Wednesday, September 23, 2009

ಮಳೆಗೆ ಕೊಚ್ಚಿಹೋದ 'ಕೃಷಿಮೇಳ'!

ಸೆಪ್ಟೆಂಬರ್ 19 ರಿಂದ 22ರ ತನಕ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಾಲಾವಧಿ 'ಕೃಷಿಮೇಳ'ನಡೆಯಿತು. ಐದು ಲಕ್ಷಕ್ಕೂ ಮಿಕ್ಕಿ ರೈತರು ಭಾಗವಹಿಸಿದ್ದರು ಎನ್ನುವುದು ವರಿಷ್ಠರ ಅಂಕಿಅಂಶ. ಮೂರು ದಿವಸ ಅಪರಾಹ್ನ ಬೀಸಿದ ಮಳೆಗೆ 'ಕೃಷಿಮೇಳ'ವೇ ಕೊಚ್ಚಿಹೋಯಿತು ಎಂದರೆ 'ಯಾಕಪ್ಪಾ ನೆಗೆಟಿವ್' ಮಾತನಾಡುತ್ತಾರೆ ಅನ್ನಬಹುದು! ನಾಲ್ಕುನೂರಕ್ಕೂ ಮಿಕ್ಕಿದ ಮಳಿಗೆದಾರರನ್ನು ಮಾತನಾಡಿಸಿದರೆ ಇದೇ ಮಾತು.

ಕಾರಣ ಇಲ್ಲದಿಲ್ಲ. ಒಂದೆಡೆ ಬೆಳೆದುನಿಂತ ಪೈರಿನ ಹೊಲ. ಮತ್ತೊಂದೆಡೆ ಹೊಲದಲ್ಲಿ ತಲೆಯೆತ್ತಿದ ಮಳಿಗೆಗಳು. ಮಧ್ಯದಲ್ಲಿ ಸ್ವಲ್ಪ ಎತ್ತರದಲ್ಲಿ ರಸ್ತೆ. ಮಳೆನೀರು ಹರಿದು ಹೋಗದೆ ಮಳಿಗೆಗಳಿಗೆ ನುಗ್ಗಿ, ಅಚೀಚೆ ಹರಿದು ಕೊಚ್ಚೆಯನ್ನೇ ನಿರ್ಮಿಸಿಬಿಟ್ಟಿತು. ಈ ಕೊಚ್ಚೆ ಇಂಗುವುದು ಬಿಡಿ, ಬಿಸಿಲಿಗೂ ಒಣಗದಷ್ಟು ಅಂಟಟು. ಜನರು ಓಡಾಡಿ ಕೆಸರು ಎಷ್ಟು ಹದವಾಗಿತ್ತು ಅಂದರೆ, ಕಾಲಿಗಂಟಿದ ಮಣ್ಣು 'ಬಬ್ಲ್ಗಂ' ಆಗಿತ್ತು!

ಈ ರಾಡಿಯಲ್ಲಿ ಶೇ.25 ಮಂದಿ ಓಡಾಡಿರಬಹುದು. ಉಳಿದಂತೆ ರಸ್ತೆಯಲ್ಲಿ ಉದ್ದಕ್ಕೆ ಪಥಸಂಚಲನ ಮಾಡಿ, 'ನಾನೂ ಕೃಷಿ ಮೇಳಕ್ಕೆ ಹೋಗಿ ಬಂದೆ' ಎನ್ನಲಡ್ಡಿಯಿಲ್ಲ! 'ಇಲ್ಲಾರಿ, ನಮಗೆ ಇಂತಹ ರಾಡಿಯಲ್ಲಿ ಒಡಾಡಿ ರೂಢಿಯಿದೆ' ಕೆಲವರೆಂದರು. ಸಂಸಾರದೊಡನೆ ಬಂದಂತಹವರು 'ಎಂತಹ ಕೊಚ್ಚೆ ಮಾರಾಯ್ರೆ. ನಮ್ಮಿಂದಾಗದು' ಎನ್ನುತ್ತಾ ಹಾಗೆ ಸುತ್ತಾಡಿ ಹೋದವರೇ ಜಾಸ್ತಿ! ಕೊಚ್ಚೆಯಲ್ಲಿ ಜನರು ನಡೆದಾಡುವ ಜಾಗದಲ್ಲಿ ಒಂದಷ್ಟು ಜಲ್ಲಿ ಹಾಕಿ ವಿವಿ 'ಮಾನವೀಯತೆ' ಮೆರೆಯಿತು!

ಮಳಿಗೆಗಳಲ್ಲಿ (ಕ್ಷಮಿಸಿ, ಅಂಗಡಿಗಳು!) ವ್ಯಾಪಾರನೂ ಅಷ್ಟಕ್ಕಷ್ಟೇ. ಈ ಮಧ್ಯೆ ವಿವಿಯ ಮಾಮೂಲಿ ಮೇಳ ಕಲಾಪ ಮುಖ್ಯ ವೇದಿಕೆಯಲ್ಲಿ ನಡೆಯುತ್ತಿತ್ತು. ಮಳೆ, ಮಿಂಚು, ಗುಡುಗು..ಇದ್ಯಾವುದೂ ಕಲಾಪಕ್ಕೆ ಅಡ್ಡಿ ಬರಲಿಲ್ಲ. ಕಾರಣ - ಅಲ್ಲಿ ಸುರಕ್ಷತೆಯಿತ್ತು!ಅಕಾಲ ವರ್ಷಕ್ಕೆ (ಧಾರವಾಡದಲ್ಲಿ 2ನೇ ಮಳೆಗಾಲ) ವಿವಿಯಾದರೂ ಏನು ಮಾಡಬಹುದು? ಉತ್ತಮ ಟ್ರಾಫಿಕ್, ಆಸಕ್ತ ವಿಜ್ಞಾನಿಗಳು, ಅಧಿಕಾರಿಗಳು, ಸಿಬ್ಬಂದಿಗಳು ತೊಡಗಿಸಿಕೊಂಡಿದ್ದರು.

ಒಟ್ಟಿನಲ್ಲಿ ಎಲ್ಲರಲ್ಲೂ ಒಂದೇ ಮಾತು - 'ಒಂದು ತಿಂಗಳು ಬಿಟ್ಟು ಕೃಷಿಮೇಳ ಮಾಡಬಹುದಿತ್ತು'.

0 comments:

Post a Comment