Monday, July 27, 2015

ಬದುಕಿನ ಹಳಿ ಜಾರುತ್ತಿದೆ, ಕೈತಾಂಗು ಬೇಕಾಗಿದೆ!

                 ಮ್ಯಾಗಿ ಬೂದಿಯಾಗುತ್ತಿದ್ದಂತೆ ಅದಕ್ಕಂಟಿದ ಕಳಂಕ ಮಸುಕಾಗುತ್ತಿದೆ! ಕಂಪೆನಿಯೇ ಕೋಟಿಗಟ್ಟಲೆ ಉತ್ಪನ್ನವನ್ನು ಸುಡುತ್ತಿದೆ. ಮ್ಯಾಗಿ ಮರೆವಿಗೆ ಜಾರುತ್ತಿರುವಾಗಲೇ ಆಹಾರ ಕಲಬೆರಕೆಯ ನಿರಾಕಾರ ಮುಖಗಳ ಸಾಕಾರತೆಯ ಗೋಚರ.  ಇವೆಲ್ಲಾ ಗೊತ್ತಿದ್ದೂ ಒಪ್ಪಿಕೊಂಡ ಮನಃಸ್ಥಿತಿ. ಒಂದು ಸಂಸ್ಕೃತಿಯನ್ನು ಹಾಳುಮಾಡಲು ಅಲ್ಲಿನ ಭಾಷೆ ನಾಶವಾದರೆ ಸಾಕಂತೆ. ಮನುಕೋಟಿ ನಾಶವಾಗಲು ಬಾಂಬ್ಗಳು, ಅಣ್ವಸ್ತ್ರಗಳು ಬೇಡ. ಆಹಾರ ವಿಷವಾದರೆ ಸಾಕು. ನಾವೆಲ್ಲಾ ಈ ಜಾಡಿನ ಜಾರುವ ಬದುಕಿನ ಹಳಿಯಲ್ಲಿ ವಾಲುತ್ತಿದ್ದೇವೆ.
                ವಾಹಿನಿಗಳನ್ನು ಆಗಾಗ್ಗೆ ಇಣುಕುತ್ತಿರುತ್ತೇನೆ. ಹಿಂಜುವ ಧಾರಾವಾಹಿ ಭರಾಟೆಯ ಮಧ್ಯೆಯೂ ಆಹಾರ ಸೇರಿರುವ ವಿಷಗಳ ಘೊರತೆಯ ಪ್ರಸಾರ. ಅಧ್ಯಯನ ವರದಿಗಳ ಬಿತ್ತರ. ಕಲಬೆರಕೆ ವ್ಯವಹಾರದ ಬಯಲು. ಲೋಕಕ್ಕೂ ತಮಗೂ ಸಂಬಂಧವಿಲ್ಲದಂತಿರುವ ಕಾಳಸಂತೆಕೋರರ ದರ್ಶನ. ಬೆಣ್ಣೆ, ಸಾಸ್, ಹಾಲು, ಐಸ್ಕ್ರೀಮ್, ಎಣ್ಣೆ... ಕೃತಕಗಳ ಮಾಲೆಗಳ ಯಶೋಗಾಥೆ ಬರುತ್ತಿದ್ದಾಗ ಚಾನೆಲ್ ಬದಲಾಯಿಸುತ್ತೇವೆ! ಕನಿಷ್ಠ ಅರಿವಿನ ದೃಷ್ಟಿಯಿಂದಲಾದರೂ ನೋಡಬಾರದೇ. ಮಕ್ಕಳಿಗೂ ತೋರಿಸಬಾರದೆ? ಬೆಳೆಯುತ್ತಿರುವ ಕಂದಮ್ಮಗಳ ಭವಿತವ್ಯಕ್ಕಾದರೂ ಆಹಾರದ ಅರಿವನ್ನು ಹೆಚ್ಚಿಸಿಕೊಳ್ಳಲೇಬೇಕಾಗಿದೆ.
