Wednesday, October 28, 2009

ಪುತ್ತೂರಿನಲ್ಲಿ ತ್ರಿದಿನ ಅಡಿಕೆ ಯಂತ್ರ ಮೇಳ -2009




ಕೃಷಿಕರಿಗೆ ಎಲ್ಲಾ ಅಡಿಕೆ ಸುಲಿ ಯಂತ್ರಗಳನ್ನು ಒಂದೇ ಕಡೆ ಕಣ್ಣಾರೆ ಕಾಣುವ ಅವಕಾಶ ಕಲ್ಪಿಸಲು ಅಕ್ಟೋಬರ್ 30ರಿಂದ ಮೂರು ದಿನಗಳ ಕಾಲ ಪುತ್ತೂರಿನಲ್ಲಿ 'ಅಡಿಕೆ ಯಂತ್ರ ಮೇಳ - 2009' ನಡೆಯಲಿದೆ.
ಮಂಗಳೂರಿನ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ನಡೆಸುವ ಈ ಕಾರ್ಯಕ್ರಮಕ್ಕೆ ಫಾರ್ಮರ್ ಫಸ್ಟ್ ಟ್ರಸ್ಟ್ ಸಹಕಾರ ನೀಡಲಿದೆ.
ಪುತ್ತೂರು ನೆಹರುನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೇಳ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಸಿ ಮತ್ತು ಗೋಟಡಿಕೆ ಸುಲಿಯುವ ಯಂತ್ರ ಮತ್ತು ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡಿಸುವ ಉಪಕರಣಗಳ ಪ್ರಾತ್ಯಕ್ಷಿಕೆ ಇರುತ್ತದೆ.
ಈ ವರೆಗೆ ಅಭಿವೃದ್ಧಿಪಡಿಸಲಾಗಿರುವ 30 ಕ್ಕೂ ಹೆಚ್ಚು ಅಡಿಕೆ ಸುಲಿಯುವ ಮತ್ತು ಸಿಂಪಡಣ ಉಪಕರಣ / ಯಂತ್ರಗಳ ಪೈಕಿ ಬೆರಳೆಣಿಕೆಯವನ್ನು ಬಿಟ್ಟರೆ ಉಳಿದವನ್ನೆಲ್ಲಾ ಮೆಕ್ಯಾನಿಕಲ್ ಎಂಜಿನೀರಿಂಗ್ನಲ್ಲಿ ಔಪಚಾರಿಕ ಶಿಕ್ಷಣ ಇಲ್ಲದಿರುವ ಕೃಷಿಕರೇ ಅಭಿವೃದ್ಧಿಪಡಿಸಿರುವುದು ಗಮನಾರ್ಹ.

ಕೃಷಿಕರಿಗೆ ಈ ಯಂತ್ರಗಳ ಪರಿಚಯ ಮಾಡುವುದರ ಜತೆಗೆ ಸಂಶೋಧಕ/ತಯಾರಕರಿಗೆ ತಮ್ಮ ಯಂತ್ರಗಳನ್ನು ನಾಳಿನ ಬಳಕೆದಾರರಿಗೆ ತೋರಿಸಿಕೊಡುವ ಅಪೂರ್ವ ಅವಕಾಶವೂ ಇದಾಗಿದೆ. ಅಡಿಕೆ ಕೃಷಿರಂಗದಲ್ಲಿ ಇಂಥ ಕಾರ್ಯಕ್ರಮ ನಡೆಯುವುದು ಇದೇ ಮೊದಲು.
ಮೇಳದ ಅಂಗವಾಗಿ ವಿಚಾರ ಸಂಕಿರಣ, ಸಂಶೋಧಕರೊಂದಿಗೆ ಮುಖಾಮುಖಿಗಳ ಸಭಾ ಕಾರ್ಯಕ್ರಮವೂ ಇರುತ್ತದೆ. ಮೇಳದ ನಿರ್ವಹಣೆಗಾಗಿ ಸಂಘಟನಾ ಸಮಿತಿಯೊಂದನ್ನು ರೂಪಿಸಿದ್ದು ಅದು ಭರದಿಂದ ಸಿದ್ಧತೆ ನಡೆಸತೊಡಗಿದೆ.
ಈಗಾಗಲೇ ಹೆಚ್ಚಿನ ಯಂತ್ರೋಪಕರಣ ತಯಾರಕರನ್ನು ಆಹ್ವಾನಿಸಿದ್ದು, ಕರೆ ಬಾರದ ಅಡಿಕೆ ಸುಲಿ/ಸಿಂಪಡಣಾ ಯಂತ್ರೋಪಕರಣ ಸಂಶೋಧಕ/ತಯಾರಕರು ಮೇಳ ಸಮಿತಿಯ ಸಂಚಾಲಕ ಪಿ.ಶ್ಯಾಮ ಭಟ್ಟರನ್ನು (94481 22272) ಸಂಪರ್ಕಿಸಬಹುದು.

0 comments:

Post a Comment