Wednesday, August 8, 2012

ಹಸಿದ ಧರಣಿಗೆ ಬೇಕು, ಹಸಿರು ಹೊದಿಕೆ


ತುಮಕೂರು ಜಿಲ್ಲೆಯ ತೋವಿನಕೆರೆ ಬಸ್ ನಿಲ್ದಾಣ. ಶತಮಾನ ಆಯುಸ್ಸಿನ ನಾಲ್ಕೈದು ಮರಗಳು. ಬಾನಿಗೆ ಸೂರು ಹೊಸೆದಷ್ಟು ನೆರಳು. ಅದರಡಿ ಬಸ್ಸುಗಳ ನಿಲುಗಡೆ. ಅಂಗಡಿಗಳ ವ್ಯಾಪಾರ - ಗೂಡಂಗಡಿಯಿಂದ ಸಿಮೆಂಟ್ ಗೋಡೌನ್ ತನಕ. ನಿರಂತರ ವ್ಯವಹಾರ. ಮರದ ಕಟ್ಟೆಯಲ್ಲಿ ಸಮಯ ಕೊಲ್ಲುವ ಮಂದಿ! ಹಗಲಿಡೀ ಬ್ಯುಸಿ.

ಮರದ ಮೇಲೆ 'ಪೂರ್ವಿಕರ' ಬಿಡಾರ. ಗುಬ್ಬಚ್ಚಿ, ಗಿಳಿಗಳ ವಾಸ. ಚಿಲಿಪಿಲಿಯ ನಿನಾದ.  ಮುಂಜಾನೆ ಏಳಲು ನೈಸರ್ಗಿಕ ಅಲಾರಂ. ಮಾನವ ವ್ಯವಹಾರಕ್ಕೂ, ತಮಗೂ ಸಂಬಂಧವಿಲ್ಲವೆನ್ನುವ ನಿರ್ಲಿಪ್ತ ಭಾವ. ಇದು ಒಂದೆರಡು ದಿವಸಗಳದ್ದಲ್ಲ, ಹಲವು ವರುಷಗಳ ಬದುಕು.

ತೋವಿನಕೆರೆಯಲ್ಲೂ ರಸ್ತೆ ಅಗಲೀಕರಣದ ಯೋಜನೆಗೆ ಹಸಿರು ನಿಶಾನೆ. ರಸ್ತೆಯಂಚಿನಲ್ಲಿದ್ದ ಮರಗಳ ಬಲಿ. ಪೇಟೆ ಮಧ್ಯದಲ್ಲಿದ್ದ ಐದಾರು ಮರಗಳೂ ಗರಗಸಕ್ಕೆ ಕೊರಳೊಡ್ಡಿ 'ನಾಡಿನ ಅಭಿವೃದ್ಧಿ'ಗಾಗಿ ದೇಹತ್ಯಾಗಕ್ಕೆ ಮುಂದಾಗಿದ್ದುವು. ಹಕ್ಕಿ ಪಿಕ್ಕೆಗಳಿಗೆ ಮಾತು ಬಾರದು. ಮಾತು ಬರುವ ನರನಿಗೆ ಮಾತು ಮೂಕವಾಗುವ ಹೊತ್ತು. ನಂತರದ ಸ್ಥಿತಿಯನ್ನು ಅಲ್ಲಿನ ಪತ್ರಕರ್ತರೋರ್ವರು ಬಣ್ಣಿಸುವುದು ಹೀಗೆ -

'ಯಾವಾಗ ಮರಗಳು ಉರುಳಿದುವೋ ತಾಪತ್ರಯಗಳ ಮಹಾಪೂರ. ಆಶ್ರಯಕ್ಕಾಗಿ ವಾನರ ಸೇನೆ ಮನೆಯೊಳಗೆ ನುಗ್ಗಿದುವು. ಆಹಾರಕ್ಕಾಗಿ ಅಡುಗೆ ಮನೆ ಜಾಲಾಡಿದುವು. ರಾತ್ರಿಯೂ ಉಪಟಳ. ನಿದ್ದೆಯಿಲ್ಲದ ರಾತ್ರಿಗಳು. ಗುಬ್ಬಚ್ಚಿ, ಗಿಳಿಗಳು ಒಂದೆರಡು ದಿವಸ ಹಾರಾಡಿ 'ತಪ್ಪಿಗೆ ಶಿಕ್ಷೆ ಅನುಭವಿಸಿ' ಎಂದು ಶಪಿಸಿ ತಮ್ಮ ಪಾಡಿಗೆ ಎಲ್ಲಿಗೋ ಹೋದುವು. ನಿತ್ಯ ತಂಪಿನ ಅನುಭವದ ಪೇಟೆಯಲ್ಲಿ ಬಿಸಿಲ ಧಗೆ. ಅಂಗಡಿಯ ಸೂರಿನಡಿಯಲ್ಲಿ ಬೆವರೊರೆಸಿಕೊಳ್ಳಬೇಕಾದ ಸ್ಥಿತಿ.  ಅಗಲೀಕರಣದ ಲೆಕ್ಕಾಚಾರದೊಳಗೆ ಬರುವ ಮರಗಳ ಬಲಿ ಅನಿವಾರ್ಯ. ಆದರೆ ಅದರಾಚೆಗಿನ ನೂರಾರು ಮರಗಳಿಗೂ ಸಾವು ಬಂತಲ್ಲಾ! ಅದನ್ನಾದರೂ ಉಳಿಸಬಹುದಿತ್ತು.'

