Sunday, April 20, 2014

ಅಡಿಕೆ ಮರವೇರಲು ಇನ್ನು ಸುಲಭ!

                 ಎರಡು ಸ್ಟೀಲ್ ಚೌಕಟ್ಟಿನ ಉಪಕರಣದ ಸಹಾಯದಿಂದ ಕಿರಣ್ ಸರಸರ ಅಡಿಕೆ ಮರ ಏರುತ್ತಿದ್ದಾರೆ. ಇನ್ನೂರಕ್ಕೂ ಅಧಿಕ ಕೃಷಿಕರು ಕಣ್ಣೆವೆ ಮುಚ್ಚದೆ ನೋಟಕರಾಗಿದ್ದಾರೆ. ಹದಿನೈದು ಅಡಿ ಏರಿದ ಕಿರಣ್ ಸಲಕರಣೆಯಲ್ಲೇ ಕುಳಿತು ಮಾತಿಗೆ ತೊಡಗಿದಾಗ ಕೃಷಿಕರಿಂದ ಕರತಾಡನದ ಗೌರವ. ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಕ್ಕ ಅನುಭವ. ಅಭ್ಯಾಸವಾದರೆ ಕಷ್ಟವೇನಿಲ್ಲ, ಸುಲಭದಲ್ಲಿ ಮರ ಹತ್ತಬಹುದು.  ಟು ವೀಲರ್ ಕಲಿತ ಹಾಗೆ.. ಹೀಗೆ ಒಬ್ಬೊಬ್ಬರದು ಪರಸ್ಪರ ಮಾತುಕತೆ. ಒಂದಿಬ್ಬರು ಸಾಹಸದಿಂದ ಏರಿ ಇಳಿದಾಗ ಏನನ್ನೋ ಸಾಧಿಸಿದ ಖುಷಿ.

              ಸುಳ್ಯ-ಬೆಳ್ಳಾರೆಯಲ್ಲಿ ಜರುಗಿನ ಪ್ರಾತ್ಯಕ್ಷಿಕೆಯ ಒಂದು ನೋಟ. ಕಳೆದ ವರುಷದ ಮಳೆಯ ತೀವ್ರತೆಯ ಕರಾಳ ದಿನಗಳು ಇನ್ನೂ ಮಾಸಿಲ್ಲ. ಅಡಿಕೆ ಗೊನೆಗಳಿಗೆ ಬಾಧಿಸುವ ಮಹಾಳಿರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಿಸಲಾಗದಷ್ಟು ಹನಿ ಕಡಿಯದ ಮಳೆ. ಪರಿಣಾಮ, ಇಳುವರಿಯಲ್ಲಿ ಗಣನೀಯ ಇಳಿತ. ಮದ್ದು ಸಿಂಪಡಿಸುವ, ಗೊನೆ ಕೀಳುವ ಜಾಣ್ಮೆ ಕೆಲಸದವರ ಅಭಾವ. ಕೆಲಸಗಳು ಸಕಾಲಕ್ಕಾಗಿದೆ ನಾಶ ನಷ್ಟ. ಈ ಸಂಕಟಕ್ಕೆ ಪರಿಹಾರ ಬೇಕಿತ್ತು ಎನ್ನುವಾಗಲೇ ಕಿರಣರ ಮರವೇರುವ ಉಪಕರಣದ ಕ್ಷಮತೆ ಕತ್ತಲೆಯಲ್ಲಿ ಮಿಣುಕಿದ ಮಿಂಚುಳ್ಳಿ.

