನ್ನು ಒಂದಷ್ಟು ವಿದ್ಯಾರ್ಥಿಗಳು ಓದಿದ್ದರಿಂದಲೇ 'ಪುಟ್ಟಕ್ಕನ ಹೈವೇ ನಮ್ಮೂರಿಗೂ ಬಂದರೆ?' ಎಂಬ ಪ್ರಶ್ನೆಯನ್ನೂ ಮೂಡಿಸಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಆಟವನ್ನು ಸಿನೆಮಾ ಚೆನ್ನಾಗಿ ಪ್ರತಿಬಿಂಬಿಸಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ 'ಪುಟ್ಟಕ್ಕನ ಮೆಡಿಕಲ್ ಕಾಲೇಜು' ಕಥೆ ಚಿತ್ರದ ಮೂಲವಸ್ತು. 'ಸರಿಯಾಗಿ ಆರ್ಥವಾಗಬೇಕಿದ್ದರೆ ಎರಡೋ ಮೂರೋ ಸಲ ನೋಡಿ' ಎನ್ನಲು ಸುರೇಶ್ ಮರೆಯಲಿಲ್ಲ.

ಅನ್ನ ಕೊಡುವ ಕೃಷಿ ನೆಲದ ಕೂಗು ಯೋಜನೆ ತಯಾರಿಸುವ ತಂಪುಕೋಣೆಗೆ ಕೇಳಿಸದು. ಒಂದು ಕಿಲೋ ಅಕ್ಕಿಗೆ ಪರದಾಡುವ ಮಂದಿಯ ನೋವು ಅಭಿವೃದ್ಧಿ ಹರಿಕಾರರಿಗೆ ಬೇಕಿಲ್ಲ. ಕಣ್ಣೀರನ್ನು ಒರೆಸುವ, ಬದುಕಿಗೆ ಆಸರೆ ನೀಡುವ, ಬದುಕನ್ನು ಹೈರಾಣ ಮಾಡದ ಅಭಿವೃದ್ಧಿಯನ್ನು ರೈತನೇ ಸ್ವಾಗತಿಸುತ್ತಾನೆ. ಅದಕ್ಕೆ ಯಾರ ಒತ್ತಡವೂ ಬೇಡ. ರೈತ ಕೇಳುವುದಿಷ್ಟೇ - ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ.

ಎಸ್ಸೆಮ್ಮೆಸ್: 'ಸಿಎಂ ಸಾಹೇಬ್ರು ಚಿತ್ರ ನೋಡಿ ಮೌನವಾಗಿ ಬಿಟ್ರಂತೆ.' ವಾ.. ಈ ವಿಚಾರದಲ್ಲಿ ಅವರು ಮೌನ ವಹಿಸುವುದೇ ಲೇಸು. ಮಾತಾದರೆ ಆಣೆ-ಪ್ರಮಾಣ!

(ಜು.೨೬ರಂದು ಉದಯವಾಣಿಯಲ್ಲಿ ಪ್ರಕಟವಾದ ಬರೆಹ - "ನೆಲದ ನಾಡ" ಕಾಲಂ)

ಕೊರೆತದ ಭೋರ್ಗರೆತ!

ಕುಡ್ಲದಲ್ಲೊಂದು ಧಾರ್ಮಿಕ ಸಮಾರಂಭ. ಸಾಮಾಜಿಕ, ಧಾರ್ಮಿಕ, ರಾಜಕೀಯ 'ನೇತಾರ'ರು - ಹೀಗೆ ವೇದಿಕೆಯಲ್ಲಿ ಹದಿನೈದು ಗಣ್ಯರು ಉಪಸ್ಥಿತರಿದ್ದಿರಬೇಕು. ಪ್ರಾರ್ಥನೆ, ಸ್ವಾಗತ, ಪ್ರಸ್ತಾವನೆ, ಹೂಗುಚ್ಛ, ಶಾಲು-ಸ್ಮರಣಿಕೆ ನೀಡಿಕೆ.. ಇಷ್ಟಕ್ಕೇ ಮುಕ್ಕಾಲು ಗಂಟೆ. ಸ್ವ-ಪಾತ್ರ ವಿವೇಚನೆಯಿಲ್ಲದ ಎಂಸಿಯ ಕೊರೆತ.

ದೀಪ ಜ್ವಲಿಸಿ ಉದ್ಘಾಟನೆ. ಛಾಯಾಗ್ರಾಹಕರಿಗಾಗಿಯೇ ಮತ್ತೊಮ್ಮೆ ದೀಪಜ್ವಲನ! (ಆ ಹೊತ್ತಿಗೆ ಅವರು ಯಾರಲ್ಲೋ ಹರಟುತ್ತಿದ್ದರು) ಉದ್ಘಾಟಕರ ಮಾತು-ಉಪದೇಶ. 'ನನಗೆ ಇನ್ನೊಂದು ಕಾರ್ಯಕ್ರಮಕ್ಕೆ ತುರ್ತಾಗಿ ಹೋಗಬೇಕಾಗಿದೆ' ಎನ್ನುತ್ತಾ ತೆರಳುವ ಮುನ್ಸೂಚನೆ ಸಿಕ್ಕಾಗ ಸಂಘಟಕರು ಕಕ್ಕಾಬಿಕ್ಕಿ. ತಕ್ಷಣ ಧನ್ಯವಾದ ಸಮರ್ಪಣೆ. ಸ್ಮರಣಿಕೆ ಪ್ರದಾನ. ಬಹುಪರಾಕ್ ಉವಾಚ.

ಮುಖ್ಯ ಅತಿಥಿಗಳ ಸರದಿ. ಹರಟೆ-ಕೊರೆತ. ಒಂದರ್ಧ ಗಂಟೆ ಜಾಳು ಜಾಳು ವಿಚಾರಗಳ ವಾಕರಿಕೆ. 'ಇವರೂ ಅನ್ಯಕಾರ್ಯ ನಿಮಿತ್ತ' ನಿರ್ಗಮನ. ಮತ್ತೊಬ್ಬ, ಇನ್ನೊಬ್ಬ ಎನ್ನುತ್ತಾ ಭಾಷಣ ಮಾಡಿ, 'ಅನ್ಯಕಾರ್ಯ ನಿಮಿತ್ತ' ಹೊರಟ ಬಳಿಕ ವೇದಿಕೆಯಲ್ಲಿ ಅಧ್ಯಕ್ಷರು ಮಾತು ಉಳಿದಿದ್ದರು! ಸಭಾಸದರು ಮಧ್ಯಾಹ್ನದ ಪೂಜೆಯ ನಿರೀಕ್ಷೆಯಲ್ಲಿದ್ದುದರಿಂದ ಸಭಾಮಂದಿರ ತುಂಬಿತ್ತು!
'ಕೊನೆಗೆ ಅಧ್ಯಕ್ಷರ ಭಾಷಣ' ನಿರ್ವಾಹಕರಿಂದ ಆರ್ಡರ್! ಪಾಪ, ಆಗಲೇ ಕೊರೆತದ ಭೋರ್ಗರೆತಕ್ಕೆ ಹಣ್ಣುಗಾಯಿಯಾಗಿದ್ದ ಸಭಾಸದರು ಆಕಳಿಸುತ್ತಿದ್ದರು. ಅಧ್ಯಕ್ಷರಿಂದಲೂ ಹಿತವಚನ. ವೇದಿಕೆಯಿಂದ ಪ್ರತೀಯೊಬ್ಬರೂ ನಿರ್ಗಮಿಸುತ್ತಿರುವಾಗಲೂ 'ಧನ್ಯವಾದ ಸಮರ್ಪಣೆ' ಆಗಿದ್ದರೂ, ಕಾರ್ಯಕ್ರಮದ ಕೊನೆಗೆ ವೇದಿಕೆಯ ಬರಿದಾದ ಆಸನಗಳಿಗೆ ಧನ್ಯವಾದ. ಅಂತೂ ಕಲಾಪ ಮುಗಿಯಿತು.

ಬಹುತೇಕ ಸಮಾರಂಭಗಳಲ್ಲಿ ಇಂತಹುದೇ ಘಟನೆಗಳ ಮರುಕಳಿಕೆ ಕಾಣಬಹುದು. ಸಭಾಸದರ ಇರುವಿಕೆ, ತನ್ನ ಭಾಷಣವೋ, ಉಪದೇಶವೋ ಸ್ವೀಕಾರವಾಗುತ್ತಾ, ಇಡೀ ಕಲಾಪಕ್ಕೆ ಇರುವ ಸಮಯ ಎಷ್ಟು, ಅದರಲ್ಲಿ ತನ್ನ ಪಾತ್ರವೆಷ್ಟು, ತಾನೇನು ಮಾತನಾಡಬೇಕು - ಈ ಮುಂತಾದ ವಿಚಾರಗಳನ್ನು 'ಅತಿಥಿ'ಯಾದವ ಮೊದಲೇ ತಿಳಿದುಕೊಳ್ಳದಿದ್ದರೆ ಸಂಘಟಕರ 'ತಿಥಿ' ಮಾಡಿದಂತೆ.

