Monday, June 25, 2012

ಹಲಸಿನ 'ಹಳ್ಳಿ ಮಾರುಕಟ್ಟೆ'


ಐದಾರು ವರುಷದಿಂದ ಹಲಸು ಸುದ್ದಿಮಾಡುತ್ತಿದೆ, ಅಡುಗೆಮನೆಯಿಂದ ತೊಡಗಿ ಐಸ್ಕ್ರೀಂ ಪಾರ್ಲರ್ ತನಕ! ಅಕಾಲದಲ್ಲಿ ಹಲಸಿನ ಸ್ವಾದ ಸವಿಯುವ ಹಳ್ಳಿ ಜ್ಞಾನಕ್ಕೆ ತಂತ್ರಜ್ಞಾನದ ಝಲಕ್. ಹಪ್ಪಳ, ಚಿಪ್ಸ್ಗಳು ಹಳ್ಳಿಯಲ್ಲಿ ಮಾತ್ರವಲ್ಲ, ನಗರದ ಚುಮುಚುಮು ಚಳಿಗೆ 'ಕುರುಕುರು' ಸದ್ದು ಮಾಡುತ್ತವೆ. ಮೌಲ್ಯವರ್ಧನೆಯತ್ತ ಒಲವು ಹೆಚ್ಚುತ್ತಿದೆ.
ಕಾಡಿನ ಸರಹದ್ದಿನಲ್ಲಿರುವ ಹಲಸಿನ ಹಣ್ಣುಗಳು ಮಂಗಗಳಿಗೆ ಬಿಟ್ಟುಕೊಡೋಣ. (ಕಾಡು ಇದ್ದರೆ!?) ತೋಟದೊಳಗಿನ ಹಣ್ಣುಗಳು ಕೊಳೆತು, ಬಿದ್ದು ರಣರಂಗ! ಒಂದೆಡೆ ಮೌಲ್ಯವರ್ಧನೆ, ಮತ್ತೊಂದೆಡೆ ದುಃಸ್ಥಿತಿ. ದ.ಕ.ಜಿಲ್ಲೆಯ ವಿಟ್ಲ ಸನಿಹದ ಉಬರು 'ಹಲಸು ಸ್ನೇಹಿ ಕೂಟ'ವು, ಅಡ್ಯನಡ್ಕ ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯದಲ್ಲಿ ಹಲಸಿಗೆ ಹಳ್ಳಿ ಮಾರುಕಟ್ಟೆ ನೀಡುವತ್ತ ಸಣ್ಣ ಹೆಜ್ಜೆಯಿಟ್ಟಿದೆ.
ಈ ಋತುವಿನಲ್ಲಿ ಸುಮಾರು ಮೂವತ್ತು ಟನ್ 'ಬಕ್ಕೆ' ಹಲಸಿಗೆ 'ಮಾನ' ತರುವ ಯತ್ನ. ಇವೆಲ್ಲವೂ ಮುಂಬಯಿಯ ಐಸ್ಕ್ರೀಂ ಉದ್ಯಮದ ಯಂತ್ರದ ಬಾಯೊಳಕ್ಕೆ ಬೀಳುತ್ತವೆ. 'ಅಳಿಕೆ ಮತ್ತು ಕೇಪು ಗ್ರಾಮಗಳ ಸೀಮಿತ ಪ್ರದೇಶದಲ್ಲಿ ಈಗಾಗಲೇ ಹದಿನೈದು ಟನ್ನಿನಷ್ಟು ಕಾಯಿಗಳನ್ನು ಪಡೆದು ಮಾರಾಟ ಮಾಡಿದ್ದೇವೆ. ಈಗಿನ ಅನುಭವ ಆಧಾರದಲ್ಲಿ ಮುಂದಿನ ವರುಷ ಐವತ್ತು ಟನ್ ಮೀರಿದರೂ ಆಶ್ಚರ್ಯವಿಲ್ಲ' ಎನ್ನುತ್ತಾರೆ ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ.
ಮರದಿಂದ ಬಲಿತ ಕಾಯನ್ನು ಕೀಳುವುದು ಶ್ರಮ ಬೇಡುವ ಕೆಲಸ. ಕೊಯಿದು ನಾಲ್ಕೈದು ದಿವಸದಲ್ಲಿ ಹಣ್ಣಾಗುವಂತಹ ಕಾಯನ್ನು ಹಗ್ಗದ ಸಹಾಯದಿಂದ ಕೆಳಗಿಳಿಸಬೇಕು. ಎಲ್ಲರಿಗೂ ಈ ಕೆಲಸ ಅಸಾಧ್ಯ. ಜಾಣ್ಮೆಯರಿತ 'ಸ್ಪೆಷಲಿಸ್ಟ್'ಗಳಿಂದ ಸಾಧ್ಯ. ನಂತರ ವಾಹನಕ್ಕೆ ಲೋಡ್. ಮೊದಲು ಅಡಿಕೆ ಸಿಪ್ಪೆಯ ಬೆಡ್. ಅದರ ಮೇಲೆ ಒಂದು ಲೇಯರ್ ಹಲಸಿನ ಕಾಯಿ. ಡ್ಯಾಮೇಜ್ ಆಗದಂತೆ ಪುನಃ ಮೇಲೆ ಬಾಳೆಗಿಡದ ಕೈಗಳು, ಅಡಿಕೆ ಸೋಗೆಗಳ ಪದರ. ನಂತರ ಹಲಸಿನ ಕಾಯಿಯ ಲೇಯರ್.