               ಕಿರಣರ 'ಅರೆಕಾ ಟ್ರೀ ಕ್ಲೈಂಬರ್' ಸಲಕರಣೆಯಲ್ಲಿ ಮರ ಏರುತ್ತಿದ್ದಾಗ ನನ್ನೂರಿನ ಸಂಕಪ್ಪ ಗೌಡ್ರು ನೆನಪಾದರು. ಅಡಿಕೆ ಋತುವಿನಲ್ಲಿ ಸುಮಾರು 20-30 ಅಡಿ ಉದ್ದದ ಬಿದಿರಿನ ದೋಟಿಯನ್ನು ಹೆಗಲಿಗೇರಿಸಿ, ಬೆವರೊರೆಸಿಕೊಂಡು ಸಾಗುವ ದೃಶ್ಯ ಮಾಸದ ನೆನಪು. ಇವರು ತಳೆ ಮೂಲಕ ಮರವೇರಿ ಅಡಿಕೆ ಕೊಯ್ಯುವ, ಮದ್ದು ಸಿಂಪಡಿಸುವ ಸ್ಪೆಶಲಿಸ್ಟ್. ಸಂಜೆ ಪುನಃ ಅದೇ ದಾರಿಯಲ್ಲಿ ಮರಳುವ ಸಂಕಪ್ಪರಲ್ಲಿ ಮುಂದಿನ ಕೆಲಸಗಳ 'ವೈಟಿಂಗ್ ಲಿಸ್ಟ್' ಒದ್ದೆಯಾಗಿ ಎದ್ದು ಕಾಣುತ್ತಿತ್ತು.  ಇದು ಒಂದು ಕಾಲಘಟ್ಟದ ಸ್ಥಿತಿ-ಗತಿ.

               ಕೃಷಿ ಕೆಲಸಗಳಲ್ಲಿ ಕುಶಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮರವೇರಿ ದುಡಿಯುವ ತಾಕತ್ತಿದ್ದರೂ ನಗರವನ್ನು ಸಂಪರ್ಕಿಸುವ ಬಸ್ಸಿನ ಹಾರ್ನಿಗೆ ಕಿವಿಯರಳುತ್ತದೆ. ನಗರಕ್ಕೆ ಹೋಗಿ ಕೆಲಸ ಮಾಡುತ್ತಾರೋ, ಬಿಡ್ತಾರೋ ಬೇರೆ ಮಾತು. ಸಂಜೆಯ ಬಸ್ಸಿನಲ್ಲಿ ಪುನಃ ಹಳ್ಳಿಯಲ್ಲಿಳಿದಾಗ ಸಾಧಕನೋರ್ವನ ಭಾವ ಮಿಂಚಿ ಮರೆಯಾಗುತ್ತದೆ! ಸಂಕಪ್ಪಣ್ಣನಂತಹ  ಕುಶಲಿ ಕೆಲಸಗಾರರ ಸ್ಥಾನ ತುಂಬಲು ಈಗ ಜರೂರಾಗಿ ಜನ ಬೇಕಾಗಿದ್ದಾರೆ!

                ಕಿರಣ್ ಹೇಳುತ್ತಾರೆ, ಕಾಯುತ್ತಾ ಕೂರುವ ಕಾಲ ಇದಲ್ಲ. ನಮಗೆ ಬೇಕಾದರೆ ನಾವೇ ದುಡಿಯಬೇಕು. ದುಡಿಯುವ ಮನಸ್ಸುಳ್ಳವರಿಗೆ ಪರಿಹಾರ ಇಲ್ಲಿದೆ. ಸಲಕರಣೆ ಮೂಲಕ ಮರ ಏರಿ, ಅಡಿಕೆ ಕೆಲಸಗಳನ್ನು ಮುಗಿಸಿಕೊಳ್ಳಿ. ಅಭ್ಯಾಸವಾದರೆ ನಿಮಿಷದೊಳಗೆ ಇಪ್ಪತ್ತು ಅಡಿಗೂ ಹೆಚ್ಚು ಏರಬಹುದು ಅಂದಾದ 'ಸಂಕಪ್ಪ ಗೌಡರು ಈಗಿರುತ್ತಿದ್ದರೆ ಎಷ್ಟು ಖುಷಿ ಪಡುತ್ತಿದ್ದರು' ಎಂದೆನಿಸಿತ್ತು. .


