Tuesday, June 19, 2018

ಹಂಗಿಲ್ಲದ ನೀರಿಗೆ ಇಂಗುಬಾವಿ


          ಇಂದು ವಿಶ್ವ ಜಲ ದಿನ. ಮೊನ್ನೆ ಗುಬ್ಬಚ್ಚಿ ದಿನ. ನಿನ್ನೆ ಅರಣ್ಯ ದಿನ. ನಾಳೆ ಹವಾಮಾನ ದಿನ. ವಾರದ ಸಾಲು ಸಾಲುವಿಶ್ವದಿನಗಳು ನೆಲ ಮತ್ತು ಜಲಕ್ಕೆ ಸಂಬಂಧಪಟ್ಟವು. ನೆಲ-ಜಲದ ಜಾಗೃತಿ, ಅರಿವು ಮತ್ತು ಸದ್ದಿಲ್ಲದೆ ಆದ ಸಂರಕ್ಷಣಾ ಕೆಲಸಗಳಿಗೆ ವಿಶ್ವ ಜಲದಿನದಂದು ಬೆಳಕು ಒಡ್ಡಬೇಕಾದ ಸುದಿನ. ದಿನಗಳು ಕೇವಲನೆನಪಿಗಾಗಿಉಳಿದಿವೆ. ದಿನದರ್ಶಿನಿಗೆ ಸೀಮಿತವಾಗಿದೆ. 
         ವಿಶ್ವ ಜಲ ದಿನದ ವಾರ ಮೊದಲು .. ಉಜಿರೆಯ ಎಸ್.ಡಿ.ಎಂ.ಕಾಲೇಜಿನಲ್ಲಿ ನೀರಿನ ಮಾತುಕತೆ. ನೀರಿನ ಜೀವವನ್ನು ಸಮುದಾಯದೊಳಗೆ ಇಳಿಸಲು ಜಲಾಂದೋಳನಕ್ಕೆ ಶ್ರೀಕಾರ ಬರೆದ ಜಲತಜ್ಞ ಶ್ರೀ ಪಡ್ರೆಯವರು ನೀರರಿವಿನ ಸಿಂಚನ ಮಾಡುತ್ತಾ, “ನಮ್ಮ ನಾಡಲ್ಲಿ ನೀರನ್ನು ದೂರ ಹರಿಸಲು ಯೋಜನೆಗಳಿವೆ. ನೀರನ್ನು ಇಂಗಿಸಲು ಯೋಜನೆಗಳಿಲ್ಲ.” ಎಂದರು. ತುಂಬಾ ಗಾಢವಾಗಿ ಮನನಿಸಬೇಕಾದ ವಿಚಾರ.
        ಮನೆಯಂಗಳದಲ್ಲಿ ತೋಡುವ ಬಾವಿ ನಮಗೆಲ್ಲಾ ಪರಿಚಿತ. ಕೊಳವೆ ಬಾವಿಯ ಕೊರೆತವಂತೂ ಮನದೊಳಗೆ ಇಳಿದಿದೆ. ಆದರೆ ಇಂಗು ಬಾವಿ, ಏನಿದು? “ಮಳೆಯ ನೀರನ್ನು ಇಂಗಿಸಲು ರಚಿಸುವ ಬಾವಿಯೇ ಇಂಗುಬಾವಿ.” ಕರಾವಳಿ ಕರ್ನಾಟಕ, ಕಾಸರಗೋಡು, ಕೇರಳಗಳಿಗೆ  ಇಂಗುಬಾವಿ ತೀರಾ ಅಪರಿಚಿತ. ಚೆನ್ನೈ, ಬೆಂಗಳೂರಿನಲ್ಲಿ ಪರಿಚಿತ. ಇದೊಂದು ನೀರಿನ ಠೇವಣಿಯ ತಿಜೋರಿ. ಕನಿಷ್ಠ ಮೂರು ಅಡಿ ವ್ಯಾಸದಿಂದ ಆರು ಅಡಿ ವ್ಯಾಸದ ತನಕ ಮತ್ತು ಇಪ್ಪತ್ತಡಿ ಆಳವು ಇಂಗುಬಾವಿಯ ವ್ಯಾಪ್ತಿಪ್ರದೇಶ. ಕುಸಿದು ಬೀಳುವ ಮಣ್ಣಾದರೆ ಬಾವಿಯೊಳಗೆ ಸಿಮೆಂಟ್ ರಿಂಗಿನ ಹಾಸು. ಮೇಲೆ ಮುಚ್ಚಳ.  
