Tuesday, December 15, 2009

ಮನೆಬಾಗಿಲಿಗೆ ವಿಷರಹಿತ ತರಕಾರಿ!

ಮೂಡಬಿದಿರೆಯ ವಿಶಾಲನಗರ ಐನೂರು ಮನೆಗಳಿರುವ ಬಡಾವಣೆ. ಲ್ಯಾನ್ಸಿ ಕ್ರಾಸ್ತಾರ ತರಕಾರಿ ಬೈಕ್ ಬಾರದಿದ್ದರೆ ಇಲ್ಲಿನ ಕೆಲವು ಮನೆಗಳಲ್ಲಿ ಅಡುಗೆಯೇ ಆಗುವುದಿಲ್ಲ!

ಮಾರ್ಕೆಟ್ನಲ್ಲಿ ತಾಜಾ ಹೊಳಪುಳ್ಳ ತರಕಾರಿಗಳೇನೋ ಲಭ್ಯ. ಆದರೆ ಲ್ಯಾನ್ಸಿ ತರುವ ವಿಷರಹಿತ ತರಕಾರಿಗಳನ್ನು ತಿಂದವರಿಗೆ ಅದು ಬೇಡ. ಇವು ಸಿಗುವಷ್ಟು ಕಾಲ ಅವರು ಮಾರ್ಕೆಟ್ ಕಡೆಗೆ ಸುಳಿಯುವುದೇ ಇಲ್ಲ.

ಲ್ಯಾನ್ಸಿಯವರ ತರಕಾರಿ ಕೃಷಿಗೀಗ ಹದಿಮೂರು ವರುಷ. 'ಸಾವಯವ ತರಕಾರಿ ಎಷ್ಟು ಒಯ್ದರೂ ಮಾರ್ಕೆಟ್ ಇದೆ. ನನ್ನ ಬೆಳೆಯನ್ನು ನಾನೇ ಮಾರ್ಕೆಟ್ ಮಾಡುತ್ತೇನೆ.' ಲ್ಯಾನ್ಸಿಯವರ ಈ ಸಾಧನೆಯ ಹಿಂದೊಂದು ಕತೆಯಿದೆ.

ಪೈಸೆಪೈಸೆಗೂ ತತ್ವಾರವಿದ್ದ ಅಂದು ಇವರಮ್ಮ ಸೆಲಿನ್ ಕ್ರಾಸ್ತಾ ಬಸಳೆ ಬೆಳೆದು ಕಟ್ಟು ಮಾಡಿ 'ಮಾರಿ ಬಾ' ಎಂದು ಕೈಗಿತ್ತರು. ಮಾರುಕಟ್ಟೆ ನೋಡಿ ಗೊತ್ತಿತ್ತೇ ವಿನಃ ಮಾರಾಟದ ಅನುಭವವಿರಲಿಲ್ಲ. ಕಟ್ಟಿಗೆ ಮೂರು ರೂಪಾಯಿಯಂತೆ ಕೊಟ್ಟದ್ದಾಂಯಿತು. ಇನ್ನೇನು ಸ್ಥಳ ಬಿಡಬೇಕು ಎನ್ನುವಾಗ ಅಂಗಡಿಯವ ಅದನ್ನೇ ಐದು ರೂಪಾಯಿಗೆ ಮಾರಿದ. ಲ್ಯಾನ್ಸಿಗೆ ಆಘಾತ. ಅಂದೇ, ಅಲ್ಲೇ 'ಮುಂದೆ ನಾನೇ ಮಾರುತ್ತೇನೆ' ಎಂಬ ಶಪಥ ಮಾಡಿದರು.