              ಕಿರಣ್ ಡಿಪ್ಲೋಮಾ ಓದಿದ್ದಾರೆ. ತಂದೆ ಕೃಷಿಮೂರ್ತಿಯವರೊಂದಿಗೆ ಕೃಷಿ ಕಾಯಕ. ಅಡಿಕೆ ಕೃಷಿಯ ವಿವಿಧ ಹಂತದ ಸಮಸ್ಯೆಗಳ ಅರಿವಿದ್ದ ಕಿರಣ್, ಅವರಲ್ಲಿ ಮರವೇರುವ ಸಲಕರಣೆಗಳ ವಿವಿಧ ನೀಲನಕ್ಷೆಗಳು ಬದಲಾಗುತ್ತಲೇ ಇದ್ದುವು. ಮೂರು ವರುಷದಲ್ಲಿ ಮೂರ್ನಾಲ್ಕು ಮಾದರಿಯ ಬಳಿಕ ಅಂತಿಮ ಉತ್ಪನ್ನ ಹೊರಬಂದಿದೆ.


               ಸಲಕರಣೆಯ ಯಶದ ಹಿಂದೆ ಕೊಯಂಬತ್ತೂರಿನ ವೆಂಕಟ್ ದಾಮೋದರ ನಾಯ್ಡು ಸಹಕಾರ ದೊಡ್ಡದು. ಅವರು ತೆಂಗು, ತಾಳೆ ಮರವೇರುವ ಸಲಕರಣೆಯನ್ನು ತಯಾರಿಸಿ, ಪ್ರಶಸ್ತಿ ಪಡೆದವರು.  ಅವರ ನಿರ್ದೇಶನದಲ್ಲಿ ಅಡಿಕೆ ಮರ ಏರುವ ಸಲಕರಣೆ ಅಭಿವೃದ್ಧಿ. ಆರರಿಂದ ಏಳು ಕಿಲೋ ಭಾರದ ಎರಡು ಸ್ಟೀಲ್ ಚೌಕಟ್ಟುಗಳೇ ಸಲಕರಣೆಯ ಹೃದಯ. ಸೊಂಟದ ಎತ್ತರಕ್ಕೆ ಒಂದು, ಇದಕ್ಕಿಂತ ಎರಡಡಿ ಕೆಳಗೆ ಇನ್ನೊಂದು ಚೌಕಟ್ಟು. ಮೇಲಿನ ಚೌಕಟ್ಟಿನಲ್ಲಿ ಕುಳಿತು, ಕೆಳಗಿನ ಚೌಕಟ್ಟನ್ನು ಕಾಲಿನಲ್ಲಿ ಮೇಲೆಳೆದು ಕೊಂಡು ಏರುತ್ತಾ ಹೋಗಬಹುದು. ಚೌಕಟ್ಟಿನಲ್ಲಿರುವ ರಬ್ಬರ್ ಬ್ರಶ್ಗಳು ಮೇಲೇರಿನ ಚೌಕಟ್ಟುಗಳನ್ನು ಮರಕ್ಕೆ ಅಪ್ಪಿ ಹಿಡಿದುಕೊಳ್ಳುತ್ತದೆ. ಒಂದು ಸಲಕ್ಕೆ ಎರಡೂ ಎರಡೂವರೆ ಅಡಿಯಷ್ಟು ಏರುತ್ತಾ ಹೋಗಬಹುದು. ತಕ್ಷಣ ಸಲಕರಣೆಯನ್ನು ಕಳಚಿ ಇನ್ನೊಂದು ಮರಕ್ಕೆ ಜೋಡಿಸುವ ಸರಳತೆ.


