Wednesday, May 20, 2009

ಕಾಯಕಲ್ಪಕ್ಕೆ ಕಾದಿದೆ-ಐಗಿನಬೈಲು ಶಾಲೆ


ಸರಕಾರಿ ಶಾಲಾ ಆಧ್ಯಾಪಕರನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಸವಲತ್ತು, ರಜಾ, ವೇತನ.. ಸಮಾಜದಲ್ಲಿ ಗೌರವದ ಸ್ಥಾನ. ಭಾವೀ ಸಮಾಜವನ್ನು ನಿರ್ಮಿಸುವ ರೂವಾರಿಗಳು ಎಂಬ ಹಿರಿಮೆ-ಗರಿಮೆ. ಇಲ್ನೋಡಿ, ಸಾಗರದ ಐಗಿನಬೈಲಿನ ಚೆನ್ನಮ್ಮಾಜಿ ಪ್ರೌಢ ಶಾಲೆಯ ಆಧ್ಯಾಪಕರು ವೇತನರಹಿತವಾಗಿ ದುಡಿಯುತ್ತಿದ್ದಾರೆ!
ಎಲ್ಲರೂ ಕೃಷಿಮನೆಯಿಂದ ಬಂದವರು. ಆದರೆ ಮುಂದೆ 'ನಾವೂ ಸರಕಾರಿ ಉದ್ಯೋಗಿ'ಗಳಾಗುವೆವು ಎಂಬ ಆಸೆಕಂಗಳು. 1993ರಲ್ಲಿ ಈ ಶಾಲೆಯ ಆರಂಭ. ಖಾಸಗಿ ಆಡಳಿತ. ಆರು ಆಧ್ಯಾಪಕರು. ಎಂಟರಿಂದ ಹತ್ತರ ತನಕ ತರಗತಿ. ಐವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬಹುತೇಕ ಎಲ್ಲರೂ ಕೃಷಿ ಹಿನ್ನೆಲೆಯವರು. ಊರವರು ದಾನವಾಗಿ ನೀಡಿದ ಹತ್ತೆಕ್ರೆ ಜಾಗ ಶಾಲೆಯ ಆಸ್ತಿ.
ಜಾಗ ಇದ್ದರೆ ಸಾಕೇ? ಅಭಿವೃದ್ಧಿ ಮಾಡಲು 'ಎಂ ವಿಟಮಿನ್' ಬೇಕಲ್ವಾ! ಆಡಳಿತ ಮಂಡಳಿ ಆರ್ಥಿಕವಾಗಿ ಸದೃಢವಲ್ಲ. ಅಷ್ಟೋ ಇಷ್ಟೋ ಕೂಡಿಹಾಕಿದ್ದು ನಿರ್ವಹಣೆಗೆ ಸರಿಸಮ. ಶಾಲಾ ಶುಲ್ಕ ಉಳಿಸಿಕೊಳ್ಳುವ ಹಾಗಿಲ್ಲ. ಸರಕಾರಕ್ಕೆ ಸಲ್ಲಬೇಕು. ಡೊನೇಶನ್ ಪಡೆಯೋಣವೆಂದರೆ, ಎಲ್ಲರೂ ಹಿಂದುಳಿದವರೇ. ಆದರೂ ಕೈಲಾದಷ್ಟು ನೀಡಿದ್ದಾರೆ.
ಮುಖ್ಯಗುರು ಮಹಾಬಲೇಶ್ವರ ಹೇಳುತ್ತಾರೆ - 'ಪಾಪ, ಕೆಲವು ಮಕ್ಕಳಿಗೆ ಶಾಲಾ ಫೀಸ್ ಕಟ್ಟಲೂ ತ್ರಾಸವಾಗುತ್ತಿದೆ. ಅಂತಹವರ ಫೀಸನ್ನು ಆಧ್ಯಾಪಕರೆಲ್ಲರೂ ಸೇರಿ ನೀಡುತ್ತೇವೆ. ಕೊನೆಯ ಪಕ್ಷ ವಿದ್ಯಾರ್ಥಿಗಳು ಶಾಲೆಗೆ ನಿಯಮಿತವಾಗಿ ಬರಲಿ.' ಶಾಲಾ ಫಲಿತಾಂಶ ಶೇ.80ರ ಹತ್ತಿರವಿದೆ. ಕ್ರೀಡೆಯಲ್ಲೂ ಮುಂದು.
