Thursday, May 22, 2014

ಪುನರ್ಪುಳಿಯ ಸೋದರ - ಗಾರ್ಸೀನಿಯಾ ಕೋವಾ








              "ಈ ವರುಷ ಬಿಟ್ಟಷ್ಟು ಹಣ್ಣು ಇಷ್ಟು ವರುಷ ಬಿಟ್ಟಿರಲಿಲ್ಲ, ಯಥೇಷ್ಟ," ಕಸಿತಜ್ಞ ಶ್ಯಾಮ್ ಸುಂದರ್ ಖುಷಿ ಹಂಚಿಕೊಂಡರು. ಗಾರ್ಸೀನಿಯಾ ಕೋವಾ - ಇದು ಮುರುಗಲು (ಪುನರ್ಪುಳಿ, ಕೋಕಂ) ಹಣ್ಣಿನ ಸೋದರ. ಬಣ್ಣ, ರುಚಿಗಳಲ್ಲಿ ಭಿನ್ನ! ಗಾಢ ಹಳದಿ ಬಣ್ಣ. ನೋಡಲು ಚಂದ. ಜಾಯಿಕಾಯಿಯ ಗಾತ್ರ. ಕರಾವಳಿಗೆ ಅಪರೂಪ. ಸದಾ ಹಸಿರು ಮರ. ಕಿತ್ತಳೆ ವರ್ಣದ ಹಣ್ಣುಗಳು. ತೊಟ್ಟಿನಿಂದಾರಂಭಿಸಿ ಮೈಮೇಲೆ ಆರೆಂಟು ತಗ್ಗುಗೆರೆಗಳು. ಒತ್ತಡ ಹಾಕಿ ಒತ್ತಿದಾಗಲಷ್ಟೇ ಹಣ್ಣು ಇಬ್ಬಾಗವಾಗುವಷ್ಟು ಗಟ್ಟಿ. ಒಳಗೆ ಕಿತ್ತಳೆ ಬಣ್ಣದ ಗುಳ.  ಹುಳಿಮಿಶ್ರಿತ ಸಿಹಿ. ಪುನರ್ಪುಳಿ ಹಾಗೆ ತಿಂದಾಗ ಹಲ್ಲಿಗೆ ಅಂಟು ಮೆತ್ತಿಕೊಳ್ಳುವುದಿಲ್ಲ. ಬಣ್ಣವೂ ಅಂಟುವುದಿಲ್ಲ..
              ಹಣ್ಣಾದರೆ ನೋಡಲು ಚಂದ. ಮೂಲ ಮಲೇಶ್ಯಾ. ಬೀಜದಿಂದಾದ ಗಿಡವನ್ನು ಸಾಕಷ್ಟು ಮಂದಿ ಬೆಳೆಸಿದ್ದಾರೆ. ಬಹುತೇಕ ಯಾರಿಗೂ ಇಳುವರಿ ಇಲ್ಲ. ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಶ್ಯಾಮಸುಂದರ್ ಪುನರ್ಪುಳಿಯ ಅಡಿಗಿಡಕ್ಕೆ ಗಾರ್ಸೀನಿಯಾದ ಕುಡಿಯನ್ನು ಕಸಿ ಕಟ್ಟಿ (ಟಾಪ್ ವರ್ಕ್ ) ಅಭಿವೃದ್ಧಿ ಪಡಿಸಿದ್ದಾರೆ. ನೀರು, ಗೊಬ್ಬರ ಉಣಿಸಿ ಆರೈಕೆ ಮಾಡಿದ್ದಾರೆ. ಶ್ಯಾಮ ಸುಂದರ್ ಅವರಲ್ಲಿ ಏಳು ವರುಷದಿಂದ ಫಲ ನೀಡುತ್ತಿದೆ. 'ಬೀಜದಿಂದ ಹುಟ್ಟಿದ ಸಸಿಗಿಂತಲೂ ಕಸಿ ಕಟ್ಟಿದ ಸಸಿಯಲ್ಲಿ ಇಳುವರಿ ಪಡೆಯಲು ಸಾಧ್ಯ' ಎನ್ನುತ್ತಾರೆ.
             ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯ ಮೂಲಕ ಸಿಕ್ಕ ಎರಡು ಕುಡಿಗಳನ್ನು ಇವರು ಪುನರ್ಪುಳಿಯ (ಗಾರ್ಸೀನಿಯಾ ಇಂಡಿಕಾ, ಮುರುಗುಲು, ಕೋಕಂ) ಕಾಂಡಕ್ಕೆ ಕಸಿ ಮಾಡಿದ್ದರು. ಜನವರಿಯಲ್ಲಿ ಹೂ ಬಿಟ್ಟು, ಮೇ ತಿಂಗಳಲ್ಲಿ ಹಣ್ಣು ತಿನ್ನಲು ರೆಡಿ. ಮೇ ಕೊನೆಗೆ ಹಣ್ಣಿನ ಋತು ಮುಗಿಯುತ್ತದೆ. 
