Wednesday, February 23, 2011

ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಸಿರಿಧಾನ್ಯ ಬಳಕೆಯ ಪಾಕವಿಧಾನಗಳಿಗೆ ಬಹುಮಾನ ನೀಡಲು ಉದ್ದೇಶಿಸಿದೆ. ಸಾವಿ, ರಾಗಿ, ನವಣೆ, ಸಜ್ಜೆ, ಉದಲು, ಕೊರ್ಲೆ, ಬರಗ ಮುಂತಾದ ಸಿರಿಧಾನ್ಯಗಳಿಂದ ತಯಾರಿಸುವ ಸಾಂಪ್ರದಾಯಿಕ ಮತು ಹೊಸ ಅಡುಗೆಗಳನ್ನು ದಾಖಲಿಸುವ ಮತ್ತು ಅವನ್ನು ಪ್ರಚುರಪಡಿಸುವ ಉದ್ದೇಶದೊಂದಿದೆ ಭಾರತೀಯ ಸಿರಿ ಧಾನ್ಯಗಳ ಜಾಲ (ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾ, 'ಮಿನಿ')ದ ಸಹಯೋಗದೊಂದಿಗೆ ಈ ಬಹುಮಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದುವರೆಗೆ ಒರಟುಧಾನ್ಯಗಳೆಂದು ಕಡೆಗಣಿಸಲ್ಪಟ್ಟಿರುವ, ಆದರೆ ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ ಮತ್ತು ಆಹಾರ ಭದ್ರತೆಗೆ ಪೂರಕವಾಗಿರುವ ಈ ಆಹಾರಧಾನ್ಯಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಪಾಕವಿಧಾನ ದಾಖಲಾತಿ, ಪ್ರಚಾರವೂ ಸೇರಿದೆ.

ಆಸಕ್ತರು ಸಿರಿಧಾನ್ಯಗಳಿಂದ ತಯಾರಿಸುವ ಅಥವಾ ಅವುಗಳ ಬಳಕೆಯನ್ನೊಳಗೊಂಡ ಯಾವುದೇ ಬಗೆಯ ಅಡುಗೆಯ ಬಗ್ಗೆ ವಿವರ ಕಳಿಸುವಂತೆ ಕೋರಿಕೆ. ಅಂತಹ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ಅಡುಗೆಯಾಗಿರಬಹುದು. ಸಾಂಪ್ರದಾಯಿಕ ವಿಶೇಷ ಅಡುಗೆಗಳಿಗೆ ಆದ್ಯತೆ. ಪ್ರವೇಶಗಳನ್ನು ಕಳುಹಿಸುವಾಗ ಅಡುಗೆಗೆ ಬೇಕಾಗುವ ಸಾಮಗ್ರಿಗಳು, ಪಾಕ ವಿಧಾನ, ಆರೋಗ್ಯದ ದೃಷ್ಟಿಯಲ್ಲಿ (ರುಚಿ, ಶಕ್ತಿ, ಸತ್ವ, ಋತುಮಾನಕ್ಕನುಗುಣವಾಗಿ ಸೇವನೆ, ತಾಳಿಕೆ) ಅದರ ಮಹತ್ವ, ರಾಜ್ಯದ ಯಾವ ಭಾಗದಲ್ಲಿ ಈ ಅಡುಗೆ ಜನಪ್ರಿಯ ಇತ್ಯಾದಿ ವಿವರಗಳನ್ನು ನಮೂದಿಸಬೇಕು.

ಜತೆಗೆ ಪ್ರವೇಶ ಕಳುಹಿಸುವವರ ಪುಟ್ಟ ಪರಿಚಯ (ಹೆಸರು, ಉದ್ಯೋಗ, ವಿಳಾಸ ಹಾಗೂ ಸಿರಿಧಾನ್ಯಗಳ ಕುರಿತು ಆಸಕ್ತಿಯ ಕಾರಣ) ಬರೆದಿರಬೇಕು. ಆಯ್ದ ಹತ್ತು ಪಾಕವಿಧಾನಗಳಿಗೆ ಬಹುಮಾನ ನೀಡಲಾಗುವುದು. ಎಲ್ಲ ಉತ್ತಮ ಪಾಕವಿಧಾನಗಳ ವಿವರವನ್ನು ಸಿರಿಧಾನ್ಯ ಕುರಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ಪ್ರವೇಶ ತಲುಪಲು ಕೊನೆಯ ದಿನಾಂಕ: ಮಾರ್ಚ್ 20, 2011.

ಕಳುಹಿಸಬೇಕಾದ ವಿಳಾಸ:
ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, ನಾಲ್ಕನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580008.

0 comments:

Post a Comment