               ಬಣ್ಣ ಹಾಕಿದ ಉಣ್ಣುವ ಅಕ್ಕಿಯಿಂದ ಬೇರ್ಪಟ್ಟ ಬಣ್ಣದೊಳಗೆ ಆರೋಗ್ಯದ ಗುಟ್ಟಿಲ್ಲ. ವಿಷ ಮಜ್ಜನದಿಂದ ಮಿಂದು ಅಡುಗೆ ಮನೆ ಸೇರಿದ ತರಕಾರಿಗಳಲ್ಲಿ ಸ್ವಾಸ್ಥ್ಯದ ಸೋಂಕಿಲ್ಲ. ಹಾಲೆನ್ನುತ್ತಾ ಹಾಲಾಹಲವನ್ನು ಕುಡಿಸುವ ಪ್ಯಾಕೆಟ್ಟಿನಲ್ಲಿ ಸದೃಢ ಭವಿಷ್ಯವಿಲ್ಲ. ಇಂತಹ ಇಲ್ಲಗಳ ಮಧ್ಯೆ ಈಗ ಹೊಕ್ಕಿದೆ - 'ಪ್ಲಾಸ್ಟಿಕ್ ಅಕ್ಕಿ'ಯ ಗುಮ್ಮ. ಚೀನದಿಂದ ಹಾರಿ ಭಾರತ ಸೇರಿದೆ. ವಿಯೆಟ್ನಾಂ, ಇಂಡೋನೇಶ್ಯಾ, ಮಲೇಶ್ಯಾ, ಸಿಂಗಾಪುರದಲ್ಲೂ ತಲ್ಲಣವನ್ನುಂಟುಮಾಡಿದೆ. ಬಹುಶಃ ಇಂದಲ್ಲ, ಹಲವು ವರುಷಗಳಿಂದಲೇ ಈ ಜಾಲ ಅಜ್ಞಾತವಾಗಿ ಜೀವಂತವಾಗಿದ್ದಿರಬಹುದು.
               ಅಕ್ಕಿಯೊಂದಿಗೆ ಕೃತಕ ಪ್ಲಾಸ್ಟಿಕ್ ಅಕ್ಕಿಯನ್ನು ಮಿಶ್ರ ಮಾಡಿದರೂ ಗೊತ್ತಾಗದಂತಹ ತಾಜಾತನ. ಸಿಹಿ ಗೆಣಸು, ಪ್ಲಾಸ್ಟಿಕ್, ಕೃತಕ ರಾಸಾಯನಿಕ ಅಂಟು ಇದರ ಒಳಸುರಿ. 'ಮೂರು ಬೌಲ್ ಪ್ಲಾಸ್ಟಿಕ್ ಅಕ್ಕಿಯ ಅನ್ನವನ್ನು ತಿಂದರೆ ಒಂದು ಪ್ಲಾಸ್ಟಿಕ್ ಚೀಲ ತಿಂದ ಸಮವಂತೆ!' ವಿಷವನ್ನು ತಿಂದು ತಿಂದು ವಿಷದ ಕೊಂಪೆಯಾದ ನಮ್ಮ ದೇಹವು ಪ್ಲಾಸ್ಟಿಕನ್ನು ಕೂಡಾ ಕರಗಿಸಬಲ್ಲುದು! ಸಿಂಥೆಟಿಕ್ ಅಕ್ಕಿಯ ಹಿಂದಿನ ಆರ್ಥಿಕ ವ್ಯವಹಾರದೊಳಗೆ ಮನುಕುಲದ ನಾಶದ ಬ್ಯಾಲೆನ್ಸ್ ಶೀಟ್ ಇದೆ.
