Tuesday, March 20, 2012

ಕೋಲಾರ ರೈತರನ್ನು ಸೆಳೆದ ಗೇರು






ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ (ರಾಷ್ಟ್ರೀಯ ಗೇರು ಸಂಶೋಧನಾಲಯ - Directorate of Cashew Research, Puttur) 'ಗೇರು ದಿನೋತ್ಸವ'. ದೂರದ ಕೋಲಾರದಿಂದ ಮೂವತ್ತಕ್ಕೂ ಮಿಕ್ಕಿ ರೈತರು ಭಾಗಿ. ತಮ್ಮೂರಲ್ಲೂ ಗೇರು ಕೃಷಿಯನ್ನು ಕೈಗೊಳ್ಳಬಹುದೇ? ಅವರ ಮುಂದಿದ್ದ ಪ್ರಶ್ನೆ. 'ನಮ್ಮಲ್ಲಿ ಟೊಮೆಟೋ ವಾಣಿಜ್ಯ ಕೃಷಿ. ಅದಕ್ಕೆ ರಸಗೊಬ್ಬರ, ಸಿಂಪಡಣೆ ಅನಿವಾರ್ಯ. ದರವೂ ಏರಿಳಿತ. ನೀರಾವರಿ ಹೆಚ್ಚು ಬೇಡದ ಗೇರು ಕೃಷಿಯು ಟೊಮೆಟೋಗೆ ಪರ್ಯಾಯವಾಗಬಹುದೇ?' ಎಂಬ ಸಂಶಯಕ್ಕೆ ಕೇಂದ್ರದ ಹಿರಿಯ ವಿಜ್ಞಾನಿ ಗಂಗಾಧರ ನಾಯಕ್ - ಆಗದು - ಎಂದಷ್ಟೇ ಉತ್ತರಿಸಿದರು.


ಕಾರಣವೂ ಇಲ್ಲದಿಲ್ಲ. ಟೊಮೆಟೋ ಕೃಷಿಯಲ್ಲಿ ಲಕ್ಷದ ಲಕ್ಷ್ಯ. ಎಕರೆ ಇಂತಿಷ್ಟು ಲಕ್ಷ ಸಿಗಲೇ ಬೇಕೆಂಬ ನಿರೀಕ್ಷೆ. ಒಳಸುರಿಗಳೂ ಯಥೇಷ್ಟ. ಇಳುವರಿಯಲ್ಲಿ ಮಾತ್ರ ಅದೃಷ್ಟದಾಟ. ಆ ರೀತಿಯ ಲಕ್ಷವನ್ನು ಗೇರು ಕೃಷಿಯಲ್ಲಿ ನಿರೀಕ್ಷಿಸುವಂತಿಲ್ಲ. ಎಕರೆಗೆ ಸೀಮಿತ ಗಿಡಗಳು. ಹೆಚ್ಚು ಇಳುವರಿ ಸಿಗಬೇಕೆಂದರೆ ಕೆಲವು ವರುಷಗಳು ಕಾಯಬೇಕು. ಜತೆಗೆ ಮಾರುಕಟ್ಟೆಯಲ್ಲಿ ದರವೂ ಚೆನ್ನಾಗಿರಬೇಕು. ಕೋಲಾರ ಸುತ್ತಮುತ್ತ ಗೇರುಬೀಜದ ಫ್ಯಾಕ್ಟರಿಗಳು ಇವೆ. ಹಾಗಾಗಿ ಸಂಸ್ಕರಣೆ, ಮಾರಾಟ ಸುಲಭ.

ಮುಳಬಾಗಿಲು, ಕೋಲಾರ ಪ್ರದೇಶವು ಮಾವಿಗೆ ಖ್ಯಾತಿ. ಮಾವಿಗೆ ಪರ್ಯಾಯವಾಗಿ ಗೇರು ಕೃಷಿಯತ್ತ ಬಹುತೇಕರ ಒಲವು. ಮಾವು ಈ ವರುಷ ಹೆಚ್ಚು ಇಳುವರಿ ನೀಡಿದರೆ, ಮುಂದಿನ ವರುಷ ಅಷ್ಟಕ್ಕಷ್ಟೇ. ಜತೆಗೆ ರೋಗಬಾಧೆ. ಅಸಮರ್ಪಕವಾಗುತ್ತಿರುವ ಪ್ರಾಕೃತಿಕ ಸ್ಥಿತಿ. ಮಾರುಕಟ್ಟೆಯೂ ಅನಿಶ್ಚಿತ. ಹೀಗಾಗಿ ಹೊಸ ತಂತ್ರಜ್ಞಾನದಲ್ಲಿ ಬೆಳೆಯಬಹುದಾದ ಗೇರು ಕೃಷಿಯನ್ನು ನೆಚ್ಚಿಕೊಂಡ ರೈತರು ಪುತ್ತೂರಿನ ಸಂಶೋಧನಾ ಕೇಂದ್ರಕ್ಕೆ ಆಗಮಿಸಿ, ಕೃಷಿ ಕ್ರಮವನ್ನು ನೋಡಿ ನಿರ್ಧಾರಕ್ಕೆ ಬಂದರು - ಮಾವಿಗೆ ಪರ್ಯಾಯವಾಗಿ ಗೇರು ಕೃಷಿಯನ್ನು ಆಯ್ದುಕೊಳ್ಳಬಹುದು.

ಗೇರು ದಿನೋತ್ಸವದಂದು ಕೇಂದ್ರದ ನಿರ್ದೇಶನದಲ್ಲಿ ರೂಪಿತವಾದ ಗೇರು ಕೃಷಿಕರ ತೋಟವನ್ನು ಸಂದರ್ಶಿಸುವುದು ವಾಡಿಕೆ. ಈ ವರುಷ ಪುತ್ತೂರು (ದ.ಕ.) ಸನಿಹದ ಇರ್ದೆ-ಪಾಪನಡ್ಕ ಕೆ.ದೇರಣ್ಣ ರೈಯವರ ಗೇರು ತೋಟದ ವೀಕ್ಷಣೆ. ಹೀಗೆ ನೇರವಾಗಿ ವೀಕ್ಷಿಸುವುದರಿಂದ ಕೃಷಿಯ ಸುಖ-ದುಃಖಗಳ ವಿನಿಮಯ. ಬೇಕು-ಬೇಡಗಳ ನಿರ್ಧಾರ ಸುಲಲಿತ. ಕೋಲಾರದ ಕೃಷಿಕರಿಗೆ ಅವರ ಕೃಷಿ, ಇಳುವರಿ ಮತ್ತು ಮಾರುಕಟ್ಟೆ ಆಕರ್ಶಿತವಾಯಿತು.


ಸರಿ, ದೇರಣ್ಣ ರೈಯವರ ಗೇರು ತೋಟದ ವೈಶಿಷ್ಯವೇನು? ಒಮ್ಮೆ ತಿರುಗಾಡಿ ಬರೋಣ. ಇವರದು ಅತಿ ಸಾಂದ್ರ ಕೃಷಿ ಪದ್ಧತಿ. ಎಕ್ರೆಗೆ ನಾಲ್ಕು ನೂರು ಗೇರು ಗಿಡಗಳು. ಗಿಡದಿಂದ ಗಿಡಕ್ಕೆ ಮೂರಡಿ ಅಂತರ. ಎನ್.ಆರ್.ಸಿ.ಸಿ.ಸೆಲೆಕ್ಷನ್ 2, ವಿಆರ್ಐ3, ವಿ-4, ಉಳ್ಳಾಲ-3 ತಳಿಗಳು. 2010ರಲ್ಲಿ ಗಿಡಗಳ ನಾಟಿ.


ನೆಡುವಾಗಲೇ ಇಪ್ಪತ್ತು ಕಿಲೋ ಹಟ್ಟಿಗೊಬ್ಬರ, ಕಾಲು ಕಿಲೋ ರಾಕ್ಫಾಸ್ಪೇಟ್ ಗೊಬ್ಬರ ಉಣಿಕೆ. ಆರು ತಿಂಗಳಲ್ಲಿ ಮೂರಡಿ ಎತ್ತರಕ್ಕೆ ಗಿಡವು ಆರೋಗ್ಯವಾಗಿ ಬಂತಂತೆ. ಹನಿ ನೀರಾವರಿ ಪದ್ಧತಿಯಲ್ಲಿ ನೀರಾವರಿ. ಆರಂಭದ ಹೂವನ್ನು ಕೇಂದ್ರದ ಸಲಹೆಯಂತೆ ಚಿವುಟಿದರು. 'ಅಷ್ಟು ಚೆನ್ನಾಗಿ ಬಂದ ಹೂವನ್ನು ಕೀಳಲು ಮನಸ್ಸು ಬರಲಿಲ್ಲ. ಒಂದಷ್ಟು ಗಿಡದಲ್ಲಿ ಹೂವನ್ನು ಚಿವುಟದೆ ಬಿಟ್ಟಿದ್ದೆ' ಎನ್ನುತ್ತಾರೆ. ಇದರಿಂದಾಗಿ ಚಿವುಟಿದ ಮರಕ್ಕೂ, ಚಿವುಟದ ಮರಕ್ಕೂ ಇಳುವರಿಯಲ್ಲಿ ವ್ಯತ್ಯಾಸವನ್ನು ರೈಗಳು ಗಮನಿಸಿದ್ದಾರೆ.


ಸಾಂದ್ರ ಬೇಸಾಯವಾದ್ದರಿಂದ ಮಧ್ಯೆ ಅಂತರ ಬೆಳೆ ಅಸಾಧ್ಯ. ಅಂತರ ಬೆಳೆಯನ್ನು ಬಯಸುವವರು ಗಿಡಗಳ ಅಂತರವನ್ನು ಕನಿಷ್ಠ ಏಳಡಿಯಷ್ಟು ವಿಸ್ತರಿಸಬೇಕು. ಈ ಭಾಗದಲ್ಲಿ ಸಾಂದ್ರ ಬೇಸಾಯವನ್ನು ಮಾಡಿದವರು ವಿರಳ. ತೋಟ ವೀಕ್ಷಣೆ ಬಳಿಕ ಗೇರು ಮಾತುಕತೆ ಜರುಗಿತು. ಹೆಚ್ಚು ವ್ಯಾಪ್ತಿಯಲ್ಲಿ ಗೇರು ಕೃಷಿ ಇರುವ ಮಹಾರಾಷ್ಟ್ರ. ಭಾರತದಲ್ಲಿ ಪ್ರಸ್ತುತ ಹದಿಮೂರುವರೆ ಟನ್ ಬೇಡಿಕೆಯಿದ್ದು, ಆರೂವರೆ ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. 2001ರಲ್ಲಿ ಗೇರು ಬೀಜ ಉತ್ಪಾದನೆಯಲ್ಲಿ ಭಾರತವು ನಂ.1 ಆಗಿತ್ತು. ಈಗದು ವಿಯೆಟ್ನಾಂಗೆ ಜಾಗ ಬಿಟ್ಟುಕೊಟ್ಟಿದೆ!


ಉಳಿದ ಬೆಳೆಗಳಂತೆ ಗೇರುಬೀಜಕ್ಕೂ ಉತ್ತಮ ಧಾರಣೆ ಸಿಗುವಂತಾಗಬೇಕು. ಬೇಕಾದಂತೆ ಧಾರಣೆ ಪಡೆಯಲು ಆಗುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆಯನ್ನು ನಿಯಂತ್ರಿಸುವ ರೈತರ ಸಂಘಟನೆ ಬೇಕು. ಅಡಿಕೆ, ಕಾಫಿಗೆ ಇದ್ದಂತೆ ಕೃಷಿಕರ ಲಾಬಿ ಮುಖ್ಯ. ಮಾರುಕಟ್ಟೆಯನ್ನು ಕೃಷಿಕರೇ ನಿರ್ಧರಿಸುವಂತಾಗಬೇಕು. ಸರಿಯಾದ ಧಾರಣೆ ಸಿಗದ ಕಾರಣ ಕೃಷಿಗೆ ಮುತುವರ್ಜಿ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ 'ಗೇರು ಬೆಳೆಗಾರರ ಸಂಘ'ವೊಂದರ ಸ್ಥಾಪನೆಗೆ ಕೃಷಿಕರೇ ನಿರ್ಧರಿಸಿರುವುದು ಶ್ಲಾಘನೀಯ. ಅದರ ರೂಪುರೇಷೆ, ಸ್ವರೂಪ..ಗಳ ಕುರಿತು ಶೀಘ್ರದಲ್ಲೇ ಕಾರ್ಯಹೂರಣ ಸಿದ್ಧವಾಗಲಿದೆ.


ಗೇರು ಸಂಶೋಧನಾ ಕೇಂದ್ರವು ನಮ್ಮ ನಡುವೆ ಇರುವ ಉಳಿದ ಸಂಶೋಧನಾ ಕೇಂದ್ರಗಳಿಗಿಂತ ಭಿನ್ನ. ಇಲ್ಲಿ ರೈತರಿಗೆ ಮಣೆ. ಅವರ ಮಾತು, ಅನುಭವಗಳ ಸ್ವೀಕಾರ. ರೈತರು ಕೇಂದ್ರಕ್ಕೆ ಯಾವ ವೇಳೆಗೆ ಬರಲಿ, ವಾಚ್ ನೋಡದೆ ಸೇವೆ ನೀಡುವ ವಿಜ್ಞಾನಿಗಳು, ವರಿಷ್ಠರು ಕೇಂದ್ರದ ಆಸ್ತಿ. ಇಲ್ಲಿ ಒತ್ತಡ ಇಲ್ಲ. ಸಬ್ಸಿಡಿಯನ್ನು ಮನೆಬಾಗಿಲಿಗೆ ಚೆಕ್ ಮೂಲಕ ಕೊಡುವ ವ್ಯವಸ್ಥೆ. ಅವಿದ್ಯಾವಂತ ರೈತರೂ ಇಲ್ಲಿ ಮುಕ್ತವಾಗಿ ಮಾತನಾಡಬಹುದು. ಸಂಶೋಧನಾ ಫಲಿತಾಂಶ ನೇರವಾಗಿ ರೈತರ ಹೊಲಕ್ಕೆ. ಲ್ಯಾಬ್ ಟು ಲ್ಯಾಂಡ್.


