Wednesday, September 22, 2021

ಸ್ವಾಧ್ಯಾಯಿ, ಪುರೋಹಿತ, ಕಲಾಸಕ್ತ, ಸಾಮಾಜಿಕ ಚಿಂತಕ - ಕೂಡ್ಲು ಕೃಷ್ಣ ಮಯ್ಯ ವಿಧಿವಶ

        ಕಾಸರಗೋಡು ಜಿಲ್ಲೆಯ ಕೂಡ್ಲು ವಿಷ್ಣುಮಂಗಲ ದೇವಳದ ಸನಿಹ 'ಮಥುರಾ'ದಲ್ಲಿ ವಾಸ್ತವ್ಯವಿರುವ ಕೂಡ್ಲು ಕೃಷ್ಣ ಮಯ್ಯರು (78) ಸೆಪ್ಟೆಂಬರ್ 21ರಂದು ಮುಂಜಾನೆ ವಿಧಿವಶರಾದರು.

        ಮಯ್ಯರ ಜನನ 28-4-1943. ಪುರೋಹಿತರಾಗಿ ಜನಾನುರಾಗಿ. ತಾನು ಮಾಡುವ ಕರ್ಮಾಂಗಗಳಲ್ಲಿ ರಾಜಿಯಿಲ್ಲದ ನಿರ್ವಹಣೆ. ಹಾಗಾಗಿ ಅವರನ್ನು ಹೋಮ-ಪೂಜಾದಿಗಳಿಗೆ ಹುಡುಕಿ ಬರುವವರ ಸಂಖ್ಯೆ ಸಣ್ಣದಲ್ಲ. ಈಚೆಗಿನ ಕೆಲವು ವರುಷಗಳಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಸಕ್ತಿ ಹೊಂದಿ ಅಧ್ಯಯನ ಮಾಡುತ್ತಿದ್ದರು. 

ಯಾವುದೇ ಆರ್ಥಿಕ ಸುದೃಢತನವು ಇಲ್ಲದೆ ಬೆವರಿನಿಂದ ಕಟ್ಟಿದ ಸ್ವ-ರೂಢಿತ ಬದುಕು. ಒಂದೊಂದು ಪೈಸೆಯೂ ಅವರಿಗೆ ಕೋಟಿ ರೂಪಾಯಿಗೆ ಸಮವಾಗಿತ್ತು. ಎಚ್ಚರದ ಆರ್ಥಿಕ ನಿರ್ವಹಣೆ, ತನುಶ್ರಮವನ್ನು ಮರೆತ ದುಡಿಮೆ, ಸ್ವ-ಹಿತಕ್ಕಾಗಿ ಕೈಚಾಚದ ವ್ಯಕ್ತಿತ್ವ, ಗುರುತರವಾದ ಸಾಮಾಜಿಕ ಕಾಳಜಿಗಳು ಮಯ್ಯರನ್ನು ಸಾಮಾಜಿಕವಾಗಿ ಗುರುತಿಸುವಂತೆ ಮಾಡಿತ್ತು. 

ಕೂಡ್ಲುಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿದ್ದರು. ಶ್ರೀ ಶೇಷವನ ದೇವಸ್ಥಾನದ ಆಗು ಹೋಗುಗಳಲ್ಲಿ ಯಥಾಸಾಧ್ಯ ಭಾಗವಹಿಸುತ್ತಿದ್ದರು. ಶೇಷವನದ ಕುರಿತು ತುಂಬಾ ಗೌರವ, ಅಭಿಮಾನ ಹೊಂದಿದ್ದರು. ಬದುಕಿನ ಪೂರ್ವಾರ್ಧದಲ್ಲಿ ಕಾಸರಗೋಡು ಜಿಲ್ಲೆಯ ಸಹಕಾರಿ ಸ್ಟೋರ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ತನ್ನ ಸೇವೆಯಿಂದ ಗ್ರಾಹಕ ಸ್ವೀಕೃತಿಯನ್ನು ಪಡೆದಿದ್ದರು.