         ತೊಂಭತ್ತರ ದಶಕದಲ್ಲಿ ಚೆನ್ನೈಯಲ್ಲಿ ಜಲ ಕಾರ್ಯಕರ್ತ ಇಂದುಕಾಂತ್ ರಾಗಡೆ ಇಂಗುಬಾವಿಗೆ ಶ್ರೀಕಾರ ಬರೆದರು. ಇವರ ಅಲಾಕ್ರಿಟಿ ಫೌಂಡೇಶನ್ ಕಟ್ಟಡ ನಿರ್ಮಾಣಗಳ ಸಂದರ್ಭದಲ್ಲಿ ನೀರೆತ್ತಲು ಬಾವಿ ಮತ್ತು ಇಂಗಿಸುವ ಬಾವಿ ಮಾಡಿಕೊಡುತ್ತಿತ್ತು. ನಂತರ ಚೆನ್ನೈಯ ಮಳೆಕೇಂದ್ರದ ನಿರ್ದೇಶಕ ಶೇಖರ್ ರಾಘವನ್ ಜನರೆಡೆಗೆ ಹಬ್ಬಿಸಿದರು. ಚೆನ್ನೈ ನಗರದಲ್ಲಿ ಏನಿಲ್ಲವೆಂದರೂ ಹತ್ತು ಸಾವಿರಕ್ಕೂ ಮಿಕ್ಕಿ ಇಂಗುಬಾವಿಗಳು ಇರಬಹುದು.
         ಇಂಗುಬಾವಿ ರಚನೆಯನ್ನು ಬೆಂಗಳೂರಿಗೆ ಪರಿಚಯಿಸಿದವರು ರೈನ್ ವಾಟರ್ ಕ್ಲಬ್ಬಿನ ಜಲಯೋಧ ಎಸ್.ವಿಶ್ವನಾಥ್. ದೇಶಾದ್ಯಂತ ನಿರಂತರ ಓಡಾಡಿ ನೀರಿನ ಅಧ್ಯಯನ ಮಾಡಿದವರು. ರಾಜಧಾನಿಯಲ್ಲಿ ಈಗಿರುವ ಗಣನೀಯ ಸಂಖ್ಯೆಯ ಇಂಗುಬಾವಿ ರಚನೆಗಳಲ್ಲಿ ವಿಶ್ವನಾಥರ ಶ್ರಮ ಅಜ್ಞಾತ. ಇಲ್ಲಿನ ಮಣ್ಣು ವಡ್ಡರು ಎನ್ನುವ ಜನಾಂಗದವರು ಇಂಗುಬಾವಿ ತೋಡುವುದರಲ್ಲಿ ನಿಷ್ಣಾತರು. ಕಳೆದೆರಡು ದಶಕಗಳೀಚೆಗೆ ಬೆಂಗಳೂರಿನಲ್ಲಿ ಐವತ್ತು ಸಾವಿರಕ್ಕೂ ಮಿಕ್ಕಿ ಇಂಗುಬಾವಿಗಳಾಗಿವೆ! ಇಲ್ಲಿ ಇಂಗುಬಾವಿ ತೋಡುವುದನ್ನು ಬದ್ಧತೆಯಿಂದ ಆರಂಭಿಸಿದವರು ಮುನಿಯಪ್ಪ. ಇವರೊಡನೆ ದುಡಿಯುತ್ತಿದ್ದ ಹಲವರು ಇಂದು ಇಂಗುಬಾವಿ ನಿರ್ಮಾಣ ತಂಡವನ್ನೇ ಮಾಡಿಕೊಂಡಿದ್ದಾರೆ.
           ಬಾವಿಗಳು ಮೇಲುಸ್ತರದ ಜಲಧರ ಪ್ರದೇಶ ವ್ಯಾಪ್ತಿಯವು. ಇವನ್ನು ಮರುಪೂರಣ ಮಾಡುವುದು ಸುಲಭ. ಕೆಲಸ ಆಯಾಯ ವರುಷದ ಮಳೆಯಿಂದ ಸಾಧ್ಯ. ಕೊಳವೆ ಬಾವಿಗಳಲ್ಲಿ ಸಿಗುವ ನೀರು ಹತ್ತರಿಂದ ನೂರು ವರುಷ ಹಿಂದಣ ಮಳೆಯದು. ಅದನ್ನು ಪುನಭರ್ತಿ ಮಾಡುವುದು ಬಾವಿಯಷ್ಟು ಸುಲಭವಲ್ಲ.  ಅದೇಕೋ ದೂರದಿಂದ ತರುವ ನೀರು ನಮಗೆ ಹೆಚ್ಚು ಇಷ್ಟವಾಗುತ್ತದೆ. ನಲ್ಲಿ ನೀರು ಬಂದ ಮೇಲೆ ಬಾವಿಗಳನ್ನು ಅವಗಣನೆ ಮಾಡುವ ಅಭ್ಯಾಸ ಶುರುವಾಯಿತು.” ವಿಶ್ವನಾಥ್ ಅನುಭವ.