ಗೇರು ದಿನೋತ್ಸವದಲ್ಲಿ ಮಂಚಿಯ ಶ್ರೀಮತಿ ಸತ್ಯಭಾಮ ಅವರು ತಯಾರಿಸಿದ ಗೇರು ಹಣ್ಣಿನ ಹಲ್ವ ಮತ್ತು ಪಾಯಸ - ಮೌಲ್ಯವರ್ಧನೆಯ ಅವಕಾಶಕ್ಕೆ ಕನ್ನಡಿ.

Thursday, March 15, 2012

ಹಸುರು ಮನದೊಳಗೆ ಬೇರಿಳಿಸಿದ ಚೆರಿ











ಹಿಂದಿನ ರಾತ್ರಿ ಚಿನುವಾ ನಿದ್ದೆಯಿಲ್ಲದೆ ಚಡಪಡಿಸುತ್ತಿದ್ದ! ಮನೆಯಂಗಳದಲ್ಲಿ ಬೆಳೆದು ನಿಂತ ಚೆರಿ ಗಿಡ/ಮರದೊಂದಿಗಿನ ನಂಟನ್ನು ಹೇಳಿದಷ್ಟೂ ಸಾಕಾಗದು. ನಾಲ್ಕು ವರುಷದಿಂದ ಸ್ನೇಹಿತನಂತಿದ್ದ ಚೆರ್ರಿ ಹಣ್ಣಿನ ಮರಕ್ಕಂದು ಶುಭ ವಿದಾಯದ ರಾತ್ರಿ! ಬರುವ ರಾತ್ರಿ ತಾನು ಕಲಿವ ಶಾಲೆಯ ತೋಟಕ್ಕೆ ಸ್ಥಳಾಂತರಗೊಳ್ಳುತ್ತದೆ. ಮನೆಯ ಸದಸ್ಯರಂತಿದ್ದ ಹಕ್ಕಿಗಳು ನಾಳೆಯಿಂದ ಮನೆಯಂಗಳದಲ್ಲಿ ಚಿಲಿಪಿಲಿ ಸದ್ದು ಮಾಡುವುದಿಲ್ಲ. ತನ್ನ ಬರುವಿಕೆಗಾಗಿ ಶಾಲಾ ತೋಟದಲ್ಲಿ ಕಾಯುತ್ತಿರುವ ಚೆರಿಯನ್ನು ನೆನೆಸಿಕೊಳ್ಳುತ್ತಾ ನಿದ್ದೆಗೆ ಜಾರುತ್ತಾನೆ.


ಫೆಬ್ರವರಿ 17. ತಾನು ನಂಬಿದ, ತನ್ನನ್ನು ನಂಬಿದ ಚೆರಿ ಮರವನ್ನು ಬೀಳ್ಕೊಡಲು ಚಿನುವಾ ಮಾನಸಿಕವಾಗಿ ಸಿದ್ಧವಾಗಿದ್ದಾನೆ. ಕೊಡಲಿ, ಗುದ್ದಲಿಯೊಂದಿಗೆ ತನ್ನ ಸಹಾಯಕರೊಂದಿಗೆ 'ಸ್ಥಳಾಂತರ' ಪ್ರಕ್ರಿಯೆ ಕಾಯಕಕ್ಕೆ ಬಂದಿದ್ದ ದ್ಯಾಮಪ್ಪ ಚಿನುವಾನ ಕಣ್ಣಲ್ಲಿ ಜಿನುಗುತ್ತಿರುವ ಕಣ್ಣೀರನ್ನು ನೋಡುತ್ತಾರೆ. ಚೆರಿಯ ಗೆಲ್ಲುಗಳನ್ನು ಕಡಿಯಲು ಬರುತ್ತಿದ್ದಾಗಲೆಲ್ಲಾ 'ಮರಕ್ಕೆ ನೋವಾಗುತ್ತಿದೆ, ಕಡಿಯಬೇಡಿ' ಎಂದು ಅಲವತ್ತುಗೊಳ್ಳುತ್ತಿರುವ ಚಿನುವಾನ ಚಿಕ್ಕದಾಗುತ್ತಿದ್ದ ಮೋರೆ ದ್ಯಾಮಪ್ಪರಿಗೆ ನೆನಪಿಗೆ ಬಂತು.

ಸರಿ, ಚೆರಿ ತನ್ನ ಟೊಂಗೆಗಳನ್ನು ದ್ಯಾಮಪ್ಪರ ಕೊಡಲಿಗೆ ಅರ್ಪಿಸಿತು. ಬುಡ ನುಸುಳಾಗಿ ಬೇರು ಸಹಿತ ಕೀಳಲು ಅನುವಾಗುವಂತೆ ಸಹಕರಿಸಿತು. ನೆಲದಾಳಕ್ಕೆ ಬೇರು ಬಿಟ್ಟ ಚೆರಿಯ ಬುಡದಲ್ಲಿ ದೊಡ್ಡ ಹೊಂಡವೇ ನಿರ್ಮಾಣವಾಗಿತ್ತು. ಆ ಹೊಂಡಕ್ಕೆ ಚಿನುವಾ ಇಳಿದೇರಿ, 'ನನ್ನ ಮರ ಎಷ್ಟು ಗಟ್ಟಿ ಅಲ್ವಾ. ನನ್ನೊಂದಿಗೆ ಸ್ನೇಹಿತರ ಭಾರವನ್ನು ಇಷ್ಟು ವರುಷ ತಾಳಿಕೊಂಡ ಮರಕ್ಕೆ ಹೇಗೆ ಉಪಕಾರ ಮಾಡಲಿ' ಎಂದು ಅಮ್ಮನಲ್ಲಿ ಕೇಳುತ್ತಾನೆ. ಚಿನುವಾನಲ್ಲಿ ಚೆರಿ ಹಲವು ಪ್ರಶ್ನೆಗಳನ್ನು ಮೂಡಿಸಿದ್ದು ಅವೆಲ್ಲವೂ ಮೌನವಾಗುವ ಸಮಯ.


ಧಾರವಾಡದ ನಾರಾಯಣಪುರದಲ್ಲಿ ಚಿನುವಾನ ಮನೆ. ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ, 'ಬಾಲಬಳಗ' ಶಾಲೆ. ಹತ್ತಾರು ಮಕ್ಕಳೊಂದಿಗೆ ಟ್ರಾಕ್ಟರ್ ಏರಿದ ಚೆರಿ ಮರವು ಚಿನುವಾನಿಗೆ 'ಟಾಟಾ' ಹೇಳಿತು. ಶಾಲಾ ಆವರಣದೊಳಕ್ಕೆ ಬಂದಾಗ ಚೆರಿ ಮರಕ್ಕೆ ಸ್ವಾಗತ. ಕೊಂಬು, ಕಹಳೆ, ಡ್ರಮ್ಸ್ಗಳ ನಿನಾದ. ತಮ್ಮ ಶಾಲೆಗೆ ಹೊಸ ಅತಿಥಿ ಆಗಮಿಸಿದ ಸಂತಸ-ಸಂಭ್ರಮ. ಅಲ್ಲಿರುವ ಚೆರಿ ಮರಗಳ ನಡುವೆ ಚಿನುವಾನ ಚೆರಿ ಮರವೂ ನೆಲೆ ಕಂಡಿತು. ಅದುವರೆಗೆ ಮೌನವಾಗಿದ್ದ ಚಿನುವಾನ ಮುಖ ಅರಳಿತು. ದುಃಖ ದೂರವಾಯಿತು.


ಇದೊಂದು ರೂಪಕದ ಹಾಗೆ ಅನ್ನಿಸಿತಾ? ಆದರಿದು ವಾಸ್ತವ. ಮರಗಳು ಮಕ್ಕಳ ಮನದೊಳಗೆ ನೆಲೆ ನಿಂತ ಪರಿಣಾಮ. ನಿರ್ಜೀವವೆಂದು ಭಾವಿಸುವ ಸಜೀವ ಸಸ್ಯಗಳ ಬಗ್ಗೆ, ಸಜೀವರೆಂದುಕೊಳ್ಳುತ್ತಾ ನಿರ್ಜೀವ-ನಿರ್ಭಾವುಕರಾದ ನಮಗೆ ಇದೆಲ್ಲಾ ಢಾಳಾಗಿ ಕಾಣಬಹುದು! ಎಲ್ಲಾ ಮಕ್ಕಳ ಮನದಲ್ಲೂ ಹಸುರು ಪರಿಸರ ಆವರಿಸಿರುತ್ತದೆ. ಅಲ್ಲದು ಮೌನವಾಗಿರುತ್ತದೆ. ಅದಕ್ಕೆ ಮಾತನ್ನು ಕೊಡುವ ಪರಿಸರ ಮನೆಯಲ್ಲಿ ಸೃಷ್ಟಿಯಾಗಬೇಕು. ಅಪ್ಪಾಮ್ಮ ಅದಕ್ಕೆ ಜೀವ ತುಂಬಬೇಕು. ಆಗ ನೂರಾರು ಚೆರಿಮರಗಳು ಮಾತನಾಡುತ್ತವೆ!


ಚಿನುವಾ ಎರಡನೇ ತರಗತಿಯ ವಿದ್ಯಾರ್ಥಿ. ಧಾರವಾಡದ ಬಾಲಬಳಗ ಕಲಿಕಾ ಶಾಲೆ. ಅಮ್ಮ ಅನಿತಾ ಪೈಲೂರು. ತಂದೆ ಶಿವರಾಂ ಪೈಲೂರು. ಚಿನುವಾನ ಹುಟ್ಟು, ಬಾಲ್ಯ, ಕಲಿಕೆ ಎಲ್ಲವೂ ಧಾರವಾಡದಲ್ಲೇ. ಹೆತ್ತವರ ವೃತ್ತಿ ಅನಿವಾರ್ಯತೆಗಾಗಿ ರಾಜಧಾನಿಗೆ ವಸತಿ ವರ್ಗಾವಣೆಯ ತರಾತುರಿ.


ಅಮ್ಮನ ದಾಸವಾಳ ಗಿಡದೊಂದಿಗೆ ಕಳೆಯಾಗಿ ಬಂದ ಚೆರಿ ಗಿಡವನ್ನು ಚಿನುವಾ ತಾನೇ ನೆಟ್ಟು, ನೀರೆರೆದು, ಪೋಷಿಸಿದ್ದ. ತನ್ನಿಂದಲೂ ಎತ್ತರಕ್ಕೆ ಬೆಳೆದು ಹಣ್ಣು ನೀಡಿದಾಗ ತಿಂದು ಸಂತೋಷ ಪಟ್ಟಿದ್ದ. ಹಣ್ಣು ತಿನ್ನಲು ಬರುವ ಪಕ್ಷಿಗಳ ಸ್ನೇಹವನ್ನು ಸಂಪಾದಿಸಿದ್ದ. 'ನಿಮಗರ್ಧ, ನನಗರ್ಧ ಎಂದು ಮರವನ್ನೇ ಪಾಲು ಮಾಡಿದ್ದ. ಅವುಗಳೊಂದಿಗೆ ಜಗಳ ಮಾಡಿದ್ದ. ಮರ ಮೇಲೆ ಅಟ್ಟಳಿಗೆ ಕಟ್ಟಿ 'ಚೆರಿಮನೆ'ಯನ್ನು ನಿರ್ಮಾಣ ಮಾಡಿ ಸ್ನೇಹಿತರನ್ನು ಆಹ್ವಾನಿಸಿದ. ಮರದಲ್ಲೇ ಉಂಡ, ತಿಂದ. ಮರ ತುಂಬಾ ಅಡ್ಡಾಡಿದ. ಶಾಲೆ ಬಿಟ್ಟು ಬಂದ ನಂತರ ಮರವೇರಿದ ಬಳಿಕವೇ ತಿಂಡಿ-ಓದು. 'ನನ್ನ ಮರದಲ್ಲಿ ಹದಿನಾಲ್ಕು ವಿಧದ ಪಕ್ಷಿಗಳು ಮನೆ ಮಾಡಿವೆ' ಅಂತ ಗೊತ್ತಾದ ಕ್ಷಣ ಪುಳಕಗೊಂಡಿದ್ದ.


ಚೆರಿಯ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದ ಚಿನುವಾ ತಾನೂ ಹಸುರು ಮನಸ್ಸನ್ನು ರೂಪಿಸಿಕೊಳ್ಳುತ್ತಾ ಬೆಳೆಯುತ್ತಲಿದ್ದ. ಇದಕ್ಕೆ ಪೂರಕವಾಗಿ ಶಾಲೆಯ ವಾತಾವರಣ. ಅಲ್ಲೂ ಹಸುರು ಪಾಠ. ಹಸುರು ಮನಸ್ಸನ್ನು ಅರಳಿಸುವ ಪಠ್ಯ ಹೂರಣ.
ಜಪಾನಿನಲ್ಲಿ ಏಳು ದಶಕಗಳ ಹಿಂದೆ ಇದ್ದ ಮಕ್ಕಳ ನಲಿವಿನ ಶಾಲೆ 'ತೊಮೊಯೆ'ಯ ಅನುಭವ ಕಥನ 'ತೊತ್ತೋ ಚಾನ್' ಪುಸ್ತಕದಿಂದ 'ಬಾಲಬಳಗ' ಪ್ರೇರಣೆ ಪಡೆದಿದೆ. ಧಾರವಾಡದ ಜನಪ್ರಿಯ ವೈದ್ಯ ಡಾ. ಸಂಜೀವ ಕುಲಕರ್ಣಿಯವರ ಕನಸು ನನಸಾಗುತ್ತಿದೆ. ಮಗುವಿನೊಂದಿಗೆ ಮಗುವಾಗುವ ಡಾಕ್ಟರ್, ಮಕ್ಕಳ ಮನಸ್ಸಿಗೆ ರೆಕ್ಕೆಪುಕ್ಕ ಕಟ್ಟಿಕೊಡುವ ಸಂಜೀವ ಮಾಮ.

