Sunday, September 10, 2017

ಮಣ್ಣಿಗೆ ದನಿಯಾಗುವ ತುತ್ತಿನ ಕತೆಗಳು

ಉದಯವಾಣಿಯ - ನೆಲದ ನಾಡಿ - ಅಂಕಣ / 6-7-2017

             1863. ಅಮೇರಿಕಾದಲ್ಲಿ ಯುದ್ಧದ ಕಾರ್ಮೋಡ. ಅದೇ ಸಮಯಕ್ಕೆ ಹತ್ತಿಯ ಬೇಡಿಕೆ ಏರಿತ್ತು. ರೈತರು ಆಕರ್ಷಕ ಬೆಲೆಯಿಂದ ಉತ್ತೇಜಿತರಾದರು. ಆಹಾರ ಧಾನ್ಯಗಳನ್ನು ಮರೆತರು. ಹಣದ ಮೋಹದಿಂದ ಹತ್ತಿಯನ್ನು ಬೆಳೆದರು. ಕಿಸೆ ಭರ್ತಿಯಾಯಿತು. ಊಟದ ಬಟ್ಟಲು ಬರಿದಾಯಿತು. ಇತ್ತ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ(ಕಾನಡಾ ಜಿಲ್ಲೆ)ಯ ಕಾಡುಗಳಲ್ಲಿ ಬಿದಿರು ಹೂವರಳಿಸಿತ್ತು! ಬಡವರು ಬಿದಿರಕ್ಕಿ ತಿಂದು ಹೊಟ್ಟೆ ತುಂಬಿಸಿಕೊಂಡರು. ಹಲವಾರು ಮಂದಿ ವಲಸೆ ಬಂದರು.
            1876-77. ಕನ್ನಾಡಿನಲ್ಲಿ ಭೀಕರ ಬರ. ತುತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಹುಣಸೆ ಎಲೆ, ವಳಮುಚ್ಚಗ, ತೊಡಸಿ ಎಲೆ, ಹಿಟಗೋನಿ ಹುಲ್ಲು ಮುಂತಾದ ಕಾಡುತ್ಪನ್ನಗಳು ಆಹಾರವಾದುವು. ಹಳ್ಳಿಗಳಲ್ಲಿ ಗಂಜಿ ಕೇಂದ್ರಗಳು ತೆರೆಯಲ್ಪಟ್ಟವು. ಮಾನಕ್ಕೆ ಅಂಜುತ್ತಿದ್ದ ಕಾಲಘಟ್ಟವದು. ಊಟ ಲಭ್ಯವೆಂದು ಸರಕಾರಿ ಉದ್ಯೋಗಕ್ಕೆ ಸೇರಿಕೊಂಡರೆ ತಮ್ಮ ಮಾನ ಹೋಗುತ್ತದೆಂಬ ನಂಬುಗೆ. ಹಾಗಾಗಿ ಹಲವರು ಮನೆಯಲ್ಲಿ ಉಳಿದು ಹಸಿವೆಯಿಂದ ಸತ್ತರಂತೆ! ಬರವನ್ನು ತಾಳಿಕೊಳ್ಳದೆ ಅನೇಕರು ಗುಳೆ ಹೋದವರು ಮತ್ತೆ ಮರಳಲಿಲ್ಲ. ವಿಜಾಪುರದಲ್ಲಿ ಅಜೂಬಾಜು ಎರಡುಕಾಲು ಲಕ್ಷ ಮತ್ತು ಬೆಳಗಾವಿಯಲ್ಲಿ ಒಂದೂವರೆ ಲಕ್ಷದ ಹತ್ತಿರ ಜನರು ಸಾವನ್ನಪ್ಪಿದ್ದರು. ಆ ಕಾಲದಲ್ಲಿ  ದೇಶದ ಉತ್ತರ ಜಿಲ್ಲೆಗಳಲ್ಲಿ ಆಹಾರ ದಾನ್ಯಗಳ ಸಂಗ್ರಹಗಳಿದ್ದುವು. ಅವನ್ನು ಇಲ್ಲಿಗೆ ಸಾಗಿಸಲು ಸಾರಿಗೆ ಸಮಸ್ಯೆ. ಸೊಲ್ಲಾಪುರದಿಂದ ವಿಜಾಪುರಕ್ಕೆ ತಕ್ಕಡಿಗಳಲ್ಲಿ ಕಾಳುಗಳನ್ನು ಸಾಗಿಸಿದ್ದರು.
