Saturday, June 30, 2012

ಮೀಯಪದವು : ಹಲಸಿನ ಹಬ್ಬ



ಕಾಸರಗೋಡು ಜಿಲ್ಲೆಯ ಮೀಯಪದವಿನ 'ಚೌಟರ ಚಾವಡಿ'ಯಲ್ಲಿ ಹಲಸಿನ ಹಬ್ಬ. (Jack Fest, Meeyapadavu) ಡಾ.ಡಿ.ಸಿ.ಚೌಟ ಸಹೋದರರ ಉಸ್ತುವಾರಿಕೆ. ಹಿರಿಯರಾದ ಡಿ.ಕೆ.ಚೌಟರು ಹಲಸಿನ ಹಣ್ಣನ್ನು ತುಂಡರಿಸುವುದರ ಮೂಲಕ ಹಬ್ಬದ ಉದ್ಘಾಟನೆ. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಡಾ.ವಾರಣಾಶಿ ಕೃಷ್ಣಮೂರ್ತಿ, ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯರ ಉಪಸ್ಥಿತಿ.

ಮೀಯಪದವು ಸುತ್ತುಮುತ್ತಲಿನ ಮೂವತ್ತೈದು ಹಲಸಿನ ಹಣ್ಣುಗಳು 'ರುಚಿನೋಡಿ-ತಳಿಆಯ್ಕೆ' ಪ್ರಕ್ರಿಯೆಗೆ ಆಗಮಿಸಿದ್ದುವು. ಮುಳಿಯ ವೆಂಕಟಕೃಷ್ಣ ಶರ್ಮರ ನೇತೃತ್ವದ ಎಂಟು ಮಂದಿ ತೀರ್ಪುಗಾರರ ತಂಡವು ನಾಲ್ಕು ಉತ್ತಮ ತಳಿಯನ್ನು ಆಯ್ಕೆ ಮಾಡಿತ್ತು. ಹಲಸಿನ ಬಣ್ಣ, ಪರಿಮಳ, ಫಿಲ್ಲಿಂಗ್, ಹಲಸಿನ ಗಾತ್ರ, ಕ್ರಿಸ್ಪ್. ರುಚಿ - ಹಣ್ಣುಗಳ ಆಯ್ಕೆಗೆ ಮಾನದಂಡಗಳು. ತಿರುಮಲೇಶ್ವರ ಭಟ್ಟರ 'ಮಲ್ಲಿಗೆ ಬಕ್ಕೆ'ಯು ಓಟದಲ್ಲಿ ಮುಂದಿದ್ದರೆ, ಶಿವಕುಮಾರ್ ಆವರ 'ಹೊನ್ನಾಡಿ ಎಲಿಮಲೆ' ತಳಿಗೆ ದ್ವಿತೀಯ ಸ್ಥಾನ. ಶರೀಫ್ ಮತ್ತು ಕೆ.ವಿ.ರಾಧಾಕೃಷ್ಣ ಅವರ ಹಿತ್ತಿಲಿನ ತಳಿಗಳಿಗೆ ತೃಪ್ತಿಕರ ಸ್ಥಾನ.

ಮಧ್ಯಾಹ್ನ ಹಲಸಿನ ಪುಷ್ಕಳ ಭೋಜನ. ಜ್ಯಾಕ್ ಮಂಚೂರಿಯನ್, ಜೆಲ್ಲಿ, ಮುಳುಕ, ಹಲ್ವ, ಪಾಯಸ.. ಹೀಗೆ ಹಲಸುಮಯ. ಅಪರಾಹ್ನ 'ಹಲಸಿನ ಮಾತುಕತೆ'. ಹಲಸಿನ ಮಾರುಕಟ್ಟೆ ಕುರಿತ ಯಶೋಗಾಥೆಯನ್ನು ತೆರೆದಿಟ್ಟವರು ಮುಳಿಯ ವೆಂಕಟಕೃಷ್ಣ ಶರ್ಮ, ಡಾ.ವಾರಣಾಶಿ ಕೃಷ್ಣಮೂರ್ತಿ ಮತ್ತು ಡಾ.ಡಿ.ಸಿ.ಚೌಟ. ಗಿಡಗಳ ಆರೈಕೆಯ ಸೂಕ್ಷ್ಮಗಳತ್ತ ಗುರುರಾಜ ಬಾಳ್ತಿಲ್ಲಾಯ ಬೆಳಕು ಚೆಲ್ಲಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಣೆ. ಪತ್ರಕರ್ತ ಅಡ್ಡೂರು ಕೃಷ್ಣರಾವ್, ಉಬರು ರಾಜಗೋಪಾಲ ಭಟ್ಟ, ಶಿರಂಕಲ್ಲು ನಾರಾಯಣ ಭಟ್ಟರು ತಳಿಆಯ್ಕೆಯಲ್ಲಿ ಮುಂದಿದ್ದ ಹಲಸಿನ ಯಜಮಾನರುಗಳಿಗೆ ಬಹುಮಾನ ವಿತರಿಸಿದರು.

'ಹಣ್ಣು ನೀಡುವ ಹಲಸಿನ ಮರಗಳನ್ನು ಕಡಿಯದೆ ಉಳಿಸಿ' ಎಂದು ಉದ್ಘಾಟನೆ ಮಾಡುತ್ತಾ ಡಿ.ಕೆ.ಚೌಟರು ಹೇಳಿದ್ದರು. ಇದು ಹಬ್ಬದ ಘೋಷವಾಕ್ಯ! ಹಪ್ಪಳ, ಚಿಪ್ಸ್, ಉಪ್ಪುಸೊಳೆ, ಹಲಸಿನ ವೈನ್, ಜ್ಯಾಕ್ ನಟ್.. ಪ್ರದರ್ಶನದಲ್ಲಿ ಗಮನ ಸೆಳೆದವು. ಹಲಸಿನ ಗಿಡಗಳ ಮಾರಾಟವು ಹಬ್ಬದ ಹೈಲೈಟ್.

ಅಧ್ಯಾಪಕ ಶ್ರೀಧರ ರಾವ್, ಜಯಪ್ರಕಾಶ್.. ತಂಡವು ಹಬ್ಬದ ವಿವಿಧ ವಿಭಾಗವನ್ನು ಪ್ರತಿನಿಧಿಸಿತ್ತು. ಮನೋಹರ ಚೌಟ, ಪ್ರಭಾಕರ ಚೌಟ ಅಲ್ಲದೆ ಚೌಟರ ಕುಟುಂಬದ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು. ಚೌಟರ ಚಾವಡಿಯ ಈ ಹಬ್ಬಕ್ಕೆ ಮೀಯಪದವಿನ ಸಾಂಸ್ಕೃತಿಕ ವೇದಿಕೆ, ಕೃಷಿ ವಿಕಾಸ ಚಾರಿಟೇಬಲ್ ವಾಹಿನಿ, ಎನ್.ಎಂ.ಜಿ.ಬ್ಯಾಂಕ್ ಮತ್ತು ನಬಾರ್ಡ್ ಕೈಜೋಡಿಸಿದ್ದುವು.

ಪಂಚ್ ಲೈನ್ : ಡಿ.ಕೆ.ಚೌಟ ಉವಾಚ : 'ಬೆಂಗಳೂರು ಹೊರವಲಯದ ತೂಬುಗೆರೆ ಹಲಸು ಇಂದಿರಾಗಾಂಧಿಯವರಿಗೆ ಪ್ರಿಯವಾಗಿತ್ತು. ಅವರಿಗಾಗಿ ಈ ಹಣ್ಣು ದೆಹಲಿ ಸೇರುತ್ತಿದ್ದುದು ಈಗ ಇತಿಹಾಸ'.

0 comments:

Post a Comment