Tuesday, January 5, 2010

ಕಾಳುಮೆಣಸು ಬಿಡಿಸುವ ಯಂತ್ರ

ಕಾಳುಮೆಣಸಿನ ಗೊಂಚಲನ್ನು ಕಾಲಲ್ಲಿ ತುಳಿದು ಕಾಳನ್ನು ಬೇರ್ಪಡಿಸುವುದು ಪಾರಂಪರಿಕ ವಿಧಾನ. ಆದರೆ ಇದು ತುಂಬಾ ಶ್ರಮ ಬೇಡುವ ಕೆಲಸ. ನಿಟಿಲೆ ಮಹಾಬಲೇಶ್ವರ ಭಟ್ಟರು ಆವಿಷ್ಕರಿಸಿದ ಕಾಳುಮೆಣಸು ಬಿಡಿಸುವ ಯಂತ್ರ' ಈ ಕೆಲಸವನ್ನು ಹಗುರ ಮಾಡಿದೆ. ಗಂಟೆಗೆ ಇನ್ನೂರೈವತ್ತು ಕಿಲೋ ಕಾಳುಮೆಣಸನ್ನು ಆಯುವ ಸಾಮರ್ಥ್ಯ.

ಮನೆವಾರ್ತೆ ನಿಭಾಯಿಸಿಕೊಂಡು ಬಿಡುವಾದಾಗ ಆಯಬಹುದಾದಷ್ಟು ಸರಳತೆ ಯಂತ್ರದ ವಿಶೇಷ. ಅರ್ಧ ಅಶ್ವಶಕ್ತಿಯ ಮೋಟಾರು. ಎರಡು ಗಂಟೆಗೆ ಒಂದು ಯೂನಿಟ್ ವಿದ್ಯುತ್ ವೆಚ್ಚ. ಯಂತ್ರದ ತೂಕ ನಲವತ್ತೈದು ಕಿಲೋ.

ಯಂತ್ರದ ಮೇಲ್ಭಾಗದ ಹಾಪರಿನೊಳಗೆ ಕಾಳುಮೆಣಸಿನ ಗುಚ್ಛ ಹಾಕುವ ವ್ಯವಸ್ಥೆ. ಕಸ ಹೊರಬರಲು ಕಿಂಡಿ. ಯಂತ್ರದ ಪ್ರಧಾನ ಭಾಗ ರೋಲರ್. ಅತ್ತಿತ್ತ ಒಯ್ಯಲು ಚಕ್ರದ ಅಳವಡಿಕೆ.

ಕರಾವಳಿಯಲ್ಲಿ ಜನವರಿ ಕಾಳುಮೆಣಸು ಋತು. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಾರ್ಚ್ ತನಕ. ಉಳಿದ ತಿಂಗಳುಗಳ ಬಳಕೆಗಾಗಿ ಯಂತ್ರದಲ್ಲಿ ಸಣ್ಣ ಮಾರ್ಪಾಟು ಮಾಡಿಕೊಂಡರೆ; ಕಾಯಿ ತುರಿಯಲು, ಮೆಣಸು-ಸಾಸಿವೆ ಪುಡಿ ಮಾಡುವ ಗಿರಣಿಯಾಗಿ ಬಳಸಬಹುದು. ಸಾಕಷ್ಟು ಮಂದಿ ಈ ರೀತಿಯ ವ್ಯವಸ್ಥೆ ಇಷ್ಟಪಡುತ್ತಾರೆ.

ಯಂತ್ರದ ಬೆಲೆ ಒಂಭತ್ತು ಸಾವಿರ ರೂಪಾಯಿ. ಕಳೆದೇಳು ವರುಷಗಳಲ್ಲಿ ಮೂನ್ನೂರೈವತ್ತು ಯಂತ್ರಗಳನ್ನು ಕೃಷಿಕರ ಕೈಗಿತ್ತಿದ್ದಾರೆ. ಆದೇಶ ಕೊಟ್ಟು ಒಂದು ವಾರದಲ್ಲಿ ನೀಡಿಕೆ.

'ಆವಿಷ್ಕಾರ ಮಾಡಿದ ಮೊದಲ ವರುಷವೇ ಯಂತ್ರವನ್ನು ನಕಲು ಮಾಡಿದ್ದಾರೆ. ಪೇಟೆಂಟ್ ಮಾತ್ರ ಈ ವರುಷ ಸಿಕ್ತು. ಆ ಹೊತ್ತಿಗೆ ಬೇಕಾದಷ್ಟು ನಕಲಾಗಿದೆ. ಇನ್ನು ಪೇಟೆಂಟ್ ಸಿಕ್ಕಿದರೆ ಏನು ಪ್ರಯೋಜನ' ಎಂದು ಕೇಳುತ್ತಾರೆ. 'ಬಹುತೇಕ ಸಂಶೋಧಕರ ಪಾಡಿದು. ಆವಿಷ್ಕಾರ ಪೂರ್ತಿಯಾದ ಬಳಿಕ ಎರಡೇ ತಿಂಗಳಲ್ಲಿ ಪೇಟೆಂಟ್ ಸಿಗುವ ವ್ಯವಸ್ಥೆಯಾಗಬೇಕು' ಎನ್ನುವುದು ನಿಟಿಲೆಯವರ ಆಗ್ರಹ.

ಯಂತ್ರವನ್ನು ಮೂರ್ನಾಲ್ಕು ಮಂದಿ ಕೃಷಿಕರು ಒಟ್ಟಾಗಿ ಖರೀದಿಸಿದರೆ ಕಿಸೆಗೆ ಹಗುರ. ಒಂದಿಬ್ಬರು 'ಜಾಬ್ವರ್ಕ್' ಮಾಡುತ್ತಾರಂತೆ. ಸೋಗೆ, ಹಾಳೆ, ಸೊಪ್ಪು, ಹುಲ್ಲು ಕೊಚ್ಚುವ ಯಂತ್ರ, ತೆಂಗಿನ ಕಾಯಿ ತುರಿ ಯಂತ್ರ, ಬಾಲ್ವಾಲ್ವ್ ತಿರುಗಿಸುವ ಸಾಧನ, ಗೋಣಿಚೀಲ ಹಿಡಿಯುವ ಸಾಧನ.. ಇವೇ ಮುಂತಾದುವುಗಳು ನಿಟಿಲೆಯವರ ಇತರ ಆವಿಷ್ಕಾರಗಳು. ತನ್ನೆಲ್ಲಾ ಆವಿಷ್ಕಾರಗಳ ಬ್ರಾಂಡ್ ನೇಮ್ - 'ನಿರ್ಗುಣ’.

' ರೈತ ಸಂಶೋಧಕ' ಮಹಾಬಲೇಶ್ವರ ಭಟ್ಟರ ಸಾಧನೆಗೆ ಕರ್ನಾಟಕ ಸರಕಾರವು 2006-07ರಲ್ಲಿ 'ಕೃಷಿ ಪಂಡಿತ' ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.

(ಮಹಾಬಲೇಶ್ವರ ಭಟ್ - 9448330404, 08255-267 475)

0 comments:

Post a Comment