Saturday, March 28, 2009

ಸ್ಮಶಾನದಲ್ಲಿ ಒಂದು ಸಂಜೆ.....




ಮನೆಯೊಂದರಲ್ಲಿ ವ್ಯಕ್ತಿಯೊಬ್ಬನ ಮರಣವಾಗುತ್ತದೆ. 289201ಕ್ಕೆ ದೂರವಾಣಿ ಕರೆ ಬರುತ್ತದೆ. ಕೆಲವೇ ನಿಮಿಷದಲ್ಲಿ ಅಂಬುಲೆನ್ಸ್ ಪ್ರತ್ಯಕ್ಷ. ಶವದೊಂದಿಗೆ ಬಂಧುಗಳು ಸ್ಮಶಾನಕ್ಕೆ. ಶವಸಂಸ್ಕಾರದ ಎಲ್ಲಾ ಪರಿಕರಗಳು ಸಿದ್ಧವಾಗಿರುತ್ತವೆ. ತಾಸಿನೊಳಗೆ ಯಾವುದೇ ಶ್ರಮವಿಲ್ಲದೆ ಶವದಹನ ನಡೆದು, ಸಂಬಂಧಪಟ್ಟ ಬಂಧುಗಳು ನಿಗದಿತ ಶುಲ್ಕ ಪಾವತಿಸಿ ನಿರಾಳವಾಗಿ ಹೊರನಡೆಯುತ್ತಾರೆ.
ಇದು ಗದಗಿನ ಹುಲಕೋಟಿಯ ಸ್ಮಶಾನ ವ್ಯವಸ್ಥೆಯೊಂದರ ಒಂದು ಮುಖ. ಸ್ಮಶಾನವೆಂದಾಗ - ಬೆಳ್ಳನೆಯ ಉಡುಗೆಯ ಆಕೃತಿ, ಸುರಳಿ ಸುರುಳಿಯಾಗಿ ಸುತ್ತುವ ಧೂಮ, ತಕ್ಷಣ ಬಿರುಗಾಳಿ ಎದ್ದಾಗ ಢೀ ಕೊಡುವ ಮರಗಳು, ಬಿದ್ದಿರುವ ಎಲುಬಿನ ಚೂರು, ನಗುತ್ತಿರುವ ತಲೆಬುರುಡೆ, ಹಿನ್ನಲೆಯಲ್ಲಿ ಕೀರಲು ದನಿ....ಇದು ನಮ್ಮ ಸಿನಿಮಾಗಳು, ಕಥೆಗಳು ಬಿಂಬಿಸುವ ದೃಶ್ಯ.
ಆದರೆ ಹುಲಕೋಟಿಯಲ್ಲಿರುವುದು ಸ್ಮಶಾನವಲ್ಲ! ಮುಕ್ತಿವನ. ಇದರ ಹಿಂದೆ ನಡೆದಿದೆ, ಒಳ್ಳೆಯ ಮನಸ್ಸಿನ ರೂಪೀಕರಣ. ನಿಜಾರ್ಥದ ಭಾವ್ಯೆಕ್ಯ ಐದು ವರುಷ ಹಿಂದೆ, ಮುಕ್ತಿವನಕ್ಕಾಗಿ ಜಾಗ ಗುರುತುಮಾಡಿದಾಗ ಅದರ ಒಂದು ಪಾಶ್ರ್ವದಲ್ಲಿತ್ತು, ಮುಸ್ಲಿಂ ಬಾಂಧವರ ಗೋರಿಗಳು. ಉದ್ದೇಶಿತ ಮುಕ್ತಿವನಕ್ಕಾಗಿ ವಿನ್ಯಾಸ ರೂಪಿತವಾದಾಗ, ಈ ಗೋರಿಗಳನ್ನು ಮತ್ತೊಂದು ಪಾಶ್ರ್ವಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಬಂದಿತ್ತು. ಮುಸ್ಲೀಂ ಬಾಂಧವರು ಇದನ್ನು ಒಪ್ಪಿಯಾರೇ? ಇದು ಸಾಧ್ಯವೇ? ಎಂಬ ಪ್ರಶ್ನೆ ಎದುರಾದಾಗ ಉತ್ತರ ಸಿಕ್ಕದ ಕ್ಷಣಗಳಿದ್ದುವು ಮೋಹನ್ ದುರಗಣ್ಣನವರ್ ನೆನಪಿಸಿಕೊಳ್ಳುತ್ತಾರೆ.
ಮುಕ್ತಿವನದ ಕಲ್ಪನೆಯನ್ನು ತಿಳಿಸುವ ಪ್ರಯತ್ನ. ಅದಕ್ಕಾಗಿ ಮನೆಭೇಟಿ. ಹಿರಿಯರ ಒಪ್ಪಿಗೆ. ಅಲ್ಲಿಗೆ ಬೆಟ್ಟದಂತಹ ಸಮಸ್ಯೆ ಹತ್ತಿಯಂತೆ ಹಗುರವಾಯಿತು. ಸಂಬಂಧಪಟ್ಟ ಬಂಧುಗಳೇ ಗೋರಿಗಳನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಅಲ್ಲದೆ ಮುಂದೆ ಶವ ಹೂತಾಗ, ಗೋರಿ ಕಟ್ಟದಿರಲೂ ನಿಶ್ಚಯಿಸಿದರು ಎನ್ನುತ್ತರೆ ಮೋಹನ್.
