Monday, August 23, 2010

ಶ್ಲಾಘನೀಯ ಯತ್ನ : ಹಳ್ಳಿಗರ ಕ್ಯಾಲೆಂಡರ್

ಕೃಷಿ ಬದುಕಿನಿಂದ ಭತ್ತವು ಕಣ್ಮರೆಯಾಗುವ ದಿವಸ ಹತ್ತಿರವಿದೆ. ಅಕ್ಕಿಗಾಗಿ ಪರದಾಡುವ ದಿನಕ್ಕಿನ್ನು ಇಳಿಲೆಕ್ಕ. ಹಿಂದೊಮ್ಮೆ ಅಕ್ಕಿ/ಭತ್ತದ ಕುರಿತಾದ ಬರಗಾಲ ಬಂದಿತ್ತಲ್ಲಾ, ಅಂತಹುದೇ ದಿವಸಗಳನ್ನು ಅಪ್ಪಿಕೊಳ್ಳಲು, ಒಪ್ಪಿಕೊಳ್ಳಲು ಈಗಲೇ ಮಾನಿಸಿಕ ಸಿದ್ಧತೆ ಮಾಡಬೇಕಿದೆ!

ಬೆಂಗಳೂರಿನ ಸಹಜ ಸಮೃದ್ಧವು 'ಭತ್ತ ಉಳಿಸಿ ಆಂದೋಳನ'ವನ್ನು ಚಳುವಳಿ ರೂಪದಲ್ಲಿ ನಿರ್ವಹಿಸುತ್ತಿದೆ. ದೇಸಿ ಭತ್ತದ ಸಂಸ್ಕೃತಿ ಮತ್ತು ಜ್ಞಾನವನ್ನು ಸಂರಕ್ಷಿಸಲು ಪಣತೊಟ್ಟ ಜನಪರ ಚಳುವಳಿಯಿದು.

ಇದರ ಒಂದು ಹಜ್ಜೆಯಾಗಿ 'ಹಳ್ಳಿಗರ ಕ್ಯಾಲೆಂಡರ್' ರೂಪಿಸಿದ್ದು, ಭತ್ತದ ಕುರಿತಾಗಿ 'ಬರೋಬ್ಬರಿ' ಮಾಹಿತಿ ನೀಡಿದೆ. ಭತ್ತದ ಸಂಸ್ಕೃತಿಯನ್ನು ಪುನಃ ಅನ್ನದ ಬಟ್ಟಲಿಗೆ, ಬದುಕಿಗೆ ತರುವ ಪ್ರಯತ್ನ. ಅದರ ಪುಟಗಳನ್ನೊಮ್ಮೆ ತೆರೆದು ನೋಡಿದರೆ ಹೇಗೆ?
ವರುಷಕ್ಕಾಗುವಷ್ಟು ಭತ್ತವನ್ನು ಬೀಜಕ್ಕೆ, ಮನೆ ಬಳಕೆಗೆ ಸಂಗ್ರಹಿಸಿಡುವ ಹಳ್ಳಿ ಜಾಣ್ಮೆ ಹಿರಿದು. ಆಯಾ ಪ್ರದೇಶ, ವಾತಾವರಣಕ್ಕೆ ತಕ್ಕಂತೆ ರೂಪುಗೊಳ್ಳುವ ಭತ್ತದ ಸಂಗ್ರಹಣಾ ರಚನೆಗಳು ಹಳ್ಳಿ ಕಲಾಕೃತಿಗಳು! ಹಸೆಚಿತ್ರಗಳಿಂದ ಚಿತ್ತಾರಗೊಂಡ ತಿರಿ, ಗಳಗೆ, ಮೂಡೆ, ಮಡಿಕೆ, ಪತ್ತಾಯಗಳ ಸೌಂದರ್ಯದ ಮುಂದೆ ಸರಕಾರವು ನೀಡುವ ಬೀಜ ಸಂಗ್ರಹಣಾ ತಗಡಿನ ಬುಟ್ಟಿ ನಿಜಕ್ಕೂ ಡಬ್ಬ! ಇಂತಹ ಸಂಗ್ರಹಣಾ ವಿಧಾನಗಳ ವಿವರಗಳು ಮೊದಲ ಪುಟದ ಹೂರಣ.