ಪುಸ್ತಕ, ಪತ್ರಿಕೆಗಳನ್ನು ಓದುವುದು ಮಯ್ಯರ ಮೆಚ್ಚಿನ ಹವ್ಯಾಸ. ಅದರಲ್ಲೂ 'ಹೊಸದಿಗಂತ' ಖಾಯಂ ಓದುಗ. ಪತ್ರಿಕೆಯ ಸಂಪಾದಕೀಯ ಪುಟಗಳ ಲೇಖನಗಳನ್ನು ಓದುತ್ತಿದ್ದರು. ಸಮಾನ ಮನಸ್ಸಿನವರೊಡನೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಜಾಗತಿಕ ಆಗು ಹೋಗುಗಳನ್ನು ಚರ್ಚಿಸುತ್ತಿದ್ದರು. ರಾಜಕೀಯಕ್ಕಿಂತಲೂ ದೇಶ, ಸಂಸ್ಕೃತಿ, ಆಚಾರ, ವಿಚಾರಗಳ ಮಾತುಕತೆಗಳಲ್ಲಿ ತೆರೆದುಕೊಳ್ಳುತ್ತಿದ್ದರು.

    ಯಾವುದೇ ವಿಚಾರಗಳನ್ನು 'ನನಗೆ ಅದರಲ್ಲಿ ಆಸಕ್ತಿಯಿಲ್ಲ' ಎಂದವರಲ್ಲ. ಯಕ್ಷಗಾನ, ನಾಟಕ.. ಮೊದಲಾದ ಕಲೆಗಳಲ್ಲಿ ಆಸಕ್ತ. ಕ್ರಿಕೆಟ್ ಅವರ ಮೆಚ್ಚಿನ ಕ್ರೀಡೆ. ಕ್ರಿಕೆಟಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ಬಲ್ಲವರು. ಅದನ್ನು ಚರ್ಚಿಸಬಲ್ಲರು. 

ಆಧುನಿಕವಾದ ಯಾವುದೇ ರಂಗಸಜ್ಜಿಕೆಗಳಿಲ್ಲದ ಸಮಯದಲ್ಲಿ ನಾಟಕ ರಂಗವು ಜನಮಾನಸದಲ್ಲಿ ತನ್ನ ಬೇರನ್ನು ಇಳಿಬಿಟ್ಟಿದ್ದ ಕಾಲದಲ್ಲಿ ಮಯ್ಯರು ಸ್ವಲ್ಪ ಕಾಲ ಕಲಾವಿದರಾಗಿದ್ದರು. “ನಾವು ಮಯ್ಯರ ಅಂಗಳದಲ್ಲಿ ನಾಟಕ ಪ್ರಾಕ್ಟೀಸ್ ಮಾಡುತ್ತಿದ್ದೆವು. ಅವರದೇ ಆತಿಥ್ಯ. ಅವರೂ ಪಾತ್ರ ಮಾಡುತ್ತಿದ್ದರು. ನಾಟಕ ರಂಗದಲ್ಲಿ ಹಾಸ್ಯ ಮತ್ತು ಗಂಭೀರ ಪಾತ್ರಗಳಲ್ಲಿ ಮಯ್ಯರದು ಗುರುತರ ಅಭಿವ್ಯಕ್ತಿ.” ಹೀಗೆಂದವರು ರಂಗ ಕಲಾವಿದ ಚಿದಾನಂದ ಕಾಮತ್ ಕಾಸರಗೋಡು. ಈಗವರು ವಿಧಿವಶ.

