Saturday, July 4, 2009

ಮೌನ ಸಾಧನೆಯ ಕ್ಯಾಪ್ಸೂಲುಗಳು

ಮಾಧ್ಯಮಗಳು ರೈತ ಆತ್ಮಹತ್ಯೆಗೆ ಪ್ರಾಮುಖ್ಯತೆ ಕೊಡುವ ಬದಲು ಅವನ್ನು ತಡೆಗಟ್ಟುವ ಮಾರ್ಗಗಳಿಗೆ ಒತ್ತು ಕೊಡಬೇಕು. ರೈತರಲ್ಲಿ ಆತ್ಮವಿಶ್ವಾಸ ಬೆಳೆಸಿ, ಧೈರ್ಯ ತುಂಬುವ ಕೆಲಸವಾಗಬೇಕು. ಸಮಸ್ಯೆಯ ಭಾಗವಾಗುವ ಬದಲು ಪರಿಹಾರದ ಭಾಗವಾದರೆ ರೈತಸಮುದಾಯಕ್ಕೆ ಹಿತ. ಹತಾಶ ಸನ್ನಿವೇಶದಲ್ಲೂ ರೈತರಲ್ಲಿ ಭರವಸೆ ಮೂಡಿಸಬಲ್ಲ ಯಶೋಗಾಥೆಗಳು ಅಲ್ಲಲ್ಲಿ ಇವೆ. ಇವುಗಳ ಮೇಲೆ ಸೂಕ್ತರೀತಿಯಲ್ಲಿ ಬೆಳಕು ಚೆಲ್ಲಿದರೆ ವ್ಯವಸಾಯ ರಂಗದಲ್ಲಿ ಹೊಸ ಅಧ್ಯಾಯ ಆರಂಭವಾದೀತು ಎನ್ನುವುದು ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಆಶಯ.

ಈ ಹಿನ್ನೆಲೆಯಲ್ಲಿ ಕೇಂದ್ರ 'ಪುಸ್ತಕ ಸರಣಿ' ಆರಂಭಿಸಿದೆ. ರಾಜ್ಯದ ವಿವಿಧೆಡೆಗಳಲ್ಲಿ ವಿಷಮುಕ್ತ ಒಕ್ಕಲುತನ ಮಾಡುತ್ತ ಹೊಸಹೊಸ ಪ್ರಯೋಗಗಳಲ್ಲಿ ತೊಡಗಿ, ನೆಮ್ಮದಿಯ ಬದುಕು ಸಾಕಾರಗೊಳಿಸಿಕೊಂಡವರ ಅನುಭವ-ಚಿಂತನೆಯ ಮೇಲೆ ಬೆಳಕು ಚೆಲ್ಲುವುದು ಉದ್ದೇಶ. ಮಳೆಯಾಶ್ರಿತ ಪ್ರದೇಶದ ಯಶೋಗಾಥೆಗಳಿಗೆ ಆದ್ಯತೆ. ನಾಟಿ ತಳಿಗಳ ಸಂರಕ್ಷಣೆಗೆ ಶ್ರಮಿಸುತ್ತಿರುವವರು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಕಂಡುಕೊಂಡವರು, ಉಪಕಸುಬುಗಳ ಮೂಲಕ ಅರ್ಥಿಕ ಭದ್ರತೆ ಕಲ್ಪಿಸಿಕೊಂಡವರು. ಇಂತಹ ರೈತರ ಬಗ್ಗೆ ಪುಸ್ತಕ ಹೊರತಂದರೆ ಅವು ಇನ್ನಷ್ಟು ರೈತರಿಗೆ ಸ್ಫೂರ್ತಿ ನೀಡಬಹುದು ಎಂದು ನಂಬುಗೆ.

