Monday, October 3, 2011

ಇಲ್ಲಿ ತರಕಾರಿ, ಹವಾಯ್ಯಲ್ಲಿ 'ಕಳೆ'!

ಕರಾವಳಿಯ ಅಡುಗೆಗಳಲ್ಲಿ ತೊಂಡೆಕಾಯಿ ವ್ಯಾಪಕ. ಗೇರುಬೀಜ ಸೇರಿಸಿದ ಅದರ ಪಲ್ಯ, ಕಾಯಿಹುಳಿ, ಎಳೆಯದ್ದರ ಉಪ್ಪಿನಕಾಯಿ.. ಹೀಗೆ ಹಲವು. ತೊಂಡೆಯನ್ನೇ ಕೃಷಿ ಮಾಡುವ ಕೃಷಿಕರೂ ಧಾರಾಳ. ಬೇಡಿಕೆ, ಮಾರುಕಟ್ಟೆಯೂ ಚೆನ್ನಗಿದೆ. ಇದು ಕನ್ನಾಡಿನ ಕತೆ.

ಅತ್ತ ಹವಾಯ್ಯಲ್ಲಿ ತೊಂಡೆಕಾಯಿ ಕಳೆ! ಅದನ್ನು ಕಂಡರೆ ಸಾಕು, ಯಾಕೋ ಅಲರ್ಜಿ! ರೌಂಡ್ಅಪ್ ಎಂಬ ವಿಷವನ್ನು ಸಿಂಪಡಿಸಿ ಸಮೂಲ ನಾಶಮಾಡುತ್ತಾರೆ. 'ಅದು ತಿನ್ನಲು ಬರುತ್ತದೆ' ಎಂದು ಗೊತ್ತಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ಕರಾವಳಿಗೆ ಬಂದಿದ್ದ ಹವಾಯಿಯ ಹಣ್ಣು ಕೃಷಿಕ ಕೆನ್ಲವ್ ತೊಂಡೆಯ ಖಾದ್ಯವನ್ನು ಸವಿದು, 'ನಮ್ಮೂರಲ್ಲಿ ಇದನ್ನು ನಾಶ ಮಾಡದಂತೆ ಕೃಷಿಕರಿಗೆ ಹೇಳುತ್ತೇನೆ' ಎಂದಿದ್ದರು.

ಈಚೆಗೆ ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರು ಹವಾಯಿ ದ್ವೀಪ ಸಮೂಹವನ್ನು ಸಂದರ್ಶಿಸಿದ್ದರು. ಅಲ್ಲಿನ ಹಣ್ಣು ಬೆಳೆಗಾರರ ಸಂಘವು ತಮ್ಮ ವಾರ್ಷಿಕ ಸಮಾವೇಶಕ್ಕೆ ಪಡ್ರೆಯವರನ್ನು ಕರೆಸಿ ದಿಕ್ಸೂಚಿ ಭಾಷಣ ಮಾಡಿಸಿತ್ತು. ಭಾರತದ ಹಣ್ಣುಗಳ ಪರಿಚಯ, ಮೌಲ್ಯವರ್ಧನೆಯತ್ತ ಬೆಳಕು. 'ಮುಂದಿನ ಸಮಾವೇಶಕ್ಕೆ ನೀವು ಕರೆಸಿಕೊಳ್ಳುವುದಿದ್ದರೆ, ಅದಕ್ಕಿಂತ ಮುಂಚೆ ನಿಮ್ಮ ಊಟದ ಬಟ್ಟಲಿಗೆ ತೊಂಡೆಕಾಯಿ ಬರಲಿ' ಎಂದು ಹಾರೈಸಿದ್ದರಂತೆ! ಅವರ ಪ್ರವಾಸ ಅನುಭವದ ಕೆಲವು 'ಝಲಕ್' ಇಲ್ಲಿದೆ.

