Thursday, November 28, 2013

ಅಡಿಕೆಯ ಸೊಳ್ಳೆಬತ್ತಿ - ಮೋಸ್ ಕ್ವಿಟ್'


                ಸೊಳ್ಳೆ ಬತ್ತಿಯ ರಾಸಾಯನಿಕ ಅಪಾಯಗಳ ಅರಿವಿದ್ದೂ ಬಳಸುತ್ತಿದ್ದೇವೆ! ಅದರಲ್ಲಿರುವ ಆರ್ಗಾನೋಕ್ಲೋರಿನ್ ವರ್ಗದ ವಿಷ ಅಪಾಯಕಾರಿ. ವಸತಿಗೃಹದಿಂದ ಆಸ್ಪತ್ರೆವರೆಗೆ ಸೊಳ್ಳೆ ಓಡಿಸಲು ಅಲ್ಲ, ಸಾಯಿಸಲು ಸೊಳ್ಳೆ ಬತ್ತಿಗೆ ಬಹು ಬೇಡಿಕೆ. ಸೊಳ್ಳೆ ಸಾಯುತ್ತದೋ ಇಲ್ವೋ ನೋಡಿದವರಾರು? 

             ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆಯ ಕೃಷಿಕ ದಯಾನಂದ ಪಟವರ್ಧನ್ ಅಡಿಕೆಯಿಂದ ಸೊಳ್ಳೆ ಬತ್ತಿ ತಯಾರಿಸಿದ್ದಾರೆ. ಪ್ರಾಯೋಗಿಕವಾಗಿ ಹೊರ ಬಂದ 'ಮೋಸ್ ಕ್ವಿಟ್' ಉತ್ಪನ್ನಕ್ಕೆ ಗ್ರಾಹಕ ಸ್ವೀಕೃತಿ ಆಶಾದಾಯಕ.
ನಾವು ವೀಳ್ಯ ತಿನ್ನುತ್ತೇವೆ. ಜತೆಗೆ ಅಡಿಕೆ ಜಗಿದರೆ ಕೆಲವರಿಗೆ ತಲೆ ತಿರುಗಿದ ಅನುಭವ ಆಗುತ್ತದೆ. ಅಡಿಕೆ ಸಿಪ್ಪೆಯನ್ನು ಉರಿಸಿದಾಗ ಹೊಗೆ ಏಳುತ್ತದೆ. ಆ ಹೊಗೆಗೆ ಅಮಲಿನ ಗುಣವಿದೆ. ಮನುಷ್ಯರಿಗೆ ಈ ರೀತಿಯ ಅನುಭವ ಆಗುವುದಾದರೆ ಸೊಳ್ಳೆಗಳಿಗೂ ಅಮಲು ಬರಬೇಕಲ್ವಾ, ಈ ಪ್ರಶ್ನೆಗಳು, ಆ ಬಳಿಕದ ಯೋಚನೆಗಳು ದಯಾನಂದರಿಗೆ ಸೊಳ್ಳೆ ಬತ್ತಿ ತಯಾರಿಸಲು ಉತ್ತೇಜನ ನೀಡಿವೆ. 

               ಅಡಿಕೆಯಲ್ಲಿರುವ ಆಲ್ಕೊಲಾಯ್ಡ್ ಅಂಶ ಸೊಳ್ಳೆಗಳಿಗೆ ಅಮಲು ಬರಿಸುತ್ತದೆ. ಇದರ ಹೊಗೆಯಲ್ಲಿ ಅಡ್ಡ ಪರಿಣಾಮಗಳಿಲ್ಲ. ಇದಕ್ಕೆ ವೈದ್ಯರ ಶಿಫಾರಸ್ಸಿದೆ. ಬತ್ತಿಯ ಉದ್ದ ಐದು ಇಂಚು. ಐದು ಗ್ರಾಮ್ ತೂಕ. ಎರಡು ಗಂಟೆ ಉರಿಯುವ ಸಾಮಥ್ರ್ಯ. ಆರು ಗಂಟೆಗಳ ಕಾಲ ಸೊಳ್ಳೆಗಳಿಗೆ ಅಮಲು! 'ಸೊಳ್ಳೆ ಬತ್ತಿಯ ಹೊಗೆಯಿಂದ ಸೊಳ್ಳೆಗಳು ಸಾಯುವುದಿಲ್ಲ. ನಿಷ್ಕ್ರಿಯವಾಗುತ್ತವೆ' ಎನ್ನುತ್ತಾರೆ.

                  ಈ ಉತ್ಪನ್ನಕ್ಕೆ ಚಾಲಿ ಅಡಿಕೆ ಬಳಕೆ. ಅದಕ್ಕೆ ಬೆರಣಿ ಹುಡಿ ಮತ್ತು ಗಂಜಲದ ಮಿಶ್ರಣ. ಪಾಕ ಅಂಟು ಬರಲು ಸ್ವಲ್ಪ ಮೆಂತೆ. ಇವೆಲ್ಲಾ ಪುಡಿ ಯಂತ್ರದಲ್ಲಿ ಮಿಶ್ರವಾಗುತ್ತದೆ. ಈ ಪಾಕವನ್ನು ಹೈಡ್ರಾಲಿಕ್ ಯಂತ್ರದ ಮೂಲಕ ಒತ್ತುತ್ತಾರೆ. ಪಾಕವು ಹೊರಬರುವ ಬತ್ತಿಗಳನ್ನು ತುಂಡರಿಸಿ ಡ್ರೈಯರಿನಲ್ಲಿ ಬಿಸಿ ಸ್ನಾನ.

                ಮೊದಲಿಗೆ ಬೆರಣಿಯ ಬದಲಿಗೆ ಸೆಗಣಿ ಬಳಸಿದರು. ಅದು ಡ್ರೈಯರಿನಲ್ಲಿ ಒಣಗುವಾಗ ಕರಟಿದ ವಾಸನೆ ಬಂತು. ಬತ್ತಿಯ ಬಣ್ಣವೂ ಬದಲಾಯಿತು. ಹೊರ ಬರುವಾಗ ಕಡ್ಡಿಗಳಲ್ಲಿ ಹೆಚ್ಚಿನವು ಬಿರಿದಿತ್ತು.

                ನಾಲ್ಕು ದಶಕದ ಹಿಂದೆ ಬೆಂಗಳೂರಿನ ಕಂಪೆನಿಯೊಂದರ ವರ್ಕ್ ಶಾಪಿನಲ್ಲಿ ದುಡಿದಿದ್ದರು. ಯಂತ್ರಗಳ ಸೂಕ್ಷ್ಮ ವಿಚಾರಗಳ ಬಗ್ಗೆ ಅನುಭವ ಗಳಿಸಿದ್ದರು. ಇವರ ಕೆಲಸಕ್ಕೆ ಬೇಕಾದ ನಿರ್ದಿಷ್ಟ ಯಂತ್ರದ ಮಾದರಿ ನಕ್ಷೆ ಸಿದ್ಧವಾದಾಗ ದಶಕ ಸಂದಿತ್ತು. ಕೊಯಂಬತ್ತೂರಿನಲ್ಲಿ ಯಂತ್ರ ತಯಾರಿ.

                ಅಡಿಕೆಯಿಂದ ಸೊಳ್ಳೆ ಬತ್ತಿ ಪಟವರ್ಧನರ ದೀರ್ಘ ಕಾಲದ  ಕನಸು. ಹತ್ತು ವರುಷ ಯಂತ್ರ ಮತ್ತು ಬತ್ತಿಯ ತಾಂತ್ರಿಕ ಮಾಹಿತಿಗಾಗಿ ಜಾಲತಾಣ ಜಾಲಾಟ. ವಿವಿಧ ವಿನ್ಯಾಸಗಳಲ್ಲಿ ಬತ್ತಿ ತಯಾರಿ. ಆಪ್ತ ವಲಯದಲ್ಲಿ ಹಂಚಿ ಹಿಮ್ಮಾಹಿತಿ ಪಡೆದರು. ಈ ಯತ್ನಗಳಿಗೆ ಒತ್ತಾಸೆಯಾಗಿ ನಿಂತದ್ದು ಸ್ನೇಹಿತ ಗಜಾನನ ವಝೆ.

             ಬೇಡಿಕೆಗನುಸಾರ ಉತ್ಪಾದನೆ. ವಾರದೊಳಗೆ ಸರಬರಾಜು. ನಾಲ್ಕು ಮಂದಿ ಸಹಾಯಕರು. ಮಧ್ಯವರ್ತಿಗಳಿಲ್ಲದ ವ್ಯವಹಾರ. ತಿಂಗಳಿಗೆ ಸುಮಾರು ಒಂದೂವರೆ ಲಕ್ಷದಷ್ಟು ಬತ್ತಿ ತಯಾರಿ. ಬೇಡಿಕೆ ಬಂದ ಹಾಗೆ ಉತ್ಪಾದನೆ. ಒಮ್ಮೆ ಬಳಸಿ ನೋಡಿದ ನಗರ ಗ್ರಾಹಕರು ಪುನಃ ಖರೀದಿಸುತ್ತಿದ್ದಾರಂತೆ. ಲಾಡ್ಜಿಂಗ್, ರೆಸಾರ್  ಮತ್ತು ಆಸ್ಪತ್ರೆಗಳಲ್ಲಿ ಈ ರಾಸಾಯನಿಕರಹಿತ ಸೊಳ್ಳೆಬತ್ತಿಗೆ ಬೇಡಿಕೆ ಕುದುರಬಹುದು.

              ಈ ವರೆಗಿನ ಯಂತ್ರಾಭಿವೃದ್ಧಿಗಾಗಿ ಮತ್ತು ಸಂಶೋಧನೆಗೆ ದಯಾನಂದ್ ಕಿಸೆಯಿಂದ ಸಾಕಷ್ಟೂ ವ್ಯಯಿಸಿದ್ದಾರೆ. ಇನ್ನಷ್ಟು ಯಾಂತ್ರಿಕ ಮತ್ತು ಉತ್ಪನ್ನದ ಸುಧಾರಣೆ ಮನದಲ್ಲಿದೆ. ಸಂಘಸಂಸ್ಥೆಗಳು ಆಥರ್ಿಕ ನೆರವಿತ್ತರೆ ಇನ್ನಷ್ಟು ಅಭಿವೃದ್ಧಿಪಡಿಸಬಲ್ಲೆ ಎನ್ನುವ ವಿಶ್ವಾಸ ಅವರಿಗಿದೆ.
             (99643 52524)


Monday, November 25, 2013

ನಾಲ್ಕು ಮುಡಿ ಅಕ್ಕಿಗೆ ಒಂದು ಪವನು ಚಿನ್ನ!

             "ಮಂಗಳೂರಿನ ಡೊಂಗರಕೇರಿ ದೇವಸ್ಥಾನದ ಸನಿಹ ಗುತ್ಯಮ್ಮಸ್ಥಾನ ಓಣಿಯ ಕೊನೆಯಲ್ಲಿ ಉಳ್ಳಾಲ ನಾಯಕರೊಬ್ಬರ ಹಿತ್ತಿಲಲ್ಲಿ ಮಾವಿನ ಮರವೊಂದಿತ್ತು. ಮಾವಿನ ಹಣ್ಣು ಉತ್ತಮ ರುಚಿ. ದೊಡ್ಡ ಗಾತ್ರ. ತುಂಬಿದ ಮಾಸು. ಮುಂಡಪ್ಪ ಎಂಬವರು ಬಲಿತ ಕಾಯನ್ನು ಕೊಯಿದು, ಹಣ್ಣು ಮಾಡಿ ರಥಬೀದಿ, ಬಂದರಿನಲ್ಲಿ ಹೊಟ್ಟೆಪಾಡಿಗಾಗಿ ಮಾರುತ್ತಿದ್ದರು. ಹಣ್ಣನ್ನು ತಿಂದವರಿಂದ ಉತ್ತಮ ಪ್ರತಿಕ್ತಿಯೆ. ಮುಂಡಪ್ಪ ಹಣ್ಣು ಮಾರುತ್ತಿದ್ದುದರಿಂದ ಕ್ರಮೇಣ ಹಣ್ಣಿಗೂ ಅವರ ಹೆಸರು ಹೊಸೆಯಿತು, ದಕ್ಷಿಣ ಕನ್ನಡದ ಜನಪ್ರಿಯ ಮಾವಿನ ತಳಿ 'ಮುಂಡಪ್ಪ'ನ ಹಿನ್ನೆಲೆಯನ್ನು ನೆನಪಿಸಿಕೊಂಡರು," ಕಲ್ಲಡ್ಕ-ಕರಿಂಗಾಣದ ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್.

