Thursday, July 23, 2009

ಮುಂದಿರುವುದು ಎರಡೇ ಆಯ್ಕೆ!

ಹೊಸ ಸರಕಾರವೀಗ ವರುಷದ ಕೂಸು. ಹುಟ್ಟಿದಾಕ್ಷಣ ಅದಕ್ಕೆ ರಸಗೊಬ್ಬರದ 'ಶಾಕ್' ಸಿಕ್ಕಿರುವುದು ಇನ್ನೂ ಹಸಿರಾಗಿಯೇ ಇದೆ. ರಸಗೊಬ್ಬರ ಕಂಪೆನಿಗಳು ಮತ್ತು ಸರಕಾರದ ನಡುವೆ ಪರಸ್ಪರ ಕೆಸರೆರೆಚಾಟ, ಅಕ್ರಮ ದಾಸ್ತಾನುಗಾರರು ಬಯಲಾಗುತ್ತಿದ್ದನ್ತೇ ಕೆಲವು ಜೀವ ಹೊರಟು ಹೋಗಿತ್ತು. ಆಡಳಿತ ಯಂತ್ರ ಚಾಲೂ ಆಗಿ ರಸಗೊಬ್ಬರ ಹರಿದುಬರುತ್ತಿರುವಾಗ ಇನ್ನೊಂದಿಷ್ಟು ಆತ್ಮಹತ್ಯೆಗಳು. 'ಈ ವರುಷ ಹಾಗಾಗದು. ಗೊಬ್ಬರ ದಾಸ್ತಾನು ಇದೆ' ಮುಖ್ಯಮಂತ್ರಿಗಳಿಂದ ಆಶ್ವಾಸನೆ ಸಿಕ್ಕಿದೆ!

ನಿಜಕ್ಕೂ ಆದದ್ದೇನು? ಒಂದು ಚಿಕ್ಕ ಪೋಸ್ಟ್ ಮಾರ್ಟಂ ಮಾಡೋಣ - ಮುಂಗಾರು ಆರಂಭವಾದಾಗುವಾಗ 'ರಸಗೊಬ್ಬರ ಮತ್ತು ಬಿತ್ತನೆ ಬೀಜ ಇಲ್ಲ' ಎಂಬ ವದಂತಿಗಳಿಂದ ರೈತನ ಸಮಚಿತ್ತ ಅಸ್ಥಿರವಾಯಿತು. ಆಕ್ರೋಶ ತಾರಕಕ್ಕೆ ಏರಿತು. ರಸಗೊಬ್ಬರ ಅಂಗಡಿಗಳು ಷಟರ್ ಎಳೆದುವು. ನಿಜಕ್ಕೂ ರಸಗೊಬ್ಬರ ಅಭಾವವಾಯಿತು! ಇಷ್ಟು ವರುಷಗಳಲ್ಲಿ ಇಂತಹ ಘಟನೆ ರಾಜ್ಯದಲ್ಲಿ ನಡೆದಿಲ್ಲ. ಅಂದಿನ 'ರಾಜ್ಯಪಾಲರ ಆಡಳಿತ'ದ ಅವಧಿಯ ಅಧಿಕಾರಿಗಳ 'ನಿದ್ದೆಯೂ' ಕಾರಣ ಎಂಬ ದನಿ ಕೇಳಿಬಂದಿತ್ತು. 'ಇನ್ನೇನು ನಾವು ಹೊಸದಾಗಿ ಬಂದವರು' ಎನ್ನುತ್ತ್ತಾ ಕಣ್ಣುಜ್ಜಿ ಎದ್ದು ಅಖಾಡಕ್ಕೆ ಇಳಿಯುತ್ತಿದ್ದಂತೆ ಪರಿಸ್ಥಿತಿ ಕೈಮೀರಿತ್ತು.