ಈಗೀಗ ಸಮಾರಂಭಗಳಲ್ಲಿ ಭಾಗವಹಿಸುವುದೇ ಹಿಂಸೆಯ ಅನುಭವ. ಕೊರೆತಗಳ ಮಾರುಮಾಲೆ. ವಿಷಯಕ್ಕಿಂತ ಹೊರ ಸಂಚಾರ. ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಮಾತು. ಸ್ವಾಗತ, ಪ್ರಸ್ತಾವನೆ, ಧನ್ಯವಾದ ಮತ್ತು ಎಂಸಿಗಳೇ ಕಲಾಪವನ್ನು ನುಂಗಿಬಿಡುತ್ತಾರೆ. ಹೊಗಳಿಕೆ ಬೇಕು. ಅತಿಯಾದರೆ ವಿಷ. 'ಸಭಾಗೌರವ'ದ ಅರ್ಥದ ಹೊಳಹೇ ತಿಳಿಯದ್ದರ ಫಲ.
ಈಚೆಗೆ ಕೇರಳದ ರಾಜಧಾನಿಯಲ್ಲಿ ಮೂರು ದಿವಸದ ರಾಷ್ಟ್ರೀಯ ಹಲಸು ಕಾರ್ಯಗಾರ ನಡೆದಿತ್ತು. ವೇದಿಕೆಯಲ್ಲಿ ಅಧ್ಯಕ್ಷರು. ನಾಲ್ಕು ಮಂದಿ ಅತಿಥಿಗಳು. ದಿವಸಕ್ಕೆ ಎರಡರಂತೆ, ಮೂರು ದಿವಸದಲ್ಲಿ ಆರು ಸಭಾಕಾರ್ಯಕ್ರಮ. ಮಿಕ್ಕಂತೆ ಪವರ್ಪಾಯಿಂಟ್ ಪ್ರಸ್ತುತಿ.

ಸ್ವಾಗತ ಮಾಡುವವರನ್ನು ನಿರ್ವಾಹಕರು ವೇದಿಕೆಗೆ ಆಹ್ವಾನಿಸಿದಲ್ಲಿಗೆ ಅವರ ನಿರ್ಗಮನ. ಮತ್ತೆಲ್ಲಾ ಆಧ್ಯಕ್ಷರಿಂದಲೇ ನಿರ್ವಹಣೆ. ಅತಿಥಿಗಳನ್ನು ಪರಿಚಯ ಮಾಡುವಲ್ಲಿಂದ ಕಲಾಪಕ್ಕೆ ಚಾಲನೆ. ಅವರ ಭಾಷಣ ವಿಷಯಕ್ಕಿಂತ ಹೊರ ಹೋದರೆ, ಅಧ್ಯಕ್ಷರೇ ಮಧ್ಯಪ್ರವೇಶಿಸಿ ಭಾಷಣ ನಿಲ್ಲಿಸುವಂತೆ ಸೂಚನೆ ನೀಡುತ್ತಾರೆ. 'ಈಗ ನನ್ನ ಭಾಷಣದ ಸರದಿ' ಎಂದು ಅಧ್ಯಕ್ಷರು ಭಾಷಣವನ್ನೂ ಮುಗಿಸಿ, 'ಈಗ ಇಂತಹವರಿಂದ ಧನ್ಯವಾದ' ಎಂಬಲ್ಲಿಗೆ ಅವರ ಜವಾಬ್ದಾರಿ ಮುಗಿಸುತ್ತಾರೆ. ಕಲಾಪದ ಕೊನೆಗೆ ಬರುವ ನಿರ್ವಾಹಕ ಮುಂದಿನ ಸೆಶನ್ ಮುನ್ನಡೆಸುತ್ತಾರೆ.

ಈ ರೀತಿಯ ಕಲಾಪ ನಿರ್ವಹಣೆ ಬಹಳ ಆಪ್ತವಾಗುತ್ತದೆ. ಮಧ್ಯೆ ನಿರ್ವಾಹಕರ ವೃಥಾಲಾಪ ಇರುವುದಿಲ್ಲ. ನಿಚ್ಚಳವಾಗಿ ವಿಷಯಕ್ಕೆ ಒತ್ತು. 'ಅವರೇ.. ಇವರೇ..' ಎನ್ನುವ ಜಾಳಿಗೂ ಕೊಕ್. ಹೀಗಾದಲ್ಲಿ ಪ್ರೇಕ್ಷಕರೂ ತಲೆನೋವಿನಿಂದ ಮುಕ್ತಿ ಪಡೆಯುತ್ತಾರೆ.
ಅಲ್ಲೇ ಒಂದು ಘಟನೆ ನಡೆಯಿತು. ಒಂದು ಕಲಾಪದಲ್ಲಿ ಹಿರಿಯ ಅನುಭವಿಯೋರ್ವರ ಅಧ್ಯಕ್ಷತೆ. ಮುಖ್ಯ ಅತಿಥಿಯಾಗಿದ್ದರು ರಾಜಕೀಯ ನೇತಾರರು. ಹಲಸಿನ ಕುರಿತು ಮಾತನಾಡಬೇಕಿದ್ದ ಅವರು ರಾಜಕೀಯ ವಿಶ್ಲೇಷಣೆಯಲ್ಲಿ ತೊಡಗಿದ್ದರು. ಹದಿನೈದು ನಿಮಿಷ ಸಹನೆಯಿಂದ ಕಾದ ಅಧ್ಯಕ್ಷರು, ನೇರವಾಗಿ 'ವಿಷಯದಲ್ಲೇ ಮಾತನಾಡಿ' ಎಂಬ ಸೂಚನೆ ಕೊಟ್ಟರು. ಅಭ್ಯಾಸ ಬಲದಂತೆ ಇವರ ಕೊರೆತ ಹಳ್ಳ, ತೋಡು, ಹೊಳೆ ದಾಟಿ ಸಮುದ್ರ ಸೇರುತ್ತಿದ್ದಂತೆ, 'ಮಾತು ನಿಲ್ಲಿಸಿ, ನಿಮ್ಮ ಸಮಯ ಮೀರಿತು' ಎಂದು ಎತ್ತರದ ಸ್ವರದಲ್ಲಿ ಅಧ್ಯಕ್ಷರು ಹೇಳಿದಾಗ ಸಭಾಭವನ ಒಂದು ಕ್ಷಣ ಸ್ತಬ್ಧ. ಭಾಷಣಕ್ಕೂ ವಿದಾಯ.

ಈ ರೀತಿಯ ಕಲಾಪವನ್ನು ನಮ್ಮಲ್ಲೂ ಯಾಕೆ ಮಾಡಬಾರದು? ಅಗತ್ಯಕ್ಕಿಂತ ಹೆಚ್ಚು ಅತಿಥಿಗಳು, 'ಅವರೇ, ಇವರೇ.. ಎನ್ನುವಲ್ಲಿ ಪರದಾಟ, ತನ್ನನ್ನು ಕರೆದ ಸಂಘಟಕರ ಹೆಸರೂ ಮರೆತುಹೋಗಿ, ವೇದಿಕೆಯ ಹಿಂಬದಿಯಲ್ಲಿ ಕಟ್ಟಿದ ಬ್ಯಾನರನ್ನು ಓದಲು ತ್ರಾಸಪಡುವ ಮುಖಗಳು ಎಷ್ಟು ಬೇಕು? ನಮ್ಮಲ್ಲಿ ಸಭಾಕಲಾಪ ಬಿಡಿ, ವಿಚಾರಗೋಷ್ಠಿಗಳಲ್ಲೂ 'ನಮಗ್ಯಾಗೆ ಬಿಡಿ, ಮಾತನಾಡಲಿ' ಎಂದು ಅಧ್ಯಕ್ಷರೇ ರಿಯಾಯಿತಿ ನೀಡಿದರೆ? ಕೆಲವು ವರುಷಗಳ ಹಿಂದೆಲ್ಲಾ ಅಧ್ಯಕ್ಷರೇ ಕಲಾಪವನ್ನು ಮುನ್ನಡೆಸುತ್ತಿದ್ದ ದಿವಸಗಳನ್ನು ಮರೆತಿಲ್ಲ.

ನೀಡಿದಂತಹ ಹಾರಗಳು, ಹೂಗುಚ್ಚಗಳನ್ನು 'ಗಣ್ಯರು' ವೇದಿಕೆಯಲ್ಲೇ ಬಿಟ್ಟು ಹೋಗುವುದು ಹೆಚ್ಚು. 'ನಾವು ಕೊಂಡೋಗಿ ಏನು ಮಾಡೋದು' ಎಂದು 'ಗಣ್ಯ'ರೊಬ್ಬರು ಪ್ರತಿಕ್ರಿಯಿಸಿದ್ದರು. ಸರಿ, ಹೂವಿನ ಬದಲಿಗೆ ಪುಸ್ತಕವನ್ನು ನೀಡಿದರೆ, 'ಯಾರು ಮಾರಾಯ್ರೆ ಅದನ್ನು ಓದುವುದು, ನಿಮಗಿರಲಿ' ಎನ್ನುತ್ತಾ ಪುಸ್ತಕವೊಂದನ್ನು ನನ್ನ ಕೈಗೆ ಕುಕ್ಕಿದ ಮಹನೀಯರೋರ್ವರನ್ನು ಹೇಗೆ ಮರೆಯಲಿ?
'ಪುರುಸೊತ್ತಿಲ್ಲ, ಅವರು ಕರೆದಿದ್ದಾರಲ್ಲಾ, ಹಾಗಾಗಿ ಬಂದೆ', 'ಛೇ.. ಇನ್ನೂ ಶುರುವಾಗಿಲ್ವಾ. ನಾನು ಕರೆಕ್ಟ್ ಟೈಂಗೆ ಬಂದೆ', 'ನಮಗೆ ಬೇಕಾದವ ಮಾರಾಯ್ರೆ. ಮನೆಗೆ ಬಂದು ಹೇಳುವಾಗ ಇಲ್ಲ ಎನ್ನುವಂತಿಲ್ಲ. ಹಾಗಾಗಿ ಒಪ್ಪಿಕೊಂಡೆ'.. ಗಣ್ಯರ ಇಂತಹ ಮಾತುಗಳು ಸಂಘಟಕನ ಕಿವಿಗೆ ಬೀಳದೆ ಇರುವುದು ಹೆಚ್ಚು. ಈ ಮಾತನ್ನು ಕೇಳಿದಾಗಲೆಲ್ಲಾ 'ಗಣ್ಯರು' ಎಂಬ ಶಬ್ದದ ಅರ್ಥ ಯಾಕೋ ಈಗೀಗ ಮಸುಕಾಗುತ್ತಿದೆ ಅನ್ನಿಸುತ್ತದೆ.

