Friday, August 21, 2015

ಕಬ್ಬಿನ ನಾಡಲ್ಲಿ ಭತ್ತದ ತಿಜೋರಿ

          "ರೈತರು ಬದಲಾವಣೆ ಬಯಸಿದರೆ ನಾವು ನಿಮ್ಮೊಂದಿಗಿದ್ದೇವೆ," ಸಹಜ ಸಮೃದ್ಧದ ಜಿ. ಕೃಷ್ಣಪ್ರಸಾದ್ ಮಂಡ್ಯದ ಬೀಜಮೇಳದಲ್ಲಿ ಘೋಷಿಸಿದಾಗ ಭತ್ತದ ಸಂರಕ್ಷಕ ಬೋರೇಗೌಡರು ಮತ್ತು ಸೈಯದ್ ಘನಿ ಖಾನ್ ಅವರ ಮುಖದಲ್ಲಿ ಕಿರುನಗೆ. ಈಚೆಗಂತೂ ಸಾವಿನ ಸುದ್ದಿಯಲ್ಲಿ ಬೆಳಗು ಕಾಣುತ್ತಿದ್ದ ಇವರಿಬ್ಬರೂ ತಮ್ಮೂರಿನ ಜನ ಬದಲಾವಣೆಯನ್ನು ಬಯಸುವ ಮನಃಸ್ಥಿತಿ ಹೊಂದಬಹುದು ಎಂಬ ಆಶೆಯಿಂದ ದೂರವಿದ್ದಾರೆ. "ಪ್ರಸ್ತುತದ ಸಂಕಟದ ಸ್ಥಿತಿಯನ್ನು ಅರ್ಥಮಾಡಿಕೊಂಡು  ಒಬ್ಬ ಬದಲಾದರೂ ಸಾಕು. ಅದೊಂದು ಮಾದರಿಯಾಗುತ್ತದೆ," ಎನ್ನುತ್ತಾರೆ ಘನಿ ಖಾನ್.
            ಮಂಡ್ಯದಲ್ಲೀಗ ಕಬ್ಬು ಸಿಹಿಯಾಗಿಲ್ಲ! ತೀರಾ ಕಹಿಯಾಗಿದೆ. ಕಹಿಯ ಗಾಢತೆಯು ಬದುಕಿನ ಆನಂದಕ್ಕೆ ಮುಸುಕು ಹಾಕಿದೆ. ನೆಮ್ಮದಿಯ ತೀರವನ್ನು ಸೇರಿಸುವ ದೋಣಿಯ ಹುಟ್ಟು ನೆರೆಯಲ್ಲಿ ಕೊಚ್ಚಿಹೋಗಿದೆ. ಕೈಗೆ ಸಿಗದಷ್ಟೂ ದೂರ ಸಾಗಿದೆ. ಅದು ಸಿಗಬಹುದು ಎಂದು ಬಿಂಬಿಸುವ, ನಂಬಿಸುವ ಸಾಮಾಜಿಕ-ರಾಜಕೀಯ ವ್ಯವಸ್ಥೆಗಳ ದಿಂಗಿಣದ ವೇಗ ಹೆಚ್ಚಾಗಿದೆ. ಈ ವೇಗಕ್ಕೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಾ ಪ್ರಾಣ ಕಳೆದುಕೊಂಡವರ ಸಂಖ್ಯೆ ಏರುತ್ತಿದೆ. ಇಂತಹ ಹೊತ್ತಲ್ಲೂ ಬದಲಾವಣೆ ಸಾಧ್ಯವೇ? ಮಂಡ್ಯದ ಬೀಜಮೇಳ ಮುಗಿಸಿ ಹೊರಟಾಗ ತಲೆತುಂಬಿದ ವಿಚಾರಗಳು.
