Sunday, June 17, 2012

'ಹತ್ತು ರೂಪಾಯಿಗೆ ಮೂರು ಸೊಳೆ'!

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ (ಜೂ. 17) ಹಲಸು ಮೇಳ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬುಗೆರೆ ಹಲಸು ಬೆಳೆಗಾರರ ಸಂಘದ ಮಳಿಗೆಯಲ್ಲಿ ಕಾರ್ಯದರ್ಶಿ ರವಿಕುಮಾರ್ ಹಲಸಿನ ಹಣ್ಣನ್ನು ತುಂಡರಿಸುತ್ತಿದ್ದರು. ಅವರ ಸಹಾಯಕರು ಸೊಳೆ ಬಿಡಿಸಿ, ಚಿಕ್ಕ ಟ್ರೇಯಲ್ಲಿಟ್ಟು ಮಾರಾಟ ಮಾಡುತ್ತಿದ್ದರು. 'ಹತ್ತು ರೂಪಾಯಿಗೆ ಮೂರು ಸೊಳೆ'! ಬರೋಬ್ಬರಿ ಮಾರಾಟ. ಹಣ್ಣಿಂದ ಸೊಳೆ ತೆಗೆಯಲು ಪುರುಸೊತ್ತಿಲ್ಲ, ಹಲಸು ಪ್ರಿಯರು ಮುಗಿಬೀಳುತ್ತಿದ್ದರು.


ಹಣ್ಣಿನ ರುಚಿ, ಬಣ್ಣ, ಕ್ರಿಸ್ಪ್ ಮತ್ತು ನೋಟಗಳು ಸೆಳೆಯುತ್ತಿದ್ದುವು. ಸಾಮಾನ್ಯವಾಗಿ ಬೆಂಗಳೂರು, ತಿಪಟೂರು.. ಪ್ರದೇಶಗಳ ಹಲಸು ನಮ್ಮೂರಿನದಕ್ಕಿಂತ ರುಚಿಯಲ್ಲಿ ಮುಂದು. ಈ ರುಚಿಯನ್ನು ಮೀರಿಸುವ ಹಲಸಿನ ಹಣ್ಣುಗಳು ನಮ್ಮೂರಿನಲ್ಲೂ ಇವೆ. ಅದನ್ನು ಗುರುತಿಸುವ ಕೆಲಸಗಳಾಗಿಲ್ಲ. ವಿಟ್ಲ, ಅಳಿಕೆ ಸುತ್ತುಮುತ್ತಲಿನ ಪ್ರದೇಶದಲ್ಲಿ 'ಹಲಸು ಸ್ನೇಹಿ ಕೂಟ'ದ ಮೂಲಕ ಉತ್ತಮ ರುಚಿಯ ಹಣ್ಣನ್ನು ಪತ್ತೆ ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

ಮೇಳ ಅಂದ ಮೇಲೆ ಕೇಳಬೇಕೆ, ಜನಸಂದೋಹ. ದೂರದೂರಿನಿಂದ ಹಲಸು ಪ್ರಿಯರು ಹಲಸಿನ ಕಾಯಿ, ಹಣ್ಣಿನೊಂದಿಗೆ ಆಗಮಿಸಿದ್ದರು. ಮಂಗಳೂರು ಸಂಕೊಳಿಕೆಯ ಶ್ರೀಧರ ಕುಂಬ್ಳೆಯವರು ಈಚೆಗಷ್ಟೇ ಕೇರಳಕ್ಕೆ ಹೋಗಿ ಹಲಸಿನ ರೆಸಿಪಿಗಳನ್ನು ಕಲಿತು ಬಂದು ಪ್ರಯೋಗಕ್ಕೆ ಇಳಿದಿದ್ದರು. ಅದರ ಫಲಶ್ರುತಿಯಾಗಿ ಮೇಳದಲ್ಲಿ ಹಲಸಿನ ಹಣ್ಣಿನ ಸಿರಪ್, ಜ್ಯಾಮ್, ಹಲ್ವ, ಕುಡಿಯಲು ಸಿದ್ಧ ಜ್ಯೂಸ್ಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು.