ಒಂದು ಗಂಟೆಯ ಒಳಗೆ ಮುಗಿಯಬಲ್ಲ ಕಲಾಪವನ್ನು ರೂಪಿಸಲು ಸಾಧ್ಯವಿಲ್ವಾ. ಇದರಿಂದ ಪ್ರೇಕ್ಷಕರಿಗೂ ನೆಮ್ಮದಿ, ವಿಷಯಕ್ಕೆ ನ್ಯಾಯ ಸಲ್ಲಿಸಿದ ತೃಪ್ತಿ. ಇಲ್ಲದಿದ್ದರೆ 'ಸಮಾರಂಭಕ್ಕೆ ಜನ ಬರುವುದಿಲ್ಲ ಮಾರಾಯ್ರೆ' ಎನ್ನುವ ಗಿಳಿಪಾಠವನ್ನು ಪ್ರತೀವರ್ಷ ನವೀಕರಣ ಮಾಡುತ್ತಿದ್ದರಾಯಿತು.

ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ 2011-12ನೇ ಸಾಲಿನ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಬರುವ ಅಕ್ಟೋಬರ್ ನಲ್ಲಿ ಶುರುವಾಗಲಿರುವ ಅಂಚೆ ತೆರಪಿನ (ಕರೆಸ್ಪಾಂಡೆನ್ಸ್) ತರಬೇತಿ ಒಂದು ವರ್ಷ ಅವಧಿಯದ್ದಾಗಿರುತ್ತದೆ.

ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಮಹತ್ವ ಮತ್ತು ಸ್ವರೂಪ, ಬರಹದ ಪ್ರಕಾರಗಳು, ಬರವಣಿಗೆಯ ತಂತ್ರಗಾರಿಕೆ, ಛಾಯಾ ಪತ್ರಿಕೋದ್ಯಮ ಇವೇ ಮುಂತಾದ ವಿಷಯಗಳ ಕುರಿತು ಅನುಭವಿ ಬರಹಗಾರರಿಂದ ತರಬೇತಿ ನೀಡಲಾಗುವುದು. ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಅವಕಾಶವಿದೆ. ಕೃಷಿಕರು, ಕಾಲೇಜು ಮತ್ತು ವಿಶ್ವವಿದ್ಯಾಲ0ುಗಳಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಸ್ವ0ಯಂ ಸೇವಾ ಸಂಸ್ಥೆಗಳ ಕಾರ್ಯುಕರ್ತರು, ಕೃಷಿ-ಗ್ರಾಮೀಣ ಸಂಬಂಧಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ತರಬೇತಿಯಿಂದ ವಿಶೇಷ ಪ್ರಯೋಜನವಿದೆ. ಇತರ ಆಸಕ್ತರೂ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ - ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಕಲಿಕೆ. ಕನ್ನಡ ಚೆನ್ನಾಗಿ ಬರೆಯಬಲ್ಲ ಇತರ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ವಯೋಮಿತಿ 50 ವರ್ಷ.

ಕನ್ನಡದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮದ ಬೆಳವಣಿಗೆಗಾಗಿ ಕೃಷಿ ಮಾಧ್ಯಮ ಕೇಂದ್ರ ಎಂಟು ವರ್ಷಗಳ ಹಿಂದೆ ಈ ತರಬೇತಿ ಆರಂಭಿಸಿದೆ. ಮೊದಲ ಏಳು ತಂಡಗಳಲ್ಲಿ ತೇರ್ಗಡೆಯಾದ 80 ಮಂದಿಯನ್ನು 'ಕಾಮ್ ಫೆಲೋ'ಗಳೆಂದು ಪರಿಗಣಿಸಲಾಗಿದೆ. ಎಂಟನೇ ತಂಡದಲ್ಲಿ 30 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಇದುವರೆಗೆ ತರಬೇತಿ ಪಡೆದವರು ವಿವಿಧ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ.

ಮಾಹಿತಿ ಪತ್ರ ಪಡೆದುಕೊಳ್ಳಲು ಕೊನೆಯ ದಿನ ಜುಲೈ 30, 2011. ಆಗಸ್ಟ್ 15ರ ಒಳಗಾಗಿ ಅರ್ಜಿ ನಮಗೆ ತಲುಪಬೇಕು. ಸೆಪ್ಟೆಂಬರ್ 5ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗುವುದು.

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನವೆಂಬರ್ 11ರಿಂದ 13ರ ವರೆಗೆ ಧಾರವಾಡ ಸಮೀಪದ 'ಸುಮನ ಸಂಗಮ' ಕಾಡು ತೋಟದಲ್ಲಿ ಪ್ರಾಥಮಿಕ ಶಿಬಿರ ನಡೆಸಲಾಗುವುದು. ಇದರಲ್ಲಿ ಅನುಭವಿ ಅಭಿವೃದ್ಧಿ ಬರಹಗಾರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಲೇಖನ ಬರವಣಿಗೆ0ುಲ್ಲಿ ಮಾಹಿತಿ-ಮಾರ್ಗದರ್ಶನ ನೀಡಲಿದ್ದಾರೆ. ಕ್ಷೇತ್ರಭೇಟಿ ಹಾಗೂ ಬರವಣಿಗೆಯಲ್ಲಿ ಪ್ರಾಯೋಗಿಕ ತರಬೇತಿ ಕೂಡ ಇರುತ್ತದೆ.

ಮಾಹಿತಿ ಪತ್ರ, ಅರ್ಜಿ ಮತ್ತಿತರ ವಿವರಕ್ಕಾಗಿ 50 ರೂಪಾಯಿ ಮೌಲ್ಯದ ಅಂಚೆಚೀಟಿಯನ್ನು ಜೊತೆಯಲ್ಲಿಟ್ಟು ಈ ವಿಳಾಸಕ್ಕೆ ಪತ್ರ ಬರೆಯಬೇಕಾಗಿ ಕೋರಿಕೆ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008.

Monday, July 25, 2011

ಮತ್ತೆ ಮೂಡಿತು ಜೇನಿನೊಲವು

"ಹಾವೇರಿ, ಧಾರವಾಡಗಳಲ್ಲಿ ಗುತ್ತಿಗೆಯಾಧಾರಿತ ಸೀಡ್ ಫಾರ್ಮ್ ಗಳಿವೆ. ಹಲವಾರು ರೈತರು ಈ ಯೋಜನೆಯಲ್ಲಿದ್ದಾರೆ. ಜೇನು ಹುಳುಗಳ ಪರಾಗಸ್ಪರ್ಶದಿಂದ ತಾವು ಉತ್ಪಾದಿಸುವ ಬೀಜದ ಗುಣಮಟ್ಟ ಕೆಡುತ್ತದೆ ಎಂಬುದಕ್ಕಾಗಿ ಕಂಪನಿಗಳೇ ರೈತರಿಂದ ಜೇನುಕುಟುಂಬಗಳನ್ನು ಮಾಡಿಸುತ್ತಿದ್ದಾರೆ," ಎಂಬ ಮಾಹಿತಿಯನ್ನು ಉದಾಹರಣೆ ಸಹಿತ ಸಾಗರ ಜೇನು ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ ಸಾಗರ್ ಅವರು ಹೇಳುತ್ತಾ, "ಈಗ ಇಲ್ಲಿ ರೈತರೇ ಜೇನು ಕೃಷಿಯತ್ತ ಆಕರ್ಶಿತರಾಗುತ್ತಿದ್ದಾರೆ!'" ಎಂಬ ಸಂತೋಷದ ಸುದ್ದಿಯನ್ನು ಹೇಳಲು ಮರೆಯಲಿಲ್ಲ. ಇದು ಸಾಗರ ಜೇನು ಸಹಕಾರ ಸಂಘದ ಕರಾಮತ್ತು.

ಒಂದು ಕಾಲಘಟ್ಟದಲ್ಲಿ ಮಲೆನಾಡಿಯಲ್ಲಿ ಜೇನು ಸಮೃದ್ಧ. ಜೇನು ಕುಟುಂಬಗಳು ಕಾಯಿಲೆಯಿಂದಾಗಿ ನಾಶವಾಗುತ್ತಾ ಬಂತೋ, ಅಲ್ಲಿಂದ ಜೇನು ಕೃಷಿಗೆ ಹಿಂಬಡ್ತಿ. ಅಲ್ಲೋ ಇಲ್ಲೋ ಕೆಲವರು ಕೃಷಿ ಮಾಡುತ್ತಿದ್ದಾರಷ್ಟೇ.

ಸಾಗರದ ರೈತ ಸ್ನೇಹಿತರ ಒಕ್ಕೂಟ 'ರೈತಾಪಿ' ಜೇನಿಗೆ ಪುನಶ್ಚೇತನ ನೀಡುವತ್ತ ಒಲವು. ಸಮ್ಮೇಳನ, ಸಭೆಗಳ ಮೂಲಕ ಜೇನುಪ್ರಿಯರನ್ನು ಗುರುತಿಸಿ ಸುಖ-ದುಃಖಗಳನ್ನು ದಾಖಲಿಸಿತು. ಜೇನಿನ ಆಸಕ್ತಿ ಇನ್ನೂ ಜೀವಂತವಿರುವುದನ್ನು ಗಮನಿಸಿದ ರೈತಾಪಿಯಿಂದ 'ಜೇನು ಸಹಕಾರ ಸಂಘ' ಸ್ಥಾಪನೆ.