            ಬದಲಾಗ್ತಾ ಇದ್ದಾರೆ. ಕಬ್ಬು ಮೈಗಂಟಿ ಹೋಗಿದೆ. ಬಿಡಿಸಲು ಸ್ವಲ್ಪ ಸಮಯ ಬೇಕು. ಇಂತಹ ಮೇಳಗಳು ಆಗಾಗ್ಗೆ ನಡೆಯುತ್ತಿರಬೇಕು. ಪರ್ಯಾಯ ದಾರಿಗಳ ಮಾದರಿಗಳು ಬೇಕು. ಅದರಲ್ಲಿ ಬದುಕನ್ನು ಕಟ್ಟಲು ಸಾಧ್ಯ ಎಂಬ ನಂಬುಗೆ ಬರಬೇಕು. ಇವೆಲ್ಲಾ ತಿಂಗಳಲ್ಲಿ ನಡೆಯುವ ಬದಲಾವಣೆಯಲ್ಲ. ಹಲವು ವರುಷ ಬೇಕಾದೀತು. ಬಹುಶಃ ಹೊಸ ತಲೆಮಾರಿಗೆ ಪರ್ಯಾಯ್ ದಾರಿಗಳನ್ನು ತೋರುವ ಕೆಲಸ ಆಗಬೇಕು, ತಮ್ಮೂರ ರೈತರ ವಿಷಾದ ಬದುಕಿಗೆ ದನಿಯಾಗುತ್ತಾರೆ,  ಆಶಾದಾಯಿ ಬೋರೇಗೌಡರು.
            ಸರಿ, ಮಾದರಿಗಳು ಬೇಕಾಗಿವೆ.  ಬೋರೇಗೌಡ, ಘನಿ ಖಾನ್ರಂತಹ ಭತ್ತದ ತಿಜೋರಿಗಳ ಮಾದರಿಗಳು ಕಬ್ಬಿನ ಮಧ್ಯೆಯೇ ಗಟ್ಟಿ ಅಡಿಗಟ್ಟಲ್ಲಿ ನಿಂತಿರುವಾಗ ಎಲ್ಲೆಲ್ಲೋ ಯಾಕೆ ಹುಡುಕಾಟ? ಬೋರೇಗೌಡ್ರು ಹೇಳ್ತಾರೆ, "ಅಯ್ಯೋ... ಅದೆಲ್ಲಾ ಬಿಡಿ. ಪಕ್ಕದ ಜಮೀನಿನ ರೈತ ಏನು ಮಾಡ್ತಾನೆ ಎಂದು ನೋಡುವಷ್ಟು ಪುರುಸೊತ್ತಿಲ್ಲ. ಕಬ್ಬಿನ ಹೊರತಾಗಿ ಏನಾದ್ರೂ ಪರ್ಯಾಯ ದಾರಿಗಳನ್ನು ಹುಡುಕಾಡಿದ್ರೆ ಅಪಹಾಸ್ಯದ ಉತ್ತರ ಸಿಗುತ್ತೆ. ಪಕ್ಕದ ಮನೆಯಲ್ಲಿ ಉತ್ತಮ ನಿರ್ವಿಷ ಅಕ್ಕಿ ಸಿಗುತ್ತೆ ಎಂದು ಗೊತ್ತಿದ್ದೂ ಅಂಗಡಿಯಿಂದ ಖರೀದಿಸಿ ತರುತ್ತಾರೆ. ಮಾದರಿಗಳನ್ನು ನೋಡಿ ಗೊತ್ತಿಲ್ಲ. ಇದು ಮಾದರಿ ಅಂತ ತಿಳಿಯುವ ಶಕ್ತಿಯನ್ನು ಕಬ್ಬು ಕಸಿದುಕೊಂಡಿದೆ."