ಇಲ್ಲಿ ಯೂನಿಫಾರ್ಮ್ ಇಲ್ಲ. ಮಣ್ಣಿನೊಂದಿಗೆ ಆಟ. ಪರಿಸರದೊಂದಿಗೆ ಒಡನಾಟ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡ ಕಲಿಕೆ. ಮಕ್ಕಳ ಅನುಭವ, ಅಭಿಪ್ರಾಯಕ್ಕೆ ಮಣೆ. ತಗ್ಗು, ದಿಣ್ಣೆ, ಕಾಡಿನಂತಹ ಪರಿಸರ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಕಲಿವ ಹೂರಣ. ನಿರಂತರ ನಲಿವಿನ ಕಲಿಕೆ. ಕೋಣೆಯೊಳಗೆ ಪುಸ್ತಕದೊಂದಿಗೆ ಕಳೆದರೆ, ಹೊರಗೆ ಹಸಿರಿನೊಂದಿಗೆ ಮಾತುಕತೆ. ಮಕ್ಕಳ ಅರಿವಿಗೆ ಬಾರದೇ ಹಸುರಿನ ಪಾಠ ಮೈಗಂಟಿರುತ್ತದೆ. ಜತೆಗೆ ಅಪ್ಪಾಮ್ಮನ ಪರಿಸರ ಕುರಿತಾದ ಕತೆಗಳು ಚಿನುವಾನನ್ನು ಗಟ್ಟಿಯಾಗಿ ಬೆಳೆಸಿದುವು.


ಫಲವಾಗಿ ಚೆರಿ ಮರದ ಸುಖವನ್ನು, ಸಾಂಗತ್ಯವನ್ನು ಅನುಭವಿಸಿದ್ದಾನೆ. ಚಿಕ್ಕ ಮನಸ್ಸಿನ ಭಾವವನ್ನೊಮ್ಮೆ ಗಮನಿಸಿ. ಮರದ ಗೆಲ್ಲನ್ನು ಕಡಿದಾಗ ಅಮ್ಮನನ್ನು ಹೀಗೆ ಪೀಡಿಸುತ್ತಾನೆ, 'ಅಮ್ಮ, ಪೋಲಿಸ್ ಸ್ಟೇಷನಿಗೆ ಹೋಗೋಣ. ನನ್ನ ಮರಕ್ಕೆ ದೊಡ್ಡ ಗಾಯ ಆಗಿದೆ. ನಾನು ಕಂಪ್ಲೇಂಟ್ ಕೊಡಬೇಕು' ಎನ್ನುತ್ತಾನೆ. ಮರಕ್ಕಾದ ಗಾಯವಿದೆಯಲ್ಲಾ, ಅದು ತನಗೆ ಆದುದು ಎಂದು ಭಾವಿಸಿದ್ದಾನೆ. ಇಲ್ಲಿ ಭಾಷೆಗಳಿಗೆ ಪ್ರಾಧಾನ್ಯತೆಯಲ್ಲ. ಭಾವಕ್ಕೆ, ಭಾವ ಸ್ಫುರಿಸುವ ಭಾಷೆಗೆ.

'ಎಲೆಗಳ ಬಣ್ಣ ಯಾಕೆ ಹೀಗೆ? ಅದರ ನರದಲ್ಲಿ ಹಸಿರು ರಕ್ತ ಇರುತ್ತಾ, ಹೂವು ಮಾತ್ರ ಬಿಳಿ, ಹಣ್ಣು ಕೆಂಪು ಯಾಕೆ? ಎಲೆ ಕೆಳಗೆ ಬಿದ್ದಾಗ ಅದಕ್ಕೆ ನೋವು ಆಗುವುದಿಲ್ವೇ? ಹಣ್ಣು ಕೆಳಕ್ಕೆ ಜಂಪ್ ಮಾಡಿದಾಗ ಸ್ಕಿಡ್ ಆಗಿ ನೋವಾಗುವುದಿಲ್ವೇ? ಉದುರಿದ ಎಲೆ ನೆಲಕ್ಕಂಟಿದಾಗ ಅದು ಮಲಗಿದ್ದಂತೆ ಭಾಸವಾಗುತ್ತದೆ. ಇಂತಹ ಪ್ರಶ್ನೆಗಳು ಮಗುವಿನಲ್ಲಿ ಮೂಡಬೇಕಾದರೆ 'ಅತೀತ'ವಾದುದು ಇರಬೇಕಾಗಿಲ್ಲ. ಶಾಲೆಯಲ್ಲಿ, ಮನೆಯಲ್ಲಿ ವಾತಾವರಣದ ಇದ್ದರಾಯಿತು. ಚಿನುವಾನಿಗೆ ಈ ಭಾಗ್ಯ ಸಿಕ್ಕಿದೆ.


ಹಾಗಾಗಿಯೇ ನೋಡಿ, ಅಪ್ಪಾಮ್ಮನೊಂದಿಗೆ ತಾನು ರಾಜಧಾನಿ ಸೇರುತ್ತೇನೆ ಎಂದು ಅರಿವಾದ ತಕ್ಷಣ, ಶಾಲಾ ವರಿಷ್ಠ ಸಂಜೀವ ಮಾಮನ ಮನವೊಲಿಸಿ, ಮನೆಯಂಗಳದ ಚೆರಿ ಮರವನ್ನು ಶಾಲೆಯ ತೋಟದಲ್ಲಿ ನೆಲೆಸುವಂತೆ ಮಾಡಿದ್ದಾನೆ ಚಿನುವಾ. 'ತಾನು ಮುಂದೆ ಧಾರವಾಡಕ್ಕೆ ಬಂದಾಗ ನನ್ನ ಮರ ಇಲ್ಲಿ ಇರುತ್ತೆ ಅಲ್ವಾ' ಎನ್ನುವಾಗ ಆತನ ಕಣ್ಣುಗಳು, ಮುಖ ಅರಳುತ್ತದೆ.
ಬುಡವನ್ನು ಸಡಿಲಿಸಿಕೊಂಡು ಟ್ರಾಕ್ಟರ್ ಏರಿದ ಚೆರಿ ಮರ ಚಿನುವಾನಿಗೆ ಹೇಳಿದ್ದು ಏನು ಗೊತ್ತೇ? 'ನಿನ್ನಂತಹ ನೂರಾರು ಮನಸ್ಸುಗಳು ರೂಪುಗೊಳ್ಳಲಿ. ಅವರೆಗಿಲ್ಲಾ ನನ್ನಲ್ಲಿ ಜಾಗವಿದೆ. ಅವರಿಗೆ ಮಾತು ಕಲಿಸುವೆ. ಹಣ್ಣು ನೀಡಿ ಬಾಯಿ ಸಿಹಿ ಮಾಡುವೆ. ಬದುಕು ಕಲಿಸುವೆ.'


ಚಿನುವಾನ ಚೆರಿ ಬಾಲಬಳಗದಲ್ಲಿ ಚಿಗುರುತ್ತಿದೆ. ಅದಕ್ಕೆ ನೀರೆರೆಯುವಾಗಲೆಲ್ಲಾ ಆತನ ಮನಸ್ಸು ಹೇಳುತ್ತದಂತೆ, 'ಇದು ಈಗ ನನ್ನದಲ್ಲ. ನಮ್ಮದು.' ನನಗಂತೂ ಚೆರಿ ಹಣ್ಣು, ಮರವನ್ನು ಕಂಡಾಗಲೆಲ್ಲಾ ಚಿನುವಾ ನೆನಪಾಗುತ್ತಾನೆ. 'ಜವಾಬ್ದಾರಿ' ನೆನಪಾಗುತ್ತದೆ.


ನಮ್ಮ ಮಗುವಿನ ಅಂಕಪಟ್ಟಿಯಲ್ಲಿ 'ವೆರಿಗುಡ್' ಅಂತ ಕೆಂಪುಶಾಯಿಯಲ್ಲಿ ಷರಾ ಬರೆದುದನ್ನು ನೋಡಿ ಪರಮಾನಂದ ಪಡುತ್ತೇವೆ. ಮಗ/ಮಗಳಿಗೆ ಅರ್ಧ ಮಾರ್ಕ್ ಕಡಿಮೆಯಾದಾಗ ಅಧ್ಯಾಪಕರೊಂದಿಗೆ ತರಾಟೆಗಿಳಿಯುತ್ತೇವೆ. ಮಗುವಿನ ಅಂಗಿಗೆ ಹಾಕಿದ ಇಸ್ತ್ರಿ ಹಾಳಾದರೆ ಬ್ರಹ್ಮಾಂಡ ಒಂದು ಮಾಡುತ್ತೇವೆ. ನಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಿ ಖುಷಿ ಪಡುತ್ತೇವೆ. ಹೆತ್ತವರೇ, ಒಂದು ಕ್ಷಣ ನಿಲ್ಲಿ.. ಎಂದಾದರೂ ನಿಮ್ಮ ಮಗುವಿನ ಕನಸುಗಳನ್ನು ಓದಿದ್ದೀರಾ? ಕಂಡಿದ್ದೀರಾ? ಈ ಕುರಿತು ಪ್ರಯತ್ನ ಮಾಡಿದ್ದೀರಾ?

Wednesday, March 7, 2012

ದೇಶದಲ್ಲೇ ಪ್ರಥಮ: 'ರೆಡಿ ಟು ಕುಕ್' ಹಲಸು

ಪಾಕಪ್ರಿಯರಿಗೆ ಸಿಹಿಸುದ್ದಿ. 'ಅಡುಗೆಗೆ ಸಿದ್ಧ'(ರೆಡಿ ಟು ಕುಕ್)ವಾಗಿಯೇ ಅಡುಗೆ ಮನೆಗೆ ಹಲಸು ಅಂಬೆಗಾಲಿಕ್ಕಿದೆ. ಪ್ಯಾಕೆಟ್ ಒಡೆದು ಹೂರಣಕ್ಕೆ ಉಪ್ಪು-ಖಾರ ಸೇರಿಸಿದರೆ ಆಯಿತು. ಅಡುಗೆ ರೆಡಿ! ಎಳೆ ಹಲಸು (ಗುಜ್ಜೆ), ಬಲಿತ ಸೊಳೆ ಮತ್ತು ಬೀಜ - ಮೂರು ವಿಧದ ಪ್ಯಾಕೆಟ್ಗಳು ಅಡುಗೆಗೆ ಸಿದ್ಧವಾಗಿ ಮೊನ್ನೆಯಷ್ಟೇ ಮಾರುಕಟ್ಟೆ ಪ್ರವೇಶಿಸಿವೆ.

ಎಳೆ ಹಲಸಿನ ಹೊರ ಮೈಯ ಮುಳ್ಳನ್ನು ತೆಗೆದು, ಉಳಿದೆಲ್ಲಾ ಭಾಗವನ್ನು 'ಕೊಚ್ಚು ತುಂಡು'ಗಳನ್ನಾಗಿ ಮಾಡಿರುವುದು ಒಂದು ವಿಧ. ಬಲಿತ ಸೊಳೆಯನ್ನು ನೀಟಾಗಿ ಕಟ್ ಮಾಡಿದ್ದು ಇನ್ನೊಂದು. ಹಲಸಿನ ಬೀಜ ನೇರವಾಗಿ ಅಡುಗೆ ಬಳಸಬಹುದಾದಷ್ಟು ಶುಚಿ ಮತ್ತು ನೋಟ. ದೇಶದಲ್ಲೇ ಪ್ರಥಮವಾದ ಈ ಸಾಧನೆ ಮಾಡಿದ್ದು ಕೇರಳದ ಪತ್ತನಾಂತಿಟ್ಟದ ಕಾರ್ಡ್ ಕೃಷಿ ವಿಜ್ಞಾನ ಕೇಂದ್ರ.

ಪೇಟೆಯ ಅಮ್ಮಂದಿರಿಗೆ ನಿಜಕ್ಕೂ ಖುಷಿ. ಹಲಸಿನ ಕಾಯನ್ನು ತರುವ ಸಾಹಸವಿಲ್ಲ. ತುಂಡರಿಸಿ, ಮೇಣ ಮೆತ್ತಿಸಿಕೊಂಡು; ಸೊಳೆ ತೆಗೆವ, ಬೀಜ ಬೇರ್ಪಡಿಸುವ ಕಷ್ಟವಿಲ್ಲ. ಚಿಕ್ಕ ಕುಟುಂಬಕ್ಕೆ ದೊಡ್ಡ ಗಾತ್ರದ ಕಾಯಿ ಹೊರೆ. ಕಟ್ ಮಾಡಲು ಸಮಯವಿಲ್ಲ. ಬಹುತೇಕರಿಗೆ ಗೊತ್ತಿಲ್ಲ ಬಿಡಿ. ತುಂಡರಿಸಿ ಉಳಿದವನ್ನು ತಂಪುಪೆಟ್ಟಿಗೆಯಲ್ಲಿಟ್ಟರೂ ಹೆಚ್ಚು ದಿನ ತಾಳದು. ಹಾಳಾದರೂ ತೊಂದರೆಯಿಲ್ಲ, ನೆರೆಮನೆಯವನಿಗೆ ಕೊಡುವ ಪ್ರಮೇಯವಂತೂ ಇಲ್ಲವೇ ಇಲ್ಲ! ಇನ್ನು ಒದ್ದಾಡಬೇಕಿಲ್ಲ, 'ರೆಡಿ ಟು ಕುಕ್' ಹಲಸು ಬಂದಿದೆ. ಒಂದರ್ಥದಲ್ಲಿ ಹಲಸಿಗೆ ಶಾಪ ವಿಮೋಚನೆ!