           ಮೈಸೂರಿನ ಮುಖ್ಯ ಇಂಜಿನಿಯರ್ ಆಗಿದ್ದ ಮೇಜರ್ ಸ್ಯಾಂಕಿ ರಾಜ್ಯಗಳ ಕೆರೆಗಳಲ್ಲಿರುವ ಹೂಳು ತೆಗೆಯುವುದು, ಕಾಲುವೆಗಳ ದುರಸ್ತಿ ಸಂಬಂಧ 1866ರಲ್ಲಿ ಅಧ್ಯಯನ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದರು. ನಲವತ್ತೆಂಟು ಲಕ್ಷ ರೂಪಾಯಿಯಲ್ಲಿ 19223 ಕೆರೆಗಳ ಹೂಳು ತೆಗೆಯುವ ಯೋಜನೆಯದು. ನೋಡಿ, ಶುರುವಾಯಿತು ಚರ್ಚೆ! ಹೂಳು ತೆಗೆಯುವ ಕೆಲಸ ಇಂಜಿನಿಯರ್ ಇಲಾಖೆಯದ್ದೋ, ಕಂದಾಯ ಇಲಾಖೆಯದ್ದೋ? ಹತ್ತು ವರುಷವಾದರೂ ಇತ್ಯರ್ಥವಾಗಲಿಲ್ಲ. 1876ರಲ್ಲಿ ಬರಗಾಲ ಒಕ್ಕರಿಸಿತು. ಕೆರೆಗಳ ಹೂಳು ತೆಗೆಯಲು ಯೋಜಿಸಿದ ಮೊತ್ತವೆಲ್ಲ ಗಂಜಿಕೇಂದ್ರಕ್ಕೆ ವೆಚ್ಚವಾಯಿತು. ಹಣದ ಕೊರತೆಯಿಂದ ಸ್ಯಾಂಕಿ ವರದಿ ಫೈಲ್ ಸೇರಿತು. ಇಂದಿಗೂ ಕಾವೇರಿ ಕಣಿವೆಯ ಕೆರೆಗಳ ಹೂಳು ತೆಗೆಯುವ ಯೋಜನೆ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಬರಗಾಲವು ಹೇಗೆ ನೀರಾವರಿ ಸುಧಾರಣೆಗೆ ತಡೆಯುಂಟು ಮಾಡಿತ್ತು ಎನ್ನುವುದಕ್ಕೆ ಇದೊಂದು ಉದಾಹರಣೆ.
          ಹೀಗೆ ಪರಿಸರ ಪತ್ರಕರ್ತ ಶಿರಸಿಯ ಶಿವಾನಂದ ಕಳವೆಯವರು ಬರದ ಇತಿಹಾಸವನ್ನು ದಾಖಲಿಸುತ್ತಾರೆ. ಚರಿತ್ರೆಯ ಪುಟ ತೆರೆದರೆ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ತೀವ್ರ ಬರಗಾಲ ಬಂದಿರುವುದು ಕಡಿಮೆ. ಆದರೆ 1805ರ ದಾಖಲೆಯ ಪ್ರಕಾರ ಬರದ ಸೀಮೆಯ ಜನ, ಜಾನುವಾರುಗಳು ಮಲೆನಾಡು ಪ್ರದೇಶಕ್ಕೆ ವಲಸೆ  ಬಂದಿರುವುದರಿಂದ ಇಲ್ಲಿ ಆಹಾರ ಸಮಸ್ಯೆಯಾಗಿತ್ತೆಂದು ವರದಿ ತಿಳಿಸುತ್ತದೆ. ಆ ವರುಷ ಸುಮಾರು ಮೂರು ಸಾವಿರ ಮಂದಿ ಸಾವನ್ನಪ್ಪಿದ್ದರು. ಬಯಲು ಸೀಮೆಗಳಲ್ಲಿ 1803ರಲ್ಲಿ ಪುಂಡುತನ ಮಿತಿಮೀರಿ ಸಿಕ್ಕಿದ್ದನ್ನು ದೋಚುವ ಪರಿಸ್ಥಿತಿ ನಿರ್ಮಾಣವಾಯಿತು. ಇದೇ ಸಂದರ್ಭಕ್ಕೆ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿ ಬರ ಒಕ್ಕರಿಸಿತು. ಮನುಷ್ಯರ ಆಹಾರವಾಗಿ ರಾಗಿ ಮಾತ್ರ ಅಂದು ಉಳಿಯಿತು