ಒಳಹೊಕ್ಕಾಗ ಬಲಗಡೆಗೆ ವ್ಯವಸ್ಥಿತವಾಗಿ ರೂಪಿತವಾಗಿದೆ, ವಿಶಾಲ ಪ್ರಾರ್ಥನಾ ಸ್ಥಳ. ಇದು ಮುಸ್ಲಿಂ ಸಮುದಾಯಕ್ಕೆ ಮೀಸಲು. ಅದರೆದುರೇ ಶವ ಹೂಳುವ ಪ್ರಕ್ರಿಯೆಗೂ ಸ್ಥಳ. ದ್ವಾರದಾಟಿ ಎಡಬದಿಗೆ ತಿರುಗಿದರೆ ಕಾಣುವುದು ಉದ್ಯಾನವನ! ಅದರೊಳಗಿದೆ ದಹನದ ವ್ಯವಸ್ಥೆ. ನಿಜಕ್ಕೂ ಇದೊಂದು ಬಹುದೊಡ್ಡ ಆದರ್ಶ. ಮನುಷ್ಯ-ಮನುಷ್ಯರೊಳಗೆ ನಂಬುಗೆ ವಿಶ್ವಾಸಗಳು ದೂರವಾಗುತ್ತಿರುವ ಈ ದಿನಗಳಲ್ಲಿ ಹುಲಕೋಟಿಯ ಮುಸ್ಲಿಂ ಬಾಂಧವರ ಅನ್ಯೋನ್ಯತೆ ಒಂದು ರಾಷ್ಟ್ರೀಯ ಮಾದರಿ.
ಹುಲಕೋಟಿ - ಹತ್ತು ಸಾವಿರ ಜನಸಂಖ್ಯೆಯಿರುವ ಚಿಕ್ಕ ಊರು. ಮುಕ್ತಿವನವು ಹಿಂದೂ, ಮುಸ್ಲಿಂ ಸಮುದಾಯಗಳಿಗಿರುವ ಜಂಟಿ ಸ್ಮಶಾನ. ಶವವನ್ನು ಸುಡುವ, ಹೂಳುವ ವ್ಯವಸ್ಥೆ ಇಲ್ಲಿನ ವಿಶೇಷ. ಮುಕ್ತಿವನದ ಕಣಕಣದಲ್ಲಿ ಹುಲಕೋಟಿಯ ಪ್ರತೀ ಮನೆಯ ದೇಣಿಗೆಯಿದೆ. ಹತ್ತು ರೂಪಾಯಿಯಿಂದ ಇಪ್ಪತ್ತೈದು ಸಾವಿರದ ತನಕವೂ ಸ್ವ ಇಚ್ಚೆಯಿಂದ ದೇಣಿಗೆ ನೀಡಿದ್ದಾರೆ.
ಮೊದಲಿಗೆ ವ್ಯಕ್ತಿಯ ಮರಣ ಸಹಜವೋ, ಅಸಹಜವೋ ಎಂಬ ವಿಚಾರಣೆ! ಅಸಹಜವಾದರೆ ಹೇಗೆ, ಸಂಬಂಧಪಟ್ಟ ಕಡತಗಳ ಪರಿಶೀಲನೆ. ದಾಖಲಾತಿ. ನಂತರವಷ್ಟೇ ದಹನಕ್ಕೋ, ಹೂಳಲೋ ಅನುಮತಿ. ಆಯಾಯ ಧರ್ಮದಂತೆ ಅಸ್ತಿ ಸಂಚಯನ. ಅದನ್ನು ಹಾಕಿಡಲು ಬಟ್ಟೆಯ ಚೀಲ. ಶವವನ್ನು ದಹನ ಮಾಡುವುದಾದರೆ 600-700 ರೂ. ಶುಲ್ಕ. ಹೂಳುವುದಾದರೆ ರೂ.100. ತೀರಾ ಬಡವರಿಗೆ ಉಚಿತ!
ಎಂಟೆಕ್ರೆ ವಿಸ್ತೀರ್ಣ. ವೃತ್ತಾಕಾರದಲ್ಲಿ ಒಂಭತ್ತು ವಿಭಾಗ ಬರುವಂತೆ ವಿಂಗಡಿಸಿದ್ದಾರೆ. ಒಂದೊಂದು ಭಾಗದಲ್ಲಿ ಗುಲಾಬಿ, ದಾಸವಾಸ, ಕೇಪುಳು, ಅಲಂಕಾರಿಕ ಗಿಡಗಳು.....ಹೂವಿನ ಗಿಡಗಳು. ಮಧ್ಯೆ ಬರ್ನರ್ಗಾಗಿ ಎತ್ತರದ ವೇದಿಕೆ. ಸುತ್ತಲೂ ನಿಂತು ಶವದಹನ ಕಾರ್ಯವನ್ನು ವೀಕ್ಷಿಸಲು ಮೆಟ್ಟಿಲುಗಳು.