           ಭೂಮಿಯೊಳಗೆ ಜಲಮಟ್ಟ ಏರಿಸುವುದು ಮತ್ತು ನಗರಗಳಲ್ಲಿ ಮಳೆಯ ನೆರೆಯನ್ನು ನಿಯಂತ್ರಿಸುವುದು ಇಂಗುಬಾವಿಗಳಿಂದ ಸಾಧ್ಯ. ನೀರಿನ ಅತಿ ಬಳಕೆ ಮತ್ತು ದುರ್ಬಳಕೆಗಳ ಕಾರಣದಿಂದ ಜಲಮಟ್ಟವು ಪ್ರತೀ ವರುಷ ಇಳಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯ ನೀರನ್ನು ಭೂ ಒಡಲಿಗೆ ಸೇರಿಸಲು ಇಂಗು ಬಾವಿಯು ಉಳಿದೆಲ್ಲಾ ರಚನೆಗಳಿಗಿಂತ ಹೆಚ್ಚು ಸಶಕ್ತ.
          ಇಂಗುಬಾವಿ ತೋಡುವಾಗ ಗಟ್ಟಿ ಮಣ್ಣು - ಜಂಬಿಟ್ಟಿಗೆ, ಲ್ಯಾಟರೈಟ್ - ಸಿಕ್ಕರೆ ಜರಿಯದು. ಸಡಿಲ ಮಣ್ಣಾದರೆ ಬಾವಿಯೊಳಗೆ ಸಿಮೆಂಟ್ ರಿಂಗ್ ಇಳಿಸಬೇಕು. ಸುರಕ್ಷತೆ ದೃಷ್ಟಿಯಿಂದ ಮೇಲ್ಭಾಗ ಮುಚ್ಚಳ ಹಾಕಿಡುವುದು ತೀರಾ ಅವಶ್ಯ. ಹೂಳು ಮಿಶ್ರಿತ ನೀರು ಬಾವಿಗೆ ಸೇರುವುದಾದರೆ ಹೂಳನ್ನು ಪ್ರತ್ಯೇಕಿಸಲು ಬಾವಿಯ ಪಕ್ಕಹೂಳುಗುಂಡಿ’ - ಇಂಗುಗುಂಡಿ ತರಹ - ಬೇಕು.
           ಈಚೆಗೆ ಇಂಗುಬಾವಿಯನ್ನು ತೋಡಿಸಿದ ಶ್ರೀ ಪಡ್ರೆ ಹೇಳುತ್ತಾರೆ, “ಅವರವರ ಆವರಣದಲ್ಲಿ ಅಥವಾ ನೆರೆಕರೆಯಿಂದ ದೊಡ್ಡ ಮಳೆನೀರು - ಕನಿಷ್ಠ ನಾಲ್ಕಿಂಚು ಪೈಪು ತುಂಬುವಷ್ಟು - ಇದ್ದರೆ ಅದಕ್ಕಾಗಿ ಇಂಗುಬಾವಿ ಮಾಡಬಹುದು. ಉಣಿಸುವ ಮಳೆನೀರು ಕೆಸರು ರಹಿತವಾಗಿದ್ದರೆ ಒಳ್ಳೆಯದು. ಅಲ್ಪಸ್ವಲ್ಪ ಮಣ್ಣು ಮಿಶ್ರವಾಗಿದ್ದರೆ ಒಂದೆರಡು ಹೂಳುಗುಂಡಿಗಳ ಮೂಲಕ ಹರಿಸಿ ಹೂಳು, ಕಸಕಡ್ಡಿ ಪ್ರತ್ಯೇಕಿಸಿಯೇ ಬಾವಿಗೆ ಹರಿಯ ಬಿಡಬೇಕು.”