ಫೆಬ್ರವರಿ ತಿಂಗಳ ಪುಟದಲ್ಲಿ - ಆಳ ನೀರಿನ ಭತ್ತದ ತಳಿಗಳ ಭಂಡಾರವಿದೆ. ಸಾಗರ ತಾಲ್ಲೂಕಿನ ವರದಾಮೂಲದಲ್ಲಿ ಹುಟ್ಟುವ ವರದಾ ನದಿಯು ಸಾಗರ, ಸೊರಬ, ಶಿರಸಿ ತಾಲೂಕುಗಳಲ್ಲಿ ಸಣ್ಣ ಹೊಳೆಯಾಗಿ ಹರಿಯುತ್ತದೆ. ಜುಲೈ-ಆಗಸ್ಟ್ ತಿಂಗಳಲ್ಲಿ ವರದಾ ನದಿಯಲ್ಲಿ ನೆರೆ ಬಂದುಬಿಟ್ಟರೆ 20-30 ದಿನ ಗದ್ದೆಗಳು ಜಲಸಮಾಧಿ.

ಈ ಜೀವ ಪರಿಸರಕ್ಕೆ ಹೊಂದಿಕೊಳ್ಳುವ ಆಳನೀರಿನ ಭತ್ತದ ತಳಿಗಳು - 'ಬಿಳಿಜಡ್ಡು, ಜೇನುಗೂಡು, ಕರಿಜಡ್ಡು, ಕರಿನೆಲ್ಲು, ಕರಿಕಂಟಕ, ಮುಳ್ಳುಭತ್ತ, ನೆರೆಗುಳಿ, ನೆಟ್ಟಿ, ಪದ್ಮರೇಖ, ಸಣ್ಣವಾಳ್ಯ, ಏಡಿಕುಣಿ, ಮದ್ರಾಸ್ಸಣ್ಣ..' ಇವುಗಳ ಗುರುತು ಹಿಡಿಯಲು ಅನುಕೂಲವಾಗುವಂತೆ ವರ್ಣಚಿತ್ರಗಳಿವೆ.

ಜಲಾಶಯ, ಕೆರೆ, ಕುಂಟೆ, ಕೊಳವೆ ಬಾವಿಗಳ ಬಯಲಿಗೆ ಸೂಕ್ತವಾದ ನೀರಾವರಿ ತಳಿಗಳು, ಯಳಂದೂರಿನ 'ರತ್ನಚೂಡಿ', ಹಾಸನದ 'ರಾಜಮುಡಿ', ಮಲೆನಾಡಿನ 'ಗಂಧಸಾಲೆ', ಸೊರಬದ 'ಸಿದ್ದಸಾಲೆ', ತುಮಕೂರಿನ 'ಹಾಲುಬ್ಬಲು', ಮಂಡ್ಯದ 'ಬಂಗಾರ ಸಣ್ಣ'.. ಹೀಗೆ ಹದಿನಾಲ್ಕು ತಳಿಗಳ ದಾಖಲಾತಿ.