ಸಾಂಸಾರಿಕವಾಗಿ ನೆಮ್ಮದಿಯಾಗಿದ್ದು, ನಿಸ್ಪೃಹ ಮನಸ್ಥಿತಿಯನ್ನು ರೂಢಿಸಿಕೊಂಡಿದ್ದ ಮಯ್ಯರ ಕೊನೆಯ ಕ್ಷಣ ಮರೆಯಲಾಗದು. ಕೆಲವು ವರುಷಗಳಿಂದ ಬಾಧಿಸುತ್ತಿದ್ದ ಕಫವೇ ಮೊದಲಾದ ವಯೋಸಹಜ ತೊಂದರೆಗಳಿಗೆ ಯೋಗ, ಮುದ್ರೆಗಳಿಂದ ಪರಿಹಾರವನ್ನು ಕಂಡುಕೊಂಡಿದ್ದರು. ಸೆ.21ರಂದು ಬೆಳಿಗ್ಗೆ ಸುಮಾರು ಆರುವರೆ ಗಂಟೆ ಇರಬಹುದು. ದೈನಂದಿನ ಅನುಷ್ಠಾನದ ವಿಚಾರಗಳನ್ನು ಮಗನೊಂದಿಗೆ ಚರ್ಚಿಸಿ ಯೋಗ ಮಾಡಲು ತನ್ನ ಕೋಣೆಗೆ ತೆರಳಿದ್ದರು. ಯೋಗದ ಕೊನೆಗೆ 'ಶವಾಸನ'ದಲ್ಲಿರುವಾಗಲೇ ಇಹಲೋಕ ತ್ಯಜಿಸಿದರು.

ಮೂರು ವರುಷದ ಹಿಂದೆ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಕೂಡ್ಲು' ಇವರು ಕೃಷ್ಣ ಮಯ್ಯರನ್ನು ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ' ನೀಡಿ ಪುರಸ್ಕರಿಸಿದ್ದರು.

ಮಡದಿ ಗಂಗಮ್ಮ. ಐವರು ಮಕ್ಕಳು. ಮಗಳಂದಿರಾದ ಗೀತಾ, ವೀಣಾ, ಪ್ರಶಾಂತಿ, ಪ್ರತಿಮಾ ಹಾಗೂ ಮಗ ರಾಮಪ್ರಸಾದ ಮಯ್ಯ. ಅಳಿಯಂದಿರು : ನೇಪಾಳದ ಪಶುಪತಿ ದೇವಸ್ಥಾನದ ಅರ್ಚಕ ರಘುರಾಮ ಕಾರಂತ, ಪುತ್ತೂರಿನ ನಾರಾಯಣ ಕಾರಂತ, ಅರ್ಚಕರಾದ ಮಂಗಳಾದೇವಿಯ ಸುಬ್ರಹ್ಮಣ್ಯ ಐತಾಳ ಮತ್ತು ತ್ರಿಶೂರಿನ ಸುಧೀರ್ ನಾವುಡ. ಮೊಮ್ಮಕ್ಕಳು : ಭಾರ್ಗವ, ಶಿವಾಂಗಿ, ಸುಕನ್ಯಾ, ವೈಶಾಲಿ, ಅಶ್ವಿನ್

ಕಳೆದ ವರುಷವಷ್ಟೇ ತನ್ನ ಪುತ್ರನ ವಿವಾಹವು ಶ್ರೀಲಕ್ಷ್ಮೀಯೊಂದಿಗೆ ಜರುಗಿತ್ತು. ಸಮಯದಲ್ಲಿನನ್ನ ಬದುಕಿನ ಬಹುದೊಡ್ಡ ಜವಾಬ್ದಾರಿ ಮುಗಿಯಿತು.” ಎಂದಿದ್ದ ಕೃಷ್ಣ ಮಯ್ಯರು ತನ್ನೆಲ್ಲಾ ಜವಾಬ್ದಾರಿಯನ್ನು ಮುಗಿಸಿ ಕಾಣದ ಲೋಕಕ್ಕೆ ತೆರಳಿದರು. ಬದುಕಿನಲ್ಲಿ ಬದ್ಧತೆಯನ್ನು ರೂಢಿಸಿಕೊಂಡಿದ್ದ ಹಿರಿಯ ಚೇತನ ಮಯ್ಯರಿಗೆ ಅಕ್ಷರ ನಮನವಿದು.


