Tuesday, August 11, 2009

ಮನೆಯೊಳಗೆ ಅವಿತ ಅಂತಕನ ದೂತ!

'ಮನೆ ಅಂದ ಮೇಲೆ ಅಲ್ಲಿ ನಾಯಿ, ಬೆಕ್ಕು, ಆಡು, ದನ ಇರಲೇ ಬೇಕು' - ಕೃಷಿಭೀಷ್ಮ ಚೇರ್ಕಾಡಿಯವರು ಮಾತಿನ ಮಧ್ಯೆ ಆಡಿದ ಮಾತು. ಹಸುಗಳಿಲ್ಲದೆ ಬದುಕೇ ಇಲ್ಲ. ನಾಯಿಗಳು ಮನೆಯ ಹೊರಗಿನ ರಕ್ಷಕನಾದರೆ, ಬೆಕ್ಕುಗಳು ಮನೆಯೊಳಗಿನ ಕಾವಲುಗಾರ!ಮನೆಯ ಸದಸ್ಯರೊಂದಿಗೆ ಮತ್ತೊಬ್ಬ ಸದಸ್ಯನಾಗಿ ಬದುಕುತ್ತವೆ -ಸಾಕುಪ್ರಾಣಿಗಳು. ನಾಯಿ, ಬೆಕ್ಕು, ದನಗಳಿಗೆ ಆಹಾರ ತಿನ್ನಿಸಿದ ಬಳಿಕವೆ ಮನೆಯೊಡತಿ ತಾನುಣ್ಣುತ್ತಾಳೆ.
ಏಳೆಂಟು ಬೆಕ್ಕಿನಮರಿಗಳು, ಐದಾರು ನಾಯಿಗಳು, ಹಟ್ಟಿಯಲ್ಲಿ 3-4 ಹಸುಗಳು..ಹೀಗೆ ನಮ್ಮದು ದೊಡ್ಡ ಸಂಸಾರ. 'ಶ್ವೇತಸುಂದರಿ'ಯ ಕೊರಳಿಗೆ ಬಿಗಿದ ಸರಪಳಿಯನ್ನು ಹಿಡಿದು ವಾಕಿಂಗ್ ಹೋಗುವ ಯೋಗ ಇನ್ನೂ ಬಂದಿಲ್ಲ! ಅಂಟಿಲ್ಲ!ಮನುಷ್ಯನಾದರೋ 'ಅನ್ನದ ಋಣಕ್ಕೆ ಕೃತಘ್ನನಾಗುತ್ತಾರೆ.
ಸಾಕಿದ ಪ್ರಾಣಿ ಋಣವನ್ನು ನೆನಪಿಟ್ಟು ತೀರಿಸುತ್ತದೆ. ಹಟ್ಟಿಯ ದನವನ್ನು ಮೇಯಲು ಬಿಡುತ್ತೇವಲ್ಲಾ, ದಾರಿಯಲ್ಲಿ ಅದು ನಿಮಗೆ ಸಿಕ್ಕಿತೆನ್ನಿ. ಗುರುತುಹಿಡಿದುಬಿಡುತ್ತವೆ. ಒಂದು ವೇಳೆ ಗುರುತು ಸಿಗದಿದ್ದರೆ ನಿಮ್ಮ ಮತ್ತು ದನದ ಮಧ್ಯೆ ಅಂತರವಿದೆ ಎಂದರ್ಥ!ಹಳ್ಳಿಯಲ್ಲಿ ದನಗಳನ್ನು ಮೇಯಲು ಗುಡ್ಡಕ್ಕೆ ಅಟ್ಟುತ್ತಾರೆ. ದನಗಳು ಮೇಯುವ ಗುಡ್ಡ, ಕಾಡಿನಲ್ಲೆಲ್ಲಾ ಮನೆಗಳು! ಅವುಗಳು ಯಾರ್ಯಾರದೋ ತೋಟ, ಗದ್ದೆಗೆ ನುಗ್ಗಿ ಹೊಟ್ಟೆ ತುಂಬಿಸಿಕೊಂಡು ಬರುತ್ತವೆ! ಕೆಲವು ಸಲ ಮಂದೆಯಿಂದ ತಪ್ಪಿಸಿಕೊಂಡು, ಮನೆಯ ಹಾದಿ ಕಾಣದೆ ಗುಡ್ಡದಲ್ಲೇ ಏಕಾಂಗಿಯಾಗಿ ಉಳಿದುಬಿಡುತ್ತವೆ. ದನ ಎಲ್ಲಿದೆ ಗೊತ್ತಿಲ್ಲ, ಅವುಗಳನ್ನು ಅರಸುತ್ತಾ, ದನದ ಹೆಸರನ್ನು ಕೂಗಿ ಕರೆಯುತ್ತಾ ಹೋಗುತ್ತಿದ್ದಂತೆ ದನಿಯ ಪರಿಚಯವಿದ್ದ ಅದು ತಾನಿರುವಲ್ಲಿಂದಲೇ ಪ್ರತಿಸ್ಪಂದನ ಕೊಡುತ್ತದೆ. ಇವೆಲ್ಲಾ 'ದೊಡ್ಡ ವಿಷಯ'ವಲ್ಲ ಬಿಡಿ. ಆದರೆ ಬದುಕಿನಲ್ಲಿ ಮನುಷ್ಯರನ್ನು ಪ್ರಾಣಿಗಳು ಹಚ್ಚಿಕೊಳ್ಳುವ ರೀತಿ ಮರೆಯುವಂತಹುದಲ್ಲ.
ವಿಚಾರ ಎಲ್ಲೋ ಹೋಯಿತು ಅಲ್ವಾ. ನಾನು ಹೇಳ ಹೊರಟಿರುವುದು ಹದಿನೈದು ವರುಷದ ಹಿಂದಿನ ನನ್ನ ಮನೆಯ ಕರಿಬೆಕ್ಕೊಂದರ ಕಥೆಯನ್ನು! ಎರಡು ಬೆಕ್ಕು ದಂಪತಿ, ಆರು ಮರಿಗಳ ದೊಡ್ಡ ಸಂಸಾರವಿತ್ತು. ಹಾಲು ಕರೆದು ತರುವಾಗ ಅವುಗಳ ರಾದ್ದಾಂತ ನೋಡಬೇಕು, ಕುರುಕ್ಷೇತ್ರವೇ?! ಅವುಗಳಲ್ಲಿ ಒಂದೆರಡು ಹಟ್ಟಿಯ ಮೂಲೆಯಲ್ಲಿ ಕುಳಿತು 'ನನಲಾ ಅತ್ಜ್ಜಾ, ಏತ್ ಪೊರ್ತು' ಎಂದು ದುರುಗುಟ್ಟಿ ನೋಡುವ ಪರಿ! ಊಟಕ್ಕೆ ಬಟ್ಟಲಿಟ್ಟಾಗ, ಮುತ್ತಿಕೊಳ್ಳುವ ಚಂದ! ಮಾರ್ಜಾಲ ಸಮಾರಾಧನೆ ಆಗದೆ ಮನೆಮಂದಿಗೆ ಊಟವಿಲ್ಲ.
ಹೀಗಿದ್ದಾಗ ಒಂದಿವಸ ಕರ್ರಗಿನ ಚಿಕ್ಕ ಗಂಡು ಬೆಕ್ಕಿನ ಮರಿಯೊಂದು ಪ್ರತ್ಯಕ್ಷ. ಊರಿಲ್ಲ-ಸೂರಿಲ್ಲ, ಎಲ್ಲಿಂದಲೋ ಬಂದಿತ್ತು. ನಾವದಕ್ಕೆ 'ಕಂಠು' ಅಂತ ನಾಮಕರಣ ಮಾಡಿದ್ದೆವು. 'ಅಯ್ಯೋ, ಮನೆಯಲ್ಲಿ ರಾಶಿರಾಶಿ ಇವೆ. ಇದರೊಟ್ಟಿಗೆ ಇನ್ನೊಂದು. ನಿಮ್ಮನ್ನೆಲ್ಲಾ ಹೊಳೆಗೆ ಹಾಕಿ ಬಿಡ್ತೇನೆ' ಅಮ್ಮ ಗದರಿಸುತ್ತಿದ್ದರು. ಅದನ್ನು ಗೋಣಿಯಲ್ಲಿ ಹಿಡಿದು ಎರಡು ಕಿಲೋಮೀಟರ್ ದೂರದಲ್ಲಿ ಬಿಟ್ಟು ಬಂದರೂ ಎರಡೇ ದಿನದಲ್ಲಿ ಮರಳಿ ಪ್ರತ್ಯಕ್ಷ! ಆಹಾರ ಏನೂ ಹಾಕದಿದ್ದರೆ ಹೋದೀತು ಎಂದು ಗ್ರಹಿಸಿ ಉಪವಾಸ ಕೆಡವಿದರೂ ಜಪ್ಪನೆ ಝಂಡಾ ಊರಿತ್ತು! ಸಾಯಲಿ, ಹತ್ತರೊಟ್ಟಿಗೆ ಹನ್ನೊಂದು. ಮಾರ್ಜಾಲ ಸಂಸಾರ ದೊಡ್ಡದಾಯಿತು.