ಬದುಕಿನಿಂದ ಕಳಚಿಹೋಗಿದ್ದ ಜೇನು ಸಂಸಾರವನ್ನು ಪುನಃ ಸ್ಥಾಪಿಸುವುದು ಮೊದಲ ಯತ್ನ. ಇದಕ್ಕಾಗಿ ತರಬೇತಿ, ಪ್ರವಾಸ, ರೈತರ ಭೇಟಿ. ಜೇನುಕೃಷಿಗೆ ಬೇಕಾದ ಎಲ್ಲಾ ಸಲಕರಣೆಗಳ ಜೋಡಣೆ ಮತ್ತು ಒದಗಣೆ. ದೂರವಿದ್ದ ಮತ್ತು ಜೇನು ಕೃಷಿಗೆ ಹೊಸದಾಗಿ ಮನಸ್ಸು ಮಾಡಿದ ಮಂದಿಗೆ ಉತ್ತೇಜನ.

ಸಂಘಕ್ಕೆ 241 ಮಂದಿ ಸದಸ್ಯರ ನೋಂದಣಿ. ಸದಸ್ಯರಾಗುವವರು ಕನಿಷ್ಠ ಎರಡು ಜೇನು ಪೆಟ್ಟಿಗೆ ಹೊಂದಿರಲೇಬೇಕೆಂಬ ಶರತ್ತು. ಸಂಘವೇ ಮಾರುಕಟ್ಟೆ ಮಾಡಲು ಮುಂದಾದಾಗ ಇನ್ನಷ್ಟು ಮುತುವರ್ಜಿ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೊಂದಿಗಿದ್ದ ಜೇನುಕೃಷಿ ವಿಭಾಗ ಆಗಲೇ ನಿಸ್ತೇಜವಾಗಿತ್ತು. 'ಈ ವಿಭಾಗದಲ್ಲಿ ಲಾಭವಿಲ್ಲ' ಎಂದರಿತ ಇಲಾಖೆಯಿಂದ ಇದಕ್ಕೂ ಕೊಕ್! ಅಧಿಕಾರಿಗಳು ಸ್ವ-ನಿವೃತ್ತಿ ಹೊಂದಿದರು. ಇದ್ದ ಸಿಬ್ಬಂದಿಗಳಿಂದ ದಿನ ಎಣಿಕೆ! ಈಚೆಗೆ ಜೇನುವಿಭಾಗವನ್ನು ತೋಟಗಾರಿಕಾ ಇಲಾಖೆಯೊಂದಿಗೆ ಸರಕಾರ ಮರ್ಜಿ ಮಾಡಿತು. ಸಾಗರದಲ್ಲಿ ಪಾಳು ಸ್ಥಿತಿಗೆ ಇಳಿಯುತ್ತಿದ್ದ ಜೇನಿನ ಇಲಾಖೆಯಿದ್ದ ಕಟ್ಟಡದಲ್ಲಿ ಸದ್ಯ ಸಂಘದ ಕಚೇರಿಯಿದೆ.

ಸಂಘದ ಜೇನುಕೃಷಿ ಪ್ರಕ್ರಿಯೆ ಶುರುವಾಗುತ್ತಾ ಇದ್ದಂತೆ ತೋಟಗಾರಿಕಾ ಮಿಶನ್ ಉತ್ತೇಜಿತ ಸ್ಕೀಂನಿಂದ ಸಂಘದ ಚಟುವಟಿಕೆ ವಿಸ್ತಾರ. ಆರು ಜಿಲ್ಲೆಗಳಲ್ಲಿ ಜೇನು ಕೃಷಿಯ ಅರಿವು, ಕೃಷಿ ಹೆಚ್ಚಿಸಲು ಸಂಘದ ಜವಾಬ್ದಾರಿ.

'ಜೇನಿನ ಪರಾಗಸ್ಪರ್ಶದಿಂದಾಗಿ ಬೆಳೆ ಜಾಸ್ತಿ, ಫಸಲು ಅಭಿವೃದ್ಧಿ'ಯನ್ನು ರೈತರಿಗೆ ತಿಳಿಸುವುದು ಮೊದಲಾದ್ಯತೆ. ನಂತರ ಜೇನಿನ ತರಬೇತಿ, ಪರಿಕರಗಳ ವಿತರಣೆ. ಈಗಾಗಲೇ ಸುಮಾರು ಒಂದು ಸಾವಿರ ತರಬೇತಿಗಳಾಗಿವೆ. 'ಮೂರು ವರುಷದಲ್ಲಿ ಆರು ಜಿಲ್ಲೆಗಳಲ್ಲಿ ಆರುಸಾವಿರ ಜೇನು ಪೆಟ್ಟಿಗೆಗಳನ್ನು ವಿತರಿಸಿದ್ದೇವೆ. ಫಾಲೋಅಪ್ ಮಾಡ್ತಾ ಇದ್ದೇವೆ' ಎಂಬ ಮಾಹಿತಿ ನೀಡುತ್ತಾರೆ ನಾಗೇಂದ್ರ ಸಾಗರ್.

ಜೇನು ಹುಳುಗಳಿಗೆ ವರುಷಪೂರ್ತಿ ಆಹಾರ ಸಿಗಬಹುದಾದ ಗಿಡಗಳನ್ನು ಬೆಳೆಯುವತ್ತ ಮಾಹಿತಿ ಜತೆಜತೆಗೆ ನೀಡಿಕೆ. ಅರಣ್ಯ ಇಲಾಖೆಯೂ ಸಂಘದೊಂದಿಗೆ ಕೈಜೋಡಿಸಿದೆ. 'ಅರಣ್ಯ ಸಮಿತಿಗಳಿಗೂ ತರಬೇತಿ ನೀಡಿ' ಎಂದು ಅರಣ್ಯ ಅಧಿಕಾರಿಗಳು ವಿನಂತಿಸುತ್ತಾರಂತೆ!

ಆರು ಜಿಲ್ಲೆಗಳಲ್ಲಿ ಜೇನಿನ ಕೃಷಿ ಆರಂಭವಾಗಿದೆ. ಒಲವು ಹೆಚ್ಚುತ್ತಿದೆ. ಜೇನುತುಪ್ಪಕ್ಕೆ ಕಿಲೋಗೆ ಇನ್ನೂರೈವತ್ತು ರೂಪಾಯಿಗೆ ಸಂಘ ಖರೀದಿ. 'ಮೊದಲ ವರುಷ ಜೇನು ಪೆಟ್ಟಿಗೆ ಸಿಗದೆ ತೊಂದರೆಯಾಯಿತು. ಈಗ ತೊಂದರೆಯಿಲ್ಲ' ಎನ್ನುತ್ತಾರೆ ನಾಗೇಂದ್ರ ಸಾಗರ್.
'ಇದನ್ನೊಂದು ವೃತ್ತಿ ಅಲ್ಲದಿದ್ದರೂ, ಹವ್ಯಾಸವಾಗಿ ರೂಢಿಸಿಕೊಂಡರೆ ಜೇನುತುಪ್ಪವೂ ಸಿಗುತ್ತೆ, ಜತೆಗೆ ಪರಾಗಸ್ಪರ್ಶ ಕ್ರಿಯೆಯಿಂದಾಗಿ ತೋಟಗಾರಿಕಾ ಬೆಳೆಗಳೂ ಅಭಿವೃದ್ಧಿಯಾಗ್ತಾವಲ್ಲಾ,' ಎಂದು ಒಟ್ಟೂ ಆಶಯವನ್ನು ನಾಗೇಂದ್ರ ಸಾಗರ್ (9901548613) ಕಟ್ಟಿಕೊಡುತ್ತಾರೆ.

Thursday, July 14, 2011

ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಪ್ಪ ಸೇವೆ



ಚಿತ್ರ , ಬರಹ : ಚಂದ್ರಶೇಖರ ಏತಡ್ಕ

ಸುಮಾರು ಐವತ್ತು ವರ್ಷಗಳಿಂದಲೂ ಈ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ದೇವರಿಗೆ ವಿಶೇಷ ಸೇವೆ ನಡೆದು ಬರುತ್ತಿದೆ. ಅಕ್ಕಿ ಹುಡಿ ,ತುಪ್ಪ ,ತೆಂಗಿನ ಕಾಯಿ ,ಬೆಲ್ಲ ,ಏಲಕ್ಕಿ ,ಹಲಸಿನ ಹಣ್ಣಿನ ಕೊಚ್ಚೆಲು ಗಳ ಪಾಕದಲ್ಲಿ 'ಅಪ್ಪ' ಸಿದ್ಧ ಗೊಳ್ಳುತ್ತವೆ .ಊರ ಭಕ್ತಾದಿಗಳು ಪಾಲ್ಗೊಂಡು 'ಹಲಸಿನ ಮಹಿಮೆ ದೇವರ ಸಮ್ಮುಖದಲ್ಲಿ ಕೊಂಡಾಡುತ್ತಾರೆ .ಬಹುಶ ; ಒಂದು ಹಣ್ಣಿಗೆ ಈ ಗೌರವ ನೀಡುವ ಭಕ್ತಾದಿಗಳ ಮನೋಭೂಮಿಕೆಯಲ್ಲಿ ಗತಕಾಲದ ಆ ಹಸಿವಿನ ದಿನಗಳಲ್ಲಿ ಹಲಸಿನ ಕಾಯಿ ಹೊಟ್ಟೆ ತುಂಬಿಸಿದ ಉಪಕಾರ ಸ್ಮರಣೆ ಇರಬಹುದು .

