Saturday, August 29, 2009

ಚಕ್ರದಡಿ ಸಿಕ್ಕಿಬಿದ್ದವರು!

(ದೇಶದ ಹೆಸರಾಂತ ಕೃಷಿ ಚಿಂತಕ ಡಾ.ದೇವೀಂದ್ರ ಶರ್ಮಾ ಅವರು ಬೆಂಗಳೂರಿನ ಕೃಷಿ ಎಂಜಿನಿಯರ್ಗಳ ಸಂಸ್ಥೆಯಲ್ಲಿ ಮಾಡಿದ ಭಾಷಣದ ಒಂದು ಎಸಳು. ಖ್ಯಾತ ಪತ್ರಕರ್ತ ನಾಗೇಶ ಹೆಗಡೆ ಇದನ್ನು ಕನ್ನಡೀಕರಿಸಿದ್ದು, ಬೆಂಗಳೂರಿನ 'ಸಹಜ ಸಮೃದ್ಧ' ಭಾಷಣದ ಸಾರವನ್ನು ಅಚ್ಚುಹಾಕಿದೆ)

ನಮ್ಮ ದೇಶದ ಕೃಷಿರಂಗದ ದುಃಸ್ಥಿತಿಗೆ ಮುಖ್ಯ ಕಾರಣ ಏನು ಗೊತ್ತೇ? ಇಂದಿಗೂ ಅಮೇರಿಕ ಅಥವಾ ಬ್ರಿಟಿಷ್ ತಜ್ಞರು ಬರೆದ ಪಠ್ಯಪುಸ್ತಕಗಳನ್ನು ಓದಿಯೇ ನಮ್ಮ ಕೃಷಿ ವಿಜ್ಞಾನದ ವಿದ್ಯಾರ್ಥಿಗಳು ಪದವಿ ಪಡೆಯಬೇಕಾದ ಸ್ಥಿತಿ ಇದೆ.

ಪಾಶ್ಚಾತ್ಯ ಕೃಷಿ ಪಂಡಿತರ ಸಲಹೆಗಳಿಂದಾಗಿಯೇ ನಮ್ಮಲ್ಲಿ ಏನೇನು ದುರವಸ್ಥೆಗಳಾಗಿವೆ ಎಂಬುದಕ್ಕೆ ಕೆಲವು ಕಾರಣಗಳು -1966ರಲ್ಲಿ ನಮ್ಮಲ್ಲಿ ಹಸಿರು ಕ್ರಾಂತಿಯ ಬೀಜಗಳನ್ನು ಹೊರ ದೇಶಗಳಿಂದ ತರಿಸಿದೆವು. 'ಅದರಿಂದ ಮತ್ತೇನೂ ದುಷ್ಪರಿಣಾಮ ಆಗಲಿಕ್ಕಿಲ್ಲ. ಎರೆಹುಳಗಳು ಸಾಯಬಹುದಷ್ಟೇ' ಎಂಬ ಉಪದೇಶ ಈ ತಜ್ಞರಿಂದ ಸಿಕ್ಕಿತು. ಸರಿ, ಗಿಡ್ಡತಳಿಯ ಭತ್ತದ ತಳಿಗಳು ಬಂದುವು. ಹಿಂದೆಲ್ಲಾ ನಮ್ಮ ರೈತರು ಬೀಜಗಳನ್ನು ಹೊಲದಲ್ಲಿ ಎರಚುತ್ತಿದ್ದರು. ಹಾಗೆ ಮಾಡುವುದು ಸರಿಯಲ್ಲ, ಸಾಲಾಗಿ ನಾಟಿ ಮಾಡಿ ಎಂದು ಈ ತಜ್ಞರು ಹೇಳಿದರು. ಜತೆಗೆ ಹೇರಳ ರಸಗೊಬ್ಬರ, ನೀರು, ಕೀಟನಾಶಕ ಸುರಿಯಲು ಸಲಹೆ ಮಾಡಿದರು.

ಅವೆಲ್ಲ ಸುರಿದರೆ ಫಸಲು ಹೆಚ್ಚಾಗಿ ಬರುತ್ತದೆ ನಿಜ. ಆದರೆ ಸಾಲಾಗಿ ಏಕೆ ನಾಟಿ ಮಾಡಬೇಕು? ಅದಕ್ಕೆಂದು ಹೆಚ್ಚಿನ ಕೃಷಿ ಕೂಲಿಕಾರರು ಬೇಕು. ದಾರ ಕಟ್ಟಿ ಕೆಸರಿನಲ್ಲಿ ನಾಟಿ ಮಾಡಲು ಅಪಾರ ಕೂಲಿ ವೆಚ್ಚವಾಗುತ್ತದೆ. ಸಾಲಾಗಿ ನೆಟ್ಟ ಮಾತ್ರಕ್ಕೇ ಇಳುವರಿ ಜಾಸ್ತಿ ಬರುವುದಿಲ್ಲ. ಆದರೂ ಯಾಕೆ ಈ ನಿಯಮ ಜಾರಿಯಲ್ಲಿದೆ?