ಓರ್ವ ಸ್ಪೆಷಲಿಸ್ಟ್ ಒಂದು ದಿವಸದಲ್ಲಿ 100-120 ಕಾಯಿ ಕೆಳಗಿಳಿಸಬಹುದಷ್ಟೇ. ನಮ್ಮೂರಿನಲ್ಲಿ ಉಮಾನಾಥ ನಾಯಕ್ ಎಂಬವರು ಜಾಣ್ಮೆಯ ಕೆಲಸಗಾರರು. ಒಂದು ದಿವಸದ ಶ್ರಮಕ್ಕೆ ಒಂದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುತ್ತಾರೆ ಶರ್ಮ. ಸುಮಾರು  ಐವತ್ತು ಮನೆಗಳಿಂದ ಹಲಸು ಸಂಗ್ರಹ. ಎರಡು ಕ್ವಿಂಟಾಲಿನಿಂದ ಒಂದು ಟನ್ ತನಕ ಹಲಸು ನೀಡುವ ಕೃಷಿಕರಿದ್ದಾರೆ. 'ನಾವೇ ಕೊಯ್ದರೆ ಕಿಲೋಗೆ ಐದು ರೂಪಾಯಿ, ಕೃಷಿಕರೇ ಕೊಯ್ದು ನಿಗದಿತ ಜಾಗಕ್ಕೆ ತಂದರೆ ಏಳೂವರೆ ರೂಪಾಯಿ ನೀಡಿದ್ದೇವೆ. ಒಂದು ಹಲಸು ಏನಿಲ್ಲವೆಂದರೂ ಕನಿಷ್ಟ ಐದಾರು ಕಿಲೋ ತೂಗುತ್ತದೆ. ಕೃಷಿಕರಿಗೆ ಕಾಯಿಯೊಂದರ ಸರಿಸುಮಾರು 25-30 ರೂಪಾಯಿ ಸಿಕ್ಕದಂತಾಯಿತು' ಎಂಬ ಲೆಕ್ಕಾಚಾರ ಶರ್ಮರದು.
ಕಾಯಿ ಕೀಳುವಾಗ ಬಕ್ಕೆ ಮತ್ತು ತುಳುವ (ಬಿಳುವ, ಅಂಬಲಿ) ಯಾವುದೆಂದು ಫಕ್ಕನೆ ಗುರುತು ಹಿಡಿಯಲು ಕಷ್ಟ.  ಮನೆಯವರು ರುಚಿ ನೋಡಿ 'ಬಕ್ಕೆ' ಮರವನ್ನು ಆಯ್ಕೆ ಮಾಡಿದರೆ ಈ ಗೊಂದಲವನ್ನು ಪರಿಹರಿಸಬಹುದು. ಮಳೆಗಾಲದಲ್ಲಿ ಮರ ಏರುವುದು ದೊಡ್ಡ ಸಮಸ್ಯೆ.
ಈ ಪರಿಸರದಲ್ಲಿ 'ಹಲಸಿನ ಕಾಯಿ ಕೊಳ್ಳುತ್ತೀರಂತೆ, ಹೌದಾ, ತೆಕ್ಕೊಳ್ಳುವುದಿದ್ದರೆ ನನ್ನಲ್ಲಿದೆ ಎಂಬ ಮಾತುಕತೆ ಶುರುವಾಗಿದೆ. 'ನಿಮಗಲ್ವಾ, ಒಳ್ಳೆಯ ರುಚಿಯ ಹಣ್ಣು ತಿನ್ನಲು ಕೊಡುತ್ತೇನೆ' ಎಂದವರು, ಹಲಸಿಗೆ ಚಿಕ್ಕ ಮೌಲ್ಯ ಬಂದಾಗ ಈಗ 'ಉಚಿತ'ದ ಸುದ್ದಿ ಮಾತನಾಡುವುದಿಲ್ಲ!
ಯಾವ್ಯಾವ ಮರ ಎಷ್ಟೆಷ್ಟು ಕಾಯಿ ಕೊಡುತ್ತೆ, ಯಾವ ತಳಿ, ಕಾಯಿಕೊಡುವ ಸಮಯ, ಗುಣಮಟ್ಟವನ್ನು ಗುರುತು ಮಾಡಿಕೊಳ್ಳವ ಕೆಲಸವನ್ನು ಶರ್ಮರು ಜತೆಜತೆಗೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬನೂ ಮಾಹಿತಿ ನೀಡಿದರೆ ಒಂದೊಂದು ಗ್ರಾಮದಲ್ಲಿ ಐವತ್ತು ಟನ್ನಿಗೂ ಮಿಕ್ಕಿ ಹಲಸಿನ ಕಾಯಿಗಳ ಸಂಪನ್ಮೂಲತೆಯಿದೆ.   
ಹಲಸು ಮಾರಾಟ ನಮಗೆ ಉದ್ಯಮವಲ್ಲ. ಅದಕ್ಕೊಂದು ಮೌಲ್ಯ ಬರಬೇಕು ಎನ್ನುವ ದೂರದೃಷ್ಟಿ. ಹಳ್ಳಿಯಲ್ಲಿ ಹಲಸಿಗೂ ಮಾರುಕಟ್ಟೆ ಇದೆ ಎಂಬುದು ಅರಿವಾಗಬೇಕು. ನಮ್ಮ ಈ ಪ್ರಕ್ರಿಯೆಯಿಂದ ಮಾರ್ಕೆಟ್ ಓಪನ್ ಆದರೆ ಶ್ರಮ ಸಾರ್ಥಕ,' ಎನ್ನುತ್ತಾರೆ ಡಾ.ವಾರಣಾಶಿ ಕೃಷ್ಣಮೂರ್ತಿ.
(ಸಂಪರ್ಕ : ಮುಳಿಯ ವೆಂಕಟಕೃಷ್ಣ ಶರ್ಮ : 94802200832)

0 comments:

Post a Comment