             ಕಾಮತರೊಂದಿಗೆ ಮಾತಿಗಿಳಿದರೆ ಒಂದು ಕಾಲಘಟ್ಟದ ಕೃಷಿಬದುಕು, ಕೃಷಿ ಸಂಕಟಗಳು, ತಲ್ಲಣಗಳು, ಮಾರುಕಟ್ಟೆ.. ವಿಚಾರಗಳು ಮಿಂಚಿ ಮರೆಯಾಗುತ್ತವೆ. 'ಆ ಕಾಲ ಒಳ್ಳೆಯದಿತ್ತು. ಈಗ ಎಲ್ಲವೂ ಹಾಳಾಗಿದೆ' ಎಂಬ ಗೊಣಗಾಟದ ಬದಲು, 'ಕಾಲಕ್ಕೆ ತಕ್ಕ ಹಾಗೆ ನಾವು ಅಪ್ಡೇಟ್ ಆಗಬೇಕು' ಎನ್ನುವ ಎಪ್ಪತ್ತಾರರ ಕಾಮತರ ನಿಲುವು ನಿತ್ಯ ರಿಂಗಣಿಸುತ್ತಿದೆ.

            ಗುತ್ತಿನ ಮನೆಯ ಹಿರಿಮೆಯ ಅನುಭವ. ಸಿರಿತನ-ಬಡತನಗಳಿಗೆ ಸಮಾನ ಮಣೆ. ಸಾಮಾಜಿಕ ನ್ಯಾಯಕ್ಕೆ ಮನ್ನಣೆ. ಸಮೂಹ ಹಿತದೃಷ್ಟಿಯ ದೃಷ್ಟಿಕೋನ. ಹಳೆಯ ಅನುಭವದ ಮೂಸೆಯಲ್ಲಿ ಹೊಸತನಕ್ಕೆ ತೆರೆದುಕೊಳ್ಳುವ ವಿಶಾಲ ಮನಸ್ಸು. ಕಾಯಕಷ್ಟದ ಕೃಷಿ ಬದುಕಿನ ಸುಭಗತೆ. ಕಿರಿಯರೊಂದಿಗೆ ಕಿರಿಯ, ಹಿರಿಯರೊಂದಿಗೆ ಹಿರಿತನದ ಛಾಪು. ಇಳಿ ವಯಸ್ಸಲ್ಲೂ ಪುಟಿದೇಳುವ ಉತ್ಸಾಹ. ಕಾಮತರ ಬದುಕನ್ನು ಹತ್ತಿರದಿಂದ ನೋಡಿದವರಿಗೆ ಅವರು ಕಾಣುವ ಬಗೆಯಿದು.

            ಆಶ್ಚರ್ಯ ಮೂಡಿಸುವ ನೆನಪು ಶಕ್ತಿ. ಕೃಷಿ ಜೀವನದ ಒಡಲಲ್ಲಿ ಮಾಗಿ ರೂಪುಗೊಂಡ ಬದುಕು. ಕೃಷಿಯ ಎಲ್ಲಾ ಮಗ್ಗುಲುಗಳಲ್ಲಿ 'ಬೇಕು-ಬೇಡ'ದ ನಿಖರತೆ. ಕಾಲಕಾಲಕ್ಕೆ ಬದಲಾಗುತ್ತಿರುವ ಸರಕಾರದ ಕಾನೂನು-ನೀತಿಗಳ ಗ್ರಹಿಕೆ, ವಿಮರ್ಶೆ. ಅಧಿಕಾರಿಗಳ ಅಧಿಕಾರದ ಹೆಜ್ಜೆ, ಇಲಾಖೆಯೊಳಗಿನ ಫೈಲುಗಳ ರೀತಿ-ನೀತಿಗಳು ಗೊತ್ತು. ಹಾಗಾಗಿ ಕಳೆದ ಕಾಲದ ಕಥನಕ್ಕೆ ಕಾಮತರು ತೆರೆದ ಪುಸ್ತಕ. ಪುಟ ಬಿಡಿಸಿದಷ್ಟೂ ಬಿಚ್ಚಿಕೊಳ್ಳುತ್ತದೆ, ಜೀವನ ಗಾಥೆಗಳು. 

                ಪ್ರಾಮಾಣಿಕ ವ್ಯವಹಾರ. ಪ್ರಾಮಾಣಿಕತೆಗೆ ಗೌರವ. ಸೋಗಿಲ್ಲದ ವ್ಯಕ್ತಿತ್ವ. ಮಾತಿನಂತೆ ಕೃತಿ. ಓದಿದ, ನೋಡಿದ ವಿಚಾರವನ್ನು ಹಿಡಿದಿಟ್ಟುಕೊಂಡ ಬೌದ್ಧಿಕ ಗಟ್ಟಿತನ. ಬೇಕಾದಾಗ ಬೇಕಾದಷ್ಟು ಮೊಗೆವ ವೈಚಾರಿಕ ತಾಕತ್ತು. ನಿಜದ ನೇರದ  ಜಾಯಮಾನ.  ಹುರಿದುಂಬಿಸುವ, ತಪ್ಪಿದಾಗ ತಿದ್ದುವ ಹಿರಿಯಣ್ಣ ನಮ್ಮ ಕಾಮತರು.

             ಹೊಸ ತರಕಾರಿಗಳು, ಹಣ್ಣುಗಳ ಪತ್ತೆಯಾದರೆ ಸಾಕು, ಅದರ ಹಿಂದೆ ಓಡುತ್ತಾರೆ. ಮಾಹಿತಿ ಸಂಗ್ರಹಿಸುತ್ತಾರೆ. ಬೀಜ, ಸಸಿ ಪಡೆದ ಬಳಿಕವೇ ವಿಶ್ರಾಂತಿ. ಸಿಕ್ಕ ಬೀಜಗಳನ್ನು ಆಸಕ್ತರಿಗೆ ಹಂಚುತ್ತಾರೆ. ಹಿಮ್ಮಾಹಿತಿ (ಫೀಡ್ಬ್ಯಾಕ್) ಹಂಚಿಕೊಳ್ಳುವುದು ಖುಷಿ. ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯ ಸ್ಥಾಪಕ ಸದಸ್ಯರಲ್ಲೊಬ್ಬರು. ತಮ್ಮ ಹಿತ್ತಿಲಲ್ಲಿರುವ ಒಂದೊಂದು ಗಿಡಗಳ ಹಿಂದೆ ಸಮೃದ್ಧಿಯ ಹೆಸರು ಹೊಸೆದಿದೆ.

               ಕಾಮತರ ಅಡುಗೆ ಮನೆ ಸಹಜ. ಇವರ ಯೋಜನೆ, ಯೋಚನೆಯ ಪಾಸ್ ವರ್ಡ್ ತಕ್ಷಣ ಗ್ರಹಿಸಿ ಅನುಷ್ಠಾನಿಸುವ ಮನದನ್ನೆ ಸುಗುಣಾ, 'ನಿಮ್ಮ ಕಾಮತರನ್ನು ಮಾತನಾಡಿಸಿದರೆ ಎಷ್ಟೂ ಮಾತನಾಡಿಯಾರು. ಅವರು ಕೃಷಿ ಕಾರ್ಯಕ್ರಮಗಳಿಗೆ ಹೋಗ್ತಾರೆ, ಬರ್ತಾರೆ. ಅಲ್ಲಿನ ವಿಚಾರಗಳನ್ನು ಮನೆಯಲ್ಲಿ ಹೇಳುತ್ತಾರೆ. ಅವರಿಗೆ ಹೇಳಲು ಆಸಕ್ತಿಯಿದೆ. ನನಗೆ ಕೇಳಲು ಕುತೂಹಲವಿದೆ. ಹಾಗಾಗಿ ಬದುಕಿನ ರಥವು ಒಂದೇ ಹಳಿಯಲ್ಲಿ ಸಾಗುತ್ತದೆ,' ಎಂದರು. ಅರ್ಧ ಹೊತ್ತು ಅವರ ನೆನಪಿನ ಬುತ್ತಿಯನ್ನು ಕೆದಕಿದಾಗ ಸಿಕ್ಕ ಮಾಹಿತಿ ಅನುಭವಪೂರ್ಣ. ಭತ್ತ, ತೆಂಗು, ಅಡಿಕೆ ಕೃಷಿಯ ಅನುಭವಗಳ ಒಂದೆಳೆ ಇಲ್ಲಿದೆ.

             "ಬಯಲು ಗದ್ದೆಯಲ್ಲಿ ತೆಂಗಿನ ಕೃಷಿ ಚೆನ್ನಾಗಿ ಬರುವುದಿಲ್ಲ. ಗೆಂದಾಳಿ ತಳಿಯದ್ದಕ್ಕೆ ಹೆಚ್ಚು ದರ ಸಿಗುತ್ತದೆ ಎಂದು ಅದನ್ನೇ ಕೃಷಿ ಮಾಡಬೇಡಿ. ಅದಕ್ಕೆ ಕುರುವಾಯಿ, ಕೆಂಪು ಮೂತಿ ಹುಳ, ಸುಳಿ ಕೊಳೆಯುವ ರೋಗ ಜಾಸ್ತಿ. ಗೆಂದಾಳಿಯಲ್ಲಿ 60-70 ಶೇಕಡಾ ಬದುಕುವ ಪ್ರಮಾಣ.  ಗುಡ್ಡ, ಬೆಟ್ಟುಗದ್ದೆ, ಬದುಗಳಲ್ಲಿ ಮಾಡಬಹುದು.

            ಬಯಲು ಗದ್ದೆಯಲ್ಲಿ ತೆಂಗಿನ ಸಸಿ ನೆಡಲು ಹೊಂಡ ತೆಗೆಯುವಾಗ ಹಳದಿ ಮಣ್ಣು ಸಿಕ್ಕರೆ ಅಲ್ಲಿ ತೆಂಗು ನೆಡಬೇಡಿ. ಅದು ಅಂಟು ಮಣ್ಣು. ಆ ಮಣ್ಣಿಗೆ ಇನ್ಫೆಕ್ಷನ್ ಅಂಟಿದೆ ಎಂದರ್ಥ. ಅದರಲ್ಲಿ ನೀರು ಇಳಿದು ಹೋಗುವುದಿಲ್ಲ. ಸೇಡಿ ಮಣ್ಣು ತೆಂಗಿಗೆ ಒಳ್ಳೆಯದು.

             ಭತ್ತದ ಕೃಷಿ ಕರಾವಳಿಗೆ ಹೇಳಿಸಿದ್ದಲ್ಲ. ಭತ್ತದ ಕಣಜ ಎಂದು ಕರೆಯುತ್ತಿದ್ದ ಕಾಲದಲ್ಲೇ ಹಾಸನ, ಸಕಲೇಶಪುರ ಪ್ರದೇಶದಿಂದ ಭತ್ತ ಬರುತ್ತಿತ್ತು. ಭತ್ತದ ಸಂಪನ್ಮೂಲವಿದ್ದರೂ ವರುಷಕ್ಕೆ ಮೂರ್ನಾಲ್ಕು ತಿಂಗಳು ತತ್ವಾರವಾಗುತ್ತಿತ್ತು. ಈಗದು ಹೆಚ್ಚಾಗಿದೆ. ಅಡಿಕೆ, ತೆಂಗು ಬಿಟ್ಟರೆ ಬೇರೆ ಯಾವ ಕೃಷಿಯೂ ಆಗದಿರುವುದರಿಂದ ಭತ್ತವನ್ನು ಬಲವಂತದಿಂದ ಬೆಳೆದರಷ್ಟೇ. ಮಳೆಗಾಲದಲ್ಲಿ ವಿಪರೀತ ಮಳೆ, ಬೇಸಿಗೆಯಲ್ಲಿ ನೀರಿಲ್ಲದೆ ಮತ್ತು ಬಿಸಿಲಿನ ಝಳದಿಂದಾಗಿ ಇಳುವರಿ ಅಷ್ಟಕ್ಕಷ್ಟೇ. ಸಕಲೇಶಪುರದಿಂದ ಕರಾವಳಿಗೆ ಹುರಿಯಕ್ಕಿ ತಯಾರಿಗಾಗಿ 'ರಾಸ್, ಬಡಾಸ್' ಎಂಬ ತಳಿ ಬರುತ್ತಿತ್ತು. ಇದರ ಹುರಿಯಕ್ಕಿ ರುಚಿ. ತುಂಬಾ ಬೇಡಿಕೆ. ಅದರ ತಳಿ ಸಂಗ್ರಹಕ್ಕೆ ಯತ್ನಿಸಿದೆ. ಫಲಕಾರಿಯಾಗಲಿಲ್ಲ. ಹಿಂದೆ ಇಪ್ಪತ್ತು ಸೆಂಟ್ಸಿನಲ್ಲಿ ಮೂರು ಮುಡಿ ಭತ್ತ ಬೆಳೆಸಿದರೆ ಆತ ಶ್ರೀಮಂತ.
                
