Wednesday, April 30, 2014

ಕರಾವಳಿಗೆ ಅಪರೂಪದ್ದಾದ "ಸಿರಿಧಾನ್ಯಗಳ ಸಿರಿ"




              ಬಂಟ್ವಾಳ ತಾಲೂಕಿನ ಅಳಿಕೆ ಸನಿಹದ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಎಪ್ರಿಲ್ 27ರಂದು ಸಿರಿಧಾನ್ಯ(millet)ಗಳ ಹಬ್ಬ. ದಕ್ಷಿಣ ಕನ್ನಡ ಜಿಲ್ಲೆಗೆ ಸಿರಿಧಾನ್ಯಗಳನ್ನು ಪರಿಚಯಿಸುವ ಕಾರ್ಯಕ್ರಮ. ಜೋಳ, ರಾಗಿ, ಬರಗ, ಸಾಮೆ, ನವಣೆ, ಸಜ್ಜೆ, ಹಾರಕ, ಊದಲು - ಸಿರಿಧಾನ್ಯಗಳು. ಇವುಗಳಲ್ಲಿ ರಾಗಿಯ ಬಳಕೆ ಕರಾವಳಿಯಲ್ಲಿದೆ.

             ಭತ್ತವನ್ನು ಮಿಲ್ಲಲ್ಲಿ ಅಕ್ಕಿ ಮಾಡುತ್ತೇವೆ. ತೌಡನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಬಿಡುತ್ತೇವೆ. ಎಲ್ಲವನ್ನೂ ಕಳಕೊಂಡು ಸೊರಗಿದ ಅಕ್ಕಿಯ 'ಬಿಳಿಯ ಅನ್ನ' ಬಟ್ಟಲಿಗೆ ಬಿದ್ದಾಗ ಉಣ್ಣುತ್ತೇವೆ. ಪೌಷ್ಟಿಕಾಂಶವನ್ನು ಕಳಕೊಂಡ ಈ ಅನ್ನವು ಶರೀರಕ್ಕೆ ಎಷ್ಟರ ಮಟ್ಟಿಗೆ ಪೌಷ್ಟಿಕತೆಯನ್ನು ನೀಡಬಹುದು? ಆದರೆ ಗ್ರಾಮೀಣ ಭಾಗಗಳಲ್ಲಿ ಕುಚ್ಚಲಕ್ಕಿಯ ಬಳಕೆ ಈಗಲೂ ಜೀವಂತವಾಗಿರುವುದು ಸಮಾಧಾನ.

              ಈ ಹಿನ್ನೆಲೆಯಲ್ಲಿ ಸಿರಿಧಾನ್ಯಗಳನ್ನು ನೋಡಿದಾಗ ಇದು ಪೌಷ್ಟಿಕಾಂಶಗಳ ಆಗರ. ನಾರಿನಿಂದ ವಿಟಮಿನ್ ತನಕ ವಿವಿಧ ವೈವಿಧ್ಯ ಆರೋಗ್ಯದಂಶಗಳು. ಅವುಗಳ ಸಂಸ್ಕರಣೆಯಲ್ಲಿನ ತೊಂದರೆಗಳು, ಒಂದು ರೂಪಾಯಿಗೆ ಪಡಿತರದಲ್ಲಿ ಸಿಗುವ ಅಕ್ಕಿ, ಇಳುವರಿ ಕೇಂದ್ರಿತ ಬೆಳೆಗಳ ಅವಲಂಬನೆ.. ಹೀಗೆ ಮೊದಲಾದ ಅಂಶಗಳು ಸಿರಿಧಾನ್ಯಗಳ ಇಳಿಲೆಕ್ಕಕ್ಕೆ ಕಾರಣ.
ಬದುಕಿನಿಂದ ಮರೆಯಾದ ಸಿರಿಧಾನ್ಯಗಳನ್ನು ಮರಳಿ ಅಡುಗೆ ಮನೆಗೆ ತರುವ, ಕರಾವಳಿಗೆ ಪರಿಚಯಿಸುವ ಆಶಯದ ಕಲಾಪವನ್ನು ಕೇಪು 'ಹಲಸು ಸ್ನೇಹಿ ಕೂಟ' ಆಯೋಜಿಸಿತ್ತು. ನೂರಕ್ಕೂ ಅಧಿಕ ಭಾಗಿ. ಒಂದೆಡೆ ಸಿರಿಧಾನ್ಯಗಳ ಕುರಿತು ಥಿಯರಿ. ಮತ್ತೊಂದೆಡೆ ಖಾದ್ಯಗಳ ಮೂಲಕ ಪ್ರಾಕ್ಟಿಕಲ್. ಹಬ್ಬದಲ್ಲಿ ಇವೆರಡೂ ಮಿಳಿತವಾಗಿತ್ತು.