ಅದು ಒಂದೆಡೆ ಕುಳಿತು ಮಾಡುವ ವ್ಯಾಪಾರ. ನಗರಗಳಲ್ಲಿ ಗಾಡಿಗಳಲ್ಲಿ ಮಾರುವುದಿದೆ. ಇದೇ ದಾರಿ ತುಳಿದ ಲ್ಯಾನ್ಸಿ ಜನ ವಸತಿಯಿರುವಲ್ಲಿ 'ಬಸಳೆ..ಬಸಳೆ' ಎಂದು ಕೂಗಿದರು. ಒಂದೆರಡು ಗಂಟೆಯಲ್ಲೇ ಕೈಯಲ್ಲಿದ್ದ ಮ್ಹಾಲು ಖಾಲಿ. ಇವರಿಗೂ ಐದು ರೂಪಾಯಿ ಸಿಕ್ಕಿತು. ಮಧ್ಯವರ್ತಿಗಳಿಲ್ಲದ ವ್ಯಾಪಾರಕ್ಕೆ ನಾಂದಿ.

ತೊಂಡೆ, ಬೆಂಡೆ, ಅಲಸಂಡೆ, ಹರಿವೆ, ಹೀರೆ - ಹೀಗೆ ತರಕಾರಿಗಳ ಸಾಲು. ವಾರಕ್ಕೆ ಮೂರು ಸಲ ಸರಬರಾಜು. ನಿಶ್ಚಿತ ಗಿರಾಕಿಗಳು. ಸ್ಟಾಂಡರ್ ದರ. ನಗದು ವ್ಯವಹಾರ. 'ತರಕಾರಿ ಮಾರಿ ಹಿಂದಿರುಗುವಾಗ ಇವರ ಕಿಸೆ ನೋಡಬೇಕು' ಎಂದು ನೆರೆಯ ಕೃಷಿಕ ಎಡ್ವರ್ಡ್ ರೆಬೆಲ್ಲೋ ತಮಾಷೆ ಮಾಡುತ್ತಾರೆ!

ತೊಂಡೆಕಾಯಿಗೆ ಮಾರುಕಟ್ಟೆಯಲ್ಲಿ ಕಿಲೋಗೆ ಇಪ್ಪತ್ತು ರೂಪಾಯಿ ಇದ್ದರೆ ಲ್ಯಾನ್ಸಿ ಮಾರುಕಟ್ಟೆ ದರದ ಸರಾಸರಿ ಬೆಲೆ ನಿಗದಿ ಮಾಡುತ್ತಾರೆ. ಮಾರುಕಟ್ಟೆ ದರ ಏರಿದರೂ, ಇವರದು ಫಿಕ್ಸೆಡ್. ಅಲ್ಲಿ ಇಳಿದರೂ, ಇವರದು ಇಳಿಯುವುದಿಲ್ಲ!

ಬೆಳಿಗ್ಗೆ ವಿತರಣೆಗೆ ಹಿಂದಿನ ರಾತ್ರಿಯೇ ಸಿದ್ಧತೆ. ಅರ್ಧ, ಒಂದು ಕಿಲೋದ ಪೂರ್ವಪ್ಯಾಕಿಂಗ್. ಮನೆಮಂದಿಯ ಸಮಷ್ಠಿ ಕೆಲಸ. ಬೈಕ್ನ ಹಿಂದೆ ಕಳಚಿ ಜೋಡಿಸಬಲ್ಲ (ಡಿಟೇಚೇಬಲ್) ಸ್ಟಾಂಡ್ ಮಾಡಿಸಿದ್ದಾರೆ. ಜಾಗವಿರುವಲ್ಲೆಲ್ಲಾ ತರಕಾರಿ ಚೀಲ ಇಳಿಬಿಡುತ್ತಾರೆ. ಇದನ್ನು 'ತರಕಾರಿ ಬೈಕ್' ಅನ್ನೋಣ.

'ನನ್ನನ್ನು ಕಾಯುವ ಐವತ್ತು ಮನೆಗಳಿಗೆ ಬೆಳಿಗ್ಗೆ 9 - 10 ರೊಳಗೆ ತರಕಾರಿ ಕೊಡಬೇಕು. ನಂತರ ಹೆಚ್ಚಿನವರೂ ಡ್ಯೂಟಿಗೆ ಹೋಗುತ್ತಾರೆ. ನಂಬಿದ ಮನೆಯವರಿಗೆ ತೊಂದರೆಯಾಗಬಾರದಲ್ಲಾ' ಎನ್ನುವ ಕಾಳಜಿ. ಒಂದು ದಿನವೂ ಮಾರಾಟವಾಗಿಲ್ಲ ಎಂದು ಪುನಃ ತಂದುದಿಲ್ಲವಂತೆ.

