Saturday, December 12, 2009

ಸಾವಯವದ ದೊಡ್ಡ ಹೆಜ್ಜೆ : 'ಎರಾ'

ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯಿತು. ಬರೋಬ್ಬರಿ ಮಳಿಗೆಗಳು. ಚರುಮುರಿಯಿಂದ ಟ್ರಾಕ್ಟರ್ ತನಕ! ಆರುನೂರು ಮಳಿಗೆ ಸುತ್ತು ಹಾಕಿ ನಿಂತಾಗ ಸಾಕೋ ಸಾಕು! ಈ ಮಧ್ಯೆ ರೈತ ಮಟ್ಟದಲ್ಲಿ ಸಾವಯವದ ಕಾಳಜಿ ಹೊತ್ತ ಅದನ್ನು ವೃತದಂತೆ ನಿಭಾಯಿಸುವ ಕೆಲವೇ ಕೆಲವು ರೈತರ ಮಳಿಗೆಗಳು ಹೆಚ್ಚು ಗಮನ ಸೆಳೆದುವು. ಬೆಂಗಳೂರಿನ 'ಎರಾ ಆರ್ಗಾನಿಕ್’ ಇಂತಹ ಮಳಿಗೆಗಳಲ್ಲಿ ಒಂದು.

ಎರಾದ ರೂವಾರಿ ಜಯರಾಮ್. ಸಂಸ್ಥೆ ಹುಟ್ಟಿಗೆ ದಿಕ್ಕು ತೋರಿದ್ದು ಜರ್ಮನಿಯ ಸಾವಯವ ಸಮ್ಮೇಳನ. ಅಲ್ಲಿ ಸಾಮಾನ್ಯ ಗ್ರಾಹಕನೂ (ರೈತ) ಮಾರುಕಟ್ಟೆ ಹಿಡಿವ ರೀತಿ. ಈ ಕುರಿತು ಮಾಹಿತಿ ಸಂಗ್ರಹ. ಆರಂಭ2007 ಎಪ್ರಿಲ್ನಲ್ಲಿ. ಜೀವನಾವಶ್ಯಕ ವಸ್ತುಗಳೆಲ್ಲಾ ಇಲ್ಲಿ ಲಭ್ಯ. ತರಕಾರಿ, ಧಾನ್ಯಗಳಿಂದ ತೊಡಗಿ ಅಂಗಿ-ಬನಿಯನ್ ತನಕ!

ಆಂಧ್ರದ ಸಾವಯವ ಹತ್ತಿ ಬಟ್ಟೆಯ ಅಂಗಿ; ಪಾಂಡಿಚೇರಿಯ ಸಿದ್ಧ ಉಡುಪುಗಳು, ಚೆನ್ನೈಯ ಕಡ್ಲೆಕಾಯಿ ಎಣ್ಣೆ, ಗಾಣ ಎಣ್ಣೆ, ಅಕ್ಕಿ, ಬೆಲ್ಲ; ಕೇರಳದ ಸಂಬಾರವಸ್ತು, ಕೆಂಪಕ್ಕಿ, ಗೇರುಬೀಜ, ಕರಕುಶಲವಸ್ತು; ಕೊಡೈಕನಾಲ್ನಿಂದ ಕ್ಯಾರೆಟ್, ತರಕಾರಿ, ಹಲಸಿನಹಣ್ಣು; ಊಟಿಯ ಚಹ; ಹಿಮಾಚಲ ಪ್ರದೇಶದಿಂದ ಸೇಬು; ಮೈಸೂರಿನಿಂದ ಜ್ಯಾಂ, ಉಪ್ಪಿನಕಾಯಿ; ಬೆಳಗಾಂನಿಂದ ಬೆಲ್ಲ, ಈರುಳ್ಳಿ; ಗದಗದಿಂದ ಗೋಧಿ, ಹಸಿ ಕಡ್ಲೆ; ಧಾರವಾಡ-ಮಂಡ್ಯಗಳಿಂದ ಬೆಲ್ಲ, ಕೊಡಗಿನ ಕಿತ್ತಳೆ - ಹೀಗೆ ಇಲ್ಲಿನ 'ವಿಶೇಷ'ಗಳ ಪಟ್ಟಿ ದೊಡ್ಡದು.
'ಎರಾ ಆರ್ಗಾನಿಕ್’ ಸ್ವಿಜéರ್ಲ್ಯಾಂಡ್ ಮೂಲದ ಅಂತಾರಾಷ್ಟ್ರೀಯ ಸಂಸ್ಥೆ ಐಎಂಒದಲ್ಲಿ ನೋಂದಣಿ. ಇದರಲ್ಲಿ ದೃಢೀಕರಣಗೊಂಡ ರೈತರು, ಸಂಸ್ಥೆಗಳು ದೇಶದುದ್ದಕ್ಕೂ ಬಹಳಷ್ಟಿದ್ದಾರೆ. ಇವರಿಂದ ಉತ್ಪನ್ನ ಖರೀದಿ. ಇದಕ್ಕಾಗಿ ಜಯರಾಮ್ ಎಲ್ಲಾ ರಾಜ್ಯಗಳ ಸಾವಯವ ಮಾರಾಟ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ.