ತೋವಿನಕೆರೆಯಂತಹ ನೂರಾರು ಕತೆಗಳು ಕನ್ನಾಡಿನ ಉದ್ದಕ್ಕೂ ಗೋಚರ. ಗರಗಸದ ದನಿಗೆ ಕಣ್ಣೀರ ಕತೆಗಳು ಮೌನವಾಗಿರುತ್ತವೆ. ಸರಕಾರಿ ಆದೇಶದ ಮುಂದೆ ಜನದನಿಗೆ ಎಲ್ಲಿಯ ಮಾನ. ಸೊಲ್ಲೆತ್ತಿದರೆ 'ಅಭಿವೃದ್ಧಿ ವಿರೋಧಿ'ಗಳೆಂಬ ಹಣೆಪಟ್ಟಿ. ಅಗಲೀಕರಣದ ಪ್ರಕ್ರಿಯೆಗೆ ತೊಂದರೆ ಕೊಡದ ಮರಗಳು ಯಾವ ಪಾಪ ಮಾಡಿವೆ? ಕೋಟಿ ಕೋಟಿ ವ್ಯವಹಾರದ ಕಾಮಗಾರಿಯಲ್ಲಿ ಅಗಲೀಕರಣದ ಪಾತ್ರವೆಷ್ಟೋ? ಪ್ರಶ್ನಿಸುವಂತಿಲ್ಲ. ಮೊದಲ ಮಳೆಯಲ್ಲೇ ಹೊಂಡ ಬೀಳುವ, ಕೊಚ್ಚಿಹೋಗುವ ಹೊಸ ರಸ್ತೆಗಳ ಪಾಡಿಗೆ ಪ್ರಯಾಣಿಕ ಮಾತ್ರ ಸಾಕ್ಷಿ.

ಮಡಿಕೇರಿಯ ಇಂಜಿನಿಯರ್ ಶಿವಕುಮಾರ್ ಕೊಡಗಿನ ರಸ್ತೆಯಂಚಿನ ಮರಗಳಿಗೆ ದನಿಯಾಗುತ್ತಾರೆ: ಮಡಿಕೇರಿಯಿಂದ ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ರಸ್ತೆಯಂಚಿನಲ್ಲಿ ರಾಜರ ಕಾಲದಲ್ಲೇ ನೆಟ್ಟು ಪೋಶಿಸಿದ ಹಲಸಿನ ಮರಗಳು ರುಚಿರುಚಿಯ ಹಣ್ಣನ್ನು ನೀಡುತ್ತಿದ್ದುವು. ಹಣ್ಣುಪ್ರಿಯರು ಕೊಯಿದು ಒಯ್ಯುತ್ತಿದ್ದರು. ಕೆಲವರಿಗೆ ಮರದ ನೆರಳಲ್ಲೇ ಕುಳಿತು ಹಣ್ಣುಗಳನ್ನು ತಿನ್ನುವ ಆನಂದ. ಪ್ರಾಣಿ, ಪಕ್ಷಿಗಳಿಗೆ ಸಮೃದ್ಧ ಆಹಾರ. ರಸ್ತೆಯುದ್ದಕ್ಕೂ ನೆರಳಿನ ಮಾಲೆ. ಈಗೆಲ್ಲವೂ ಭಣಭಣ.

