Friday, October 30, 2009

ಚಾರಿತ್ರಿಕ 'ಅಡಿಕೆ ಯಂತ್ರ ಮೇಳ' ಶುಭಾರಂಭ


ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಪ್ರಥಮ 'ಅಡಿಕೆ ಯಂತ್ರ ಮೇಳ'ವು ಇಂದು ಸಂಜೆ ಗಂಟೆ 3-45ಕ್ಕೆ ಶುಭಾರಂಭಗೊಂಡಿತು. ಮೇಳಕ್ಕೆ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಸಾರಥ್ಯ. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್, ಪುತ್ತೂರು - ಇವುಗಳ ಜಂಟಿ ಸಹಯೋಗ.
ಉದ್ಘಾಟನೆ : ಮಂಗಳೂರು ಸಂಸದ ನಳಿನ್ಕುಮಾರ್ ಕಟೀಲು ಇವರಿಂದ ದೀಪಜ್ವಲನ ಮತ್ತು ಯಂತ್ರವೊಂದರ ಗುಂಡಿ ಒತ್ತುವುದರ ಮೂಲಕ ಯಂತ್ರ ಚಾಲೂ ಮಾಡಿ ಮೇಳಕ್ಕೆ ಶುಭಚಾಲನೆ. 'ಭಾರತೀಯರದು ಕೃಷಿ ಮತ್ತು ಋಷಿ ಪರಂಪರೆ. ಭಾರತದಲ್ಲಿ ಐಟಿ ಬಂದ್ ಆದರೆ ಇಲ್ಲಿನ ಕೃಷಿ ಕ್ಷೇತ್ರ ನಲುಗದು. ಕೃಷಿಗೆ ಪೂರಕವಾದ ಉದ್ಯಮಕ್ಕೆ ಸ್ವಾಗತ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ನಾಶಕ್ಕೆ ಮುಂದಾಗುವ ಯಾವುದೇ ಉದ್ಯಮಗಳನ್ನು ವಿರೋಧಿಸುತ್ತೇನೆ.' - ಸಂಸದರ ಮಾತು.
ದಿಕ್ಸೂಚಿ ಭಾಷಣ : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪಿ.ಜಿ.ಚಂಗಪ್ಪ - ಇವರಿಂದ - ಉತ್ತಮ ಮಾರುಕಟ್ಟೆ ಸೃಷ್ಟಿಯಾಗಲು ಗುಜರಾತಿನಲ್ಲಿದ್ದಂತೆ 'ಫಾರ್ಮರ್ಸ್ ಕಂಪೆನಿ'ಗಳು ನಮ್ಮಲ್ಲೂ ಹುಟ್ಟಿಕೊಳ್ಳಬೇಕು. ದುರಂತವೆಂದರೆ ನಮ್ಮ ಸರಕಾರಗಳು ಅಡಿಕೆಯನ್ನು ತಂಬಾಕಿನ ಜತೆ ಥಳಕು ಹಾಕಿವೆ. ಇದರಿಂದ ಹೊರಗೆ ಬರಲು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡುಹಿಡಿಯುವಂತಾಗಬೇಕು.
ಅತಿಥಿಗಳಿಂದ ಶುಭಾಶಂಸನೆ : ಕೆ. ರಾಮ ಭಟ್ ಗೌರವಾಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು; ಡಾ.ಶಿವಣ್ಣ ವಿಶೇಷಾಧಿಕಾರಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರು ವಿಭಾಗ.
ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆಯವರ ಸಭಾಧ್ಯಕ್ಷತೆ. 'ಸ್ವಿಡ್ಜರ್ಲ್ಯಾಂಡ್, ರಷ್ಯಾಗಳಲ್ಲಿ ಹುಲುಸಾಗಿ ಬೆಳೆದ ಪೈರು ನೋಡಲು ಸಿಗುತ್ತದೆ. ಆದರೆ ಅದರ ಮಧ್ಯೆ ರೈತ ಕಾಣುವುದಿಲ್ಲ! ಕಾರಣ ಪೈರು ಹುಲುಸಾಗಿ ಬೆಳೆಯಲು ಯಂತ್ರಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಬದಲಾವಣೆಗಳು ಅನಿವಾರ್ಯವಾಗುವ ಈ ಕಾಲಘಟ್ಟದಲ್ಲಿ ಯಂತ್ರಾವಿಷ್ಕಾರಕ್ಕೆ ದೊಡ್ಡ ಸಂಸ್ಥೆಗಳು ಮುಂದೆ ಬರಬೇಕಾಗಿದೆ. ಕೃಷಿಕರೇ ಸಂಶೋಧಕರಾಗಿ ಮುಂದೆ ಬರುತ್ತಿರುವುದು ಸಂತೋಷದ ವಿಚಾರ' ಹೆಗ್ಗಡೆಯವರ ಆಶಯ. ಈ ಸಂದರ್ಭದಲ್ಲಿ ರೈತ ಸಂಶೋಧಕರನ್ನು ಡಾ. ವೀರೇಂದ್ರ ಹೆಗ್ಗಡೆಯವರು ಸಂಮಾನಿಸಿದರು.
ಆರಂಭದಲ್ಲಿ ಕು.ಶಿಲ್ಪಾ ಬಿ. ಮತ್ತು ಬಳಗದವರಿಂದ ಪ್ರಾರ್ಥನೆ. ಪ್ರಸ್ತಾವನೆ ಮತ್ತು ಸ್ವಾಗತ - ಎಸ್.ಆರ್.ರಂಗಮೂರ್ತಿ ಅಧ್ಯಕ್ಷರು, ಕ್ಯಾಂಪ್ಕೋ, ಮ್ಯಾನೇಜಿಂಗ್ ಟ್ರಸ್ಟಿ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ. ಧನ್ಯವಾದ : ಪ್ರೊ. ಅಶೋಕ್ ಕುಮಾರ್. ನಿರ್ವಹಣೆ - ಉಪನ್ಯಾಸಕ ಡಾ.ಶ್ರೀಷಕುಮಾರ್, ಉಪನ್ಯಾಸಕ ರೋಹಿಣಾಕ್ಷ ಮತ್ತು ಶ್ರೀ ಪಡ್ರೆ
ವೇದಿಕೆಯಲ್ಲಿ - ಬಲರಾಮ ಆಚಾರ್ಯ, ಅಧ್ಯಕ್ಷರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು; ಶ್ರೀಕೃಷ್ಣ ಭಟ್, ಉಪಾಧ್ಯಕ್ಷರು, ಕ್ಯಾಂಪ್ಕೋ ಲಿ.,; ಶಾಂತಾರಾಮ ಹೆಗ್ಡೆ, ಅಧ್ಯಕ್ಷರು, ಟಿ.ಎಸ್.ಎಸ್.ಲಿ. ಶಿರಸಿ; ಕೆ.ನರಸಿಂಹ ನಾಯಕ್, ಉಪಾಧ್ಯಕ್ಷರು, ಮ್ಯಾಮ್ಕೋಸ್ ಲಿ., ಶಿವಮೊಗ್ಗ; ಶಂಕರ ಭಟ್, ಬದನಾಜೆ,ಆಯುರ್ವೇದ ಸಂಶೋಧಕರು; ಮಂಚಿ ಶ್ರೀನಿವಾಸ ಆಚಾರ್, ಅಧ್ಯಕ್ಷರು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್, ಪುತ್ತೂರು ಮತ್ತು ಪಿ.ಮಧುಸೂಧನ ರಾವ್, ಮ್ಯಾನೇಜಿಂಗ್ ಡೈರೆಕ್ಟರ್, ಕ್ಯಾಂಪ್ಕೋ ಲಿ.,
ಮೇಳ ವಿಶೇಷ: * ಗ್ರಾಮೀಣ ಬದುಕಿನ ಹಿನ್ನೆಲೆಯುಳ್ಳ ಸಭಾವೇದಿಕೆ * ರೈತ ಸಂಶೋಧಕರಿಗೆ ಮನ್ನಣೆ - ಉತ್ತಮ ವ್ಯವಸ್ಥೆಯ ಮಳಿಗೆಗಳು * ಪೂರ್ಣಕುಂಭ ಸ್ವಾಗತ ಮತ್ತು ಚೆಂಡೆ ನಿನಾದದೊಂದಿಗೆ ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಸ್ವಾಗತ * ಸಮಾರಂಭದಲ್ಲಿ ರೈತ ಸಂಶೋಧಕರಿಗೆ ಗೌರವಾರ್ಪಣೆ * ಅಡಿಕೆಯಿಂದಲೇ ಸಿದ್ಧವಾದ ಪ್ರವೇಶ ದ್ವಾರ. * ರಾಜ್ಯ ರಾಜಕೀಯದ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜಕೀಯ ಧುರೀಣರ ಗೈರುಹಾಜರಿ.
ಚಿತ್ರ : ಕೃಷ್ಣ ಸ್ಟುಡಿಯೋ, ಪುತ್ತೂರು


0 comments:

Post a Comment