            ಅಮ್ಟಾಡಿ, ಅನಂತಾಡಿ, ಕಾಂಪ್ರಬೈಲು.. ಇಲ್ಲೆಲ್ಲಾ ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದ್ದರು. 'ಮಸ್ಕತಿ' ಎಂಬ ತಳಿಯ ಅಕ್ಕಿ ಮಸ್ಕತ್ತಿಗೆ ರಫ್ತು ಆಗುತ್ತಿತ್ತು! ಈ ಅಕ್ಕಿಯ ಅನ್ನ ಜೀರ್ಣಹರ. ಕುಟ್ಟಿ ಮಾಡಿದ ಅಕ್ಕಿಯನ್ನು ಮುಡಿ ಕಟ್ಟಿ ಮಾರಾಟ. ಮುಡಿ ಕಟ್ಟುವುದೂ ಜಾಣ್ಮೆಯ ಕೆಲಸ. ಒಂದು ಮುಡಿ ಅಕ್ಕಿ ಅಂದರೆ ಕುಚ್ಚಲಾದರೆ ಮೂವತ್ತೊಂಭತ್ತು ಕಿಲೋ. ಬೆಳ್ತಿಗೆ ನಲವತ್ತು ಕಿಲೋ. ಮಂಗಳೂರಿನ ವ್ಯಾಪಾರಿ ಬಾಬ ಪೈಯವರ ಮೂಲಕ ಅಕ್ಕಿ ರಫ್ತು. 

               ಒಂದು ಮುಡಿ ಬೆಳ್ತಿಗೆ ಅಕ್ಕಿಗೆ ಒಂದು ಮುಡಿ ಉದ್ದು, ಒಂದು ಮುಡಿ ಕುಚ್ಚಲು ಅಕ್ಕಿಗೆ ಒಂದು ಮುಡಿ ಹೆಸರು, ಇಪ್ಪತ್ತು ಮುಡಿ ಅಕ್ಕಿಗೆ ಒಂದು ಖಂಡಿ (260 ಕಿಲೋ) ಗೋಟಡಿಕೆ - ಹೀಗೆ ವಿನಿಮಯ ವ್ಯಾಪಾರ ಎರಡು ಶತಮಾನದಿಂದಲೇ ಇದ್ದುವು.  ಒಂದು ಮುಡಿ ಅಕ್ಕಿಗೆ ಮೂರು ಕಾಲು ರೂಪಾಯಿ. ನಾಲ್ಕು ಮುಡಿ ಅಕ್ಕಿಯನ್ನು ಬಂಟ್ವಾಳದ ವ್ಯಾಪಾರಿಯೋರ್ವರಿಗೆ ಮಾರಿದರೆ ಒಂದು ಪವನು ಚಿನ್ನ ಕೊಡುತ್ತಿದುದು ನೆನಪಿದೆ. ನವರಾತ್ರಿಯ ಮುನ್ನ ಹೊಸಅಕ್ಕಿ ಊಟ ಮತ್ತು ವಿಷು(ಸೌರಮಾನ ಯುಗಾದಿ)ವಿನಂದು ಪವನು ಮನೆಯೊಳಗೆ ಬಂದರೆ ಸಮೃದ್ಧಿ ಎನ್ನುವ ನಂಬಿಕೆಯಿತ್ತು.

              ಪದಾರ್ಥಕ್ಕೆ ತೆಂಗಿನಕಾಯಿ ಬಳಕೆಯಿತ್ತು. ಒಂದು ಪೈಸೆ ನೀಡಿದರೆ ತೆಂಗಿನಕಾಯಿಯ ಸಣ್ಣ ಹೋಳು ಅಂಗಡಿಯಲ್ಲಿ ಸಿಗುತ್ತಿತ್ತು. ಮೂರ್ನಾಲ್ಕು ಹೋಳು ಇದ್ದರೆ ಪದಾರ್ಥಕ್ಕೆ ಸಾಕಾಗುತ್ತಿತ್ತು. ಪೈಸೆ ಪೈಸೆ ಲೆಕ್ಕಾಚಾರದ ಕಾಲದಲ್ಲಿ ನೆಮ್ಮದಿಯ ದಿನಗಳಿದ್ದುವು. ಈಗ ಕೋಟಿ ಲೆಕ್ಕಾಚಾರದಲ್ಲಿದ್ದರೂ ಖುಷಿಯಿಲ್ಲದ ಜೀವನ ನೋಡುತ್ತಾ ಇದ್ದೇವೆ.

              ಸಾರಿಗೆ ತತ್ವಾರದ ದಿನಗಳು. ಪಾಣೆಮಂಗಳೂರಿನಿಂದ ಮಂಗಳೂರಿಗೆ ದೋಣಿಯಲ್ಲಿ ಪ್ರಯಾಣ. 20-30 ಮಂದಿ ಪ್ರಯಾಣಿಕರು. ನಾಲ್ಕಾಣೆ ದರ. ಇಲ್ಲಿಂದ ಹೋಗುವಾಗ ಇಡೀ ರಾತ್ರಿ ಪ್ರಯಾಣ. ಮಧ್ಯೆ ಮಧ್ಯೆ ನಿಲುಗಡೆ. ಬರುವಾಗ ಎರಡೇ ಗಂಟೆಯಲ್ಲಿ ಪಾಣೆಮಂಗಳೂರು ಸೇರುತ್ತಿತ್ತು. '1906ರಲ್ಲಿ ಮೋಟಾರಿಗೆ ಆರಾಣೆ ಕೊಟ್ಟ ಲೆಕ್ಕ  ಅಕೌಂಟು ಪುಸ್ತಕದಲ್ಲಿದೆ'! ಮೂರು ಪೈಸೆಗೆ ನಶ್ಯ ತಂದ ಲೆಕ್ಕವೂ ಇದೆ! ಮಂಗಳೂರಿನಿಂದ ಮೈಸೂರಿಗೆ ಆರು ರೂಪಾಯಿ. ಸಿ.ಪಿ.ಸಿ. ಬಸ್. 1910ರಲ್ಲಿ ಮೋಟಾರು ಚಾಲಿತ ಬಸ್ಸು ಬಂದಿತ್ತು.

                 ಡಾ.ಕೆ.ಎಸ್.ಕಾಮತರು ಸಂದು ಹೋದ ಕಾಲದ ಕಥನವನ್ನು ಹೇಳುತ್ತಾ ಪ್ರಶ್ನಿಸಿದರು, 'ಈಗ ಅಭಿವೃದ್ಧಿ ಎನ್ನುತ್ತಾರಲ್ಲಾ, ನಿಜವಾದ ಅಭಿವೃದ್ಧಿ ಆಗುತ್ತಾ' ಎಂದರು. ಜತೆಯಲ್ಲಿದ್ದ ಸತ್ಯನಾರಾಯಣ ಎಡಂಬಳೆ, ರಘುರಾಮ ಹಾಸನಡ್ಕ ಮುಖಮುಖ ನೋಡಿಕೊಂಡೆವಷ್ಟೇ.

                  'ಭೂಮಸೂದೆ ಬಂದಾಗ ಯಾರಿಗೂ ನೋವು ಮಾಡಿಲ್ಲ. ಒಂದೇ ದಿವಸ ಎಪ್ಪತ್ತು ಪೈಲುಗಳಿಗೆ ಸಹಿ ಮಾಡಿದ್ದೇನೆ' ಎನ್ನುವಾಗ ಕಾಮತರಲ್ಲಿ ವಿಷಾದವಿಲ್ಲ! ಇದು ಸಮಾಜಿಕ ನ್ಯಾಯಕ್ಕೆ, ಕಾನೂನಿಗೆ ಸಲ್ಲಿಸಿದ ಮಾನ-ಸಂಮಾನ.
 

Wednesday, November 6, 2013

ಬಿಸಿಯೂಟದ ರುಚಿಯಾಗಬೇಕಾದರೆ...








            ಶಾಲೆಯ ಬಿಸಿಯೂಟದ ಬಿಸಿಬಿಸಿ ಸುದ್ದಿಗಳು ರಾಜ್ಯವಲ್ಲ, ದೇಶ ಮಟ್ಟದಲ್ಲಿ ರಾಚುತ್ತಿವೆ. ಜತೆಗೆ ರಾಜಕೀಯದ ವಾಸನೆ. ಅದಕ್ಕೊಂದಿಷ್ಟು ಜಾತಿ, ಮತದ ಲೇಪ. ಇಂತಹ ಪತನಸುಖಿಗಳಿಂದಾಗಿ ಚಿಣ್ಣರು ಹೈರಾಣ. ಹೆತ್ತವರು ಕಂಗಾಲು. ದಾರಿಕಾಣದ ಆಧ್ಯಾಪಕರು. ನುಣುಚಿಕೊಳ್ಳುವ ಆಡಳಿತ ವ್ಯವಸ್ಥೆ. ಮಾತು ತಿರುಚುವ ದೊರೆಗಳು.

          ಮಂತ್ರಿಗಳು, ಅದಿಕಾರಿಗಳು, ಹೆತ್ತವರು ಒಮ್ಮೆ ಶಾಲೆಗೆ ಬನ್ನಿ. ಬಿಸಿಯೂಟವನ್ನು ಉಣ್ಣಿ. ಆಗಷ್ಟೇ ಗೊತ್ತಾಗುತ್ತದೆ - ಅದರ ರುಚಿ! ಕಷ್ಟ-ಕೋಟಲೆಗಳು. ಕಾಯಕಷ್ಟಗಳು. ಗುಣಮಟ್ಟಕ್ಕಾಗಿ ಪಡುವ ಪಾಡು. ಸರಕಾರದ ಪೈಸೆ ಲೆಕ್ಕಾಚಾರದ ಒಳಸುರಿಗಳಿಗೆ ಪರದಾಟ. ಶುಚಿ-ರುಚಿಗೆ ಪೇಚಾಟ. ಇಷ್ಟಿದ್ದೂ ಪಾಠದೊಂದಿಗೆ ಬಿಸಿಯೂಟವನ್ನು ಉಣಿಸುವ ಅಧ್ಯಾಪಕರ ತನು ಶ್ರಮ ಎಲ್ಲೂ ದಾಖಲಾಗುವುದಿಲ್ಲ. ಆಡಳಿತಕ್ಕೆ ದಾಖಲಾಗಬೇಕಾಗಿಲ್ಲ. ಅಲ್ಲಿನವರಿಗೆ ಬೇಕಾಗಿಯೂ ಇಲ್ಲ.
ಅಕ್ಕಿಯಿಂದ ತರಕಾರಿ ತನಕ ಗುಣಮಟ್ಟದ ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭಿಸುತ್ತದೆ ಎನ್ನುವುದರಲ್ಲಿ ವಿಶ್ವಾಸವಿಲ್ಲ. ಸರ್ವತ್ರ ಕಲಬೆರಕೆ. ಎಲ್ಲದಕ್ಕೂ ವಿಷದ ಸ್ನಾನ. ತಾಜಾ ಎನ್ನುವುದು ಮರೀಚಿಕೆ.  ಟೊಮೆಟೋ, ಕ್ಯಾಬೇಜ್, ಹೂಕೋಸು.. ಹೀಗೆ ಎಷ್ಟು ಬೇಕು, ವಿಷದ ಬಂಧುಗಳು! ಬಿಸಿಯೂಟದ ಪದಾರ್ಥದಲ್ಲಿ ಇವೆಲ್ಲಾ ಚಿಣ್ಣರ ಉದರ ಸೇರುತ್ತದೆ.

          ಮನಸ್ಸಿದ್ದರೆ ಮಾರ್ಗವಿದೆ. ಹಳೆಯ ಮಾತಿದು. ನಿತ್ಯ ಪ್ರಸ್ತುತ. ಚಿಣ್ಣರ ಆರೋಗ್ಯ ಕಾಪಾಡಲು ಕಬ್ಬಿಣದಂಶದ ಮಾತ್ರೆಗಳನ್ನು ಈಚೆಗೆ ನುಂಗಿಸಲಾಗಿತ್ತು. ಬೇಕೋ ಬೇಡವೋ ಪ್ರಶ್ನಿಸುವಂತಿಲ್ಲ. ಕೆಲವರಿಗೆ ಏನೂ ಆಗಿಲ್ಲದಿರುವುದು ಪುಣ್ಯ. ಅನಾರೋಗ್ಯಕ್ಕೆ ತುತ್ತಾದವರು ಮರುತ್ತರ ಹೇಳಿಲ್ಲ. ಹೇಳಿದರೂ ಕೇಳುವವರು ಯಾರು? ಇದರ ಬದಲು ಕಬ್ಬಿಣದ ಅಂಶ ಇರುವ ಖಾದ್ಯಗಳನ್ನು ಬಿಸಿಯೂಟಕ್ಕೆ ಯಾಕೆ ಬಡಿಸಬಾರದು. 

