Saturday, May 5, 2012

ಮಾವಿನ ಊಟ-ತಳಿ ಹುಡುಕಾಟ

ಈಗ ಕಾಡು ಮಾವಿನ ಋತು. ಕರಾವಳಿ, ಮಲೆನಾಡುಗಳ ಊಟದ ಬಟ್ಟಲಿಗೆ ಕಾಡು ಮಾವಿನ ಖಾದ್ಯ ಬೀಳದಿದ್ದರೆ ಊಟ ಪರಿಪೂರ್ಣವಾಗದು. ಒಂದು ಕಾಲಘಟ್ಟದಲ್ಲಿ ಹಲಸು ಮತ್ತು ಮಾವು ಬದುಕಿಗೆ ಆಸರೆಯಾಗಿತ್ತು. ಬರಬರುತ್ತಾ ಆಧುನಿಕ ಆಹಾರಗಳು ಪ್ರವೇಶವಾದುವು. ಪಾರಂಪರಿಕ ಆಹಾರಗಳು ನೇಪಥ್ಯಕ್ಕೆ ಸರಿದುವು. ಕಾಡು ನಾಶದಿಂದಾಗಿ ಕಾಡುಮಾವಿನ ಸಂತತಿ ಕ್ಷೀಣಿಸುತ್ತಾ ಬಂದುವು.

ಈ ಹಿನ್ನೆಲೆಯಲ್ಲಿ ಮಾವಿಗೆ ಮಾತು ಕೊಡುವ ಕಾರ್ಯಕ್ರಮವೊಂದು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಬರು ರಾಜಗೋಪಾಲ ಭಟ್ಟರ ಮನೆಯಲ್ಲಿ 'ಮಾವಿನ ಊಟ-ತಳಿ ಹುಡುಕಾಟ' ಎಂಬ ವಿಶಿಷ್ಟ ಕಾರ್ಯಕ್ರಮವೊಂದು (ಮೇ 5) ಜರುಗಿತು. ಅಚ್ಚು ಹಾಕಿದ ಆಮಂತ್ರಣ ಪತ್ರವಿಲ್ಲ. ಪತ್ರಿಕೆಗಳಲ್ಲಿ ಜಾಹೀರಾತಿಲ್ಲ. ದೂರವಾಣಿ, ಬಾಯ್ಮಾತು.. ಹೀಗೆ ಆಗಮಿಸಿದ ಇನ್ನೂರೈವತ್ತು ಮಂದಿ ಮಾವು ಪ್ರಿಯರ ಉಪಸ್ಥಿತಿ ಸಮಾರಂಭದ ಯಶಸ್ಸಿನ ಕೀಲಿಕೈ. 'ಹಲಸು ಸ್ನೇಹಿ ಕೂಟ'ದ ಆಯೋಜನೆ.

ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್ ದೀಪಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ. ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಡಾ.ಅಶ್ವಿನಿ ಕೃಷ್ಣಮೂರ್ತಿಯವರ ಅಧ್ಯಕ್ಷತೆ. ಪತ್ರಕರ್ತ ನಾ. ಕಾರಂತ ಪೆರಾಜೆಯವರ ಗೌ.ಸಂಪದಕತ್ವದಲ್ಲಿ ಹೊರತಂದಿರುವ ವಾರ್ತಾಪತ್ರವನ್ನು ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಅನಾವರಣಗೊಳಿಸಿದರು.