ಹಪ್ಪಳ, ಚಿಪ್ಸ್..ಗಳ ಮಳಿಗೆಗಳು ಯಥೇಷ್ಟ. ಹಪ್ಪಳವೊಂದರ ಮೂರರಿಂದ ನಾಲ್ಕು ರೂಪಾಯಿ! ಹಣ್ಣು ಹಪ್ಪಳವೊಂದಕ್ಕೆ ಐದು ರೂಪಾಯಿ. ಕಾಯಿ ಸೊಳೆ ಮತ್ತು ಉಪ್ಪುಸೊಳೆಗಳು ಮಾರಾಟಕ್ಕಿಟ್ಟರೂ ಯಾಕೋ ಒಲವು ಕಡಿಮೆ. ಮಳಿಗೆಯನ್ನು ವೀಕ್ಷಿಸುತ್ತಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥ ಡಾ.ಎಲ್.ಹೆಚ್.ಮಂಜುನಾಥ್ ಹೀಗೆಂದರು : 'ಹಲಸು ಹೀಗೆ ರೆಡಿ ಟು ಕುಕ್ ಆಗಿ ಸಿಗಬೇಕು. ಅಮ್ಮಂದಿರಿಗೆ ಮೇಣ ಮೆತ್ತಿಸಿಕೊಳ್ಳಬೇಕಾಗಿಲ್ಲ. ಕೆಲಸ ಸುಲಭ. ಚಿಕ್ಕ ಕುಟುಂಬಕ್ಕೆ ದೊಡ್ಡ ಗಾತ್ರದ ಹಲಸಿನ ಕಾಯಿ ತಲೆನೋವು ತರಿಸುತ್ತದೆ. ಇಂತಹ ಪ್ರಯತ್ನಗಳು ಹಳ್ಳಿ ಹಳ್ಳಿಗಳಲ್ಲಿ ಬರಬೇಕು.'

ವಿಟ್ಲ-ಉಬರು 'ಹಲಸು ಸ್ನೇಹಿ ಕೂಟ'ವು ತಾನು ಹುಡುಕಿ ಅಭಿವೃದ್ಧಿಪಡಿಸುತ್ತಿರುವ ಉತ್ತಮ ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಆಯಾಯ ಹಲಸಿನ ಪೂರ್ಣ ಜಾತಕವೂ ಜತೆಗಿತ್ತು. ಹಣ್ಣನ್ನು ನೋಡಿದ ಬಹುತೇಕರು 'ಹಲಸಿನ ಗಿಡ ಬೇಕಿತ್ತಲ್ವಾ, ಎಲ್ಲಿ ಸಿಗುತ್ತೆ' ಎಂದು ಕೂಟದ ವೆಂಕಟಕೃಷ್ಣ ಶರ್ಮರವನ್ನು ವಿಚಾರಿಸುತ್ತಿದ್ದರು. ಸಂಜೆ ಹೊತ್ತಿಗೆ ಎಲ್ಲಾ ಹಲಸಿನ ಹಣ್ಣುಗಳು ಆಸಕ್ತರ ಉದರ ಸೇರಿತ್ತು.

ಶಿರಸಿಯ ಕದಂಬ ಸಂಸ್ಥೆಯ ಮಳಿಗೆಯಲ್ಲಿ ಹಲಸಿನ 'ಬ್ರಾಂಡೆಡ್ ಹಪ್ಪಳ', ಹಲಸೇ ಬದುಕಾಗಿರುವ ಶಿರಸಿಯ ರೇಖಾ ಶರಶ್ಚಂದ್ರ ಹೆಗಡೆಯವರ ಮಳಿಗೆ, ಅಂಕುರ್ ನರ್ಸರಿ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ.. ಹೀಗೆ ಸಾಕಷ್ಟು ಮಳಿಗೆಗಳು. ಮತ್ತೊಂದೆಡೆ ಹಲಸಿನ ಖಾದ್ಯಗಳ 'ಲೈವ್' ತಯಾರಿ. ಧರ್ಮಸ್ಥಳ ಸುತ್ತುಮುತ್ತಲಿನ, ಬೆಂಗಳೂರು, ತುಮಕೂರುಗಳ ಉತ್ತಮ ಹಲಸಿನ ಹಣ್ಣುಗಳ ಪ್ರದರ್ಶನ.

