Sunday, February 14, 2016

ಮಣ್ಣಿನ ನರಜಾಲ ಇಳಿಯಬಿಟ್ಟ ದಿನದರ್ಶಿನಿ ಹಾಳೆಗಳು

              ವರ್ಷದ ಕೊನೆಗೆ ದಿನದರ್ಶಿನಿಗಳಿಗಾಗಿ ಹುಡುಕಾಟ. ಗೋಡೆಗೆ ತೂಗುಹಾಕಿದ ಬಳಿಕವೇ ವರ್ಶಾರಂಭಕ್ಕೆ ಮುನ್ನುಡಿ. ಉದ್ಯಮ, ಸಂಸ್ಥೆಗಳು ದಿನದರ್ಶಿನಿ- ಕ್ಯಾಲೆಂಡರ್- ಗಳನ್ನು ಮುದ್ರಿಸುತ್ತಿವೆ. ಆಕರ್ಷಕ ವಿನ್ಯಾಸದ, ಬಗೆಬಗೆಯ ನೋಟದ ಹಾಳೆಗಳನ್ನು ಕಣ್ತುಂಬಿಕೊಳ್ಳುವುದು ಆನಂದ. ಅವುಗಳನ್ನು ಪಡೆಯುವುದೂ ಪ್ರತಿಷ್ಠೆ! ಕೆಲವೊಮ್ಮೆ ಪಡಕೊಳ್ಳಲು ಅಂತಸ್ತು ಮಾನದಂಡವಾಗುವುದಿದೆ. ಈಗ ಹಾಗಿಲ್ಲ ಬಿಡಿ.
                ತಾರೀಕು, ದಿನ, ವಾರ, ತಿಥಿ, ಕರಣ ಮತ್ತು ಧಾರ್ಮಿಕ ವಿವರಗಳು ಕೂಡಿದ ವಿಚಾರಗಳು ದಿನದರ್ಶಿನಿಯ ಹೂರಣ. ಸಿದ್ಧಸ್ವರೂಪಕ್ಕಿಂತ ಹೊರತಾಗಿ ಮಾಹಿತಿಯನ್ನು ನೀಡುವ, ಬುದ್ಧಿಗೆ ಮೇವನ್ನು ಉಣಬಡಿಸುವ ಕ್ಯಾಲೆಂಡರ್ಗಳು ಕಾಲೂರುತ್ತಿವೆ. ಜನರ ಒಲವು ಗಳಿಸಹತ್ತಿವೆ. ಖಾಸಗಿ ಸಂಸ್ಥೆಗಳು ನಿಶ್ಚಿತ ಆಶಯದ ಪರೀಧಿಯೊಳಗೆ ತಂತಮ್ಮ ಆರ್ಥಿಕ ಬಲದಂತೆ ಪ್ರಕಟಿಸುತ್ತಿವೆ. ಸೀಮಿತ ಸಂಖ್ಯೆಯ ಗ್ರಾಹಕ ಬಲ, ಒಂದು ವಲಯದ ಆಸಕ್ತರಿಗೆ ತೃಪ್ತಿ ನೀಡುವ ಹೂರಣ. ಸುಲಭದಲ್ಲಿ ಸಿಗದ ಮಾಹಿತಿಗಳಿರುವುದರಿಂದ  ವಿಷಯಾಸಕ್ತ ಮಂದಿ ಜತನದಿಂದ ಕಾಪಿಟ್ಟುಕೊಳ್ಳುತ್ತಿದ್ದಾರೆ.