ಯಾಕೋ, ಉಳಿದ ಬೆಕ್ಕಿನ ಮರಿಗಳಂತೆ ಆಟ, ಓಟ, ನಡಿಗೆ ನಿಧಾನ. ಉಳಿದವು 'ಭೂಮಿ-ಆಕಾಶ ಒಂದು ಮಾಡುತ್ತಾ ಆಟವಾಡುತ್ತಿದ್ದರೂ' ಇದು ಮಾತ್ರ 'ಸ್ಥಿತಪ್ರಜ್ಞ'ನಂತೆ ಪಿಳಿಪಿಳಿ ಮಾಡುತ್ತಾ ಕೂರುತ್ತಿತ್ತು. ಥೇಟ್ 'ಪುಷ್ಕರನನ್ನು ಜೂಜಿಗೆ ಎಳೆವ ಶನಿ'ಯೇ!ಈ ಕರಿಸುಂದರಾಂಗನಿಗೆ ಆಗಾಗ ಅಸೌಖ್ಯತೆ. ಒಂದಿನವೂ ಆರೋಗ್ಯದಲ್ಲಿರುವುದನ್ನು ನಾನು ನೋಡಿಲ್ಲ. ಏನನ್ನೋ ತಿಂದು ವಾಂತಿ ಮಾಡಿ ಕೈಕಾಲು ಬಿಟ್ಟು ಮಲಗಿದರೆ, ಇಪ್ಪತ್ತನಾಲ್ಕು ಗಂಟೆಯ ಶವಾಸನ! ಕೆಲವು ದಿವಸ ನಾಪತ್ತೆ! ಮತ್ತೆ ದಿಢೀರ್ ಪ್ರತ್ಯಕ್ಷ. ಕಾಕತಾಳೀಯವೋ ಎಂಬಂತೆ ಕಂಠು ಶವಾಸನ ಮಾಡಿದಾಗಲೆಲ್ಲಾ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಶೀತವೋ, ಜ್ವರವೋ ಬಾಧಿಸುತ್ತಿತ್ತು! ಕೆಟ್ಟ ಸುದ್ದಿ ಕೇಳುತ್ತಿತ್ತು. ಹಾಗಾಗಿ ಇದನ್ನು ನೆರೆಮನೆಯವರು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಓಡಿಸುತ್ತಿದ್ದರು. ಎದುರು ಬಂದರೆ ಹಿಡಿಶಾಪ ಹಾಕುತ್ತಿದ್ದರು.
ಒಮ್ಮೆ ಏನನ್ನೋ ತಿಂದು, ವಾಂತಿ ಮಾಡಿ ಅಟ್ಟದಲ್ಲಿ 'ಗೊರ್..ಗೊರ್' ಅನ್ನುತ್ತಾ ಮಲಗಿತ್ತು. 'ಇನ್ನು ಏನು ಕಾದಿದೆಯೋ, ಗ್ರಾಚಾರ' ಅಮ್ಮನಿಂದ ಸಂಶಯ. ಅಂದೇ ರಾತ್ರಿ ಜ್ವರವೆಂದು ಮಲಗಿದ ತಂದೆಯವರು ಹಾಸಿಗೆ ಬಿಟ್ಟೇಳುವಾಗ ವಾರ ದಾಟಿತ್ತು! ಕಂಠು ಕೈಕಾಲು ಬಿಟ್ಟರೆ, ಮನೆಯವರಿಗೆ ಗೋಳು ತಪ್ಪಿದ್ದಲ!'ನಿಮ್ಮ ಕರಿಬೆಕ್ಕು ತೋಡಿನಲ್ಲಿದೆ. ಅದು ಸತ್ತು ಹೋಗಿದೆ ಮಾರಾಯ್ರೆ' ಪಕ್ಕದ ಮನೆಯವರಿಂದ ಬುಲಾವ್! ಅನ್ನ ಹಾಕಿ ಸಾಕುವ ಪಟ್ಟಿಯಲ್ಲಿ ಇದೆಯಲ್ಲಾ ಎನ್ನುತ್ತಾ ಮನೆಗೆ ತಂದೆವು. 'ಪೂರ್ತಿ ಸಾಯಲಿಲ್ಲ!' ನಾಲ್ಕು ದಿವಸದ 'ದಿವ್ಯಮೌನ'ದ ನಂತರ ಯಥಾಸ್ಥಿತಿಗೆ.