ಎಂ.ಎಸ್.ಐ.ಎಲ್., ಸ್ಥಳೀಯ ಗ್ರಾಮಪಂಚಾಯತ್ ಮತ್ತು ಸೇವಾ ಸಂಸ್ಥೆಗಳು ಕೈಜೋಡಿಸಿ, ಎರಡು ಶೌಚಾಲಯ ನಿರ್ಮಿಸಿವೆ. ಶಾಲಾ ಕಟ್ಟಡ ತೀರಾ ಶಿಥಿಲ. ಕಟ್ಟಡ ನೋಡಿ 'ಶಾಲೆ' ಅಂತ ಗುರುತಿಸುವುದು ಕಷ್ಟ. ಹೇಗೋ ಹೊಂದಿಸಿಕೊಂಡು ಹದಿನೈದು ವರುಷಗಳಿಂದ ವಿದ್ಯಾಸರಸ್ವತಿಯ ಆರಾಧನೆ ನಡೆಯುತ್ತಿದೆ. 'ಈ ವರೆಗೆ ಕೆಲಸ ಮಾಡಿ ಒಗ್ಗಿಹೋಗಿದೆ. ಇನ್ನೆಲ್ಲಿಗೆ ಹೋಗಲಿ' ಎನ್ನುವ ಅಧ್ಯಾಪಕ ಗುಂಡಪ್ಪ, 'ನಮಗೆ ಕೆಲಸ ಮಾಡಿ ಗೊತ್ತು, ಮುಂದಿನದು ಗೊತ್ತಿಲ್ಲ' ಎನ್ನುತ್ತಾರೆ ಮುಖ್ಯಗುರು. ಎಲ್ಲಾ ಆಧ್ಯಾಪಕರ ಒಳ ಮನಸ್ಸು ಇದೇ.
ವೇತನ ಅನುದಾನಕ್ಕಾಗಿ ನೀಡಿದ ಮನವಿಗಳ ಕಡತ ದೊಡ್ಡದಾಗಿದೆ. 'ಕಳೆದ ಆರೇಳು ವರುಷಗಳಿಂದ ಮಂಜೂರಾತಿಯು ಬಜೆಟ್ನಲ್ಲಿ ಇನ್ನೇನು ಸೇರುತ್ತದೆ ಎಂದು ನಿರೀಕ್ಷಿಸುತ್ತಿದ್ದಂತೆ ಮಾಯ! ಆದರೆ ಈ ವರುಷದ ಬಜೆಟ್ನಲ್ಲಿ ಶಾಲೆಯನ್ನು ಸೇರಿಸಿದ್ದಾರೆ' ಎಂಬ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಶಾಲಾಡಳಿತದ ಆಧ್ಯಕ್ಷ ಚೌಡಪ್ಪನವರು. ಸರಕಾರಿ ಅನುದಾನ ಸಿಕ್ಕಿದರೆ ಎಲ್ಲಾ ಅಧ್ಯಾಪಕರೂ ಸರಕಾರಿ ವೇತನ ಪಡೆಯುತ್ತಾರೆ.
ಹತ್ತೆಕ್ರೆಯಲ್ಲಿ ಕೃಷಿ ಮಾಡಿ, ಬರುವ ಆದಾಯವನ್ನು ಶಾಲಾಭಿವೃದ್ಧಿಗೆ ಬಳಸಲು ನೀಲನಕ್ಷೆ ಸಿದ್ಧವಾಗುತ್ತಿದೆ. ಬೆಂಗಳೂರಿನ ಫಲದಾಯಿ ಪೌಂಡೇಶನ್ನ ಮುಖ್ಯಸ್ಥ ಹಾಗೂ ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಸಿ.ಎಂ.ಎನ್.ಶಾಸ್ತ್ರಿಯವರು ಈಗಾಗಲೇ ಐದಂಕೆ ಮೊತ್ತ ನೀಡಿದ್ದಾರೆ. ಪೌಂಡೇಶನ್ ಮೂಲಕ ಮಕ್ಕಳಿಗೆ ಕೃಷಿಯ ನೇರ ಪಾಠ.