                  ಬೆಂಗಳೂರಿನ 'ಸಹಜ ಸಮೃದ್ದವು ಭತ್ತ-ಸಿರಿಧಾನ್ಯಗಳ ಕೃಷಿ, ಬಳಕೆ, ಉಳಿಕೆಯ ಬಹುದೊಡ್ಡ ಆಂದೋಳನವನ್ನು ಮಾಡುತ್ತಿದೆ. ಸಿರಿಧಾನ್ಯಗಳ ಸಂರಕ್ಷಣೆ, ಅಭಿವೃದ್ಧಿಯನ್ನು ಯೋಜಿತವಾಗಿ ಮಾಡುತ್ತಿದೆ. ಸಾವಯವ ಕೃಷಿಯ ವಿಸ್ತಾರವನ್ನು ಹೊತ್ತು ನಾಡಿನಾದ್ಯಂತ ಕಾರ್ಯನರವನ್ನು ವಿಸ್ತೃತಗೊಳಿಸುತ್ತಿದೆ. ಭತ್ತದ ಸಂರಕ್ಷಕರನ್ನು ಪ್ರೋತ್ಸಾಹಿಸುತ್ತಿದೆ. ಹೊಸ ತಳಿಯನ್ನು ಅಭಿವೃದ್ಧಿಪಡಿಸುತ್ತಿದೆ. ಸಾವಯವ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆಯ ಜಾಲ ರೂಪಿಸಲು ಯತ್ನಿಸುತ್ತಿದೆ. ಈ ವರುಷ 'ಸಿರಿಧಾನ್ಯ'ಕ್ಕೆ ಹೆಚ್ಚು ಬೆಳಕು ಹಾಕುವ ದಿನದರ್ಶಿನಿಯನ್ನು ಹೊರತಂದಿದೆ.
               ಸಿರಿಧಾನ್ಯಗಳು 'ಬರಗಾಲದ ಮಿತ್ರ'. ಗಾತ್ರದಲ್ಲಿ ಕಿರಿದು. ಪೌಷ್ಟಿಕಾಂಶ ಭರಿತ. ಇತರ ಯಾವ ಧಾನ್ಯಗಳೂ ಸಾಟಿಯಾಗಲಾರದ ಗುಣ. ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ ಸಾಮಥ್ರ್ಯ.  ರೋಗಬಾಧೆಯಿಲ್ಲ. ರಾಸಾಯನಿಕ ಮುಕ್ತವಾಗಿ ಬೆಳೆಯಬಹುದು. ಆಹಾರ ತಜ್ಞರ ಪ್ರಕಾರ ಸಿರಿಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ವಿಟಮಿನ್, ಖನಿಜಗಳನ್ನು ಹೊಂದಿವೆ. ಕೃಷಿಕ ಮತ್ತು ಗ್ರಾಹಕ ಇವರಿಬ್ಬರನ್ನೂ ಮನಸ್ಸಿನಲ್ಲಿಟ್ಟುಕೊಂಡು ದಿನದರ್ಶಿನಿಯ ಪುಟಗಳನ್ನು ಹೆಣೆಯಲಾಗಿದೆ.
                  ಸಹಜ ಸಮೃದ್ಧದ ಕೃಷ್ಣಪ್ರಸಾದ್ ಮುಖ್ಯವಾಗಿ ನಗರದ ಅಡುಗೆಮನೆಯತ್ತ ಕಣ್ಣೋಟ ಬೀರುತ್ತಾರೆ,  ಕಂಪನಿಗಳ ಬಣ್ಣದ ಜಾಹಿರಾತಿನ ಮೋಡಿಗೆ ಮರುಳಾಗಿ ಆಕರ್ಷಕ ಪ್ಯಾಕೆಟ್ನಲ್ಲಿ ತುಂಬಿಸಿಟ್ಟ ನೂಡಲ್ಸ್, ಪಿಜ್ಜಾ, ಬರ್ಗರ್ಸ್, ಪ್ಲೇಕ್ಸ್, ಚಿಪ್ಸ್ನಂತಹ ಅಪೌಷ್ಠಿಕ ತಿನಿಸುಗಳನ್ನು ತಿಂದು ಅನಾರೋಗ್ಯವನ್ನು ಅಂಟಿಸಿಕೊಳ್ಳುತ್ತಿದ್ದಾರೆ. ಇಂದು ನಮ್ಮ ಆಹಾರದ ವೆಚ್ಚಕ್ಕಿಂತ ಔಷಧೀಯ ಖರ್ಚುು ಹೆಚ್ಚಾಗುತ್ತಿದೆ. ಸಿರಿಧಾನ್ಯಗಳನ್ನು ಪ್ರತಿನಿತ್ಯ ಬಳಕೆ ಮಾಡುವುದರಿಂದ ಮಧುಮೇಹ, ಮಲಬದ್ಧತೆ, ಹೃದಯಾಘಾತ, ಕ್ಯಾನ್ಸರ್, ಅಲರ್ಜಿ, ಬೊಜ್ಜಿನಂತಹ ಕಾಯಿಲೆಗಳಿಂದ ಮುಕ್ತರಾಗಬಹುದು.
