Monday, March 23, 2009

ಕೃಷಿಕನ ಆವಿಷ್ಕಾರ


ಆವಶ್ಯಕತೆಯೇ ಆವಿಷ್ಕಾರಕ್ಕೆ ಮೂಲ. ಮಹಾಬಲೇಶ್ವರ ಭಟ್ ನಿಟಿಲೆಯವರು ರೂಪಿಸಿದ ಕಾಳುಮೆಣಸು ಆಯುವ ಯಂತ್ರವು ಕೃಷಿ ಕೆಲಸವನ್ನು ಹಗುರಮಾಡಿದೆ. ಈ ಯಂತ್ರ ಎಷ್ಟು ಜನೋಪಯೋಗಿಯಾಯಿತೆಂದರೆ, ಸಿದ್ಧಪಡಸಿದ 7 ವರುಷದಲ್ಲಿ ಮುನ್ನೂರಕ್ಕೂ ಹೆಚ್ಚು ತಯಾರಾಗಿದೆ.
ಹಾಗೆಂತ ನಿಟಿಲೆಯವರಿಗೆ ಇದು 'ಬ್ಯುಸಿನೆಸ್' ಅಲ್ಲ. ಮೊದಲು ತಮಗಾಗಿ ಸಿದ್ಧಪಡಿಸಿದ ಮೋಡೆಲ್, ಮುಂದೆ ಕೃಷಿಕರ ಬೇಡಿಕೆಗನುಸಾರ ತಯಾರಾಯಿತು. ಹೇಳುವಂತಹ ಯಾವುದೆ workshop ಇವರಲ್ಲಿಲ್ಲ. ತೀರಾ ಹಳ್ಳಿಯಾದುದರಿಂದ ತಮ್ಮ 'ಮಿತಿಯ' ಸಂಪನ್ಮೂಲದಲ್ಲಿ ಯಂತ್ರವನ್ನು ತಯಾರಿಸಿದ್ದಾರೆ.
ಮೊದಲೆಲ್ಲಾ ಕಾಳುಮೆಣಸು ಕೊಯ್ಲು ಆದ ನಂತರ ಅದನ್ನು ಗೋಣಿಯಲ್ಲಿ ಕಟ್ಟಿ, ಕಾಲಿನಲ್ಲಿ ಮೆಟ್ಟಿ ಕಾಳನ್ನು ಬೇರ್ಪಡಿಸುವ ದೇಸಿ ಪದ್ದತಿಯಿತ್ತು. ಯಂತ್ರವು ಕಾಲಲ್ಲಿ ತುಳಿವ ಕೆಲಸವನ್ನು ಹಗುರಮಾಡಿದೆ.
ಯಂತ್ರದ ಪ್ರಧಾನಾಂಗ - ಕೇಸಿಂಗ್ ಪೈಪಿನ ರೋಲರ್. ಇದಕ್ಕೆ 10 ಮಿ.ಮಿ. ಕಬ್ಬಿಣದ ಸರಳನ್ನು ನಿಶ್ಚಿತ ಆಕಾರದಲ್ಲಿ ಬೆಸೆಯಲಾಗಿದೆ. ಯಂತ್ರದ ಮೇಲ್ಭಾಗದಲ್ಲಿ ಕಾಳುಮೆಣಸಿನ ಗುಚ್ಚ ಹಾಕುವ ವ್ಯವಸ್ಥೆ. ತ್ಯಾಜ್ಯಕ್ಕೆ ಬೇರೊಂದು ಕಿಂಡಿ. ಕಾಲು ಅಶ್ವಶಕ್ತಿಯ ಮೋಟಾರಿನಿಂದ ಯಂತ್ರ ಚಾಲೂ. ನಾಲ್ಕೂವರೆ ಗಂಟೆ ನಿರಂತರ ಓಡಿದರೆ ಒಂದು ಯೂನಿಟ್ ವಿದ್ಯುತ್. ಗಂಟೆ 250-260 ಕಿಲೋ ಕಾಳುಮೆಣಸು ಆಯಬಹುದು. ಕರೆಂಟ್ ಕೈಕೊಟ್ಟರೆ ಕೈಯಲ್ಲಿ ಚಾಲೂ ಮಾಡುವ ವ್ಯವಸ್ಥೆಯಿದೆ.
ವರುಷದಲ್ಲಿ ಜನವರಿ-ಫೆಬ್ರವರಿ-march ತಿಂಗಳು ಕಾಳುಮೆಣಸಿನ ಋತು. ಉಳಿದ ಸಮಯದಲ್ಲಿ ಪ್ರತ್ಯೇಕ ಸಲಕರಣೆಯನ್ನು ಜೋಡಿಸಿ ಕಾಯಿ ತುರಿಯಲು, ಮೆಣಸು, ಸಾಸಿವೆ ಹುಡಿಮಾಡಲು ಬಳಸಬಹುದು. ಯಂತ್ರದ ದರ ಸುಮಾರು ಎಂಟು ಸಾವಿರ. ತೂಕ 30 ಕಿಲೋ. ಮನೆಯವರೇ ಕಾಳುಮೆಣಸು ಆಯುವ ಕೆಲಸವನ್ನು ಮಾಡಬಹುದು. ಇದರಿಂದ ಅವಲಂಬನಾ ಕೆಲಸ ಹಗುರವಾಗಿದೆ' ಎನ್ನುವುದು ಯಂತ್ರವನ್ನು ಬಳಸುವವರ ಅನುಭವ.
(ವಿಳಾಸ: ಮಹಾಬಲೇಶ್ವರ ಭಟ್, ನಿಟಿಲೆ, ಅಂಚೆ : ಕೋಡಪದವು, ಬಂಟ್ವಾಳ ತಾಲೂಕು - 574 269 (ದ.ಕ.)
ದೂರವಾಣಿ: 08255-267 475 (ಮನೆ), ಮೊ: 94483 30404)

0 comments:

Post a Comment