          ಈ ಮಾತನ್ನು ಖಾದಿ ದಿರುಸಿನ ಗಣ್ಯರಲ್ಲಿ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದೆ. 'ಖರ್ಚು ಬರುವುದಿಲ್ವಾ. ಬೊಕ್ಕಸದಲ್ಲಿ ಹಣ ಬೇಡ್ವಾ' ಎಂಬ ಉತ್ತರಕ್ಕೆ ನಗಲೋ, ಅಳಲೋ! ಕೋಟಿ ಕೋಟಿ ಕಾಂಚಾಣವನ್ನು ನುಂಗುವ,  ರೈತರ ಭೂಮಿಯನ್ನೇ ಸದ್ದಿಲ್ಲದ ಸ್ವಾಹಾ ಮಾಡುವ, ಚೂರುಪಾರು ಜಾಗವನ್ನು ಕುಟುಂಬಸ್ಥರ ಹೆಸರಿಗೆ ಬರೆಸಿಕೊಂಡ ಕನ್ನಾಡಿನ ಗಣ್ಯರ ಇತಿಹಾಸ ಜನರ ಬಾಯಲ್ಲೇ ಕುಣಿದಾಡುತ್ತಿದೆ! ಮಕ್ಕಳಿಗೆ ನೀಡುವ ಆಹಾರಕ್ಕೆ ಮಾತ್ರ ಆರ್ಥಿಕ ಕೊರತೆ. ಈಚೆಗೆ ಹಾಲು ಸೇರಿಕೊಂಡಿದೆ. ಶ್ಲಾಘನೀಯ.  

          ಆಹಾರವೇ ಔಷಧ. ಔಷಧೀಯ ಗುಣವುಳ್ಳ ಆಹಾರದ ಸೇವನೆಯ ಬೌದ್ಧಿಕ ಜ್ಞಾನವು ಹಿರಿಯರ ಬಳುವಳಿ. ಋತುಮಾನಕ್ಕನುಸಾರವಾದ ವಿವಿಧ ಖಾದ್ಯಗಳು ಬದುಕಿನಂಗವಾಗಿದ್ದ ದಿನಗಳಿದ್ದುವಲ್ಲಾ. ಹಿತ್ತಿಲಿಗೊಮ್ಮೆ ಸುತ್ತು ಬಂದರೆ ಆಯಿತು, ಕೈತುಂಬಾ ತರಕಾರಿಗಳು, ಕುಡಿಗಳು, ಸೊಪ್ಪುಗಳು. ಅವುಗಳು ಅನ್ನದೊಂದಿಗೆ ಹೊಟ್ಟೆ ಸೇರಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟ ಹಿರಿಯರು ಈಗಲೂ ಸಾಕ್ಷಿಯಾಗಿ ಸಿಗುತ್ತಾರೆ. ಅವರೆಂದೂ ಚಿಕ್ಕಪುಟ್ಟ ಶೀತ-ಜ್ವರಕ್ಕೆ ಮೆಡಿಕಲ್ ಶಾಪಿಗೆ ಓಡಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ. 

              ಈಚೆಗೆ ಹುಬ್ಬಳ್ಳಿಗೆ ಹೋಗಿದ್ದೆ. ಮನೆಯೊಂದರಲ್ಲಿ ಶತಮಾನ ದಾಟಿದ ವೃದ್ಧೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದರು! ಹತ್ತಡಿಯ ಬಾವಿಯಲ್ಲ, ಇನ್ನೂರು ಅಡಿ! ಜೀವಿತನ ಗುಟ್ಟೇನು? 'ನಾವೇ ಬೆಳೆದ ರಾಗಿ, ಜೋಳವನ್ನು ತಿಂತೀವಿ. ಹೊಲದಲ್ಲಿ ದುಡಿತೀವಿ. ತಿನ್ನೋಕೆ ಬೇಕಾದವನ್ನೆಲ್ಲಾ  ಬೆಳೀತೀವಿ..', ಆ ಅಜ್ಜಿ ಲಟಲಟನೆ ಮಾತನಾಡುತ್ತಿದ್ದಂತೆ ಅಳಿಕೆ ಮುಳಿಯದ ವೆಂಕಟಕೃಷ್ಣ ಶರ್ಮರು ನೆನಪಾದರು.

          ಶರ್ಮರು ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಅಧ್ಯಾಪಕರು. ನಿರ್ವಿಷವಾದ ಆಹಾರವನ್ನು ಸೇವಿಸುವತ್ತ, ಅದನ್ನೇ ಮಾಹಿತಿ ರೂಪದಲ್ಲಿ ನೀಡುವ ಅಪರೂಪದ ವ್ಯಕ್ತಿ. 'ನಮ್ಮ ಅಡುಗೆ ಮನೆಗೆ ನಮ್ಮದೇ ತರಕಾರಿ' ಎನ್ನುವ ಅವರ ಬದುಕಿನ ಹಿಂದೆ ಭವಿಷ್ಯದ ಕಾಳಜಿಯಿದೆ. ಆರೋಗ್ಯದ ಗುಟ್ಟಿದೆ. ಹಸುರು ಪ್ರೀತಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತಃಕರಣ ಶುದ್ಧವಿದೆ. ಗಂಟಲ ಮೇಲಿನ ಮಾತು ದೂರ. 

          ಶರ್ಮರು ತರಕಾರಿ ಬೆಳೆಯುತ್ತಾರೆ, ತಿನ್ನುತ್ತಾರೆ, ಹಂಚುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಒಯ್ಯಲು ಕಟ್ಟಿ ಕೊಡುತ್ತಾರೆ. ಬೀಜಗಳನ್ನು ನೀಡಿ ತರಕಾರಿ ಬೆಳೆಸುವಂತೆ ಪ್ರೇರೇಪಿಸುತ್ತಾರೆ. ಇವೆಲ್ಲವೂ ಆರ್ಥಿಕ ಲಾಭಕ್ಕಾಗಿ ಅಲ್ಲ! ಸ್ವಂತಕ್ಕಾಗಿ ಬೆಳೆವ ತರಕಾರಿಯಲ್ಲಿ ಬಹುಪಾಲು ಅವರ ಶಾಲೆಯ ಬಿಸಿಯೂಟದ ಪದಾರ್ಥಕ್ಕೆ ಮೀಸಲು. ಬಾಳೆಕಾಯಿ, ಬಾಳೆದಿಂಡು, ಕುಂಡಿಗೆ, ಹಲಸು, ಕಣಿಲೆ, ನೆಲಬಸಳೆ, ಪಪ್ಪಾಯಿ, ಗೆಡ್ಡೆಗಳು, ಕೆಸು.. ನಿತ್ಯ ಬದುಕಿನಲ್ಲಿ ಮರೆಯಾಗುತ್ತಿರುವ ತರಕಾರಿಗಳು ಬಿಸಿಯೂಟದೊಂದಿಗೆ ಮಕ್ಕಳ ಉದರಾಗ್ನಿಯನ್ನು ತಣಿಸುತ್ತದೆ.

          ಚಿಣ್ಣರು ಪಾರಂಪರಿಕ ಖಾದ್ಯಕ್ಕೆ ಒಗ್ಗಿಕೊಂಡಿದ್ದಾರೆ. ಅವರಿಗೆ ಹಲಸು ಹೊಲಸಾಗುವುದಿಲ್ಲ. ಗೆಡ್ಡೆಗಳತ್ತ ತಾತ್ಸಾರವಿಲ್ಲ. ತಂಬುಳಿ, ಚಟ್ನಿ ಮಾಡಿದಾಗ ಗೊಣಗಾಟವಿಲ್ಲ. ತರಕಾರಿ ತುಂಬಿದ ಶರ್ಮರ ದ್ವಿಚಕ್ರ ನಿಂತರೆ ಸಾಕು, ವಿದ್ಯಾರ್ಥಿಗಳು ಅವರನ್ನು ಮುತ್ತಿಕೊಳ್ಳುತ್ತಿರುವ ದೃಶ್ಯದಲ್ಲಿ ಮಾತೃತ್ವ ಎದ್ದುಕಾಣುತ್ತದೆ. ನಿರ್ವಿಷವಾದ ತರಕಾರಿ ಪದಾರ್ಥವನ್ನು ಸವಿಯುವ ಈ ಶಾಲೆಯ ಚಿಣ್ಣರು ಭಾಗ್ಯವಂತರು.

          ಬಿಸಿಯೂಟ ಪದಾರ್ಥದ ಕತೆಯನ್ನು ಆಲಿಸಿದ ಹೆತ್ತವರೂ ಕೂಡಾ ಪಾರಂಪರಿಕ ವ್ಯವಸ್ಥೆಗೆ ಉತ್ಸುಕರಾಗುತ್ತಿದ್ದಾರೆ. ಮಕ್ಕಳ ಒತ್ತಾಯಕ್ಕಾದರೂ ತಿಮರೆ ಚಟ್ನಿ, ತಗತ್ತೆ ಪಲ್ಯ, ಹಲಸಿನ ಸಾಂಬಾರು.. ಮಾಡುತ್ತಾರಂತೆ. ಶರ್ಮರಿಗೆ ಆಹಾರದ ಕುರಿತು ಕಾಳಜಿಯಿದೆ. ಚಿಣ್ಣರಲ್ಲಿ ಪ್ರೀತಿಯಿದೆ. ಅದು ಮಕ್ಕಳ ಆಹಾರದ ಮೂಲಕ ಪ್ರತಿಫಲಿತವಾಗುತ್ತದೆ.

          ಶಾಲೆಯ ಆಡಳಿತ ಮಂಡಳಿ, ಗುರುವೃಂದ, ಬಿಸಿಯೂಟವನ್ನು ತಯಾರಿಸುವ ಸಹಾಯಕರೇ ಆಗಿರಲಿ, ಮಾಡುವ ಕೆಲಸದಲ್ಲಿ ಪ್ರೀತಿ-ವಿಶ್ವಾಸಗಳಿದ್ದರೆ ಬಿಸಿಯೂಟ ರುಚಿಯಾಗುತ್ತದೆ. ಗೊಣಗಾಟ, ಅತೃಪ್ತಿಗಳೇ ವೃತ್ತಿಯಾದಾಗ ಜಿರಳೆ, ಇಲಿ, ಹಲ್ಲಿ.. ಕಾಣಿಸಿಕೊಳ್ಳಬಹುದು! ಭವಿಷ್ಯದ ಉತ್ತರಾಧಿಕಾರಿಗಳಾಗಿ ಶಿಕ್ಷಣವನ್ನು ಪಡೆಯುವ ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವ ಹೊಣೆ ನಮ್ಮೆಲ್ಲರದು ತಾನೆ. ಈ ನಿಟ್ಟಿನಲ್ಲಿ ಅಧ್ಯಾಪಕರಿಗೆ ಬಿಸಿಯೂಟದ ನಿರ್ವಹಣೆಯ ಭಾರವನ್ನು ಹಗುರಗೊಳಿಸಬೇಕು.

          ಈಗ ಆಟಿಯ (ಆಷಾಢ) ಹಬ್ಬ. ಗೌಜಿ-ಗದ್ದಲ. ಸಂತೋಷದ ಸಮಯ. ಆಷಾಢ, ಶ್ರಾವಣ.. ಹೀಗೆ ಪ್ರತಿಯೊಂದು ತಿಂಗಳಿಗೂ ಅದರದ್ದೇ ಅದ ಮಹತ್ತು. ಹಿರಿಯರ ಬದುಕಿನಲ್ಲಿ ಇವೆಲ್ಲಾ ಹೊಸೆದುಕೊಂಡಿತ್ತು. ಅದಕ್ಕೆ ಗಮ್ಮತ್ತಿನ ಸ್ಪರ್ಶ ಇರಲಿಲ್ಲ. ಅಡುಗೆ ಮನೆಯು ನಿತ್ಯ ಗಮ್ಮತ್ತಿನ ತಾಣ. ಈಗ ಗೋಬಿ ಮಂಚೂರಿಯನ್ ಕಾಲ. ಹಾಗಾಗಿ ಅಜ್ಜಿಯಿಂದ ಬಂದ ಜ್ಞಾನವನ್ನು ಒಂದು ದಿನದ ಗಮ್ಮತ್ತಿನ ಮೂಲಕವಾದರೂ ಆಚರಿಸುತ್ತೇವಲ್ಲಾ..!