ಶಿಕ್ಷಕರು, ವ್ಯಾಪಾರಸ್ಥರು, ಕಚೇರಿಗೆ ಹೋಗುವ ವಿವಿಧ ಕುಟುಂಬಗಳ ಸಂಪರ್ಕ. 'ಐವತ್ತಲ್ಲ, ನೂರು ಮನೆಗಳಿಗೂ ಕೊಡುವಷ್ಟು ಬೇಡಿಕೆಯಿದೆ. ಆದರೆ ಪೂರೈಸಲು ಕಷ್ಟ.' ಇವರ ಮಾರಾಟತಂತ್ರವನ್ನು ಇನ್ನೂ ಕೆಲವರು ಅನುಸರಿಸಿದರಂತೆ. ಇವರಿಗಿಂತ ಮೊದಲೇ ತಲಪಿ ಮಾರಿ ಪೈಪೋಟಿ ಕೊಡಲು ಯತ್ನಿಸಿದರಂತೆ. ಆದರೆ ಕಡಿಮೆ ಗುಣಮಟ್ಟ ಮತ್ತು ಅಸಮರ್ಪಕ ಪೂರೈಕೆಯ ಕಾರಣ ಈ ಗಿರಾಕಿಗಳೇ ಅವರನ್ನು ತಿರಸ್ಕರಿಸಿಬಿಟ್ಟರು.

ತಾಜಾ ತರಕಾರಿಯನ್ನೇ ಕೊಡುತ್ತಾರೆ. ಅಕಸ್ಮಾತ್ ಕೆಲವೊಮ್ಮೆ ಸ್ವಲ್ಪ ಬಾಡಿದ್ದರೆ, ಹುಳು ಹಿಡಿದಿದ್ದರೆ, 'ಇದು ಅಷ್ಟು ಚೆನ್ನಾಗಿಲ್ಲ' ಅಂತ ಹೇಳುತ್ತಾರೆ. ದರದಲ್ಲಿ ಹೊಂದಾಣಿಕೆ. ಈ ಪಾರದರ್ಶಕತೆ ವಿಶಾಲನಗರದಲ್ಲಿ ಇವರಿಗೆ ಹೆಸರು ತಂದಿದೆ.
ಮದುವೆ, ಹಬ್ಬಗಳಂದು ಕೆಲವರು ಮುಂದಾಗಿ ಕಾದಿರಿಸುತ್ತಾರೆ. ಮನೆಗೆ ಬಂದು ಒಯ್ಯುವವರೂ ಇದ್ದಾರೆ. ಮನೆಯಿಂದ ಹಿರಡುವ ತರಕಾರಿ ಬೈಕಿಗೆ ದಾರಿಯ ಮಧ್ಯೆ ಕೆಲವು ನಿಲುಗಡೆ.

ದಶಂಬರದಿಂದ ಮೇ ತನಕ ತರಕಾರಿ ಋತು. 'ಆರು ತಿಂಗಳು ನಮ್ಮನ್ನು ತರಕಾರಿ ಸಾಕುತ್ತದೆ', ಲ್ಯಾನ್ಸಿಯವರ ತಂದೆ ರಾಬರ್ಟ್ ಕ್ರಾಸ್ತಾ ಹೇಳುತ್ತಾರೆ. ಅಷ್ಟು ಕಾಲ ಇವರ ವಿಷರಹಿತ ತರಕಾರಿಯ ರುಚಿಯುಂಡ ಗ್ರಾಹಕರು, ಉಳಿಗಾಲದಲ್ಲಿ ಮಾರ್ಕೆಟನ್ನು ಆಶ್ರಯಿಸಬೇಕು. ಆಗ ರುಚಿ ವ್ಯತ್ಯಾಸ ಗೊತ್ತಾಗುತ್ತದೆ. ಜನ 'ನಿಮ್ಮದು ಎಂತಹ ರುಚಿ ಮಾರಾಯ್ರೆ' ಅಂತ ಪ್ರತಿಕ್ರಿಯಿಸುತ್ತಾರೆ. ಈ ಅಭಿಪ್ರಾಯ ಇವರ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿಸುತ್ತದೆ.

