Thursday, January 28, 2016

ಬರದ ಭರತಕ್ಕೆ ಭರಮ ಊರಿದ ಹೆಜ್ಜೆ

             "ಕೃಷಿ ಮಾತ್ರ ಸಾವಯವ ಆದರೆ ಸಾಲಕು. ನಮ್ಮ ಆಹಾರ, ಜನಜೀವನ, ಮನೆ-ಮಂದಿಯ ಬದುಕು ಎಲ್ಲವೂ ಸಾವಯವ ಆಗಬೇಕು," ಗದಗ ಜಿಲ್ಲೆಯ ದೇವೇಂದ್ರಗೌಡ ದ್ಯಾಮನಗೌಡ ಭರಮಗೌಡ್ರ  - ಡಿ.ಡಿ.ಭರಮಗೌಡ್ರ (Bharama Goudra D.D.) - ಖಡಕ್ ಆಗಿ ಹೇಳುವ 'ಸಾವಯವ ಮಾತು.' ಇಂತಹ ಮಾತು ೨೦೧೬ ಜನವರಿ 13ರಂದು ಮೌನವಾಯಿತು. ಭರಮ ಗೌಡ್ರು ದೂರವಾದರು. ಇವರು ಮಳೆಯಾಶ್ರಿತದಲ್ಲಿ ಸಾವಯವ ಕೃಷಿ ಪದ್ದತಿ ಅಳವಡಿಸಿ ಯಶ ಕಂಡ ಕೃಷಿಕ. ನಾಲ್ಕು ದಶಕಗಳ ಕಾಲ ಕನ್ನಾಡಿನಲ್ಲಿ ಸಾವಯವ ಕೃಷಿ ಪದ್ಧತಿ ಮತ್ತು ಆ ಕುರಿತು ಗಟ್ಟಿಯಾದ ನಂಬುಗೆ ಹುಟ್ಟುವಂತೆ ಮಾಡಿದವರಲ್ಲಿ ಮುಖ್ಯರು.
                ಗದಗ ಜಿಲ್ಲೆಯ ಈ ರೈತ ರಾಜ್ಯ, ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪರಿಚಿತ. ಖಚಿತ ಮಾತಿನ, ಹರಿತ ವಿಚಾರಗಳ ಗನಿ. ಇವರಲ್ಲಿ ಥಿಯರಿಗಳಿಗೆ ಮಾನ್ಯತೆಯಿಲ್ಲ. ತಾನು ಅನುಸರಿಸಿ ಯಶಕಂಡ  ಮಾಹಿತಿಗಳನ್ನು ಹಂಚುತ್ತಿದ್ದರು ತೊಂಭತ್ತರ ದಶಕದಲ್ಲಿ ತೀರ್ಥಹಳ್ಳಿಯ ಕುರುವಳ್ಳಿ ಪುರುಷೋತ್ತಮ ರಾವ್ ಪ್ರತಿಷ್ಠಾನದೊಂದಿಗೆ ಕಾರ್ಯನಿರ್ವಹಣೆ. ಸಹಜ ಸಮೃದ್ಧ, ಇಕ್ರಾ, ಧರಿತ್ರಿ ಹಾಗೂ ಅಂತಾರಾಷ್ಟ್ರೀಯ ಸಾವಯವ ಸಂಘಟನೆಗಳಲ್ಲಿ ಸಕ್ರಿಯ. ಕೃಷಿ ಅನುಭವಗಳ ಲೇಖನಗಳು ಜನಪ್ರಿಯ.
               2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿ ಭರಮ ಗೌಡ್ರ ಹೆಸರಿತ್ತು. ಸರಕಾರದಿಂದ ಯಾವ ಮಾಹಿತಿಯೂ ಹೋಗಿರಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾಗಿತ್ತಷ್ಟೇ.  ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಕಾಲಕ್ಕೆ ಆಗಮಿಸಿದ್ದರು. ಸರಕಾರಿ ಆದೇಶ ಕೈಯಲ್ಲಿ ಇಲ್ಲದ್ದರಿಂದ ಪ್ರವೇಶಕ್ಕೆ ಕೊಕ್. ಪತ್ರಿಕೆಯ ವರದಿ ತೋರಿಸಿದರೂ ಪ್ರಯೋಜನವಾಗಲಿಲ್ಲ. ನಾಗೇಶ ಹೆಗಡೆಯವರೂ ಪ್ರಶಸ್ತಿ ಸ್ವೀಕಾರಕ್ಕೆ ಬಂದಿದ್ದರು. ಭರಮ ಗೌಡ್ರ ಅವಸ್ಥೆಯನ್ನು ನೋಡಿ ಅವರನ್ನು ಒಳಗೆ ಎಳಕ್ಕೊಂಡರು! ಬಳಿಕ 'ಪ್ರಶಸ್ತಿ ಫಜೀತಿ'ಯನ್ನು ರೋಚಕವಾಗಿ ಹೇಳುತ್ತಿದ್ದರು. ಸರಕಾರಿ ವ್ಯವಸ್ಥೆಯ ಅನಾದರ ಮುಖವನ್ನು ಹಳಿಯುತ್ತಿದ್ದರು.