                   'ಊದಲು' ಸಿರಿಧಾನ್ಯದ ಮಾಹಿತಿ ನೋಡಿ : ಊದಲಿಗೆ ಸಾವಿರಾರು ವರುಷದ ಇತಿಹಾಸವಿದೆ. ಈಜಿಪ್ಟಿನ ಪಿರಮಿಡ್ಗಳ ಮಮ್ಮಿಗಳ ಕರುಳಿನಲ್ಲಿ ಕಂಡುಬಂದಿದೆ. ಭಾರತದ ಗುಡ್ಡಗಾಡು ಮತ್ತು ಗಿರಿಜನರ ವಾಸ ಪ್ರದೇಶದಲ್ಲಿ ಊದಲಿನ ಕೃಷಿ ಜೀವಂತವಾಗಿದೆ. ಗೋಧಿಗಿಂತ ಹತ್ತು ಪಟ್ಟು ಹೆಚ್ಚು ನಾರಿನಾಂಶವಿದೆ. ಸಕ್ಕರೆ ರೋಗಿಗಳಿಗೆ ಇದು ಸಂಪೂರ್ಣ ಆಹಾರ.  ಪಿಷ್ಟ, ಕೊಬ್ಬು, ಕ್ಯಾಲ್ಸಿಯಂ, ರಂಜಕಗಳಿಂದ ಸಮೃದ್ಧ, ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ರೋಗ-ರುಜಿನಗಳಿಂದ ದೇಹವನ್ನು ರಕ್ಷಿಸುತ್ತದೆ. ಪಾಲಿಷ್ ಮಾಡದ ಊದಲಿನ ಅಕ್ಕಿಯಲ್ಲಿ ವಿಟಮಿನ್ 'ಬಿ' ಹೆಚ್ಚು. ದೇಹದಲ್ಲಿ ಕೆಂಪು ರಕ್ತಕಣಗಳನ್ನು ವೃದ್ಧಿಸುತ್ತದೆ.
                    'ಜಲಸಿರಿ ಕ್ಯಾಲೆಂಡರ್' : 'ಹವಾಮಾನ ಬದಲಾವಣೆ ಹಾಗೂ ಭತ್ತದ ಕೃಷಿ' - ಆಶಯದಿಂದ ಸಹಜ ಸಮೃದ್ಧವು ಕ್ಯಾಲೆಂಡರನ್ನು ಹೊರತಂದಿದೆ. ನೀರು ಹಾಗೂ ಕೃಷಿ ವಿಷಯಗಳ ಅರಿವು ಮೂಡಿಸುವ ಆಶಯವೂ ಇನ್ನೊಂದು. ಆರು ವರುಷದಿಂದ ಜಲಸಿರಿ ಪ್ರಕಟವಾಗುತ್ತದೆ. ತುಮಕೂರಿನ 'ಧಾನ್ಯ' ಸಂಸ್ಥೆಯ ಹೆಗಲೆಣೆ. ಭತ್ತದ ಗದ್ದೆಗಳ ಸುಸ್ಥಿರತೆ, ಶ್ರೀ ಪದ್ಧತಿ, ಭತ್ತದಲ್ಲಿ ಮಿಶ್ರಕೃಷಿ, ನೆರೆನಿರೋಧಕ ತಳಿಗಳ ವೈಶಿಷ್ಟ್ಯ, ಭತ್ತ ಮತ್ತು ಸಂಸ್ಕೃತಿ, ಮಕ್ಕಳ ಮೂಲಕ ದೇಸೀ ಭತ್ತದ ಜ್ಞಾನದ ವಿಸ್ತರಣೆ, ಭತ್ತದ ತಾಕುಗಳಲ್ಲಿ ಕೃಷಿ ಹೊಂಡಗಳ ಅಗತ್ಯ... ಹೀಗೆ ಸರಳ ವಿಧಾನಗಳ ಪ್ರಸ್ತುತಿಗಳಿವೆ.
