Monday, December 28, 2009

ಸಾವಯವ ಸೂರು 'ನೇಸರ'

ಸಾವಯವ ಕೃಷಿ - ಕಾಲದ ಅನಿವಾರ್ಯತೆ. ಅರೋಗ್ಯ ಉಳಿಸಲು, ಉಳಿಯಲು ಇದೊಂದೇ ಮಾರ್ಗ. ಬೆಳೆಸಿದರೆ ಸಾಕೆ, ವ್ಯವಸ್ಥಿತವಾದ ಮಾರುಕಟ್ಟೆ ಸೃಷ್ಟಿಯಾಗಬೇಡ್ವೇ?

ಮೈಸೂರಿನ ಗೀತಾರಸ್ತೆಯಲ್ಲಿರುವ 'ನೇಸರ' ಸಾವಯವ ವಸ್ತುಗಳ ಮಾರಾಟಕ್ಕಾಗಿ ರೂಪುಗೊಂಡ ಸಂಸ್ಥೆ. ಸಾವಯವ ಕೃಷಿಕರನ್ನು ಗುರುತಿಸುವುದು, ಉತ್ಪಾದಕ ಮತ್ತು ಗೃಹಕರ ನಡುವಿನ ಕೊಂಡಿಯಾಗುವುದು, ಸಾವಯವ ಕೃಷಿ ಕೂಟಗಳನ್ನು ಏರ್ಪಡಿಸುವುದು, ಪ್ರವಾಸ, ಪತ್ರಿಕೆ, ನಾಟಿ ಬೀಜ ಸಂರಕ್ಷಣೆ, ಗ್ರಂಥಾಲಯ, ಸಾವಯವ ಅಡುಗೆ....ಇವು ನೇಸರದ ಉದ್ದೇಶಗಳು.

25 ಮಂದಿ ನೋಂದಾಯಿತ ಕೃಷಿಕರಿದ್ದಾರೆ. ನೋಂದಣಿ ಅಂದರೆ ಯಾವುದೇ ಪ್ರಮಾಣೀಕೃತ ಸಂಸ್ಥೆಗಳಿಂದ ದೃಢೀಕರಣವಲ್ಲ. ತಾನೇ ಹಾಕಿಕೊಂಡ ಕೆಲವು 'ಬಿಗಿ' ನಿಯಮಗಳಿಗನುಸಾರವಾಗಿ `ಅಪ್ಪಟ ಸಾವಯವ ಕೃಷಿಕ'ರನ್ನು ಗೊತ್ತುಮಾಡುತ್ತದೆ.

ಸಾವಯವ ದೃಢೀಕರಣಕ್ಕಾಗಿ ಪ್ರಶ್ನೆಗಳನ್ನು ಮುದ್ರಿಸಿದೆ. ಇದಕ್ಕೆ ತೋಟದ ಮಾಲಿಕ ಉತ್ತರಿಸಬೇಕಾಗುತ್ತದೆ. ನಂತರ ಮೂರ್ನಾಲ್ಕು ಮಂದಿಯ ಪರೀಕ್ಷಾ ತಂಡ ತೋಟಕ್ಕೆ ಭೇಟಿ ನೀಡಿ ಪರೀಕ್ಷಿಸುತ್ತದೆ. ''ಹೀಗೆ ಕೃಷಿಕರಲ್ಲಿಗೆ ಭೇಟಿನೀಡುವಾಗ ಅವರ ಸ್ವಭಾವ ಮತ್ತು ಮಾತಿನಿಂದಲೇ ಗೊತ್ತಾಗಿಬಿಡುತ್ತದೆ. ಸಾವಯವದ ಕುರಿತು ಮಾನಸಿಕ ದೃಢತೆಯೂ ತಿಳಿಯುತ್ತದೆ ನೇಸರದ ಮುಖ್ಯ ಸಂಪನ್ಮೂಲ ಕೃಷಿಕ ಎ.ಪಿ.ಚಂದ್ರಶೇಖರ್ ಹೇಳುತ್ತಾರೆ.

ಕೆಲವರು ಹೇಳುವುದಿದೆ. 'ನಮ್ಮ ತೋಟ ಶುದ್ಧ ಸಾವಯವ. ಆದರೆ ರಸಬಾಳೆಗೆ ಫ್ಲುರಿಡಾನ್ ಸ್ವಲ್ಪ ಹಾಕಿದ್ದೇನೆ' ಇದಕ್ಕೇನನ್ನೋಣ? ಇಂತಹವರಿಗೆ ತಿಳಿ ಹೇಳುವ ಕೆಲಸ ಮತ್ತು ಪರ್ಯಾಯ ದಾರಿಗಳನ್ನು ನೇಸರ ಹೇಳುತ್ತದೆ.