ಚೀನಾ ಯಾಕೆ, ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿರುವ ಉತ್ಪನ್ನಗಳನ್ನು ಸಾಚಾ ಎನ್ನಲು ಧೈರ್ಯ ಬರುವುದಿಲ್ಲ. ಈಚೆಗೆ ರಾಜಧಾನಿಯಿಂದ ಬಂಧುವೊಬ್ಬರು ರಾಗಿಯನ್ನು ತಂದಿದ್ದರು. ನೀರಿನಲ್ಲಿ ತೊಳೆದಾಕ್ಷಣ ಅರ್ಧಕ್ಕರ್ಧ ಕಾಳುಗಳು ಬಿಳುಪಾದುವು. ಅದಾವುದೋ ಕಾಳು ರೂಪದ, ಥೇಟ್ ರಾಗಿಯನ್ನೇ ಹೋಲುವ ಬಿಳಿ ಹರಳುಗಳು. ಬಣ್ಣ ಮಿಶ್ರಿತ ನೀರಿಗೂ ಕಮಟು ವಾಸನೆ. ಕೈಗಂಟಿದ ಬಣ್ಣ ತೊಳೆದುಹೋಗದಷ್ಟು ಗಾಢ. ಅವರಿಗೆ ತಿಳಿಸಿದಾಗ, ಇಲ್ಲಾರಿ..... ನಾವು ಮನೆಯಲ್ಲಿ ಅದನ್ನೇ ಬಳಸೋದು. ನಮಗೇನೂ ಆಗಿಲ್ಲ. ಅದು ರಾಗಿಯ ಸಹಜ ಬಣ್ಣವಲ್ವಾ.. ಎಂದಾಗ ಸುಸ್ತಾದೆ.
               ಹಿಂದೊಮ್ಮೆ ಕೇರಳದಲ್ಲಿ ಕಾಳುಮೆಣಸು ಮಾರುವ ದಲ್ಲಾಳಿಗಳು ಮಾಡಿದ ಎಡವಟ್ಟು ಹಸಿಯಾಗಿದೆ. ಐವತ್ತು ಟನ್ ಕಾಳುಮೆಣಸಿಗೆ ಡೀಸಿಲ್ ಮಿಶ್ರ ಮಾಡಿದ್ದರು. ತೇವದಿಂದಾಗಿ ಬೂಸ್ಟ್ ಹಿಡಿಯಬಹುದೆಂಬ ಭಯ.  ದೀರ್ಘ ತಾಳಿಕೆಯ ದೂರದೃಷ್ಟಿ. ವಿದೇಶಕ್ಕೆ ರಫ್ತಾದ ಉತ್ಪನ್ನವು ಪುನಃ ಮರಳಿದಾಗ ಆಡಳಿತ ಚುರುಕಾಯಿತು. ಅಧಿಕಾರಿಗಳು ಟೈ ಸರಿಮಾಡಿಕೊಂಡರು. ಕಲಬೆರಕೆ ಪತ್ತೆಯಾಯಿತು. ಸುಮಾರು ಮೂವತ್ತೆಂಟು ಕೋಟಿಗೂ ರೂಪಾಯಿಗೂ ಮಿಕ್ಕಿದ ಕಾಳುಮೆಣಸನ್ನು ಸುಡುವ ಆದೇಶಕ್ಕೆ ಸಹಿ ಬಿತ್ತು.
              ಕುಡಿಯುವ ನೀರಿನಿಂದ ಅನ್ನದ ಬಟ್ಟಲ ತನಕ ಮಿಳಿತವಾದ ವಸ್ತುಗಳಲ್ಲಿ ಕಲಬೆರಕೆಯಿದೆ ಎಂಬ ಸತ್ಯವನ್ನು ಆರೋಗ್ಯ ಸಚಿವರೇ ಒಪ್ಪಿಕೊಂಡ ಹೇಳಿಕೆಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ರಾಗಿಹಿಟ್ಟು, ಹೆಸರುಬೇಳೆ, ಅಡುಗೆ ಎಣ್ಣೆ, ಚಹ, ಕಾಫಿ, ಹಾಲು, ಸಾಸ್, ಅವಲಕ್ಕಿ... ಹೀಗೆ ನೂರರ ಹತ್ತಿರ ಉತ್ಪನ್ನಗಳಿಗೆ ಸಾಚಾ ಲೇಬಲ್ ಹಚ್ಚಲು ಕಷ್ಟವಾಗುವಷ್ಟು ಜಾಲ ವಿಸ್ತೃತವಾಗಿದೆ. ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಡ್ಡಿಕೊಂಡ ಉತ್ಪನ್ನಗಳು ಅಯೋಗ್ಯವೆಂದು ಛೀಮಾರಿ ಹಾಕಿಸಿಕೊಂಡಿವೆ! ಯೋಚಿಸಲಾಗದಷ್ಟು ಬೃಹತ್ತಾಗಿ ಬೆಳೆದ ಕರಾಳ ಲೋಕದ ನೆರಳಿನಿಂದ ಬದುಕಿನ ಹಳಿ ತಪ್ಪುತ್ತಿದೆ. ಕೈತಾಂಗು ಬೇಕಾಗಿದೆ.