ನಂತರ ಜರುಗಿದ ಮಾವಿನ ಮಾತುಕತೆಯಲ್ಲಿ ಡಾ. ಕೆ.ಎಸ್.ಕಾಮತ್, ಮಾಪಲತೋಟ ಸುಬ್ರಾಯ ಭಟ್, ಗೊರಗೋಡಿ ಶ್ಯಾಮ ಭಟ್ - ಮಾವಿನ ಅನುಭವಗಳನ್ನು ಪ್ರಸ್ತುತಪಡಿಸಿದರು. ಪ್ರೇಕ್ಷಕರಿಂದ ನಿರಂತರ ಪ್ರಶ್ನೆಗಳ ಮಾಲೆ. ಎಲ್ಲದಕ್ಕೂ ಅನುಭವಾಧಾರಿತವಾದ ಸಮರ್ಪಕ ಉತ್ತರ. ಕೃಷಿ ತಜ್ಞರಾದ ಗುರುರಾಜ ಬಾಳ್ತಿಲ್ಲಾಯ ಮತ್ತು ಕೃಷ್ಣ ಕೆದಿಲಾಯರಿಂದ ಮಾವಿನ ಕಸಿ ಕಟ್ಟುವ ಪ್ರಾತ್ಯಕ್ಷಿಕೆ. ಸರವು ಗಣಪತಿ ಭಟ್ಟರಿಂದ ಉಪ್ಪಿನಕಾಯಿ ತಯಾರಿಯಲ್ಲಿನ ವಿಚಾರಗಳ ಪ್ರಸ್ತುತಿ.

ತಳಿ ಸಂರಕ್ಷಕರಾದ ಡಾ.ಕೆ.ಎಸ್.ಕಾಮತ್ ಮತ್ತು ಮಾಪಲತೋಟ ಸುಬ್ರಾಯ ಭಟ್ಟರನ್ನು ಅಪರಾಹ್ನದ ಕಲಾಪದಲ್ಲಿ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆಯವರು ಗೌರವಿಸಿದರು. ಕೆ.ಎಸ್.ಕಾಮತರ ಕುರಿತು ಕೃಷಿಕ ವಸಂತ ಕಜೆ ಮತ್ತು ಮಾಪಲತೋಟದವರ ಕುರಿತು ಜಿ.ಶ್ಯಾಮ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಕೊನೆಯಲ್ಲಿ ಹಲಸು ಆಂದೋಳನದ ರೂವಾರಿ ಶ್ರೀ ಪಡ್ರೆಯವರಿಂದ ಪವರ್ ಪಾಯಿಂಟ್ ಮೂಲಕ 'ಶ್ರೀಲಂಕಾ ಪ್ರವಾಸ ಕಥನ'. ಶ್ರೀಲಂಕಾದ ಹಲಸಿನ ಮೌಲ್ಯವರ್ಧನೆಗಳ ಮಾಹಿತಿ.

ಬೈಂಕ್ರೋಡು ವೆಂಕಟಕೃಷ್ಣ ಮತ್ತು ಬೈಂಕ್ರೋಡು ಗಿರೀಶ್ ಸಾರಥ್ಯದಲ್ಲಿ ಹಲಸಿನ ತಳಿ ಆಯ್ಕೆ ಪ್ರಕ್ರಿಯೆ. ಮಿಡಿ ಮತ್ತು ಹಣ್ಣುಗಳ ವಿಭಾಗದಲ್ಲಿ ರುಚಿ ನೋಡಿ ತಳಿ ಆಯ್ಕೆ. ಆಯ್ದ ಮಾನದಂಡ.

ಆಯ್ಕೆಯಾದ ತಳಿಗಳು: ( ಆವರಣದಲ್ಲಿ ತಳಿಯ ಹೆಸರನ್ನು ಗಮನಿಸಿ) ಹಣ್ಣಿನ ವಿಭಾಗ: ಅನಿಲ್ ಕುಮಾರ್ ಐತನಡ್ಕ (ಜೀರಿಗೆ ತಳಿ), ಪಡಾರು ರಾಮಕೃಷ್ಣ ಶಾಸ್ತ್ರಿ (ಬರಿಮಾರುತೋಡು), ಕೇಶವ ಭಟ್ ಕಾಸರಗೋಡು (ಮಲಪ್ಪುರಂ 1), ಶಿರಂಕಲ್ಲು ಆರ್. ಎನ್. ಭಟ್ (ಚೆಂಡೆ ರೆಡ್), ಮುಂಡತ್ತಜೆ ಸದಾಶಿವ ಭಟ್ (ಬೊಳ್ಳೆ) ಮತ್ತು ಸುಬ್ರಾಯ ಭಟ್ ಮೀಯಂದೂರು (ಮೀಯಂದೂರು-2).