ಈ ಮಧ್ಯೆ ಅಪ್ಪ ಹೊಟ್ಟೆನೋವು ಎನ್ನುತ್ತಾ ಮಲಗಿದವರು, ಮಣಿಪಾಲ ಆಸ್ಪತ್ರೆಯಲ್ಲಿ ಹೊಟ್ಟೆಯನ್ನು ಕೊಯಿಸಿಕೊಂಡು ತನ್ನ ಅರ್ಚಕ ವೃತ್ತಿಗೆ ಶಾಶ್ವತ ವಿದಾಯ ಹೇಳಿದರು! ದಿನ ಸರಿಯುತ್ತಿತ್ತು. ಕಂಠುವಿನ ಶವಾಸನಗಳು ಮುಂದುವರಿಯುತ್ತಿತ್ತು. ಈ ಮಧ್ಯೆ ಅಪ್ಪನಿಗೆ ಅಸೌಖ್ಯ ಬಾಧಿಸಿದ್ದರ ಪರಣಾಮವಾಗಿ ಕ್ಷಣಗಣನೆಯಲ್ಲಿದ್ದರು. ಒಂದಿವಸ ಕಂಠು ಅಡುಗೆ ಮನೆಯಲ್ಲಿ ಶವವಾಗಿದ್ದ! ಅಂದೇ ಸಂಜೆ ನನ್ನಪ್ಪ ಇಹಲೋಕ ತ್ಯಜಿಸಿದರು! ಹೇಗಿದೆ ಕಂಠು ಮತ್ತು ಬದುಕಿನ ಸಂಬಂಧ.
ಉಳಿದ ಬೆಕ್ಕುಗಳು ಅವುಗಳಷ್ಟಕ್ಕೇ ಇದ್ದುವು. ಕಂಠು ಮಾತ್ರ ಯಾವುದೋ ರೂಪದಿಂದ 'ಮುನ್ಸೂಚನೆ' ಕೊಡುವ ಅಂತಕನ ದೂತನಾಗಿ ಮನೆಯೊಳಗೆ ಸೇರಿಬಿಟ್ಟಿದ್ದ! ಮನೆಯಜಮಾನ ಹೊರಟು ಹೋದಾಗ ಆತನೊಂದಿಗೆ ತಾನೂ ಹೋಗಿದ್ದ! ಈ ಒಟ್ಟೂ ಪ್ರಕರಣವನ್ನು 'ಮೂಢನಂಬಿಕೆ, ಗೊಡ್ಡುನಂಬಿಕೆ ಅಥವಾ ಇನ್ನೇನೋ' ಎಂದರೂ ನನಗಾವುದೇ ಸೂತಕವಿಲ್ಲ, ಪಾತಕವಿಲ್ಲ. ಆದರಿದು ಬದುಕಿನಲ್ಲಿ ಅನುಭವಿಸಿದ ಸತ್ಯ ಘಟನೆ.

2 comments:

Arun said...
This comment has been removed by the author.
Arun said...

Just install Add-Kannada widget on your blog/ website, Then u can easily submit your pages to all top Kannada Social bookmarking and networking sites.

Kannada bookmarking and social networking sites give more visitors than if we submit our articles on reddit.com or digg ..etc because naturally of their content specific.

Click here for Install Add-Kannada widget

Post a Comment