Thursday, July 31, 2014

ಹಲಸು ಉದ್ದಿಮೆ : ಯಂತ್ರಸಂಸ್ಥೆಗಳೊಂದಿಗೆ ಕೊಂಡಿ

 ಹಲಸಿನ ಹಣ್ಣನ ಪಲ್ಪಿಂಗ್ ಈ ಯಂತ್ರದಲ್ಲಿ ಸುಲಭ
 ಪೆರ್ಡೂೂರಿನ 'ಅರುಣೋದಯ ಇಂಡಸ್ಟ್ರೀಸಿನಲ್ಲಿ ವಿಜ್ಞಾನಿಗಳ ತಂಡ

               ಮೂರ್ನಾಲ್ಕು ವರುಷಗಳಿಂದ ಕರಾವಳಿಯಲ್ಲಿ ಹಲಸಿನ ಅಲೆ ಎದ್ದಿದೆ. ಮೌಲ್ಯವರ್ಧಿತ ಉತ್ಪನ್ನ ತಯಾರಿಯತ್ತ ಒಲವು ಮೂಡುತ್ತಿದೆ. ಹಲಸಿನ ಹಪ್ಪಳ, ಚಿಪ್ಸ್, ಹಲ್ವ.. ಮೊದಲಾದ ಮನೆಉತ್ಪನ್ನಗಳಿಗೆ ಕೊಳ್ಳುಗರ ಕೊರತೆಯಿಲ್ಲ. ಹಲಸಿನ ಹಪ್ಪಳ ತಯಾರಿಯು ಶ್ರಮ ಬೇಡುವ ಕೆಲಸ. ಶ್ರಮ ಹಗುರ ಮಾಡುವ ಯಂತ್ರಗಳು ಬಂದುಬಿಟ್ಟರೆ ಉತ್ಪಾದನೆ ಹೆಚ್ಚು ಮಾಡಬಹುದು.
                ಕೃಷಿ, ಕೃಷಿ ಆಗ್ರೋ ಉದ್ಯಮ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗಳಿಗೆ ಯಂತ್ರಗಳನ್ನು ಆವಿಷ್ಕರಿಸುವ ಕೊಯಂಬತ್ತೂರಿನ ಪೊನ್ಮಣಿ ಇಂಡಸ್ಟ್ರೀಸಿನ ಎನ್.ಆರ್.ನಟರಾಜನ್, ಭೂಪಾಲ್ ಕೇಂದ್ರವಾಗಿರುವ ಕೊಯಂಬತ್ತೂರು ಉಪಕೇಂದ್ರವಾದ ಕೇಂದ್ರ ಕೃಷಿ ಇಂಜಿನಿಯರಿಂಗ್ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಜೇಕಬ್ ಕೆ.ಅಣ್ಣಾಮಲೈ ಮತ್ತು ಹಿರಿಯ ವಿಜ್ಞಾನಿ ಡಾ.ರವೀಂದ್ರ ನಾಯಕ್ ಜೂನ್ 21, 22ರಂದು ಕರಾವಳಿಗೆ ಆಗಮಿಸಿದ್ದರು.
                ಹಲಸಿನ ಹಪ್ಪಳದ ಉದ್ದಿಮೆದಾರರು ಸಂಘಟಿತರಾಗಿಲ್ಲ. ಅವರಿಗೆ ಪರಸ್ಪರರ ಪರಿಚಯವಿಲ್ಲ, ಸಂವಹನವಿಲ್ಲ. ಇವರು ಮತ್ತು ವಿಜ್ಞಾನಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ದು ಹಲಸು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅಡಿಕೆ ಪತ್ರಿಕೆ. ಆರಂಭದ ದಿವಸ ಕ್ಯಾಂಪ್ಕೋ ವರಿಷ್ಠರು, ಅಡಿಕೆ ಕೃಷಿಕರು ಮತ್ತು ಕೇಂದ್ರ ಕೃಷಿ ಇಂಜಿನಿಯರಿಂಗ್ ಸಂಸ್ಥೆಯನ್ನು ಮುಖಾಮುಖಿಯ ಮೇಜಿಗೆ ತಂದದ್ದೂ ಇದೇ ಪತ್ರಿಕೆ. ಈ ಸಂಸ್ಥೆ ಮತ್ತು  ಕನ್ನಾಡಿನ ಅಡಿಕೆ ಕೃಷಿಕ ಸಮುದಾಯಕ್ಕೆ ಈ ವರೆಗೆ ಸಂಪರ್ಕವೇ ಇದ್ದಿರಲಿಲ್ಲ.
