Sunday, November 18, 2018

ಜಿಹ್ವಾಚಾಪಲ್ಯ ವೃದ್ಧಿಸುವ ರುಚಿವರ್ಧಕ


           ಬಸ್ಸಿನ ಮುಂದಿನ ಆಸನದಲ್ಲಿದ್ದ ಅಡುಗೆ ವಿಶೇಷಜ್ಞರ ಮಾತಿಗೆ ಕಿವಿಯೊಡ್ಡಬೇಕಾದ ಪ್ರಮೇಯ ಬಂತು. ಅವರಿಬ್ಬರು ದೊಡ್ಡ ಸಮಾರಂಭಗಳ ಅಡುಗೆಯ ಜವಾಬ್ದಾರಿಯನ್ನು ನಿಭಾಯಿಸಿದ ಅನುಭವಿಗಳು. ಒಬ್ಬರೆಂದರು, ಮೊನ್ನೆ ಎರಡು ಸಾವಿರ ಮಂದಿಯ ಅಡುಗೆಗೆ ಶಹಬ್ಬಾಸ್ ಸಿಕ್ಕಿದ್ದೇ ಸಿಕ್ಕಿದ್ದು. ಯಾವಾಗಲೂ ಹಾಕುವುದಕ್ಕಿಂತ ಸ್ವಲ್ಪ ಹೆಚ್ಚೇ ಟೇಸ್ಟ್ ಮೇಕರ್ ಹಾಕಿದ್ದೆ, ಎಂದಾಗ ಇನ್ನೊಬ್ಬರು ದನಿ ಸೇರಿಸಿದರು, ಅಂಗಡಿಯಲ್ಲಿ ಟೇಸ್ಟ್ ಮೇಕರ್ ಅಂತ ಕೇಳಿದ್ರೆ ಆಯಿತು, ಏನೋ ಬಿಳಿ ಪುಡಿ ಕೊಡ್ತಾರೆ. ಅದು ಎಂತಾದ್ದು ಅಂತ ಗೊತ್ತಿಲ್ಲ. ಈಚೆಗೆ ಎಲ್ಲರೂ ಹಾಕ್ತಾರೆ, ನಾನ್ಯಾಕೆ ಹಾಕಬಾರ್ದು? ಆ ಪುಡಿ ಹಾಕಿದರೆ ಸಾರು, ಸಾಂಬಾರಿನ ರುಚಿಯೇ ಬೇರೆ.
          ದಂಗಾಗುವ ಸರದಿ ನನ್ನದು. ಹೋಟೆಲ್, ಉದ್ಯಮಗಳಲ್ಲಿ ರುಚಿವರ್ಧಕವನ್ನು ಬಳಸುವುದನ್ನು ಕಿವುಡಾಗಿ, ಕುರುಡಾಗಿ ಒಪ್ಪಿಕೊಂಡಾಗಿದೆ. ಅಡುಗೆ ವಿಶೇಷಜ್ಞರು ಅಪರೂಪಕ್ಕೆ ಬಳಸುತ್ತಾರೆನ್ನುವುದು (ಎಲ್ಲರೂ ಅಲ್ಲ) ಇಂದಷ್ಟೇ ತಿಳಿಯಿತು. ಸಮಾರಂಭಗಳ ಸಂಖ್ಯೆ ಅಧಿಕವಾಗುತ್ತಾ ಬಂದ ಹಾಗೆ ಸೂಪಜ್ಞರಲ್ಲೂ ತಮ್ಮದೇ ಕೈರುಚಿ ಮೇಲುಗೈಯಾಗಬೇಕೆನ್ನುವ ಪೈಪೋಟಿ ಸಹಜ. ಒಂದು ಸಮಾರಂಭದಲ್ಲಿ ಅಡುಗೆ ಸೈ ಎನಿಸಿದರೆ ಮತ್ತೊಂದು ಅಡುಗೆ ಹುಡುಕಿಕೊಂಡು ಬರುತ್ತದೆ. ಆದರೆ ಈ ವಿಚಾರವು ಸಮಾರಂಭದ ಯಜಮಾನನಿಗೆ ಗೊತ್ತಿದೆಯೋ ಇಲ್ವೋ.
          ಇದು ರುಚಿವರ್ಧಕದ ಮಾತಾಯಿತು. ತರಕಾರಿ, ಜೀನಸುಗಳಿಗೆ ಸಹಜವಾಗಿ ಮಾರುಕಟ್ಟೆಯನ್ನು ಅವಲಂಬಿಸಬೇಕು. ಮಾರುಕಟ್ಟೆಯ ತರಕಾರಿ ಅಂದಾಗ ಅದು ರಾಸಾಯನಿಕದಲ್ಲಿ ಮಿಂದೆದ್ದು ಬಂದವುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಕ್ಕಿಯಿಂದ ಉಪ್ಪಿನ ತನಕ ಸಾಚಾತನಕ್ಕೆ ಪ್ರತ್ಯೇಕ ಪರೀಕ್ಷೆ ಬೇಕಾಗುವ ಕಾಲಮಾನ. ಇವುಗಳೊಂದಿಗೆ ಉದರಕ್ಕಿಳಿಯುವ ಖಾದ್ಯಗಳಿಗೂ ಈಗ ರುಚಿವರ್ಧಕದ ಸ್ಪರ್ಶ!  