ಸಾಲುಮರಗಳನ್ನು ನೆಟ್ಟು ಪೋಶಿಸುವುದು ಸಾಮಾಜಿಕ ಜವಾಬ್ದಾರಿ. ನೆಟ್ಟ ಗಿಡಗಳೆಲ್ಲವೂ ಫಲ ನೀಡುವ ಹಲಸು, ಮಾವುಗಳು. ಗಿಡ ನೆಡುವ ಹೊತ್ತಲ್ಲಿ 'ಪ್ರಪಂಚ ಇಷ್ಟೊಂದು ಬದಲಾಗಿಬಿಡುತ್ತದೆ' ಎಂಬ ಕಲ್ಪನೆ ಇರಲು ಸಾಧ್ಯವಿಲ್ಲ, ಬಿಡಿ. ಅಂದಿನ ಮರಗಳೆಲ್ಲಾ ಉರುಳಿವೆ. ಇನ್ನಷ್ಟು ಉರುಳುವಿಕೆಗೆ ದಿನಗಣನೆ ಉಳಿದಿವೆ. ಗರಗಸ ಹಿಡಿದ ಕೈಗಳಿಗೆ ದೊರೆಗಳ ಶ್ರೀರಕ್ಷೆ. ಮಾತೆತ್ತಿದರೆ ಶಿಕ್ಷೆಯ ಗುಮ್ಮ. ಗುತ್ತಿಗೆದಾರನಿಗೆ ಅವಸರ.

ಒಂದು ಮರ ಕಡಿದರೆ ಅದರ ಮೂರು ಪಟ್ಟು ಗಿಡಗಳನ್ನು ನೆಡುವ ಸರಕಾರಿ ಯೋಜನೆ ಹೆಜ್ಜೆಯೂರುತ್ತಿದೆ. ಅಗಲೀಕರಣವಾದ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದರೆ ಭವಿಷ್ಯದಲ್ಲಿ ಹಳೆಯ ಇತಿಹಾಸವೇ ಮರುಕಳಿಸಬಹುದೇನೋ! ಇಂದು ಅರುವತ್ತಡಿ ಅಗಲ, ಮುಂದೆ ನೂರಡಿ ಅಗಲವಾಗಬೇಕಾದರೆ? ಯೋಚಿಸಬೇಕಾದ ವಿಚಾರ. ಮತ್ತೆ ಪುನಃ ಗರಗಸದ ಸದ್ದು. ಅದನ್ನು ಕೇಳುವ ಜನಸಮೂಹ ಬದಲಾಗಿರುತ್ತದಷ್ಟೇ.

          ಮಾರ್ಗದ ಇಕ್ಕೆಲಗಳಲ್ಲಿ ನೆಡುವ ಗಿಡಗಳು 'ಬದುಕುಳಿದರೆ' ಬೆಳೆಯುತ್ತವೆ. ವಿದ್ಯುತ್ ಲೈನಿಗೆ ಸ್ಪರ್ಶಿಸುತ್ತಾ ಏರುತ್ತವೆ. ಕೊನೆಗೊಮ್ಮೆ ವಿದ್ಯುತ್ ಇಲಾಖೆಯ ಕೊಡಲಿಗೆ ಆಹುತಿ. ಒಂದು ಇಲಾಖೆಯು ಗಿಡಗಳನ್ನು ಬೆಳೆಯುವತ್ತ ಆಸ್ಥೆ ವಹಿಸಿದರೆ, ಮತ್ತೊಂದರಿಂದ ಕತ್ತರಿ ಪ್ರಯೋಗ. ಪರಸ್ಪರ ಮಾತುಕತೆಯಿಂದ ಗೊಂದಲವನ್ನು ಪರಿಹರಿಸಿಕೊಳ್ಳಬಹುದು. ಆದರೆ ಆಡಳಿತ ಯಂತ್ರದೊಳಗಿನ ಕಾಣದ ಕೈಗಳಿಗೆ ಬೇಕಾಗಿಲ್ಲ. ಮತ್ತದೇ ಟೆಂಡರ್, ಕಾಮಗಾರಿ, ಕೋಟಿಗಳ ಲೆಕ್ಕ. ಪರ್ಸಂಟೇಜ್ ಮಾತುಕತೆ.