ಒನಕೆಯಿಂದ ಕುಟ್ಟಿದ, ಪಾಲಿಷ್ ಮಾಡದ ಅಕ್ಕಿ ಪೋಷಕಾಂಶಗಳ ಆಗರ. ನಾರು, ಖನಿಜ ಮತ್ತು ವಿಟಮಿನ್ಗಳಿಂದ ಸಮೃದ್ಧ. ಕ್ಯಾನ್ಸರ್ ನಿರೋಧಕ, ಕೊಲೆಸ್ಟರಾಲ್ನಿಂದ ದೂರ. ಆಧುನಿಕ ಗಿರಣಿಗಳು ಬಂದ ಮೇಲೆ, 'ಬಿಳಿ ಅನ್ನ' ಉಣ್ಣುವುದು ಪ್ಯಾಷನ್ ಆಗಿದೆ. ಪಾಲಿಷ್ ಹೆಚ್ಚಿದಷ್ಟೂ ಬೆಲೆ ಹೆಚ್ಚು ತೆರುವ ಹುಚ್ಚುತನ! ಪೋಷಕಾಂಶಗಳ ಭಂಡಾರವಾದ ತೌಡನ್ನು ದನಗಳಿಗೆ ತಿನ್ನಿಸಿ, ಸಕ್ಕರೆ ಕಾಯಿಲೆ ಆಹ್ವಾನಿಸುವ ಪಾಲಿಷ್ ಅಕ್ಕಿ ತಿನ್ನುವ ಹಣೆಬರೆಹ. 'ಕೆಂಪಕ್ಕಿಗೆ ಜೈ.. ಪಾಲಿಷ್ ಅಕ್ಕಿಗೆ ಬೈ' - ಮನಮುಟ್ಟುವ ಸ್ಲೋಗನ್.

ದೇಸೀ ಭತ್ತಗಳ ಬೀಜೋಪಚಾರದ ಕುತೂಹಲ ಮಾಹಿತಿ ಕ್ಯಾಲೆಂಡರ್ನ ಹೈಲೈಟ್! 'ಒಂದು ಪಾತ್ರೆಗೆ ಮುಕ್ಕಾಲು ಭಾಗದಷ್ಟು ನೀರು ತುಂಬಿ. ನಾಟಿ ಕೋಳಿ ಮೊಟ್ಟೆಯನ್ನು ನೀರಿನಲ್ಲಿ ಮುಳುಗಿಸಿ. ಇದಕ್ಕೆ ಉಪ್ಪು ಸುರಿಯುತ್ತಾ ಹೋಗಿ. ಮೊಟ್ಟೆಯ ತುದಿ ಕಾಲು ಭಾಗ ಕಾಣುವವರೆಗೂ ಉಪ್ಪು ಹಾಕುತ್ತಾ ಹೋಗಿ. ಮೊಟ್ಟೆ ತೇಲಲು ಶುರುವಾದಾಗ ಉಪ್ಪು ಹಾಕುವುದನ್ನು ನಿಲ್ಲಿಸಿ. ಅನಂತರ ಭತ್ತದ ಬೀಜವನ್ನು ನೀರಿಗೆ ಹಾಕಿ, ಕೈಯಾಡಿಸುತ್ತಿರಬೇಕು. ತೇಲುವ ಜೊಳ್ಳು ಭತ್ತ ತೆಗೆಯಿರಿ. ಹದಿನೈದು ನಿಮಿಷ ಬಿಟ್ಟು ಭತ್ತದ ಬೀಜವನ್ನು ಉಪ್ಪು ನೀರಿನಿಂದ ಹೊರ ತೆಗೆದು, ಉತ್ತಮ ನೀರಿನಿಂದ ಚೆನ್ನಾಗಿ ತೊಳೆದು, ನೆರಳಲ್ಲಿ ಒಣಗಿಸಿ ನಂತರ ಬಿತ್ತಬೇಕು.' ಬೀಜದ ಆಯ್ಕೆಯ ಕುರಿತು ಪ್ರತ್ಯೇಕ ವಿವರಗಳಿವೆ.