 ಮಿಡಿ ವಿಭಾಗ: ಅನಿಲ್ ಕುಮಾರ್ ಐತನಡ್ಕ (ಬಾಕುಡ), ಅಜಕ್ಕಳ ನಾರಾಯಣ ಭಟ್ (ತುಳಸಿಮೂಲೆ ಅಜಕ್ಕಳ), ಮಲ್ಯ ಶಂಕರನಾರಾಯಣ ಭಟ್ (ಆನಂದ ರೈ, ಜರಿಮೂಲೆ, ಕೆರೆಬದಿ) ಮುಳಿಯ ವೆಂಕಟಕೃಷ್ಣ ಶರ್ಮ (ನಡುಮನೆ ಜೀರಿಗೆ) ಗಿರೀಶ ಬೈಂಕ್ರೋಡು (ದಾಮೋದರ), ಡಾ.ಅಶ್ವಿನಿ ಕೃಷ್ಣಮೂರ್ತಿ (ಪಾರ್ತಿಮೂಲೆ)

ಪ್ರದರ್ಶನ : ಸೋನ್ಸ್ ಫಾರ್ಮಿನ ಫಲಗಳು, ಎಡ್ವರ್ಡ್ ರೆಬೆಲ್ಲೋ ತೋಟದ ಫಲಗಳು, ಮಾಪಲತೋಟದ ಹಣ್ಣುಗಳು, ಪಡನಕಾಡ್ ಅಗ್ರಿ ಕಾಲೇಜಿನ ಮಾವಿನ ತಳಿಗಳು ಅಲ್ಲದೆ ಹಲವಾರು ಮಂದಿ ಕೃಷಿಕರು ಪ್ರದರ್ಶನಕ್ಕೆ ಮಾವು, ಹಲಸು, ಕಾಡುಹಣ್ಣುಗಳನ್ನು ತಂದಿದ್ದರು.

ಆರಂಭದಲ್ಲಿ ಕು:ಪೂಜಾಪಾರ್ವತಿ, ಕು.ಪಲ್ಲವಿ ಉಬರು ಇವರಿಂದ ಪ್ರಾರ್ಥನೆ. ಹಲಸು ಸ್ನೇಹಿ ಕೂಟದ ರೂವಾರಿ ಮುಳಿಯ ವೆಂಕಟಕೃಷ್ಣ ಶರ್ಮರಿಂದ ಸ್ವಾಗತ. ಬೆಂಗಳೂರು ಗಣಪತಿ ಭಟ್ಟರಿಂದ ಉಬರು ಮನೆಯ ಪರಿಚಯ, ಉಪನ್ಯಾಸಕ ವದ್ವ ವೆಂಕಟ್ರಮಣ ಭಟ್ಟರಿಂದ ಪ್ರಸ್ತಾವನೆ.

ಮಧ್ಯಾಹ್ನ ಪುಷ್ಕಳ ಮಾವಿನ ಭೋಜನ. ಕೃಷಿಕ ಶಿರಂಕಲ್ಲು ನಾರಾಯಣ ಭಟ್ಟರ ಉಸ್ತುವಾರಿಕೆ. ಮಲ್ಯ ಶಂಕರನಾರಾಯಣ ಭಟ್ ಮತ್ತು ವದ್ವ ವೆಂಕಟ್ರಮಣ ಭಟ್ಟರು ಪ್ರದರ್ಶನ ಉಸ್ತುವಾರಿಕೆ ವಹಿಸಿದ್ದರು. ಜಿಲ್ಲೆಯ ಎಲ್ಲಾ ಮಾಧ್ಯಮ ಬಂಧುಗಳು ಹಳ್ಳಿ ಮೂಲೆಯ ಚಿಕ್ಕ ಸಮಾರಂಭಕ್ಕೆ ಆಗಮಿಸಿರುವುದು ಒಟ್ಟೂ ಸಮಾರಂಭದ ಹೈಲೈಟ್.

3 comments:

Suresh said...

Kaadu/Kaatu mavina taliagalannu beleyisalu, uttama jaatiya gidagalu doreyuvantaha vyavasthe ideyo?

Na.Karanth Peraje said...

please call - (1) muliya venkatakrishna Sharma - 08255-205502, 9480200832 (2) Gururaj Balthillaya -9731734688

Suresh said...

Dhanyavadagau sir.

Post a Comment