Sunday, July 27, 2014

ಕೃಷಿ ತಿರುಗಾಟದಿಂದ ಜ್ಞಾನವೃದ್ಧಿ


           'ಕೃಷಿಕ ತೋಟದಲ್ಲೇ ಇರಬೇಕು, ಅವನು ತಿರುಗಾಡಬಾರದು,' ಕೃಷಿಯ ಪಾರಂಪರಿಕ ಮಾತುಕತೆಗಳಲ್ಲಿ ಹಾದುಹೋಗುವ ಸೊಲ್ಲಿದು. ಕೃಷಿ ತಿರುಗಾಟದಿಂದ ಜ್ಞಾನವೃದ್ಧಿಯಾಗುತ್ತದೆ. ಆಗುಹೋಗುಗಳು ಅಪ್ಡೇಟ್ ಆಗುತ್ತಿರುತ್ತದೆ,’ ಕೃಷಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡ ಪುತ್ತೂರು (ದ.ಕ.) ಬೆಟ್ಟಂಪಾಡಿಯ ಅರುಣ್ ಕುಮಾರ್ ರೈ ಆನಾಜೆಯವರ ಅನುಭವ.
            ಅರುಣ್ ದೇಶ ಸುತ್ತಿದ್ದಾರೆ, ಸುತ್ತುತ್ತಾರೆ. ಅಂತಹ ಸಂದರ್ಭಗಳಲ್ಲಿ - ಕೃಷಿ ಸಂಬಂಧಿ ಮೇಳಗಳಿಗೆ ಬೇಟಿ. ಯಂತ್ರ-ತಂತ್ರ ಮಾಹಿತಿಗಳ ಬೆನ್ನೇರಿ ಪ್ರವಾಸ. ಹೊಸ ಬೆಳೆಗಳತ್ತ ಆಸಕ್ತಿ. ಕೃಷಿಕರಲ್ಲಿಗೆ ಭೇಟಿ. ಬೀಜ-ಗಿಡಗಳ ವಿನಿಮಯ. ಮಾಹಿತಿ ಹಂಚಿಕೆ - ಹೀಗೆ ಅರುಣ್ ಸಕ್ರಿಯ. ಮಿತಭಾಷಿಯಾದ ಇವರನ್ನು ಮಾತನಾಡಿಸಿದರೆ ಕೃಷಿ ಲೋಕದ ಅಪ್ಡೇಟ್ ಗೊತ್ತಾಗಿಬಿಡುತ್ತದೆ.
            ಈಚೆಗೆ ಹಾಂಗ್ ಕಾಂಗ್, ಮಕಾವೋ, ಥೈಲಾಂಡ್ ಪ್ರವಾಸ ಕೈಗೊಂಡಿದ್ದರು. ಸೀಮಿತ ಅವಧಿಯ ಭೇಟಿಯಾದರೂ ಅವರ ಕಣ್ಣೆಲ್ಲಾ ಕೃಷಿಯ ಸುತ್ತಮುತ್ತ ಗಿರಕಿ ಹೊಡೆಯುತ್ತಿತ್ತು. "ಮಾಲ್ಗಳಲ್ಲಿ ಕೃಷಿ ಉತ್ಪನ್ನಗಳನ್ನು ಆಕರ್ಷಕವಾಗಿ ಜೋಡಿಸಿಡುವ ವಿನ್ಯಾಸ ಮೋಡಿ ಮಾಡಿತ್ತು.
          ವಿವಿಧ ವೈವಿಧ್ಯ ಹಣ್ಣುಗಳ ಜೋಡಣಾ ವಿನ್ಯಾಸದ ನೋಟ ಕಣ್ಸೆಳೆಯುವಂತಿತ್ತು. ಗ್ರಾಹಕರನ್ನು ಸೆಳೆಯುವ ಮಾರುಕಟ್ಟೆ ತಂತ್ರ ನಿಜಕ್ಕೂ ಬೆರಗು. ಭಾರತದಲ್ಲಿ ಮಾರುಕಟ್ಟೆಯಿಲ್ಲ, ಮಾರಾಟವಿಲ್ಲ ಅಂತ ಕೂಗುತ್ತೇವೆ. ನಿಜಕ್ಕೂ ಮಾರುಕಟ್ಟೆಯ ಅಧ್ಯಯನದಲ್ಲಿ ನಾವು ಹಿಂದಿದ್ದೇವೆ ಅನ್ನಿಸುತ್ತದೆ. ಉತ್ಪನ್ನಗಳನ್ನು ಗ್ರಾಹಕ ಸ್ವೀಕೃತಿಯಾಗಿ ಕೊಡುವಲ್ಲಿ ಇನ್ನೂ ಮುಂದೆ ಸಾಗಬೇಕಿದೆ," ಎಂದರು.