                ಜೂನ್ 22ರಂದು ಪೆರ್ಡೂೂರಿನ 'ಅರುಣೋದಯ ಇಂಡಸ್ಟ್ರೀಸ್'ನ ವಸಂತ ನಾಯಕರ ಹಪ್ಪಳ ತಯಾರಿ ಕೇಂದ್ರಕ್ಕೆ ಭೇಟಿ. ಇವರದು ಹಲಸಿನ ಹಪ್ಪಳದ ಉದ್ದಿಮೆಯಲ್ಲೇ ಗರಿಷ್ಠ ಉತ್ಪಾದನೆ ಮಾಡುತ್ತಿರುವ ಸಾಧಕ ಸಂಸ್ಥೆ. ದಿನಕ್ಕೆ ಆರುನೂರು ಹಲಸು ನಾಲ್ಕು ಡಜನ್ ಕೈಗಳ ಮೂಲಕ ಇಲ್ಲಿ ಸಾವಿರಸಾವಿರ ಹಪ್ಪಳಗಳಾಗುತ್ತದೆ. ಹಪ್ಪಳ ತಯಾರಿಯಲ್ಲಿ ಹಲಸಿನ ಸೊಳೆ ರುಬ್ಬುವುದು, ಅದನ್ನು ಉಂಡೆ ಮಾಡುವುದು, ಉಂಡೆ ಒತ್ತುವುದು ಮುಖ್ಯ ಶ್ರಮದ ಕೆಲಸ. ಸದ್ಯ ಉಂಡೆಯನ್ನು ಎರಡು ಪ್ಲಾಸ್ಟಿಕ್ ಹಾಳೆ ಮೇಲಿಟ್ಟು ಅದರ ಮೇಲೆ ಮರದ ಒಂದು ಉರುಟು ಮಣೆ ಇಟ್ಟು ಒತ್ತುತ್ತಾರೆ.
               ಇದನ್ನು ಗಮನಿಸಿದ ನಟರಾಜನ್ ’ಕೈಯಲ್ಲಿ ಉಂಡೆ ಮಾಡುವಾಗ ಸಹಜವಾಗಿ ಆಕಾರ, ಗಾತ್ರ ವ್ಯತ್ಯಾಸವಾಗುತ್ತದೆ. ಉಂಡೆ ಮಾಡಲೆಂದೇ ಒಂದು ಯಂತ್ರ ಅಭಿವೃದ್ಧಿಗೊಳಿಸಬಹುದು. ಆಗ ಸಮಾನ ತೂಕ, ಗಾತ್ರದ ಹಪ್ಪಳ ತಯಾರಿಸಬಹುದ” ಎನ್ನುತ್ತಾರೆ.”ಹಪ್ಪಳ ಒತ್ತಲು ಅರೆ ಅಟೋಮ್ಯಾಟಿಕ್ ಯಂತ್ರ ಸಾಕು. ಏಕೆಂದರೆ ಇದು ಮೂರು-ನಾಲ್ಕು ತಿಂಗಳ ಉತ್ಪಾದನಾ ಕೆಲಸ. ಈ ನಿಟ್ಟಿನಲ್ಲಿ ನಾವು  ಯತ್ನಿಸುತ್ತೇವೆ’ ಎಂದು ಈ ವಿಜ್ಞಾನಿ ತಂಡ ಭರವಸೆ ಕೊಟ್ಟಿದೆ.
              ವಸಂತ ನಾಯಕರ ಹಪ್ಪಳ ಒಣಗಿಸುವ ಒಂದು ಶಾಖಪೆಟ್ಟಿಗೆ ಹೆಚ್ಚು ಕಟ್ಟಿಗೆ ಬೇಡುತ್ತಿದೆ. ಮುಂದಿನ ಘಟ್ಟದಲ್ಲಿ ಇದರ ಕ್ಷಮತೆ ಹೆಚ್ಚಿಸಿ ಕಟ್ಟಿಗೆಯ ಅವಶ್ಯಕತೆ ಕುಗ್ಗಿಸುವ ಯೋಚನೆ ಮಾಡಬಹುದು ಎನ್ನುತ್ತಾರೆ ಡಾ.ಅಣ್ಣಾಮಲೈ.