               ಆಹಾರದಲ್ಲಿ ಕಲಬೆರಕೆ ಹೊಸ ವಿಷಯವಲ್ಲ. ರಾಜಾರೋಷವಾಗಿ ನಡೆಯುವ ವ್ಯವಸ್ಥಿತ ವ್ಯವಹಾರ. ಸರಕಾರದ ವರಿಷ್ಠರಿಂದ ಅಂಗಡಿ ಮಾಲಕನ ತನಕದ ಕೈಗಳ ಕೈವಾಡ. ಅಕ್ಕಿಗೆ ಬಣ್ಣ, ಹಾಲಿಗೆ ಬಿಳಿ ವರ್ಣದ ಇನ್ನೇನೋ, ಸಕ್ಕರೆಯೊಂದಿಗೆ ಮಿಶ್ರವಾಗುವ ಅದಾವುದೋ ಹರಳು.. ಹೀಗೆ ಗುರುತು ಹಿಡಿಯದಷ್ಟು ಜಾಣ್ಮೆಯ ಕರಾಮತ್ತು. ಅಪರೂಪಕ್ಕೊಮ್ಮೆ ಅಲ್ಲಿಲ್ಲಿ ಪತ್ತೆಯಾಗುತ್ತದೆ. ಕೇಸ್ ದಾಖಲಾಗುತ್ತದೆ. ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ನ್ಯಾಯಾಲಯದ ಮೆಟ್ಟಿಲು ಏರುತ್ತದೆ. ಆಮೇಲೆ ಏನಾಗುತ್ತದೆ ಅಂತ ಗೊತ್ತಿಲ್ಲ.
                  ಆಹಾರದ ಕಲಬೆರಕೆಯನ್ನಷ್ಟೇ ಮಾತನಾಡುತ್ತೇವೆ. ಹಿಂದೆ ತಿರುಗಿ ನೋಡಿ. ಆಹಾರ ಉತ್ಪಾದನೆ ಮಾಡುವ ಹೊಲದಿಂದ ತೊಡಗಿ, ಯಾಂತ್ರೀಕರಣದ ವರೆಗೆ ಕಲಬೆರಕೆಯ ಮಾಲೆ ಮಾಲೆ. ಬೇಕೋ, ಬೇಡವೋ ಹೊಲಗಳಿಗೆ ರಾಸಾಯನಿಕ ಬೆರಕೆ ಮಾಡಿದೆವು. ಕೀಟನಾಶಕವನ್ನು ಸುರಿದೆವು. ಬಿತ್ತನೆಬೀಜ ಮೊಳಕೆ ಬಾರದ ದೃಷ್ಟಾಂತ ಎಷ್ಟು ಬೇಕು? ನೀರಿನಲ್ಲೂ ಕಲಬೆರಕೆಯಿಲ್ವಾ. ಸೇವಿಸುವ ಗಾಳಿಯೂ ಕಲ್ಮಶ. ಹಾಲಿಗೆ ನೀರು ತಾನಾಗಿ ಹರಿದು ಬರುವುದಿಲ್ಲವಲ್ಲಾ-ಅಲ್ಲೂ ಬೆರಕೆಯ ಭೂತ. ಹಾಲಿಗೆ ಅದಾವುದೋ ಪುಡಿ ಬೆರೆಸಿ 'ದಪ್ಪ ಹಾಲು' ಮಾರುವ ನಿಪುಣರು ಎಷ್ಟಿಲ್ಲ?