            1853-54ರ 'ಡೌಗಿ ಬರ'ವನ್ನು ಶಿವಾನಂದ ಕಳವೆ ದಾಖಲಿಸುತ್ತಾರೆ. ಈ ಅವಧಿಯಲ್ಲಿ ಜಾನುವಾರುಗಳಿಗೆ ಆಹಾರದ ಬರ. ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿದುವು. ಎಲ್ಲೆಂದರಲ್ಲಿ ಎಲುಬುಗಳ ರಾಶಿ! ಗಾಡಿ ಎಳೆಯುವುದಕ್ಕೆ, ಭೂಮಿಯನ್ನು ಉಳುಮೆ ಮಾಡುವುದಕ್ಕೆ ಎತ್ತುಗಳನ್ನು ಜನರು ನಂಬಿದ್ದ ಕಾಲವದು. ಇದಕ್ಕಿಂತಲೂ ಹಿಂದೆ ಹೋದರೆ, 1791ರಲ್ಲಿ ರಾಜ್ಯವನ್ನು ಡೌಗಿ ಬರ ಕಾಡಿತ್ತು. ಡೌಗಿ ಅಂದರೆ ತಲೆಬುರುಡೆ ಎಂದರ್ಥ. ಹನಿ ಮಳೆ ಸುರಿಯಲಿಲ್ಲ. ಹಳ್ಳಕೊಳ್ಳಗಳು ಒಣಗಿದ್ದುವು. ನೀರಿಗೆ ತತ್ವಾರ. ಹಳ್ಳಕೊಳ್ಳಗಳಲ್ಲಿ ಸಾವನ್ನಪ್ಪಿದವರ ತಲೆ ಬುರುಡೆಗಳು ಕಾಣಿಸುತ್ತಿದ್ದುದರಿಂದ ಡೌಗಿ ಬರವೆಂದು ಇದಕ್ಕೆ ಹೆಸರಾಯಿತು.
               ಇಂತಹ ಬರಗಾಲ ಬಂದಾಗ ಜನ ಏನು ತಿನ್ನುತ್ತಿದ್ದರು ಎನ್ನುವ ಮಾಹಿತಿಯನ್ನು ಬ್ರಿಟಿಷ್ ದಾಖಲೆಗಳಿಂದ ಶಿವಾನಂದ ಮೇಲೆತ್ತಿದ್ದಾರೆ. 1893ರ ಮುಂಬೈ ಇಲಾಖೆಗೆ ಸೇರಿದ ಗೆಝೇಟಿಯರಿನಲ್ಲಿ ಬರಗಾಲದ ಆಹಾರದ ದೊಡ್ಡ ಪಟ್ಟಿಯಿದೆ. ಕಾಡಿನ ಎಲೆ, ಚಿಗುರು, ಹಣ್ಣು, ಗೆಡ್ಡೆಗಳನ್ನು ತಿಂದು ಬದುಕಿದ ಮಾಹಿತಿಯಿದೆ. ಈಗಲೂ ಬರ ನಮ್ಮನ್ನು ಕಾಡುವುದಿದೆ. ರಸ್ತೆ, ಸಾರಿಗೆ, ಆರೋಗ್ಯ, ಶಿಕ್ಷಣ ಸೌಲಭ್ಯವಿರುವ ಈ ಕಾಲದಲ್ಲಿ ಬರದ ಕಷ್ಟದ ಅನುಭವ ಕಡಿಮೆ.
ಶಿವಾನಂದ ಕಳವೆ ಪರಿಸರ ಪತ್ರಕರ್ತ. ಕಾಲಿಗೆ ಚಕ್ರ ಕಟ್ಟಿಕೊಂಡು ಕನ್ನಾಡಿನಾದ್ಯಂತ ಓಡಾಡುವವರು. ಕೃಷಿ ಪ್ರವಾಸವನ್ನು ದೀಕ್ಷೆಯ ತರಹ ಅನುಷ್ಠಾನಿಸುವವರು. ಹೊಲ, ಹಳ್ಳಿಗಳಿಗೆ ಭೇಟಿ ನೀಡುತ್ತಾರೆ. ರೈತರ ಜತೆ ಕುಳಿತು ಮಾತನಾಡುವಾಗ ಗಮನಿಸಿದ ಹಲವಾರು ವಿಚಾರಗಳನ್ನು ದಾಖಲಿಸುತ್ತಾರೆ. ಸುಕೊ ಬ್ಯಾಂಕ್ ಪ್ರಾಯೋಜಿಸುತ್ತಿರುವ ಸುಕೃತ ಕೃಷಿ ಪ್ರಶಸ್ತಿ ಸಮಿತಿಯ ಸಂಚಾಲಕ. ಪ್ರಶಸ್ತಿ ಆಯ್ಕೆ ಹಿನ್ನೆಲೆಯಲ್ಲಿ ನಾಡಿನ ಕೃಷಿ ಸಾಧಕರನ್ನು ಭೇಟಿ ಮಾಡುತ್ತಾ, ಅವರ ಬದುಕನ್ನು ದಾಖಲಿಸುವುದರೊಂದಿಗೆ, ಕನ್ನಾಡಿನ ಕೃಷಿ ಬದುಕನ್ನೂ ಅಕ್ಷರಕ್ಕಿಳಿಸುವ ಯತ್ನ. ಅವರ ಎರಡು ಕರ್ನಾಟಕ ಕೃಷಿ ಪ್ರವಾಸ ಕಥನ 'ಮಣ್ಣಿನ ಓದು ಮತ್ತು ಒಂದು ತುತ್ತಿನ ಕತೆ'ಯಲ್ಲಿ ಕೃಷಿ ನೋಟಗಳು, ಕೃಷಿ ಬದುಕಲ್ಲದೆ ತನ್ನ ಸಂಗ್ರಹಿತ ದಾಖಲೆಗಳತ್ತ ನೋಟ ಹರಿಸಿದ್ದಾರೆ. (ಪ್ರಕಾಶನ - ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ) ಕನ್ನಾಡಿನ ನೆಲದ ಇತಿಹಾಸಗಳ ಅಧ್ಯಯನಕ್ಕೆ ಸಹಕಾರಿ.