          ಬಂಟ್ವಾಳ ತಾಲೂಕಿನ ಶೈಕ್ಷಣಿಕ ಸಂಸ್ಥೆಗಳು ಆಗಸ್ಟ್ 12ರಂದು ಆಟಿ ಹಬ್ಬವನ್ನು ಆಚರಿಸಿದುವು. ಪಾರಂಪರಿಕವಾದ ಆಹಾರ ಕ್ರಮವನ್ನು ಚಿಣ್ಣರಿಗೆ ಬೋಧಿಸುವುದಲ್ಲದೆ, ಅದರ ಅನುಷ್ಠಾನವನ್ನು ಮಾಡುವ ದೂರದೃಷ್ಟಿ. ಕಳೆದ ವರುಷ ಆಹಾರ ಸನ್ನದು ಎಂಬ ನೂತನ ಪರಿಕಲ್ಪನೆ ಕೆಲೆವೆಡೆ ಯಶವಾಗಿತ್ತು. ಬಹುತೇಕ ಶಾಲೆಗಳು ಆಟಿಯ ಮಹತ್ವನ್ನು ಸಾರುವ ಕಲಾಪಗಳನ್ನು ರೂಢಿಸಿಕೊಂಡಿದ್ದುವು.

          ಆಟಿಯ ಹಬ್ಬಕ್ಕಾಗಿ ಕೇಪು-ಕಲ್ಲಂಗಳ ಸರಕಾರಿ ಪ್ರೌಢ ಶಾಲೆಗೆ ಹೋಗಿದ್ದೆ. ಬಹಳ ಅರ್ಥವತ್ತಾಗಿ ಹಬ್ಬವನ್ನು ಆಚರಿಸಿದ್ದರು. ಮಕ್ಕಳೊಂದಿಗೆ ಹೆತ್ತವರೂ ಭಾಗವಹಿಸಿದ್ದರು. ಪತ್ರೊಡೆ, ಉಪ್ಪುಸೊಳೆ ಖಾದ್ಯ, ಸಿಹಿ ತಿಂಡಿ.. ಹೀಗೆ ಪಾರಂಪರಿಕ ಪಾಕಗಳನ್ನು ಮಾಡಿ ಹೆತ್ತವರು ಮಕ್ಕಳ ಕೈಯಲ್ಲಿ ಕಳುಹಿಸಿದ್ದರು. ಆಟಿಯ ಮಹತ್ವದೊಂದಿಗೆ, ಆರೋಗ್ಯಪೂರ್ಣವಾದ ಆಹಾರವನ್ನು ಮಾಡುವ ಮಾಹಿತಿ ಖುಷಿ ಕೊಟ್ಟ ವಿಚಾರ.

              ಈಚೆಗೆ ಕೇಪು ಶಾಲೆಯು ಮಕ್ಕಳಲ್ಲಿ ಸಾವಯವ ಕೃಷಿಯ ಅರಿವು ಮೂಡಿಸುವಂತಹ ಅಪರೂಪದ ಕೆಲಸ ಮಾಡುತ್ತಿದೆ. ಮುಖ್ಯ ಗುರು ರಮೇಶ್ ಬಾಯಾರು ಅವರ ಕನಸಿನ ಕೆಲಸವಿದು. ತರಕಾರಿ ಬೀಜ ನೀಡಿ, ತರಕಾರಿ ಕೃಷಿಯನ್ನು ಮಾಡುವ ಕುರಿತು ಅನುಭವಿಗಳಿಂದ ತರಬೇತಿ ಕೆಲಸ ಆಗುತ್ತಿದೆ. ಕೃಷಿಕರ ತೋಟಗಳಿಗೆ ಮಕ್ಕಳನ್ನು ಭೇಟಿ ಮಾಡಿಸಿ ಹಸಿರಿನ ಪರಿಚಯ ಮಾಡಲಾಗುತ್ತದೆ. 'ಗ್ರಾಮೀಣ ಭಾಗದ ಮಕ್ಕಳಾದರೂ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಳ್ಳಿಯ ನೈಜ ಬದುಕಿನಿಂದ ಅವರು ಕಳೆದುಹೋಗಬಾರದಲ್ವಾ' ಎನ್ನುವ ಕಾಳಜಿ ರಮೇಶ ಬಾಯಾರು ಅವರದು. 

                 ಕೇಪು ಶಾಲೆಯ ಬಿಸಿಯೂಟ ತಯಾರಿಯ ಕೊಠಡಿಯತ್ತ ಎಲ್ಲಾ ಅಧ್ಯಾಪಕರ ಕಾಳಜಿ. ಅಕ್ಕಿಯನ್ನಿಡಲು ಪ್ರತ್ಯೇಕ ವ್ಯವಸ್ಥೆ. ಪದಾರ್ಥ ತಯಾರಿಸುವಾಗ ಸಹಾಯಕರಿಗೆ ವಿಶೇಷ ನಿಗಾ. ಮನೆಯಲ್ಲಿ ಬೆಳೆದ ತರಕಾರಿಯನ್ನು ಮಕ್ಕಳು ತಂದಾಗ ಪ್ರೋತ್ಸಾಹದ ಮಾತು. ಉಣ್ಣುವ-ತಿನ್ನುವ ವಿಚಾರದಲ್ಲಿ ಜಾಗ್ರತೆ.

                 ಶಾಲಾ ಪಠ್ಯದಲ್ಲಿ ಹಸುರಿಲ್ಲ. ಕೃಷಿಯಿಲ್ಲ. ಕೃಷಿಕನ ಯಶೋಗಾಥೆಗಳಿಲ್ಲ. ಬೌದ್ಧಿಕ ಸಾಮಥ್ರ್ಯವನ್ನು ಗಟ್ಟಿಮಾಡದ ಪಠ್ಯದೊಂದಿಗೆ ಕೃಷಿ, ಪರಿಸರ, ತೋಟದ ಪಾಠ ಮಾಡುವ ಕೇಪು ಶಾಲೆಯ ಅಧ್ಯಾಪಕ ವೃಂದದ ಶ್ರಮ ಶ್ಲಾಘನೀಯ. ಹೇಳುವಂತಹ ದೊಡ್ಡ ಪರಿಣಾಮಗಳನ್ನು ನಿರೀಕ್ಷಿಸಲಾಗದಿದ್ದರೂ, ಎಳೆಯ ಮನಸ್ಸುಗಳ ಹಳ್ಳಿಪ್ರೀತಿಯ ಅಡಿಗಟ್ಟು ಭದ್ರವಾಗುತ್ತದೆ. ಬಿಸಿಯೂಟ ರುಚಿಯಾಗುತ್ತದೆ.

ಕೃಷಿ ಸಂಸ್ಕೃತಿಯಿಂದ ಸಂಪತ್ತಿನ ಸೃಷ್ಟಿ









                ಪುತ್ತೂರಿನಲ್ಲಿ ೨೭-೧೦-೨೦೧೩ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 'ಕೃಷಿ ಹಬ್ಬ' ಜರುಗಿತು. ಭಾರತೀಯ ಕಿಸಾನ್ ಸಂಘದ ಸಾರಥ್ಯ. ಜರುಗಿದ ನಾಲ್ಕು ಕೃಷಿ ಮಾತುಕತೆಗಳು ಸಂದುಹೋದ ಕೃಷಿ ಬದುಕಿನತ್ತ ತಿರುಗಿ ನೋಡುವಂತೆ ಮಾಡಿತು. ಇವುಗಳನ್ನು ಸಂಕ್ಷಿಪ್ತವಾಗಿ 'ಅವಿಲಿ'ನಲ್ಲಿ (ಉದಯವಾಣಿ ಸುದಿನದಲ್ಲಿ ಕಾಲಂ) ದಾಖಲಿಸುತ್ತಿದ್ದೇನೆ. ಮೊದಲನೇ ಕಂತು ಉಪನ್ಯಾಸಕ, ಕೃಷಿಕ ಅವಿನಾಶ್ ಕೊಡೆಂಕಿರಿ ಪ್ರಸ್ತುತಪಡಿಸಿದ 'ಕೃಷಿ ಸಂಸ್ಕೃತಿ'ಯತ್ತ ಚಿತ್ತ. 

               ಕೃಷಿಯು ಭಾರತದ ಜೀವನಾಡಿ. ಕೃಷಿ ಸಂಸ್ಕೃತಿಯು ತಾಯಿಬೇರು. ಬದುಕನ್ನು ಸಮೃದ್ಧವಾಗಿ ಕಟ್ಟಿಕೊಟ್ಟ ಕೃಷಿ ಸಂಸ್ಕೃತಿಯ ಉಸಿರನ್ನು ಉಳಿಸಬೇಕಾದ ದಿನಮಾನದಲ್ಲಿದ್ದೇವೆ. ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನಗಳು ಸಂಸ್ಕ್ರತಿಯನ್ನು ಓವರ್ಟೇಕ್ ಮಾಡಿ ಬೀಸುಹೆಜ್ಜೆ ಹಾಕುತ್ತಿವೆ. ಪರಿಣಾಮವಾಗಿ ಜೀವನಾಧಾರವಾಗಿರುವ ಹಲವಾರು ಸಂಗತಿಗಳು ನಿತ್ಯ ಜೀವನದಿಂದ ಮರೆಯಾಗಿವೆ.

                ಇದು ಲೆಕ್ಕಾಚಾರದ ಕಾಲ. ಗಣಕಯಂತ್ರದಿಂದ ತೊಡಗಿ ಕಂಪ್ಯೂತನಕ ಪಕ್ಕಾ ಲೆಕ್ಕ. ಕೃಷಿಯಲ್ಲಿ ಲೆಕ್ಕಾಚಾರ ಬೇಕು, ನಿಜ. ಆದರೆ ಲೆಕ್ಕಾಚಾರವೇ ಕೃಷಿಯಲ್ಲ. ಅದು ಬದುಕನ್ನು ಆಧರಿಸದು. ಯಾಕೆ ಹೇಳಿ, ಕಂಪ್ಯೂಗೆ ಮೀರಿದ ಲೆಕ್ಕಾಚಾರ ಭೂಒಡಲಿನಲ್ಲಿದೆ! ಮಾರುಕಟ್ಟೆ ಆಧಾರಿತ ಕೃಷಿಯ ಒಲವಿನಿಂದ ಲೆಕ್ಕಾಚಾರದ ಕೃಷಿ ಮಾಡುತ್ತಾ ಹೋದರೆ ಸಂಸ್ಕೃತಿಯು ಲೆಕ್ಕಕ್ಕೆ ಸಿಗುವುದಿಲ್ಲ! ಹಣಕಾಸಿನಿಂದ ಅಳೆಯಲು ಸಿಗದು ಮತ್ತು ಸಾಧ್ಯವಿಲ್ಲ.  

               ಭಾರತೀಯ ಭಾಷೆಗಳಿಗೆ ಸಮೃದ್ಧಿ ತಂದ ಗರಿಮೆ ಕೃಷಿ ಸಂಸ್ಕೃತಿಯದ್ದು. ಭತ್ತದ ಬೇಸಾಯದಲ್ಲಿ ಎಷ್ಟೊಂದು ಶಬ್ದ ಭಂಡಾರಗಳು? ಅದನ್ನೀಗ ಮಾತನಾಡುತ್ತಾ ಇಲ್ಲ. ನಮ್ಮೆದುರೇ ಬಿಕ್ಕಳಿಸುತ್ತಾ ಇದ್ದರೂ ಆಕಳಿಸುತ್ತಾ ಕಣ್ಣುಜ್ಜಿಕೊಳ್ಳುತ್ತಿದ್ದೇವೆ. ಸಂಪತ್ತನ್ನು ಸೃಷ್ಟಿ ಮಾಡುವ ತಾಕತ್ತು ಕೃಷಿ ಸಂಸ್ಕೃತಿಗಿದೆ. ಕಾಲದ ಧಾವಂತದಲ್ಲಿ ಕೊಚ್ಚಿಹೋಗುತ್ತಿರುವ ಇದಕ್ಕೆ ಮತ್ತೊಮ್ಮೆ ಮರುಜೀವ ನೀಡಲೇ ಬೇಕು. 