ಖರೀದಿಸುವ ಉತ್ಪನ್ನಗಳಿಗೆ ಎರಾ ದರ ನಿಗದಿ ಮಾಡುವುದಿಲ್ಲ. ರೈತರ ದರಕ್ಕೆ ಶೇ.20-30 ಸೇರಿಸಿ ಮಾರಾಟ. ಬೇಗ ಕೆಡುವ ತರಕಾರಿ, ಹಣ್ಣುಗಳಂತಹ ವಸ್ತುಗಳಿಗೆ ಶೇ.40ರ ತನಕ ಹೆಚ್ಚು. 'ಸಾವಯವ ತರಕಾರಿ, ಸೊಪ್ಪುಗಳಂತಹ ವಸ್ತುಗಳ ಲಭ್ಯತೆ ಬೆಂಗಳೂರು ಸುತ್ತಮುತ್ತ ಸೀಮಿತ. ದೂರದೂರಿಂದ ಬರುವ ವಸ್ತುವಿಗೆ ದರ ಏರಿಕೆ ಅನಿವಾರ್ಯ'.

ಸಿಗುವ ತರಕಾರಿಗಳು ಸ್ಥಳೀಯ. ಬೇಡಿಕೆಯಷ್ಟು ಸಿಗುತ್ತಿಲ್ಲ. ಸಿಕ್ಕರೂ ಸಾವಯವವಲ್ಲ! ಸಮಯಕ್ಕೆ ಸರಿಯಾಗಿ ಸಿಗದಿದ್ದಾಗ 'ಸಾತ್ವಿಕ ಜಗಳ ಆಡುವ' ಗ್ರಾಹಕರೂ ಇದ್ದಾರೆ! ಇದನ್ನರಿತ ಜಯರಾಂ ತನ್ನ ತೋಟದಲ್ಲಿ ಸೊಪ್ಪುತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. 'ಗಿರಾಕಿಗಳಿಗೆ ಉತ್ಪನ್ನಗಳನ್ನು ಪ್ಯಾಕ್, ಸೀಲ್ ಮಾಡಿದರಷ್ಟೇ ಖುಷಿ. ಇಲ್ಲದಿದ್ದರೆ ಒಯ್ಯುವುದೇ ಇಲ್ಲ. ಪ್ಯಾಕಿಂಗ್ ಫಸ್ಟ್ - ಪ್ರಾಡಕ್ಟ್ ನೆಕ್ಸ್ಟ್!

'ಎರಾ'ಕ್ಕೆ ಜಯರಾಮ್ ಸಾಂಸ್ಥಿಕ ರೂಪ ನೀಡಿದ್ದಾರೆ. ಗ್ರಾಹಕರೇ ಸದಸ್ಯರು. ಐವರು ಸಿಬ್ಬಂದಿ. ಎಲ್ಲರಿಗೂ ಸಮವಸ್ತ್ರ. ವ್ಯವಹಾರದ ಅವಧಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9.30. ಆರು ತಿಂಗಳಲ್ಲಿ ಮಣ್ಣಾಗುವ ಬಯೋಡಿಗ್ರೇಡೇಬಲ್ ಪ್ಲಾಸ್ಟಿಕ್ ಬಳಕೆ. ಬಟ್ಟೆಯ ಚೀಲ ತಂದವರಿಗೆ ಬಿಲ್ಲಿನಲ್ಲಿ ಒಂದು ರೂಪಾಯಿ ಕಡಿತ!

ಮಳಿಗೆ ಪೂರ್ತಿ ಪರಿಸ್ನೇಹಿ. ಗೋಡೆ ತುಂಬಾ ಹಸೆ ಚಿತ್ರ. ಕಲ್ಲು, ಮರ, ಬೇರು ಬಳಸಿದ ರ್ಯಾಕ್ಗಳು. ವ್ಯವಸ್ಥಿತವಾಗಿ ಪೇರಿಸಿಟ್ಟ ಸಾವಯವ ಉತ್ಪನ್ನಗಳು. ಮಹಡಿಯಲ್ಲಿ ಸಭಾಭವನ. ಕಿಟಕಿಗೆ ಲಾವಂಚದ ಪರದೆ. ಸೌರವಿದ್ಯುತ್. ಜಲಮರುಪೂರಣ. ಗೋಡೆಗಳಲ್ಲಿ ಪಾರಂಪರಿಕ ಹಸೆಚಿತ್ತಾರ. ಮಹಾರಾಷ್ಟ್ರದ 'ವರ್ಲಿ' ವರ್ಣಚಿತ್ರಗಳು.