           ಹಬ್ಬದಲ್ಲಿ ಅಕ್ಕಿಯ ಅನ್ನ, ಸಾರು, ಸಾಂಬಾರು, ಪಲ್ಯಗಳಿರಲಿಲ್ಲ. ಸಿರಿಧಾನ್ಯಗಳ ಖಾದ್ಯಗಳನ್ನು ನಮ್ಮೂರಿನ ಅಡುಗೆ ಮನೆಗೆ ಒಗ್ಗುವಂತೆ ಮಾಡುವ ಆಶಯದಿಂದ ರೂಪುಗೊಂಡವುಗಳು. ಊದಲು ಚಿತ್ರಾನ್ನ, ನವಣೆ ಅನ್ನ, ಸಾವೆಯ ಪಾಯಸ, ಬರಗ ಕೇಸರಿಬಾತ್, ಸಾವೆ ಮೊಸರನ್ನ, ಜೋಳದ ರೊಟ್ಟಿ, ರಾಗಿ ಪಾನೀಯ, ರಾಗಿ ಹಾಲುಬಾಯಿ, ಹಾರಕ ಉಪ್ಪಿಟ್ಟು.
ನಳಿನಿ ಸದಾಶಿವ ರಾವ್ ಮಾಯಿಲಂಕೋಡಿ ಮತ್ತು ಶಿಲ್ಪಾ ಕಜೆ ಇವರಿಂದ ಅಡುಗೆಯ ಡೆಮೋ.  ರಾಗಿ ಶ್ಯಾವಿಗೆ, ನವಣೆ ಬಿಸಿಬೇಳೆ ಬಾತ್, ಸಜ್ಜೆ ದೋಸೆ, ಸಜ್ಜೆ ತಾಲಿಪಟ್ಟು, ಜೋಳ-ರಾಗಿ-ಸಜ್ಜೆಯ ಅರಳಿಟ್ಟು, ರಾಗಿ ಕೇಕ್, ನವಣೆ ಹಲ್ವ.. ಪ್ರಾತ್ಯಕ್ಷಿಕೆಯಲ್ಲಿ ಸಿದ್ಧಗೊಂಡ ಖಾದ್ಯಗಳು ಕ್ಷಣಮಾತ್ರದಲ್ಲಿ ಪ್ರತಿನಿಧಿಗಳ ಉದರ ಸೇರಿತು! ಮಂಚಿಯ ವಸಂತ ಕಜೆಯವರು ಹಬ್ಬಕ್ಕಾಗಿಯೇ ಸಿದ್ಧಪಡಿಸಿದ 'ರಾಗಿ ಐಸ್ಕ್ರೀಮ್'ನ ರೆಸಿಪಿಯನ್ನು ಕಾಗದಕ್ಕಿಳಿಸಿಕೊಂಡವರು ಅಧಿಕ. ಬೆಂಗಳೂರಿನ ಅನಿತಾ ಪೈಲೂರು ಸಿರಿಧಾನ್ಯಗಳಿಗೆ ದನಿಯಾದರು.

              ಸಿರಿಧಾನ್ಯ ಹಬ್ಬವು ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಮತ್ತು ಕಡಂಬಿಲ ಕೃಷ್ಣಪ್ರಸಾದ್ ಇವರ ಮೆದುಳ ಮರಿ. ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರನಾರಾಯಣ ಭಟ್, ವರ್ಮುಡಿ ಶಿವಪ್ರಸಾದ್, ಬೈಂಕ್ರೋಡು ಗಿರೀಶ, ವೆಂಕಟಕೃಷ್ಣ ಬೈಂಕ್ರೋಡು... ಸಾಥ್. ಹಬ್ಬದಲ್ಲಿ ಕೂಟದ ಚಟುವಟಿಕೆಗಳ ವಾರ್ತಾಪತ್ರದ ಬಿಡುಗಡೆ.