ಈ ಸದಾಶಯದ ಎರಡು ಪುಸ್ತಕಗಳನ್ನು ಕೇಂದ್ರವು ಪ್ರಕಟಿಸಿದೆ. ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಬೆನ್ನೆಲುಬಾಗಿ ನಿಂತಿದೆ.`ಕಲ್ಲು ಹಾಸಿನ ಮೇಲೆ ಹಸಿರು ಹೊದಿಕೆ' - ಪುಸ್ತಕದಲ್ಲಿ ಲೇಖಕ ಆನಂದತೀರ್ಥ ಪ್ಯಾಟಿ ಕೊಪ್ಪಳ ಜಿಲ್ಲೆ ಕಲ್ಲತಾವರಗೆರೆ ಗ್ರಾಮದ ಶೇಖಮ್ಮ ಮತ್ತು ಹುಚ್ಚಪ್ಪ ವಾಣಿ ದಂಪತಿಯ ಸಾಧನೆಯನ್ನು ದಾಖಲಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ಮಾತು ಈ ದಂಪತಿಯ ಪಾಲಿಗೆ ನೂರಕ್ಕೆ ನೂರರಷ್ಟು ಸತ್ಯ. ಕಲ್ಲಿನಲ್ಲೂ ಹಸಿರು ಉಕ್ಕಿಸಿದ ಇವರ ದುಡಿಮೆ ಬೆರಗು ಮೂಡಿಸುತ್ತದೆ. ಇಂದು ಫಲವತ್ತಾದ ನೆಲ ಇದ್ದೂ ಬೇಸಾಯಕ್ಕೆ ವಿದಾಯ ಹೇಳುವ ಬೆಳವಣಿಗೆ ಒಂದೆಡೆಯಾದರೆ, ಎಂತ ಹುದೇ ಮಣ್ಣಿನಲ್ಲಾದರೂ ಸಮೃದ್ಧ ಬೆಳೆ ಬೆಳೆಯುವ ಛಲ ಇನ್ನೊಂದೆಡೆ. ಈ ಯಶೋಗಾಥೆ ಕೃಷಿರಂಗದಲ್ಲಿ ಭರವಸೆಯ ಚಿಲುಮೆ ಇದ್ದಂತೆ. ಪುಟ 28, ಬೆಲೆ 15 ರೂ.

ಹಿರಿಯ ಪತ್ರಕರ್ತ 'ಶ್ರೀ' ಪಡ್ರೆ ಬರೆದಿರುವ ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ!' ದಕ್ಷಿಣ ಕನ್ನಡ ಜಿಲ್ಲೆ ಅಡ್ಯನಡ್ಕ ಬಳಿಯ ಮಹಾಲಿಂಗ ನಾಯ್ಕ ಅವರ ಸಾಧನೆಯ ಮೇಲಿನ ಬೆಳಕು. ಬೋಳು ಗುಡ್ಡದ ಮೇಲೆ ಒಂದರ ಮೇಲೊಂದು ಸುರಂಗ ತೋಡುತ್ತ ಕೊನೆಗೂ ಜಲಸಿರಿಯನ್ನು ಸಿದ್ಧಿಸಿಕೊಂಡು ಹಸಿರು ತೋಟ ಸೃಷ್ಟಿಸಿದ ನಾಯ್ಕರ ಪರಿಶ್ರಮದ ಚಿತ್ರಣ ಇಲ್ಲಿದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಅವರ ಕಟ್ಟುನಿಟ್ಟಾದ ಧೋರಣೆ ಮಾತ್ರವಲ್ಲ, ನೆಮ್ಮದಿಯ ಬದುಕಿನ ಮುಖ್ಯ ಸೂತ್ರಗಳಲ್ಲೊಂದು. ಅವರ ಅನುಭವದ ಮಾತು ಈಗಿನ ಸಂದರ್ಭಕ್ಕೆ ದೊಡ್ಡ ಸಂದೇಶ. ಪುಟ 28, ಬೆಲೆ ರೂ.15.

ಆಕರ್ಷಕ ವರ್ಣ ಮುಖಪುಟ. 'ಸ್ವಲ್ಪ ವಿಶೇಷ'ವೇ ಅನ್ನಿಸಿದ ಪುಸ್ತಕದ ಆಕಾರ, ತಪ್ಪಿಲ್ಲದ ಮುದ್ರಣ, ಆಕರ್ಷಕ ವಿನ್ಯಾಸ. ವಿಳಾಸ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ - 580 008, 0836-2444 736 agriculturalmedia@gmail.com

0 comments:

Post a Comment