ಗ್ರಾಹಕರ ವಿಳಾಸ ದಾಖಲೆ. ಬಹುತೇಕ ಕೊಳ್ಳುಗರು ಪಟ್ಟಣಿಗರಾದ್ದರಿಂದ, 'ಸಾವಯವ ಕೃಷಿ' ನೋಡಿದ ಅನುಭವವಿರುವುದಿಲ್ಲ. ಆಸಕ್ತ ಗ್ರಾಹಕರಿಗೆ ಪ್ರತಿ ತಿಂಗಳು ತೋಟ ಭೇಟಿ ಮೂಲಕ ಸಾವಯವ ಕೃಷಿಯನ್ನು ಪರಿಚಯ. ಜತೆಗೆ ತಿಂಗಳೊಂದು ಮುಖಾಮುಖಿ ಕಾರ್ಯಕ್ರಮ.

ಬೇರೆ ಪ್ರಮಾಣೀಕೃತ ಸಂಸ್ಥೆಗಳು ಅಂಗೀಕರಿಸಿದ ಉತ್ಪನ್ನಗಳನ್ನು ಇವರು ಖರೀದಿಸುತ್ತಾರೆಯೇ? 'ದೃಢೀಕರಣ ಕೊಟ್ಟ ಕಂಪೆನಿ ಐಎಂಒಗೆ ಸುದ್ದಿ ತಿಳಿಸುತ್ತಿರುತ್ತದೆ. ಐಎಂಒ ನಮಗೆ. ನಮ್ಮ ಪಟ್ಟಿಗೆ ಹೆಸರು ಸೇರಿದಾಕ್ಷಣ ಉತ್ಪನ್ನಗಳನ್ನು ಎರಾಕ್ಕೆ ತರಬಹುದು.'
ರೈತರ ತೋಟಗಳ 'ಗುಂಪು ದೃಢೀಕರಣ'ಕ್ಕೂ ಮಾಡುವ ಎರಾ ವ್ಯವಸ್ಥೆ ಮಾಡುತ್ತದೆ. ಇದಕ್ಕೆ ಐಎಂಓದ ಕೆಲವೊಂದು ನಿಯಮಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಬಂದು ಪರೀಕ್ಷಿಸಿ ತ್ರೃಪ್ತಿಯಾಗಬೇಕು. ಬೆಂಗಳೂರು ಸುತ್ತಮುತ್ತ ಅರುವತ್ತೈದಕ್ಕೂ ಹೆಚ್ಚು ತೋಟಗಳು ಈಗಾಗಲೇ ದೃಢೀಕರಣಗೊಂಡಿವೆ; ಇನ್ನಷ್ಟು ಯತ್ನ ನಡೆದಿದೆ.

ಜಯರಾಂ ನ್ಯಾಯವಾದಿ. ನಲವತ್ತೆರಡು ಎಕ್ರೆಯಲ್ಲಿ ಸಾವಯವ ಕೃಷಿಯನ್ನೂ ಮಾಡುತ್ತಾರೆ. ''ಬದುಕಿಗೆ ಸಾಕಷ್ಟು ಸಂಪಾದನೆಯಿದೆ. ವೃತ್ತಿಗೆ ತೊಂದರೆಯೆಂಬುದನ್ನು ತಿಳಕೊಂಡೇ ಈ ಚಳುವಳಿಗೆ ಧುಮುಕಿದ್ದೇನೆ. ಇದರಲ್ಲಿ ಖುಷಿಯಿದೆ. ಕೃಷ್ಯುತ್ಪನ್ನವನ್ನು ಕೊಳ್ಳುವವರಿಲ್ಲ. ಪಟ್ಟಭದ್ರ್ರರ ಹಿಡಿತದಲ್ಲಿರುವ ಮಾರುಕಟ್ಟೆಗೆ ಒಯ್ದರೂ, ಕೀಳಾಗಿ ಕಾಣುವ ಪ್ರವೃತ್ತಿ. ಎರಾ ಸ್ಥಾಪನೆಗೆ ಇದೂ ಒಂದು ಕಾರಣ.

(ಎರಾ ಆರ್ಗಾನಿಕ್ #348, ಡಾಲರ್ಸ್ ಕಾಲನಿ, ಆರ್.ಎಮ್.ವಿ.ಕ್ಲಬ್ ಡಬಲ್ ರೋಡ್, ಆರ್.ಎಮ್.ವಿ. ಎರಡನೇ ಹಂತ, ಬೆಂಗಳೂರು - 560 094 ದೂರವಾಣಿ: 080-32007273, 99005 43881)

0 comments:

Post a Comment