ಬಹುತೇಕ ತರಕಾರಿಗಳು ವಿಷದಲ್ಲಿ ಮಿಂದೆದ್ದೇ ಅಡುಗೆ ಮನೆ ಸೇರುತ್ತವೆ. ಹಲಸು ವಿಷ ಸಿಂಪಡಣೆಯನ್ನು, ಗೊಬ್ಬರವನ್ನು ಬೇಡದ ತರಕಾರಿ. ಈ ಹಿನ್ನೆಲೆಯಲ್ಲಿ 'ಅಡುಗೆಗೆ ಸಿದ್ಧ' ಹಲಸಿಗೆ ನಗರದಲ್ಲಿ ಹೆಚ್ಚು ಗ್ರಾಹಕೊಲವು ಸಿಗಬಹುದು. ಹೆಚ್ಚು ಸಂರಕ್ಷಕಗಳನ್ನು ಬಳಸದ ಇದರಲ್ಲಿ ನಾರಿನಂಶ, ವಿಟಾಮಿನ್ ಗಳು ಇವೆ. ಮಧುಮೇಹದವರಿಗೆ ಇದು ತುಂಬ ಒಳ್ಳೆ ಆಹಾರ.

ಕಾರ್ಡ್ ಕೆವಿಕೆ ಈ ಯೋಜನೆಯ ಉದ್ದೇಶ 'ಮಾಡಿ ತೋರಿಸುವುದು' ಅಷ್ಟೇ. ಈಗ ಸಣ್ಣ ರೀತಿಯಲ್ಲಿ ಉತ್ಪನ್ನಗಳು ಮಾರುಕಟ್ಟೆ ಸೇರಿವೆಯಷ್ಟೇ. ಹಳ್ಳಿಗಳಲ್ಲಿ ಇಂತಹ ಘಟಕಗಳಿಗೆ ಅವಕಾಶ ಹೆಚ್ಚು. ತಂತ್ರಜ್ಞಾನದ ತಲೆ ನೋವಿಲ್ಲ. ಅರಿವು ಮೂಡಿಸುವ ಕೆಲಸ ಆಗಬೇಕಷ್ಟೇ. ಮಾರುಕಟ್ಟೆಯಲ್ಲಿರುವ ದೊಡ್ಡ ಮಿತಿಯೆಂದರೆ ಅದರ ತಾಳಿಕೆ. ತೆರೆದ ವಾತಾವಾರಣದಲ್ಲಿ ಒಂದೇ ದಿನ ಆಯುಷ್ಯ. ತಂಪುಪೆಟ್ಟಿಗೆಯಲ್ಲಾದರೆ ಮೂರು ದಿನ.

ಕಾಲು ಕಿಲೋ 'ಸಿದ್ಧ ಹಲಸು' ಪ್ಯಾಕೆಟ್ಗೆ ಇಪ್ಪತ್ತು ರೂಪಾಯಿ. ಥರ್ಮಾಕೋಲ್ ಟ್ರೇಯಲ್ಲಿಟ್ಟ ಉತ್ಪನ್ನಕ್ಕೆ ಕ್ಲಿಂಗ್ಫಿಲ್ಮಿನ ಪಾರದರ್ಶಕ ಅಂಗಿ. ಊರಿನ ಸ್ತ್ರೀಶಕ್ತಿ ಸಂಘಗಳು ಮೌಲ್ಯವರ್ಧನೆಗೆ ಮುಂದಾಗಬಹುದು. ವರುಷದಲ್ಲಿ ನಾಲ್ಕಾರು ತಿಂಗಳು ನಡೆಸಬಹುದಾದ ಉದ್ದಿಮೆ.

ಮಲೆನಾಡಿನಲ್ಲಿ ತುಳುವ, ಬಿಳುವ.. ಜಾತಿಯ ಹಲಸು ಜಗಲಿ ಸೇರುವುದಿಲ್ಲ. ಈ ಉದ್ದಿಮೆಯಲ್ಲಿದಕ್ಕೆ ಅವಕಾಶಗಳು ಹೇರಳ. ಹಲಸಿನ ರುಚಿ ಗೊತ್ತಿದ್ದ ಪೇಟೆ ಮಂದಿಗೆ 'ಅಡುಗೆಗೆ ಸಿದ್ಧ' ಹಲಸಿನ 'ಬಾಯಿರುಚಿ' ಒಮ್ಮೆ ಸಿಕ್ಕಿತೆಂದರೆ ಉತ್ಪನ್ನ ಗೆದ್ದಂತೆ. ಹಳ್ಳಿಯ ಮಲ್ಲಿಗೆ ಹೂ ನಗರಕ್ಕೆ ಹೋಗುತ್ತದಲ್ಲಾ, ಅಂತಹ ಮಾರಾಟ ಸರಪಳಿಯನ್ನು ಬೆಸೆಯಬಹುದೇನೋ?

ಕೇವೀಕೆ ಈ ಉತ್ಪನ್ನ ತಯಾರಿಯ ವಿಧಾನವನ್ನು ಇನ್ನೂ ಸುಧಾರಿಸಿ ಬೇಗನೆ ಸ್ಟಾಂಡರ್ಡೆೈಸ್ ಮಾಡಬೇಕೆಂದಿದೆ. ಏನಿದ್ದರೂ ಮಾಡಿದ ಕೆಲಸ ದೊಡ್ಡದು. ಹಲಸು ಬೆಳೆಯುವ ಪ್ರದೇಶಕ್ಕೆಲ್ಲಾ ಹೊಸ ಪಾಠ. ದೊಡ್ಡ ಯಂತ್ರ, ಎಕ್ರೆಗಟ್ಟಲೆ ಜಾಗ, ಕೋಟಿಗಟ್ಟಲೆ ಬಂಡವಾಳ ಬೇಡ. ಸ್ಥಳೀಯವಾಗಿಯೇ ಮಾರಾಟವಾಗುವ ಅವಕಾಶ. ಜನಸಾಮಾನ್ಯರೂ ಕೂಡಾ ಖರೀದಿಸಿ ತಿನ್ನಬಹುದಾದುದು. ಪತ್ತನಾಂತಿಟ್ಟದ ಕಾರ್ಡ್ ಕೆವಿಕೆ (cardkvk@yahoo.com ಹಲಸಿನ ಮೌಲ್ಯವರ್ಧನೆಯಲ್ಲಿ ಗಣನೀಯ ಕೆಲಸ ಮಾಡಿದೆ.

ನೆರೆಯ ಕಾಸರಗೋಡು ಜಿಲ್ಲೆಯ ಕುಂಡಂಕುಳಿಯ ಚೇರಿಪ್ಪಾಡಿ ಜಲಾನಯನ ಯೋಜನಾ ವ್ಯಾಪ್ತಿಯ ಕೃಷಿಕರು ಹಲಸಿನ ಸಂಸ್ಕರಣೆಯತ್ತ ಆಸಕ್ತಿ ಹೊಂದಿದ್ದಾರೆ. ಕಳೆದ ವರ್ಷ ಪ್ರಾಯೋಗಿಕವಾಗಿ ಬಲಿತ ಹಲಸಿನ ಸೊಳೆ ಬೇರ್ಪಡಿಸಿ ಅದನ್ನು 'ರೆಡಿ ಟು ಕುಕ್' ಪ್ಯಾಕೆಟ್ ತಯಾರಿಸಿದ್ದಾರೆ. ಯಾವುದೇ ಆರೈಕೆ ಇಲ್ಲದೆ ಒಂದು ದಿನ ತಾಳಿಕೊಳ್ಳಬಹುದು ಎಂದು ಪರೀಕ್ಷೆಯಿಂದ ಕಂಡುಕೊಂಡಿದ್ದಾರೆ. ಈ ಋತುವಿನಲ್ಲಿ ಪ್ರಾಯಃ ಮಾರುಕಟ್ಟೆ ಪ್ರವೇಶಿಸಬಹುದು.

ಕೇರಳದ ಕೋಟ್ಟಯಂ ಜಿಲ್ಲೆಯ ಜೋಸೆಫ್ ಲುಕೋಸ್ ತಮ್ಮ 'ಗ್ರಾಮ' ಸಂಸ್ಥೆಯ ಮೂಲಕ ಹಲಸಿನ ಮೂವತ್ತಕ್ಕೂ ಮಿಕ್ಕಿ ಉತ್ನನ್ನಗಳನ್ನು ತಯಾರಿಸುತ್ತಾರೆ. ದೇಶಾದ್ಯಂತ ಗ್ರಾಹಕರು. ಹಲಸಿನ ಒಣ ಸೊಳೆಗೆ ಮೊದಲ ಮಣೆ. ಒಂದು ವರುಷ ತಾಳಿಕೆ. ವರುಷವಿಡೀ ಬಳಕೆ. ಒಣ ಕಾಯಿಸೊಳೆ ಮತ್ತು ಬೀಜದ ಹುಡಿಗೆ ಹುರಿದ ತೆಂಗಿನ ತುರಿ ಸೇರಿಸಿ ಮಾಡಿದ 'ಅವಲೋಸ್ ಪುಡಿ' ಜನಪ್ರಿಯ. ಪ್ರತೀ ವರುಷವೂ ಹೊಸ ಉತ್ಪನ್ನಗಳ ಹುಡುಕಾಟ. ಆಹಾರ ಸಂಸ್ಕರಣಾ ರಂಗದಲ್ಲಿ ಕೃಷಿಕ ಲುಕೋಸ್ ಅವರ ಗಟ್ಟಿ ಅನುಭವವೇ ಯಶಸ್ಸಿಗೆ ಕಾರಣ.

ಪಾಲಕ್ಕಾಡು ಜಿಲ್ಲೆಯ ಕಾಂಞಿರಪುಳದ ಕೃಷಿಕ ಜೇಮ್ಸ್ ಪಿ.ಮ್ಯಾಥ್ಯೂ ಅವರದು ಹಲಸಿನ ಮೌಲ್ಯವರ್ಧನೆಯಲ್ಲಿ ಗುರುತರ ಕೆಲಸ. ಒಣ ಹಣ್ಣು, ಒಣ ಕಾಯಿಸೊಳೆ, ಒಣಗುಜ್ಜೆ - ಪ್ರಮುಖ ಉತ್ಪನ್ನಗಳು. 'ನಾಲ್ಕೂವರೆ ಕಿಲೋ ಹಸಿ ಸೊಳೆಗೆ ಒಂದು ಕಿಲೋ ಒಣಸೊಳೆ. ಒಂದು ಕಿಲೋ ಒಣ ಗುಜ್ಜೆಗೆ ಹದಿಮೂರು ಕಿಲೋ ಹಸಿ ಗುಜ್ಜೆ' ಅವರ ಸೂಕ್ಷ್ಮ ಲೆಕ್ಕಾಚಾರ. ಹಲಸಿನ ಉತ್ಪನ್ನಗಳನ್ನು ಎಲ್ಲರೂ ಬಳಸುವಂತಾಗಬೇಕು ಎನ್ನುವುದು ಗುರಿ. ವ್ಯಾಪಾರಿ ಉದ್ದೇಶ ಅಲ್ಲ. ನಡೆಯುವ ಮೇಳಗಳಲ್ಲಿ ತನ್ನ ಉತ್ಪನ್ನಗಳನ್ನು ಪರಿಚಯಿಸುವುದು ಅವರಿಗೆ ಖುಷಿ.

ತ್ರಿಶೂರಿನ ಮನ್ನುತ್ತಿಯ ಕೇರಳ ವಿವಿಯ ತೋಟಗಾರಿಕಾ ವಿಭಾಗ ಪ್ರಾಯೋಗಿಕವಾಗಿ 'ತಿನ್ನಲು ಸಿದ್ಧ - ಗುಜ್ಜೆ ಪಲ್ಯ'ವನ್ನು ತಯಾರಿಸಿದೆ. ಮೂರು ದಿವಸದ ತಾಳಕೆ. ತಂಪುಪೆಟ್ಟಿಗೆಯಲ್ಲಿಟ್ಟರೆ ಬರೋಬ್ಬರಿ ಒಂದು ವಾರ. ಕೊಂಡು ಒಗ್ಗರಣೆ ಹಾಕಿ ಬಿಸಿ ಮಾಡಿದರೆ ಸಾಕು, ನೇರ ಬಟ್ಟಲಿಗೆ! ಇನ್ನೂರು ಗ್ರಾಮಿನ ಪೊಟ್ಟಣಕ್ಕೆ ಹತ್ತು ರೂಪಾಯಿ.

ಅತ್ತ ಶ್ರೀಲಂಕಾ ಹಲಸಿನ 'ಅಡುಗೆಗೆ ಸಿದ್ಧ' ಉತ್ಪನ್ನಗಳಲ್ಲಿ ಮುಂದಿದೆ. ಅಲ್ಲದು ಗೃಹ ಉದ್ದಿಮೆ. ನೇರವಾಗಿ ಉಪ್ಪು, ಮೆಣಸು, ಮಸಾಲೆ ಹಾಕಿ ಅಡುಗೆ ಮಾಡುವಷ್ಟು ಸಿದ್ಧ ರೂಪ. ಖರೀದಿಸಿದ ಅಮ್ಮಂದಿರಿಗೆ ಎಷ್ಟು ಸಲೀಸು ನೋಡಿ. ಒಲೆಯಲ್ಲಿಟ್ಟು ಬೇಯಿಸಲು ತಯಾರಾದರೆ ಆಯಿತು.