          'ಕೊಡಗಿನಲ್ಲಿ ಈ ವರುಷ ಬಿದಿರು ಹೂಬಿಟ್ಟಿವೆ. ಇಲಾಖೆಗಳು ಬಿದಿರನ್ನು ನೆಡುವ ಕೆಲಸಗಳನ್ನೂ ಜತೆಜತೆಗೆ ಮಾಡುತ್ತಿವೆ. ಜನವಸತಿ ಪ್ರದೇಶದಲ್ಲಿ ನೆಡುವ ಬದಲು ಕಾಡಿನಲ್ಲಿ ಬಿದಿರು ಗಿಡಗಳನ್ನು ನೆಡಬೇಕಾದುದು ಅಗತ್ಯ. ಅವು ಬೆಳೆದಾಗ ಆನೆಗಳು ನಾಡಿಗೆ ಬಾರದಂತೆ ತಡೆಯಬಹುದು' ವಾಸ್ತವದತ್ತ ಬೆರಳು ತೋರುತ್ತಾರೆ ಶಿವಕುಮಾರ್. ಕೆಲಸಗಳು ಕಾಟಾಚಾರವಾದಾಗ ಪ್ರಮಾದಗಳು ಮರುಕಳಿಸುತ್ತಲೇ ಇರುತ್ತವೆ. ಜನವಸತಿ ಇರುವಲ್ಲಿ ಬಿದಿರು ಗಿಡಗಳನ್ನು ನೆಟ್ಟರೆ ಪರಿಣಾಮ ಊಹಿಸಿ. ದೊಡ್ಡ ದನಿಯಿಂದ ಪ್ರಮಾದತ್ತ ಬೆರಳು ತೋರಿದರೆ, ಅನುಷ್ಠಾನದ ದಾಖಲೆಗಳು ಮುಂದೆದ್ದು ಬರುತ್ತವೆ.

          ಜುಲೈ ಬಂತೆಂದರೆ ಗಿಡಗಳಿಗೆ ಬೇಡಿಕೆ. ವನಮಹೋತ್ಸವದ ಸಂಭ್ರಮ. ಒಂದು ಕಾಲಘಟ್ಟದಲ್ಲಿ ಅಕೇಶಿಯಾ, ನೀಲಗಿರಿಯನ್ನು ರತ್ನಗಂಬಳಿ ಹಾಸಿ ಸ್ವಾಗತಿಸಿದ್ದೇವೆ. ನೆಲದ ತೇವಾಂಶ ಹೀರಿ, ಮಣ್ಣಿನ ಫಲವತ್ತತೆಯನ್ನು ನಾಶ ಮಾಡುತ್ತವೆ ಎಂದು ಅರಿವಾಗಲು ವರುಷಗಳೇ ಬೇಕಾದುವು. 'ಕನ್ನಾಡಿನಲ್ಲಿ ಇಪ್ಪತ್ತು ಲಕ್ಷ ಎಕರೆ ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ ಸಂಸಾರಗಳಿವೆ! ಒಂದುವರೆ ಸಾವಿರಕ್ಕೂ ಮಿಕ್ಕಿ ನೀಲಗಿರಿ ತೋಪುಗಳಿವೆ' ಎನ್ನುವುದು ಲೆಕ್ಕಾಚಾರ. 'ಮೂರು ವರುಷದಲ್ಲಿ ಅವನ್ನೆಲ್ಲಾ ಬೇರು ಸಹಿತ ಕೀಳುತ್ತೇವೆ' ಸಚಿವರೊಬ್ಬರ ಧೀರವಾಕ್ಯ.

          ಸರಿ, ಬೇರು ಸಹಿತ ಕಿತ್ತಾಯಿತು. ಸಮೂಲ ನಾಶವಾಯಿತು ಎಂದಿಟ್ಟುಕೊಳ್ಳಿ. ಮುಂದಿನ ನಡೆ?  ಕಾಡು ಮರಗಳ ಅಭಿವೃದ್ಧಿ. 'ಹಣ್ಣಿನ ಗಿಡಗಳಿಗೆ ಹೆಚ್ಚು ಒತ್ತು' ಎನ್ನುವುದು ಹೇಳಿಕೆ. ಕಾಡು ಗಿಡಗಳೊಂದಿಗೆ ಪ್ರಾಣಿಗಳಿಗೆ, ಪಕ್ಷಿಗಳಿಗೆ ಉಪಯೋಗವಾಗುವಂತಹ ಹಣ್ಣಿನ ಗಿಡಗಳನ್ನು ಅಭಿವೃದ್ಧಿ ಪಡಿಸುವುದು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಆದ್ಯತೆಯ ಕೆಲಸವಾಗಬೇಕು. ನವಿಲಿನಿಂದ ಆನೆಯವರೆಗಿನ ವಿವಿಧ ಪ್ರಾಣಿ-ಪಕ್ಷಿಗಳಿಗೆ ಬೇಕಾದ ಆಹಾರಗಳು ಕಾಡಲ್ಲೇ ಸಿಗುವಂತಹ ದೂರದೃಷ್ಟಿ ಕೆಲಸಗಳು ಕಾಲದ ಆವಶ್ಯಕತೆ. ನಂನಮ್ಮ ಸರಹದ್ದಿನಲ್ಲಿ ಎಂತೆಂತಹ ಗಿಡಗಳು ಬೇಕು ಎನ್ನುವುದು ಪಟ್ಟಿಯಾಗಿಬಿಟ್ಟರೆ ಇಲಾಖೆಯಿಂದ ಪಡೆಯಲು ಕಷ್ಟವಾಗದು. ಈ ಕೆಲಸಕ್ಕೆ ಮೊದಲು ಬೇಕಾಗಿದೆ, ಮನಸ್ಸಿನ ಟ್ಯೂನ್.