ಕಳೆದ ಸಾಲಿನಲ್ಲಿ ಮಕ್ಕಳೇ ಸಾವಿರಕ್ಕೂ ಮಿಕ್ಕಿ ತುಳಸಿ ಗಿಡಗಳನ್ನು ಮತ್ತು ಜೀರಿಗೆ ಮೆಣಸು ಕೃಷಿ ಮಾಡಿದ್ದಾರೆ. ಪೌಂಡೇಶನ್ನಿಂದ ಖರೀದಿ. ಈ ವರುಷ ಶತಾವರಿ ಕೃಷಿ. ಮರದ ಬುಡದಲ್ಲಿ ಬಿದ್ದ ಅಳಲೆಕಾಯಿ, ತಾರೆಕಾಯಿಗಳ ಸಂಗ್ರಹ. ಇದರಿಂದಾಗಿ ಶಾಲೆಗೂ ಒಂದಷ್ಟು ಮೊತ್ತ, ಜತೆಗೆ ಮಕ್ಕಳಿಗೂ ಪಾಠ. ಕೃಷಿಯನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಪ್ರತ್ಯೇಕವಾಗಿ ಕಲಿಸಲಾಗುತ್ತದೆ. 'ವಿಶಾಲ ಸ್ಥಳವಿದೆ. ಶಾಲಾಜಗಲಿಯಲ್ಲಿ ಕುಳಿತು ಪಶುಮಂದೆಯನ್ನು ಮೇಯಲು ಬಿಡುವುದು ಇಲ್ಲಿ ಆಭ್ಯಾಸವಾಗಿದೆ. ಹಾಗಾಗಿ ಮೊದಲಾಗಬೇಕಾದುದು ಆವರಣಕ್ಕೆ ಬೇಲಿ ವ್ಯವಸ್ಥೆ' ಮುಖ್ಯಗುರು ಆವಶ್ಯಕತೆಯತ್ತ ಬೊಟ್ಟು ಮಾಡುತ್ತಾರೆ..
ಇಲ್ಲಿ ಬೆಳೆದ ಯಾವುದೇ ವಸ್ತುಗಳು ಪೌಂಡೇಶನ್ ಮೂಲಕ ಮಾರಾಟ. ಅವರಿಂದ ಖರೀದಿಸಿದ ಕಡಲಾಚೆಯ ವ್ಯಾಪಾರಿ ಬಂಧುವೊಬ್ಬರು ಶಾಲೆಯ ಸ್ಥಿತಿಯನ್ನು ಕಂಡು ತಮ್ಮ ಕೊಡುಗೆಯನ್ನೂ ಪ್ರಕಟಿಸಿದ್ದರು.'ಕೃಷಿಯಿಂದ ಶಾಲೆಗೆ ಒಂದಷ್ಟು ಆದಾಯ ತರಬಹುದು. ವಿದ್ಯಾರ್ಥಿಗಳು, ಆಧ್ಯಾಪಕರಿಗೆ ಉತ್ಸಾಹವಿದೆ. ಹೆತ್ತವರ ಪ್ರೋತ್ಸಾಹವಿದೆ'-ಶಾಸ್ತ್ರಿಯವರ ದೂರದೃಷ್ಟಿ. ಎಲ್ಲವೂ ಸರಿಹೋದರೆ, ನಿಕಟ ಭವಿಷ್ಯದಲ್ಲಿ ಹಳ್ಳಿ ಶಾಲೆ 'ಸರ್ವ ಸಂಪನ್ಮೂಲ'ಗಳನ್ನು ಹೊಂದುವಂತಾದೀತು. ಈಗಾಗಲೇ ಅಡಿಕಟ್ಟು ನಿರ್ಮಾಣವಾಗಿದ್ದು ಕಟ್ಟಡ ಮೇಲೇಳಬೇಕಷ್ಟೇ. ಅಕ್ಷರಪ್ರೀತಿಯ ಮನಸ್ಸುಗಳು ಸ್ಪಂದಿಸಿದರೆ ಕಷ್ಟವಲ್ಲ.



1 comments:

Unknown said...

deepada buda kattalu.namma hattiraddu namage gottilla. tilisikottiddakke thanks

Post a Comment