ಶ್ರೀಲಂಕಾದ 'ಕಿಂಡೂರಿ ಪ್ರಾಡಕ್ಟ್ಸ್' ಒಂದು ಗೃಹ ಉದ್ದಿಮೆ. ತರಕಾರಿಗೆ ಹೊಂದುವ ಮೂರು ವಿಧದ ಹಲಸು ಮತ್ತು ಹಲಸಿನ ಹಣ್ಣಿನ ಸೊಳೆಗಳ ಇನ್ನೂರೈವತ್ತು ಗ್ರಾಮ್ಗಳ ಪ್ಯಾಕೆಟ್. ಎಲ್ಲವೂ ಕೈಚಾಲಿತ. ಆರಂಭದ ದಿವಸಗಳಲ್ಲಿ ದಿವಸಕ್ಕೆ ಮೂರು ಕಿಲೋ 'ಸಿದ್ಧ ಹಲಸು' ಮಾರಾಟ ಮಾಡುತ್ತಿದ್ದ ಕಿಂಡೂರಿ, ಈಗ ನಾಲ್ಕೈದು ಪಟ್ಟು ವಿಸ್ತರಿಸಿದೆ. ಹಲಸಿನ ಬೀಜವನ್ನು ಕತ್ತರಿಸಿ 'ರೆಡಿ ಟು ಕುಕ್' ಪ್ಯಾಕೆಟ್ಗೆ ಸೇರಿಸುತ್ತಿದೆ. ಐದು ಮಂದಿಯ ನಾಲ್ಕು ತಾಸು ದುಡಿತ. ನಿತ್ಯ ಐವತ್ತು ಪ್ಯಾಕೆಟ್ ತಯಾರಿ.

'ಇದೆಲ್ಲಾ ನಮಗೆ ಸಾಧ್ಯವಾ,' - ಹೊಸ ವಿಚಾರಗಳಿಗೆ ಶ್ರೀಕಾರ ಹಾಕುವಾಗ ನಮ್ಮಲ್ಲಿ ಬರುವ ಅಡ್ಡ ಮಾತು. ಕೇರಳದ ಹಳ್ಳಿಗಳಲ್ಲಿ ಸಾಧ್ಯವಾಗಿದೆ, ದೂರದ ಶ್ರೀಲಂಕಾದಲ್ಲಿ ವೃತ್ತಿಯಾಗಿದೆ. ಕನ್ನಾಡು ಯಾಕೋ.. ಹಲಸಿನ ಮೌಲ್ಯವರ್ಧನೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿಲ್ಲ. 'ಕೇರಳ-ಕರ್ನಾಟಕದ ನಡುವೆ ಹೋಲಿಸಿದರೆ ಇಡೀ ಕೇರಳ ರಾಜ್ಯವು ಹಲಸಿನ ವಿಚಾರದಲ್ಲಿ ಮುಂದೆ ಹೋಗುತ್ತಿದೆ.

ಜನಸಮುದಾಯ, ಆಡಳಿತವೂ ಸೇರಿದ ಹಾಗೆ ಹಲಸಿನ ಬಗೆಗಿನ ಹೊಸ ಉಮೇದು ಮಾಧ್ಯಮಗಳಲ್ಲೂ ಪ್ರತಿಫಲಿಸುತ್ತಿದೆ. ಹಲಸಿನ ಬಗ್ಗೆ ಇಡೀ ಕೇರಳ ಎದ್ದು ನಿಂತಂತಿದೆ. ಆ ಮಟ್ಟದ ಆಸಕ್ತಿ ಕನ್ನಾಡಿನಲ್ಲಿ ಕಂಡು ಬರುತ್ತಿಲ್ಲ,' ಹಲಸು ಆಂದೋಳನದ ರೂವಾರಿ 'ಶ್ರೀ' ಪಡ್ರೆ ವಿವರಿಸುತ್ತಾರೆ. ಅದೇನೇ ಇದ್ದರೂ, ಹಲಸಿನ ಅಭಿವೃದ್ಧಿಯ ಇಳಿಲೆಕ್ಕ ಆರಂಭವಾಗಿದೆ, 2012ನ್ನು ಕಾದು ನೋಡಿ ಎನ್ನುತ್ತಾ ನಸುನಗುತ್ತಾರೆ.

ಹಾಳೆಯಿಂದ 'ಒಳಾಂಗಣ ಚಪ್ಪಲಿ'





ಅಡಿಕೆಯಿಂದ ಏನು ಪ್ರಯೋಜನ? ಜಗಿದರೆ ಸ್ಫೂರ್ತಿ, ಮಾರಾಟ ಮಾಡಿದರೆ ಕಾಸು, ಸೋಗೆಯಿಂದ ಸೂರು, ಕಾಂಡದಿಂದ ಸೂರಿಗೆ ಬಳಸಬಹುದಾದ ಎಲ್ಲವೂ; ಹಾಳೆಯಿಂದ ಊಟದ ಬಟ್ಟಲು, ತಟ್ಟೆ, ಟೋಪಿ.. ಹೀಗೆ


ಅಡಿಕೆ ಹಾಳೆಯಿಂದ ತಯಾರಿಸಬಹುದಾದ ಉತ್ಪನ್ನಗಳ ಪಟ್ಟಿಗೆ ಈಗ 'ಪಾದುಕೆ'ಯ ಸೇರ್ಪಡೆ. ಕೇರಳ ರಾಜ್ಯದ ತ್ರಿಶೂರಿನ ಕೆ.ಎ.ಜೋಸೆಫ್ ಅವರ ಮಲ್ಟಿಕೇರ್ ಸಂಸ್ಥೆಯು ಅಡಿಕೆ ಹಾಳೆಯೇ ಮುಖ್ಯಕಚ್ಚಾವಸ್ತುವಾಗುಳ್ಳ ಚಪ್ಪಲಿಯನ್ನು ತಯಾರಿಸುತ್ತಿದೆ. ಏನಿಲ್ಲವೆಂದರೂ ತಿಂಗಳಿಗೆ ನಾಲ್ಕು ಸಾವಿರಕ್ಕೂ ಮಿಕ್ಕಿ ಮಾರಾಟ. ನೂರ ಇಪ್ಪತ್ತೈದು ರೂಪಾಯಿಯಿಂದ ನಾಲ್ಕು ನೂರು ರೂಪಾಯಿ ತನಕ ದರ.


ಚಪ್ಪಲಿ ಅಂದಾಗ ಅಬ್ಬಬ್ಬಾ ಅಂದರೂ ನಾಲ್ಕರಿಂದ ಆರು ತಿಂಗಳ ಬಾಳಿಕೆ. ಕೆಲವದರ ಆಯಷ್ಯ ಒಂದೇ ತಿಂಗಳು! ಹಾಳೆಯ ಪಾದುಕೆಯ ಕತೆ ತೀರಾ ಭಿನ್ನ. ಅದು ಒಳಾಂಗಣದಲ್ಲಿ ಧರಿಸುವಂತಾದ್ದು. ಎಲ್ಲೆಲ್ಲೂ ಧರಿಸುವಂತಿಲ್ಲ. ನೀರಲ್ಲಿ ಮುಳುಗಿಸುವಂತಿಲ್ಲ. ಹೀಗೆ ಎಚ್ಚರದಿಂದ ಒಳಾಂಗಣದಲ್ಲಿ ಮಾತ್ರ ಬಳಸಿದರೆ ವರ್ಷ ಬರಬಹುದು. ಆರೆಂಟು ತಿಂಗಳಂತೂ ಖಚಿತ. ಹಿಂಗಾಲು ಒಡೆಯುವವರು, ಕಾಲಿನಲ್ಲಿ ಆಣಿ, ಅಲರ್ಜಿ.. ಇರುವವರು ಮನೆಯೊಳಗೆ ಬಳಸುತ್ತಾರೆ.

ಜೋಸೆಫ್ ಅವರಿಗೆ ಈ ಐಡಿಯಾ ಬಂದದ್ದಾದರೂ ಹೇಗೆ? ರಾಜಸ್ಥಾನದಿಂದ ಹುಲ್ಲಿನಿಂದ ಮಾಡಿದ ಚಪ್ಪಲಿಗಳು ಬರುತ್ತವಷ್ಟೇ. ಇದನ್ನು ನೋಡಿ ಹಾಳೆಯ ಚಪ್ಪಲಿ ತಯಾರಿಸಿದರಂತೆ. ಪಾದಸ್ಪರ್ಶಿಸುವ ಭಾಗದಲ್ಲಿ ಮಾತ್ರ ಹಾಳೆಯ ಪದರ. ಮಿಕ್ಕಂತೆ ರಬ್ಬರ್.
ಹಾಳೆಯನ್ನು ಉರುಟಾಗಿ ಕತ್ತರಿಸುವುದು ತ್ರಾಸ. ಹಾಳೆಯ ದಪ್ಪದಲ್ಲೂ ಏರಿಳಿತವಿರುವುದರಿಂದ ಆರಂಭದಲ್ಲಿ ತೊಡಕು. ರಬ್ಬರಿನ ದಪ್ಪನೆಯ ಅಡಿಭಾಗದಲ್ಲಿ ಮೇಲ್ಬದಿಯಲ್ಲಿ ಹಾಳೆ ಅಂಟಿಸಿ ಅಡಿಭಾಗ ಸಿದ್ಧಪಡಿಸಿದರು ಜೋಸೆಫ್. ಹಾಳೆಯ ಹೊರಮೈಯ ಬಣ್ಣವು ಹಾಳೆಯಿಂದ ಹಾಳೆಗೆ ವ್ಯತ್ಯಾಸವಿರುತ್ತದೆ. ಕೃತಕವಾಗಿ ಯಾವುದೇ ಬಣ್ಣವನ್ನು ಕೊಡುವುದಿಲ್ಲ. ಎರಡು ಚಪ್ಪಲಿಯ ಬಣ್ಣ ಒಂದೇ ತೆರವಾಗಿಸುವಲ್ಲಿ ಬಹಳ ಎಚ್ಚರ ಬೇಡುತ್ತದೆ.


ತಮಿಳುನಾಡಿನಲ್ಲಿ ಬೇಡಿಕೆ ಅಧಿಕ. ಚೆನ್ನೈ, ಕೊಯಂಬತ್ತೂರು ಮೊದಲಾದ ನಗರದಲ್ಲಿ ಮಾರುಕಟ್ಟೆ. ದೆಹಲಿ, ಜೈಪುರಗಳಲ್ಲೂ ಕೇಳಿ ಪಡೆಯುವವರಿದ್ದಾರೆ. ಕೇರಳದಲ್ಲಿರುವ ಆಯುರ್ವೇದ ವೈದ್ಯಶಾಲೆಗಳಲ್ಲಿ ಚಿಕಿತ್ಸೆ ನಡೆಸುವ ಸ್ಥಳಗಳ ನೆಲದಲ್ಲಿ ಸಹಜವಾಗಿ ಎಣ್ಣೆ ಪಸೆ ಇರುತ್ತದೆ. ಇಂತಹ ಜಾಗದಲ್ಲಿ ಹಾಳೆ ಚಪ್ಪಲಿ ಕ್ಲಿಕ್ ಆಗಿದೆ.


ಜೋಸೆಫ್ ಎಲ್ಲಾ ಗಾತ್ರದ, ಎಲ್ಲರಿಗೂ ಸೂಕ್ತವಾಗುವ ಚಪ್ಪಲಿಗಳನ್ನು ತಯಾರಿಸುತ್ತಿದ್ದರೂ ಬಹುಪಾಲು ಹೆಣ್ಮಕ್ಕಳೇ ಗ್ರಾಹಕರು. ಬೇಡಿಕೆಗನುಸಾರವಾಗಿ ತಯಾರಿ. ಮೊದಲೇ ಸಿದ್ಧಪಡಿಸಿಟ್ಟು ಕೊಳ್ಳುವುದಿಲ್ಲ. ತಮ್ಮ ಉತ್ಪನ್ನಗಳ ಕ್ಯಾಟಲಾಗ್ ಮಾಡಿದ್ದಾರೆ. ಇದನ್ನು ನೋಡಿ ಆದೇಶ ಕೊಟ್ಟರೆ ಅಂತಹುದೇ ವಿನ್ಯಾಸದ ಪಾದುಕೆಗಳನ್ನು ಸಿದ್ಧಪಡಿಸುತ್ತಾರೆ. ಚಪ್ಪಲಿಯ 'ಸ್ಟ್ರ್ಯಾಪ್' ಕಚ್ಚಾವಸ್ತುವನ್ನು ಕುಟುಂಬಶ್ರೀ ಘಟಕಗಳ ಮೂಲಕ ಹೆಣೆಯಿಸಿಕೊಳ್ಳುತ್ತಾರೆ. ಇದಕ್ಕೆ ಉತ್ಪಾದನಾ ವೆಚ್ಚ ಹೆಚ್ಚು. ಕೆಲಸ ನಿಧಾನ.


ಅಂಗಡಿಗಳಲ್ಲಿ ಪಾದುಕೆಗಳನ್ನು ಖರೀದಿಸುವಂತೆ ಹಾಳೆಯ ಪಾದುಕೆಯನ್ನು ಖರೀದಿಸಲಾಗುವುದಿಲ್ಲ. ಜನರಿಗೆ ಬಾಳ್ವಿಕೆಯ ಗುಮಾನಿ. ಸ್ವಲ್ಪ ಹೆಚ್ಚೇ ಅನ್ನಿಸುವಂತಹ ದರ. ಅದಕ್ಕೂ ಮಿಗಿಲಾಗಿ ಚೀನಾ ನಿರ್ಮಿತ ಅಗ್ಗದ ಚಪ್ಪಲಿಗಳು ಮಾರುಕಟ್ಟೆಯಲ್ಲಿರುವುದರಿಂದ ಸಹಜವಾಗಿ ಸ್ಪರ್ಧೆ. ಕರಕುಶಲ ಮಳಿಗೆಗಳಲ್ಲಷ್ಟೇ ಮಾರಾಟ ಸಾಧ್ಯತೆ.


ಈ ಮಧ್ಯೆ ಕೊಯಂಬತ್ತೂರಿನ 'ಇಕೊಗ್ರೀನ್' ಸಂಸ್ಥೆಯು ಬಳಸಿ ಬಿಸಾಡಬಹುದಾದ ಹಾಳೆ ಚಪ್ಪಲಿಯನ್ನು ತಯಾರಿಸುತ್ತಿದೆ. 350-400 ರೂಪಾಯಿ ದರ. ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಇವುಗಳ ನೆಲೆ. ಈ ಚಪ್ಪಲಿಯ ಕೆಳಭಾಗ ಹಾಳೆಯದು. ಮೇಲೆ ಸೆಣಬು. ವರುಷಕ್ಕೆ ಐದು ಸಾವಿರ ಜತೆ ಚಪ್ಪಲಿ ಮಾರಾಟ!