              ಕೃಷಿ ಸಂಸ್ಕ್ಕೃತಿಯಲ್ಲಿ ಜೀವಪರವಾದ ದೃಷ್ಟಿಕೋನವಿದೆ. ಭಾವನಾತ್ಮಕವಾದ ಸಂಬಂಧವಿದೆ. ಭಾರತೀಯರು ಭಾವಜೀವಿಗಳಾಗುವುದಕ್ಕೆ ಒಳಸುರಿಯನ್ನು ಸಂಸ್ಕೃತಿ ನೀಡಿದೆ. ಹಾಗಾಗಿಯೇ ಭಾರತೀಯರಿಗೆ ಭೂಮಿಯೆಂದರೆ ಮಾತೃತ್ವದ ಪ್ರತೀಕ. ದನ, ಪ್ರಾಣಿ, ಪಕ್ಷಿ, ಗಿಡ, ಮರ..ಗಳಲ್ಲಿ ಪೂಜ್ಯ ಭಾವನೆ. ಭೂಮಿ ನಿತ್ಯ ಒಡನಾಟದ ಸ್ನೇಹಿತ. ಭೂಮಿಯನ್ನು ಅಗೆಯಲು, ಕೊರೆಯಲು ಉತ್ತಮ ತಿಥಿ, ವಾರಗಳನ್ನು ಗೊತ್ತುಮಾಡುತ್ತಾನೆ. ಯಾವ ದಿವಸ ಭೂಮಿಯನ್ನು ಅಗೆಯಬಾರದೆನ್ನುವುದು ಗೊತ್ತಿದೆ. ಉತ್ತಮ ದಿನಗಳನ್ನು ನೆನಪಿಟ್ಟುಕೊಳ್ಳುತ್ತಾನೆ. ಪೃಕೃತಿಯಿಂದ ಸಿಗುವ ವಸ್ತು ವೈವಿಧ್ಯಗಳನ್ನು ದೇವತಾಭಾವನೆಯಿಂದ ನೋಡುತ್ತಾನೆ. ಜೀವಪರವಾದ ದೃಷ್ಟಿಕೋನ ಅಂಕುರಿಸುತ್ತದೆ. ಕೃಷಿಯನ್ನು ಬಿಟ್ಟು ಹೊರಪ್ರಪಂಚಕ್ಕೆ ಬಂದಾಗ ವ್ಯವಹಾರಿಕ ಪ್ರಜ್ಞೆ ತಕ್ಷಣ ತೆರೆದುಕೊಳ್ಳುತ್ತದೆ. 

              ನಮ್ಮ ಮಧ್ಯೆ ಕೃಷಿ ಸಂಸ್ಕೃತಿಯನ್ನು ಬದುಕಿಗಂಟಿಸಿಕೊಂಡೇ ಬಂದಿರುವ ಹಿರಿಯರಿದ್ದಾರೆ. ಅವರನ್ನೊಮ್ಮೆ ಮಾತನಾಡಿಸಿ ನೋಡಿ. ಕೃಷಿಯಲ್ಲೇ ಎಷ್ಟು ಖುಷಿಯಾಗಿದ್ದರು. ನೆಮ್ಮದಿಯಾಗಿದ್ದರು. ಸಂತಸವಾಗಿದ್ದರು. ಅವರು ಬೌದ್ಧಿಕವಾಗಿ ಎಷ್ಟೊಂದು ಗಟ್ಟಿಮಾಡಿದ್ದವು. ವಿರಾಮ ಸಮಯದಲ್ಲಿ  ಗಮಕ, ಯಕ್ಷಗಾನ, ನಾಟಕ, ಪುರಾಣಗಳ ಓದು, ಸಾಹಿತ್ಯಿಕ ಅಧ್ಯಯನಗಳು ಬೌದ್ಧಿಕವಾಗಿ ಎತ್ತರದ ಸ್ಥಾನವನ್ನು ತಂದುಕೊಟ್ಟಿತ್ತು. ಜಾನಪದವಾದ ಅಂಶಗಳತ್ತ ನೋಡಿದರೆ ಕೃಷಿಯಲ್ಲಿ ಅದರ ಮೂಲಬೀಜವಿದೆ. ಜಗತ್ತಿಗೆ ಜಾನಪದದ ಸತ್ವವನ್ನು ನೀಡಿದವರು ನಾವು. ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಾನಪದದ ವಿಚಾರಗಳು ಉತ್ಪನ್ನವಾಗುತ್ತಾ ಇರುತ್ತವೆ. ಇವೆಲ್ಲಾ ಕೃಷಿಯಿಂದ ನಿಕಷಿತವಾದವುಗಳು.  

              ಗಿಡ ನೆಟ್ಟು ಪೋಷಿಸಿ ಉತ್ಪನ್ನವನ್ನು ಪಡೆದು ಮಾರುಕಟ್ಟೆ ಮಾಡುವ ವಿಚಾರಗಳನ್ನು ಕೃಷಿ ಸ್ವೀಕರಿಸಿಲ್ಲ. ಸುತ್ತುಮುತ್ತಲಿನ ಪರಿಸರ ಜ್ಞಾನ, ಸಹಜೀವಿಗಳ ನಡವಳಿಕೆ, ಕಾರ್ಯ-ಕಾರಣಗಳ ಅರಿವು, ಮಿತಿಯನ್ನು ಮೀರಿದರೆ ಆಗುವಂತಹ ಗೊಂದಲಗಳ ಅರಿವು, ಅದರಿಂದ ಬಿಡಿಸಿಕೊಳ್ಳಬೇಕಾದ ಜಾಣ್ಮೆಗಳನ್ನು ಬದುಕು ಕಲಿಸಿಕೊಡುತ್ತಿತ್ತು. ಹಾಗಾಗಿ ಕೃಷಿ ಸಂಸ್ಕತಿಯನ್ನು ಸಮಗ್ರವಾಗಿ ನೋಡಬೇಕೇ ವಿನಾ ಕೇವಲ ಆಹಾರವನ್ನು ಬೆಳೆಯುವ ವ್ಯಾಪ್ತಿಯಲ್ಲಲ್ಲ. 

              ಪ್ರಕೃತ ನಮಗೆ ಗೊತ್ತಿಲ್ಲದ ಹಾಗೆ ಕೃಷಿ ಸಂಸ್ಕೃತಿಯ ವಿರುದ್ಧಮುಖವಾಗಿ ಈಜುತ್ತಿದ್ದೇವೆ. ಇದನ್ನು ಉಳಿಸಿಕೊಳ್ಳಬೇಕೇ ಎನ್ನುವ ಪ್ರಶ್ನೆ, ಉಳಿಸಲೇ ಬೇಕು ಎನ್ನುವ ಗೊಂದಲದ ಮಧ್ಯೆ ಸಿಲುಕಿದ್ದೇವೆ. ಇಂದು ನಿದರ್ೇಶಿಸುವ ಕೃಷಿ ತತ್ವಗಳು ಆರ್ಥಿಕತೆಯನ್ನು  ಕ್ರೋಢೀಕರಿಸುವ ಉದ್ದೇಶ ಹೊಂದಿವೆ.  ಬಯಕೆಯನ್ನು ಮತ್ತೆ ಮತ್ತೆ ಹುಟ್ಟು ಹಾಕುವ ತತ್ವಗಳು. ಅದಕ್ಕೆ ಕೊನೆಯಿಲ್ಲ. ಹೊಸ ಉತ್ಪನ್ನ ತಯಾರಿ, ಬೇಡಿಕೆ, ಪೂರೈಕೆ - ಹೀಗೆ  ಲೆಕ್ಕಾಚಾರ. ನಮ್ಮೆಲ್ಲಾ ಬಯಕೆಗಳನ್ನು ಕೃಷಿಯೊಂದೇ ಪೂರೈಕೆ ಮಾಡಬಹುದೇ? ಆಗ ಬಯಕೆಗಳನ್ನು ಪೂರೈಸಲು ಬೇರೆ ದಾರಿ ಹಿಡಿಯುವುದು ಅನಿವಾರ್ಯ. ಆಗ  ಮೂಲಭೂತವಾದ ತೃಪ್ತಿ, ಸಮೃದ್ಧಿ ವಿಚಾರಗಳನ್ನು ಯೋಚಿಸುವ ನೆರವಾದ ಬೌದ್ಧಿಕತೆ ತಟಸ್ಥವಾಗುತ್ತದೆ.

               ಮಾರುಕಟ್ಟೆ ಕೇಂದ್ರಿತ ಹೊಸ ಆರ್ಥಿಕ ನೀತಿಯಿಂದಾಗಿ ಹಳೆ ಬೇರುಗಳು ಶಿಥಿಲವಾಗುತ್ತಿವೆ. ಕ್ಷಣ ತೃಪ್ತಿಯನ್ನು ನೀಡುವ ಅನಿಯಂತ್ರಿಕ ಬಯಕೆಗಳು ಅಟ್ಟಿಸಿಕೊಂಡು ಬರುತ್ತಿವೆ.  ಸಂಸ್ಕೃತಿಯು 'ಹಣ ಮಾಡುವ ದಂಧೆ'ಯಾಗಿರುವುದನ್ನು ಕಾಣುತ್ತಿದ್ದೇವೆ. ನೀರು ಮತ್ತು ನೀರಿಗೆ ಸಂಬಂಧಪಟ್ಟ ಜಾಗೃತಿ ಕೃಷಿಕನಿಗೆ ಇತ್ತು. ಅನ್ನ, ನೀರಿನ ಕುರಿತು ಕೃಷಿಕ ಯೋಚಿಸಿದ್ದ. ಅನ್ನವನ್ನು ದೇವರು ಅಂತ ಭಾವಿಸಿದ್ದ. ಆ ಕುರಿತು ಗೌರವದ, ಪೂಜ್ಯ ಭಾವನೆ ಇಂದಿಗೂ ಉಳಿದುಕೊಂಡಿರುವುದನ್ನು ಕಾಣಬಹುದು. ಒಟ್ಟಿನಲ್ಲಿ ಕೃಷಿ ಸಂಸ್ಕೃತಿಯ ಮರೆವು ಇದೆಯಲ್ಲಾ, ಸಂತೃಪ್ತ ಬದುಕಿನ ಇಳಿಲೆಕ್ಕ. ಬುದ್ಧಿಪೂರ್ವಕವಾಗಿ ನಾವೇ ಸೃಷ್ಟಿಸಿದ ಆತಂಕ. ಒಳಗಿದ್ದುಕೊಂಡೇ ಒದ್ದಾಡುವುದು ಅಥವಾ ಹೊರಗೆ ಬರುವ ದಾರಿಯನ್ನು ಕಂಡುಹಿಡಿಯುವುದು - ಈ ಆಯ್ಕೆಗಳು ನಮ್ಮ ಮುಂದಿವೆ.

Tuesday, November 5, 2013

ವರ್ಷಕ್ಕೆ ನಾಲ್ಕು ತಿಂಗಳು 'ಅಕ್ಕಿಖರೀದಿ'ಗೆ ರಜೆ!




             ನಾವು ಬೆಳೆದ ಅಕ್ಕಿಯ ಅನ್ನವನ್ನು ಉಣ್ಣುವುದು ಅಭಿಮಾನ. ಅಕ್ಕಿಯ ಕ್ರಯ ಏರುತ್ತಿದೆ. ಅವನವನ ಮನೆವೆಚ್ಚಕ್ಕೆ ಭತ್ತದ ಬೇಸಾಯ ಮಾಡುವುದು ಮುಂದಿನ ದಿನಗಳಲ್ಲಿ ಅಗತ್ಯ, ಎನ್ನುವ ರಾಮಣ್ಣ ಗೌಡರು ತಾವು ಅಂಗಳದಲ್ಲಿ ಬೆಳೆದ ಭತ್ತದ ಕೃಷಿಯನ್ನು ತೋರಿಸುತ್ತಾ, ಬೆಳಿಗ್ಗೆ ಎದ್ದಾಕ್ಷಣ ಅಂಗಳ ನೋಡಿದರೆ ಸಾಕು, ಮನಸ್ಸು ತುಂಬಿ ಬರುತ್ತದೆ, ಹಗುರವಾಗುತ್ತದೆ, ಎಂದರು.

               ಪುತ್ತೂರು ತಾಲೂಕು ಮಾಡಾವು 'ಜ್ಯೋತಿ ನಿಲಯ'ದ ರಾಮಣ್ಣ ಗೌಡರ ಮುಖ್ಯ ಕೃಷಿ ಅಡಿಕೆ. ಮೂರು ವರುಷದ ಹಿಂದೆ ಕೃಷಿ ಇಲಾಖೆಯ ನಿದರ್ೇಶನದಲ್ಲಿ ಮನೆಯಂಗಳದಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ ನಡೆದಿತ್ತು. ಅಂದು ಭತ್ತದ ಬೇಸಾಯದ ಕುರಿತು ಅನುಭವಿಗಳು ನೀಡಿದ ಮಾಹಿತಿಯು ಭತ್ತದ ಕೃಷಿಯತ್ತ ಒಲವನ್ನು ಮೂಡಿಸಿತು.

                 ಪ್ರತ್ಯೇಕವಾಗಿ ಬೇಸಾಯ ಮಾಡಲು ಜಾಗದ ಅಭಾವ. ಅಡಿಕೆ ಒಣಗಿಸುವ ಅಂಗಳದಲ್ಲೇ ಭತ್ತದ ಕೃಷಿ ಶುರು. ಸುಮಾರು ನಲವತ್ತು ಸೆಂಟ್ಸ್ ಆವರಿಸುವ ಜಾಗ ಭತ್ತದ ಬೇಸಾಯಕ್ಕೆ ಮೀಸಲು. ಈ ವರುಷದಿಂದ ಶ್ರೀ ಪದ್ಧತಿ ಕ್ರಮದಲ್ಲಿ ಕೃಷಿ. ಉಳುಮೆ ಬೇಡ. ಅಂಗಳವನ್ನು ಗದ್ದೆಯನ್ನಾಗಿ ಮಾರ್ಪಡಿಸಬೇಕಾಗಿಲ್ಲ. ನೀರು ನಿಲ್ಲಿಸಬೇಕಾಗಿಲ್ಲ.