                ಕಳೆದ ವರುಷ ಉತ್ತರ ಕರ್ನಾಟಕದಲ್ಲಿ ಮಳೆ ಕೈಕೊಟ್ಟಿತ್ತು. ಬರವನ್ನು ಎದುರಿಸುವಂತಾಯಿತು. ಬರ ನಿರೋಧಕ ಜಾಣ್ಮೆ ಮತ್ತು ಕೃಷಿ ಕ್ರಮವನ್ನು ಭರಮ ಗೌಡ್ರು ಅನುಭವದಿಂದ ಹೇಳುತ್ತಿದ್ದರು : ಕೃಷಿ ಕ್ರಮ ಮತ್ತು ಬದುಕಿನಲ್ಲಿ ಯೋಜನೆ ಹಾಕಿಕೊಳ್ಳದೆ ರೈತರು ಕಷ್ಟಕ್ಕೆ ಒಳಗಾಗುತ್ತಾರೆ. ಹೇಳುವವರು ಯಾರು? ಸಮಸ್ಯೆ ಬಂದಾಗ ಪರಿಹಾರವನ್ನು ಕಂಡುಕೊಳ್ಳುವ ಅಥವಾ ಪೂರ್ವಭಾವಿ ಚಿಂತನೆಗಳನ್ನು ಮಾಡದೆ  ಅದನ್ನು ವೈಭವೀಕರಿಸುವುದರಲ್ಲೇ ಆಸಕ್ತಿ. ನಮ್ಮ ರಾಜಕಾರಣವೂ ಸಾಥ್ ನೀಡುತ್ತದೆ. ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ತೊಂದರೆಯಿಲ್ಲ. ರಾಜಕಾರಣ ಮಾತ್ರ ಬಿಡರು.. ಬೆಂಗಳೂರಿನ ಸಮಾರಂಭವೊಂದರಲ್ಲಿ ಸೋದಾಹರಣವಾಗಿ ಖಾರವಾಗಿ ಹೇಳಿದ್ದರು.
              'ಮೇವಿಲ್ಲ ಎನ್ನುವವರು ರೈತರೇ ಅಲ್ಲ' - ಭರಮಗೌಡ್ರ ಪ್ರತಿಪಾದನೆ. ಮೇವಿನ ಬೆಳೆ ಹಾಕದೆ ಮೆಕ್ಕೆ ಜೋಳ, ಬಿಟಿ ಹತ್ತಿ ಹಾಕುವವರಿಗೆ ಯಾವಾಗಲೂ ಮೇವಿನ ಕೊರತೆ! ಸರ್ಕಾರ ಮೇವು ಒದಗಿಸುತ್ತದೆ ಎನ್ನುವುದು ಸುಳ್ಳು. ಸರಕಾರ ತರಿಸುವ ಮೇವು ಎಂತಹುದು? ದಪ್ಪ ಕಡ್ಡಿಯ ಗೋಧಿ ಹುಲ್ಲು, ಪುಡಿ ಪುಡಿಯಾದ ಭತ್ತದ ಹುಲ್ಲು.. ಇದನ್ನು ಜಾನುವಾರುಗಳು ಇಷ್ಟಪಡುವುದಿಲ್ಲ. ರೈತನಾದವನು ಎರಡು ವರುಷಕ್ಕೆ ಬೇಕಾಗುವಷ್ಟು ಹೊಟ್ಟು, ಮೇವು ಸಂಗ್ರಹಿಸಿಟ್ಟುಕೊಳ್ಳಬೇಕು. ಹಿಂದಿನವರಲ್ಲಿ ಭವಿಷ್ಯದ ಆಪತ್ತಿನ ದೃಷ್ಟಿಕೋನವಿತ್ತು.
