Monday, February 8, 2016

ಗ್ರಾಮೀಣ ಬದುಕು ಸಂವಹನವಿಲ್ಲದ ಸಂಕಟದಲ್ಲಿದೆ


                 "ಗ್ರಾಮೀಣ ಬದುಕು ಅರಳಿಕಟ್ಟೆ, ದೇಗುಲ, ಕೆರೆ, ನದಿಗಳ ದಡದಲ್ಲಿ ಸಂವಹನದ ಕೇಂದ್ರವಾಗಿ ಬದುಕು ಕಟ್ಟಿದೆ. ಊರಿಗೆ ಬಂದ ಹೊಸ ಸೊಸೆ ಬಾವಿಕಟ್ಟೆಯಲ್ಲಿ ಮನದ  ದುಃಖ ಹಂಚಿಕೊಂಡು ಎದೆಯ ಭಾರ ಇಳಿಸಿಕೊಳ್ಳುತ್ತಿದ್ದಳು. ಇಂದು ಮನೆಯಲ್ಲಿಯೂ ಸಂವಹನ ನಡೆಯುತ್ತಿಲ್ಲ, ಗಂಡ ಒಂದು ಚಾನಲ್ ನೋಡಿದರೆ ಹೆಂಡತಿ ಇನ್ನೊಂದು ಕೋಣೆಯಲ್ಲಿ ಕುಳಿತು ಬೇರೆ ಚಾನಲ್ ನೋಡುತ್ತಿರುತ್ತಾಳೆ, ಮಕ್ಕಳು ಮೊಬೈಲ್ನಲ್ಲಿ ಆಟವಾಡುತ್ತ ದಿನ ಕಳೆಯುತ್ತಾರೆ. ಆಧುನಿಕ ಜೀವನಶೈಲಿಯಿಂದಾಗಿ ಮನೆ ಮನುಷ್ಯರಲ್ಲಿಯೇ ಪರಸ್ಪರ ಸಂವಹನ ಸಂಪರ್ಕ ಕಳೆದುಕೊಂಡ ವಿಚಿತ್ರ ಸಂಕಟದಲ್ಲಿ ಸಿಲುಕಿದ್ದೇವೆ," ಎಂದು ಹಿರಿಯ ಪತ್ರಕರ್ತ, ಉದಯ ಟಿವಿಯ ಉತ್ತರ ಕರ್ನಾಟಕದ ಮುಖ್ಯಸ್ಥ ಡಾ.ಜಗದೀಶ್ ಕೊಪ್ಪ ಹೇಳಿದ್ದಾರೆ. ಶಿರಸಿಯ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರವು ಉತ್ತರ ಕನ್ನಡದ ಕಳವೆ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರಲ್ಲಿ ಕೃಷಿ, ಪರಿಸರ ಪತ್ರಿಕೋದ್ಯಮ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
               ಸರಕಾರ-ಸಮಾಜದ ನಡುವೆ ಸಂವಹನದ ರಂಗವಾಗಿ ಉದಯಿಸಿದ ಪತ್ರಿಕಾರಂಗ ಇಂದು ಉದ್ಯಮವಾಗಿ ಬೆಳೆದಿದೆ. ಆಧುನಿಕತೆಯ ಅವಸರದಲ್ಲಿ ಇಂದು ಮನಸ್ಸು ಮನಸ್ಸುಗಳ ನಡುವೆ ಮಾತುಕತೆ ಕಳೆದು ಹೋಗುತ್ತಿದೆಯೆಂದು ವಿಷಾದಿಸಿದರು. "ಇಂದಿಗೆ 50 ವರ್ಷ ಹಿಂದೆ ಹುಟ್ಟಿ ಬೆಳೆದ ತಲೆಮಾರು ಅಜ್ಜಿ ರಾಗಿ ಬೀಸುವುದನ್ನೂ ಕಂಡಿದೆ, ಇಂದು ಮಿಕ್ಸಿ ಬಳಕೆಯನ್ನೂ ನೋಡುತ್ತಿದೆ. ಮಣ್ಣಿನ ಗಡಿಗೆಯಲ್ಲಿ ಅಡುಗೆ ತಯಾರಿಸುವ ಸಂಯಮ ಕಂಡ ನಾವು ಇಂದು ಅವಸರದ ಊಟ ಮಾಡುತ್ತಿದ್ದೇವೆ. ಸತ್ವಯುತ ದೇಸಿ ತಳಿಗಳು ಕಣ್ಮರೆಯಾಗುತ್ತಿವೆ. ನಮ್ಮ ಮೌಲ್ಯಯುತ ಬದುಕಿನ ಸತ್ವ ಪರಿಚಯಿಸುವ ಮೂಲಕ ಸಮಾಜದ ಮನಸ್ಸು ಅರಳಿಸಿ ಚೆಂದದ ಭವಿಷ್ಯ ರೂಪಿಸುವ ಕೆಲಸ ಮಾಧ್ಯಮಗಳಿಂದ ನಡೆಯಬೇಕಾಗಿದೆ" ಎಂದರು.