'ಹಸಿರು ಕ್ರಾಂತಿಯ ಹೆಸರಿನಲ್ಲಿ ಅಧಿಕ ಇಳುವರಿಗಾಗಿ ಹೈಬ್ರಿಡ್ ಬೀಜಗಳು ಹೊಲಕ್ಕೆ ಕಾಲಿಟ್ಟವು. ಈಗ ವಿಜ್ಞಾನಿಗಳೊಂದಿಗೆ ಕೆಲವು ಕಂಪೆನಿಗಳು ಕುಲಾಂತರಿ ಭತ್ತವನ್ನು ಗದ್ದೆಗಿಳಿಸಲು ಹುನ್ನಾರ ನಡೆಸುತ್ತಿವೆ. ನಿಸರ್ಗದ ಸೃಷ್ಟಿಗೆ ವಿರುದ್ಧವಾಗಿ, ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಇಂತಹ ತಳಿಗಳ ಬಗ್ಗೆ ಎಚ್ಚರ ಬೇಕಿದೆ. ಇದಕ್ಕೆ ಪರಿಹಾರ ಒಂದೆ - ನಮ್ಮ ದೇಸಿ ಭತ್ತದ ತಳಿಗಳು ನಮ್ಮ ಹೊಲಗಳಲ್ಲಿ ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡುವುದು. ಊಟದ ಬಟ್ಟಲಿನಲ್ಲಿ ಪುನಃ ಅನ್ನ ಬರುವುದು. ಇದಕ್ಕಾಗಿ ನಮ್ಮ ಮನಸ್ಸು ಸಜ್ಜಾಗಬೇಕಾದ ಅನಿವಾರ್ಯತೆ ಮುಂದಿದೆ' ಎನ್ನುತ್ತಾರೆ ಸಹಜ ಸಮೃದ್ಧದ ಮುಖ್ಯಸ್ಥ ಕೃಷ್ಣಪ್ರಸಾದ್.

ಒಣಭೂಮಿಯ ತಗ್ಗು ಪ್ರದೇಶದ ತಳಿಗಳಾದ 'ಮುಂಡುಗ, ಆನೆಕೊಂಬಿನ ಭತ್ತ, ಕರಿಮುಂಡುಗ, ಕೆಂಪುದೊಡ್ಡಿ, ಮರುಡಿ..'; ಔಷಧಿ ಭತ್ತದ ತಳಿಗಳಾದ 'ಅಂಬೇಮೋರೆ, ಕಗಿಸಾಲೆ, ದೊಡ್ಡಬ್ರನೆಲ್ಲು, ಕರಿಕಂಟಕ, ಕಪ್ಪು ನವರ, ಸಣ್ಣಕ್ಕಿ, ಬಿಳಿ ನವರ, ಕರಿ ಭತ್ತ'..ಗಳು; 'ಬಮರ್ಾಬ್ಲಾಕ್, ಕಪ್ಪು ಬಾಸ್ಮತಿ, ಸಾಗ್ಭತ್ತ, ಗಂಧಸಾಲೆ, ಸುಗಂಧಿ, ಕಾಗಿಸಾಲೆ, ಡೆಹರಡೋನ್ ಬಾಸ್ಮತಿ'ಗಳ ವಿವರಗಳು ಇಂಟರೆಸ್ಟಿಂಗ್!

ಇದು ಹಳ್ಳಿಗರ ಕ್ಯಾಲೆಂಡರ್ ಆದರೂ, ಹಳ್ಳಿಯನ್ನು ಪ್ರೀತಿಸುವ, ಆರೋಗ್ಯಕರ ಆಹಾರ ಬಯಸುವ ನಗರದ ಮನೆಗಳಲ್ಲಿ ತೂಗುಹಾಕಲೇ ಬೇಕಾದ ಕ್ಯಾಲೆಂಡರ್.

ಬೆಲೆ ಮೂವತ್ತು ರೂಪಾಯಿ. (ಅಂಚೆ ವೆಚ್ಚ ಸೇರಿದೆ) ಆಸಕ್ತರಿಗಾಗಿ ವಿಳಾಸ : ಸಹಜ ಸಮೃದ್ಧ, 'ನಂದನ', ನಂ7, 2ನೇ ಕ್ರಾಸ್, 7ನೇ ಮುಖ್ಯರಸ್ತೆ, ಸುಲ್ತಾನ್ ಪಾಳ್ಯ, ಬೆಂಗಳೂರು - 560 032, ಸಂಚಾರಿವಾಣಿ: 97312 75656

0 comments:

Post a Comment