            ಬೆಂಗಳೂರಿನಲ್ಲಿ ಮಳೆನೀರಿನ ಚರಂಡಿಯಲ್ಲೇ ಸ್ವಲ್ಪ ಜಾಗವನ್ನು ಆಚೀಚೆ ಹೊಂದಾಣಿಸಿ ಇಂಗುಬಾವಿ ನಿರ್ಮಿಸುವ ನಿಪುಣರಿದ್ದಾರೆ. ಇದರಿಂದ ಬಾವಿ ತೋಡುವಷ್ಟು ವಿಸ್ತಾರದ ಜಾಗವೂ ಉಳಿಯಿತು, ಮಳೆಯ ಹೊರ ಹರಿವನ್ನು ತಡೆದಂತೆಯೂ ಆಯಿತು! ಕಾಲೇಜು, ಶಾಲೆ, ಕಟ್ಟಡ ಸಮುಚ್ಚಯ, ವಸತಿ ಸಂಕೀರ್ಣ, ಮಾಲಿನ್ಯ ಇಲ್ಲದ ಉದ್ದಿಮೆ.. ಇಲ್ಲೆಲ್ಲಾ ಮಳೆಯ ನೀರನ್ನು ಹೊರಗೆ ಕಳಿಸುವ ಗಟಾರದಲ್ಲೂ ಬಾವಿ ಮಾಡಬಹುದು.
          ಪಂಚಾಯತ್, ನಗರ ಪಾಲಿಕೆಗಳು ನೀರಿದೆಯೋ, ಇಲ್ಲದೆಯೋ? ಗರಿಷ್ಠತಮ ಕೊಳವೆ ಬಾವಿಗಳನ್ನು ಕೊರೆಯುತ್ತವೆ.  ಆದರೆ ಇದೇ ಉತ್ಸಾಹ ನೀರಿಂಗಿಸುವ ಮಾದರಿಗಳ ಅನುಷ್ಠಾನದಲ್ಲಿಲ್ಲ! ಕೊಳವೆ ಬಾವಿಯ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಎತ್ತರದಲ್ಲಿ ಹರಿದು ಹೋಗುವ ನೀರಿದೆ ಎಂದಾದರೆ ಅಂತಹ ಜಾಗದಲ್ಲಿ ಇಂಗುಬಾವಿಗಳನ್ನು ತೋಡಬಹುದು. “ಬೆಂಗಳೂರಿನಲ್ಲಿ ಒಂದು ಇಂಗುಬಾವಿಯಲ್ಲಿ ಹತ್ತು ಲಕ್ಷ ಲೀಟರ್ ನೀರು ಇಂಗಿಸಬಹುದು,” ವಿಶ್ವನಾಥ್ ಲೆಕ್ಕಾಚಾರ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಇಂಗುವ ಪ್ರಮಾಣ ಇನ್ನೂ ಹೆಚ್ಚು.
         ಜಲಮಟ್ಟ ಏರಿಸಿ, ಬೇಗನೆ ಮೇಲುನೀರನ್ನು ಹೆಚ್ಚು ಮಾಡಲು ಇಂಗುಬಾವಿಗಳು ಸಹಕಾರಿ. ಸಾರ್ವಜನಿಕ ಸಂಸ್ಥೆಗಳು ಸಮುದಾಯದ ಹಿತದೃಷ್ಟಿಯಿಂದ ಕೆಲಸಗಳನ್ನು ಮಾಡಬಹುದು. ಜಲಮಟ್ಟ ಕುಸಿತವನ್ನು ನಿಯಂತ್ರಿಸಲು ಇದು ಉತ್ತಮ ಆಯ್ಕೆ. ಜತೆಗೆ ತಂತಮ್ಮ ಭೂಮಿಯಲ್ಲಿರುವ ಉಪಯೋಗಶೂನ್ಯ ಬಾವಿಗಳನ್ನೂ ಉದ್ದೇಶಕ್ಕೆ ಬಳಸಿಕೊಳ್ಳಬಹುದು.
ಮಳೆಗಾಲಕ್ಕಿನ್ನು ಎರಡು-ಮೂರು ತಿಂಗಳು ದೂರವಿದೆ. ಈಗ ಪಂಚಾಯತ್, ನಗರಸಭೆಗಳು ಅನುಕೂಲತೆ ಇರುವಲ್ಲಿ ಪ್ರಾಯೋಗಿಕವಾಗಿ ಇಂಗುಬಾವಿಗಳನ್ನು ತೋಡಲು ಸುಸಮಯ. ಮುಂದಿನ ವರುಷ ಫಲಿತಾಂಶ ಸಿಗಬಹುದು. ರೀತಿಯ ಪ್ರಾಕ್ಟಿಕಲ್ ಮಾದರಿಗಳು ಇತರರಿಗೂ ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ.