               ಅರುಣ್ ಮರಳುವಾಗ ತೆಂಗಿನ ನಿರ್ಜಲೀಕೃತ (ಡಿಹೈಡ್ರೇಟೆಡ್) ಉತ್ಪನ್ನವನ್ನು ತಂದಿದ್ದರು. ಅದರ ಪ್ಯಾಕೆಟ್ ಹೇಗಿತ್ತೆಂದರೆ ತೆಂಗಿನದ್ದೇ ಆಕಾರದ ಪ್ಯಾಕಿಂಗ್. ತೆಂಗಿನ ಉತ್ಪನ್ನ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ಯಾಕೆಟಿನ ವಿನ್ಯಾಸವೇ ಅದು ಯಾವ ಉತ್ಪನ್ನ ಎನ್ನುವುದನ್ನು ಮನಸ್ಸಿನಲ್ಲಿ ರಿಜಸ್ತ್ರಿ ಮಾಡಿಸಿ ಬಿಡುತ್ತವೆ. ಪ್ರತೀಯೊಂದು ಹಣ್ಣಿಗೂ ಆ ಹಣ್ಣನ್ನೇ ಹೋಲುವ ಪೌಚ್ ತಯಾರಿಸಿರುವುದು ಮಾರಾಟ ಜಾಣ್ಮೆ. ಹಲಸು, ಪಪ್ಪಾಯಿಯಂತಿರುವ ಪೌಚ್ ಅರುಣರನ್ನು ಸೆಳೆದಿತ್ತು.
             ಹಣ್ಣಿನ ಋತುವಿನಲ್ಲಿ ಯಥೇಷ್ಟ ಹಣ್ಣು ಸಿಕ್ಕಿದಾಗ ಬೆಲೆಯೂ ಕಡಿಮೆ. ಬಿಸಾಕು ಕ್ರಯಕ್ಕೆ ಮಾರುವ ಪ್ರಮೇಯ ಕೃಷಿಕರದ್ದು. ಥೈಲ್ಯಾಂಡಿನಂತೆ ಹಣ್ಣುಗಳನ್ನು ಸೀಸನ್ನಿನಲ್ಲಿ ನಿರ್ಜಲಗೊಳಿಸಿ ಅಕಾಲದಲ್ಲಿ ಉತ್ಪನ್ನವನ್ನು ನೀಡುವ ಜ್ಞಾನ ನಮ್ಮಲ್ಲೂ ಸಾಧ್ಯವಿದೆ. ಅದರ ಅನುಷ್ಠಾನ ಎಲ್ಲಿಂದ ಶುರುವಾಗಬೇಕು, ಯಾರು ಮಾಡಬೇಕು? ಸರಕಾರ ಮಾಡಲಿ ಎಂದು ಕೃಷಿಕ, ಕೃಷಿಕರೇ ಮಾಡಿಕೊಂಡರೆ ಸಪೋರ್ಟ್ ಮಾಡುತ್ತೇವೆ ಎನ್ನುವ ಹುಸಿ ಆಶ್ವಾಸನೆ ಸರಕಾರದಿಂದ. ಹಾಗಾಗಿ ನಮ್ಮಲ್ಲಿ ಕೃಷಿ ವ್ಯವಸ್ಥೆಗಳು ಮುಂದೆ ಹೋಗಿಲ್ಲ," ಎನ್ನುತ್ತಾರೆ.