ಸಾವಯವ ಪರೀಕ್ಷೆಯಲ್ಲಿ ಗೆದ್ದ ಕೃಷಿಕರ ತೋಟದ ಉತ್ಪನ್ನಗಳಿಗೆ ನೇಸರದಲ್ಲಿ ಪ್ರಥಮಾದ್ಯತೆ. ಆರಂಭದಲ್ಲಿ ಇಪ್ಪತ್ತೈದು ಮಂದಿಯೂ ಉತ್ಪನ್ನಗಳನ್ನು ನೇಸರದಲ್ಲಿ ಇಡುತ್ತಿದ್ದರು. ಈಗ ಹನ್ನೆರಡು ಮಂದಿ ಮಾತ್ರ. ಕಾರಣ, ಒಬ್ಬೊಬ್ಬರ ತೋಟವಿರುವುದು ಪೇಟೆಯಿಂದ ಬಹಳಷ್ಟು ದೂರ. ದಿನನಿತ್ಯ ಸಿಗುವ ಪೇರಳವೋ, ನಿಂಬೆಯೋ ನೇಸರಕ್ಕೆ ಸಮಯಕ್ಕೆ ಸರಿಯಾಗಿ ತಲಪಿಸುವುದು ತ್ರಾಸ. ಸಿಗುವ ಮೊತ್ತ ಪ್ರಯಾಣ ವೆಚ್ಚಕ್ಕೆ ಸರಿಸಮ. ಹಾಗಾಗಿ ಪೇಟೆಯ ಸುತ್ತಮುತ್ತ ಇರುವ, ದಿನಕ್ಕೊಮ್ಮೆ ಪೇಟೆಗೆ ಬರುವ ಕೃಷಿಕರ ವಸ್ತುಗಳು ಮಾತ್ರ ನೇಸರದಲ್ಲಿವೆ.

'ಕೃಷಿಕರೇ ತಮ್ಮ ವಸ್ತುಗಳಿಗೆ ದರ ನಿಗದಿ ಮಾಡುತ್ತಾರೆ. ಅವರ ದರಕ್ಕೆ ಶೇ.20ನ್ನು ಸೇರಿಸಿ ನೇಸರದಲ್ಲಿ ಮಾರಾಟ. ಆದರೆ ಕೃಷಿಕರು ತಂದ ತಕ್ಷಣ ಹಣ ನೀಡುವ ವ್ಯವಸ್ಥೆ ಇಲ್ಲ. ಮಾರಾಟವಾದ ಸರಕಿಗೆ ಮಾತ್ರ ಹಣ ಪಾವತಿ'.

ಒಂದೇ ಜಾತಿಯ ನಿಂಬೆ ಬೇರೆ ಬೇರೆ ದರದಲ್ಲಿ ಬಂದಿರುತ್ತವೆ. ಆಗದು ಇಂತಹವರ ತೋಟದ್ದು ಎಂಬ `ಬ್ರಾಂಡ್' ಮೇಲೆ ವ್ಯಾಪಾರವಾಗುತ್ತದೆ. ಒಂದು ವೇಳೆ ಉತ್ಪನ್ನ ಉಳಿದರೆ? ಅದಕ್ಕೆ ಕೃಷಿಕರೇ ಹೊಣೆ. ಉಳಿದ ಮಾರುಕಟ್ಟೆಗಿಂತ ಶೇ.25 ಸಾವಯವ ಉತ್ಪನ್ನಗಳಿಗೆ ಹೆಚ್ಚು. 'ವಿಷ ತಿನ್ನುವುದೇ ಬೇಡ ಎಂಬವರು ಬಂದೇ ಬರುತ್ತಾರೆ'

ಶುಕ್ರವಾರ ದೊಡ್ಡ ಸಂತೆ. ಆಗ ನೇಸರದ ಒಳಗಿನ ವಸ್ತುಗಳೆಲ್ಲವೂ ಹೊರಗಿನಂಗಳಕ್ಕೆ. ಕೊತ್ತಂಬರಿ ಸೊಪ್ಪು, ಶ್ರೀಗಂಧದ ಸೊಪ್ಪು.....ಹೀಗೆ ಸೊಪ್ಪು ತರಕಾರಿಗಳಿಗೆ ಡಿಮಾಂಡ್. ಬಾಳೆದಿಂಡಿಗೆ ಬೇಡಿಕೆ ಹೆಚ್ಚು! 'ನಮ್ಮಲ್ಲಿ ಬೀಜರಹಿತ ಚಿಕ್ಕು ಇದೆ. ಇದರ ಹಣ್ಣಿಗೆ ಮುಂಗಡ ಬುಕ್ಕಿಂಗ್ ಇದೆ' ನಿರ್ಮಲ ಎ.ಪಿ. ಮಾತಿನ ಮಧ್ಯೆ ಹೇಳಿದರು.

ಸಂತೆಗೆ ಜನ ಮುಗಿಬೀಳುವ ಕಾರಣ, ಟೋಕನ್ ವ್ಯವಸ್ಥೆ. ಒಟ್ಟು ಬಂದು ಖರೀದಿಸುವ ಹಾಗಿಲ್ಲ. ಇದರಲ್ಲಿ ನೇಸರದ ಸದಸ್ಯರಿಗೆ ಟೋಕನ್ನಿಂದ ವಿನಾಯಿತಿ. ಯಾವುದೇ ಸರತಿ ಸಾಲಿರಲಿ, ಇವರಿಗೆ ಲಗಾವಿಲ್ಲ.