'ಕೊಚ್ಹಿದರೆ ನಿ ಗೋವುಗಳಿಗೆ ಮಡ್ಡಿಯಾದೆ, ಬಿಚ್ಚಿದರೆ ಕಷ್ಟದ ಮಳೆಗಾಲ ಪೂರ್ಣ ಮ್ರಷ್ಟಾನ್ನ ಭೋಜನವಾದೆ ''ಎನ್ನುವ ಕೃತಾರ್ಥ ಭಾವ ಹಳ್ಳಿಗರಲ್ಲಿ. ಹಳ್ಳಿಗಳಲ್ಲಿ ಧಾರಾಳ ಲಭ್ಯವಿರುವ ಈ ಫಲ ವಸ್ತುವಿನ ಸರ್ವಾಂಗವೂ ವಿವಿಧ ಅಡುಗೆ ರೀತಿ ರಿವಾಜಿಗೆ ಒಗ್ಗಿಕೊಳ್ಳುವುದು, ಮನೆಯ ಸಕಲರನ್ನು ಸೆಳೆಯುವ ಏಕೈಕ ಹಣ್ಣು .ಹಾಗೆಂದು ದಿನಾ ಬಳಸಿದಾಗಳೂ 'ಬೋರು 'ಹೊಡೆಸದೇ ಇರುವ ತರಕಾರಿಯಾಗಿಯೂ ಇದರ ಮಹಿಮೆ ...ಸ್ತ್ರೀ ..ಪುರುಷ ...ಭಕ್ತಾದಿಗಳ ಮನಸಲ್ಲಿ ಹಾದು ಹೋಗುತ್ತವೆ.

ಮನೆಯಲ್ಲಿ ಊಟಕ್ಕೆ ತತ್ವಾರ ಆದಾಗ ಬಂದ ಭಂಧುಗಳಿಗೆ ರುಚಿ. ರುಚಿಯಾದ ಹಣ್ಣಿನ ತೊಳೆ ಯನ್ನು ನೀಡಿ ಮತ್ತೆ ಊಟದ ತಟ್ಟೆ ಇಟ್ಟಾಗ ಒಂದಿಸ್ತು ಗಂಜಿ ಸಾಕಾಗಿ ಮರ್ಯಾದೆ ಉಳಿದಘಟನೆಯನ್ನು ತಾಯಿಯೊಬ್ಬರು ದೇವಸ್ಥಾನದ ನಡೆಯಲ್ಲಿ ನೆನೆಸಿಕೊಂಡರು.

ಇಂತಿಪ್ಪ ಆಹಾರ ಭದ್ರತೆ ನೀಡಿದ ಹಲಸಿನ ಹಣ್ಣನ್ನು ದೇವರಿಗೆ ಒಪ್ಪಿಸಿ, ನಮೋ ನಮೋ ಎಂದು ವರ್ಷಕ್ಕೊಮ್ಮೆಯಾದರೂ ಹೇಳದಿದ್ದರೆ ಹೇಗೆ ?

Tuesday, July 12, 2011

ಮಾಯವಾಗಿದೆ, ಹಲಸಿನ ರುಚಿ

'ಒಂದು ಹಣ್ಣು ತಂದ್ವಿ. ದೋಸೆ, ಮುಳುಕ, ಗಟ್ಟಿ ಮಾಡಿದ್ವಿ. ಮಕ್ಕಳಿಗಂತೂ ಹೊಸ ರುಚಿ. ಖುಷಿ ಪಟ್ಟರು. ಊರಲ್ಲಿದ್ದಾಗ ಮರದಿಂದ ಬಿದ್ದು ಕೊಳೆತು ಹೋದರೂ ಬೇಡ. ಇಲ್ಲಿ ಮಾತ್ರ ಕಾರು ತೆಕ್ಕೊಂಡು ಹೋಗಿ, ದುಬಾರಿ ಹಣ ಕೊಟ್ಟು ಒಂದು ಹಲಸನ್ನು ಮನೆಗೆ ತರುವಾಗ ಏನಿಲ್ಲವೆಂದರೂ ಇಂಡಿಯಾದ ಎರಡು ಸಾವಿರ ರೂಪಾಯಿ ಮೀರಬಹುದು ಮಾರಾಯ,' ಸದ್ಯ ಲಂಡನ್ನಲ್ಲಿರುವ ಬಾಲ್ಯಸ್ನೇಹಿತ ರವಿ ದೂರವಾಣಿಯಲ್ಲಿ ಬಾಲ್ಯದ ಹಲಸಿನ ನಂಟನ್ನು ಜ್ಞಾಪಿಸಿದ.

ನನಗಿನ್ನೂ ನೆನಪಿದೆ. ಬಡತನದ ದಿವಸಗಳು. ಒಂದು ಹೊತ್ತಿನ ತುತ್ತಿಗೂ ಆಗಸ ನೋಡುವ ದಿನಗಳು. ಹಿತ್ತಿಲಲ್ಲಿದ್ದ ಹಲಸಿನ ಮರಗಳು ಫಲ ಕೊಡಲು ಶುರು ಮಾಡಿಲ್ಲ. ಅವರಿವರು ನೀಡಿದ ಹಲಸು ಅಡುಗೆ ಮನೆ ಸೇರುತ್ತಿತ್ತು. ಸೊಳೆ ತೆಗೆದು, ಬೇಯಿಸಿ ಮಾಡಿದ ಪಲ್ಯದಂತಹ ಖಾದ್ಯ 'ಚಂಗುಳಿ' ಹಸಿವನ್ನು ಇಂಗಿಸುತ್ತಿತ್ತು.

ಚಂಗುಳಿ ಬೆಳಿಗ್ಗೆ ತಯಾರಾದರೆ ಆಯಿತು - ಬೆಳಗ್ಗಿನ ಉಪಾಹಾರ ಮುಗಿಯುತ್ತದೆ, ಮಧ್ಯಾಹ್ನ ಊಟದ ಪಲ್ಯದ ಸ್ಥಾನಕ್ಕೂ ಸೈ. ಸಂಜೆ ಚಹದೊಂದಿಗೆ ಬಾಯಿ ಚಪ್ಪರಿಸಲೂ ಓಕೆ. ಮತ್ತೂ ಉಳಿದರೆ ಸ್ವಲ್ಪ ಬಿಸಿ ಮಾಡಿ ರಾತ್ರಿ ಊಟದ ವರೆಗೂ ಬರೋಬ್ಬರಿ.
ತಂದೆಯವರನ್ನು ಕಾಣಲು ಆಗಾಗ್ಗೆ ಬಂದು ಹೋಗುವ ಅತಿಥಿಗಳು ಧಾರಾಳ. ಹಾಗೆ ಬರುವಾಗಲೆಲ್ಲಾ ತರಕಾರಿ, ಹಲಸು, ಮಾವು, ಪಪ್ಪಾಯಿ.. ತರುತ್ತಿದ್ದರು. ಇದು ಗೌರವದ ಪ್ರತೀಕ. ಹಲಸಿನ ಹಣ್ಣು ಯಾರು ತರ್ತಾರೆ ಅಂತ ಕಾಯೋ ದಿವಸಗಳು ಇದ್ದವು. ಅದನ್ನು ಪೋಸ್ಟ್ಮಾರ್ಟಂ ಮಾಡಿ, ಸೊಳೆ ಬಿಡಿಸಿ, ಬಾಯೊಳಗಿಟ್ಟರೆ ಅಮೃತವೇ ಒಡಲೊಳಗೆ ಇಳಿದ ಅನುಭವ! ಶಾಲೆಗೆ ಹೋಗುವಾಗ ಬುತ್ತಿ ಪಾತ್ರ್ರೆದಲ್ಲಿದ್ದ ಹಲಸಿನ ಸೊಳೆಗಳಿಂದ ಮಧ್ಯಾಹ್ನದ ಊಟದ ತೃಪ್ತಿ.

ಆಗೆಲ್ಲಾ ಗದ್ದೆ ಬೇಸಾಯದ ಭರಾಟೆ. ಮಳೆ ಬಿದ್ದೊಡನೆ ಕೃಷಿ ಚಟುವಟಿಕೆ ಚುರುಕಾಗುತ್ತದೆ. ಆ ಹೊತ್ತಲ್ಲಿ ಸುತ್ತಲಿನ ಹಲಸಿನ ಮರಗಳಲ್ಲಿದ್ದ ಕಾಯಿಗಳೆಲ್ಲಾ ಮಾಯ! ಚಂಗುಳಿ, ದೋಸೆಯ ರೂಪದಲ್ಲಿ ಹೊಟ್ಟೆ ಗಟ್ಟಿ ಮಾಡಿಕೊಳ್ಳುತ್ತಿದ್ದವರ ಮುಖಪರಿಚಯ ಮಾಸಿಲ್ಲ. ಕೆಲವು ಉಳ್ಳವರ ಮನೆಯಟ್ಟದಲ್ಲಿ ಕ್ವಿಂಟಾಲ್ಗಟ್ಟಲೆ ಅಕ್ಕಿಯಿರುತ್ತಿತ್ತೇ ವಿನಾ, ಒಂದು ಕಿಲೋ ಅಕ್ಕಿ ಕೇಳಿದರೂ ಕೊಡರು. ಬದಲಿಗೆ ಉಪಯೋಗಕ್ಕಿಲ್ಲದ ಶುಷ್ಕ 'ಅನುಕಂಪ' ಧಾರಾಳ!