ಫಿಲಿಪ್ಹಿನ್ಸ್ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಗುರುದೇಬ್ ಘೋಷ್ ಅವರಿಗೆ ಹಿಂದೊಮ್ಮೆ ಈ ಪ್ರಶ್ನೆಯನ್ನು ಕೇಳಿದ್ದೇನೆ. ಕೊನೆಗೆ ಅವರು ಚುಟುಕಾಗಿ ಉತ್ತರಿಸಿದ್ದೇನೆಂದು ಗೊತ್ತೇ - 'ಟ್ರ್ಯಾಕ್ಟರ್ ತಯಾರಿಕಾ ಉದ್ಯಮಕ್ಕೆ ನೆರವಾಗಲಿ ಎಂದೇ ಈ ನಿಯಮ.!

ನಿಜವೇ ಇರಬೇಕು. ಶಿಸ್ತಿನ ಸಾಲಿನಲ್ಲಿ ನಾಟಿ ಮಾಡಿದರೆ ಮಾತ್ರ ಸಾಲಿನ ಮಧ್ಯೆ ಟ್ರ್ಯಾಕ್ಟರ್ ಸಲೀಸಾಗಿ ಓಡಾಡುತ್ತದೆ. ನಿರೀಕ್ಷೆಯತೆ ಅನುಕೂಲಸ್ಥ ರೈತರು ಇದರ ಮೋಡಿಗೆ ಬಿದ್ದರು. ಅಷ್ಟೇನೂ ಅನುಕೂಲವಿಲ್ಲದ ರೈತರಿಗೂ ಅದು ಆಕರ್ಷಿಸಿತು. ಬ್ಯಾಂಕುಗಳು ತಾವಾಗಿ ಟ್ರ್ಯಾಕ್ಟರ್ಗೆ ಸಾಲ ನೀಡಲು ಮುಂದಾದರು. ತಾವು ಸಾಲ ಕೊಟ್ಟ ಟ್ರ್ಯಾಕ್ಟರ್ಗೆ ಮಾಲೆ ಹಾಕಿ ಫೋಟೋ ತೆಗೆಸಿ ಪ್ರಚಾರ ಕೊಟ್ಟು ಬ್ಯಾಂಕುಗಳು ಉದ್ದಾರವಾದವೇ ವಿನಾ ರೈತರ ಏಳಿಗೆಯಾಗಲಿಲ್ಲ.

ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು (ಶೇ.70ರಷ್ಟು) ಟ್ರ್ಯಾಕ್ಟರ್ಗಳಿವೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಟ್ರ್ಯಾಕ್ಟರ್ ಇಟ್ಟುಕೊಂಡವರ ಸಂಖ್ಯೆಯೇ ಜಾಸ್ತಿ! 'ಇನ್ನು ಮೇಲೆ ಟ್ರ್ಯಾಕ್ಟರ್ಗೆ ಸಾಲ ಕೊಡುವುದನ್ನು ನಿಲ್ಲಿಸಿಬಿಡಿ' ಎಂದು ನಮ್ಮಂಥ ಕೆಲವರು ಬ್ಯಾಂಕ್ಗಳಿಗೆ ವಿನಂತಿ ಮಾಡಿಕೊಂಡೆವು. ಏನೂ ಪ್ರಯೋಜನವಾಗಲಿಲ್ಲ. ಸಾಲ ನಿಲ್ಲಿಸಲು ಬ್ಯಾಂಕುಗಳು ಖಡಾಖಂಡಿತ ನಿರಾಕರಿಸಿದುವು.

ಕೀಟನಾಶಕಗಳದ್ದೂ ಇದೇ ಕತೆ. ಭತ್ತಕ್ಕೆ ಕೀಟನಾಶಕದ ಸಿಂಪಡಣೆಯ ಅಗತ್ಯವೇ ಇಲ್ಲ. ಆದರೂ ರೈತರಿಗೆ ಅದೇನೋ ಮೋಡಿ ಮಾಡಲಾಗಿದೆ. ಬೆನ್ನಿಗೆ ಕಟ್ಟಿಕೊಳ್ಳುವ ಸಿಂಪಡಣಾ ಯಂತ್ರಗಳು ಬಂದುವು. ಉದ್ದ ಪಿಚಕಾರಿಯ ಮೂತಿ ಇರುವ ಸಿಂಪಡಣಾ ಸಾಧನಗಳು ಬಂದುವು. ಇದರಿಂದಾಗಿ ನೀರಿಗೋ ಮಣ್ಣಿಗೋ ವಿಷ ಸೇರ್ಪಡೆ ಆಗಿ ಬೇಕಿಲ್ಲದ ಜಾಗಕ್ಕೆಲ್ಲಾ ಪಸರಿಸುವಂತಾಯಿತು. ಹೇಗಿದ್ದರೂ ಸಿಂಪಡಣಾ ಪಂಪ್ ಇದೆ ಎಂಬ ಒಂದೇ ಕಾರಣಕ್ಕೆ ಕೀಟನಾಶಕಗಳನ್ನು ಖರೀದಿಸಿ ತಂದು, ಅನಗತ್ಯವಾಗಿ ಭತ್ತಕ್ಕೆ ಸಿಂಪಡಣೆ ಮಾಡಲಾಗುತ್ತವೆ.