35 ಮಂದಿಯ ಸಮಿತಿಯ ಆಡಳಿತ. ಇದರಲ್ಲಿ 25 ಮಂದಿ ಪಂಚಾಯತ್ ಸದಸ್ಯರು. ಮಿಕ್ಕುಳಿದವರು ಗ್ರಾಮಸ್ಥರು. ಮುಕ್ತಿವನ ರಚನೆಯ ಬಹುಪಾಲು ಪಂಚಾಯತ್ ದೇಣಿಗೆ. ಊರಿನವರ ದೇಣಿಗೆಯ ಬಡ್ಡಿಯಿಂದ ನಿರ್ವಹಣೆ. ಒಬ್ಬ ಖಾಯಂ ಅಲ್ಲೇ ವಾಸ್ತವ್ಯ ಹದಿನೈದು ದಿನಗಳಿಗೊಮ್ಮೆ ಸಭೆ.
ಕುಂಡದೊಳಗಿರುವ ಅಲಂಕಾರಿಕ ಸಸ್ಯಗಳು ಮುಕ್ತಿವನದ ಅಂದವನ್ನು ಹೆಚ್ಚಿಸಿದೆ. ಫಕ್ಕನೆ ನೋಡಿದರೆ ಉದ್ಯಾನವನದ ಕಲ್ಪನೆ. ಒಳಹೊಕ್ಕಾಗಲೂ ಗೊತ್ತಾಗದು. ಅಷ್ಟು ನವಿರಾಗಿ ರೂಪಿಸಿದ್ದಾರೆ. ಚಿಕ್ಕ ಚಿಕ್ಕ ಕುಂಡಗಳಲ್ಲಿ ಅಲಂಕಾರಿಕ, ಹೂವಿನ ಸಸಿಗಳು. ಈ ಕುಂಡಗಳನ್ನು ಅಲ್ಲೇ ತಯಾರಿಸಲಾಗುತ್ತದೆ. ಸಸಿಗಳನ್ನು ತಯಾರಿಸುವ ಚಿಕ್ಕ ನರ್ಸರಿಯೂ ಇದೆ. ಇಲ್ಲಿಂದ ತೋಟಗಾರಿಕಾ ಇಲಾಖೆಯವರು ಹಳ್ಳಿಗಳಿಗೆ ವಿತರಿಸುತ್ತಾರೆ. ಇದರಿಂದ ಬರುವ ಚಿಕ್ಕ ಆದಾಯ ಮುಕ್ತಿವನ ಖಾತೆಗೆ.
ನಮ್ಮ ನಡುವೆ ಇರುವ ಸ್ಮಶಾನವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅನಿವಾರ್ಯವಾದಾಗಲಷ್ಟೇ ಅಲ್ಲಿಗೆ ಹೋಗುವುದು ಬಿಟ್ಟರೆ, ಅದರ ಹತ್ತಿರ ಸುಳಿಯಲೂ ಮನಬಾರದು. ಅಂತಹ ವಾತಾವರಣವಿರಕೂಡದು. ಇಲ್ಲಿ ಸುತ್ತುವುದು ಒಂದು ರೀತಿಯ ವಾಕಿಂಗ್ ಆಗಬೇಕು ಎನ್ನುತ್ತಾರೆ ಮೋಹನ್.
ಹಿಂದು-ಮುಸ್ಲಿಂ ಎಂಬ ಬೇಧಗಳಿಂದ ಹೊರತಾದ ಹುಲಕೋಟಿಯ ಮುಕ್ತಿವನ ಶಾಂತಿ-ಸೌಹಾರ್ದತೆಗೊಂದು ಮಾದರಿ. ಬದುಕಿನಲ್ಲಿ ಪರಸ್ಪರ ಒಪ್ಪುವಿಕೆ ಇದ್ದಾಗ ಬದುಕಿನಲ್ಲಿ ಯಾವ ಸಮಸ್ಯೆಯೂ ಎದುರಾಗದು ಎಂಬ ಸಂದೇಶ ಇಲ್ಲಿದೆ. ದೂರದೂರಿಂದ ಮುಕ್ತಿವನ ನೋಡುವ ಕುತೂಹಲಿಗಳಿಗೆ ಸ್ವಾಗತ. ಗುಲಾಬಿ ಹೂ ಕೊಟ್ಟು ಸ್ವಾಗತಿಸುವ ಆಡಳಿತ ವರ್ಗದವರ ಪರಿಚಾರಿಕೆ ಕಂಡಾಗ ಸ್ಮಶಾನ ದೂರವಾಗುತ್ತದೆ!
ಮರಳುವಾಗ ಚಹ-ಸಿಹಿ. ಭೂಮಿಗೆ ಬರುವಾಗ ಎಲ್ಲರಿಗೂ ಸಿಹಿ. ತೆರಳುವಾಗಲೂ ಸಿಹಿಯೇ!



1 comments:

adigaumesh said...

It is realy very informative and ned based article.

Post a Comment