            ಮಂಡ್ಯ ಸುತ್ತಮುತ್ತ ಬದಲಾವಣೆಯ ತಣ್ಣನೆಯ ಗಾಳಿ ಬೀಸಲು ಶುರುವಾಗಿದೆ. ಬೀಜಮೇಳಕ್ಕೆ ಆಗಮಿಸಿದ ಕೆಲವು ಕಬ್ಬುಪ್ರಿಯ ಕೃಷಿಕರು ಪರ್ಯಾಯ ಕೃಷಿಗೆ ಹೊರಳಲು ಮನಮಾಡಿದ್ದಾರೆ. ಮಾದರಿಗಳ ಹುಡುಕಾಟದಲ್ಲಿದ್ದಾರೆ. ಸಹಜ ಸಮೃದ್ಧ ರೈತರ ನೆರವಿಗೆ ಹೆಜ್ಜೆಯೂರಿದೆ. ಈಗಾಗಲೇ ಸ್ವಾವಲಂಬನೆಯ ಹಾದಿಯನ್ನು ಕಂಡುಕೊಂಡ ರೈತರೊಂದಿಗೆ ಸಂವಹನದ ಕೊಂಡಿ ಏರ್ಪಡಿಸಿದೆ. ಚಿಂತನೆಗಳು ಶುರುವಾಗಿದೆ. ಕೇಳುತ್ತಾ ಪರ್ಯಾಯ ಯೋಚನೆಯ ಬೀಜ ಮೊಳಕೆಯೊಡೆಯುತ್ತಿದೆ. ಹೊಟ್ಟೆ ತುಂಬಿಸುವ ಭತ್ತ, ಸಿರಿಧಾನ್ಯಗಳನ್ನು ಬೆಳೆಯುವ ಒಲವು ತೇಲಿಬರುತ್ತಿದೆ.
             'ಮೊದಲು ಹೊಟ್ಟೆಪಾಡು. ನಂತರ ಸ್ವಾವಲಂಬನೆ. ಆಮೇಲಷ್ಟೇ ಮಾರುಕಟ್ಟೆ', ಬೋರೇಗೌಡರು ಯಶದ ಸೂತ್ರವನ್ನು ಹೇಳುತ್ತಾ ವಾಸ್ತವದತ್ತ ಬೆರಳು ತೋರಿದರು. ಅನ್ನದ ಬಟ್ಟಲನ್ನು ಸೇರುವ ಆಹಾರಕ್ಕೆ ಮೊದಲ ಸ್ಥಾನ. ಅದರ ಹೊರತಾಗಿ ಇನ್ನೇನೋ ಬೆಳೆಯುತ್ತೇವೆ. ಕೋಟಿಗಟ್ಟಲೆ ಯೋಜನೆಗಳಿಗೆ ಸರಕಾರ ಸಹಿ ಹಾಕುತ್ತದೆ. ರೈತನಿಗೆ ಕನಸಿನ ಗೂಡನ್ನು ಕಟ್ಟಲು ಕೋಟಿ ರೂಪಾಯಿಗಳು ನೆರವಾಗುತ್ತವೆ. ಕಾಫಿ, ಚಹ, ರಬ್ಬರ್, ರೇಷ್ಮೆ, ಕಬ್ಬು.. ಬಟ್ಟಲು ಸೇರುವುದಿಲ್ಲ. ಇದಕ್ಕೆ ಎರಡನೇ ಆದ್ಯತೆ ಕೊಡಿ. ಭತ್ತ, ಸಿರಿಧಾನ್ಯದಂತಹ ಕೃಷಿಗೆ ಮೊದಲಾದ್ಯತೆ ಬೇಕು. ಆಗ ಅನ್ನಕ್ಕಾಗಿ ಪರರ ಮುಂದೆ ಅಂಗಲಾಚುವ ಸ್ಥಿತಿ ಬಾರದು. ಸಮಾಜಕ್ಕೆ ಅನ್ನ ಕೊಡುವ ಅರ್ಹತೆಯಿದ್ದೂ ಅಂಗಡಿಯ ಮುಂದೆ ಕ್ಯೂ ನಿಲ್ಲುವ ದಾರಿದ್ರ್ಯ ಸ್ಥಿತಿಯಿಂದ ಹೊರ ಬರಬಹುದು. ವರುಷಪೂರ್ತಿ ಉಣ್ಣಲು ಅನ್ನ ಸಿದ್ಧವಾದಾಗ ಹಣ ಕೊಡುವ ಇತರ ಬೆಳೆಗಳನ್ನು ಬೆಳೆಯುವಂತಾಗಬೇಕು.