ತನ್ನ ಬದುಕಿನ ರಕ್ಷಣೆಗಾಗಿ ರೈತ ಬೀದಿಗಿಳಿದ. ಪ್ರತಿಭಟನೆ ಮಾಡಿದ. ಮುಷ್ಕರ ಹೂಡಿದ. ಯಾಕಾಗಿ? ಮಳೆ ಬಿದ್ದಿದೆ, ಭೂಮಿ ಹಸನಾಗಿದೆ, ಬಿತ್ತನೆಬೀಜ-ರಸಗೊಬ್ಬರವೇ ಇಲ್ಲಾಂದ್ರೆ ಹೇಗೆ? ರೈತನ ಆತಂಕ ಸಹಜ. ಆದರೆ ಈ ಪ್ರತಿಭಟನೆಯ ಹಿಂದಿರುವ ರಾಜಕೀಯ ಶಕ್ತಿಗಳ ಚಕ್ರವ್ಯೂಹ ಆತನಿಗೆಲ್ಲಿ ಕಾಣಬೇಕು? ಇದು ಹಿಂದಿನ ವರುಷದ ಕತೆ-ವ್ಯಥೆ. ಬೇರೆ ಬೇರೆ ಸ್ವರೂಪದಲ್ಲಿ ರೈತನನ್ನು ತುಳಿಯುವ ವಿವಿಧ ಹುನ್ನಾರಗಳು ಪುನರಾವರ್ತನೆ ಆಗುತ್ತಲೇ ಇವೆ. ಇದರಿಂದ ರೈತನನ್ನು ಪಾರುಮಾಡುವ ಶಾಶ್ವತ ವ್ಯವಸ್ಥೆ ಯಾವುದು - ಮುಂದಿರುವ ಪ್ರಶ್ನೆ.

ಇದೇ ಪ್ರಶ್ನೆಯನ್ನು ಸರಕಾರಕ್ಕೆ ಕೇಳೋಣ. 'ರಸಗೊಬ್ಬರ ದರವನ್ನು ಇಳಿಸುತ್ತೇವೆ, ಬಿತ್ತನೆ ಬೀಜವನ್ನು ಉಚಿತವಾಗಿ ನೀಡುತ್ತೇವೆ' ಎನ್ನಬಹುದು. ಇದು ಪರಿಹಾರವಲ್ಲ. ಹಾಗಾದರೆ ಏನು? ನಮ್ಮ 'ಕೃಷಿ ಪದ್ದತಿ'ಯ ಬದಲಾವಣೆ. ರಸಗೊಬ್ಬರ ಸುರಿದು ಸುರಿದು ಭೂಒಡಲು ಬಿರಿದಿದೆ. ಗೊಬ್ಬರ ಕಂಪೆನಿಗಳು, 'ನಮ್ಮ ಗೊಬ್ಬರದಿಂದ ಮಾತ್ರ ಅತ್ಯಧಿಕ ಇಳುವರಿ' ಎನ್ನುತ್ತಾ ರೈತನ ಮನೆಯ ಬಾಗಿಲು ತಟ್ಟಿದರೆ, ಬೀಜ ಕಂಪೆನಿಗಳು ಬಣ್ಣಬಣ್ಣದ ಚಿತ್ರಗಳನ್ನು ತೋರಿಸಿ, 'ನಿಮ್ಮ ಬದುಕು ಹಸನಾಗುತ್ತದೆ' ಎನ್ನುತ್ತಾ ಮನೆಯೊಳಗೆ ಪ್ರವೇಶಿಸಿವೆ. 'ನಿಮಗೆ ಬೇಕಾದಷ್ಟು ಸಾಲ ಕೊಡ್ತೇವೆ, ಬನ್ನಿ ತೆಗೊಳ್ಳಿ' ಎನ್ನುತ್ತಾ ಖಾಸಗಿ ಹಣಕಾಸು ಸಂಸ್ಥೆಗಳು ಕಿಟಕಿ ಹಾರಿ ಪಿಶಾಚಿಯಂತೆ ಬರುತ್ತವೆ!

ಇವರೆಲ್ಲರಿಂದಲೂ ರೈತನನ್ನು ಪಾರುಮಾಡಲು ಇರುವ ಒಂದೇ ದಾರಿ-'ದೇಸೀ ಕೃಷಿ ಪದ್ದತಿ'ಯ ಅನುಷ್ಠಾನ. ಹೊಲಕ್ಕೆ ವಿಷ, ರಸಗೊಬ್ಬರ ಬರುವುದಕ್ಕಿಂತ ಮುಂಚೆ ಕೃಷಿ ಇತ್ತಲ್ಲಾ, ಅದು. 'ಮನೆಗೊಂದು ಹಸು ಇರಲಿ' ಹಿರಿಯರು ಹೇಳುತ್ತಿದ್ದರು. ಇದರರ್ಥ - ದನ ಹಾಲು ನೀಡಿದ ಹಾಗಾಯಿತು, ಗೊಬ್ಬರ ಕೊಟ್ಟಂಗಾಯಿತು. ಇದನ್ನೀಗ ಮರೆತಿದ್ದೇವೆ. ಗೊಬ್ಬರ ಅಂದರೆ ಅದು ಸರಕಾರಿ ಗೊಬ್ಬರ! ಚೀಲ ಗೊಬ್ಬರ! ಇದನ್ನು ಸುರುವಿದರೆ ಭೂತಾಯಿ ನಗ್ತಾಳೆ! ಹಸಿರು ಕ್ರಾಂತಿಯ ಫಲ.

