Wednesday, April 30, 2014

'ಮನೆಮನೆಗೆ ಸಿರಿಧಾನ್ಯದಡುಗೆ'







             "ಉತ್ತರ ಕರ್ನಾಟದಲ್ಲಿ ಬೆಳೆಯುವ ಸಿರಿಧಾನ್ಯಗಳ ಪರಿಚಯ ಕರಾವಳಿಯಲ್ಲಿ ತೀರಾ ಕಡಿಮೆ. ಸಿರಿಧಾನ್ಯಗಳ ಖಾದ್ಯವನ್ನುಂಡ ಹಿರಿಯರು ಆರೋಗ್ಯವಂತರಾಗಿ ಬಾಳಿದ್ದಾರೆ. ಸಿರಿಧಾನ್ಯಗಳನ್ನು ಬಡವರ ಆಹಾರ ಎಂದೇ ಬಿಂಬಿಸಲಾಗುತ್ತದೆ. ಆದರೆ ಬಡವರ ಆಹಾರದ ಪೌಷ್ಟಿಕಾಂಶಗಳ ಶ್ರೀಮಂತಿಕೆಯಲ್ಲಿ ಆರೋಗ್ಯದಾಯಕ ಬದುಕಿನ ಹಾದಿಯಿದೆ. ಸಿರಿಧಾನ್ಯಗಳನ್ನು ಬೆಳೆಸಿದಾಗಲೇ ಉಳಿಯುತ್ತದೆ. ಕರಾವಳಿ ಪ್ರದೇಶಕ್ಕೆ ಒಗ್ಗಬಹುದಾದ ಬೆಳೆಯಿದು," ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ 'ಸಿರಿ' ಗ್ರಾಮೋದ್ಯೋಗ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಮನೋರಮಾ ಭಟ್ ಅಭಿಪ್ರಾಯಪಟ್ಟರು.

           ಅವರು ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ 'ಹಲಸು ಸ್ನೇಹಿ ಕೂಟ' ಏರ್ಪಡಿಸಿದ 'ಮನೆಮನೆಗೆ ಸಿರಿಧಾನ್ಯದಡುಗೆ' ಕಾರ್ಯಕ್ರಮವನ್ನು ದೀಪಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಸಭಾಧ್ಯಕ್ಷತೆಯನ್ನು ವಹಿಸಿ, "ಕಳೆದ ಶತಮಾನದ ಮಧ್ಯಭಾಗದಲ್ಲಿ  ಕರಾವಳಿಯಲ್ಲಿ ರಾಗಿಯ ಬೆಳೆ ಮತ್ತು ಬಳಕೆ ಯಥೇಷ್ಟವಾಗಿತ್ತು. ಈಗದು ಅಪರೂವಾಗಿದೆ. ಕರ್ನಾಟಕದ ಎಲ್ಲಾ ಬೆಳೆಗಳ ಪರಿಚಯ ನಮಗಿರಬೇಕು," ಎಂದರು.

           ಹಲಸು ಸ್ನೇಹಿ ಕೂಟದ ನಾಲ್ಕನೇ ವಾರ್ತಾಪತ್ರವನ್ನು (ಸಂ: ನಾ. ಕಾರಂತ ಪೆರಾಜೆ) ಪ್ರಯೋಗಶೀಲ ಗೃಹಿಣಿ ಶ್ರೀಮತಿ ನಳಿನಿ ಸದಾಶಿವ ರಾವ್ ಬಿಡುಗಡೆಗೊಳಿಸಿ ಮಾತನಾಡುತ್ತಾ, ಕಿರುಧಾನ್ಯಗಳು ಸತ್ವಯುತವಾದ ಆಹಾರ. ಇದು ಆರೋಗ್ಯಕ್ಕೆ ಉತ್ತಮ. ಅಕ್ಕಿ, ಗೋಧಿಗಳಿಗೆ ಪರ್ಯಾಯವಾಗಿ ಹೊಂದಿಕೊಳ್ಳುವ ಸಾಮರ್ಥ್ಯವಿದೆ, ಎಂದರು. ವೇದಿಕೆಯಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ, ಉಬರು ರಾಜಗೋಪಾಲ ಭಟ್ ಉಪಸ್ಥಿತರಿದ್ದರು.

         ಕಡಂಬಿಲ ಕೃಷ್ಣಪ್ರಸಾದರ ಪ್ರಸ್ತಾವನೆಯೊಂದಿಗೆ ಸ್ವಾಗತ.  ನಾ. ಕಾರಂತ ಪೆರಾಜೆ ನಿರ್ವಹಣೆ. ಶಿರಂಕಲ್ಲು ನಾರಾಯಣ ಭಟ್ ವಂದನಾರ್ಪಣೆ. ಮಲ್ಯ ಶಂಕರನಾರಾಯಣ ಭಟ್, ಬೈಂಕ್ರೋಡು ಗಿರೀಶ, ಬೈಂಕ್ರೋಡು ವೆಂಕಟಕೃಷ್ಣ, ಅನಿಲ್ ಬಳೆಂಜ ವಿವಿಧ ಕಲಾಪವನ್ನು ನಿರ್ವಹಿಸಿದರು.

         ಪ್ರಾತ್ಯಕ್ಷಿಕೆ : ಸಿರಿಧಾನ್ಯಗಳ ಪರಿಚಯ ಮಾಡಿಕೊಟ್ಟವರು,  ಬೆಂಗಳೂರಿನ ಅನಿತಾ ಪೈಲೂರು. ನಳಿನಿ ಮಾಯಿಲಂಕೋಡಿ, ಶಿಲ್ಪಾ ಕಜೆ ಸಿರಿಧಾನ್ಯಗಳ ಖಾದ್ಯಗಳನ್ನು ಪ್ರಾತ್ಯಕ್ಷಿಕೆಯಲ್ಲಿ ತಯಾರಿಸಿದರು. ಎಲ್ಲಾ ಖಾದ್ಯಗಳ ರೆಸಿಪಿಯನ್ನು ಪ್ರತ್ಯೇಕವಾಗಿ ಬರೆದಿಟ್ಟು ಪ್ರದರ್ಶಿಸಿದರು.

ಡೆಮೋದಲ್ಲಿ ಸಿದ್ಧವಾದ ಖಾದ್ಯಗಳು : ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ. ಮಂಚಿಯ ವಸಂತ ಕಜೆಯವರು ವಿಶೇಷವಾಗಿ ಕಾರ್ಯಕ್ರಮಕ್ಕೆಂದೇ 'ರಾಗಿ ಹಲ್ವ' ತಯಾರಿಸಿ ಸ್ವತಃ ವಿತರಿಸಿದ್ದರು. 

0 comments:

Post a Comment