             ಖಚಿತ ಮತ್ತು ನೇರ ಮಾತಿನ ಗೌಡರಿಗೆ ತನ್ನ ಬದುಕೇ ಧೈರ್ಯ ಮತ್ತು ಪ್ರೇರಣೆ. ಎಲ್ಲರಂತೆ ಏಕಬೆಳೆ ಕಬ್ಬಿನಿಂದ ಮಿಶ್ರಬೆಳೆಯತ್ತ ಬದಲಾದ ಕೃಷಿಕ. ರಾಸಾಯನಿಕದಿಂದ ಸಾವಯವದತ್ತ ಪರಿವರ್ತನೆಗೊಂಡ ರೈತ. ಬೆಳೆದ ಅಕ್ಕಿಯನ್ನು ಸ್ವತಃ ಉಂಡು, ಇತರರಿಗೂ ಉಣಿಸುವ ಭತ್ತದ ಸಂರಕ್ಷಕ. ಭತ್ತದ ಜತೆಯಲ್ಲಿ ಸಿರಿಧಾನ್ಯವನ್ನೂ ಬೆಳೆಯುವ ಗಟ್ಟಿಗ. ರಾಸಾಯನಿಕ ರಹಿತವಾಗಿ ಕಬ್ಬನ್ನು ಬೆಳೆದು ಬೆಲ್ಲ ತಯಾರು ಮಾಡಿ ಸಿದ್ಧ ಮಾರುಕಟ್ಟೆಯನ್ನು ರೂಪಿಸಿದ ಸಾಹಸಿ. ಮಡದಿ ಹೇಮಾ ಅವರ ಅಡುಗೆ ಮನೆಯಲ್ಲಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧವಾಗುತ್ತಿರುತ್ತದೆ. ಅಣ್ಣನಿಗೆ ತಮ್ಮ ಶಂಕರ್ ಹೆಗಲೆಣೆ.
            "ಸಾವಯವ ಅಂದ್ರೆ ನಗ್ತಾರೆ. ರಾಸಾಯನಿಕ ರಹಿತವಾಗಿ ನಮ್ಮ ಆಲೆಮನೆಯಲ್ಲಿ ಬೆಲ್ಲ ಸಿದ್ಧಪಡಿಸಿದ್ರೆ ಇದು ಬೆಲ್ಲಾನಾ ಅಂತ ಹಗುರ ಮಾತನಾಡ್ತಾರೆ. ಯಾರು ಏನೇ ಮಾತಾಡ್ಲಿ, ನಾನಂತೂ ಬದಲಾಗಿದ್ದೀನಿ.  ನಮ್ಮ ಕುಟುಂಬ ಬದಲಾಗಿದೆ. ಆಹಾರದ ವಿಚಾರದಲ್ಲಿ ನಾವು ಖುಷಿಯಾಗಿದ್ದೀವಿ," ಬೋರೇಗೌಡರು ತಮ್ಮ ಶಂಕರ ಅವರ ಮನೆಯ ಮಹಡಿಗೆ ಕರೆದೊಯ್ದು, 'ಇದೇ ನಮ್ಮ ಭತ್ತದ ಮ್ಯೂಸಿಯಂ. ದೇಶ ಅಲ್ಲ, ವಿದೇಶದಿಂದ ಭತ್ತ ಪ್ರಿಯರು ಭೇಟಿ ನೀಡಿದ್ದಾರೆ. ಹೊರ ಊರಿನ ವಿಜ್ಞಾನಿಗಳು ಬಂದಿದ್ದಾರೆ. ಆದರೆ ಕೂಗಳತೆ ದೂರದಲ್ಲಿದ್ದ ಸಂಶೋಧನಾ ಸಂಸ್ಥೆಗೆ ಮಾತ್ರ ನಮ್ಮ ಭತ್ತದ ಪರಿಮಳ ತಲುಪಿಲ್ಲ, ಎಂದು ಮೌನವಾದರು.