                 ರಾಮಣ್ಣ ಗೌಡರು ಶ್ರೀಪದ್ಧತಿಯಲ್ಲಿ ಕೃಷಿ ಮಾಡಿದ ಕೃಷಿಕರ ಅನುಭವ ಪಡೆದರು. ಇಲಾಖೆಯು ಮಾಹಿತಿ ನೀಡಿತು. ನೋಡಿ. ಒಂದೊಂದು ಬುಡದಲ್ಲಿ ಎರಡು ಸಸಿ ನೆಟ್ಟಿದ್ದೆ. ಅವುಗಳೆಲ್ಲಾ ಇಪ್ಪತ್ತೈದಕ್ಕೂ ಮಿಕ್ಕಿ ಪಿಳ್ಳೆ ಬಿಟ್ಟಿರೋದು,' ಎನ್ನುವಾಗ ಖುಷಿಯ ನೆರಿಗೆ ಮುಖದಲ್ಲಿ ಮೂಡಿತು. ಸ್ಲರಿ ಸಿಂಪಡಣೆ ಹೊರತು ಪಡಿಸಿ ಮಿಕ್ಕ ಯಾವುದೇ ಗೊಬ್ಬರ ಉಣಿಸಿಲ್ಲ.

                    ಅಂಗಳಲ್ಲಿ ಮತ್ತು ಅಂಗಳದಿಂದ ಅನತಿ ದೂರದಲ್ಲಿ - ಹಿಗೆ ಎರಡು ಪ್ಲಾಟ್ ಮಾಡಿಕೊಂಡಿದ್ದಾರೆ. ಒಂದು ಪ್ಲಾಟಿಗೆ ಬೆಂಕಿ ರೋಗ ವಕ್ಕರಿಸಿತು. 'ಇದೆಲ್ಲಾ ಮಾಮೂಲಿ. ಎಲ್ಲಾ ಕಡೆ ಇದೆ' ಎಂದಿತು ಇಲಾಖೆ. 'ಪೊಟಾಶ್ ಹೆಚ್ಚೇ ಉಣಿಸಿದರೆ ಕಂಟ್ರೋಲ್ ಬರಬಹುದು' ಎಂದರು. ಸೆಗಣಿ ನೀರು ಮತ್ತು ಬೂದಿಯನ್ನು ಮಿಶ್ರಮಾಡಿ ಉಣಿಸಿದರು. 'ಹೇಳುವಂತಹ ಫಲಿತಾಂಶವಿಲ್ಲ. ನಾವು ತಿನ್ನುವ ಆಹಾರವಲ್ವಾ. ರಾಸಾಯನಿಕ ಸಿಂಪಡಣೆ ಮಾಡಲು ಮನಸ್ಸು ಬರಲಿಲ್ಲ' ಎನ್ನುತ್ತಾರೆ.

                    ಕಳೆದ ವರುಷ ಸುಮಾರು ಮೂರು ಕ್ವಿಂಟಾಲ್ ಭತ್ತದ ಇಳುವರಿ. ಈ ವರುಷ ನಾಲ್ಕು ಕ್ವಿಂಟಾಲಿನತ್ತ ಲಕ್ಷ್ಯ. ರಾಮಣ್ಣ ಗೌಡರದು ಹನ್ನೆರಡು ಮಂದಿ ಸದಸ್ಯರ ಕೂಡು ಕುಟುಂಬ. 'ವರ್ಷದಲ್ಲಿ ನಾಲ್ಕು ತಿಂಗಳು ನಾವು ಬೆಳೆದ ಅಕ್ಕಿಯನ್ನು ಉಣ್ಣುತ್ತೇವೆ. ಮುಂದಿನ ಸಲದಿಂದ ಇನ್ನೂ ವಿಸ್ತಾರ ಮಾಡಬೇಕೆಂದಿದೆ', ಹೊಸ ಸುಳಿವು ನೀಡಿದರು. ನೀರು ನಿಲ್ಲಿಸದೆ ಕೃಷಿ ಮಾಡುವುದರಿಂದ ಇಲಿ ಕಾಟ ಜಾಸ್ತಿ.

                     ಹೈನುಗಾರಿಕೆಯು ಬದುಕಿನೊಂದಿಗೆ ಹೊಸೆದ ವೃತ್ತಿ. ಎಂಟು ಹಸುಗಳಿವೆ. ಐದು ಕರೆವಿನದು. ಮನೆಮಂದಿಯ ನಿರ್ವಹಣೆ. ಇವರಿಗೆ ಪುತ್ತೂರಿನಲ್ಲಿ 'ಸಂಗೀತ ಕ್ಯಾಂಟಿನ್' ಹೋಟೇಲಿದೆ. ದಿವಸಕ್ಕೆ ಸುಮಾರು 50-60 ಲೀಟರ್ ಲಭ್ಯ. ಇದರಲ್ಲರ್ಧ ಹೋಟೇಲಿಗೆ ಒಯ್ದರೆ, ಮಿಕ್ಕುಳಿದುದು ಡೈರಿಗೆ. ಕೆ.ಎಂ.ಎಫ್.ನಿಂದ ಕೆಯ್ಯೂರು ಗ್ರಾಮದಲ್ಲಿ ಅತಿ ಹೆಚ್ಚು ಹಾಲು ಹಾಕುವ ಹೈನುಗಾರನೆಂಬ ಪುರಸ್ಕಾರ ಪ್ರಾಪ್ತಿ.

                     ಸ್ಲರಿ, ಕಾಂಪೋಸ್ಟ್ ಅಡಿಕೆ ಕೃಷಿಗೆ ಒಳಸುರಿ. 'ಅಡಿಕೆ ತೋಟವಿದ್ದವರು ಹೈನುಗಾರಿಕೆ ಮಾಡಲೇಬೇಕು' ಎನ್ನುವ ನಿಲುವು. ಪಶುಆಹಾರಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ತಂದು, ತಾವೇ ಪಾಕ ಮಾಡಿಕೊಳ್ಳುತ್ತಾರೆ. ಇವರಿಗೆ ಹೈನುಗಾರಿಕೆ ಎಂದೂ ಕಿರಿಕಿರಿ ಆದುದಿಲ್ಲ ಎನ್ನುವುದು ಗಮನಾರ್ಹ. ಅಝೋಲಾ ಬೆಳೆದು ಮಿತವಾಗಿ ಹಸುಗಳಿಗೆ ತಿನ್ನಿಸುತ್ತಾರೆ.

                     ಸುಮಾರು ನಾಲ್ಕು ದಶಕದಿಂದ ಪುತ್ತೂರಿನ ಬೈಪಾಸಿನಲ್ಲಿರುವ ಇವರ 'ಸಂಗೀತ ಕ್ಯಾಂಟಿನ್' ಕುರಿತು ಎರಡು ಮಾತು ಹೇಳಲೇಬೇಕು. ಇವರ ಸಹೋದರ ರಾಮಚಂದ್ರ ಗೌಡರ ಕೈರುಚಿಯನ್ನು ಉಣ್ಣುವುದಕ್ಕೆ ಬರುವ ಗ್ರಾಹಕರ ಗಡಣ ದೊಡ್ಡದು. ಗೊಣಗಾಟವಿಲ್ಲದೆ ಗ್ರಾಹಕರನ್ನು ಸಂತೃಪ್ತಿಪಡಿಸುವ ಅಣ್ಣ-ತಮ್ಮ ಇವರಿಬ್ಬರು ರಾಮ ಲಕ್ಷ್ಮಣರಿದ್ದಂತೆ ಎಂದರೆ ಅತಿಶಯೋಕ್ತಿಯಲ್ಲ. ವಾರದಲ್ಲಿ ಬಹುಪಾಲು ಇವರ ತೋಟದ ಉತ್ಪನ್ನಗಳು ಹೋಟೆಲಿನಲ್ಲಿ ಖಾದ್ಯವಾಗಿ ಉದರ ಸೇರುತ್ತವೆ.

                      ನಿಮ್ಮ ಹೋಟೆಲನ್ನು ಹುಡುಕಿ ಬರುವ ಗ್ರಾಹಕರಿದ್ದಾರೆ, ಇದರ ಮರ್ಮ ಏನು ಎಂದು ಪ್ರಶ್ನಿಸಿದೆ. ರಾಮಣ್ಣ-ರಾಮಚಂದ್ರ ಹೇಳುತ್ತಾರೆ, ಇದು ಗ್ಯಾಸ್ ಯುಗ. ನಾವು ಕಟ್ಟಿಗೆಯಲ್ಲೇ ಅಡುಗೆ ಮಾಡುತ್ತೇವೆ. ಹಾಗಾಗಿ ಖಾದ್ಯಕ್ಕೆ ರುಚಿ ಹೆಚ್ಚು. ಕಳೆದ ಮೂವತ್ತೆಂಟು ವರುಷದಿಂದ ಹೋಟೆಲಿನ ಅಡುಗೆ ಮನೆಗೆ ಗ್ಯಾಸ್ ಸಿಲಿಂಡರ್ ಬಂದಿಲ್ಲ. ಮುಖ್ಯವಾಗಿ ನಮ್ಮಲ್ಲಿಗೆ ಬರುವ ಗ್ರಾಹಕರು ಮನೆಗೆ ಬಂದ ನೆಂಟರಂತೆ. ಬಹುಶಃ ಈ ಪ್ರೀತಿ ಇರಬಹುದೇನೋ. ನಮ್ಮಲ್ಲಿ ಉಂಡವರು ಹರಸಿ ಹೋಗುತ್ತಾರೆ!.
                    
             ಹೋಟೇಲಿನಲ್ಲಿ ಉಳಿಯುವ ಅಡುಗೆ ತ್ಯಾಜ್ಯ, ಉಂಡ ಬಾಳೆಎಲೆಯನ್ನು ಸಂಗ್ರಹಿಸುತ್ತಾರೆ. ಮನೆಯ ಹಟ್ಟಿ ಪಕ್ಕ ಇರುವ ಕಾಂಪೋಸ್ಟ್ ಹೊಂಡಕ್ಕೆ ಸೇರಿಸುತ್ತಾರೆ. 'ಕೃಷಿಯಲ್ಲಿ ಯಾವುದೂ ವ್ಯರ್ಥವಲ್ಲ. ಜಾಣ್ಮೆಯಿಂದ ಕೃಷಿ ಮತ್ತು ಬದುಕನ್ನು ಸಮತೋಲನಗೊಳಿಸಿದರೆ ವಿಮುಖತೆ ಬಾರದು' ಎನ್ನುವ ಸಂದೇಶ ಅವರ ಬದುಕಿನಲ್ಲಿ ಕಂಡೆ. ಕೃಷಿ, ಹೈನುಗಾರಿಕೆ, ಹೋಟೆಲ್ ಉದ್ಯಮವನ್ನು ಜತೆಜತೆಯಾಗಿ ನಿಭಾಯಿಸುವ ರಾಮಣ್ಣ ಗೌಡರ ಕುಟುಂಬವು ಒಂದು ದಿವಸವೂ 'ನಮಗೆ ಕೃಷಿ ಸಾಕಪ್ಪಾ' ಎಂದು ಹೇಳಿಲ್ಲ. ಇವರು ಕೃಷಿಯ ವಿದ್ಯಮಾನಗಳತ್ತ ನಿತ್ಯ ಕುತೂಹಲಿ. (9480016812)


'ಕೃಷಿಕನ ಸಮಯಕ್ಕೂ ಬೆಲೆಯಿದೆ'

  
                ಕೃಷಿಕ ಪೈಲೂರು ಶ್ರೀನಿವಾಸ ರಾವ್ (70) ಕೃಷಿ ಚಿಂತಕ. ಸುಳ್ಯ ಸನಿಹದ ಕುಕ್ಕುಜಡ್ಕದ ಹಳ್ಳಿಯಲ್ಲಿದ್ದು ಕೃಷಿ ಮಾಡುತ್ತಾ ಕೃಷಿಯನ್ನೂ ಓದುತ್ತಾರೆ! ಓದಿದ ಅನುಭವವನ್ನು ಕೇಳುವ ಮನಸ್ಥಿತಿಯವರೊಂದಿಗೆ ಹಂಚಿಕೊಳ್ಳುತ್ತಾರೆ. ಕೃಷಿ ಪಲ್ಲಟಗಳ ಕಾಲಮಾನದಲ್ಲೂ ರಾಯರು ಅಧೀರಾಗದೆ, 'ಬಂದುದನ್ನು ಬಂದ ಹಾಗೆ ಸ್ವೀಕರಿಸಬೇಕು' ಎಂಬ ಮನೋಬಲವನ್ನು ಗಟ್ಟಿಮಾಡಿಕೊಂಡವರು. ಪೈಲೂರು ಅವರೊಂದಿಗೆ ಮಾತುಕತೆಯ ಸಂದರ್ಭದಲ್ಲಿ ಹಾದು ಹೋದ ಕೃಷಿಬದುಕಿನ ಒಳನೋಟಗಳಲ್ಲಿ ಭೂತಕಾಲದ ಖುಷಿಯಿದೆ. ವರ್ತಮಾನದ ಸಂಕಟವಿದೆ. ಭವಿಷ್ಯದ ನಿರೀಕ್ಷೆಯಿದೆ, ಆಶಾಭಾವನೆಯಿದೆ. 