ಜೋಸೆಪ್ ಉದ್ದಿಮೆ ಆರಂಭಿಸುವ ಮೊದಲು ದಿ.ಎಸ್.ಆರ್.ಕೆ.ಮೆನನ್ ಹಾಳೆಯ ಚಪ್ಪಲಿ ತಯಾರಿಸಿದ್ದರು ಎಂಬುದು ಗೊತ್ತಿರಲಿಲ್ಲ. ಎಪತ್ತರ ದಶಕಾರ್ಧದಲ್ಲಿ ಯಾವುದೇ ನೆರವು ಇಲ್ಲದೆ ಹಾಳೆಗೆ ಮರುಜನ್ಮ ಕೊಟ್ಟ ಮೆನನ್ ಅವರ ಕೆಲಸವನ್ನು ಜೋಸೆಫ್ ಮುಂದುವರಿಸುತ್ತಿದ್ದಾರೆ. (info@palmproducts.in)


(ಮಾಹಿತಿ : ಶ್ರೀ ಪಡ್ರೆ)

ಸಮಾರಂಭಗಳಿಗೆ ಬೇಕು, ಮರು ರೂಪುರೇಷೆ

ರವಿವಾರ (ಫೆ.26, ೨೦೧೨) ಸಂಜೆ ಪೆರ್ಲಂಪಾಡಿ ಸಿದ್ಧಮೂಲೆ ಮನೆಯಲ್ಲಿ ಚಿಕ್ಕ ಕಾರ್ಯಕ್ರಮ. ಮನೆ ಮಂದಿ, ನೆಂಟರಿಷ್ಟರು ಪ್ರೇಕ್ಷಕರು. ಪ್ಲೆಕ್ಸಿಗಳ ಭರಾಟೆಯಿಲ್ಲದ ಚೊಕ್ಕ ವೇದಿಕೆ. ವೇದಿಕೆಯಲ್ಲಿ ಸಂಘಟಕರು ಸೇರಿದಂತೆ ಇಬ್ಬರು ಅತಿಥಿಗಳು. ಮತ್ತೊಬ್ಬರು ಸಂಮಾನಿತರು. ಒಂದು ಗಂಟೆಯೊಳಗೆ ಕಲಾಪ ಮುಕ್ತಾಯ.

ವಿದ್ವಾಂಸ, ಅನುವಾದಕ, ಬಹುಭಾಷಾ ಪಂಡಿತ ಸಿದ್ಧಮೂಲೆ ಶಂಕರನಾರಾಯಣ ಭಟ್ಟರನ್ನು ಅವರ ಮನೆಯಲ್ಲೇ ಸಂಮಾನಿಸಿದ ಪರಿಯಿದು. ಮಂಗಳೂರಿನ ಮುದ್ದಣ ಪ್ರಕಾಶನವು ನಂದಳಿಕೆ ಬಾಲಚಂದ್ರ ರಾಯರ ನೇತೃತ್ವದಲ್ಲಿ 'ಮುದ್ದಣ ಪುರಸ್ಕಾರ'ರವನ್ನು ನೀಡಿದ ಸಮಾರಂಭ. ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ಟರು ಸಮಾರಂಭದ ಅಧ್ಯಕ್ಷರು. ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತಾಧಿಕಾರಿ ಎ.ವಿ.ನಾರಾಯಣ ಅವರಿಂದ ಅಭಿನಂದನಾ ಮಾತು.

ಭಾವನಾತ್ಮಕವಾದ ಸಂಮಾನ. ಪುರಸ್ಕಾರ ನೀಡುವವರಿಗೂ, ಸ್ವೀಕರಿಸುವವರಿಗೂ ಖುಷಿ ನೀಡಿದ ಕ್ಷಣ. ಮನೆಯ ಹಿರಿಯರನ್ನು ಗೌರವಿಸಿದ್ದಕ್ಕೆ ಮನೆಮಂದಿ ಎಲ್ಲರೂ ಸಾಕ್ಷಿಭೂತರಾದರು. ಆದರದ ಉಪಚಾರ. ಹಿರಿಯರ ಸಾಧನೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಅವಕಾಶ. ಸಂಮಾನಿತರ ಮನೆಗೆ ತೆರಳಿ ಸಂಮಾನಿಸುವ ಮುದ್ದಣ ಪ್ರಕಾಶನದ ಪರಿಪಾಠ ಶ್ಲಾಘನೀಯ.
ಇಂದು ಸಂಮಾನ, ಅಭಿನಂದನೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಲೆಕ್ಕ ಹಾಕಿದರೆ ಕನಿಷ್ಠ ದಿವಸಕ್ಕೆ ಒಂದರಂತೆ ನಡೆಯುತ್ತಿರುತ್ತದೆ. ಸುಮಾರು ಶೇ.50ರಷ್ಟು ಮಾತ್ರ ಉತ್ತಮ ಸದುದ್ದೇಶದಿಂದ, ಭಾವನಾತ್ಮಕವಾಗಿ, ಗೌರವಯುತವಾಗಿ ನಡೆಯುವಂತಾದ್ದು. ಮಿಕ್ಕುಳಿದ ಕೆಲವಿದೆಯಲ್ಲಾ, ಸಮಾರಂಭವನ್ನು ವೀಕ್ಷಿಸಿದ ಮೇಲೆ 'ಯಾಕೆ ಬಂದೆವಪ್ಪಾ' ಅನ್ನಿಸುವಷ್ಟು ಮಾನಸಿಕ ಕಿರಿಕಿರಿ.

ಕುಡ್ಲದಲ್ಲೊಮ್ಮೆ ಪ್ರಶಸ್ತಿ ಪ್ರದಾನ ಕಲಾಪದಲ್ಲಿ ಭಾಗವಹಿಸಿದ್ದೆ. ವೇದಿಕೆಯಲ್ಲಿ ಹದಿನಾಲ್ಕು ಮಂದಿ. ನಿರ್ವಾಹಕನ ಆಸನ ಸೇರಿದರೆ ಹದಿನೈದು. ಮೂರುಮುಕ್ಕಾಲು ಗಂಟೆ ಲಂಬಿಸಿದ ಕಾರ್ಯಕ್ರಮದಲ್ಲಿ ಶೇ.40ರಷ್ಟು ನಿರ್ವಾಹಕನದ್ದೇ ಕಾರುಬಾರು. ಅಭಿನಂದನಾ ಭಾಷಣವೇ ಒಂದೂಕಾಲು ಗಂಟೆ! ಈ ಭಾಷಣವನ್ನು ಹಿಂಡಿ ತೆಗೆದರೆ ಐದು ನಿಮಿಷ ಮಾತನಾಡುವಷ್ಟು ವಿಷಯ ಸಿಕ್ಕಿತಷ್ಟೇ!

ಭಾಷಣದ ಎಳೆಯನ್ನು ಜಗ್ಗಿ ಇತರರು 'ಅವರೇ.. ಇವರೇ.. ಎನ್ನುತ್ತಾ' ಕೊರೆತ. ಹಕ್ಕಿನದ್ದಾದ 'ಪ್ರಶಸ್ತಿ ಪುರಸ್ಕೃತರ ಎರಡು ಮಾತು'ಗಳು ಒಂದು ನಿಮಿಷಕ್ಕೆ ಸೀಮಿತವಾಗಬೇಕಾದಲ್ಲಿ ಬರೋಬ್ಬರಿ ಅರ್ಧ ಗಂಟೆ ತೆಕ್ಕೊಳ್ಳಬೇಕೇ? 'ತಾನು ಈ ಪ್ರಶಸ್ತಿಗೆ ಅರ್ಹನೋ, ಅಲ್ಲವೋ' ಎಂಬ ಸಂಶಯದೊಂದಿಗೆ ಆರಂಭವಾದ ಮಾತುಗಳು ಸಂಘಟಕರಿಗೆ ಕನ್ನಡಿ ಹಿಡಿದಿತ್ತು! ಪ್ರಸ್ತಾವನೆ, ಸ್ವಾಗತ, ಧನ್ಯವಾದಗಳೂ ಉಪನ್ಯಾಸಗಳೇ ಆದುವು.

ಬಳಿಕ ಪುಟಾಣಿಗಳಿಂದ ಯಕ್ಷಗಾನ ಕಾರ್ಯಕ್ರಮವಿತ್ತು. ಎರಡೂವರೆ ಗಂಟೆಯಿಂದ ಕಿರೀಟಧರಿಸಿದ ಬಾಲ ಕಲಾವಿದರು ಸುಸ್ತಾಗಿದ್ದರು. ಕೆಲವರು ನಿದ್ರಿಸಿದ್ದರು. 'ಆಟ ಬೇಗ ಮುಗಿಸಿ' ಯಕ್ಷಗಾನ ತಂಡಕ್ಕೆ ಆದೇಶ! ಪ್ರೌಢರ ಯಕ್ಷಗಾನವಾದರೆ ಓಕೆ. 'ಹೇಳಿ ಕೊಟ್ಟಷ್ಟನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸುವ' ಮಕ್ಕಳಿಂದ 'ಬೇಗ ಮುಗಿಸಲು' ಸಾಧ್ಯವೇ? ಮೂರು ಗಂಟೆಗಳ ಕಾಲದ ಯಕ್ಷಗಾನ ಬಯಲಾಟ ಒಂದೂ ಮುಕ್ಕಾಲು ಗಂಟೆಯೊಳಗೆ ಮುಗಿಯುವಾಗ ರಾತ್ರಿ ಹನ್ನೊಂದು ಗಂಟೆ.

ಇಂತಹ ಸಮಾರಂಭಗಳ ಆಮಂತ್ರಣ ಪತ್ರಿಕೆಗಳೇ ಬಣ್ಣದ ವೇಷಗಳಾಗುತ್ತವೆ. ಎರಡು ಪುಟ ಪೂರ್ತಿ ಸಮಿತಿಯ ಸದಸ್ಯರ ನಾಮಾವಳಿಗಳು. ಎಷ್ಟು ಮಂದಿ ಆಗಮಿಸಿದ್ದಾರೋ ಗೊತ್ತಿಲ್ಲ. ಸಂಘಟಕರಿಗೂ ಇವರೆಲ್ಲರೂ ಬರಬೇಕೆಂದೇನೂ ಇಲ್ಲ! ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರಿದೆ ಎಂದು ಬಹುತೇಕರಿಗೂ ಗೊತ್ತಿಲ್ಲ! ಇಂತಹ 'ಭರ್ಜರಿ' ಸಮಾರಂಭಗಳಲ್ಲಿ ಆಗುವ ಸಂಮಾನ, ಪ್ರಶಸ್ತಿ ಪ್ರದಾನಗಳು ಪ್ರೇಕ್ಷಕರಿಗೆ ಖುಷಿಯಾಗಲಂತೂ ಅಲ್ಲ.

ಐದಾರು ಮಂದಿಯ 'ಪ್ರೀತ್ಯರ್ಥ'ಕ್ಕೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ನಗರದಲ್ಲಿ ಬೆನ್ನು ತಟ್ಟುವ ದಾನಿಗಳು ಇರುತ್ತಾರೆ. ಕಾರ್ಯಕ್ರಮದ ಗುಣಮಟ್ಟಕ್ಕಿಂತಲೂ, ದೇಣಿಗೆಗಾಗಿ ಬಂದಿರುವ ವ್ಯಕ್ತಿಗಳ ಮುಖ ನೋಡಿ 'ದಾನ' ನೀಡಿರುತ್ತಾರಷ್ಟೇ. ದಾನ ನೀಡದಿದ್ದರೆ? 'ಅಕರಾಳ-ವಿಕಾರಳ' ದರ್ಶನ! ಆಟೋಟ ಸ್ಪರ್ಧೆಯಲ್ಲಿ ಬಹುಮಾನಿತರ ಹೆಸರು ಘೋಷಿಸುವಂತೆ, ದಾನಿಗಳ ಹೆಸರನ್ನೂ ಸಮಾರಂಭದಲ್ಲಿ ಬಿತ್ತರಿಸಲಾಗುತ್ತದೆ. ದಾನ ನೀಡಿದವರು ಉಪಸ್ಥಿತರಿದ್ದರಂತೂ ಹೊಗಳಿಕೆಯ ಮಹಾಪೂರ. ಮುಜುಗರವಾಗುವಷ್ಟು. ವಾಕರಿಕೆ ಬರುವಷ್ಟು. ಅದೂ ಸಮಯದ ಪರಿವೆ ಇಲ್ಲದೆ.

ಹತ್ತೋ ಹದಿನೈದೋ ಮಂದಿ ವೇದಿಕೆಯಲ್ಲಿ ಕೂರಿಸಿದ ಬಳಿಕ ಸಂಘಟಕರಿಗೂ ಕನಿಷ್ಠ ಶಿಸ್ತಾದರೂ ಬೇಡ್ವೇ? ನಿರ್ವಾಹಕನಿಂದ ತೊಡಗಿ, ಸಂಘಟಕರ (ಕೆಲವೇ ಮಂದಿ) ತನಕ ವೇದಿಕೆಯಲ್ಲಿ 'ಅತ್ತಿಂದಿತ್ತ, ಇತ್ತಿಂದತ್ತ' ಸಂಚರಿಸುವ ಚಾಳಿ. ಛಾಯಾಚಿತ್ರಗ್ರಾಹಕರೇ ಕಲಾಪವನ್ನು ನಿಯಂತ್ರಿಸಿದ ದೃಷ್ಟಾಂತ ಎಷ್ಟು ಬೇಕು? ಈ ಕುರಿತು ಸ್ನೇಹಿತ ಛಾಯಾಚಿತ್ರಗ್ರಾಹಕರೊಬ್ಬರಲ್ಲಿ ಮಾತನಾಡಿಸಿದಾಗ, 'ಮತ್ತೆ ಫೋಟೋ ಹಾಳಾದರೆ ಅವರು ಹಣ ಕೊಡ್ತಾರಾ. ಹಾಗಾಗಿ ನಮಗೆ ಬೇಕಾದಂತೆ ನಿಲ್ಲಿಸಿ ಫೋಟೋ ತೆಗೆಯುತ್ತೇವೆ,' ಎನ್ನುತ್ತಾರೆ. ಅದೂ ಸರಿ ಬಿಡಿ.