               "ವೃತ್ತಿನಿರತ ಪತ್ರಕರ್ತರು ಗಮನಿಸಿದ ಸಂಗತಿಗಳನ್ನು ಹಳ್ಳಿಗಳಲ್ಲಿ ಹುಡುಕಿ ಆಧ್ಯಯನ ಬರಹಗಳನ್ನು ಬರೆಯುವ ಅವಕಾಶ ಹವ್ಯಾಸಿ ಪತ್ರಕರ್ತರಿಗೆ ಇದೆ. ಕೃಷಿ, ಪರಿಸರ ಪತ್ರಿಕೋದ್ಯಮದಲ್ಲಿ ಇಂಥ ವೃತ್ತಿಪರತೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ, ಕೃಷಿ ಪರಿಸರದ ಆಗುಹೋಗುಗಳನ್ನು ವಸ್ತನಿಷ್ಠವಾಗಿ ಬರೆಯಲು ಯುವ ಬರಹಗಾರರಿಗೆ ತರಬೇತಿ ನೀಡುವ ಕಾರ್ಯವನ್ನು ನಾವು ನಡೆಸುತ್ತಿದ್ದೇವೆ," ಎಂದು ಶಿಬಿರ ನಿರ್ದೇಶಕ, ಮೈಸೂರು ವಿಶ್ವವಿದ್ಯಾಲಯದ ಕೇಂದ್ರದ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಹೇಳಿದರು.
                ಮಾಧ್ಯಮ ಕೇಂದ್ರದ ಸಂಚಾಲಕ ಶಿವಾನಂದ ಕಳವೆ ಕೇಂದ್ರದ ಚಟುವಟಿಕೆ ಪರಿಚಯಿಸಿದರು. "ಪತ್ರಕರ್ತ ಸರ್ವಜ್ಞ ಅಲ್ಲ, ನಮಗೆ ಎಲ್ಲ ವಿಷಯಗಳೂ ಗೊತ್ತಿರಬೇಕಾಗಿಲ್ಲ, ಆದರೆ ನಾಡಿನಲ್ಲಿ ವಿವಿಧ ವಿಷಯ ತಜ್ಞರು ಯಾರಿದ್ದಾರೆಂದು ತಿಳಿದು ಅವರೆಲ್ಲರ ಸ್ನೇಹ, ಸಂಪರ್ಕ ಉಳಿಸಿಕೊಂಡಾಗ ಉತ್ತಮ ಬರಹಗಾರರಾಗಿ ಬೆಳೆಯಬಹುದು," ಎಂದರು.  ಮಾಧ್ಯಮ ಕ್ಷೇತ್ರದಲ್ಲಿ ರಚನಾತ್ಮಕ ಚಿಂತನೆ ಮೂಡಿಸಿ ಗುಣಾತ್ಮಕ ಬದಲಾವಣೆ ತರುವ ಪುಟ್ಟ ಪ್ರಯತ್ನ ನಮ್ಮದು. ಯುವ ಪತ್ರಕರ್ತರಿಗೆ 16 ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು ನಡೆಸುತ್ತಿದ್ದೇವೆ. ಈವರೆಗೆ 36 ಶಿಬಿರ ನಡೆಸಲಾಗಿದ್ದು, 621 ಯುವ ಪತ್ರಕರ್ತರು ಭಾಗವಹಿಸಿದ್ದಾರೆಂದರು.
                 ಮಾಧ್ಯಮ ವಿದ್ಯಾರ್ಥಿಗಳಿಗೆ ಮಾಹಿತಿ ಸಂಗ್ರಹ, ಛಾಯಾಗ್ರಹಣ, ಸಂದರ್ಶನದ ಕ್ಷೇತ್ರ ತರಬೇತಿಗಾಗಿ ವಿವಿಧ ಪ್ರದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಯಿತು.  ಯಲ್ಲಾಪುರ ತರಕಾರಿ ಮಾರುಕಟ್ಟೆ, ಬೇಡ್ತಿ ಕುಡಿವ ನೀರಿನ ಯೋಜನೆ, ಕಿರವತ್ತಿ ನಾಟಾ ಸಂಗ್ರಹಾಲಯ ವೀಕ್ಷಿಸಿ ಮಾಹಿತಿ ಸಂಗ್ರಹಿಸಲಾಯಿತು. ವನವಾಸಿ ಬದುಕು ಹಾಗೂ ಅಭಿವೃದ್ಧಿಯ ಅಧ್ಯಯನಕ್ಕೆ ಯಲ್ಲಾಪುರದ  ಹೊಸಳ್ಳಿ ಮತ್ತು ಕ್ವಾಣಮಡ್ಡಿಯ ಗೌಳಿ ವಾಡಾಗಳಿಗೆ ತಂಡ ಭೇಟಿ ನೀಡಿತು. ಫೆಬ್ರವರಿ 6ರಿಂದ 8ರವರೆಗೆ ಸತತ ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಪತ್ರಿಕೋದ್ಯಮ ಕಾಲೇಜು ವಿದ್ಯಾರ್ಥಿಗಳು, ಹವ್ಯಾಸಿ ಬರಹಗಾರರು ಸೇರಿದಂತೆ 21 ಜನ ಭಾಗವಹಿಸಿದ್ದರು. ಡಾ.ನಿರಂಜನ ವಾನಳ್ಳಿ, ಡಾ.ಜಗದೀಶ್ ಕೊಪ್ಪ, ಅಡ್ಡೂರು ಕೃಷ್ಣರಾವ್, ಪೂರ್ಣಪ್ರಜ್ಞ ಬೇಳೂರು, ಶಿವಾನಂದ ಕಳವೆ ಸಂಪನ್ಮೂಲವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು.


0 comments:

Post a Comment