ಮಳೆ ಹೆಚ್ಚು ಬೀಳುವ ಪ್ರದೇಶದಲ್ಲಿ ತುಳುವ (ಅಂಬಲಿ) ಹಲಸಿನದ್ದೇ ಕಾರುಬಾರು. ಮಳೆಗಾಲದಲ್ಲಿ ಮರದ ಮೇಲೇರಿ ಕೊಯ್ಯಲು ಅಸಾಧ್ಯ. ಮರದ ತುದಿಯಲ್ಲಿ ಹಣ್ಣು ಕೊಳೆತು ಹೋದರೂ ಅದನ್ನು ತೊಟ್ಟು ಬಿಟ್ಟು ಕೊಡುವುದಿಲ್ಲ. 'ಕೆಳಗೂ ಬೀಳುವುದಿಲ್ಲ, ಕೊಯ್ಯಲೂ ಆಗುವುದಿಲ್ಲ. ಪಿಶಾಚಿಯಂತೆ ನೇತುಕೊಂಡಿರುತ್ತದೆ,' ಮೀಯಪದವಿನ ಡಾ.ಡಿ.ಸಿ.ಚೌಟರು ವಿನೋದಕ್ಕೆ ಹೇಳುವುದುಂಟು. ತುಳುವ ಹಣ್ಣಾಗಿ ಬಿದ್ದಾಗ ಅದರಲ್ಲಿರುವ ಬೇಳೆಗಾಗಿ ನೆರೆಕರೆ ಮಂದಿಯ ಪೈಪೋಟಿ. ಹೀಗೆ ಸಂಗ್ರಹವಾದ ಬೇಳೆ ಮಳೆಗಾಲಕ್ಕೆ ತರಕಾರಿ.

ಮನೆಯ ಹಿತ್ತಿಲಲ್ಲಿದ್ದ ಹಲಸಿನ ಮರಕ್ಕೆ ಹೆರಿಗೆಯಾಗಲು ಶುರುವಾದ ಬಳಿಕ ಹಪ್ಪಳ ಮಾಡುವ ಕೆಲಸ ಅಂಟಿಕೊಂಡಿತು. ಅಪ್ಪ ಹಲಸನ್ನು ತುಂಡು ಮಾಡಿದರೆ, ಅಮ್ಮನಿಗೆ ಸೀಳುವುದು ಕೆಲಸ. ಶಾಲೆ ಬಿಟ್ಟು ಮನೆಗೆ ಬಂದ ಕೂಡಲೇ ತಂಗಿಯೊಂದಿಗೆ ಸೊಳೆ ಬಿಡಿಸುವ ಕೆಲಸ. ಬಿಡಿಸುತ್ತಿದ್ದಂತೆ ಒಂದಷ್ಟು ಹೊಟ್ಟೆ ಸೇರಿ ಸಂಜೆಯ ಉಪಾಹಾರವೂ ಜತೆಗೆ ಮುಗಿಯುತ್ತಿತ್ತು! ಬಿಸಿಲಲ್ಲಿ ಒಣಗಿದ ಹಪ್ಪಳ, ಕೆಂಡದಲ್ಲಿ ಸುಟ್ಟು, ತೆಂಗಿನೆಣ್ಣೆಯ ಲೇಪದೊಂದಿಗೆ ಬಾಯಿ ಸೇರುವಾಗ ಎಂತಹ ಸ್ವಾದ. ಜತೆಗೆ ಬಲಿತ ತೆಂಗಿನ ಕಾಯಿ ಚೂರುಗಳು ಸೇರಿದರಂತೂ ಮುಗಿಯಿತು!

ಉಪ್ಪಿನ ನೀರಿನಲ್ಲಿ ಮುಳುಗಿಸಿಟ್ಟು ಕಾಪಿಟ್ಟ ಹಲಸಿನ ಸೊಳೆಯ (ಉಪ್ಪಾಡ್ ಪಚ್ಚಿಲ್) ಪಲ್ಯ, ಉಂಡ್ಲುಕಗಳು ಹಲಸು ಸಿಗದ ಸಮಯದಲ್ಲಿ ಬಂಧು. ಕೆಮ್ಮಣ್ಣು ಗಾಳಿಸಿ, ಅದನ್ನು ನೀರಿನಲ್ಲಿ ಕಲಸಿ, ಬೀಜವನ್ನು ಅದರಲ್ಲಿ ಹೊರಳಾಡಿಸಿ ಸಂಗ್ರಹಿಸಿದ ಬೀಜ ವರುಷಪೂರ್ತಿ ತರಕಾರಿ. ಇದನ್ನು ಸಂಗ್ರಹ ಕೋಣೆಗೆ 'ಬೇಳೆ ಉಗ್ರಾಣ' ಎಂಬ ಹೆಸರೂ ಇತ್ತು.

ಹಲಸಿನ ಬೀಜವನ್ನು ಬೇಯಿಸಿ, ಬಿಸಿಲಲ್ಲಿ ಒಣಗಿಸಿದ 'ಸಾಂತಾಣಿ' ಮಳೆಗಾಲದ ಥಂಡಿಗೆ 'ಕಟುಕುಟು' ತಿಂಡಿ. 'ಶಾಲಾ ವಿದ್ಯಾರ್ಥಿಗಳ ಜೇಬಲ್ಲಿ ಸಾಂತಾಣಿ ಇದ್ದರೆ, ವಿದ್ಯಾರ್ಥಿನಿಯರ ಕಂಪಾಸ್ ಬಾಕ್ಸ್ನಲ್ಲಿ ಹುರಿದ ಹುಣಸೇ ಹಣ್ಣಿನ ಬೀಜ ಇದ್ದೇ ಇರುತ್ತಿತ್ತು,'!

ಆಟಿ ತಿಂಗಳಲ್ಲಿ ಕೆಸುವಿನ ದಂಟು ಮತ್ತು ಹಲಸಿನ ಬೀಜ ಹಾಕಿದ ಪದಾರ್ಥ (ತೆಂಗಿನ ಕಾಯಿ ಹಾಕದ್ದು) ತಿನ್ನಲೇಬೇಕು. 'ಈ ತಿಂಗಳಲ್ಲಿ ನಮ್ಮ ದೇಹದ ಉಷ್ಣತೆ ಜಾಸ್ತಿಯಾಗುತ್ತದೆ. ಇದಕ್ಕೆ ಪ್ರತಿವಿಧಿ ಇದು. ಹಲಸಿನ ಬಹುತೇಕ ಖಾದ್ಯಕ್ಕೆ ಕೊಬ್ಬರಿ ಎಣ್ಣೆ ಬಳಕೆ ಒಳ್ಳೆಯದು' ಎನ್ನುತ್ತಾರೆ ಪಾಣಾಜೆ ವೆಂಕಟ್ರಾಮ ದೈತೋಟ. ಹಸಿದು ಹಲಸು ತಿಂದರೆ ಅದನ್ನು ಮೀರಿಸುವ ಇನ್ನೊಂದು ರುಚಿ ಹುಡುಕಿದರೂ ಸಿಗದು.

ಈಚೆಗೆ ತಿರುವನಂತಪುರದಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಹಲಸು ಮೇಳದಲ್ಲಿ ಹಲಸಿನ ಅಡುಗೆ ಪ್ರಾತ್ಯಕ್ಷಿಕೆಯಿತ್ತು. ರಸರುಚಿಗಳ ಸ್ಪರ್ಧೆಯಿತ್ತು. ಅಬ್ಬಾ.. ಎಷ್ಟೊಂದು ವೈವಿಧ್ಯಗಳು. ಬೇಳೆ, ಸೊಳೆಯಿಂದ ಮಾಡಿದ ಖಾದ್ಯಗಳು. ಇಡ್ಲಿ, ಕೇಕ್, ಚಾಕೋಲೇಟ್, ಹಲ್ವಾ, ಪುಲಾವ್.. ಒಂದೇ ಎರಡೇ. ಒಂದೆಡೆ ವೈನ್ ಕೂಡಾ ಸ್ಪರ್ಧೆಗೆ ಕುಳಿತಿತ್ತು. ಸ್ಪರ್ಧೆಯಲ್ವಾ, ಅವಕ್ಕೆಲ್ಲಾ ಅಲಂಕಾರದ ಭಾಗ್ಯ. ಒಬ್ಬರಂತೂ ತಮ್ಮ ಉತ್ಪನ್ನಕ್ಕೆ ಪ್ರಾಣಿಯ ಆಕಾರವನ್ನು ನೀಡಿದ್ದರು. ಮೂವರು ತೀರ್ಪುಗಾರರು ತಿಂದು ನೋಡಿ ಅಂಕವನ್ನು ಕೂಡಿಸಿ, ಕಳೆದು ತೀರ್ಪು ತೀಡಲು ಒದ್ದಾಡುತ್ತಿದ್ದರು. ಕಾರಣ, ಎಲ್ಲಾ ತಿಂಡಿಗಳಲ್ಲೂ ರುಚಿಯಲ್ಲಿ ಪೈಪೋಟಿ!

ಹಲಸಿನ ಬಳಕೆ ಸ್ಥಳೀಯ ಆಹಾರ ಸುರಕ್ಷೆಗೊಂದು ಕೀಲಿಕೈ. ಜತೆಗೆ ಕೃಷಿಕರ ಸುರಕ್ಷೆಯೂ ಕೂಡಾ. ಅಂದಿನ ಆಹಾರದ ಅಭದ್ರತೆ ಈಗಿಲ್ಲ. ಕಾಸು ಕೊಟ್ಟರೆ ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತದೆ. ಐದು ರೂಪಾಯಿ ತೆತ್ತು ಸೊಳೆ ಖರೀದಿಸಿ, ಅದನ್ನು ಬಾಯಿಗಿಟ್ಟಾಗ ಎಂತಹ ರುಚಿಯಲ್ವಾ. ಕಾರಣ, ಐದು ರೂಪಾಯಿಯ ಮಹಿಮೆ! ಹಲಸಿನ ಸಂಸ್ಕರಣೆ 'ಹೇಸಿಗೆ'ಯಲ್ಲ. ಈಗ ಮೇಣ ಕೈಗೆ ತಾಗಿದರೆ ಸಾಕು, ವೈರಸ್ ಅಂಟಿದಂತೆ ಬೆಚ್ಚಿಕೊಳ್ಳುವ ಭಾವೀ ಅಮ್ಮಂದಿರು! ಹಲಸಿನ ರುಚಿಗಳನ್ನು ಫಾಸ್ಟ್ ಫುಡ್ ಗಳು ಆಕ್ರಮಿಸಿವೆ. ರುಚಿಗಳು ಅಡುಗೆ ಮನೆಯಿಂದ ಮಾಯವಾಗಿದೆ.