ಹವಾಯ್ಯಲ್ಲಿ ಅರ್ಧ ಎಕರೆಯಿಂದ ಐದು ಎಕರೆ ತನಕ ಕೃಷಿ ಭೂಮಿ ಹೊಂದಿದ ಕೃಷಿಕರಿದ್ದಾರೆ. ಬಹುತೇಕರ ಕೃಷಿ ಹಣ್ಣು. ಕೃಷಿಕರೇ ವ್ಯಾಪಾರಿಗಳು. ಫಾರ್ಮರ್ಸ್ ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುವ ವಸ್ತುಗಳಿಗೆ ಧಾರಣೆಯನ್ನು ಬೆಳೆದವರೇ ನಿಗದಿ ಮಾಡುತ್ತಾರೆ.
ಹಣ್ಣುಗಳ ವೈವಿಧ್ಯವೇ ಹವಾಯಿಗಳ ಬಂಡವಾಳ. ಹವಾಮಾನ ವ್ಯತ್ಯಾಸದಿಂದಾಗಿ ಒಂದೇ ದೇಶದಲ್ಲಿ ಬೇರೆ ಬೇರೆ ನಮೂನೆಯ ಭೌಗೋಳಿಕ ಸ್ಥಿತಿ. ಹಾಗಾಗಿ ವರುಷದ ಉದ್ದಕ್ಕೂ ವೈವಿಧ್ಯದ ಹಣ್ಣುಗಳು ಲಭ್ಯ. ಬೆಳೆಯುವಷ್ಟು ಪ್ರಮಾಣದಲ್ಲಿ ಮೌಲ್ಯವರ್ಧನೆ ಆಗುತ್ತಿಲ್ಲ.

ಚಿಕ್ಕ ಚಿಕ್ಕ ಯಂತ್ರಗಳ ಬಳಕೆ ಹೆಚ್ಚು. ಹಣ್ಣುಗಳನ್ನು, ಸಾಮಗ್ರಿಗಳನ್ನು ಅತ್ತಿತ್ತ ಒಯ್ಯಲು ತಲೆಹೊರೆ ಬದಲಿಗೆ ಮಡಚು ಕೈಗಾಡಿಗಳು. ಹಣ್ಣು ಕೊಯ್ಯಲು ಉದ್ದನೆಯ ಕೊಕ್ಕೆ. ಅದು ಹಣ್ಣನ್ನು ಕೊಯಿದು, ಅಲ್ಲೇ ಹಿಡಿದಿಟ್ಟುಕೊಳ್ಳುತ್ತದೆ. ಕೆಳಗೆ ಬಿದ್ದು ಹಾಳಾಗದು.
'ನಾನು ವಿಮಾನ ಇಳಿಯುತ್ತಿದ್ದಂತೆಯೇ ನಿಲ್ದಾಣದ ಸುತ್ತ ತೆಂಗಿನಮರಗಳನ್ನು ನೋಡಿದೆ' ಎನ್ನುತ್ತಾರೆ ಪಡ್ರೆ. ತೆಂಗಿನಮರಗಳ ಸಾಕಣೆ ಅಲಂಕಾರಿಕವೂ ಹೌದು, ಕೃಷಿಯೂ ಹೌದು. ವಸತಿಗೃಹಗಳಲ್ಲಿ ಲೋಶನ್, ಸಾಬೂನು, ಎಣ್ಣೆ.. ಹೀಗೆ ಹಲಸು ತೆಂಗಿನ ಉತ್ಪನ್ನಗಳು. ತೆಂಗಿನ ಕಾಯಿಯ ಸಿಪ್ಪೆ ತೆಗೆಯಲು ಅಲ್ಲಿಯವರಿಗೆ ಗೊತ್ತಿಲ್ಲ! ನಮ್ಮೂರಿನ ತೆಂಗಿನ ಸುಲಿ ಸಾಧನ ಹವಾಯ್ಯಲ್ಲಿ ಕ್ಲಿಕ್ ಆಗಬಹುದೋ ಏನೋ!

ಗೋಸಂಪಿಗೆ ಹೂವು ಪ್ರತಿಷ್ಠೆಯ ದ್ಯೋತಕ. ಕಿವಿಯಲ್ಲಿ ಹೂವನ್ನಿಟ್ಟುಕೊಳ್ಳುವುದು, ಮಾಲೆ ಧರಿಸಿಕೊಳ್ಳುವುದು, ಹೂವಿನಂತಹ ರಚನೆಯ ಕಿವಿ ಆಭರಣ..ಗಳು ಜನಪ್ರಿಯ. ಅದನ್ನು ಬೆಳೆಯುವುದು, ಗಿಡಗಳನ್ನು ಹಂಚುವುದು ಪ್ರೀತಿ. ಹೂವನ್ನು ಬಲಕಿವಿಯಲ್ಲಿಟ್ಟರೆ ಅವಿವಾಹಿತೆ, ಎಡಕಿವಿಯಲ್ಲಿಟ್ಟರೆ ವಿವಾಹಿತೆ ಎಂಬರ್ಥವೂ ಇದೆಯಂತೆ.

