Tuesday, December 28, 2010

ಎಂಡೋ : ಮಾಧ್ಯಮ ಆಕಳಿಕೆ!



(ಚಿತ್ರಗಳು: ಎಂಡೋ ವಿರುದ್ಧ ಕಾರ್ಯಕರ್ತ ಶ್ರೀ ಪಡ್ರೆಯವರ ಸಂದರ್ಶನಕ್ಕಾಗಿ ಅವರ ಮನೆಗೇ ಮೂರು ಕ್ಯಾಮೆರಾ, ಇಪ್ಪತ್ತು ಮಂದಿ ಸಿಬಂದಿಯ ಜತೆ ಬಂದ ಇಂಡಿಯಾವಿಶನ್ ತಂಡದ ಚಟುವಟಿಕೆಗಳು.)

ಕೇರಳದಾದ್ಯಂತ ಈಗ ಎಂಡೋಸಲ್ಫಾನಿನದೇ ಸುದ್ದಿ. ತಿಂಗಳುಗಳ ಕೇವಲ ಕಾಸರಗೋಡು ಜಿಲ್ಲೆಗೆ ಸೀಮಿತವಾದ ಎಂಡೋ ಹೋರಾಟ ರಾಜ್ಯವಿಡೀ ವ್ಯಾಪಿಸಿ, ಜನರ ಮನ-ಕದವನ್ನು ತಟ್ಟಿರುವುದಕ್ಕೆ ಕಾರಣ - ಮಾಧ್ಯಮ. ಅಚ್ಚು ಮಾಧ್ಯಮಗಳಲ್ಲದೆ, ವಾಹಿನಿಗಳ ಮೂಲಕವೂ ನಿರಂತರ ಎಂಡೋ ಹಾನಿಯ ಜಾಗೃತಿ ಮೂಡಿಸುವಂತಹ ಕೆಲಸ ನಡೆಯುತ್ತಿದೆ.

ಇಂಡಿಯಾವಿಷನ್ ವಾಹಿನಿಯಂತೂ ಎಂಡೋ ದುರಂತದ ತಾಜಾ ಚಿತ್ರ, ಜನರ ಸ್ಪಂದನ, ಸಂದರ್ಶನ, ಎಂಡೋ ವಿಷದ ಬಾಧಕಗಳು, ದುಷ್ಪರಿಣಾಮಗಳನ್ನು ಸತತ ಬಿತ್ತರಿಸುತ್ತಲೇ ಇದೆ. ಈ ವಾಹಿನಿಯ ತಂಡಗಳು ಕಾಸರಗೋಡಿಗೆ ಬಂದು ದುರಂತದ ವಿಷಯದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ನಡೆಸಿವೆ. ಮಾಧ್ಯಮದ ಈ ಕೆಲಸ ದುರಂತ ಬಾಧಿತರ ಹೃದಯ ಝಲ್ಲೆನಿಸುವ ಚಿತ್ರಗಳ ಮೂಲಕ ಅಲ್ಲಿನ ಸರಕಾರ ಮತ್ತು ಜನರನ್ನು ಎಚ್ಚರಿಸಿದೆ.

ಜನಪ್ರಿಯ ಮಾತೃಭೂಮಿ ಸಾಪ್ತಾಹಿಕ ಈ ವಾರದ ತನ್ನ ವಿಶೇಷ ಸಂಚಿಕೆಯನ್ನು ಪೂರ್ತಿ ಎಂಡೋ ದುರಂತಕ್ಕೆ ಮೀಸಲಿಟ್ಟಿದೆ. ಬರೆದುಬಿಟ್ಟಿದೆ. ಭಾರತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದೊಂದು ಸಂಗ್ರಾಹ್ಯ ಸಂಚಿಕೆ.