ತಿಂಗಳಿಗೆ ಏನಿಲ್ಲವೆಂದರೂ 50,000 ರೂ. ವ್ಯಾಪಾರ. ಅದರಲ್ಲಿ ಮೂರನೇ ಒಂದು ಪಾಲು ಇಂದ್ರಪ್ರಸ್ಥದ ಸುಮಾರು ನೂರಕ್ಕೂ ಮಿಕ್ಕಿದ ಮೌಲ್ಯವರ್ಧಿತ ಉತ್ಪನ್ನಗಳೇ! ಶರಬತ್ತು, ಉಪ್ಪಿನಕಾಯಿ, ಜ್ಯಾಂಗಳು, ಒಣಗಿಸಿದ ಹಣ್ಣುಗಳು, ಒಣಗಿಸಿದ ಸಿಪ್ಪೆಗಳು, ಹಪ್ಪಳ, ಸೆಂಡಿಗೆ, ಬಾಳಕ, ಚಟ್ನಿಪುಡಿಗಳು, ಕಷಾಯಗಳು, ಮಸಾಲೆಗಳು, ಔಷಧೀಯ ಐಟಂಗಳು, ಮಾರ್ಜಕಗಳು, ಹಸಿರು ಉತ್ಪನ್ನಗಳು.....ಹೀಗೆ ಒಂದೇ ಎರಡೇ....

ಅಕ್ಕಿ, ಬೆಲ್ಲ, ತುಪ್ಪ, ಜೋಳ ವಸ್ತುಗಳಿಗೆ ನಿಶ್ಚಿತ ಗ್ರಾಹಕರು. ಅಕ್ಕಿಯನ್ನು ಹಾಸನದಿಂದ ತರಿಸಿ ವಿತರಿಸುತ್ತಾರೆ. ಮೊದಲು ನೇಸರದಲ್ಲಿ ಸಕ್ರ್ರಿಯವಾಗಿದ್ದ ಕೃಷಿಕರೊಬ್ಬರು ಹೈದರಾಬಾದ್ನಲ್ಲಿದ್ದಾರೆ. ಅವರು ತೊಗರಿ ಒದಗಿಸುತ್ತಾರೆ. ಶಿವಮೊಗ್ಗದಿಂದ ಒಂದಷ್ಟು ವಸ್ತುಗಳು.

ನೇಸರದ ಗ್ರಾಹಕರು - ಉತ್ಪನ್ನಗಳನ್ನು 'ಬಳಸಿ ನೋಡಿದ ಗ್ರಾಹಕರು.' ಅವರಿಂದಲೇ ಪ್ರಚಾರ. ಹೊಸಹೊಸ ಗ್ರಾಹಕರು ಬರುತ್ತಾರೆ. ಪ್ಲಾಸ್ಟಿಕ್ ಬಳಸಬಾರದು - ನೇಸರದ ತತ್ವ. ಆದರೆ ವಸ್ತುಗಳನ್ನು ಕಾಪಾಡಲು ಪ್ಲಾಸ್ಟಿಕ್ ಅನಿವಾರ್ಯ. ಪ್ಲಾಸ್ಟಿಕ್ ಬಳಸದಿದ್ದರೆ, ಒಯ್ಯುವವರೇ ಇಲ್ಲ! ಜ್ಯೂಸ್ ಬಾಟಲ್ಗಳ ಲೇಬಲ್ನ್ನು ಆಗಾಗ ಬದಲಿಸುತ್ತಲೇ ಹಾಗಿದ್ದರೆ ವ್ಯಾಪಾರ ಜಾಸ್ತಿ - ಎಪಿಯವರು ವ್ಯಾಪಾರದ ಸೂಕ್ಷ್ಮಗಳನ್ನು ಹೇಳುತ್ತಾರೆ.

ಸಾವಯವ ಉತ್ಪನ್ನಗಳಿಗೆ ಉಳಿದ ಮಾರುಕಟ್ಟೆಗಿಂತ ದರ ಜಾಸ್ತಿ. ಹಾಗಿದ್ದರೂ ಸ್ವಚ್ಚ ಆಹಾರವನ್ನು ಬಯಸುವ ಗ್ರಾಹಕರಿದ್ದಾರೆ. ನೇಸರವು ಬದುಕಿನ 'ಬೇಕು'ಗಳನ್ನು ಒದಗಿಸುತ್ತದೆ. ವಿಷ ತಿಂದು 'ವಿಷಕಂಠ'ರಾದ ನಮ್ಮ ಮನಸ್ಸು ಸಾವಯವಕ್ಕೆ ಸಜ್ಜಾಗಬೇಕು, ಅಷ್ಟೇ.

0 comments:

Post a Comment