Sunday, September 5, 2021

ಹಲಸಿನೊಂದಿಗೆ ಫೋಟೋ ಬಹುಮಾನ ವಿತರಣಾ ಕಾರ್ಯಕ್ರಮ


 ಹಲಸು ಒಂದು ಕಾಲದಲ್ಲಿ  ಹಸಿದ ಹೊಟ್ಟೆಯ ಆಹಾರವಾಗಿತ್ತು, ಬದಲಾದ ಪರಿಸ್ಥಿತಿಯಲ್ಲಿ ಮನುಷ್ಯನ ನಿರ್ಲಕ್ಷ್ಯದಿಂದ ಹಲಸು ತೋಟದ ವಸ್ತುವಾಗಿತ್ತು. ಈಗ ಮನೆಯಲ್ಲಿ ಅನ್ನದ ಬಟ್ಟಲಿಗೆ ಬರುತ್ತಿದೆ, ಹಲಸು ಕೂಡಾ ಉತ್ತಮ ಆಹಾರವಾಗಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ.ವಸಂತ ಬಿ ಬಾಳಿಗಾ ಹೇಳಿದರು.

ಅವರು  ರಾರಾಸಂ ಫೌಂಡೇಶನ್ ಬಂಟ್ವಾಳ ಮತ್ತು ಹಲಸು ಪ್ರೇಮಿ ಕೂಟ, ಬಂಟ್ವಾಳ ಇದರ ಸಹಯೋಗದಲ್ಲಿ ಆಯೋಜಿಸಿದ "ಹಲಸಿನೊಂದಿಗೆ ಫೋಟೋ" ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದರು. ಹಲಸು ಬೆಳೆದರೆ ಮಾತ್ರಾ ಸಾಲದು ಅದರ ಮೌಲ್ಯವರ್ಧನೆ ಹಾಗೂ ಮಾರಾಟವೂ ಅಗತ್ಯವಿದೆ. ಅದನ್ನು  ಅತ್ಯಂತ ಸಮರ್ಥವಾಗಿ ಮಾಡುತ್ತಿರುವ ಹಲಸು ಪ್ರೇಮಿ ಕೂಟದ ಪಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ಎಂದರು.ಹಲಸು ನಮ್ಮ ಜೀವನದ ಒಂದು ಭಾಗ. ನಮ್ಮಲ್ಲಿ ಬೆಳೆದ ಹಲಸುಗಳಿಗೆ ಹೊಸ ರೂಪ ಕೊಟ್ಟು ಜನರಿಗೆ ಬಗೆ ಬಗೆಯ ತಿನಸುಗಳು ಸಿಗಲು  ಹಲಸಿನಂಗಡಿ ತುಂಬಾ ಸಹಕಾರಿ ಎಂದರು.

ಅತಿಥಿಗಳಾಗಿದ್ದ  ಅಂಕಣಗಾರ, ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ ಮಾತನಾಡಿ, ಯಾವುದೇ ಆಂದೋಲನಗಳು ಹಂತ ಹಂತವಾಗಿ ಬೆಳೆಯಬೇಕು. ಹಲಸು ಆಂದೋಲನವು ಈಗ ಊಟದ ಬಟ್ಟಲಿಗೆ ಬಂದಿದೆ ಮಾತ್ರವಲ್ಲ ಕಾರ್ಪೋರೇಟ್ವಲಯದಲ್ಲೂ ಹಲಸು ಸ್ಥಾನ ಪಡೆದಿದೆ.ಹಲಸು ಮಾರುಕಟ್ಟೆಯು ಇಂದು ವ್ಯಾಪಿಸಿದೆ. ಮೌಲ್ಯವರ್ಧನೆಯೂ ನಡೆಯುತ್ತಿದೆ ಇದು  ಆಶಾದಾಯಕ ಬೆಳವಣಿಗೆ ಎಂದರು.