                  ಒಂದು ಕುತೂಹಲದ ಮಾಹಿತಿ. ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವ ಹಲವು ಅಂಶಗಳಲ್ಲಿ ಮಿಥೇನ್ ಅನಿಲ ಸಹ ಒಂದು. ಇದು ಏಷ್ಯಾದ ಭತ್ತದ ತಾಕುಗಳಿಂದ ಹೆಚ್ಚು ಉತ್ಪತ್ತಿಯಾಗುತ್ತಿದೆ ಎನ್ನುವ ತಕರಾರಿದೆ. ಹೇರಳ ನೀರು ನಿಲ್ಲಿಸಿ, ಭತ್ತ ಬೆಳೆಯುವುದರಿಂದ ಗದ್ದೆಗಳಲ್ಲಿ ಕೊಳೆಯುವ ನಿರಂತರ ಕ್ರಿಯೆ ಉಂಟಾಗಿ ವಾತಾವರಣಕ್ಕೆ ಮಿಥೇನ್ ಬಿಡುಗಡೆಯಾಗುತ್ತದೆ. ಹಾಗಾಗಿ ಭತ್ತದ ಕೃಷಿಗೆ ಕಡಿವಾಣ ಹಾಕಬೇಕೆಂಬ ಕೂಗು ವಿಶ್ವಮಟ್ಟದಲ್ಲಿ ಕೇಳಿ ಬರುತ್ತಿದೆ!
ಮಿಥೇನ್ ಬಿಡುಗಡೆಯ ಕಡಿವಾಣದ ಜತೆಗೆ ಭತ್ತದ ಕೃಷಿಯ ಮುಂದುವರಿಕೆ ಹೇಗೆ? ಅದಕ್ಕಾಗಿ 'ಶ್ರೀ' ಪದ್ಧತಿಯಲ್ಲಿ ಭತ್ತ ಬೆಳೆಯುವುದು ಇದಕ್ಕಿರುವ ಸರಳ ಮಾರ್ಗೋಪಾಯ. ಈ ಪದ್ಧತಿಯಲ್ಲಿ ತೇವಾಂಶ ಸಾಕಾಗುವುದರಿಂದ ನೀರು ನಿಲ್ಲಿಸುವ ರಗಳೆಗಳಿಲ್ಲ. ಹಾಗಾಗಿ ಮಿಥೇನ್ ಉತ್ಪತ್ತಿಯಾಗುವ ಪ್ರಮೇಯವೂ ಕಡಿಮೆ. ಈ ಪದ್ಧತಿಯಿಂದ ಎರಡು ರೀತಿಯ ಉಪಯೋಗ. ಒಂದು ಹವಾಮಾನ ವೈಪರೀತ್ಯದಿಂದ ಭತ್ತದ ಉತ್ಪಾದಕತೆಯಲ್ಲಾಗುತ್ತಿರುವ ಕುಸಿತ, ಇನ್ನೊಂದು ಭತ್ತದ ಕೃಷಿಯಿಂದಲೇ ಹವಾಮಾನ ವೈಪರೀತ್ಯ ಹೆಚ್ಚಾಗುತ್ತದೆ ಎನ್ನುವ ಅಪವಾದವನ್ನು ತಪ್ಪಿಸಿದಂತಾಗುತ್ತದೆ. ಇಂತಹ ಫಕ್ಕನೆ ಸಿಕ್ಕದ ಮಾಹಿತಿಗಳು ದಿನದರ್ಶಿನಿಯಲ್ಲಿ ತುಂಬಿವೆ.