ಇರಲಿ, ನಮ್ಮ ಕನ್ನಾಡಿನಲ್ಲಿ ಕೇರಳದಂತಹುದೇ ಎಂಡೋ ದುರಂತವು ದ.ಕ.ಜಿಲ್ಲೆಯ ಪಟ್ರಮೆ, ನಿಡ್ಲೆ, ಕೊಕ್ಕಡಗಳಲ್ಲಿ ಕಾಣಿಸಿಕೊಂಡು ದಶಕ ಒಂದು ಸಂದಿದೆ. ಅಲ್ಲಿ ಅಂಗವೈಕಲ್ಯ, ಬುದ್ಧಿಮಾಂದ್ಯ, ಬಂಜೆತನ, ಕಿವುಡುತನದಂತಹ ಕೇಸ್ಗಳು ದಿನದಿನ ಪತ್ತೆಯಾದಾಗಲೂ ಮಾಧ್ಯಮಗಳಿಗೆ ಅದು ಮುಖ್ಯ ಸುದ್ದಿಯಲ್ಲ. ಎಲ್ಲೋ ಒಂದು ಕಾಲಂ ಸುದ್ದಿಯಾಗಿ ಮಾಯವಾಗುತ್ತಿತ್ತು.

ಈ ವರುಷದಾರಂಭದಲ್ಲಿ ಈಗ ಸಚಿವೆಯಾಗಿರುವ ಶೋಭಕ್ಕ ಕೊಕ್ಕಡಕ್ಕೆ ಬಂದರು. ಅಲ್ಲಿನ ಎಂಡೋ ಪೀಡಿತರ ಕಷ್ಟಗಳಿಗೆ ದನಿಯಾದರು. ಒಂದಷ್ಟು ಪ್ರಾಥಮಿಕ ಪರಿಹಾರವನ್ನು ಘೋಷಿಸಿದ್ದು, ಮಾತ್ರವಲ್ಲದೆ ಅದನ್ನು ಅನುಷ್ಠಾನಿಸಿಯೇ ಬಿಟ್ಟರು. ಅವರೊಂದಿಗೆ ಮಾಧ್ಯಮದ ದಂಡು ಕೂಡಾ ಇತ್ತೆನ್ನಿ!

ಪತ್ರಿಕೆಗಳು ಸುದ್ದಿ ಬರೆದುವು. ಶೋಭಕ್ಕ, ಸಿಎಂ ಅವರನ್ನೇ ಹೈಲೈಟ್ ಮಾಡಿದವು. ಪರಿಹಾರದ ಮೊತ್ತವನ್ನು ದೊಡ್ಡ ವಿಚಾರ ಅಂತ ಬಿಂಬಿಸಿದುವು. ಕೆಲವು ಸೀರಿಯಸ್ ಪತ್ರಕರ್ತರು ಎಂಡೋ ದುರಂತದ ಚಿತ್ರಣಗಳನ್ನು ಬರೆದರೂ ಅವೆಲ್ಲಾ ಪ್ರಾದೇಶಿಕ ಪುಟ ಸೇರಿದುವು! ರಾಜಧಾನಿಗೆ ಗೊತ್ತಾಗಲೇ ಇಲ್ಲ.

ಈಚೆಗೆ ಪತ್ರಿಕೆಯೊಳಗಿದ್ದ, ಒಂದಷ್ಟು ಗ್ರಾಮೀಣ ಕಾಳಜಿಯ ಪತ್ರಕರ್ತರು ವಿಷಯವನ್ನು ಹುಡುಕಿ ತಾಜಾ ವರದಿಯನ್ನು ಪ್ರಕಟಿಸಿದರು. ಮುಖ್ಯ ಪುಟಗಳಲ್ಲಿ ಎಂಡೋ ಸುದ್ದಿಗಳು ಬರತೊಡಗಿದುವು. ಸಿಎಂ ಅವರಿಗೂ ವಿಚಾರದ ಗಾಢತೆ ತಿಳಿಯಿತು. ಎಂಡೋ ನಿಷೇಧದ ಆಶ್ವಾಸನೆಯೇನೋ ಸಿಕ್ತು.