                 ಕಿರಣ್ ಹೇಳುತ್ತಾರೆ, ಮರದ ಗಾತ್ರಕ್ಕೆ ಹೊಂದಿಸಿಕೊಳ್ಳುವಂತೆ ಮಾಡುವ ಸಿಸ್ಟಮ್ ಇದೆ. ಚೌಕಟ್ಟಿನ ಸ್ಟೀಲು ಪಟ್ಟಿಗಳು, ಸ್ಪ್ರಿಂಗುಗಳು, ಸೆಲ್ಫ್ ಲಾಕಿಂಗ್ ಫಿನ್ಗಳು, ರಬ್ಬರ್ ಬುಶ್ಗಳು ನೈಲಾನ್ ಪಟ್ಟಿ ಆಸನ, ನೈಲನ್ ಬೆಲ್ಟ್ಗಳು. ಈ ಕಚ್ಚಾವಸ್ತುಗಳಲ್ಲಿ ತಯಾರಾಗುವ ಉಪಕರಣದ ಗುಣಮಟ್ಟದೊಂದಿಗೆ ರಾಜಿಯಿಲ್ಲ. ಎನ್ನುವ ಕಿರಣ್, "ಬೆಲೆ ಹತ್ತುಸಾವಿರದೈನೂರು ರೂಪಾಯಿ ಅಂದಾಗ ಹೆಚ್ಚಾಯಿತು ಅನ್ನಿಸುತ್ತೆ. ಆದರೆ ಉಪಕರಣಕ್ಕೆ ಕಳಪೆ ಕಚ್ಚಾವಸ್ತು ಬಳಸಿ ದರ ಕಡಿಮೆ ಮಾಡಿದೆ ಎಂದಿಟ್ಟುಕೊಳ್ಳಿ.  ಮರ ಏರಿ ಇಳಿಯುವಷ್ಟರದ ತನಕ ಏರಿದವರ ಆಯುಷ್ಯಕ್ಕೆ ನಾನು ಜವಾಬ್ದಾರಿಯಲ್ವಾ. ಅದರೊಂದಿಗೆ ನಾನ್ಯಾಕೆ ಆಟವಾಡಲಿ?" ಎನ್ನುತ್ತಾರೆ. ಕಿರಣ್ ತೀರ್ಥಹಳ್ಳಿ  ತಾಲೂಕಿನ ಕೋಣಂದೂರು ಸನಿಹದ ಮಲ್ಲೇಸರದವರು. ಓದಿದ್ದು ಡಿಪ್ಲೋಮಾ. ಕೃಷಿಯಲ್ಲಿ ಹೊಸತನ್ನು ಹುಡುಕುವ ಜಾಯಮಾನ. ತನ್ನ ತೋಟದಲ್ಲೇ ಪ್ರಥಮ ಪ್ರಯೋಗ.


                  ಬೇಸಿಗೆಗೆ ಓಕೆ, ಮಳೆಗಾಲಕ್ಕೆ ಬಳಕೆ ಕಷ್ಟವಲ್ಲವೇ? ಬಹುತೇಕ ಕೃಷಿಕರ ಪ್ರಶ್ನೆ. ಮಳೆಗಾಲದಲ್ಲಿ ಮರ ಜಾರುತ್ತದೆ. ಚೌಕಟ್ಟಿನಲ್ಲಿರುವ ರಬ್ಬರ್ ಬುಶ್ ಸಲಕರಣೆಯ ಪ್ರಧಾನಾಂಶ. ಅದಕ್ಕೆ ಗೋಣಿ ನಾರನ್ನು ಸುತ್ತಿದರೆ ಸುಲಭದಲ್ಲಿ ಜಾರದು. ಹೆಚ್ಚು ಮಳೆ ಬೀಳುವ ನಮ್ಮೂರಿನ ಅಡಿಕೆ ಮರಗಳಿಗೆ ಮಳೆಗಾಲದಲ್ಲಿ ಏರಿದ್ದೇನೆ. ಹೇಳುವಂತಹ ಸಮಸ್ಯೆ ಬಂದಿಲ್ಲ. ಬೇಸಿಗೆಯಲ್ಲಿ ಸರಸರನೆ ಏರುವಂತಹ ಹುಮ್ಮನಸ್ಸು ಮಳೆಗಾಲದಲ್ಲಿ ಬೇಡ. ಸ್ವಲ್ಪ ಜಾಗ್ರತೆ ವಹಿಸಿದರೆ ಕಷ್ಟವಲ್ಲ. ರಬ್ಬರ್ ಬುಶ್ಶಿನ ಬದಲಿಗೆ ಮೆಟಲಿನದು ಮಾಡಬಹುದೇನೋ ಮೊದಲಾದ ಸೂಕ್ಷ್ಮ ವಿಚಾರಗಳನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ.