ಎರಡು ವರುಷದ ಹಿಂದೆ ಬಂಪರ್. ಬೆಲೆಯೂ, ಬೆಳೆಯೂ. ಆಗ ವಾರಕ್ಕೆ ಮೂರ್ನಾಲ್ಕು ಸಲ 'ತರಕಾರಿ ಬೈಕಿ'ಗೆ ಕೆಲಸ. ಈ ವರುಷ ಕಡಿಮೆ. ವಾರಕ್ಕೆ ಎರಡೇ ಸಲ. ಸರ್ತಿಗೆ ಐನೂರರಿಂದ ಸಾವಿರದ ಸಂಪಾದನೆ.

ನಾಲ್ಕು ವರುಷದ ಹಿಂದಿನ ವರೆಗೆ ರಿಕ್ಷಾ ಇತ್ತು. ತರಕಾರಿ ಕೊಟ್ಟು ಮರಳುವಾಗ ದಾರಿಗುಂಟ ಬಿದ್ದಿರುವ ಸೆಗಣಿ ಹೆಕ್ಕಿ ತರುತ್ತಿದ್ದರು. ಕೆಲವರು ಗೇಲಿ ಮಾಡುತ್ತಿದ್ದರಂತೆ! 'ರಿಕ್ಷಾದಲ್ಲಿ ತರಕಾರಿ ಕೊಂಡೊಯ್ಯಲು ಸುಲಭ. ಕ್ರಮೇಣ ಬಾಡಿಗೆಗೆ ರಿಕ್ಷಾ ಅಪೇಕ್ಷಿಸಿ ಬರುವವರ ಸಂಖ್ಯೆ ಹೆಚ್ಚಾಗಿ, ಕೃಷಿಯತ್ತ ಗಮನ ಕಡಿಮೆಯಾಗತೊಡಗಿತು. ಹೊತ್ತಿಲ್ಲ, ಗೊತ್ತಿಲ್ಲ! ಹಾಗಾಗಿ ರಿಕ್ಷಾ ಮಾರಿದೆ. ಬೈಕ್ ತೆಕ್ಕೊಂಡೆ' ಎನ್ನುತ್ತಾರೆ.

ಒಟ್ಟು ಮೂರೂವರೆ ಎಕರೆ ಜಮೀನು. ಅದರಲ್ಲಿ ಒಂದೂವರೆ ಎಕರೆ ಹುಲ್ಲು. ಇಪ್ಪತ್ತು ಸೆಂಟ್ಸ್ನಲ್ಲಿ ತರಕಾರಿ. ಉಳಿದಂತೆ ಅಡಿಕೆ ಕೃಷಿ. ಜತೆಗೆ ಹೈನುಗಾರಿಕೆ. ಪತ್ನಿ ಸೆವೆರಿನ್ ಕ್ರಾಸ್ತಾರ ಉಸ್ತುವಾರಿಕೆ.

ತರಕಾರಿ ಕೃಷಿಯನ್ನು ಇನ್ನಷ್ಟು ವಿಸ್ತರಿಸಬಹುದಲ್ಲಾ? 'ಬೇಡಿಕೆ ಉಂಟೆಂದು ತರಕಾರಿ ಹೆಚ್ಚು ಮಾಡಿದರೆ ನಿರ್ವಹಣೆ ಕಷ್ಟ. ನನ್ನ ಈಗಿನ ವ್ಯವಸ್ಥೆಗೆ ಇಷ್ಟು ತರಕಾರಿ ಕೈತುಂಬಾ ಕೆಲಸ ಕೊಡುತ್ತದೆ.'

1 comments:

Unknown said...

some questions:
how far his farm from mudabidre?
since how many years he is into this venture?
is he grows local varieties?
who inspired him for organic farming?
what are the main pests n diseases? and how does he contol them?

Post a Comment