                ಬಿ.ಸಿ.ರೋಡಿನ ಹಲಸು ಪ್ರೇಮಿ ಮೌನೀಶ್ ಮಲ್ಯರ ಮನೆಗೆ ತಂಡ ಭೇಟಿ ನೀಡಿ ಅವರ ಉತ್ಪನ್ನಗಳು, ಅದಕ್ಕೆ ಸಂಬಂಧಪಟ್ಟ ಯಂತ್ರಗಳನ್ನು ವೀಕ್ಷಿಸಿತು. ಮನೆಮಟ್ಟದ ಹಲಸು ಮೌಲ್ಯವರ್ಧನೆ ಮಾಡುವ ಒಂದು ಪುಟ್ಟ ಗುಂಪೇ ಅಲ್ಲಿಗೆ ಬಂದಿತ್ತು.  ಇವರ ಯಂತ್ರಾವಶ್ಯಕತೆಯ ಬಗ್ಗೆ ಸವಿವರವಾಗಿ ಕೇಳಿಕೊಂಡ ತಂಡ ’ಕೊಯಂಬತ್ತೂರಿಗೆ ಮುಂದಾಗಿ ತಿಳಿಸಿ ಬನ್ನಿ. ಹಲಸಿನ ಉತ್ಪನ್ನಗಳಿಗೆ ಬೇಕಾಗುವ ಯಂತ್ರವನ್ನು ರೂಪಿಸೋಣ’ ಎಂದಿದೆ.
                  ಹಲಸು ಇಷ್ಟ್ಟೊಂದು ಆದಾಯ ತರಬಲ್ಲುದು ಮತ್ತು ಇದರಿಂದ ಅದೆಷ್ಟೋ ಉತ್ಪನ್ನ ತಯಾರಿ ಸಾಧ್ಯ ಎನ್ನುವುದು ತಂಡಕ್ಕೆ ದೊಡ್ಡ ಅಚ್ಚರಿ ಕೊಟ್ಟ ವಿಚಾರ. ಅಡಿಗೆಯ ಮಿಕ್ಸಿಯಲ್ಲಿ ಹಲಸಿನ ಹಣ್ಣಿನ ಪಲ್ಪ್ ಮಾಡುವುದು ಮೌನೀಶರಿಗೆ ತ್ರಾಸದಾಯಕವಾಗಿತ್ತು. ಇದಕ್ಕೆ ಈಗಾಗಲೇ ನಮ್ಮಲ್ಲಿರುವ ಗಟ್ಟಿಮುಟ್ಟಾದ ನಾಲ್ಕು ಕಿಲೋ ಒಳಸುರಿ ಹಾಕಬಲ್ಲ ಮಿಕ್ಸಿ ಆಗಬಹುದು ಎಂದರು ನಟರಾಜನ್.
                 ಕೊಯಂಬತ್ತೂರಿಗೆ ಮರಳಿದ ದಿನವೇ ನಟರಾಜನ್ ಮತ್ತು ಉಳಿದ ವಿಜ್ಞಾನಿಗಳು ಹಲಸಿನ ಹಣ್ಣು ಕೊಯ್ಯಿಸಿ ಈ ದೊಡ್ಡ ಮಿಕ್ಸಿಯಲ್ಲಿ ಹಾಕಿ ಪಲ್ಪ್ ಮಾಡಿ ನೋಡಿದ್ದಾರೆ. ಅದು ಯಶಸ್ವಿ ಎಂದು ತೋರಿಸುವ ಫೋಟೋಗಳನ್ನು ಕಳಿಸಿದ್ದಾರೆ. ಕರಾವಳಿಯ ಹಪ್ಪಳದ ಮತ್ತು ಚಿಕ್ಕಚಿಕ್ಕ ಗೃಹ ಉದ್ದಿಮೆ ಮಾಡುವ ಒಂದಷ್ಟು ಕೃಷಿಕರು, ಉದ್ಯಮಶೀಲರು ಕೊಯಂಬತ್ತೂರಿಗೆ ಟಿಕೆಟ್ ಬುಕ್ ಮಾಡಹೊರಟಿದ್ದಾರೆ.
                  "ಇದೊಂದು ಮೊದಲ ಹೆಜ್ಜೆಯಷ್ಟೇ. ಈ ಭಾಗದ ಕೃಷಿಕರು, ಉದ್ದಿಮೆದಾರರು ಮತ್ತು ವಿಜ್ಞಾನಿಗಳ ನಡುವೆ ನೇರ ಪರಿಚಯವಾಗಿದೆೆ. ಮುಂದಿನ ದಿನಗಳಲ್ಲಿ ಪರಸ್ಪರ ಸಂಪರ್ಕ ಇರಿಸಿಕೊಂಡರೆ ಎಷ್ಟೋ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯ. ಇಲ್ಲಿಗೆ ಮಾಧ್ಯಮದ ಕೆಲಸ ಬಹುತೇಕ ಮುಗಿದಂತೆ, ಮುಂದೆ ಏನಿದ್ದರೂ ನಮ್ಮದು ಪ್ರೇರೇಪಣೆ ಮತ್ತು ವರದಿಗಾರಿಕೆ ಮಾತ್ರ", ಎನ್ನುತ್ತಾರೆ  ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ.


0 comments:

Post a Comment