ಹಲಸನ್ನು ಮೌಲ್ಯವರ್ಧಿಸಿ ಕಾಪಿಡುತ್ತಿದ್ದುದು ಹಿರಿಯರ ದೂರಗಾಮಿ ದೃಷ್ಟಿ. ಆಗ ಮಾರುಕಟ್ಟೆಯಲ್ಲಿ ಅಕ್ಕಿ ಸಿಗದೇ ಇದ್ದಾಗ ಯಾರೂ ಅಧೀರರಾಗುತ್ತಿರಲಿಲ್ಲ. ಈಗ? ಅಕ್ಕಿಗೆ ತತ್ವಾರ ಬರಲಿ. ಬದುಕೇ ಭಾರವಾಗುತ್ತದೆ. ಅತಂತ್ರವಾಗುತ್ತದೆ, ಅಸ್ಥಿರವಾಗುತ್ತದೆ. ಯಾಕೆಂದರೆ ಆಹಾರ ಸುರಕ್ಷೆಯ ಪರ್ಯಾಯ ದಾರಿಗಳು ನಮ್ಮ ಮುಂದಿಲ್ಲ.

ಇಂತಹ ಸ್ಥಿತಿಯ ಅರಿವಿದ್ದ ಒಂದಷ್ಟು ಮಂದಿ ಹಲಸಿಗೆ ಮಾರುಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಾಲದ ಬದಲಾವಣೆ.
ಎಸ್ಸೆಮ್ಮೆಸ್: 'ವರುಷಕ್ಕೇ ನಾಲ್ಕೇ ಗ್ಯಾಸ್ ಸಿಲಿಂಡರ್,' ಕೇಂದ್ರ ಸರಕಾರದ ಯೋಚನೆ. ಹೀಗಾದರೆ ಹಲಸಿನಹಣ್ಣೇ ಗತಿ!

(ಉದಯವಾಣಿಯ ‘ಮಣ್ಣಿನ ನಾಡಿ’ಅಂಕಣದಲ್ಲಿ ಪ್ರಕಟಿತ ಬರೆಹ. ಇಂದಿನಿಂದ ೧೫ ದಿನಕ್ಕೊಮ್ಮೆ ಈ ಅಂಕಣ. ಲಿಂಕ್ : http://epaper.udayavani.com/Display.aspx?Pg=H&Edn=MN&DispDate=7/12/2011

Sunday, July 3, 2011

ರಾಜಭವನದಲ್ಲಿ ಒಂದು ಸಂಜೆ..

'ಊರು ಸೂರು ಯಾಕೆ ಈಚೆಗೆ ಬರುತ್ತಿಲ್ಲ. ಬಿಟ್ಟು ಬಿಟ್ರಾ' ಓದುಗರೊಬ್ಬರಿಂದ ಪ್ರಶ್ನೆ. ಅಬ್ಬಾ.. ಓದಿ ಪ್ರತಿಕ್ರಿಯಿಸುವ ಒಬ್ಬರಾದ್ರೂ ಸಿಕ್ಕರಲ್ಲಾ..! 'ಖಾಸಗಿ, ಕಚೇರಿ ಒತ್ತಡ ಓಡಾಟಗಳಿಂದಾಗಿ ಸ್ವಲ್ಪ ದಿನ ವಿರಾಮ' ಎಂದು ಸಮಜಾಯಿಷಿ ನೀಡಿದೆ. 'ಇನ್ನು ಪ್ರತೀವಾರ ಬರುತ್ತದೆ' ಅಂತ ರಾಜಕೀಯ ಆಶ್ವಾಸನೆ ನೀಡಿದೆ!

ಅಂಕಣ ಕುರಿತು ಮುಖತಃ ಸಿಕ್ಕಾಗಲೆಲ್ಲಾ 'ತೀರಾ ಚಿಕ್ಕ ವಿಷಯ ಯಾಕೆ ಬರೆಯುತ್ತೀರಿ?' ಎಂಬ ಸಾತ್ವಿಕ ಆಕ್ಷೇಪ ಮಿತ್ರರದು. ಬದುಕಿನ ಸುಭಗತನವಿರುವುದೇ ಚಿಕ್ಕ ಚಿಕ್ಕ ವಿಚಾರಗಳಲ್ಲಿ ತಾನೆ? ಓಡಾಟದಿಂದ ನಾನು ಗ್ರಹಿಸಿದ, ನೋಡಿ-ಕೇಳಿದ, ಸಮಕಾಲೀನ ಸ್ಥಿತಿಗೆ ಥಳಕು ಹಾಕುವ ಹಳೆಯ ನೆನಪಿನ ಬುತ್ತಿಯ ದಾಖಲೀಕರಣವೇ ಊರು-ಸೂರು. ಒಂದು ವಸ್ತು-ವಿಷಯ ಒಬ್ಬರಿಗೆ ಹಿತವಾದರೆ, ಇನ್ನೊಬ್ಬರಿಗೆ ಅಹಿತ; ಒಬ್ಬರಿಗೆ ಪ್ರಿಯವಾದರೆ, ಮತ್ತೊಬ್ಬರಿಗೆ ಅಪ್ರಿಯ. ಅದು ಲೋಕದ ಸ್ಥಿತಿ. ಇರಲಿ.

ಉದಯವಾಣಿಯಲ್ಲಿ ಪ್ರಕಟವಾದ ನನ್ನ 'ವಿಷಮಳೆಗೆ ಮುರುಟಿದ ಬದುಕು' ಎಂಬ ಬರೆಹಕ್ಕೆ ವಾರದ ಹಿಂದೆ 'ಚರಕ ಪ್ರಶಸ್ತಿ' ಘೋಷಣೆಯಾಯಿತು. ಖುಷಿಯಾಯಿತು, ಆಗಲೇ ಬೇಕು. ಕಾರಣವೂ ಇಲ್ಲದಿಲ್ಲ. ಲೇಖನಗಳನ್ನು ಸಂಘಟಕರೇ ಪತ್ರಿಕಾಲಯದಿಂದ ಆಯ್ದು, ಆಯ್ಕೆ ಸಮಿತಿಯ ಮುಂದಿಟ್ಟು ಪ್ರಶಸ್ತಿ ನೀಡುವುದು ಚರಕ ಮೊದಲಿನಿಂದಲೇ ಪಾಲಿಸಿಕೊಂಡು ಬಂದಿತ್ತು. ಈ ಸಲವೂ ಹಾಗೆನೇ ಆಯ್ದುಕೊಂಡಿತ್ತು.

ಆಯ್ಕೆ ಕುರಿತು ದೂರವಾಣಿ ಬಂದಾಗ, 'ಸಾರ್ ರಾಜಭವನದಲ್ಲಿ ಕಾರ್ಯಕ್ರಮ, ಸಮಯಕ್ಕೆ ಸರಿಯಾಗಿ ಬನ್ನಿ. ಬರುವಾಗ ಆಮಂತ್ರಣ ಪತ್ರ ಜತೆಗಿರಲಿ..' ಹೀಗೆ ಒಂದಷ್ಟು 'ವಿಧಿ'ಗಳನ್ನು ಹೇರಿದ್ದರು. ರಾಜಭವನವನ್ನು ನೋಡುವ ಕುತೂಹಲ ಹೆಚ್ಚಾಗತೊಡಗಿತು. ಸದಾ ಸುದ್ದಿಯಲ್ಲಿರುವ ರಾಜ್ಯಪಾಲರನ್ನು ಹತ್ತಿರದಿಂದ ನೋಡುವ, ಕೈಕುಲುಕಿಸುವ, ಅವರ ಮುಖ ನೋಡಿ ಫೋಸ್ ಕೊಡುವ, ಹೇಗೆ ಫೋಟೋ ತೆಗೆಸಬಹುದೆಂಬ ಲೆಕ್ಕಾಚಾರದಲ್ಲಿ ಜುಲೈ 1 (೨೦೧೧) ಬಂದೇ ಬಿಟ್ಟಿತು.

ರಾಜಕೀಯ ಸಂಘರ್ಷದಲ್ಲಿ ಮನೆಮಾತಾದ ರಾಜಭವನ, ಗೇಟಿನ ಮುಂದೆ ನಾಯಕರ ಓಡಾಟ-ಕಿತ್ತಾಟ, ವಾಹಿನಿಗಳ ಮೈಕ್ರೋಫೋನ್ಗಳ ಮೂತಿ, ಫೋಟೋ ಕ್ಲಿಕ್ಕಿಸಲು ಹರಸಾಹಸ ಪಡುತ್ತಿರುವ ಚಿತ್ರಗ್ರಾಹಕರು, ಪೆನ್-ಪ್ಯಾಡ್ ಹಿಡಿದು ಮಾತನ್ನು ಹಿಡಿದಿಡುವ ಪ್ರಯತ್ನದಲ್ಲಿರುವ ಪತ್ರಕರ್ತರ ಪಾಲು.. ಟಿವಿ ಆನ್ ಮಾಡಿದರೆ ಗೋಚರವಾಗುವ ಚಿತ್ರಗಳು.