             ದಿನದರ್ಶಿನಿಗಳ ಗುಚ್ಚಕ್ಕೆ 'ನಮ್ಮ ತೆಂಗು' ಎನ್ನುವ ತೆಂಗು ಕೃಷಿ ಕುರಿತ ಕ್ಯಾಲೆಂಡರ್ ಹೊಸ ಸೇರ್ಪಡೆ. ತುಮಕೂರು ನವಿಲೆಯ ಬೆವರು ಪ್ರಕಾಶನದ ವಿಶ್ವನಾಥ ಅಣೆಕಟ್ಟೆಯವರ ಪರಿಕಲ್ಪನೆ ಮತ್ತು ಬೆವರ ಶ್ರಮ. ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಜಯಪ್ರಸಾದ್ ಬಳ್ಳಕೆರೆ ಸಾಥ್. ಕಾಯಕಲ್ಪ ತೆಂಗು ಉತ್ಪಾದಕ ಮಂಡಳಿಯ ಹೆಗಲೆಣೆ. ಕೃಷಿಕರು ಒಂದಿಲ್ಲೊಂದು ಕಾರಣಕ್ಕೆ ನಿತ್ಯವೂ ಕ್ಯಾಲೆಂಡರ್ ನೋಡುತ್ತಾರೆ. ಇಂತಹ ಸಂದರ್ಭದಲ್ಲಿ ತೆಂಗು ಬೆಳೆಗಾರರ ಹಿತದೃಷ್ಟಿಯಿಂದ ತೆಂಗಿನ ಮಾಹಿತಿಯೂ ಸೇರಿಬಿಟ್ಟರೆ ನಿತ್ಯ ನೋಡುತ್ತಾರೆ, ಓದುತ್ತಾರೆ. ಇದರಿಂದಾಗಿ ಮಾಹಿತಿ ವಿನಿಮಯ ಆದಂತಾಗುತ್ತದೆ, ಎನ್ನುತ್ತಾರೆ ವಿಶ್ವನಾಥ್.
             ತೆಂತಾ ಎಣ್ಣೆ (ತೆಂಗಿನ ತಾಜಾ ಎಣ್ಣೆ) - ವರ್ಜಿನಲ್ ಕೊಕೊನಟ್ ಆಯಿಲ್ - ಬಳಕೆಯಿಂದಾಗುವ ಪರಿಣಾಮವನ್ನು ಚೆನ್ನಾಗಿ ವಿವರಿಸಿದ್ದಾರೆ : ಬಲಿತ ಹಸಿತೆಂಗಿನ ಕಾಯಿಯನ್ನು ತುರಿದು ತೆಗೆಯುವ ಎಣ್ಣೆಗೆ ತೆಂತಾ ಎಣ್ಣೆ ಎನ್ನುತ್ತಾರೆ. ಇದರಲ್ಲಿ ಶೇ.50ರಷ್ಟು ಲಾರಿಕ್ ಆಮ್ಲವಿದೆ. ತಾಯಿಯ ಎದೆ ಹಾಲನ್ನು ಬಿಟ್ಟರೆ ಇಷ್ಟೊಂದು ಪ್ರಮಾಣದಲ್ಲಿ ಸಿಗುವುದು ತೆಂತಾದಲ್ಲಿ ಮಾತ್ರ. ಇದರಲ್ಲಿ ಕೊಲೆಸ್ಟರಾಲ್ ಇಲ್ಲ. ಲಾರಿಕ್ ಆಸಿಡ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಕ್ಕೆ ಕಾರಣವಾಗವ ಎಲ್ಲಾ ರೀತಿಯ ಬ್ಯಾಕ್ಟೀರಿಯಾ, ವೈರಸ್ಗಳನ್ನು ಕೊಲ್ಲುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅತಿತೂಕ, ಬೊಜ್ಜು, ಥೈರಾಯಿಡ್ ಸಮಸ್ಯೆ, ಹಲ್ಲುನೋವು.. ಕಾಯಿಲೆಗಳಿಗೆ ಔಷಧಿ.