              ರಸ್ತೆಬದಿಗಳಲ್ಲಿರುವ ಸೀಯಾಳ ಮಾರಾಟಕ್ಕೂ ಹೈಟೆಕ್ ಟಚ್. ಸೀಯಾಳದ ಮೇಲ್ಬದಿ, ಕೆಳಬದಿ ಕೆತ್ತಿ ತಂಪುಪೆಟ್ಟಿಗೆಯಲ್ಲಿಡುತ್ತಾರೆ. ಇದನ್ನು ಗ್ರಾಹಕರು ಹೆಚ್ಚು ಇಷ್ಟಪಡುತ್ತಾರೆ. ಮಾಲ್ಗಳಲ್ಲಿ ಸೀಯಾಳವನ್ನು ಅಂದವಾಗಿ ಕೆತ್ತಿ, ಕ್ಲಿಂಗ್ಪಿಲ್ಮ್  ಪ್ಯಾಕ್  ಮಾಡಿ, ಲೇಬಲ್ ಅಂಟಿಸಿದಾಗಲೇ ಗುಣಮಟ್ಟ! ಈ ರೀತಿ ಇದ್ದಾಗ ಮಾತ್ರ ಗ್ರಾಹಕರೂ ಸ್ವೀಕರಿಸುತ್ತಾರಂತೆ.
             ರಂಬುಟಾನ್ ತುಂಬಾ ಮಾರಿಹೋಗುವ ಹಣ್ಣು. ಧರ್ಮಾಕೋಲ್ ಪ್ಲೇಟಿನೊಳಗೆ ಕ್ಲಿಂಗ್ಫಿಲ್ಮ್ ಸುತ್ತಿದ ಪ್ಯಾಕೆಟ್ ಆಕರ್ಷಕ. ಹಣ್ಣಿನ ಹೊರಮೈ ತುಂಬಾ ಗಟ್ಟಿ. ರಂಬುಟಾನ್ ಹಣ್ಣಿನ ಮೇಲ್ಬದಿ, ಕೆಳಬದಿಯನ್ನು ಒಳಗಿನ ಗುಳ ಸ್ವಲ್ಪ ಕಾಣುವಂತೆ ಕೆತ್ತಿಡುತ್ತಾರೆ. ತಿನ್ನುವವನಿಗೆ ಸುಲಭ, ಹಣ್ಣನ್ನು ತಿಂದ ಅರುಣ್ ಅನುಭವ.
            ಐದು ವರುಷದ ಹಿಂದೆ ದುಬೈಗೆ ಹೋಗಿದ್ದರು. ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುವ ಯೋಚನೆಯಿತ್ತು.  ಅಲ್ಲಿನ ಕೃಷಿ ಕ್ರಮಗಳನ್ನು ಅಧ್ಯಯನ ಮಾಡಿದ್ದರು. ಶ್ರೀಮಂತ ಹೋಟೆಲುಗಳಲ್ಲಿ ಉತ್ತಮ ಬೇಡಿಕೆಯಿದ್ದ ತರಕಾರಿ 'ಕೂಸಾ', 'ಕಾರ್ಗೆಟ್'  ಸೆಳೆದಿತ್ತು. ಎಳೆಯ ಕೂಸಾವನ್ನು ತೊಟ್ಟಿನ ಜಾಗದಲ್ಲಿ ತುಂಡರಿಸಿ, ಒಳಗಿನ ಹೂರಣವನ್ನು ತೆಗೆಯುತ್ತಾರೆ. ಇದರೊಳಗೆ ಮಿಶ್ರ ಮಾಡಿದ ಅನ್ನ ಮತ್ತು ಮಾಂಸವನ್ನು ಸೇರಿಸಿ ಹಬೆಯಲ್ಲಿ ಬೇಯಿಸುತ್ತಾರೆ. ಇದು ಸಾಂಬಾರಿನೊಂದಿಗೆ ಮುಳುಗಿ ಊಟದ ಟೇಬಲ್ ಸೇರುತ್ತದೆ. ಒಂದು ಕಪ್ ಸಾಂಬಾರಿನಲ್ಲಿ ಒಂದು ಕೂಸಾ! ಇದು ಅರೇಬಿಯನ್ ರಾಷ್ಟ್ರದಲ್ಲಿ ಶ್ರೀಮಂತ ತಿಂಡಿ, ಹೊಸ ಖಾದ್ಯವೊಂದನ್ನು ಪರಿಚಯಿಸುತ್ತಾರೆ ಅರುಣ್.