          ಕೃಷಿಕನಿಗೆ ತನ್ನ ಕೃಷಿ ಉತ್ಪನ್ನವನ್ನು ಮಾರುಕಟ್ಟೆ ಮಾಡಲು ಆಸಕ್ತಿಯಿರುವುದು ಸಹಜ. ಆದರೆ ತಾನು ಬೆಳೆದುದನ್ನು ತಾನು, ತನ್ನ ಕುಟುಂಬ ತಿನ್ನುವಲ್ಲಿ ಮೊದಲಿಗೆ ಆಸ್ಥೆ ವಹಿಸಬೇಕು. ಮನೆಯಲ್ಲಿ ಬೆಳೆದುದು ಎಲ್ಲವನ್ನೂ ಮಾರುವ ಚಾಳಿ ಯಾಕೆ?  ಸ್ವಲ್ಪ ಸ್ನೇಹಿತರಿಗೂ ಹಂಚಿದರೆ ಏನು?  ಅಗ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಅದು ದುಡ್ಡು ಕೊಟ್ರೆ ಸಿಗುವುದಿಲ್ಲ. 

          ಸಾಲವೆಂಬುದು ಬಾಳಿನ ಶೂಲ. ಸಾಲ ನೀಡಲು ಹಣಕಾಸು ಸಂಸ್ಥೆಗಳು ಪೈಪೋಟಿಯಲ್ಲಿವೆ. ಸುಲಭದಲ್ಲಿ ಸಿಗುತ್ತೆಂದು ಮಾರು ಹೋಗುವವರೇ ಹೆಚ್ಚು. ಪಡಕ್ಕೊಂಡ ಸಾಲ ಕೃಷಿ ಕೆಲಸಗಳಿಗೆ ವಿನಿಯೋಗವಾದರೆ ಸರಿ. ಆದರೆ ಹೆಚ್ಚಿನ ಸಾಲಗಳು ಕೃಷಿಯೇತರ ಉದ್ದೇಶಗಳಿಗಾಗಿ ವೆಚ್ಚವಾಗುವ ಸಂಗತಿ ಸರ್ವವೇದ್ಯ. ಸಾಲವನ್ನು ಕಟ್ಟಲಾಗದೆ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯವ ಎಷ್ಟು ಮಂದಿ ಬೇಕು? ಹಾಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಲು ಬಲವಂತದಿಂದ ರೂಢಿಸಿಕೊಳ್ಳಬೇಕು. 

          ಕೃಷಿಕನಾದವನಿಗೆ ಸ್ವತಃ ದುಡಿತದ ಅಭ್ಯಾಸದೊಂದಿಗೆ, ಕೆಲಸವನ್ನು ಮಾಡಿಸಲೂ ತಿಳಿದಿರಬೇಕು. ನಾವು ಒಂದು ಗಂಟೆಯಲ್ಲಿ ಮುಗಿಸುವ ಕೆಲಸಕ್ಕೆ ಸಹಾಯಕರಿಗೆ ಒಂದು ದಿನ ಬೇಕು. ಕೆಲಸ ಮಾಡಿಸುವಾಗಲೇ ಯೋಚನೆ, ಯೋಜನೆಯನ್ನು ಹಾಕಿಕೊಂಡರೆ ಸುಲಭವ. ಯಾವ ಕೆಲಸಕ್ಕೆ ಎಷ್ಟು ಸಮಯ ಬೇಕು? ವಿಪರೀತ ಬಿಸಿಲು ಇದ್ದಾಗ, ನೆರಳು ಇದ್ದಾಗ ಯಾವ ಕೆಲಸ? ನಾಲ್ಕು ಮಂದಿ ಇದ್ದರೆ  ಯಾವ ಕೆಲಸವನ್ನು ಹಂಚಬೇಕು? ಒಬ್ಬನೇ ಬಂದಾಗ ಹೇಗೆ ದುಡಿಸಿಕೊಳ್ಳಬೇಕು? ವೇತನ ಎಷ್ಟು ಕೊಡಬಹುದು? ಕನಿಷ್ಠ ಜ್ಞಾನವನ್ನು ಹೊಂದಿಲ್ಲದಿದ್ದರೆ ಕೃಷಿಯಲ್ಲಿ ಯಶಸ್ಸಾಗುವುದು ಕಷ್ಟ. ನೂರು ರೂಪಾಯಿ ಖರ್ಚು ಮಾಡಿ, ಹತ್ತು ರೂಪಾಯಿ ಉತ್ಪನ್ನ ಲಭ್ಯವಾದರೆ ಏನು ಪ್ರಯೋಜನ?

          ಅಧಿಕ ಉತ್ಪನ್ನವನ್ನು ಸುಲಭವಾಗಿ ಪಡೆಯಲು ರಾಸಾಯನಿಕ, ಕೀಟನಾಶಕಗಳ ಬಳಕೆ ಈಚೀಚೆ ಹೆಚ್ಚುತ್ತಿದೆ. ಇದರಿಂದಾಗಿ ಮಣ್ಣಿನ ಫಲವತ್ತತೆ, ಎರೆಹುಳ, ಅಣುಜೀವಿಗಳ ನಾಶ. ಜತೆಗೆ ಪರಿಸರ ನಾಶ. ಕೊನೆಗೆ ಬದುಕೂ ನಾಶ. ಈ ವರ್ತುಲದಿಂದ ಹೊರಬರಲು ಯತ್ನಿಸಲೇ ಬೇಕು. ತನ್ನ ತೋಟಕ್ಕೆ ಬೇಕಾಗುವಷ್ಟು ಗೊಬ್ಬರವನ್ನು ತಯಾರಿಸುವ ಜಾಣ್ಮೆ ಕಲಿತುಕೊಳ್ಳಬೇಕು. ಕೃಷಿಯ ಖರ್ಚು ವೆಚ್ಚಗಳ ಕುರಿತು ನಿಯಂತ್ರಣ ಅಗತ್ಯ. ಈ ವರುಷ ನಮ್ಮ ಜಮೀನಿನಲ್ಲಿ ಒಟ್ಟು ಎಷ್ಟು ಉತ್ಪನ್ನವಾಗಬಹುದು? ಕನಿಷ್ಠ ಧಾರಣೆ ಎಷ್ಟು ಸಿಗಬಹುದು? ಎಂಬ ಲೆಕ್ಕಾಚಾರವನ್ನು ಹಾಕಿಟ್ಟುಕೊಳ್ಳಬೇಕು. ಸಿಕ್ಕ ಲಾಭಾಂಶದಲ್ಲಿ ಮೂರನೇ ಒಂದಂಶ ಕೃಷಿಗೆ ಬಳಸಿ. ನಂತರದ ಮೂರನೇ ಒಂದಂಶ ಜೀವನ ನಿರ್ವಹಣೆಗೆ ಮತ್ತು ಮಿಕ್ಕ ಮೂರನೇ ಒಂದನ್ನು ಉಳಿತಾಯ ಮಾಡಿ. ಕೃಷಿಕ ತನ್ನ ಲೆಕ್ಕವನ್ನು ತಾನು ಬರೆಯಬೇಕು. ಅಗ ಎಲ್ಲೆಲ್ಲಿ ಖಚರ್ು ಕಡಿಮೆ ಮಾಡಬಹುದೆನ್ನುವ ಪ್ಲಾನ್ ಮಾಡಿಕೊಳ್ಳಲು ಅನುಕೂಲ.

          ಕೃಷಿಕನ ಸಮಯಕ್ಕೂ ಬೆಲೆಯಿದೆ. ಹಳ್ಳಿಯಲ್ಲೇ ಸರಿದೂಗಿಸಬಹುದಾದ ಸಣ್ಣ ಪುಟ್ಟ ಕೆಲಸಗಳಿಗೂ ನಗರಕ್ಕೆ ಓಡುವುದರಿಂದ ಸಮಯವೂ ಹಾಳು, ಕೃಷಿಯೂ ಹಾಳು. ಕರೆ ಬಂತೆಂದು ಎಲ್ಲಾ ಸಮಾರಂಭಗಳಿಗೂ ಹೋಗುತ್ತಾ ಇದ್ದರೆ ಅದೇ ಕೆಲಸ ಮಾಡಬೇಕಷ್ಟೇ. ಅಗತ್ಯಬಿದ್ದರೆ ಮಾತ್ರ ಭಾಗವಹಿಸೋಣ. ಇನ್ನೊಬ್ಬರನ್ನು ತೃಪ್ತಿಪಡಿಸಲು, ಉದ್ಧಾರ ಮಾಡಲು ನಿಮ್ಮ ಅಮೂಲ್ಯ ಸಮಯ ಹಾಳುಮಾಡಬೇಡಿ. 

          ಬೇರೆ ತೋಟಗಳ ವೀಕ್ಷಣೆ, ಅಲ್ಲಿನ ಕೃಷಿಕರೊಂದಿಗೆ ಮುಖಾಮುಖಿಯಾದಾಗ ಕಷ್ಟ-ಸುಖಗಳ ವಿನಿಮಯವಾಗುವುದು. ಜ್ಞಾನ ಹೆಚ್ಚುವುದು. ಕೃಷಿ ಪತ್ರಿಕೆಯನ್ನು ಓದುವ ಅಭ್ಯಾಸವಿಟ್ಟುಕೊಂಡರೆ ಬೌದ್ಧಿಕ ಸಂಪತ್ತು ಅಪ್ಡೆಟ್ ಆಗುತ್ತಿರುತ್ತದೆ. ವಾಹಿನಿಗಳ ಕೃಷಿ ಕಾರ್ಯಕ್ರಮಗಳನ್ನು ನೋಡುತ್ತಿದ್ದರೆ ದೇಶಮಟ್ಟದಲ್ಲಿ ಏನೇನೂ ಬದಲಾವಣೆಗಳಾಗುತ್ತಿವೆ ಎಂಬ ಅರಿವು ಉಂಟಾಗುತ್ತದೆ. ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳನ್ನು ಆಲಿಸುವ ಹವ್ಯಾಸವಿಟ್ಟುಕೊಳ್ಳಿ.
ನಾನು ಬೆಳ್ಳಂಬೆಳಿಗ್ಗೆ ಏಳುತ್ತೇನೆ. ಮನೆ, ಹಿತ್ತಿಲು ಶುಚಿಯಾಗಿಡುವುದು ಬದುಕಿಗಂಟಿದ ಶಿಸ್ತು. ನಿತ್ಯ ತೋಟಕ್ಕೆ ಎರಡು ಸಲ ಪಯಣ. ವಾರಕ್ಕೆ ಎರಡು ಸಲ ಅಂಚೆ ತರಲು ಹತ್ತಿರದ ಪೇಟೆಗೆ ಸವಾರಿ. ಹಲವು ವರುಷದಿಂದ ಸ್ಕೂಟರೊಂದು ನನ್ನ ಸಂಗಾತಿ. ನಾನು ಸಮಾಜದಲ್ಲಿ ನೋಡುತ್ತಾ ಇರುತ್ತೇನೆ, ಲಕ್ಷಗಟ್ಟಲೆ ಖರ್ಚು ಮಾಡಿದ ತಂಪುಕಾರಿನಲ್ಲಿ ಒಬ್ಬನೇ ಪಯಣಿಸುವುದು ಇದೆಯಲ್ಲಾ ನಿಜಕ್ಕೂ ಅದು ರಾಷ್ಟ್ರೀಯ ನಷ್ಟ! 

.. ಹೀಗೆ ಹಲವಾರು ವಿಚಾರಗಳನ್ನು ಪೈಲೂರು ಶ್ರೀನಿವಾಸ ರಾಯರು ಮಾತನಾಡುತ್ತಿದ್ದಂತೆ ಚೇರ್ಕಾಡಿ ರಾಮಚಂದ್ರ ರಾಯರು ನೆನಪಾದರು. ಯಾಕೆಂದರೆ ಚೇರ್ಕಾಡಿಯವರು ಏನು ಹೇಳ್ತಾರೋ, ಅದನ್ನೇ ಮಾಡಿ ತೋರಿಸಿದ್ದರು.