               ವಿಶ್ವವಿದ್ಯಾಲಯಗಳ ಸಂಶೋಧನೆಗಳನ್ನು ಪ್ರಶ್ನಿಸುತ್ತಿದ್ದರು. "ಅತಿ ಕಡಿಮೆ ಮಳೆಯಲ್ಲೂ ಬೆಳೆಯುವ ಬೆಳೆಗಳ ಮೇಲೆ ಯಾಕೆ ಸಂಶೋಧನೆ ಮಾಡುವುದಿಲ್ಲ? ಆಹಾರ ಧಾನ್ಯ ಅಂದರೆ ಗೋಧಿ, ಅಕ್ಕಿ ಇಷ್ಟೇ. ನಾವು ಬರವನ್ನು ಸರಕಾರ, ಕೃಷಿ ವಿವಿಗಳ ಮೇಲೆ ಹಾಕಿ ಕೂರುವ ಪ್ರಮೇಯವೇ ಇಲ್ಲ. ಅವರನ್ನು ನಂಬಿದರೆ ಕೆಟ್ಟೆವು. ಅವರು ರೈತರಿಗೆ ಮಾರ್ಗದರ್ಶನ ಮಾಡುವುದಕ್ಕಿಂತ ಹಾದಿ ತಪ್ಪಿಸುವುದೇ ಹೆಚ್ಚು. ರೈತನಿಗೆ ಬರವನ್ನು ನಿಭಾಯಿಸುವ ಸಾಮಥ್ರ್ಯವಿದೆ.  ಅವರು ಸರಕಾರದ ಮೇಲೆ ಅವಲಂಬನೆ ಆಗಿದ್ದಾರೆ. ರೈತರ ತಾಕತ್ತು ಕಡಿಮೆಯಾಗಲು ಸರಕಾರವೇ ಕಾರಣ. ಅವರ ಆತ್ಮವಿಶ್ವಾಸವನ್ನೇ ನಾಶ ಮಾಡಿದೆ," ಎಂದು 'ಸಹಜ ಸಾಗುವಳಿ' ಪತ್ರಿಕೆಯ ಲೇಖನವೊಂದರಲ್ಲಿ ಗೌಡ್ರು ಉಲ್ಲೇಖಿಸಿದ್ದಾರೆ.
               ಕೃಷಿ ಅರಣ್ಯ ಮತ್ತು ಕೃಷಿಗಿರುವ ನೇರ ಸಂಬಂಧವನ್ನು ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು. ಕೃಷಿಕ ಬುದ್ಧಿಪೂರ್ವಕವಾಗಿ ಮಾಡುವ ಕೆಲವೊಂದು ತಪ್ಪುಗಳನ್ನು ಭರಮ ಗೌಡ್ರು ಎತ್ತಿ ಹೇಳುತ್ತಿದ್ದರು. "ನಾವು ಯಾವಾಗ ಅಧಿಕ ಇಳುವರಿ ಬೆಳೆಗಳಿಗೆ ಬಂದೆವೋ ಆಗ ಹೊಲದಲ್ಲಿ ಮರಗಿಡಗಳಿದ್ದರೆ ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಕಡಿಯಲು ಮುಂದಾದೆವು. ಗೋಮಾಳಗಳನ್ನು ಒತ್ತುವರಿ ಮಾಡಿದೆವು. ಅರಣ್ಯಗಳು ನುಣುಪಾದ ಮೇಲೆ ಮಂಗ, ಚಿಗರಿ, ತೋಳ, ಆನೆ.. ಗಳು ಹೊಲಗಳಿಗೆ ನುಗ್ಗಿದುವು. ಅವುಗಳ ಮನೆಯನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡಿದ್ದೇವೆ. ಈಗವು ನಮ್ಮ ಮನೆಗೆ ನುಗ್ಗುತ್ತಿವೆ. ಮುಂದೆ ನಮ್ಮಲ್ಲೇ ವಾಸ ಮಾಡುತ್ತವೇನೋ?"
