Thursday, March 14, 2013

ಬಜಕೂಡ್ಲು ಗೋಶಾಲೆಗೆ `ಬ್ರೀಡ್ ಸೇವಿಯರ್ ಪ್ರಶಸ್ತಿ’

             ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆಗಾಗಿ ಪೆರ್ಲ ಬಜಕೂಡ್ಲಿನ 'ಅಮೃತಧಾರಾ' ಗೋಶಾಲಗೆ `ಬ್ರೀಡ್ ಸೇವಿಯರ್' ಪ್ರಶಸ್ತಿ ಪ್ರಾಪ್ತವಾಗಿದೆ.. ಮಾರ್ಚ್ 8 ರಂದು ಹರಿಯಾಣದ ಕರ್ನಾಲಿನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆದಿತ್ತು.

              ಒಂದೆರಡು ಲೀಟರು ಹಾಲು ನೀಡಿ, ಜನರಿಂದ ಉಪೇಕ್ಷಿಸಲ್ಪಡುತ್ತಿದ್ದ ಕಾಸರಗೋಡು ತಳಿಯ ಗೋವುಗಳನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ ಹಿರಿಮೆ ಪೆರ್ಲದ ಬಜಕೂಡ್ಲಿನ `ಅಮೃತಧಾರಾ' ಗೋಶಾಲೆಗೆ ಸಲ್ಲುತ್ತದೆ. ಈ ತಳಿಯ ಅತ್ಯುತ್ತಮ ಹಸು ಮತ್ತು ಹೋರಿಗಳನ್ನು ಹುಡುಕಿ ತಳಿ ಅಭಿವೃದ್ಧಿ ಪಡಿಸಿದ ಪರಿಣಾಮವಾಗಿ ಈಗ ಈ ತಳಿಯ ಹಸುಗಳು ನಾಲ್ಕರಿಂದ ಐದು ಲೀಟರ್ ತನಕ ಹಾಲು ನೀಡಲಾರಂಭಿಸಿವೆ. ಏಳು ವಿವಿಧ ಬಣ್ಣಗಳಲ್ಲಿರುವ ಕಾಸರಗೋಡು ತಳಿಯ ಹಸುಗಳನ್ನು ಹುಡುಕಿ ಈ ಗೋಶಾಲೆಯಲ್ಲಿ ಸಾಕಲಾಗುತ್ತಿದೆ. ಈ ಗೋವುಗಳೆಲ್ಲವನ್ನೂ ಶೂನ್ಯ ಬಂಡವಾಳದ ಸಾಕಣಿಕೆ ಮತ್ತು ಕೃಷಿಗೆ ಯೋಗ್ಯವಾಗುವಂತೆ ಮಾಡಲಾಗಿದೆ. ಕೇರಳದಾದ್ಯಂತ 240 ಮನೆಗಳನ್ನು ಗುರುತಿಸಿ 642 ಕಾಸರಗೋಡು ತಳಿಯ ಗೋವುಗಳನ್ನು ಯೋಜನೆಯು ವಿತರಿಸಿದೆ.

                ಭಾರತೀಯ ಜೀವವೈವಿಧ್ಯ ಇಲಾಖೆ ಮತ್ತು `ಸೇವಾ' ಸಂಸ್ಥೆಯ ಸಹಯೋಗದಲ್ಲಿ `ನ್ಯಾಷನಲ್ ಬ್ಯೂರೋ ಓಫ್ ಎನಿಮಲ್ ಜೆನೆಟಿಕ್ ರಿಸೋರ್ಸಸ್ ((NBAGR) ಸಂಸ್ಥೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ NBAGR ನಿರ್ದೇಶಕ ಡಾ|ಬಿ.ಕೆ.ಜೋಷಿ `ಬ್ರೀಡ್ ಸೇವಿಯರ್ ಅವಾರ್ಡ್ - 2012'ನ್ನು ವಿತರಿಸಿದರು.

                 ಕಾಸರಗೋಡ್ ಬ್ರೀಡ್ ಕನ್ಸರ್ವೇಶನ್ ಚಾರಿಟೇಬಲ್ ಟ್ರಸ್ಟ್ ಇದರ `ಅಮೃತಧಾರಾ' ಗೋಶಾಲೆಯ ಅಧ್ಯಕ್ಷ ಜಗದೀಶ.ಬಿ.ಜಿ ಮತ್ತು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ `ಕಾಮದುಘಾ' ಯೋಜನೆಯ ಗೋ ಬ್ಯಾಂಕಿನ ಕೇರಳ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ ನೆಕ್ಕರೆಕಳಯ ಪ್ರಶಸ್ತಿಯನ್ನು ಸ್ವೀಕರಿಸಿದರು.

0 comments:

Post a Comment