              ಕನ್ನಾಡು ಬರ ಅನುಭವಿಸುತ್ತಿದೆ. ಕೃಷಿ ಉತ್ಪಾದನೆ, ಕುಡಿಯುವ ನೀರು, ಜಾನುವಾರು ಸಾಕಣೆ ದೊಡ್ಡ ಸಮಸ್ಯೆಯಾಗಿದೆ. ಬರ ಬಂದಾಗ ಸಂಕಷ್ಟ ಅನುಭವಿಸುವ ಬದಲು ಭವಿಷ್ಯದ ಜಾಗೃತಿಯಲ್ಲಿ ಭೂಮಿಯನ್ನು ಬರನಿರೋಧಕಗೊಳಿಸಿದರೆ ನಾಡಿನ ನೆಮ್ಮದಿ ಸಾಧ್ಯವಿದೆ. ಬಳ್ಳಾರಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸುಕೋ ಬ್ಯಾಂಕ್ ಜನರಲ್ಲಿ ಬರ ಗೆಲ್ಲುವ ದಾರಿಗಳ ಕುರಿತು ಜಾಗೃತಿ ಮೂಡಿಸಲು ಸಚಿತ್ರ ಮಾಹಿತಿಯ ಕ್ಯಾಲೆಂಡರ್ ಪ್ರಕಟಿಸಿದೆ. ಕೃಷಿ ಪರಿಸರ ಬರಹಗಾರ ಶಿವಾನಂದ ಕಳವೆ ಪರಿಕಲ್ಪನೆಯಲ್ಲಿ ಬರನಿರೋಧಕ ಬದುಕಿನ ಚಿತ್ರ ದರ್ಶನದ ಕ್ಯಾಲೆಂಡರ್ ರೂಪುಗೊಂಡಿದೆ. ಈ ಕ್ಯಾಲೆಂಡರ್ನಲ್ಲಿ ಪ್ರತಿ ತಿಂಗಳಿಗೊಂದು ಕ್ಷಾಮ ಗೆಲ್ಲುವ ತಂತ್ರಗಳನ್ನು ಪರಿಚಯಿಸಲಾಗಿದೆ. ಬರದ ಭವಣೆ ಅನುಭವಿಸುತ್ತಿರುವ ರೈತರಿಗೆ ನೆಲ ಜಲ ಸಂರಕ್ಷಣೆಯ ಮೂಲಕ ಕೃಷಿ ಸಾಧನೆಯ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಸುಕೋ ಬ್ಯಾಂಕ್ ಕ್ಯಾಲೆಂಡರ್ ಹೇಳುತ್ತಿದೆ.
               ಮಾಹಿತಿಯನ್ನು ಆಪೋಶನ ಮಾಡುವ ತಂತ್ರಜ್ಞಾನಗಳು ಅಂಗೈಯಲ್ಲಿವೆ. ಆದರೆ ಎಷ್ಟು ಮಂದಿಗೆ ಮಾಹಿತಿಯ ದಾಹವಿದೆ? ಸಿಕ್ಕ ಮಾಹಿತಿಗಳನ್ನು ಜ್ಞಾನವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಷ್ಟು ಮಂದಿ ಉತ್ಸುಕರಾಗಿದ್ದಾರೆ? ಕೇವಲ ಮೆಸ್ಸೇಜ್ಗಳಲ್ಲಿ ಬದುಕು ನರಳುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ಯಾನ್ಯ ಸಂಸ್ಥೆಗಳು ಪ್ರಕಾಶಿಸುತ್ತಿರುವ ದಿನದರ್ಶಿನಿಗಳು ಸಾರುವ ಕನಿಷ್ಟ ಕೃಷಿ ಸಂದೇಶಗಳು ಜ್ಞಾನವೃದ್ಧಿಗೆ ಪೂರಕ. ನಿಜಾರ್ಥದಲ್ಲಿ ಇವುಗಳೆಲ್ಲಾ ಕೃಷಿದರ್ಶಿನಿಗಳು.
(Udayavani/nelada_nadi/4-2-2016)




1 comments:

Chandan Bhat Konemane said...

Uttama Mahiti

Post a Comment