                 ಶಿವಾನಂದರ ಸಂಗ್ರಹದಲ್ಲಿ ಕೃಷಿ ಕಥನಗಳಲ್ಲದೆ ಕೃಷಿ ಸಂಬಂಧಿ ದಾಖಲೆಗಳಿವೆ. ಅವರ ಬಹುತೇಕ ಲೇಖನಗಳಲ್ಲಿ ಉಲ್ಲೇಖವಾಗುವ ದಾಖಲೆಗಳು ಲೇಖನಗಳಿಗೆ ಪುಷ್ಟಿಯನ್ನು ಕೊಟ್ಟಿವೆ. ಉದಾ: ಕೆನರಾ ಜಿಲ್ಲೆಯ ಕಲೆಕ್ಟರ್ ಎಚ್.ಡಿ.ಭಾಸ್ಕರವಿಲ್ಲೆ 1928ರಲ್ಲಿ ಬರೆದ ಸರ್ವೆ ಸೆಟ್ಲ್ಮೆಂಟ್ ವರದಿ - 'ಕೃಷಿಕರ ಸರ್ವಸಾಧಾರಣ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಬಹುತೇಕ ಮಂದಿ ಸಾಲದಲ್ಲಿದ್ದಾರೆ. ಈ ಸಾಲವೇ ಕೃಷಿಯ ಹೀನಾವಸ್ಥೆಗೆ ಕಾರಣವಾಗಿದೆ. ಸಹಕಾರಿ ಸಂಘಗಳ ಸ್ಥಾಪನೆಯೇ ಇದಕ್ಕಿರುವ ದಾರಿ'. ಖಾಸಗಿ ವ್ಯಾಪಾರಿ, ದಲ್ಲಾಳಿಗಳಿಂದ ಬೆಳೆಗಾರರನ್ನು ರಕ್ಷಿಸುವುದು ಅಂದಿನ ಪ್ರಮುಖ ಸವಾಲಾಗಿತ್ತು.
                ದಾಖಲೆಗಳು ಭೂತಕಾಲದ ಒಂದು ಘಟನೆಯಾಗಿಯೋ, ಸಾಕ್ಷಿಯಾಗಿಯೋ ಒದಗುತ್ತದೆ. ಅದೇ ರೀತಿ ಒಂದು ಹಳ್ಳಿಯ ನೀರಿನ ಚಿತ್ರಣಗಳನ್ನು ಅಂಕಿಅಂಶ ಸಹಿತ ಮುಂದಿಡುತ್ತಾರೆ ಕಳವೆ. ರಾಣಿಬೆನ್ನೂರಿನ ಜೋಯಿಸರ ಹರಳಹಳ್ಳಿಯು ಸುಮಾರು ಐದು ಸಾವಿರ ಜನಸಂಖ್ಯೆ ಇರುವ ಹಳ್ಳಿ. ಏಳುನೂರು ಮನೆಗಳಿವೆ. 1974ರ ಮಾರ್ಚ್ 7ರಂದು ಹಳ್ಳಿಯಲ್ಲಿ ಮೊದಲ ಕೊಳವೆ ಬಾವಿಯ ಕೊರೆತ. ಎಂಭತ್ತೈದು ಅಡಿ ಆಳದ ಬಾವಿಗೆ ಐದು ಸಾವಿರದ ಒಂಭೈನೂರು ರೂಪಾಯಿ ವೆಚ್ಚವಾದ ಬಗ್ಗೆ ಕೃಷಿಕ ಸಂಗಪ್ಪ ಬಣಕಾರ್ ದನಿಯಾಗುತ್ತಾರೆ. ಅದೇ ಜಾಗದಲ್ಲಿ ಇಂದೇನಾದರೂ ಬಾವಿ ಕೊರೆದರೆ ಮೂನ್ನೂರು ಅಡಿಯಲ್ಲಿ ನೀರು ಸಿಗುವುದು ಸಂಶಯ. ಈ ಹಳ್ಳಿಯಲ್ಲಿ ಸುಮಾರು ಆರುನೂರಕ್ಕೂ ಮಿಕ್ಕಿ ಕೊಳವೆ ಬಾವಿಗಳಿವೆ. ಇವುಗಳಲ್ಲಿ ತೊಂಭತ್ತರಲ್ಲಿ ಮಾತ್ರ ನೀರಿದೆ! ಇಪ್ಪತ್ತೈದು ಮೂವತ್ತು ಕೊಳವೆ ಬಾವಿಗಳನ್ನು ಕೊರೆಸಿ ನಿಟ್ಟುಸಿರು ಬಿಟ್ಟವರಿದ್ದಾರೆ.