ಹೈನುಗಾರಿಕೆ ಮತ್ತು ಕೃಷಿ - ಜತೆಜತೆಯಲ್ಲಿ ಸಾಗುವಂತಹುದು. ಒಂದನ್ನು ಬಿಟ್ಟು ಒಂದಿಲ್ಲ. ಅದೀಗ ಕಳಚಿದೆ. ಇದನ್ನು ಮತ್ತೆ ಬೆಸೆಯುವ ಕೆಲಸವಾಗಬೇಕು. ಹೈನುಗಾರಿಕೆ ಮನೆಮನೆಯಲ್ಲಿ ಬರಬೇಕು. ಆಗ ಮನೆಯಲ್ಲೇ ಗೊಬ್ಬರ ತಯಾರಾಗಬೇಕು. ಹೊಲಕ್ಕೆ ಬೀಳಬೇಕು. ಈ ರೀತಿ ಕೃಷಿ ಮಾಡುವ ರೈತರು ನಗುನಗುತ್ತಾ ನಮ್ಮ ನಡುವೆ ಇರುವಾಗ, ಗೊಬ್ಬರ-ಬೀಜ ಎನ್ನುತ್ತಾ ಬೀದಿಯಲ್ಲಿರುವುದು ಎಂತಹ ದುಃಸ್ಥಿತಿ ಅಲ್ವಾ. 'ಭಾರತ ಕೃಷಿ ಪ್ರಧಾನ ದೇಶ. ರೈತನೇ ಇಲ್ಲಿನ ಬೆನ್ನೆಲುಬು' ಇದು ಆಡಳಿತ ಯಂತ್ರದ ನಿತ್ಯಪಾಠ. ಆದರೆ ವಿಪರ್ಯಾಸ ನೋಡಿ - ಬೇರೆ ಬೇರೆ ಕಾನೂನು-ನೀತಿ ಎನ್ನುತ್ತಾ ರೈತನ ಬೆನ್ನೆಲುಬನ್ನೇ ತುಂಡರಿಸುತ್ತಿದ್ದಾರೆ.

ಅದಕ್ಕಾಗಿ ನಮ್ಮ ಕೃಷಿ ಪದ್ದತಿ ಬದಲಾಗಬೇಕು. ಎಲ್ಲಿದೆ ಅದು? ನಮ್ಮ ಕಾಲ ಬುಡದಲ್ಲಿಯೇ ಇದೆ. ನೋಡುವ ಕಣ್ಣು ಬೇಕು. ಮನಸ್ಸು ಸಜ್ಜಾಗಬೇಕು. ಸಾವಯವ ಕೃಷಿ ನೀತಿಯನ್ನು ಮೊದಲು ಜ್ಯಾರಿಗೊಳಿಸಿದ ರಾಜ್ಯವೆಂಬ ಹೆಗ್ಗಳಿಕೆ ನಮಗಿದೆ. ಸಾವಯವ, ಶೂನ್ಯ, ನೈಸರ್ಗಿಕ, ಪ್ರಾಕೃತಿಕ (!) ...ಯಾವುದಾದರೂ ಓಕೆ. ವಿಷರಹಿತವಾಗಿದ್ದರೆ ಆಯಿತಷ್ಟೇ. ಆಗೊಂದು ಪ್ರಶ್ನೆ ಉದ್ಭವಿಸುತ್ತದೆ - ದಿಢೀರ್ ಆಗಿ ಸಾವಯವಕ್ಕೆ ಬದಲಾದರೆ ಇಳುವರಿ ನಷ್ಟವಾಗಿ ಕೈಸುಟ್ಟರೆ! ಈ ನಷ್ಟ ಗೊಬ್ಬರ-ಬೀಜ ಕಂಪೆನಿಗಳು ಮಾಡುವಷ್ಟು ಅಲ್ಲವಲ್ಲಾ! ನಿಧಾನಕ್ಕೆ ಅಭ್ಯಾಸವಾಗುತ್ತದೆ. ರೈತರೆದುರಿಗೆ ಆಯ್ಕೆ ಎರಡು. ಒಂದೋ ರಸಗೊಬ್ಬರ-ಬೀಜ ಎನ್ನುತ್ತಾ ಕಂಪೆನಿಗಳನ್ನು ನೆಚ್ಚಿಕೊಂಡು ಬದುಕಿಡೀ ನರಳುವುದು. ಮತ್ತೊಂದು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿ ಜೀವನದಲ್ಲಿ ನಗುನಗುತ್ತಾ ಇರುವುದು.

0 comments:

Post a Comment