             ಕೃಷಿಯ ಜತೆ ಯಾವುದೆಲ್ಲಾ ಮರಗಳಿರಬೇಕು ಎನ್ನುವ ಸ್ಪಷ್ಟ ಜ್ಞಾನ ಅವರಲ್ಲಿತ್ತು. ಅವೆಲ್ಲಾ ಲೋಕ ಸುತ್ತಿ ಪಡೆದ ಸ್ವಾನುಭವಗಳು. ಕೃಷಿಯ ಜತೆ ಮರಗಿಡಗಳ ಜೋಡಣೆಯನ್ನು ಜಾಣ್ಮೆಯಿಂದ ನಿಭಾಯಿಸಬೇಕು. ಹಿಂದೆಲ್ಲಾ ಬರಗಾಲ ಮಹಾಪೂರಗಳು ಬಂದರೂ ತಾಳಿಕೊಳ್ಳುವಂತಹ ಸಸ್ಯಗಳಿದ್ದವು. ಈಗ ಯಾವ ಹೊಲಕ್ಕೆ ಹೋದರೂ ಮರಗಿಡಗಳಿಲ್ಲ. ಕೃಷಿಗೆ ಎಷ್ಟು ಮಹತ್ವ ಕೊಡುತ್ತೇವೆಯೋ ಅಷ್ಟೇ ಮಹತ್ವ ಮರಗಿಡಗಳಿಗೂ ಕೊಡಬೇಕು. ದುಡ್ಡಿನ ಹಿಂದೆ ಬಿದ್ದು ತಾಳೆ, ನೀಲಗಿರಿ, ಅಕೇಸಿಯಾ ಬೆಳೆಯಲು ಹೋದರೆ ಅಧೋಗತಿ ಖಂಡಿತ. ಯಾವುದನ್ನೇ ಬೆಳೆಯಿರಿ, ಅದು ಆಹಾರವಾಗಬೇಕು. ಮೇವು ಇರಬೇಕು. ಭೂಮಿಯ ಸತ್ವ ಉಳಿಯಬೇಕು.
            ವಿಜ್ಞಾನದ ಬಗ್ಗೆ ಭರಮ ಗೌಡ್ರಿಗೆ ಅಪಾರ ನಂಬುಗೆಯಿತ್ತು. ಆದರೆ ಕೆಲವೊಂದು ಬಾರಿ ವಿಜ್ಞಾನಿಗಳ ಯೋಚನೆ, ಹೇಳಿಕೆಗಳು ಅವರನ್ನು ಕೆರಳಿಸುತ್ತಿತ್ತು. "ಗೆದ್ದಲು ನಿಯಂತ್ರಣದ ಬಗ್ಗೆ ವಿಜ್ಞಾನಿಗಳು 'ಹೌ ಟು ಕಂಟ್ರೋಲ್ ವೈಟ್ ಅ್ಯಂಟ್ ಫ್ರಂ ಫಾರಂ ಲ್ಯಾಂಡ್' ಎಂದು ಗೆದ್ದಲು ನಿಯಂತ್ರಣದ ಬಗ್ಗೆ ಹೇಳುವುದು ವಿಚಿತ್ರ. ಗೆದ್ದಲುಗಳು ಸತ್ತ ಕಟ್ಟಿಗೆಯನ್ನು ತಿನ್ನಲು ಯತ್ನಿಸುತ್ತದೆಯೇ ವಿನಾ ಜೀವಂತ ಬೆಳೆಯನ್ನು ತಿನ್ನಲು ಸಾಧ್ಯವೇ ಇಲ್ಲ. ಗೆದ್ದಲು ಜಮೀನನ್ನು ಫಲವತ್ತತೆಯನ್ನಾಗಿ ಮಾಡುತ್ತದೆ. ಅದನ್ನು ಕೊಲ್ಲುವ ಅವಶ್ಯಕತೆಯಿಲ್ಲ. ಎಲ್ಲಿ ಸತ್ತ ವಸ್ತು ಇರುತ್ತದೋ ಅಲ್ಲಿಗೆ ಹೋಗುತ್ತದೆ. ಇಂತಹ ಸಹಜ ವಿಚಾರಗಳು ಯಾಕೆ ಅರ್ಥಮಾಡಿಕೊಳ್ಳುವುದಿಲ್ಲ?" ಪ್ರಶ್ನಿಸುತ್ತಾರೆ. ರೈತನ ಜಾಣ್ಮೆ, ರೈತನ ಭಾಷೆ ಅರ್ಥವಾಗಬೇಕಾದರೆ ವಿಜ್ಞಾನಿಯೂ ರೈತನಾಗಿರಬೇಕು ಎನ್ನುತ್ತಿದ್ದರು.