            ಚೀನಾ ದೇಶಕ್ಕೆ ಹೋಗಿದ್ದಾಗ ಭತ್ತ, ಗೋಧಿ ಕೃಷಿಯತ್ತ ಚಿತ್ತ. ಅದಕ್ಕೆ ಬಳಸುವ ಯಂತ್ರೋಪಕರಣವನ್ನು ನೋಡಿ ಬೆರಗು. ಎಲ್ಲವೂ ಯಂತ್ರಾವಲಂಬಿತ. ಇಲ್ಲಿನ ಕೃಷಿ ಕೆಲಸಗಳು ನಿಜಕ್ಕೂ ಅಚ್ಚರಿ. ಚಿಕ್ಕ ಯಂತ್ರದಿಂದ ತೊಡಗಿ ದೊಡ್ಡ ದೊಡ್ಡ ಯಂತ್ರಗಳ ನಿರ್ವಹಣೆ. ಆಹಾರ ಉತ್ಪಾದನೆಯಲ್ಲಿ ಇಂತಹ ವ್ಯವಸ್ಥೆಗಳು ಅನಿವಾರ್ಯ, ಎನ್ನುತ್ತಾರೆ.
            ಹಳ್ಳಿಗಳಲ್ಲಿ ಯಾವ ಬೆಳೆ ಬೆಳೆಯುತ್ತಾರೋ ಅದು ಅಲ್ಲಲ್ಲಿ ಸಂಸ್ಕರಣೆಗೊಂಡೇ ನಗರದ ಮಾರುಕಟ್ಟೆ ಸೇರುತ್ತದೆ. ಅದಕ್ಕೆಂದೇ ಪ್ರತ್ಯೇಕವಾದ ಜಾಲವನ್ನು ಸರಕಾರವೇ ರೂಪಿಸಿದೆ. ಕೃಷಿಕರಿಗೆ ಬಾಡಿಗೆ ನೆಲೆಯಲ್ಲಿ ಯಂತ್ರಗಳನ್ನು ನೀಡಲು ಸೊಸೈಟಿಗಳಂತಹ ಸಂಸ್ಥೆಗಳ ಸ್ಥಾಪನೆ. ಸಣ್ಣ, ಮಧ್ಯಮ ವರ್ಗದ ಕೃಷಿಕರಿಗಿದು ಅನುಕೂಲ.
              "ಗಿಡ ನೆಡುವಲ್ಲಿಂದ ಮಾರುಕಟ್ಟೆ ತನಕದ ವಿವಿಧ ಹಂತಗಳ ಜ್ಞಾನವು ಪ್ರವಾಸದಿಂದ ತಿಳಿಯುತ್ತದೆ. ಆಯಾಯ ಪ್ರದೇಶದ ಪದ್ಧತಿಗಳು, ಕೆಣಿಗಳನ್ನು ಹತ್ತಿರದಿಂದ ನೋಡಲು ಅನುಕೂಲ. ಹೊಸ ಹಣ್ಣುಗಳ ಪರಿಚಯ. ಅಡಿಕೆಯೊಂದಿಗೆ ಬೇರೆ ಯಾವ ಬೆಳೆಗಳನ್ನು ಬೆಳೆಸಬಹುದೆಂಬುದಕ್ಕೆ ನನಗೆ ಪ್ರವಾಸ ಹೆಚ್ಚು ಪುಷ್ಟಿ ಕೊಟ್ಟಿದೆ," ಎನ್ನುತ್ತಾರೆ. ಅರುಣ್ ಪ್ರವಾಸ ಹೋದಾಗಲೆಲ್ಲಾ ಕೃಷಿಯ ವಿಚಾರಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ದಾಖಲೆ ಮಾಡಿಟ್ಟುಕೊಳ್ಳುತ್ತಾರೆ. ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು


0 comments:

Post a Comment