ಇವರ ಮಾತು ಕೇಳಿದಾಗ ಖ್ಯಾತ ಛಾಯಾಚಿತ್ರಗ್ರಾಹಕ ಮಂಗಳೂರಿನ ಯಜ್ಞರು ಹೇಳಿದ ಮಾತು ನೆನಪಾಗುತ್ತದೆ, 'ಕಾರ್ಯಕ್ರಮ ನಡೆಯುವುದು ನನಗಾಗಿ ಅಲ್ಲ. ಅಲ್ಲಿ ಏನು ನಡೆಯುತ್ತದೋ ಅದನ್ನು ಸದ್ದಿಲ್ಲದೆ ತೆಗೆಯುವುದು ಫೋಟೋಗ್ರಾಫರ್ನ ಕೆಲಸ'.
ಇಷ್ಟೆಲ್ಲಾ ಅಬ್ಬರವಿದ್ದೂ, ಮರುದಿವಸ ಪತ್ರಿಕೆಗಳಲ್ಲಿ ಸುದ್ದಿ ಬರಲೇ ಬೇಕು. ಯಾರೋ ಒಬ್ಬರ ಹೆಸರು ಬಿಟ್ಟು ಹೋದರಂತೂ ಸಂಘಟನೆಯಲ್ಲೇ ವಿಚ್ಛೇದನದ ರಾದ್ದಾಂತ. ಪತ್ರಕರ್ತರಿಗಂತೂ ನಿತ್ಯ ಕಿರಿಕಿರಿ. 'ಒತ್ತಾಯಕ್ಕೆ ಕಟ್ಟುಬಿದ್ದು' ಕಾರ್ಯಕ್ರಮದಲ್ಲಿ ಭಾಗವಹಿಸಿ ಮೂರೂವರೆ ಗಂಟೆ ಕೊಲ್ಲುವ ಕ್ಷಣಗಳು ಇವೆಯಲ್ಲಾ.. ರೋಷದ ಕ್ಷಣಗಳು. ಅಲ್ಲ, ಜಿಗುಪ್ಸೆಯ ಘಳಿಗೆಗಳು.. ಸಮಾರಂಭಗಳಿಗೆ ಬೇಕು, ಮರು ರೂಪುರೇಷೆ.

ಸಂಮಾನಿತರ ಯಾ ಪ್ರಶಸ್ತಿ ಪುರಸ್ಕೃತರ ಸಾಧನೆಗಳಿಗೆ, ಬದುಕಿಗೆ ಕನ್ನಡಿ ಹಿಡಿಯುವಂತಹ ವ್ಯವಸ್ಥೆಗಳು ಸಮಾರಂಭದಲ್ಲಿ ಬರಬೇಕು. ವೇದಿಕೆಯಲ್ಲಿ ಗರಿಷ್ಠ ಅಂದರೆ ಐದು ಮಂದಿ. ಅಧ್ಯಕ್ಷರೇ ನಿರ್ವಾಹಕ. ನಿರೂಪಕ ಬೇಕೆಂದಾದರೆ ಆತನಿಗೆ ಪ್ರತ್ಯೇಕವಾದ 'ಕಟ್ಟುಪಾಡು'ಗಳನ್ನು ರೂಪಿಸಲೇ ಬೇಕು. ಒಂದು- ಒಂದೂವರೆ ಗಂಟೆಯೊಳಗೆ ಇಡೀ ಕಲಾಪವನ್ನು ಮುಗಿಸುವತ್ತ ಯೋಚನೆ ಮಾಡಬೇಕಾದ ದಿನಗಳಿವು. ಇದರಿಂದಾಗಿ ಯಾವ ಉದ್ದೇಶಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೋ ಅದು ಈಡೇರುತ್ತದೆ. ನ್ಯಾಯ ಸಲ್ಲುತ್ತದೆ.

ಈ ಹಿನ್ನೆಲೆಯಲ್ಲಿ ನಂದಳಿಕೆ ಬಾಲಚಂದ್ರ ರಾಯರು ಹಮ್ಮಿಕೊಳ್ಳುವ 'ಮುದ್ದಣ ಪ್ರಕಾಶನ'ದ ಕಲಾಪಗಳು ಅನುಸರಣ ಯೋಗ್ಯ. ಕಾಲದ ಅನಿವಾರ್ಯತೆ. ಮಾನನೀಯರಾದ ಮಲ್ಪೆ ಶಂಕರನಾರಾಯಣ ಸಾಮಗ, ಡಾ.ಹಾ.ಮ.ನಾಯಕ್, ಪ್ರೊ:ಕು.ಶಿ.ಹರಿದಾಸ್ ಭಟ್, ಡಾ.ಶೇಣಿ, ಮಲ್ಪೆ ರಾಮದಾಸ ಸಾಮಗ (ಇವರೆಲ್ಲಾ ಈಗ ಕೀರ್ತಿಶೇಷರು); ಡಾ. ಅಮೃತ ಸೋಮೇಶ್ವರ, ಪ್ರೊ: ವೆಂಕಟಸುಬ್ಬಯ್ಯ, ಬಲಿಪ ನಾರಾಯಣ ಭಾಗವತ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಡಾ.ಪಾಟೀಲ ಪುಟ್ಟಪ್ಪ, ಪ್ರೊ.ಟಿ.ಕೇಶವ ಭಟ್ - ಈ ಹಿಂದಿನ ವರುಷಗಳಲ್ಲಿ ಮುದ್ದಣ ಪುರಸ್ಕಾರ ಪಡೆದವರು. ಈ ವರುಷ ಸಿದ್ಧಮೂಲೆ ಶಂಕರನಾರಾಯಣ ಭಟ್ಟರಿಗೆ ಮುದ್ದಣ ಪುರಸ್ಕಾರ.

ತ್ರಿಚಕ್ರದಲ್ಲಿದೆ, ಬದುಕಿನ 'ಚಕ್ರ'

ಬೆಳಿಗ್ಗೆ ಏಳು ಗಂಟೆಯ ಆಜುಬಾಜು. ಬೆಂಗಳೂರಿನಿಂದ ರೈಲಲ್ಲಿ ಬಂದಿಳಿದಿದ್ದೆ. ಪುತ್ತೂರು ರೈಲ್ವೇ ಸ್ಟೇಷನ್ನಿಂದ ಪರ್ಲಡ್ಕಕ್ಕೆ ರಿಕ್ಷಾ ಸವಾರಿ. ಈ ಮಾರ್ಗದಲ್ಲಿ ದಶಕಕ್ಕಿಂತಲೂ ಹೆಚ್ಚು ಓಡಾಡಿದ್ದು ಗರಿಷ್ಠ ಅಂದರೆ ನಲವತ್ತು ರೂಪಾಯಿ ಬಾಡಿಗೆ ನೀಡಿದ್ದೆ. ಈಗ ಸ್ವಲ್ಪ ಹೆಚ್ಚಾಗಿರಬಹುದು ಎನ್ನುತ್ತಾ ಐವತ್ತು ರೂಪಾಯಿ ನೀಡಿದೆ. 'ಎಲ್ಲಿದ್ದೀರಿ ನೀವು, ಎಂಭತ್ತು ರೂಪಾಯಿ ಕೊಡಿ. ಮೊದಲೇ ಬಾಡಿಗೆ ಕೇಳಬಾರ್ದಾ, ಈಗ ಎಲ್ಲಾ ರೇಟ್ ಜಾಸ್ತಿಯಾಗಿಲ್ವಾ,..' ಚಾಲಕ ಮಹಾಶಯ ಗೊಣಗುತ್ತಲೇ ಇದ್ದ.

ಚಾಲಕ ಆಸನದಲ್ಲಿ ಕುಳಿತಾಗ ಸ್ಫುರಿಸುವ 'ಭಾಷಾ ವೈವಿಧ್ಯ'ದ ಸೊಗಸು ಅಪಾರ! ಕೆಲವು ಚಾಲಕರ 'ಕಂಠಶ್ರೀ'ಯನ್ನು ತೀರಾ ಹತ್ತಿರದಿಂದ ಆಲಿಸಿದ ಕ್ಷಣಗಳು ನೆನಪಿದ್ದುದರಿಂದ ಎಂಭತ್ತು ರೂಪಾಯಿ ನೀಡಿ ವಿದಾಯ ಹೇಳಿದೆ. ರಿಕ್ಷಾ ನಂಬ್ರವನ್ನು ನೋಟ್ ಮಾಡಿಕೊಳ್ಳಲು ಮರೆತೆ. ಹಾಗಾಗಿ ರಿಕ್ಷಾ ಯೂನಿಯನ್ಗೆ 'ಇತರ ಪ್ರಯಾಣಿಕರಿಗೆ ಮುಂದೆ ತೋಂದರೆಯಾಗದಂತೆ' ದೂರು ನೀಡುವ ಅವಕಾಶ ಕಳೆದುಹೋಯಿತು.

ಇದು ಒಂದು ಘಟನೆಯಷ್ಟೇ. ಇಂತಹ ಹತ್ತಾರು ತ್ರಿಚಕ್ರಿಯ ಕತೆಗಳು ರೋಚಕ! ಬಹುತೇಕರು ಒಂದಲ್ಲ ಒಂದು ರೀತಿಯಲ್ಲಿ ಇಂತಹ ಘಟನೆಗಳ ಫಲಾನುಭವಿಗಳು! 'ಪುತ್ತೂರಿಗೆ ರಿಕ್ಷಾ ಸಾಕು' ಎಂದು ಕರ್ನಾಟಕ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಪುರಂದರ ಭಟ್ಟರ ಹೇಳಿಕೆ ಓದಿದಾಗ ನೆನಪಿನ ಬಂದಷ್ಟನ್ನು ಊರುಸೂರಿನಲ್ಲಿ ದಾಖಲಿಸಬೇಕೆನ್ನಿಸಿತು.

ದಶಕದ ಹಿಂದೆ. ಪೆರಾಜೆಯಿಂದ ಸುಳ್ಯಕ್ಕೆ ಆರು ಕಿಲೋಮೀಟರ್ ದೂರ. ಬಸ್ ವಿರಳ. ರಿಕ್ಷಾಕ್ಕೆ ಶರಣು. ಆಗಲೇ ಏಳೆಂಟು ರಿಕ್ಷಾಗಳಿದ್ದುವು. ಅದರಲ್ಲಿ ವಾಸು/ವಾಸುದೇವ ಎಂಬವರ 'ಚಿರಂಜೀವಿ' ರಿಕ್ಷಾ ಮನೆಮಾತು. ಕಾರಣ ಚಾಲಕನಲ್ಲಿಟ್ಟಿದ್ದ ನಂಬುಗೆ, ವಿಶ್ವಾಸ. ಆತನ ರಿಕ್ಷಾ ಬರಲು ಕಾಯುವ ಮಂದಿ ಅಧಿಕ. ಹಾಗೆಂತ ಉಳಿದ ರಿಕ್ಷಾದವರ ಸೇವೆಯೂ ಚೆನ್ನಾಗಿತ್ತು.

ಬೆಳಿಗ್ಗೆ ಏಳೂವರೆಗೆ ವಾಸುವಿನ ರಿಕ್ಷಾ ಸುಳ್ಯಕ್ಕೆ ಹೊರಡುವಾಗಲೇ ಗಜಗರ್ಭ. ಜತೆಗೆ ಆತನ ಕಿಸೆಯಲ್ಲಿ ಮೆಡಿಕಲ್ ಚೀಟಿ, ಪೇಪರ್, ಪಾರ್ಮ್ಗಳು.. ಹೀಗೆ ಬೇಡಿಕೆಗಳ ಪಟ್ಟಿ. ಅವನ್ನು ಪೂರೈಸಿದ್ದಕ್ಕೆ ಭಕ್ಷೀಸು. ಯಾವುದಾದರೊಂದು ವಸ್ತು ಅಗತ್ಯ ಬೇಕೆಂದಾದರೆ 'ಚಿರಂಜೀವಿಯಲ್ಲಿ ಹೇಳಿದರೆ ಆಯಿತು' ಎನ್ನುವಷ್ಟರ ಮಟ್ಟಿಗೆ ಎಲ್ಲರ ಬದುಕಿಕೊಂದಿಗೆ ವಾಸು ಹೊಕ್ಕಿದ್ದ. ಆಕಸ್ಮಿಕವಾದಾಗ ಅಕಾಲದಲ್ಲೂ ಆತನ ಮನೆಯ ಕದ ತಟ್ಟಬಹುದಿತ್ತು. ಎಂದೂ ಗಂಟುಮುಖದವನಲ್ಲ. ನಗುನಗುತ್ತಾ ಇರುವವನೂ ಅಲ್ಲ. ಮಂದಸ್ಮಿತ. ಹೆಚ್ಚು ವಿದ್ಯಾಭ್ಯಾಸವೂ ಆಗಿರಲಿಲ್ಲ. ಪ್ರಯಾಣಿಕರಲ್ಲಿ ಎಂದೂ 'ಅಕರಾಳ-ವಿಕರಾಳ' ದರ್ಶನ ಮಾಡಿದವನಲ್ಲ! ರಿಕ್ಷಾ ಮಾತ್ರವಲ್ಲ, ಬಾಡಿಗೆಗಿರುವ ಎಲ್ಲಾ ವಾಹನಗಳ ಚಾಲಕರೂ ಅನುಸರಿಸಬಹುದಾದ 'ದೊಡ್ಡ ಗುಣ'ಗಳನ್ನು ವಾಸು ಅನುಭವದಲ್ಲಿ ರೂಢಿಸಿಕೊಂಡಿದ್ದ.