               ಬಳಸುವ ಯಂತ್ರೋಪಕರಣಗಳಲ್ಲೂ ಕಲಬೆರಕೆ! ಲಕ್ಷಗಟ್ಟಲೆ ಹಣ ತೆತ್ತರೂ ಅಸಲಿ ಪಡೆಯಲು ತ್ರಾಸ.   ಸಬ್ಸಿಡಿ ಫೈಲುಗಳು ಮಾಡುವ ರಾದ್ದಾಂತಗಳೇ ಬೇರೆ. ಪ್ರದರ್ಶಿಸುವುದು ಅಸಲಿ. ಬಿಕರಿ ಮಾಡುವುದು ನಕಲಿ. ಮನುಷ್ಯನ ಮನಃಸ್ಥಿತಿಯಲ್ಲೂ ಗೊಂದಲ. ಸಾಚಾತನದ ಯೋಚನೆಯಿಲ್ಲ. ದಿಢೀರ್ ಹಣ ಮಾಡುವ ಚಿತ್ತಸ್ಥಿತಿ. ಇದ್ದ ಸಂಪನ್ಮೂಲವನ್ನು ವೃದ್ಧಿಸುವ ಯೋಜನೆ. ಆಗ ಕೆಟ್ಟ ಯೋಚನೆಯ ಬೀಜದ ಮೊಳಕೆ. ಮೊಳಕೆಯೊಡೆದು ಮರವಾದರೆ ಸಾಕು, ಕಳಚಿಕೊಳ್ಳದಷ್ಟು ಬೇರುಗಳನ್ನು ಬದುಕಿನಲ್ಲಿ ಇಳಿಸಿರುತ್ತದೆ. ಜೀವನದ ರೂಪೀಕರಣದ ರೂಪವೇ ಹೀಗಿದ್ದ ಮೇಲೆ ಕಲಬೆರಕೆಯ ಭೂತವನ್ನು ಹೊಡೆದೋಡಿಸುವುದು ಹೇಗೆ?
              'ಗ್ರಾಹಕರೇ ದೇವರು' ಎಂಬ ಫಲಕ ಅಂಗಡಿಯಲ್ಲಿ ನೋಡಿದ್ದೇನೆ. ಸರಿ, ದೇವರು ಮಾತನಾಡುವುದಿಲ್ಲವಲ್ಲಾ! ಭಕ್ತನ ಕೋರಿಕೆಯನ್ನು ಈಡೇರಿಸುವುದು ದೇವರ ಕೆಲಸ! ಭಕ್ತನ ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳಲಾಗದ ಅಸಹಾಯಕತೆ. ನೋಡಿಯೂ ನೋಡದಂತಿರಬೇಕಾದ ಸ್ಥಿತಿ. ಆಮಿಷಗಳ ಮಹಾಪೂರ. ರಿಯಾಯಿತಿಗಳ ಕೊಡುಗೆ. ಹೊಗಳಿಕೆಯ ಹೊನ್ನಶೂಲ. ಬೇಡದಿದ್ದರೂ ಸಾಲ ಸೌಲಭ್ಯ. ದೇವರಿಗೆ ಇನ್ನೇನು ಬೇಕು? ದಿವ್ಯ ಮೌನ.