ಮಿತ್ರ ಗೋಪಾಲ್ ಜತೆ ರಾಜಭವನದ ಗೇಟ್ ಎದುರು ಬೈಕ್ ಇನ್ನೇನು ಆಫ್ ಮಾಡಿಲ್ಲ, ಅಷ್ಟರಲ್ಲಿ ಲಾಠಿ ಹಿಡಿದ ಆರಕ್ಷಕರೊಬ್ಬರು ಬರಬೇಕೇ? 'ಇಲ್ಯಾಕೆ ಬಂದ್ರಿ, ಇಲ್ಲೇನು ಕೆಲಸ' ಪ್ರಶ್ನೆಗಳ ಸುರಿಮಳೆ. ಅಷ್ಟರಲ್ಲಿ ಆಮಂತ್ರಿತರ ಪಟ್ಟಿ ಹಿಡಿದ ಸಂಘಟಕರು, 'ಬನ್ನಿ, ಬನ್ನಿ, ಕಾಯ್ತಾ ಇದ್ದೇವೆ' ಎನ್ನುತ್ತಾ ಹತ್ತಿರ ಬಂದರು. ಇವರು ಸಕಾಲಕ್ಕೆ ಬಾರದೇ ಇರುತ್ತಿದ್ದರೆ 'ಬಾರುಕೋಲು ಸೇವೆ' ಆಗ್ತಾ ಇತ್ತೋ ಏನೋ?

ಸರಿ, ಗೇಟಿನ ಒಳಗೆ ನಮ್ಮನ್ನೇನೋ ಬಿಟ್ಟರು. ಇನ್ನೊಬ್ಬರು ರೆಡಿ! ಒಂದೈದು ನಿಮಿಷ ನಖಶಿಖಾಂತ ಪರೀಕ್ಷೆ. ಬ್ಯಾಗ್ ಪೋಸ್ಟ್ಮಾರ್ಟಂ. ಮೊಬೈಲ್ ಇಲ್ಲೇ ಸ್ವಿಚ್ ಆಫ್ ಮಾಡುವಂತೆ ಸೂಚನೆ. ಫೋಟೋ ತೆಗೆಯದಂತೆ ಆದೇಶ. 'ಹೋಗಿ' ಎಂಬ ಹಸಿರು ನಿಶಾನೆ. ಮುಖದಲ್ಲಿ ಒಂಚೂರು ನಗೆಯಿಲ್ಲ. ಉಗ್ರ ಬಿಗುಮಾನ.

ನಾಲ್ಕು ಹೆಜ್ಜೆ ಹೋಗಿಲ್ಲ. ನಗುಮುಖದೊಂದಿಗೆ ಆರಕ್ಷಕ ಮುಖ್ಯಸ್ಥರೊಬ್ಬರು 'ಕಾರ್ಯಕ್ರಮಕ್ಕೆ ಬಂದ್ರಾ' ಎಂಬ ಸ್ವಾಗತ. ಅವರ ನಗುಮುಖದ ದುರುಪಯೋಗ ಪಡಿಸಿಕೊಂಡು, 'ಸರ್, ರಾಜಭವನದೊಳಗೆ ಮೊದಲಿಗೆ ಬರುತ್ತಿದ್ದೇವೆ. ಇಲ್ಲಿ ಯಾವಾಗಲೂ ಹೀಗೆ ಇರುತ್ತಾ' ಎಂದೆ. 'ಅಯ್ಯೋ ಇಂದೇ ಸ್ವಲ್ಪ ನಿರುಮ್ಮಳ. ಯಾವಾಗಲೂ ರಾಜಕೀಯವಾದ ಕಲಾಪಗಳು ನಡೆಯುತ್ತಲೇ ಇವೆ. ಇಲ್ಲಿನ ಪರಿಸರ ಚೆನ್ನಾಗಿ ಇದೆ. ಕತ್ತಲಾಗ್ತಾ ಬಂತು. ಒಂದರ್ಧ ಗಂಟೆ ಮುಂಚೆನೇ ಬರಬೇಕಿತ್ತು' ಎಂದು ರಾಜಭವನದ ಮೆಟ್ಟಿಲ ತನಕ ಹೆಜ್ಜೆ ಹಾಕಿ ಬೀಳ್ಗೊಟ್ಟರು. ಅವರ ನಡವಳಿಕೆಯಿಂದಲೇ ಅವರ ಗೌರವ ಹೆಚ್ಚಿತ್ತು.

ಹಿಂದಿನ ಕಾಲದ ಕಟ್ಟಡಗಳ ವಿನ್ಯಾಸ. ನಿಶ್ಶಬ್ದ. ಎಲ್ಲೆಲ್ಲೂ ಶುಚಿ. ಭವನದ ಒಳ ವಿನ್ಯಾಸ ಖುಷಿ ನೀಡಿತು. 'ಒಳಗೆ ಸ್ವಲ್ಪ ಸುತ್ತಾಡಬಹುದಾ' ಸಂಘಟಕರಲ್ಲಿ ಬಿನ್ನವಿಸಿದೆ. 'ಸುತ್ತಾಡಬಹುದು. ನೀವು ಮನೆಗೆ ಹೋಗೋದು ಮಾತ್ರ ಡೌಟು' ಎಂದರು. ಪ್ರಶಸ್ತಿ ಕಲಾಪ ನಡೆಯುವ ಹಾಲ್ ಸುಂದರವಾಗಿತ್ತು. ರಾಜ್ಯಪಾಲರಿಗಾಗಿಯೇ ಮೀಸಲಿಟ್ಟ ಆಸನ ಕಾಯುತ್ತಿತ್ತು. 'ಮೊಬೈಲ್ ಆಫ್ ಮಾಡಬೇಕು' ಎಂಬ ಕಟ್ಟು ನಿಟ್ಟಿನ ಸೂಚನೆ ಇದ್ದರೂ ಹಲವಾರು ಮೊಬೈಲ್ಗಳು ಸಂಗೀತ ಹಾಡುತ್ತಿದ್ದವು. ಸೇರಿದ್ದ ಸಭಾಸದರೆಲ್ಲಾ ವಿದ್ಯಾವಂತರಾಗಿದ್ದರೂ ಸೂಚನೆಯನ್ನು ಪಾಲಿಸದಷ್ಟು 'ಬೌದ್ಧಿಕ ಎರರ್' ಯಾಕೆ ಬಂತೋ?

ರಾಜ್ಯಪಾಲರ ಆಗಮನ. ರಾಷ್ಟ್ರಗೀತೆ. ಪ್ರಶಸ್ತಿ ಪ್ರದಾನ. ಮೊದಲಿನ ಆಸೆ ಇತ್ತಲ್ಲಾ - ಕೈಕುಲುಕಬೇಕು, ಅವರನ್ನು ನೋಡಿ ನಗುವ ಪ್ರಯತ್ನ ಮಾಡಬೇಕು, ಹತ್ತಿರ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಬೇಕು - ಅವೆಲ್ಲಾ ಈಡೇರಿತು. ಅವರಿಗೆ ಬೇಕೋ, ಬೇಡ್ವೋ 'ನನ್ನ ಪರಿಚಯ' ಒಂದೇ ಉಸಿರಿನಲ್ಲಿ ಹೇಳಿಕೊಂಡೆ! ಪ್ರಶಸ್ತಿ ಪ್ರದಾನದ ಬಳಿಕ ಒಂದರ್ಧ ಗಂಟೆ ಪತ್ರಿಕೋದ್ಯಮದ ಕುರಿತು ಮಾತನಾಡಿದರು. ರಾಜಕೀಯ ಸ್ಥಿತಿಗಳನ್ನು ಛೇಡಿಸಿದರು.

ಮತ್ತೆ ಜರುಗಿದ ಕಾಫಿ ಸೆಶನ್ನಲ್ಲಂತೂ ರಾಜ್ಯಪಾಲರು ಎಲ್ಲರ ಹತ್ತಿರ ಮಗುವಿನಂತೆ ಮಾತನಾಡುತ್ತಿದ್ದರು. ಬೆನ್ನು ತಟ್ಟುತ್ತಿದ್ದರು. 'ರಾಜ್ಯದ ಗಮನ ಸೆಳೆದ ರಾಜ್ಯಪಾಲರು ಇವರು ಹೌದಾ, ಅಲ್ವಾ' ಎಂಬ ಪ್ರಶ್ನೆ ಅವರ 'ಮುಗ್ಧ' ನಡವಳಿಕೆಯಿಂದ ಕಾಡುತ್ತಿತ್ತು.
'ಅದೆಲ್ಲಾ ನಮಗ್ಯಾಕೆ' ಗೋಪಾಲ್ ಪಿಸುಗುಟ್ಟಿದರು.

ರಾಜಭವನದಿಂದ ಮರಳುವಾಗಲೂ ಅದೇ ಬಿಗುಮುಖದ ಸೆಕ್ಯೂರಿಟಿಯ ಕಣ್ಣುಗಳು ಕತ್ತಲೆಯಲ್ಲೂ ಪ್ರಕಾಶಿಸುತ್ತಿದ್ದುವು. ಪ್ರಶಸ್ತಿ ಪ್ರದಾನ ಮರುದಿವಸದ ಪತ್ರಿಕೆಗಳನ್ನು ನೋಡುವ ಕುತೂಹಲ. ರಾಜ್ಯಪಾಲರ ರಾಜಕೀಯ ಛೇಡನೆಯ ಕುರಿತಾದ ವರದಿಗಳು ಹೈಲೈಟ್ ಆಗಿದ್ದುವು. ಎಲ್ಲೋ ಮಧ್ಯದಲ್ಲಿ ಪ್ರಶಸ್ತಿ ಪ್ರದಾನ ನಡೆದ ಸುದ್ದಿ ಮಿಂಚಿ ಮರೆಯಾಗಿತ್ತು.