              ಹನ್ನೆರಡು ವರುಷದಿಂದ ಭತ್ತದ ನಂಟು. ದಕ್ಷಿಣ ಕನ್ನಡ ಜಿಲ್ಲೆಯ ಅಮೈ ದೇವರಾಯರಿಂದ ಪ್ರೇರಿತ. ಅವರು ನೀಡಿದ ನಾಲ್ಕು ವಿಧದ ಭತ್ತದ ತಳಿಯಿಂದ ಭತ್ತದ ಗುಂಗು. ಹತ್ತಿರದಲ್ಲೇ ಘನಿ ಖಾನ್ ಅವರ ಏಳುನೂರು ಭತ್ತದ ವೆರೈಟಿಯ ತಾಕುಗಳು ಮ್ಯೂಸಿಯಂ ಮಾಡಲು ಉತ್ತೇಜನ ಕೊಟ್ಟಿತು. ಅಕಾಲ ಋತುವಿನಲ್ಲಿಯೂ ಭತ್ತದ ತಳಿಗಳು ನೋಡಲು ಸಿಗುವಂತೆ ಮ್ಯೂಸಿಯಂ ರೂಪುಗೊಳ್ಳಬೇಕು ಎಂಬ ಆಶಯ. ಸಾಕಷ್ಟು ತಳಿಗಳನ್ನು ತಾನೇ ಬೆಳೆದರು. ದೇಶದಲ್ಲೆಡೆ ಓಡಾಡಿದರು. ಸಹಜ ಸಮೃದ್ಧ ಸಾಥ್ ನೀಡಿತು. ಭತ್ತದ ಸಂರಕ್ಷಕರ ಪರಿಚಯವಾಯಿತು. ಬೀಜಗಳು ವಿನಿಮಯ ಗೊಂಡುವು. ಈಗ ಅವರ ಮ್ಯೂಸಿಯಂನಲ್ಲಿ ಇನ್ನೂರಕ್ಕೂ ಮಿಕ್ಕಿ ಭತ್ತದ ತಳಿಗಳಿವೆ. ಮೂವತ್ತಕ್ಕೂ ಮಿಕ್ಕಿ ರಾಗಿಗಳ ಸಂಗ್ರಹವಿದೆ. ಎಲ್ಲವೂ ನೋಡಲು ಮಾತ್ರ.
            ಸಸಿಯಲ್ಲಿ ಬೇರು, ಮಣ್ಣು ಸಹಿತವಾಗಿ ತಳಿಗಳನ್ನು ಜೋಪಾನವಾಗಿಟ್ಟಿದ್ದಾರೆ. ಮಾನವ ಸ್ಪರ್ಶದಿಂದ ದೂರವಿದ್ದರೆ ತೆನೆಯಲ್ಲಿರುವ ಕಾಳುಗಳು ತಾಜಾತನ ಕಳೆದುಕೊಳ್ಳುವುದಿಲ್ಲ. ಭತ್ತ ಕೃಷಿಯ ಸಂಸ್ಕೃತಿಯನ್ನು ಸಾರುವ ಗೋಡೆಬರೆಹಗಳಿವೆ. ಕೃಷಿ ಕೆಲಸಗಳಿಗೆ ತೊಂದರೆಯಾಗುತ್ತಿದ್ದರೂ ಆಸಕ್ತರಿಗೆ ಸ್ವತಃ ನಿಂತು ತಳಿಗಳ ಗುಣವಿಶೇಷಗಳನ್ನು ವಿವರಿಸುವ ಸಹಿಷ್ಣು. 'ಕಣದ ತುಂಬ ಮತ್ತು ಸಿದ್ಧಸಣ್ಣ' ಎಂಬ ತಳಿಗಳೆರಡನ್ನು ಅಭಿವೃದ್ಧಿ ಪಡಿಸಿದ್ದಾರೆ. ಸಿದ್ಧಸಣ್ಣವು ಎಕ್ರೆಗೆ ಇಪ್ಪತ್ತೇಳು ಕ್ವಿಂಟಾಲ್ ಇಳುವರಿ ನೀಡುವ ಸಣ್ಣಕಾಳಿನ ಭತ್ತ.