ನಿವೃತ್ತ ಅರಣ್ಯ ಅಧಿಕಾರಿ ಮತ್ತು ಹಲಸು ಬೆಳೆಗಾರ ಗ್ಯಾಬ್ರಿಯಲ್ವೇಗಸ್ ಮಾತನಾಡಿ, ಹಲಸು ಕೃಷಿಯೂ ಭವಿಷ್ಯದಲ್ಲಿ  ಉತ್ತಮ ಕೃಷಿಯಾಗುವುದರಲ್ಲಿ  ಸಂದೇಹವಿಲ್ಲ. ಆಹಾರ ಬೆಳೆಯೂ ಆದ ಹಲಸು ಬೆಳೆದು ಬಾರಿ ಆದಾಯಯೂ ಗಳಿಸಿದ್ದೇನೆ. ಹಲಸಿಗೆ ಮಾರುಕಟ್ಟೆ ಇಲ್ಲ ಎಂದು  ಅನೇಕರು ಹೇಳುತ್ತಿದ್ದರು. ವರ್ಷ ನಮ್ಮಲ್ಲಿ  ಬೆಳೆದ ಹಲಸಿಗೆ ಉತ್ತಮ ಬೇಡಿಕೆಯೂ ಬಂದಿತ್ತು ಎಂದರು.

ಕೃಷಿಕ, ಪತ್ರಕರ್ತ ಮಹೇಶ್ಪುಚ್ಚಪ್ಪಾಡಿ ಮಾತನಾಡಿ, ಸಮ್ಮಿಶ್ರ ಕೃಷಿಯಿಂದ ಮಾತ್ರವೇ ಭವಿಷ್ಯದಲ್ಲಿ  ಕೃಷಿಕರ  ಆದಾಯ ದ್ವಿಗುಣವಾಗಲಿದೆ. ಹಲಸು ಮೌಲ್ಯವರ್ಧನೆಯ ಮೂಲಕ ಕೃಷಿಕರಿಗೆ ಉತ್ತಮ ಆದಾಯವಾಗಬಹುದು. ಕೃಷಿಕ,ಮೌಲ್ಯವರ್ಧನೆ, ಮಾರುಕಟ್ಟೆ, ಗ್ರಾಹಕರು ಇದೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವುರಿಂದ ಎಲ್ಲಾ ಕಡೆಯೂ ಗಮನ ಅಗತ್ಯವಿದೆ ಎಂದರು.

ಹಲಸು ಸ್ನೇಹಿ ಕೂಟದ  ಮುಳಿಯ ವೆಂಕಟ ಕೃಷ್ಣ ಶರ್ಮ  ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಪೋನೋಸ್ ಹಲಸಿನಂಗಡಿ ಮಾಲಕರು ಹಾಗೂ ಹಲಸು ಪ್ರೇಮಿಕೂಟದ ಮೌನೇಶ್ ಮಲ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ವಿವಿಧ ಹಲಸು ತಳಿಗಳನ್ನು ಜನರಿಗೆ ನೀಡಿ ಹಲಸು ಸಂರಕ್ಷಣೆ ಹಾಗೂ ಕೃಷಿಕರಿಂದಲೇ ಹಲಸು ಖರೀದಿ ನಡೆಸುವ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲಸಿನೊಂದಿಗೆ ಫೋಟೋ" ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.

ರಾರಾಸಂ ಸಂಸ್ಥೆಯ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ ಸ್ವಾಗತಿಸಿದರು. ರಾರಾಸಂ ನಿರ್ದೇಶಕರಾದ ಕೇಶವ್ ಮಾಸ್ಟರ್ ಧನ್ಯವಾದ ಸಮರ್ಪಿಸಿದರು. ಶಿಕ್ಷಕರಾದ ದಾಮೋದರ್ ಮಾಸ್ಟರ್ ನಿರೂಪಿಸಿದರು.