               1983-86ರಲ್ಲಿ ಈ ಹಳ್ಳಿಯು ನೀರಿನ ಬರವನ್ನು ಎದುರಿಸಿತ್ತು. ಇಲಾಖೆಯು ಸತವಾಗಿ ನಾಲ್ಕು ವರುಷ ಟ್ಯಾಂಕರ್ ನೀರನ್ನು ಪೂರೈಸಿತ್ತು. ಮೂರು ದಶಕಗಳಿಂದ ಬೀಜೋತ್ಪಾದನೆಗೆ ಖ್ಯಾತಿ ಪಡೆದ ರಾಣಿಬೆನ್ನೂರಿನ ಈ ಸೀಮೆಯು ವಿವಿಧ ಕಂಪನಿಗಳ ಆಡುಂಬೊಲ. ಇದೊಂದೇ ಹಳ್ಳಿಯಲ್ಲಿ ಹದಿನೈದಕ್ಕೂ ಮಿಕ್ಕಿ ಗ್ರೀನ್ಹೌಸ್ಗಳಿವೆ. ಟೊಮೆಟೊ, ಹೀರೆ, ಬದನೆ, ತುಪ್ಪದಹೀರೆ, ಹಾಗಲ, ಕುಂಬಳ, ಮೆಣಸು, ಚೆಂಡುಹೂಗಳ ಬೀಜೋತ್ಪಾದನೆ ನಡೆದಿದೆ. ಹತ್ತಿ, ಗೋವಿನ ಜೋಳದ ವಾಣಿಜ್ಯ ಬೆಳೆಗಳು ಪ್ರವೇಶಿಸಿವೆ. ದಾರಿಯಲ್ಲಿ ನೀರಿನ ಒರತೆಯಿರುವ ಈ ಹಳ್ಳಿಗೆ ನೀರಿನ ದುಃಸ್ಥಿತಿ ಹೇಗೆ ಬಂತು ಎನ್ನುವುದಕ್ಕೆ ಅಲ್ಲಿನ ಬೆಳೆಗಳು ದೃಷ್ಟಾಂತವಾಗಿ ಸಿಗುತ್ತದೆ.
            ಶಿವಾನಂದ ಕಳವೆ ಹಳ್ಳಿಯ ಕತೆಗಾಗಿ ಓಡುತ್ತಿದ್ದಾರೆ. ಒಂದೊಂದು ಕತೆಯನ್ನು ಮಾತುಕತೆಯಲ್ಲಿ ಹೆಣೆಯುತ್ತಾರೆ. ಅದರಲ್ಲಿ ಕೃಷಿ ಬದುಕು, ನೋವು, ಸುಖ, ಅಭಿವೃದ್ಧಿ, ಸಾಮಾಜಿಕ ಕಳಕಳಿಗಳಿವೆ. ಮುಖ್ಯವಾಗಿ ಹಳ್ಳಿಗೆ ದನಿಯಾಗುತ್ತಾರೆ. ಊಟದ ಬಟ್ಟಲಿನಿಂದ ಕೃಷಿಯ ವರೆಗೆ ವಿಷಯಗಳನ್ನು ಅರಸಿ, ಅಕ್ಷರ ಕಟ್ಟುವುದು ಅವರಿಗೆ ಸುಲಲಿತ. ಅದು ಮಣ್ಣು ಕಲಿಸಿದ ಜ್ಞಾನ.


0 comments:

Post a Comment