ಪುರಂದರ ಭಟ್ಟರ ಹೇಳಿಕೆ ಓದುತ್ತಿದ್ದಾಗ ಚಿರಂಜೀವಿಯ ನೆನಪಿನೊಂದಿಗೆ ಪುತ್ತೂರಿನ ಕೆಲವು ರಿಕ್ಷಾಗಳು ಮಿಂಚಿ ಮರೆಯಾಯಿತು! ಚಾಲಕನಿಗೆ ಬೇಕೋ ಬೇಡ್ವೋ ಬೊಬ್ಬಿಡುವ ನಾಲ್ಕಾರು ಸ್ಪೀಕರ್ಗಳು. ವಾಲ್ಯೂಂ ಕಡಿಮೆ ಮಾಡಿ ಎಂದು ಬೇಡಿಕೆ ಮುಂದಿಟ್ಟಾಗ, 'ಬೇಕಾದರೆ ಬನ್ನಿ, ಇಲ್ಲದಿದ್ದರೆ ಇಳಿಯಿರಿ, ನಮಗೋಸ್ಕರ ಬರಬೇಡಿ' ಎನ್ನುವ ಖಡಕ್ ಉತ್ತರ. ಈ ಮಾತನ್ನು ಆಲಿಸಿದಾಗ ನನಗನ್ನಿಸಿದ್ದು ಇಷ್ಟು - ನಿಜಕ್ಕೂ ಇಂತಹವರು ಹೊಟ್ಟೆಪಾಡಿಗಾಗಿ ರಿಕ್ಷಾ ಓಡಿಸುವುದಿಲ್ಲ. ಸಂಜೆಯಾಗುವಾಗ 'ಬಾಡಿಗೆ ಹಣ ಎಷ್ಟು ಬಂತು, ಅದರಲ್ಲಿ ಎಷ್ಟು ಉಳಿಯಿತು' ಎಂಬ ಲೆಕ್ಕಾಚಾರ ಹಾಕುವ; ಅದರಿಂದ ಮನೆಗೆ ಅಕ್ಕಿಯೋ, ಬೇಳೆಯೋ ಒಯ್ಯಬೇಕೆನ್ನುವ 'ಬದುಕಿನ ಜವಾಬ್ದಾರಿ' ಇರುವವರಲ್ಲಿ ಇಂತಹ ಮಾತು ಖಂಡಿತಾ ಬಾರದು.

'ಬಿಸಿರಕ್ತ'ದ ಗುಣ ಇಂತಹ ವರ್ತನೆಯನ್ನು ಸೃಷ್ಟಿಸುತ್ತದೆ. ಇವರಿಗೆ ಮನೆಗೆ ಹೋದಾಗ ಬಿಸಿಬಿಸಿ ಅನ್ನ ತಯಾರಾಗಿರುತ್ತದೆ. ತಟ್ಟೆ ಹಿಡಿದರೆ ಆಯಿತಷ್ಟೇ. ಅಪ್ಪ-ಅಮ್ಮ ದುಡಿದು ಹೇಗೂ ತರುತ್ತಾರೆ. ಮನೆಗೆ ಸಂಪಾದನೆಯನ್ನು ಒಯ್ಯುವ ಹಂಗಿರುವುದಿಲ್ಲ. ರಿಕ್ಷಾ ನೆಪ ಮಾತ್ರ. ಇವರಿಗೆ 'ಸಮಯ ಕೊಲ್ಲುವುದು' (ಟೈಂಪಾಸ್) ಮುಖ್ಯ. ಈ ರೀತಿಯ ವ್ಯಕ್ತಿಗಳಿಗೆ ಕಷ್ಟ, ಸುಖ, ಒಳ್ಳೆಯ ಮಾತುಗಳು.. ಯಾವುವೂ ಪಥ್ಯವಾಗುವುದಿಲ್ಲ.
ಈಚೆಗೆ ಒಂದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದೆ. ಐದಾರು ಮಂದಿ ತುಂಬಿದ್ದರು. ಈತನ ರಿಕ್ಷಾಕ್ಕೆ ಯಾರಾದರೂ ಅಡ್ಡ ಬಂದರೆ, ಬೇರೆ ವಾಹನ ಹಿಂದಿಕ್ಕಿ ಹೋದರೆ, ಎದುರಿದ್ದ ವಾಹನ ಬ್ರೇಕ್ ಹಾಕಿದರೆ.. ಸಾಕು, ಕೆಂಡಾಮಂಡಲವಾಗುತ್ತಿದ್ದ. ಜನ್ಮ ಜಾಲಾಡುತ್ತಿದ್ದ. ಪ್ರಯಾಣಿಕರು ತಲೆತಗ್ಗಿಸುವಷ್ಟೂ ಸಹಸ್ರನಾಮಗಳ ಅರ್ಚನೆ! ಇಳಿಯುವಾಗ ಯಾರಾದರೂ ಹತ್ತೋ, ಇಪ್ಪತ್ತು ರೂಪಾಯಿಗಳ ನೋಟು ಕೊಟ್ಟರೆ ಸಾಕು, ಚಿಲ್ಲರೆಗಾಗಿ ಗಲಾಟೆ, ಅಸಹನೆ. ನಂತರ ಆತನ ಚಿಲ್ಲರೆ ಗಂಟು ಹೊರಬರುತ್ತೆನ್ನಿ. ಇದು ಒಂದು ದಿವಸದ ಪ್ರಹಸನವಲ್ಲ, ನಿತ್ಯ ಪ್ರದರ್ಶನ. 'ರಿಕ್ಷಾದಲ್ಲಿ ಬರುವವರೆಲ್ಲಾ ನನ್ನಷ್ಟು ಸುಭಗ(?)ರಲ್ಲ' ಎಂಬ ಕನಿಷ್ಠ ಜ್ಞಾನವಾದರೂ ಬೇಡ್ವಾ?

ಚಿಲ್ಲರೆ ಕಿಸೆಯಲ್ಲಿಟ್ಟುಕೊಂಡು ನೋಟು ನೀಡುವ ಚಾಳಿ ಹೆಚ್ಚಿನ ಪ್ರಯಾಣಿಕರಿಗಿದೆ. ಇದನ್ನು ನವಿರಾಗಿ ಹೇಳಬಹುದಲ್ವಾ. ಕೆಲವು ಸಲ ಚಿಲ್ಲರೆ ಕೈಕೊಟ್ಟಾಗ ಚಾಲಕರೂ ಕೈಕೊಡುತ್ತಾರೆ! ಚಿಲ್ಲರೆ ಒಯ್ಯಲು ಮರೆತು ಹೋಗಿ ಅಥವಾ ಚಿಲ್ಲರೆ ಇಲ್ಲದ ಕಾರಣ; ಐದು ರೂಪಾಯಿ ಕೊಡಬೇಕಾದಲ್ಲಿ ಹತ್ತು, ಇಪ್ಪತ್ರ ನೋಟನ್ನು ತೆತ್ತು ತೆಪ್ಪಗಿರುವ ದಿವಸಗಳು ತಿಂಗಳಲ್ಲಿ ಏಳೆಂಟು ಸಲವಾದರೂ ಬಂದೇ ಬರುತ್ತದೆ. ಇನ್ನೊಮ್ಮೆ ಆ ರಿಕ್ಷಾದಲ್ಲಿ ಪ್ರಯಾಣ ಮಾಡುವ ಸಂದರ್ಭ ಬಂದಾಗ ಹಿಂದಿನ ಘಟನೆ ಅವರಿಗೆ ನೆನಪಿರುವುದಿಲ್ಲ. ನೆನಪಿರಬೇಕಾದ್ದೂ ಇಲ್ಲ ಬಿಡಿ!

ರಿಕ್ಷಾ ಚಾಲೂ ಇದ್ದಾಗ ಮೊಬೈಲಲ್ಲಿ ಮಾತನಾಡುವ, ಸಿಗರೇಟು ಸೇದುತ್ತಿರುವ, ಸೀಟಲ್ಲಿ ಪ್ರಯಾಣಿಕರಿದ್ದರೂ ಎದುರು ಸೀಟಲ್ಲಿ ಸ್ನೇಹಿತನನ್ನು ಕುಳ್ಳಿರಿಸಿ ಗೇಲಿ-ತಮಾಶೆ ಎನ್ನುತ್ತಾ 'ಗಮ್ಮತ್ತು' ಮಾಡುವ, ನಿತ್ಯ ಮುಖ ಗಂಟಿಕ್ಕಿಕ್ಕೊಂಡಿರುವ, ಸಹಜ ಬಾಡಿಗೆಗಿಂತಲೂ ದುಪ್ಪಟ್ಟು ಪಡೆಯುವ (ಅಲ್ಲ, ವಸೂಲಿ ಮಾಡುವ)... ಹೀಗೆ ವಿಭಿನ್ನ 'ತಾಜಾ ಮುಖ'ಗಳ ಪರಿಚಯಕ್ಕೆ ಸಾಹಸ ಪಡಬೇಕಾಗಿಲ್ಲ.

ಇಂದು ರಿಕ್ಷಾ ಸಂಪಾದನೆಯನ್ನೇ ನಂಬಿ ಬದುಕು ನಡೆಸುವ ಎಷ್ಟು ಮಂದಿ ಚಾಲಕರಿಲ್ಲ? ಆಳುವನ್ನು ನುಂಗಿ ಉತ್ತಮ ಸೇವೆ ಕೊಡುವ, ಅಳುವಿನ ಕಾರಣವನ್ನು ಪ್ರಯಾಣಿಕರ ಮೇಲೆ ಎರಚದೆ 'ಚಾಲಕ' ಸ್ಥಾನಕ್ಕೆ ಗೌರವ ತಂದಿಟ್ಟ ಚಾಲಕರ ಸೇವೆ ಎಲ್ಲೂ ದಾಖಲಾಗುವುದಿಲ್ಲ. ಪ್ರಯಾಣಿಕರಲ್ಲೂ 'ಒರಟು' (ಪೆದಂಬು) ತೋರಿಸುವವರಿಲ್ವಾ. ಅಂತಹವರಲ್ಲಿ 'ಅಕರಾಳ-ವಿಕಾರಳ' ತೋರಬಹುದೇನೋ? ಎಲ್ಲರನ್ನೂ ಒಂದೇ ತಟ್ಟೆಯಲ್ಲಿ ತೂಗುವಂತಿಲ್ಲ ಅಲ್ವಾ.
ದಶಕ, ಎರಡು ದಶಕಕ್ಕೂ ಮಿಕ್ಕಿ ಸ್ವಂತ ರಿಕ್ಷಾವನ್ನು ಹೊಂದಿ ಅದನ್ನು ದೇವರೆಂದು ಪೂಜಿಸುವ ಹಲವಾರು ಮಂದಿ ಚಾಲಕರ ಪರಿಚಯವಿದೆ. ಇವರಿಗೆ ಟ್ರಾಫಿಕ್ ರೂಲ್ಸ್ ಗೊತ್ತಿದೆ. ಚಾಲನೆಯಲ್ಲಿದ್ದಾಗ ಮೊಬೈಲ್ನಲ್ಲಿ ಮಾತನಾಡಬಾರದು ಎಂಬ ಜ್ಞಾನವೂ ಇದೆ. ಹಸಿವಿನ ಪರಿಚಯವಿದೆ. ಮಡದಿ, ಮಕ್ಕಳನ್ನು ಸಾಕುವ ಪರಿಜ್ಞಾನವಿದೆ. ಡ್ರೈವರ್ ಸೀಟಲ್ಲಿ ಕುಳಿತು ಸ್ವಂತದ್ದಾದ ನೋವನ್ನು ನುಂಗಿ ನಗುಮುಖದ ಸೇವೆ ಕೊಡುವ ಸಾಕಷ್ಟು ಮಂದಿ ಚಾಲಕರಿರುವುದರಿಂದಲೇ ಆ ಕ್ಷೇತ್ರಕ್ಕೆ ಮಾನ, ಸಂಮಾನ ಪ್ರಾಪ್ತವಾಗಿದೆ.

ಪುಟಾಣಿಗಳನ್ನು ಶಾಲೆಗೆ ಕರೆದುಕೊಂಡು ಹೋಗುವ, ಪುನಃ ಮನೆಗೆ ತಲಪಿಸುವ ಬಹುತೇಕ ಚಾಲಕರ 'ತಾಜಾ' ಸೇವೆಯನ್ನು ಜ್ಞಾಪಿಸಿಕೊಳ್ಳಿ. ಮಕ್ಕಳೊಂದಿಗೆ ಮಕ್ಕಳಾಗುವ, ಸಮಯದ ಶಿಸ್ತನ್ನು ರೂಢಿಸಿಕೊಳ್ಳುವ, ಪುಟಾಣಿಗಳಿಗೆ ಸಿಹಿ ಹಂಚುವ, ಮನೆಯವರೊಂದಿಗೆ ಉತ್ತಮ ಸಂಪರ್ಕವನ್ನು ಬೆಳೆಸುವ ಪ್ರಾಮಾಣಿಕ ಚಾಲಕರನ್ನು ಕಂಡಾಗ ಮನಸಾ ತಲೆ ಬಾಗುತ್ತದೆ. ಗೌರವ ಹೆಚ್ಚಾಗುತ್ತದೆ. ಇಂತಹ ರಿಕ್ಷಾವನ್ನು ಕಾಯುವ, ಅವರ ಮೊಬೈಲ್ ನಂಬ್ರವನ್ನು 'ಸೇವ್' ಮಾಡಿಡುವ ಮನಃಸ್ಥಿತಿ ಪ್ರಯಾಣಿಕನಿಗೂ ಉಂಟಾಗುತ್ತದೆ.