                 ಕೃಷಿ ಯಾಂತ್ರೀಕರಣದ ವಿಚಾರ ಬಂದಾಗಲೆಲ್ಲಾ ಸಬ್ಸಿಡಿಗಳ ಮಾತು ಬಾರದೆ ಮುಂದೆ ಹೋಗದು. ಈ ಸಲಕರಣೆಯೂ ಸಬ್ಸಿಡಿಗೆ ಸಿಗುವ ಹಾಗೆ ಮಾಡಬಹುದಲ್ಲಾ..? ಸಹಜ ಪ್ರಶ್ನೆ. ಉಪಕರಣದ ದರವನ್ನು ದುಪ್ಪಟ್ಟು ಮಾಡಿ, ಅದರಲ್ಲಿ ಐವತ್ತು ಶೇಕಡಾ ಸಬ್ಸಿಡಿ ಅಂತ ತೆಕ್ಕೊಳ್ಳುವ ಬದಲು, ಆ ಬೆಲೆಗೆ ನಾನೇ ಒದಗಿಸುತ್ತೇನಲ್ಲಾ! ಜತೆಗೆ ಸಬ್ಸಿಡಿ ಫೈಲುಗಳ ಹಿಂದೆ ಓಡುವ ಕೆಲಸವೂ ತಪ್ಪಿತು. ಇಲಾಖಾ ಮೇಜುಗಳ ಮುಂದೆ ಗಂಟೆಗಟ್ಟಲೆ ಸಮಯ ಕೊಲ್ಲುವ ಸಂದರ್ಭವೂ ಬರುವುದಿಲ್ಲ. ಸಬ್ಸಿಡಿ ಬೇಕೇ ಬೇಕು ಎಂದಾರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೃಷಿಕರೇ ಒತ್ತಾಯಿಸಬೇಕು ಅಂದಾಗ ಸಬ್ಸಿಡಿಯ ಮಾತು ಮೌನವಾಯಿತು!


                  ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ವಿಟ್ಲದ cpcri ರ್ತೋಟದಲ್ಲಿ ಎಪ್ರಿಲ್ ಮೊದಲ ವಾರ, ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಎರಡನೇ ವಾರದ ಪ್ರಾತ್ಯಕ್ಷಿಕೆ. ಫೇಸ್ಬುಕ್ಕಿನ ಅಗ್ರಿಕಲ್ಚರಿಸ್ಟ್ ಗುಂಪು ಪ್ರಾತ್ಯಕ್ಷಿಕೆಯ ಹೊಣೆ ಹೊತ್ತಿತ್ತು. ಬೆಳ್ಳಾರೆ ಕೃಷಿಕರ ವೇದಿಕೆಯ ಹೆಗಲೆಣೆ.