               ಭಾರತದಲ್ಲಿ ಆಹಾರ ಸುರಕ್ಷತೆ ಕಾಪಾಡಿಕೊಳ್ಳಲು ಜಾರಿಯಲ್ಲಿದ್ದ 'ಆಹಾರ ಕಲಬೆರಕೆ ತಡೆ ಕಾಯ್ದೆ-1954', ನಿಯಮಗಳು-1955 ಹಾಗೂ ಇತರ ಆಹಾರ ಸಂಬಂಧದ ಕಾಯ್ದೆಗಳನ್ನು ರದ್ದು ಪಡಿಸಿ ಹೊಸದಾಗಿ ಏಕೀಕೃತವಾದ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006' ನಿಯಮಗಳು, ನಿಬಂಧನೆಗಳನ್ನು 2011 ಆಗಸ್ಟಿನಿಂದ ಜಾರಿಗೆ ತಂದಿದೆ. ತಿನ್ನಲು ಯೋಗ್ಯವಲ್ಲದ, ಹಾನಿಕಾರಕ, ನಕಲಿ ಪದಾರ್ಥಗಳನ್ನು ಬೆರೆಸುವುದು ತಪ್ಪೆಂದು ಒತ್ತಿ ಹೇಳಿದೆ. ಅನೈರ್ಮಲ್ಯ ವಾತಾವರಣದಲ್ಲಿ ಉತ್ಪನ್ನ ತಯಾರಿಕೆ, ಆಹಾರದಲ್ಲಿ ಪೌಷ್ಟಿಕತೆಯನ್ನು ಕಡಿಮೆ ಮಾಡುವುದು, ತಪ್ಪು ಜಾಹೀರಾತು ನೀಡುವುದು ತಪ್ಪೆಂದು ಹೇಳಿದೆ. ತಪ್ಪಿದಲ್ಲಿ ಇಪ್ಪತ್ತೈದು ಸಾವಿರದಿಂದ ಹತ್ತು ಲಕ್ಷ ರೂಪಾಯಿ ತನಕ ದಂಡ, ಆರೇಳು ತಿಂಗಳು ಜೀವಾವಧಿ ಶಿಕ್ಷೆ ವಿಧಿಸಿದೆ. ಇವೆಲ್ಲಾ ಪಾಲನೆ ಆಗುವುದು ಯಾವಾಗ?
              ಆಹಾರ ಕ್ರಮ, ಜೀವನ ಶೈಲಿಯಲ್ಲಿ ಮಾರ್ಪಾಡು, ಯೋಚನೆಗಳು ಮತ್ತು ಸಮಸಾಮಯಿಕ ವಿಚಾರಗಳ ಅರಿವನ್ನು ಪಡೆಯುವುದು ಅನಿವಾರ್ಯ. ಬಹುತೇಕ ಬಂದಿಗೆ ಕಲಬೆರಕೆ, ವಿಷಗಳ ಗಾಢತೆ ಗೊತ್ತಿದೆ. ಗಂಭೀರವಾಗಿ ಯೋಚಿಸಲು ಕಾಂಚಾಣದ ನಾದವು ಬಿಡುತ್ತಿಲ್ಲ. ಎಲ್ಲಿಯ ವರೆಗೆ ಆಹಾರದ ನಿರ್ಲಿಪ್ತತೆ ಇರುತ್ತದೋ ಅಲ್ಲಿಯ ವರೆಗೆ ಕಲಬೆರಕೆ ಮಾಡುವವರು ಮಗ್ಗುಲಲ್ಲೇ ಇರುತ್ತಾರೆ. ವಿಷ ಹಾಕುವವರು ನೆರೆಮನೆಯಲ್ಲೇ ಇರುತ್ತಾರೆ. ನಮ್ಮ ಮಕ್ಕಳ ಆರೋಗ್ಯ ಸ್ವಾಸ್ಥ್ಯಕ್ಕಾದರೂ ಆಹಾರ ಕ್ರಮಗಳಲ್ಲಿ ಮಾರ್ಪಾಡು ಅಗತ್ಯ. ಹೇಗೆಂಬುದು ನಂನಮ್ಮ ವಿವೇಚನೆಗೆ ಬಿಟ್ಟದ್ದು. ಯಾಕೆಂದರೆ ಅನುಸರಿಸುವ ಮಾದರಿಗಳು ಇಲ್ಲ. ಕತ್ತಲೆಯಲ್ಲಿ ಬೆಳಕನ್ನು ಅರಸಲು ಕಾನೂನು ಸಹಾಯ ಮಾಡದು.

ಚಿತ್ರ : ನೆಟ್
( ನೆಲದನಾಡಿ/ಉದಯವಾಣಿ/23-7-2015 ಪ್ರಕಟ)

0 comments:

Post a Comment