ಕಾರ್ಬೈಡ್ ಹಾಕಿ ದಿಢೀರ್ ಹಣ್ಣು ಮಾಡಿದ ಬಾಳೆಹಣ್ಣುಗಳು ಭೋಜನದೊಂದಿಗೆ ಬೋನಸ್. ಉಚಿತವಾಗಿ ಕೊಡುವ ಕೃತಿ ಒಳಸುರಿಗಳಿಂದ ತಯಾರಿಸಿದ ಐಸ್ಕ್ರೀಂನಲ್ಲಿ ಏನೆಲ್ಲಾ ಇವೆಯೋ? ಹಾಗೆಂತ ರುಚಿವರ್ಧಕ ಬಳಸದೆ ತಮ್ಮ ಅನುಭವ ಮತ್ತು ಕೈಗುಣದಿಂದ ಶುಚಿರುಚಿಯಾದ ಭೋಜನವನ್ನು ಸಿದ್ಧಪಡಿಸುವ ವಿಶೇಷಜ್ಞರನ್ನು ನಾವೆಷ್ಟು ಗೌರವಿಸಿದ್ದೇವೆ?
          ಒಂದೆರಡು ವರುಷದ ಹಿಂದೆ ಮ್ಯಾಗಿ ನಿಷೇಧದ ಕಾವು ದೇಶವಲ್ಲ, ವಿಶ್ವಾದ್ಯಂತ ಕಂಪನ ಮೂಡಿಸಿತ್ತು. ಅದರಲ್ಲಿ ಅಗತ್ಯಕ್ಕಿಂತ ಹೆಚ್ಚಿರುವ ಸೀಸ, ರುಚಿವರ್ಧಕವು ಉದ್ಯಮದ ಅಡಿಗಟ್ಟನ್ನು ಅಲ್ಲಾಡಿಸಿದ್ದುವು.  ಕೋಟಿಗಟ್ಟಲೆ ಉತ್ಪನ್ನ ಬೆಂಕಿಗಾಹುತಿಯಾಗಿದೆ. ಜಾಹೀರಾತುಗಳ ಮೂಲಕ ನಂಬಿಸಿದ ಸಂಸ್ಥೆಯು ವಿಶ್ವಾಸ ಕಳೆದುಕೊಂಡಿದೆ. ತಿನ್ನುವ ಎಲ್ಲಾ ವಸ್ತುಗಳನ್ನು ಸಂಶಯ ದೃಷ್ಟಿಯಿಂದ ನೋಡುವ ಸ್ಥಿತಿ ರೂಪುಗೊಂಡಿದೆ. ಸೇಬು- ದ್ರಾಕ್ಷಿಯೊಳಗಿರುವ ರಾಸಾಯನಿಕ, ಹಾಮರ್ೋನುಗಳ ಕುರಿತು, ಕಲ್ಲಂಗಡಿಗೆ ಇಂಜೆಕ್ಟ್ ಮಾಡುವ ವಿವಿಧ ಮುಖಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಲೇ ಇವೆ. ರಾಸಾಯನಿಕ ಸಿಂಪಡಣೆಗಳ ಕರಾಳ ಮುಖಗಳತ್ತ ವಿವಿಧ ಮಾಧ್ಯಮಗಳು ಸತ್ಯಗಳನ್ನು ಬಿಚ್ಚಿಡುತ್ತಿವೆ. 
          ತಮಿಳುನಾಡಿನಿಂದ ಬರುವ ತರಕಾರಿಗಳಿಗೆ ಕೇರಳ ರಾಜ್ಯವು ಅವಲಂಬಿತ. ನಿರ್ವಿಷ ಆಹಾರದ ಕುರಿತು ಕೇರಳದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮತ್ತು ಖಾಸಗಿ ಸಂಸ್ಥೆಗಳು ಮಾಡುತ್ತಾ ಇವೆ. ಆರೋಗ್ಯ ಕಾಳಜಿಯಿದ್ದ ಮಂದಿ ಸಾವಯವಕ್ಕೆ ಬದಲಾಗುತ್ತಿದ್ದಾರೆ. ಸ್ವಾವಲಂಬನೆಯತ್ತ ಹೊರಳುತ್ತಿದ್ದಾರೆ. ಕೈತೋಟಗಳನ್ನು ಎಬ್ಬಿಸುವ ಮನಃಸ್ಥಿತಿ ನಿರ್ಮಾಣವಾಗುತ್ತಿದೆ. ಮಾವು, ಹಲಸು, ಗೆಡ್ಡೆ, ಎಲೆಗಳು ತರಕಾರಿಯಾಗಿ ಉದರ ಸೇರುತ್ತಿದೆ. ರಾಸಾಯನಿಕದ ಪರಿಣಾಮ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ಹೊರ ರಾಜ್ಯಗಳಿಂದ ತರಕಾರಿಯನ್ನು ತರಿಸದೇ ಇರಲು ಕೆಲವು ವ್ಯಾಪಾರಿಗಳು ನಿರ್ಧರಿಸಿದ್ದಾರೆ! 
          ಸಾವಯವದ ಅರಿವು ಪ್ರಚಾರದಲ್ಲಷ್ಟೇ ಉಳಿದಿವೆ! ಅನುಷ್ಠಾನ ತೀರಾ ಕಡಿಮೆ. ಸಾವಯವದ ಸಾರ ಮನದೊಳಗೆ ಇಳಿಯುವುದಂತೂ ನಿಧಾನ. ಆಹಾರದಲ್ಲಿ ವಿಷದ ಪ್ರಮಾಣಗಳು ಪತ್ತೆಯಾಗುತ್ತಲೇ ಇದ್ದಂತೆ ನಿರ್ವಿಷ ಆಹಾರಗಳ ಹುಡುಕಾಟದತ್ತ, ಬೆಳೆಯುವತ್ತ ಯೋಜನೆ, ಯೋಚನೆಗಳು ಹೆಜ್ಜೆಯೂರುತ್ತಿವೆ.  ಕೆಲವು ಸಂಘಟನೆಗಳು ನಗರಗಳಲ್ಲಿ ಸಾವಯವದ ಮಹತ್ವ, ನಿರ್ವಿಷ ಆಹಾರದ ಅಪಾಯಗಳತ್ತ ಅರಿವು ಚೆಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿವೆ. ಪಾಲಿಶ್ ಮಾಡದ ಅಕ್ಕಿಯನ್ನು ಅರಸಿ ಬರುವ, ವಿಳಾಸ ಕೇಳುವ ಅಮ್ಮಂದಿರು ಎಚ್ಚರವಾಗಿದ್ದಾರೆ.
          ವಿವಿಧ ರೂಪಗಳಲ್ಲಿ ರಾಸಾಯನಿಕಗಳನ್ನು ಗೊತ್ತಿಲ್ಲದೆ ಬದುಕಿನಂಗವಾಗಿ ಸ್ವೀಕರಿಸಿದ್ದೇವೆ. ಗೊತ್ತಾದ ಬಳಿಕ ದೂರವಿರುವುದರಲ್ಲಿ ಆರೋಗ್ಯ ಭಾಗ್ಯ. ತಕ್ಷಣ ಎಲ್ಲವನ್ನೂ ವಜ್ರ್ಯ ಮಾಡಲಸಾಧ್ಯ. ಹಂತ ಹಂತವಾಗಿ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಒಂದಷ್ಟು ದಿವಸ ಹೆಚ್ಚು ಬಾಳಬಹುದೇನೋ? ನಿರ್ವಿಷವಾಗಿ ಕೃಷಿ ಉತ್ಪನ್ನಗಳನ್ನು ಬೆಳೆದುಕೊಡುವ ಕೃಷಿಕರನ್ನು ಪ್ರೋತ್ಸಾಹಿಸೋಣ.

 ಸುದ್ದಿ ಬಿಡುಗಡೆ / ಊರುಸೂರು | 14-10-2018

0 comments:

Post a Comment