           ಕುಂದಾಪುರದ ಬಳಿಯ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಬೆಂಗಳೂರಿನ ಇಂಗುಬಾವಿ ವಿಶೇಷಜ್ಞ ಶಂಕರ್ ತಂಡ ಕಳೆದ ವರ್ಷ ಎರಡು ಇಂಗುಬಾವಿ ತೋಡಿದ್ದು, ಇದರ ಪ್ರಯೋಜನ ಸ್ಪಷ್ಟವಾಗಿ ಕಾಣುತ್ತಿದೆ. ಇದರ ಪ್ರೇರಣೆಯಿಂದ ಇಂಗುಬಾವಿಗಳತ್ತ ಜನರ ಒಲವು ಹೆಚ್ಚಾಗುತ್ತಿದೆ. ಇಪ್ಪತ್ತು ಅಡಿಯ ಬಾವಿಯನ್ನು ಮೂರ್ನಾಲ್ಕು ಜನರ ತಂಡವು ಎರಡು ದಿನಗಳಲ್ಲಿ ಪೂರೈಸುತ್ತದೆ.
        “ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಎಕ್ರೆ ಮೇಲೆ ಏನಿದ್ದರೂ ಒಂದು ಕೋಟಿ ಲೀಟರಿಗಿಂತ ಹೆಚ್ಚು ಮಳೆ ಬೀಳುತ್ತದೆ. ಒಂದಷ್ಟು ದೊಡ್ಡ ಪ್ರಮಾಣದ ಮಳೆನೀರು ಒಟ್ಟಾಗಿ ಹರಿಯುವಂತಿದ್ದರೆ, ಅವರವರ ಜಲಮೂಲಗಳಿಗೆ ನೀರಿನ ಬೆಂಬಲ ಕೊಡಬಲ್ಲಂತಹ ಇಂಗಿಸುವ ಪ್ರದೇಶವೂ ಹತ್ತಿರದಲ್ಲಿದ್ದರೆ ಅಲ್ಲಿ ಇಂಗು ಬಾವಿ ಮಾಡಿಸಬಹುದು,” ಶ್ರೀ ಪಡ್ರೆಯವರ ದೂರ ನೋಟ.
         ಎರಡು ದಶಕಗಳಿಂದ ಕನ್ನಾಡಿನ ಜಲಯೋಧರು ಜಲಸಂರಕ್ಷಣೆಯ ವಿವಿಧ ಮಾದರಿಗಳನ್ನು ಮುಂದಿಡುತ್ತಾ ಬಂದಿದ್ದಾರೆ. ಒಂದೆಡೆಯಿಂದ ಅರಿವನ್ನು ಮೂಡಿಸುವ ಕೆಲಸ, ಮತ್ತೊಂದೆಡೆಯಿಂದ ಅದರ ಅನುಷ್ಠಾನದತ್ತ ಯೋಜನೆ, ಯೋಚನೆಗಳು. ಇಂತಹ ಯೋಚನೆಗಳ ಯಾದಿಗೆ ಈಗ ಇಂಗುಬಾವಿಯ ಸೇರ್ಪಡೆ.
           ಉಜಿರೆಯಲ್ಲಿ ಜರುಗಿದ ಕಾರ್ಯಾಗಾರದಲ್ಲಿ ಶಂಕರ್ ಹೇಳಿದ್ರು, “ಬೆಂಗಳೂರಿನ ನೀರಿನ ಬವಣೆಗೆ ಇಂಗುಬಾವಿಗಳತ್ತ ಜನರ ಒಲವು ಮೂಡುತ್ತಿದೆ. ನಮ್ಮ ಹಳ್ಳಿಗಳೂ ಬೆಂಗಳೂರು ಆಗುತ್ತಿವೆ.” ಮಾತಿನ ಮಧ್ಯೆ ಹಾದು ಹೋದ ಶಂಕರ್ ಅವರ ಮಾತನ್ನು ಕೇಳಿಸಿ ಮರೆಯುವಂತಹುದಲ್ಲ. ನಮ್ಮ ಹಳ್ಳಿಗಳೂ ಬೆಂಗಳೂರು ಆಗುತ್ತಿವೆ!
         ನೀರಿನ ಅರಿವು, ಅನುಷ್ಠಾನ ಮನದೊಳಗೆ ಜಿನುಗುತ್ತಾ ಇರುವಷ್ಟು ಕಾಲಜಲ ದಿನವು ಉತ್ಸವದ ಭಾವವಾಗಿ ಬದುಕಿಗಂಟುತ್ತದೆ. ಇಲ್ಲದಿದ್ದರೆ ವರುಷಕ್ಕೊಮ್ಮೆ ಕ್ಯಾಲೆಂಡರಿನ ಪುಟ ತಿರುವುವಾಗ ಮಾರ್ಚ್ 22 ಅಣಕಿಸುತ್ತದಷ್ಟೇ. 

udayavani / nelada nadi / 22-3-2018




0 comments:

Post a Comment