ಮಿಕ್ಕಂತೆ ಮಾಮೂಲಿ. ಮಧ್ಯಾಹ್ನ ಭೋಜನಕ್ಕೆ 'ಅನ್ನ, ಮಜ್ಜಿಗೆ ಹೊರತುಪಡಿಸಿ' ಮಿಕ್ಕತೆ ಹಲಸಿಗೆ ಮಣೆ. ಸಭಾಮಂಟಪದಲ್ಲಿ ಭೋಜನದ ಬಳಿಕ ನಿಜವಾದ ಹಲಸು ಪ್ರಿಯರ ಉಪಸ್ಥಿತಿ! ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತಾದ ಪವರ್ಪಾಯಿಂಟ್ ಪ್ರಸ್ತುತಿ. 'ಇಂತಹ ಮೇಳಗಳಲ್ಲಿ ಹಲಸಿನ ಗಿಡಗಳ ಮಾರಾಟ ಬೇಕಿತ್ತು' ಎನ್ನುತ್ತಾರೆ, ಉಡುಪಿಯ ಕೃಷ್ಣ ಸಫಲ್ಯ

ತೂಬುಗೆರೆ ಹಲಸು ಬೆಳೆಗಾರರ ಸಂಘವು ತನ್ನೂರಿನ ಹಲಸಿನ ಸೊಳೆಗಳಿಗೆ 'ಉತ್ತಮ್' ಎಂಬ ಬ್ರಾಂಡೆಡ್ ಹೆಸರನ್ನಿಟ್ಟಿತ್ತು. ತೂಬೆಗೆರೆ ಯಾಕೆ, ನಮ್ಮೂರಿನ ಹಲಸಿಗೂ ಆ ಭಾಗ್ಯ ಇಲ್ವಾ. ಇದೆ, ಹುಡುಕುವ ಮನಸ್ಸುಗಳು ತಯಾರಾಗಬೇಕು. ಕೇವಲ ಋಣಾತ್ಮಕ ಚಿಂತನೆ, ಯೋಚನೆಗಳಿಂದ ಇದೆಲ್ಲಾ ಸಾಧ್ಯವಿಲ್ಲ ಬಿಡಿ.

'ಮೂವತ್ತು ವರುಷಗಳ ಹಿಂದೆ ನಮ್ಮ ಬೀಡಿನಲ್ಲಿ ಹಲಸಿನ ಹಣ್ಣಿನ ಹಲವಾರು ಖಾದ್ಯಗಳನ್ನು ಮಾಡುತ್ತಿದ್ದು, ಅವೆಲ್ಲವನ್ನೂ ಸವಿದಿದ್ದೇನೆ,' ಎಂದು ಕಳೆದ ಕಾಲವನ್ನು ನೆನಪಿಸಿಕೊಂಡರು, ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಲಸು ಬೆಳೆಗಾರರಿಗೆ ಒಂದು ಸಾವಿರ ಕಸಿ ಗಿಡಗಳನ್ನು ವಿತರಿಸಿದ್ದು ಮೇಳದ ಹೈಲೈಟ್. 'ಹಲಸು ಕಲ್ಪವೃಕ್ಷ. ರೆಡಿ ಕು ಕುಕ್ ಆಗಿ ಹಲಸು ಸಿಕ್ಕರೆ ಬೇಡಿಕೆ ಅಪಾರವಿದೆ' ಎಂದು ಮೇಳವನ್ನು ಉದ್ಘಾಟಿಸಿ, ಕೃಷಿಕ ಡಾ.ಡಿ.ಸಿ.ಚೌಟ ಹೇಳಿದರು.

'ಮಳೆಗಾಲದಲ್ಲಿ ಹಲಸಿನ ಹಣ್ಣನ್ನು ಸವಿದರೆ, ತರಕಾರಿಯಂತೆ ಬಳಸಿದರೆ ಕಾಯಿಲೆಗಳು ಹೆಚ್ಚಂತೆ, ಮಕ್ಕಳಿಗೆ ಸೊಳೆ ಕೊಟ್ಟರೆ ಅನಾರೋಗ್ಯ ಕಾಡುತ್ತದಂತೆ, ಹೌದಾ' ಎಂದು ಮಳಿಗೆಯೊಂದರಲ್ಲಿ ಮಹಿಳೆಯೋರ್ವಳು ವಿಚಾರಿಸುತ್ತಿದ್ದರು. ಇಂತಹ ತಪ್ಪು ಸಂದೇಶ ಯಾಕೆ ಆ ಮಹಿಳೆಯ ತಲೆ ಹೊಕ್ಕಿತೋ? ಅತಿಯಾದರೆ ಎಲ್ಲವೂ ವಿಷ!

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ, ಕೃಷಿಕ ಸಮಾಜ ಮಂಗಳೂರು - ಈ ಎಲ್ಲಾ ಸಂಸ್ಥೆಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಹೆಗಲೆಣೆ ನೀಡಿದ್ದುವು.

0 comments:

Post a Comment