              ಉತ್ತಮ ನೋಟ ಮತ್ತು ಆಕರ್ಷಕ ಬಣ್ಣವಿರುವುದರಿಂದ ಮಾರಾಟ ಸಾಧ್ಯತೆಯಿದೆ. ಪ್ಯಾಕ್ ಮಾಡಿ ಮಾರಾಟಕ್ಕಿಟ್ಟರೆ ಮ್ಯಾಂಗೋಸ್ಟಿನ್, ರಂಬುಟಾನ್ಗಳ ಜತೆ ಪೈಪೋಟಿ ಮಾಡುವಷ್ಟು ಅಂದ ಹೊಂದಿದೆ. ಶ್ಯಾಮ್ ಸುಂದರ್ ಅವರಿಗೆ ಮಾರಾಟ ಅವಕಾಶಗಳು ಕಡಿಮೆ. ಹಾಗಾಗಿ ಆಸಕ್ತರಿಗೆ, ಸ್ನೇಹಿತರಿಗೆ, ಬಂಧುವರ್ಗದವರಿಗೆ ನೀಡುತ್ತಾರೆ.
               ಇದರ ಮೌಲ್ಯವರ್ಧನೆ ಕುರಿತು ಏನೂ ಅರಿವಿಲ್ಲ. ಮನೆಗೆ ಬಂದವರು ಹಣ್ಣನ್ನು ಒಯ್ಯುತ್ತಾರೆ, ತಿನ್ನುತ್ತಾರೆ ಅಷ್ಟೇ. ಮತ್ಯಾವ ಫೀಡ್ಬ್ಯಾಕೂ ಕೊಡುವುದಿಲ್ಲ ಎನ್ನುವುದು ಶ್ಯಾಮಸುಂದರ ಬೇಸರ. ಕೇರಳದ ತಳಿಪರಂಬದ ಕರಿಂಬಂ ಫಾರ್ಮಿನಲ್ಲಿ ಇದರ ದೊಡ್ಡ ತಾಯಿಮರವಿದೆ. ತೊಂಭತ್ತರ ದಶಕದ ಮಧ್ಯದಲ್ಲಿ ಗಾರ್ಸೀನಿಯಾ ಕನ್ನಾಡಿಗೆ ಬಂತು.
                ಮೂರ್ನಾಲ್ಕು ವರುಷದ ಹಿಂದೆ ಹವಾಯಿಯ ಹಣ್ಣು ಕೃಷಿಕ ಕೆನ್ ಲವ್ ಕನ್ನಾಡಿಗೆ ಬಂದಿದ್ದಾಗ ಇದರ ರಸಕ್ಕೆ ಮಾರುಹೋಗಿದ್ದರು. 'ಇದನ್ನು ಬೆಳೆದರೆ ಮಾರುಕಟ್ಟೆ ಮಾಡಬಹುದು' ಎಂದಿದ್ದರು. ಎರಡು ದಶಕದ ಹಿಂದೆ ಪುತ್ತೂರಿನ ಕೃಷಿಕ ಸೇಡಿಯಾಪು ಜನಾರ್ದನ ಭಟ್ಟರು ತಳಿಪರಂಬದ ಫಾರ್ಮಿನಿಂದ ಹಣ್ಣುಗಳನ್ನು ತಂದಿದ್ದರು. 'ಇದರ ಸ್ಕ್ವಾಷ್ ಮಾಡಿದ್ದೆ. ರುಚಿ ಸಾಮಾನ್ಯ. ತುಂಬಾ ಅಕರ್ಷಣೆ. ಜೇನಿನ ಬಣ್ಣ. ಶರಬತ್ತಿಗೆ ಉತ್ತಮ. ಸೋಡಾದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಒಂದು ಗ್ಲಾಸ್ ಕುಡಿದಾಗ ಮತ್ತೊಂದು ಗ್ಲಾಸ್ ಬೇಕೆನಿಸುತ್ತದೆ' ಎನ್ನುತ್ತಾರೆ.
             ಐದು ವರುಷದ ಹಿಂದೆ ಶ್ಯಾಮ್ಸುಂದರ್ ಅವರಲ್ಲಿಂದ ಮುಳಿಯ ವೆಂಕಟಕೃಷ್ಣ ಶರ್ಮರು ತಂದ ಕುಡಿಯನ್ನು ಪುನರ್ಪುಳಿಯ ಅಡಿಗಿಡಕ್ಕೆ ಕಸಿ ಕಟ್ಟಿದ್ದರು. ಈ ವರುಷ ಪ್ರಸವ ಪ್ರಕ್ರಿಯೆ ಶುರು! ಐದಾರು ಹಣ್ಣು ಸವಿಯಲು ಸಿಕ್ಕಿದೆ ಎನ್ನುತ್ತಾರೆ ಶರ್ಮ. ಮರದ ತುಂಬಾ ಹಣ್ಣುಗಳು ಹೆಚ್ಚಿರುವುದರಿಂದಲೋ ಏನೋ, ಈ ವರುಷ ಹಣ್ಣಿನ ಗಾತ್ರ ಸಣ್ಣದಾಗಿದೆ. ರುಚಿಯಲ್ಲಿ ವ್ಯತ್ಯಾಸವಿಲ್ಲ ಎನ್ನುವ ಹಿಮ್ಮಾಹಿತಿ ಕೊಡುತ್ತಾರೆ ಶ್ಯಾಮ್ ಸುಂದರ್. .(೦೮೨೫೬-೨೬೪೩೯೩)


0 comments:

Post a Comment