               ಇನ್ನೂರೈವತ್ತಕ್ಕೂ ಮಿಕ್ಕಿದ ಅಸಕ್ತರಿಗೆ ಆಮಂತ್ರಣ ಪತ್ರ ನೀಡಿಲ್ಲ. ಜಾಹೀರಾತು ಪ್ರಕಟಿಸಿಲ್ಲ. ಅಗ್ರಿಕಲ್ಚರಿಸ್ಟ್ ಗುಂಪಿನೊಳಗೆ ಸಂವಹನಗೊಂಡ ವಿಚಾರ ಕೃಷಿಕರ ಮಧ್ಯೆ ಮಾಹಿತಿ ಹಂಚಿತ್ತು. ಹಾದಿ ತಪ್ಪಿಸುತ್ತಿದೆ ಎಂಬ ಆರೋಪವನ್ನಂಟಿಸಿಕೊಂಡ ಫೇಸ್ಬುಕ್ಕನ್ನು ಉತ್ತಮ ಉದ್ದೇಶಕ್ಕೆ ಬಳಸಿಕೊಂಡರೆ ನಿಜಕ್ಕೂ ಅದೊಂದು ಸಶಕ್ತ ಮಾಧ್ಯಮ. ಬರೇ ಲೈಕ್ಗಳಿಗೆ ಅಂಟಿಕೊಳ್ಳದೆ, ಕಮೆಂಟಿಗಾಗಿ ಕಮೆಂಟನ್ನು ಬರೆಯುವ ಚಾಳಿಯಿಂದ ದೂರವಿದ್ದ ಬಹುತೇಕರಿಗೆ ಗುಂಪಿನ ಚಟುವಟಿಕೆ ಆಪ್ತವಾಗಿದೆ.


               ಸೀಪಿಸಿಆರ್ಐ ಪ್ರಾತ್ಯಕ್ಷಿಕೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಉಪಕರಣದ ಮೂಲಕ ತಾನೇ ಸ್ವತಃ ಅಡಿಕೆ ಮರವೇರಿ, ತನಗೆ ಅರುವತ್ತೆರಡು ವರುಷವಾಯಿತು ಎನ್ನುವುದನ್ನು ಮರೆತರು! ಸಲೀಸಾಗಿ ಏರುವ ಉಪಕರಣದ ಕ್ಷಮತೆಯನ್ನು ಶ್ಲಾಘಿಸಿದರು. ಅಡಿಕೆ ಸಂಸ್ಥೆಗಳು ಕನಿಷ್ಠ ಇಂತಹ ಪ್ರೋತ್ಸಾಹವನ್ನು ಕಿರಣರಿಗೆ ನೀಡಿದರೆ ಅವರ ಉಪಕರಣ ಕೃಷಿಕರ ಜಗಲಿಯೇರಬಹುದು. ಪ್ರಕೃತ ಅಡಿಕೆ ಮರವೇರುವ ಸರಳ ಸಾಧನೆಕ್ಕೆ ಕೃಷಿಕರಿಗೆ ಅಂಗೀಕಾರ ಸಿಕ್ಕಿದೆ.


              ತೆಂಗು ಅಭಿವೃದ್ಧಿ ಮಂಡಳಿಯು ಮೂರು ವರುಷದಿಂದ 'ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀಸ್' ಹೆಸರಿನ ಯೋಜನೆಯಡಿ ದೇಶದಾದ್ಯಂತ 21483 ಮಂದಿಗೆ ತೆಂಗು ಮರವೇರಲು ತರಬೇತಿ ನೀಡಿದೆ! ನಾವೂ ಚಿಕ್ಕ ರೀತಿಯಲ್ಲಾದರೂ ಅಡಿಕೆ ಮರ ಏರುವ ತರಬೇತಿಯನ್ನು ಯಾಕೆ ನಡೆಸಬಾರದು - ಎನ್ನುವ ಪ್ರಶ್ನೆಯನ್ನು ಅಡಿಕೆ ಪತ್ರಿಕೆಯ ಸಂಪಾದಕೀಯದಲ್ಲಿ ಶ್ರೀ ಪಡ್ರೆಯವರು ಮುಂದಿಟ್ಟಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸುವ ಅನಿವಾರ್ಯವಿದೆ.


0 comments:

Post a Comment