             ಕುಲಾಂತರಿ ತಂತ್ರಜ್ಞಾನ ಆಂದೋಳನದಲ್ಲಿ ಗೌಡ್ರು ತೊಡಗಿಸಿಕೊಂಡಿದ್ದರು. ಜೈವಿಕ ತಂತ್ರಜ್ಞಾನ ಬಳಸಿ ಬೆಳೆದ ಆಹಾರ ಕ್ಯಾನ್ಸರಿಗೂ ಕಾರಣವಾಗಬಲ್ಲುದು. ಅಮೆರಿಕಾ, ಚೀನ, ಇಂಡೋನೇಶ್ಯಾ ಹಾಗೂ ಬ್ರೆಜಿಲ್ನಂತಹ ದೇಶಗಳು ಈ ಅಂಶಗಳನ್ನು ಮನಗಂಡಿವೆ. ಆದರೆ ಕೃಷಿಯೇ ಕಸುಬಾಗಿರುವ ನಮ್ಮ ದೇಶದಲ್ಲಿ ಪ್ರಚಾರ ಮಾಡುವ ಬಹುರಾಷ್ಟ್ರೀಯ ಕಂಪೆನಿಗಳು ನಡೆಸಿರುವ ಹುನ್ನಾರವನ್ನು ವಿರೋಧಿಸಬೇಕಾಗಿದೆ. ಕಂಪೆನಿಗಳ ಕೆಲಸದಿಂದ ನಿವೃತ್ತಿ ಹೊಂದಿದ ನಂತರವಷ್ಟೇ ವಿಜ್ಞಾನಿಗಳು 'ಕುಲಾಂತರಿ ಬೀಜಗಳು ಅಪಾಯಕಾರಿ' ಎಂದು ಸಾರುತ್ತಾರೆ ಎನ್ನುವ ಸತ್ಯವನ್ನು ಜನತೆಯ ಮುಂದಿಡಲು ಮುಜುಗರ ಪಟ್ಟಿರಲಿಲ್ಲ.
              1990, ಸೆಪ್ಟೆಂಬರ್ 13-16. ಅಡಿಕೆ ಪತ್ರಿಕೆಯು ಕೊಪ್ಪದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಶಿಬಿರ ಏರ್ಪಡಿಸಿತ್ತು. ಭರಮ ಗೌಡ್ರು ಶಿಬಿರಾರ್ಥಿಯಾಗಿ ಆಗಮಿಸಿದ್ದರು. ಅವರ ಆಡು ಭಾಷೆ, ಹಾಸ್ಯ ಪ್ರವೃತ್ತಿ, ಊಟೋಪಚಾರ, ವಿಚಾರಗಳ ನಿಖರತೆ, ಆವರಿಸಿಕೊಳ್ಳುವ ಆಪ್ತತೆಗಳು ಎಲ್ಲರನ್ನೂ ಮೋಡಿ ಮಾಡಿದ್ದುವು. ಖಾರ ಹಸಿಮೆಣಸಿನ ಕಾಯನ್ನು ಜಗಿದು ಖಾರಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವುದನ್ನು ತೋರಿಸಿದ ಆ ದಿನಮಾನಗಳನ್ನು ಹೇಗೆ ಮರೆಯಲಿ?
              ’ಸಹಜ ಸಾಗುವಳಿ’ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿದ್ದ ಭರಮ ಗೌಡ್ರು ನಿಜಾರ್ಥದಲ್ಲಿ ಅನುಭವದ ಗನಿ. ಕೃಷಿಯ ಎಲ್ಲಾ ಅಪ್ಡೇಟ್ಗಳು ಅವರಲ್ಲಿತ್ತು. ದೇಶ, ವಿದೇಶದೆಲ್ಲೆಡೆ ಓಡಾಡುತ್ತಿದ್ದರು. ಸಾವಯವ ಕೃಷಿಯನ್ನು ಪ್ರತಿಪಾದಿಸುತ್ತಿದ್ದರು. ಅವರ ಬದುಕು, ಕೃಷಿ ನೋಟ ಮತ್ತು ಕೃಷಿಯ ಸ್ವಾನುಭವಗಳು ಪುಸ್ತಕ ರೂಪದಲ್ಲಿ ಇಕ್ರಾ ಸಂಸ್ಥೆಯು ಪ್ರಕಟಿಸಲಿದೆ, ಎಂದು ಸಹಜ ಸಾಗುವಳಿಯ ಸಂಪಾದಕಿ ವಿ.ಗಾಯತ್ರಿ ಹೊಸ ಸುಳಿವನ್ನು ನೀಡಿದರು.
               ನೇಗಿಲ ಭಾಷೆಯನ್ನು ಕನ್ನಾಡಿನುದ್ದಕ್ಕೂ ಪಸರಿಸಿದ ಭರಮಗೌಡ್ರು ಮೂಡಿಸಿದ ಸಾವಯವ ಹೆಜ್ಜೆ ಚಿಕ್ಕದಲ್ಲ, ತ್ರಿವಿಕ್ರಮ ಹೆಜ್ಜೆ.

(ಉದಯವಾಣಿಯ ನೆಲದ ನಾಡಿ ಅಂಕಣದಲ್ಲಿ ಪ್ರಕಟ 21-1-2016)


0 comments:

Post a Comment