ನಮ್ಮೂರಿನಲ್ಲಿದ್ದಂತೆ 'ಆಸ್ತಿ ಮಾರಾಟಕ್ಕಿದೆ' ಎಂಬ ಫಲಕಗಳು ಕಾಣಸಿಗುತ್ತವೆ! ಭೂಮಿಯ ಬೆಲೆ ಏರುತ್ತಿದೆ! ಕಾರ್ಮಿಕ ಸಮಸ್ಯೆ ಮತ್ತು ರೋಗಬಾಧೆಯಿಂದಾಗಿ ಮುಖ್ಯ ಆರ್ಥಿಕ ಉತ್ಪನ್ನ ಕಾಫಿಗೆ ಕುತ್ತು. 'ವೈವಿಧ್ಯತೆಯಿಲ್ಲದೆ ಬದುಕಿಲ್ಲ' ಎಂದರಿತ ಹಣ್ಣು ಕೃಷಿಕ ಕೆನ್ಲವ್, ಕೃಷಿಕರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕಾಫಿಯನ್ನು ಮಾತ್ರ ನೆಚ್ಚಿಕೊಂಡರೆ ಸಾಲದು, ಜತೆಗೆ ವರ್ಷಪೂರ್ತಿ ಸಿಗುವ ಹಣ್ಣುಗಳ ಕೃಷಿಯತ್ತ ಕೃಷಿಕ ಒಲವನ್ನು ಪರಿವರ್ತಿಸಿದ ಸಾಹಸಿ.

ಒಂದು ತೆಂಗಿನ ಮರವೇರಿ ಕಾಯಿ ಕೊಯ್ಯಲು, ಮರವನ್ನು ಟ್ರಿಂ ಮಾಡಲು ಒಬ್ಬನಿಗೆ ಗಂಟೆಗೆ ಹತ್ತು ಡಾಲರ್ ಸಂಬಳ. ದಿವಸಕ್ಕೆ ನೂರು ಡಾಲರ್ ಸಂಪಾದನೆ ಮಾಡುವ ತಜ್ಞರೂ ಇದ್ದಾರೆ. ಪ್ರವಾಸಿಗರಿಗೆ ಬೇಕಾದಂತೆ ಆಹಾರ ಉದ್ಯಮ ಅಭಿವೃದ್ಧಿಯಾಗಿದೆ. ಮನೆಮನೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು ತಯಾರಾಗುತ್ತಿವೆ. ಕೆನ್ಲವ್ ದಂಪತಿಗಳು ನೂರೈವತ್ತಕ್ಕೂ ಮಿಕ್ಕಿ ಉತ್ಪನ್ನಗಳನ್ನು ಸಿದ್ಧಪಡಿಸುತ್ತಾರೆ.

ವಿಶ್ರಾಂತ ಜೀವನವನ್ನು ಕಳೆಯಲು ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ಪ್ರವಾಸೋದ್ಯಮ ದೊಡ್ಡ ರೀತಿಯಲ್ಲಿ ಬೆಳೆದಿದೆ, ಬೆಳೆಯುತ್ತಿದೆ. ನೈಸರ್ಗಿಕ ಸಂಪತ್ತನ್ನು ಸಮರ್ಥವಾಗಿ ಬಳಸಿಕೊಂಡ ದೇಶವದು. ಅಗ್ನಿಪರ್ವತ ಕಂಡರೆ ಬೆಚ್ಚಿ ಬೀಳುವುದಿಲ್ಲ. ಅದು ಅವರಿಗೆ ಸಹ ಜೀವಿ.

ಆಸಕ್ತರಿಗೆ ಜಾಲತಾಣ : www.hawaiitropicalfruitgrowers.org, www.hawaiifruit.net


0 comments:

Post a Comment