            "ಎಲ್ಲಾ ಸಿರಿಧಾನ್ಯಗಳಲ್ಲಿ ಶೇ.16-20 ನಾರಿನ ಅಂಶವಿದೆ. ಪಾಲಿಶ್ ಮಾಡಿದ ಅಕ್ಕಿಯಲ್ಲಿ ಕೇವಲ ಶೇ.4-5 ಮಾತ್ರ. ಹಾಗಾಗಿ ಸಿರಿಧಾನ್ಯಗಳನ್ನು ಬಳಸುವ ರೂಢಿಯಾಗಬೇಕು. ಪಾಲಿಶ್ ಮಾಡದ ಅಕ್ಕಿಯನ್ನು ಸೇವಿಸುವ ಪದ್ಧತಿ ಮತ್ತೆ ರೂಢಿಸಿಕೊಂಡಾಗ ಆರೋಗ್ಯ", ಬೆಂಗಳೂರಿನ ಡಾ.ಕೆ.ಸಿ.ರಘು ಅವರಿಂದ ಆಹಾರಗಳ  ಜಾಗತಿಕ ಲಾಬಿಗಳ ಪ್ರಸ್ತುತಿ.

           ಮದುವೆ, ಉಪನಯನದಂತಹ ಸಮಾರಂಭದಲ್ಲಿ ಅಡುಗೆ ಮಾಡಿದ್ದೇವೆ. ಆದರೆ ಸಿರಿಧಾನ್ಯಗಳ ಖಾದ್ಯಗಳ ತಯಾರಿ ಇದೇ ಮೊದಲು, ಎಂದು ಖುಷಿ ಪಟ್ಟವರು ಅಂದಿನ ಸೂಪಜ್ಞರಾದ ಚಂದ್ರಶೇಖರ ಭಟ್ ಮತ್ತು ಶಿವರಾಮ ಭಟ್. ಮುಚ್ಚಿರ ಹಣ್ಣು, ಮ್ಯಾಂಗೋಸ್ಟಿನ್, ಸಿಂಧು ಮಾವು. ಮಾದೃ ಚಕ್ಕೋತ, ಪುರಿಕಾಯಿ ಹಣ್ಣು, ಬದನೆ - ತೊಂಡೆ ತಳಿಗಳು, ಬಳ್ಳಿ ಬಟಾಟೆ, ಜಾಂಜೀಬಾರ್ ಬಾಳೆ, ಬೆಣ್ಣೆಹಣ್ಣು... ಹೀಗೆ ವಿವಿಧ ವೈವಿಧ್ಯಗಳ ಹಣ್ಣುಗಳ ಪ್ರದರ್ಶನ.

          ’ನನ್ನ ಊಟದಲ್ಲಿ ದಿನಕ್ಕೆ ಒಂದಾದರೂ ಸಿರಿಧಾನ್ಯಗಳ ಐಟಂನ್ನು ಹೊಂದಿಸಬೇಕೆಂದಿದ್ದೇನೆ,’ ಮಡಿಕೇರಿಯ ಇಂಜಿನಿಯರ್ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರೆ, ’ಅಡುಗೆ ಮನೆಯ ಬಾಗಿಲನ್ನು ತಟ್ಟುವ ಇಂತಹ ಪ್ರಾಕ್ಟಿಕಲ್ ಕಾರ್ಯಕ್ರಮಗಳು ಕಾಲದ ಆವಶ್ಯಕತೆ” ಎಂದವರು ಮಂಗಳೂರಿನ ಪಶುವೈದ್ಯ ಡಾ.ಮನೋಹರ ಉಪಾಧ್ಯ.
ಆಹಾರದಲ್ಲಿ ಹೊಸ ಹಾದಿ ತೋರಿದ ಸಿರಿಧಾನ್ಯ ಹಬ್ಬವು ಅಡುಗೆ ಮನೆಗಳಿಗೆ ಸಂದೇಶ ರವಾನಿಸಿದೆ!


1 comments:

Hemamala said...

Very nice article. Even in Mysore, 'food mela' on such grains take place once in a while and we had relished preparations form Navane Pongal, Sajje Rotti etc - Hemamala

Post a Comment