ಕೃಷಿ ವಿಷಯ ಕುರಿತ ಏನೆಲ್ಲ ಬಗೆಯ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ 'ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ' ಇದುವರೆಗೆ ರೈತರ ಆತ್ಮಹತ್ಯೆಯ ವಿಚಾರದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ! ಅವರಿಗೆ ರೈತರ ಕಷ್ಟನಷ್ಟಗಳ ಗೊಡವೆ ಬೇಕಿಲ್ಲ. ಅವರು ಟ್ರ್ಯಾಕ್ಟರ್ ಮಾರಾಟದ ವ್ಯವಸ್ಥೆ ಮಾಡುತ್ತಾರೆ. ಕೀಟನಾಶಕದ ಮಾರಾಟದ ಏರ್ಪಾಟು ಮಾಡುತ್ತಾರೆ. ಈಗ ಕುಲಾಂತರಿ ಫಸಲಿನ ಜಾಹೀರಾತು ಮಾಡುತ್ತಿದ್ದಾರೆ.

ನಾವೀಗ ಈ ತಜ್ಞರಿಗೆ ಹೇಳಬೇಕಾಗಿದೆ - 'ಮಾನ್ಯರೇ, ಇಷ್ಟು ವರುಷಗಳ ಕಾಲ ಉದ್ದಿಮೆಗಳು ಬದುಕುಳಿಯಲು ನೀವು ರೈತರ ಹಿತವನ್ನು ಬಲಿಗೊಟ್ಟಿರಿ. ಒಂದೊಂದು ಬ್ಲಾಕ್ನಿಂದಲೂ ಸರಾಸರಿ 70 ಲಕ್ಷ ರೂಪಾಯಿಗಳು ರೈತರ ಕಿಸೆಯಿಂದ ಉದ್ದಿಮೆಗಳಿಗೆ ಹರಿದು ಹೋಗುವಂತೆ ಮಾಡಿದಿರಿ. ಇನ್ನಾದರೂ ಅವನ್ನೆಲ್ಲಾ ನಿಲ್ಲಿಸಿ. ರೈತರು ಬದುಕುಳಿಯುವಂತಹ ಏನಾದರು ಉಪಾಯ ಮಾಡಿ' ಎನ್ನಬೇಕಾಗಿದೆ.

ಮತ್ತೇನಿಲ್ಲ, 'ಈ 70 ಲಕ್ಷ ರೂಪಾಯಿ ಆಯಾ ಬ್ಲಾಕ್ಗಳಲ್ಲಿ ರೈತರ ಬಳಿಯೇ ಉಳಿದರೂ ಸಾಕು, ದೊಡ್ಡ ಉಪಕಾರವಾಗುತ್ತದೆ. ದಯವಿಟ್ಟು ಈ ಉದ್ಯಮಗಳು ಹಳ್ಳಿಗೆ ಬರದಂತೆ ನೋಡಿಕೊಳ್ಳಿ' ಎನ್ನಬೇಕಾಗಿದೆ.1988ರಲ್ಲಿ ಇಂಡೋನೇಶ್ಯಾ ಸರಕಾರ ಇಂಥವೆ ನಿರ್ಣಯವನ್ನು ಕೈಗೊಂಡಿತು. ಅಲ್ಲೂ ಕೀಟನಾಶಕದ ಹಾವಳಿ ಅತಿಯಾಗಿತ್ತು. ಭತ್ತಕ್ಕೆ ಕಂದುಜಿಗಿ ಹುಳು ಬರುತ್ತದೆಂಬ ಭೀತಿ ಹುಟ್ಟಿಸಿ, ಐವತ್ತೇಳು ಬಗೆಯ ಕೀಟನಾಶಕಗಳನ್ನು ರೈತರು ಭತ್ತದ ಗದ್ದೆಗೆ ಎರಚುವಂತೆ ಮಾಡಲಾಗಿತ್ತು. ಒಂದು ಕಠಿಣ ನಿರ್ಧಾರವನ್ನು ರೈತರು ಕೈಗೊಂಡದ್ದರಿಂದ ಅಲ್ಲಿನ ಸರಕಾರ ಎಲ್ಲಾ ಕೀಟನಾಶಕಗಳನ್ನು ನಿಷೇಧಿಸಿತು.

ಅಚ್ಚರಿಯ ಸಂಗತಿ ಏನು ಗೊತ್ತೇ? ಭತ್ತದ ಉತ್ಪಾದಕತೆ ಶೇ.20 ಹೆಚ್ಚಾಯಿತು.ನಮ್ಮ ಸಂಶೋಧನಾ ಸಂಸ್ಥೆಗಳು ಈ ಉದಾಹರಣೆಯನ್ನು ರೈತರಿಗೆ ಯಾಕೆ ಹೇಳುವುದಿಲ್ಲ!

0 comments:

Post a Comment