Thursday, April 12, 2012

ಮುಳಿಯದಲ್ಲಿ 'ಹಲಸು ಸ್ನೇಹಿ ಕೂಟ'ಕ್ಕೆ ಚಾಲನೆ




"ನಿರ್ಲಕ್ಷಿತ ಹಲಸು ರೆಡಿ ಟು ಕುಕ್ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸಿದೆ. ಅದರ ಕನಿಷ್ಠ ಸಂಸ್ಕರಣೆಯ ತೊಡಕಿನಿಂದಾಗಿ ಅಡುಗೆ ಮನೆಯಿಂದ ದೂರವಾಗಿತ್ತು. ಈಗ ಆ ತೊಡಕು ದೂರವಾಗಿದೆ. ಪ್ಯಾಕೆಟ್ ಒಡೆದು ನೇರವಾಗಿ ಅಡುಗೆಗೆ ಬಳಸುವಂತಹ ಉತ್ಪನ್ನಗಳು ಕೇರಳದಲ್ಲಿ ಮಾರುಕಟ್ಟೆಗೆ ಬಂದಿವೆ, ಎಂದು ಹಲಸು ಆಂದೋಳನದ ರೂವಾರಿ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ ಹೇಳಿದರು.


ಅವರು ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ 'ಹಲಸು ತನ್ನಿ, ತಿನ್ನೋಣ ಬನ್ನಿ' ಕಾರ್ಯಕ್ರಮದಲ್ಲಿ ಹಲಸು ಪ್ರಿಯರನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ರೂಪಿತವಾದ 'ಹಲಸು ಸ್ನೇಹಿ ಕೂಟ'ವನ್ನು 'ಹಲಸಿನ ಹಣ್ಣನ್ನು ತುಂಡರಿಸುವ' ಮೂಲಕ ಉದ್ಘಾಟಿಸಿದರು. ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ವೇದಿಕೆಯಲ್ಲಿ ಕೃಷಿಕ ಅಮ್ಮಂಕಲ್ಲು ಕೇಶವ ಭಟ್, ಡಾ.ಡಿ.ಸಿ.ಚೌಟ ಉಪಸ್ಥಿತರಿದ್ದರು.


ಅಳಿಕೆ ಸುತ್ತಮುತ್ತಲಿನ ಸುಮಾರು ಇಪ್ಪತ್ತೈದು ಹಲಸಿನ ತಳಿಗಳು 'ರುಚಿ ನೋಡಿ, ತಳಿ ಆಯ್ಕೆ'ಗಾಗಿ ಬಂದಿದ್ದು, ಅದರಲ್ಲಿ ಉತ್ತಮ ಐದು ಹಲಸಿನ ತಳಿಯನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಕಾಡು ಹಣ್ಣುಗಳು, ನಾಡ ಹಣ್ಣುಗಳು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಹಲಸಿನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ. ಕೆ.ಎಸ್.ಕಾಮತ್ ಬಹುಮಾನ ವಿತರಿಸಿದರು.


ಭಾಗವಹಿಸಿದ ಎಲ್ಲರಿಗೂ ಹಲಸಿನ ಹಣ್ಣಿನ ಸಮಾರಾಧನೆ. ಶಿರಂಕಲ್ಲು ನಾರಾಯಣ ಭಟ್, ಉಬರು ರಾಜಗೋಪಾಲ ಭಟ್, ಮಲ್ಯ ಶಂಕರನಾರಾಯಣ ಭಟ್ ಹಲಸಿನ ಸಂಸ್ಕರಣೆ ಕಾಯಕದ ಸಾರಥ್ಯ ವಹಿಸಿದ್ದರು. 'ಹಲಸಿ ತನ್ನಿ, ತಿನ್ನೋಣ ಬನ್ನಿ' ಕಾರ್ಯಕ್ರಮದ ರೂವಾರಿ ಮುಳಿಯ ವೆಂಕಟಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು.


ಕಳೆದ ವರುಷ ಎಪ್ರಿಲ್ 14ರಂದು ಮುಳಿಯ ಶರ್ಮರ ಮನೆಯಲ್ಲಿ ಜರುಗಿದ ಪ್ರಥಮ 'ರುಚಿ ನೋಡಿ ತಳಿ ಆಯ್ಕೆ' ಪ್ರಕ್ರಿಯೆ, ಶಿರಂಕಲ್ಲು ನಾರಾಯಣ ಭಟ್ಟರ ಮನೆಯಲ್ಲಿ ಜರುಗಿದ ’ಸಾತ್ವಿಕ ಆಹಾರ’ ಕಾರ್ಯಾಗಾರ, ಆ ಬಳಿಕ ಉಬರಿನಲ್ಲಿ ಜರುಗಿದ ಹಲಸಿನ ಹಣ್ಣಿನ ಹಬ್ಬದ ಮುಂದುವರಿಕೆಯಾಗಿ ಈ ಕಾರ್ಯಕ್ರಮ ಜರುಗಿರುವುದು ಉಲ್ಲೇಖಾರ್ಹ.

0 comments:

Post a Comment