Monday, September 7, 2009

ಪುತ್ತೂರಿನಲ್ಲಿ ಅಡಿಕೆ ಯಂತ್ರ ಮೇಳ-2009

ಕೃಷಿಕರಿಗೆ ಎಲ್ಲಾ ಅಡಿಕೆ ಸುಲಿಯುವ ಯಂತ್ರಗಳನ್ನು ಒಂದೇ ಕಡೆ ವೀಕ್ಷಿಸುವ ಸದವಕಾಶ ಕಲ್ಪಿಸಲು ಅಕ್ಟೋಬರ್ 30 ರಿಂದ ಮೂರು ದಿನಗಳ ಕಾಲ ಪುತ್ತೂರಿನಲ್ಲಿ 'ಅಡಿಕೆ ಯಂತ್ರ ಮೇಳ-2009'ನ್ನು ಪ್ರಪ್ರಥಮ ಬಾರಿಗೆ ಸಂಯೋಜಿಸಲಾಗಿದೆಯೆಂದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ನಡೆಸುವ ಈ ಕಾರ್ಯಕ್ರಮಕ್ಕೆ ಫಾರ್ಮರ್ ಫಸ್ಟ್ ಟ್ರಸ್ಟ್ ಸಹಕಾರ ನೀಡಲಿದೆ. ಪುತ್ತೂರಿನ ನೆಹರೂ ನಗರದಲ್ಲಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಈ ಮೇಳವು ನಡೆಯಲಿದ್ದು, ಇದರಲ್ಲಿ ಹಸಿ ಮತ್ತು ಗೋಟಡಿಕೆ ಸುಲಿಯುವ ಯಂತ್ರ ಮತ್ತು ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡಿಸುವ ಉಪಕರಣಗಳ ಪ್ರಾತ್ಯಕ್ಷಿಕೆಯೂ ಇರುತ್ತದೆ.

ಈ ವರೆಗೆ ಅಭಿವೃದ್ಧಿಪಡಿಸಲಾಗಿರುವ ಸುಮಾರು 30ಕ್ಕೂ ಹೆಚ್ಚು ಅಡಿಕೆ ಸುಲಿಯುವ ಮತ್ತು ಸಿಂಪಡಣ ಉಪಕರಣ/ಯಂತ್ರಗಳ ಪೈಕಿ ಬೆರಳೆಣಿಕೆಯವನ್ನು ಬಿಟ್ಟರೆ ಉಳಿದವನ್ನೆಲ್ಲಾ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಶಿಕ್ಷಣ ಪಡೆಯದಿರುವ ಕೃಷಿಕರೇ ಅಭಿವೃದ್ಧಿಪಡಿಸಿರುವುದು ಗಮನಾರ್ಹ ವಿಷಯವಾಗಿದೆ. ಕೃಷಿಕರಿಗೆ ಈ ಯಂತ್ರಗಳ ಪರಿಚಯ ಮಾಡುವುದರ ಜೊತೆಗೆ ಸಂಶೋಧಕ/ತಯಾರಕರಿಗೆ ತಮ್ಮ ಯಂತ್ರಗಳನ್ನು ನಾಡಿನ ರೈತರಿಗೆ ತೋರಿಸಿಕೊಡುವ ಅಪೂರ್ವ ಅವಕಾಶವೂ ಇದಾಗಿದೆ. ಅಡಿಕೆ ಕೃಷಿರಂಗದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು.

ಈ ಮೇಳದಲ್ಲಿ ಅಡಿಕೆ ಯಂತ್ರಗಳ ಬಗ್ಗೆ ವಿಚಾರ ಸಂಕಿರಣ, ಸಂಶೋಧಕರೊಂದಿಗೆ ಮುಖಾಮುಖಿ ಸಂವಾದ ಕಾರ್ಯಕ್ರಮವೂ ಇರುತ್ತದೆ. ಈ ಅಡಿಕೆ ಯಂತ್ರ ಮೇಳದ ಯಶಸ್ವೀ ನಿರ್ವಹಣೆಗಾಗಿ ಸಂಯೋಜನಾ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಹೆಚ್ಚಿನ ಯಂತ್ರೋಪಕರಣ ತಯಾರಕರಿಗೆ ಆಹ್ವಾನ ನೀಡಲಾಗಿದ್ದು, ಅಕಸ್ಮಾತ್ ಆಹ್ವಾನ ತಲುಪಿರದಿದ್ದಲ್ಲಿ, ಅವರು ಸದ್ರಿ ಅಡಿಕೆ ಯಂತ್ರ ಮೇಳ - 2009 ರ ಸಮಿತಿಯ ಸಂಚಾಲಕ ಶ್ರೀ ಪಿ. ಶ್ಯಾಮ್ ಭಟ್ (ಮೊಬೈಲ್ ನಂಬರ್ 9448122272 ಅಥವಾ 0824 - 2445606) ರವರನ್ನು ಕೂಡಲೇ ಸಂಪರ್ಕಿಸಿ ತಮ್ಮ ಹೆಸರನ್ನು 15/09/2009 ರ ಒಳಗೆ ನೊಂದಣಿ ಮಾಡಿಕೊಳ್ಳಬಹುದು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಹಾಗೂ ಕ್ಯಾಂಪ್ಕೋದ ಅಧ್ಯಕ್ಷರಾದ ಶ್ರೀ ಎಸ್. ಆರ್. ರಂರಂಗಮೂರ್ತಿಯವರು ಮೆನೇಜಿಂಗ್ ಟ್ರಸ್ಟಿಯಾಗಿರುವ ಈ ಸಂಶೋಧನಾ ಪ್ರತಿಷ್ಠಾನವು ಕಳೆದ ವರ್ಷ ಮಂಗಳೂರಿನಲ್ಲಿ ಅಡಿಕೆಯ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ನಡೆಸಿದೆ.

0 comments:

Post a Comment