               ನಮ್ಮ ಹೊಲಕ್ಕೆ ದೂರದೂರಿಂದ ಜನ ಬರ್ತಾರಲ್ಲಾ.. ಅದನ್ನು ನೋಡಿ ಇವನಿಗೇನೋ ಲಾಭವಿರ್ಬೇಕು. ಇಲ್ಲಾಂದ್ರೆ ಜನ ಯಾಕೆ ಬರ್ತಾರೆ? ಅಂತ ಕಟಕಿಯಾಡಿದ್ರು. ಈ ಮಧ್ಯೆ ಬೋರೇಗೌಡ ಏನೋ ಸಾದ್ನೆ ಮಾಡಿದ್ದಾನೆ ಅಂತ ನೋಡಲು ಬಂದವರು ಭತ್ತದತ್ತ ಆಸಕ್ತರಾಗಿದ್ದಾರೆ, ಎನ್ನುವ ಬೋರೇಗೌಡರಲ್ಲಿ ತನ್ನೂರು ಮತ್ತು ಕೃಷಿಕರು ಬದಲಾಗಬೇಕು ಎನ್ನುವ ದೂರದೃಷ್ಟಿ ಮಿಂಚಿ ಮರೆಯಾಯಿತು. ಇಂದಲ್ಲ ನಾಳೆ ಪಯರ್ಾಯ ಬೆಳೆಗಳತ್ತ ಕೃಷಿಕರು ಬದಲಾಗಿಯೇ ಆಗ್ತಾರೆ ಎನ್ನುವ ದೃಢ ವಿಶ್ವಾಸವೂ ಗೌಡರಿಗಿದೆ.
             ಒಂದೆಡೆ ಸೈಯದ್ ಘನಿ ಖಾನ್, ಇನ್ನೊಂದೆಡೆ ಭತ್ತದ ಬೋರೇಗೌಡರು. ತಿನ್ನಲು ಅಕ್ಕಿ, ಕುಡಿಯಲು ನೀರು, ಒರಗಲೊಂದು ದಿಂಬು. ಇವಿಷ್ಟಿದ್ದರೆ ಆನಂದ, ಎಂದು ಚೀನೀ ದಾರ್ಶನಿಕರೊಬ್ಬರ ಮಾತಿನ ಸಾಕಾರ ಈ ಇಬ್ಬರು ಭತ್ತ ಸಂರಕ್ಷಕರಲ್ಲಿ ಕಂಡೆ. ಮಂಡ್ಯದಲ್ಲಿ ಈ ಎರಡು ಮಾದರಿಗಳು ಕಬ್ಬಿನ ಮಧ್ಯೆ ಸಿಹಿಯ ಕಂಪನ್ನು ಬೀರುತ್ತವೆ. ಬದಲಾವಣೆಯ ಬಾಗಿಲನ್ನು ತೆರೆದಿಟ್ಟಿದೆ. ಬದಲಾವಣೆ ಬಯಸುವ ರೈತರಿಗೆ ಮುಕ್ತ ಪ್ರವೇಶವನ್ನು ಕಾದಿಟ್ಟಿದೆ.
(ಚಿತ್ರ : ಸಹಜ ಸಮೃದ್ಧ )

0 comments:

Post a Comment