ಸಾವಯವ ಮಿಶನ್ ಅಧ್ಯಕ್ಷ ಆ.ಶ್ರೀ.ಆನಂದ್ ಕೊಕ್ಕಡಕ್ಕೆ ಬಂದರು. ಎಂಡೋ ಪೀಡಿತರ ಬದುಕಿಗೆ, ಅವರನ್ನು ಆಧರಿಸುವ ಕುಟುಂಬಕ್ಕೆ ಶಾಶ್ವತವಾದ ವ್ಯವಸ್ಥೆಯನ್ನು ಮಾಡುವ ಕುರಿತು ವರಿಷ್ಠರನ್ನು ಎಚ್ಚರಿಸಲು ಮನಮಾಡಿದ್ದಾರಂತೆ. ಸರಕಾರದ ವೆಚ್ಚದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಎಂಡೋ ಪೀಡಿತರನ್ನು ಪ್ರತ್ಯೇಕವಾದ ಬಸ್ಸಲ್ಲಿ ಕರೆದುಕೊಂಡು ಹೋಗಿ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿಸಲು ನಿರ್ಧರಿಸುವಷ್ಟು ಅವರ ಮನ ಕರಗಿದೆ! ಇದು ಮೀಡಿಯಾ ಇಂಪ್ಯಾಕ್ಟ್.

ಆದರೂ ವಾಹಿನಿಗಳು ಮಾತ್ರ ದಿವ್ಯ ಮೌನ! ಶೋಭಕ್ಕ ಬಂದಾಗ ಸ್ಥಳೀಯ ವರದಿಗಾರರು ಕಳುಹಿಸಿದ ವರದಿಗಳು 'ಸುದ್ದಿಗಳ ಮಧ್ಯೆ' ಮಿಂಚಿ ಮರೆಯಾದುವಷ್ಟೇ! ರಾಜಕೀಯವನ್ನು ಪೋಸ್ಟ್ಮಾರ್ಟಂ ಮಾಡುವ, ಹಗರಣಗಳ ಅಣುಅಣುವನ್ನು ಕೆದಕುವ ವಾಹಿನಿಗಳಿಗೆ ಕೊಕ್ಕಡ, ಪಟ್ರಮೆಗಳ ಎಂಡೋ ಸಮಸ್ಯೆಯು 'ದುರಂತ'ದಂತೆ ಕಾಣಲೇ ಇಲ್ಲ.

ಇರಲಿ, ಇಷ್ಟಾದರೂ ಬಂತಲ್ಲ ಎಂಬುದೇ ಸಮಾಧಾನ. ಎರಡು ರಾಜ್ಯಗಳ ಮಾಧ್ಯಮಗಳ ಸ್ಪಂದನ ರೀತಿಗಳಲ್ಲಿ, ಸಾಮಾಜಿಕ ಕಳಕಳಿಯಲ್ಲಿ ಏಕಿಷ್ಟು ಅಂತರ? . ಕನ್ನಾಡ ಪತ್ರಕರ್ತರು, ಪ್ರಕಟನಾ ಸಂಸ್ಥೆಗಳ ಮುಖ್ಯಸ್ಥರು ಮಾತ್ರೃಭೂಮಿಯ ಈ ವಾರದ ವಿಶೇಷ ಸಂಚಿಕೆಯನ್ನು, 'ಎಂಡೋಸಲ್ಫಾನ್ ನಿಷೇಧಿಸಿ, ಪೀಳಿಗೆಗಳನ್ನು ಉಳಿಸಿ' ಎನ್ನುವ ಇಂಡಿಯಾವಿಶನಿನ ಕ್ಯಾಂಪೈನಿನ ಪರಿಯನ್ನು ಒಮ್ಮೆಯಾದರೂ ನೋಡಬೇಕು.

1 comments:

ಮಹೇಶ್ ಪುಚ್ಚಪ್ಪಾಡಿ said...

ಇಲ್ಲಿಗೂ ಇಂಡಿಯಾವಿಷನ್ ಅಂತಹದ್ದು ಬರಲಿ ದೇವರೇ ......

Post a Comment