          ಮಾರ್ಗದ ಇಕ್ಕೆಡೆಗಳಲ್ಲಿ ಗಿಡ ನೆಡಲು ತೋರುವಷ್ಟೇ ಆಸಕ್ತಿ ಕಾಡನ್ನೂ ಅಭಿವೃದ್ಧಿಪಡಿಸುವತ್ತ ಬೆಳೆಯಬೇಕು. ಅಲ್ಲಿ ಗಿಡ ನೆಡುವಾಗ ಫೋಟೋಗ್ರಾಫರ್ ಇಲ್ಲದಿರಬಹುದು! ಬಹುಪರಾಕ್ ಹೇಳುವ ಮಂದಿ ಬಾರದಿರಬಹುದು! ಮಾಧ್ಯಮಗಳಲ್ಲಿ ಬೆಳಕಾಗದಿರಬಹುದು. ಉರುಹೊಡೆದ ಢಾಳು ಭಾಷಣಕ್ಕೆ ಅವಕಾಶ ಇಲ್ಲದಿರಬಹುದು! ಉಜ್ವಲ ನಾಳೆಗಳಿಗೆ, ಭವಿಷ್ಯದ ಏಳಿಗೆಗೆ 'ಕೋಟಿಗಳು' ಪ್ರಯೋಜನಕ್ಕೆ ಬಾರವು. ಮುಗಿಲೆತ್ತರಕ್ಕೆ ಏರಿದ ಮರಗಳು ಮನುಕುಲದ ಬದುಕಿನ ಉಸಿರಾಗುತ್ತದೆ. ಗರಗಸದ ಸದ್ದಿಗೆ ಮಿಡಿವ ಹೃದಯ, ನಾಳೆ ಆಮ್ಲಜನಕಕ್ಕಾಗಿ ಪರದಾಡುವ ಕ್ಷಣವನ್ನು ಊಹಿಸಿಕೊಂಡರೆ  ಮಾತು ಸ್ತಬ್ಧವಾಗುತ್ತದೆ. ಹೃದಯದ ಬಡಿತ ಹೆಚ್ಚುತ್ತದೆ.

          ಎಲ್ಲವೂ ಸರಕಾರವನ್ನು ನೆಚ್ಚಿಕೊಳ್ಳುವಂತಿಲ್ಲ. ಅವರಿಗೂ ಮಿತಿಗಳಿವೆ. ನಾಗರಿಕರಾದ ನಾವ್ಯಾಕೆ ಮುಸುಕೆಳೆದು ಗೊರಕೆ ಹೊಡೆಯುತ್ತೇವೆ? ಹಿತ್ತಿಲಿನಲ್ಲಿ, ತೋಟದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು, ಪೋಶಿಸುವ ಮನಸ್ಸು ಏಕೆ ಬರುತ್ತಿಲ್ಲ? ನಮ್ಮ ನಡುವೆ ಇರುವ ಹಿಡಿಯಷ್ಟು ಮನಸ್ಸುಗಳ ಸದ್ದಿಲ್ಲದ ಪ್ರಯತ್ನದ ಫಲವಾಗಿಯೇ ಇಂದು ಪ್ರಕೃತಿ ಉಸಿರಾಡುತ್ತಿದೆ.

ಮಳೆ ಬಂದಿಲ್ಲ ಎಂದಾಗ ಮೋಡಬಿತ್ತನೆ ಮಾಡಲು ಮುಂದಾಗುವ ಕೈಗಳು ಯಾಕೆ ಒಂದು ಗಿಡವನ್ನು ನೆಡಲು ಯೋಚಿಸುತ್ತಿಲ್ಲ? ರಸ್ತೆ ಅಗಲೀಕರಣಕ್ಕಾಗಿ ಮರ ಕಡಿಯುವ ಆದೇಶಕ್ಕೆ ಸಹಿ ಗೀಚುವ  ಕೈಗಳು ಮರವನ್ನೆಂದೂ ಮುಟ್ಟಿರಲಾರದು, ತಟ್ಟಿರಲಾರದು. ಅವರಿಗೆಲ್ಲಿನ ಕಾಡಿನ ಸ್ಪಂದನ, ಹಸುರಿನ ಸ್ಪರ್ಶ?

0 comments:

Post a Comment